Pages

ಸಮಾಜ ಸುಧಾರಕರು


1. ಅಣ್ಣಾ ಸಾಹೇಬ್ ಕರ್ವೆ – ಏಪ್ರಿಲ್ 18, 1858ರಂದು ಮಹಾರಾಷ್ಟ್ರದ ಮುರುದ್‍ನಲ್ಲಿ ಜನಿಸಿದ ಇವರ ಪೂರ್ಣ ಹೆಸರು ಧೊಂಡು ಕೇಶವ್ ಕರ್ವೆ. ಇವರು ಮಹಾರಾಷ್ಟ್ರದಲ್ಲಿ ಸಾಮಾಜಿಕ ಸುಧಾರಣಾ ಚಳುವಳಿಯನ್ನು ಪ್ರಾರಂಭಿಸಿದರು ಮತ್ತು “ವಿಧವಾ ವಿವಾಹ ಸಮಿತಿ”ಯನ್ನು ರಚಿಸಿದರು. ಇವರು ನಿರ್ಗತಿಕ ಮಹಿಳೆಯರಿಗಾಗಿ ‘ಅನಾಥಾಶ್ರಮ’ವನ್ನು ಸ್ಥಾಪಿಸಿ, ಅವರ ಸ್ಥಿತಿಗತಿಯ ಸುಧಾರಣೆಗಾಗಿ ಶಿಕ್ಷಣವನ್ನು ನೀಡಿದರು ಹಾಗೂ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು. 1936ರಲ್ಲಿ ಮಹಾರಾಷ್ಟ್ರ ಗ್ರಾಮ ಪ್ರಾಥಮಿಕ ಶಿಕ್ಷಣ ಮಂಡಳಿಯನ್ನು, ಹಳ್ಳಿಗಳಲ್ಲಿ ಶಾಲೆಗಳನ್ನು ತೆರೆಯುವ ಸಲುವಾಗಿ ಸ್ಥಾಪಿಸಿದರು. ಜನತೆಯಲ್ಲಿ ಏಕತೆಯ ಭಾವನೆಯನ್ನು ಮೂಡಿಸಲು ಸಮತಾ ಸಂಘವನ್ನು ಸ್ಥಾಪಿಸಿದರು. ಇವರಿಗೆ 1958ರಲ್ಲಿ ‘ಭಾರತ ರತ್ನ’ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ನವೆಂಬರ್ 9, 1962ರಲ್ಲಿ ಮರಣಹೊಂದಿದರು.


2. ಈಶ್ವರಚಂದ್ರ ವಿದ್ಯಾಸಾಗರ - 1820ರ ಸೆಪ್ಟ್‍ಂಬರ್ 26ರಲ್ಲಿ ಬಂಗಾಳದ ಬಿರ್ಸಿಂಗಾ ಗ್ರಾಮದಲ್ಲಿ ಜನಿಸಿದರು. ಪ್ರಗತಿಪರ ವಿಚಾರವನ್ನು ಹೊಂದಿದ್ದ ಮತ್ತು ಅಸಾಮಾನ್ಯ ವ್ಯಕ್ತಿತ್ವವನ್ನು ಹೊಂದಿದ್ದ ತಮ್ಮ ತಾಯಿ ಭಗವತಿ ದೇವಿಯವರಿಂದ ಸ್ಫೂರ್ತಿಯನ್ನು ಪಡೆದರು. ವಿಚಾರವಾದಿ ಮಾನವತಾವಾದದಿಂದ ಪ್ರೇರೇಪಿತರಾದ ಅವರು, ಮಹಿಳೆಯರ ಮತ್ತು ಹಿಂದುಳಿದ ವರ್ಗಗಳ ಶೋಷಣೆಯ ವಿರುದ್ಧ ಹೋರಾಡಲಾರಂಭಿಸಿದರು. ಶಿಕ್ಷಣ ತಜ್ಞರಾದ ಅವರು, ವೈಜ್ಞಾನಿಕ, ಧರ್ಮನಿರಪೇಕ್ಷ ಮತ್ತು ಪ್ರಜಾತಾಂತ್ರಿಕ ಶಿಕ್ಷಣಕ್ಕಾಗಿ ಶ್ರಮಿಸಿದರು. ಹೆಣ್ಣು ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಮತ್ತು ವಿಧವಾ ವಿವಾಹದ ಕಾಯಿದೆಯನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾದರು. ಜನತೆ ಅವರನ್ನು ಪ್ರೀತಿಯಿಂದ ‘ವಿದ್ಯಾಸಾಗರ’ ಮತ್ತು ‘ಕರುಣಾಸಾಗರ’ ಎಂದು ಕರೆದರು. ಅವರು ಈ ದೇಶದ ಮಹಾನ್ ಸಮಾಜ ಸುಧಾರಕರಲ್ಲಿ ಒಬ್ಬರು. 



3. ಜ್ಯೋತಿಬಾ ಫುಲೆ -  ಇವರು ಮಹಾರಾಷ್ಟ್ರದ ಒಂದು ಹಳ್ಳಿಯಲ್ಲಿ 1827ರಲ್ಲಿ ಜನಿಸಿದರು. ಹಿಂದುಳಿದ, ತುಳಿತಕ್ಕೊಳಪಟ್ಟ ಜನತೆಯ ಘನತೆಯನ್ನು ಎತ್ತಿ ಹಿಡಿಯಲು ಶ್ರಮಿಸಿದರು. ಎಲ್ಲಾ ರೀತಿಯ ಭೇದಗಳನ್ನು ತೊಲಗಿಸಲು ಹೋರಾಡಿದರು. ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಲು ತೀರ್ಮಾನಿಸಿ ತಮ್ಮ ಪತ್ನಿಗೆ ತಾವೇ ಕಲಿಸಿ ಅವರನ್ನು ಶಿಕ್ಷಕಿಯಾಗಿ ಮಾಡಿದರು. ಇಬ್ಬರೂ ಸೇರಿ ಹೆಣ್ಣು ಮಕ್ಕಳ ಉದ್ಧಾರಕ್ಕಾಗಿ ದುಡಿದರು. 1873ರಲ್ಲಿ ‘ ಸತ್ಯ ಶೋಧಕ ಸಮಾಜ’ವನ್ನು ಆರಂಭಿಸಿದರು. ಮಹಿಳೆಯರ ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದ ಅವರಿಗೆ ಮುಂಬೈನ ಜನ ಪ್ರೀತಿಯಿಂದ ‘ಮಹಾತ್ಮ’ ಎಂಬ ಬಿರುದನ್ನು ನೀಡಿದರು. 1890ರಲ್ಲಿ ನಿಧನರಾದರು. 



4. ರಾಜಾ ರಾಮಮೋಹನ್ ರಾಯ್  - ಬಂಗಾಳದ ರಾಧಾನಗರದಲ್ಲಿ 1772ರ ಮೇ 22ರಂದು ಜನಿಸಿದರು. 1815ರಲ್ಲಿ ಸಾಮಾಜಿಕ ಪಿಡುಗುಗಳ ವಿರುದ್ಧ ದನಿಯೆತ್ತಲು ‘ಆತ್ಮೀಯ ಸಭೆ’ಯನ್ನು ಸ್ಥಾಪಿಸಿದರು. ಅವರನ್ನು ಭಾರತದ ನವೋದಯದ ಪಿತಾಮಹನೆಂದು ಕರೆಯಲಾಗಿದೆ.  ಕ್ರೂರವಾದ ಸತಿ ಪದ್ಧತಿಯ ವಿರುದ್ಧ ಹೋರಾಟವನ್ನು ನಡೆಸಿದ ಇವರು 1829ರಲ್ಲಿ ಇದನ್ನು ನಿಷೇಧಿಸಲು ಸರ್ಕಾರ ಕಾಯಿದೆ ಜಾರಿಗೊಳಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಅವರು ಜಾತಿ ಪದ್ಧತಿಯ ನಿರ್ಮೂಲನೆಗಾಗಿ ಮತ್ತು ಮಹಿಳೆಯರ ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದರು. 1828ರಲ್ಲಿ ಜನತೆಯಲ್ಲಿ ಐಕ್ಯತೆಯನ್ನು ತರಲು ‘ಬ್ರಹ್ಮ ಸಮಾಜ’ವನ್ನು ಸ್ಥಾಪಿಸಿದರು. ಇಂಗ್ಲಿಷ್ ಮತ್ತು ವೈಜ್ಞಾನಿಕ ಶಿಕ್ಷಣವನ್ನು ಜಾರಿಗೊಳಿಸಲು ದುಡಿದರು. ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ದನಿಯೆತ್ತಿದ ಮೊದಲಿಗರು. 1833ರ ಸೆಪ್ಟೆಂಬರ್ 27ರಂದು ಇಂಗ್ಲೆಂಡ್‍ನಲ್ಲಿ ನಿಧನರಾದರು.



5. ಸ್ವಾಮಿ ವಿವೇಕಾನಂದ - ಬಂಗಾಳದ ಕಲ್ಕತ್ತಾದಲ್ಲಿ ಜನವರಿ 12, 1863ರಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲಿಯೇ  ಸನ್ಯಾಸವನ್ನು ಸ್ವೀಕರಿಸಿದರು. ಆದರೆ ಸನ್ಯಾಸಕ್ಕಿಂತ ದೇಶಸೇವೆಯೇ ದೊಡ್ಡದೆಂದು ಭಾವಿಸಿ, ದೇಶಸೇವೆಗೆ ತೊಡಗಿದರು. ಅಂದಿನ ದಿನಗಳ ಸಾಮಾಜಿಕ ಚಳುವಳಿಯ ಪ್ರೇರಕ ಶಕ್ತಿಯಾಗಿದ್ದ ಅವರು, ಭಾರತದಲ್ಲಿ ರಾಷ್ಟ್ರೀಯತಾವಾದದ ಸ್ಫೂರ್ತಿಯನ್ನು ಹರಡಿದರು. ಅವರು ಬಡ ಜನತೆಯ, ಅನಕ್ಷರಸ್ತ, ಅಜ್ಞಾನಿ ಜನತೆಯ ಉದ್ಧಾರಕ್ಕಾಗಿ ದುಡಿದರು. ಅಮೆರಿಕಾದ  ಚಿಕಾಗೊದ ಧರ್ಮ ಸಮ್ಮೇಳನದಲ್ಲಿ ಅವರ ಭಾಷಣ ದೇಶಕ್ಕೆ ಕೀರ್ತಿಯನ್ನು ತಂದುಕೊಟ್ಟಿತು. ಈ ದೇಶದ ತುಳಿತಕ್ಕೊಳಪಟ್ಟ ಜನತೆಯ ಸೇವೆಮಾಡಲು ತಮ್ಮ ಗುರುಗಳಾದ ರಾಮಕೃಷ್ಣ ಪರಮಹಂಸರ ಹೆಸರಿನಲ್ಲಿ ‘ರಾಮಕೃಷ್ಣ ಮಿಷನ್’ಅನ್ನು ಸ್ಥಾಪಿಸಿದರು. ದೇಶಕ್ಕಾಗಿ ಎಲ್ಲವನ್ನೂ ತ್ಯಾಗಮಾಡುವಂತೆ ಯುವಜನತೆಯನ್ನು ಪ್ರೇರೇಪಿಸಿದರು. ಅವರ ಸಂದೇಶದಿಂದ ಪ್ರೇರೇಪಿತರಾದ ಬಂಗಾಳದ ನೂರಾರು ಯುವಜನರು ಸಂತೋಷದಿಂದಲೇ ಚಳುವಳಿಗೆ ಧುಮುಕಿದರು ಮತ್ತು ಎಲ್ಲಾ ಕಷ್ಟಗಳನ್ನು ಎದುರಿಸಿ ಜೀವವನ್ನೂ ಸಹ ತ್ಯಾಗ ಮಾಡಿದರು. ಆದ್ದರಿಂದಲೇ ಅವರನ್ನು ‘ಆಧುನಿಕ ಭಾರತದ ರಾಷ್ಟ್ರೀಯತಾವಾದದ ಪಿತಾಮಹ’ರೆಂದು ಕರೆಯಲಾಗಿದೆ.  1902ರ ಜುಲೈ 4ರಂದು ನಿಧನ ಹೊಂದಿದರು.



6. ಕೇಶಬ್ ಚಂದ್ರ ಸೇನ್-1838-1884- ಇವರು ಬಂಗಾಳದಲ್ಲಿ 1838ರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಇವರು ನಾಯಕತ್ವ ಗುಣಗಳನ್ನು ಹೊಂದಿದ್ದರು ಮತ್ತು ಅನೇಕ ಸಂಘಗಳನ್ನು ಕಟ್ಟಿದರು. 1857ರಲ್ಲಿ ಬ್ರಹ್ಮ ಸಮಾಜದ ಸದಸ್ಯರಾದರು. ಇವರು ದೇಶದಾದ್ಯಂತ ಸಂಚರಿಸಿ, ಅನೇಕ ಶಾಖೆಗಳನ್ನು ತೆರೆದರು. ಇವರು ಅನೇಕ ಶಾಲೆಗಳನ್ನು ಮತ್ತು ಸಾಮಾಜಿಕ ಸಂಸ್ಥೆಗಳನ್ನು ಸ್ಥಾಪಿಸಿದರು. 1861ರ ಬರಗಾಲದ ಸಮಯದಲ್ಲಿ ಬರಪೀಡಿತರಿಗೆ ಸಹಾಯ ಮಾಡಿದರು. ಇವರು ವೈಜ್ಞಾನಿಕ, ಪ್ರಜಾತಾಂತ್ರಿಕ ಹಾಗೂ ಮೌಲ್ಯ ಶಿಕ್ಷಣದ ಪ್ರತಿಪಾದಕರಾಗಿದ್ದರು. ಇವರು ಜಾತ್ಯಾತೀತತೆಗಾಗಿ ಹೋರಾಡಿದ ಮೊದಲಿಗರಲ್ಲಿ ಒಬ್ಬರಾಗಿದ್ದರು. 1872ರಲ್ಲಿ ವಿಶೇಷ ವಿವಾಹ ಕಾಯಿದೆಯನ್ನು ಜಾರಿಗೆ ತರಲು ಬ್ರಿಟಿಷರ ಮೇಲೆ ಒತ್ತಡ ಹೇರಿದರು. ಇದು ಮದುವೆಯಾಗುವ ಕನಿಷ್ಠ ವಯಸ್ಸನ್ನು ಹೆಚ್ಚಿಸಿತು ಮತ್ತು ಇದರಿಂದ ಬಾಲ್ಯ ವಿವಾಹ, ಬಹುಪತ್ನಿತ್ವಗಳು ಕಾನೂನು ಬಾಹಿರವಾದವು. ಇದು ವಿಧವಾ ವಿವಾಹ, ಅಂತರ್ಜಾತೀಯ ವಿವಾಹ ಮತ್ತು ವಿವಾಹ ವಿಚ್ಛೇದನಗಳಿಗೆ ಅವಕಾಶ ನೀಡಿತು.  ಇವರು 1884ರಲ್ಲಿ ನಿಧನರಾದರು. 

                                    -  ಜಮುನ            

ಸ್ವಾತಂತ್ರ್ಯಸಂಗ್ರಾಮದಲ್ಲಿ ಭಾಗವಹಿಸಿದ ವಿದೇಶಿಯರು




1. ಆನಿ ಬೆಸೆಂಟ್ – 1847-1933 – ಇಂಗ್ಲೆಂಡ್ ನಲ್ಲಿ ಜನನ. ಭಾರತ ಮತ್ತು ಐರ್ಲ್ಯಾಂಡ್‍ನ ಸ್ವಾತಂತ್ರ್ಯಕ್ಕಾಗಿ ಇಂಗ್ಲೆಂಡಿನಲ್ಲಿದ್ದಾಗಲೇ ದನಿಯೆತ್ತಿದ್ದರು. 1893ರಲ್ಲಿ ಭಾರತಕ್ಕೆ ಆಗಮಿಸಿದ ಅವರು ಥಿಯೊಸೊಫಿಕಲ್ ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಸ್ವರಾಜ್ಯಕ್ಕಾಗಿನ ರಾಜಕೀಯ ಚಳುವಳಿಯನ್ನು ಮತ್ತು ಮಹಿಳಾ ಹಕ್ಕುಗಳಿಗಾಗಿನ ಹೋರಾಟವನ್ನು ಬೆಂಬಲಿಸಿದರು. ವಾರಣಾಸಿ ಮತ್ತು ಚೆನ್ನೈನಲ್ಲಿ ಶಾಲೆಗಳನ್ನು ತೆರೆದರು. ಭಾರತ್ ಸ್ಕೌಟ್ ಮತ್ತು ಗೈಡ್ ಸಂಘಟನೆಯನ್ನು ಸ್ಥಾಪಿಸಿದರು. 1917ರಲ್ಲಿ ಕಾಂಗ್ರೆಸ್‍ನ ಕಲ್ಕತ್ತಾ ಅಧಿವೇಶನದ ಅಧ್ಯಕ್ಷರಾದರು. 


2. ಡೆರೋಜಿಯೊ – 1809 – 1831 – ಇಂಗ್ಲೆಂಡಿನಿಂದ ಇಲ್ಲಿಗೆ ಆಗಮಿಸಿದ ಇವರು ‘ಯಂಗ್ ಬೆಂಗಾಲ್’ನ್ನು ಸ್ಥಾಪಿಸಿದರು. ಹಿಂದೂ ಕಾಲೇಜಿನಲ್ಲಿ ಶಿಕ್ಷಕರಾಗಿದ್ದರು. ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಬೆಳೆಸಿದರು. ಭಾರತದ ಮೇಲೆ ಇಂಗ್ಲಿಷ್‍ನಲ್ಲಿ ದೇಶಭಕ್ತಿ ಗೀತೆಯನ್ನು ರಚಿಸಿದ ಮೊದಲಿಗರು. 

3. ಮಾರ್ಗರೆಟ್ ಕಸಿನ್ಸ್ – 1878-1954- ಇಂಗ್ಲೆಂಡ್ ನ ಇವರು ಭಾರತೀಯ ಮಹಿಳಾ ಚಳುವಳಿಯ ಮುಂದಾಳತ್ವ ವಹಿಸಿದ್ದರು. ಅಖಿಲ ಭಾರತೀಯ ಮಹಿಳಾ ಸಮ್ಮೇಳನವನ್ನು ಸ್ಥಾಪಿಸಿದರು. ಮಹಿಳಾ ಶಿಕ್ಷಣಕ್ಕಾಗಿ ಶ್ರಮಿಸಿದರು ಮತ್ತು ಹಲವಾರು ಶಾಲೆಗಳನ್ನು ಆರಂಭಿಸಿದರು. 


4. ನೆಲ್ಲೀ ಸೇನ್ ಗುಪ್ತಾ – 1886-1973- 1886ರ ಜನವರಿ 12ರಂದು ಕೇಂಬ್ರಿಡ್ಜ್‍ನಲ್ಲಿ ಜನಿಸಿದ ಇವರು, ಜತೀಂದ್ರಮೋಹನ್ ಸೇನ್‍ಗುಪ್ತಾರನ್ನು 1910ರಲ್ಲಿ ಮದುವೆಯಾದರು. ಅವರ ಪತಿಯ ಜೊತೆ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಿ, 1921ರಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಬಂಧಿತರಾದರು. ಚಳುವಳಿಗಳಲ್ಲಿ ತೊಡಗಿದ್ದಕ್ಕಾಗಿ ಹಲವಾರು ಬಾರಿ ಬಂಧನಕ್ಕೊಳಗಾದರು. ಸ್ವಾತಂತ್ರ್ಯಾನಂತರ ಅವರು ತಮ್ಮನ್ನೇ ಸಾಮಾಜಿಕ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡರು. 


5. ಸಿಸ್ಟರ್ ನಿವೇದಿತಾ – 1867 – 1957 –ಮಾರ್ಗರೆಟ್ ನೊಬೆಲ್ ಐರ್ಲೆಂಡ್‍ನ ಡಂಕನ್ನಾನ್‍ನಲ್ಲಿ 1867ರ ಅಕ್ಟೋಬರ್ 28ರಂದು ಜನಿಸಿದರು. ಇವರು ಸ್ವಾಮಿ ವಿವೇಕಾನಂದರ ವಿಚಾರದಿಂದ ಪ್ರೇರೇಪಿತರಾಗಿ ಭಾರತಕ್ಕೆ  1896ರಲ್ಲಿ ಆಗಮಿಸಿದರು. ಭಾರತೀಯ ಮಹಿಳೆಯರನ್ನು ಜಾಗೃತಿಗೊಳಿಸಿ ಅವರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸಲು ಶ್ರಮಿಸಿದರು. ಕಲ್ಕತ್ತಾದಲ್ಲಿ ಶಾಲೆಯೊಂದನ್ನು ಸ್ಥಾಪಿಸಿದರು. ಅನುಶೀಲನ ಸಮಿತಿಯನ್ನು ಸೇರಿ ಬ್ರಿಟಿಷರ ವಿರುದ್ಧದ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿದರು. 1957ರ ಅಕ್ಟೋಬರ್ 7ರಂದು ನಿಧನ ಹೊಂದಿದರು. 


6. ಬೆಥೂನ್ – ಇವರು ಇಂಗ್ಲಿಷ್ ಶಿಕ್ಷಣ ತಜ್ಞರಾಗಿದ್ದರು. ಈಶ್ವರಚಂದ್ರ ವಿದ್ಯಾಸಾಗರರ ಜೊತೆಗೂಡಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದುಡಿದರು. ಹೆಣ್ಣುಮಕ್ಕಳಿಗಾಗಿ ಶಾಲೆಯನ್ನೂ ತೆರೆದರು.  




7. ಡೇವಿಡ್ ಹೇರ್ – 1775-1842 –  ಆಧುನಿಕ ಶಿಕ್ಷಣವನ್ನು ಭಾರತದಲ್ಲಿ ಹರಡುವಲ್ಲಿ  ರಾಜಾ ರಾಮ್ ಮೋಹನ್ ರಾಯ್ ರವರ ಸಹಚರರಾಗಿದ್ದರು. ಹಿಂದೂ ಕಾಲೇಜ್ ನ ಸ್ಥಾಪಕರಲ್ಲಿ ಒಬ್ಬರಾಗಿದ್ದರು ಹಾಗೂ ಶಾಲಾ ಪುಸ್ತಕ ಸಮಿತಿಯ ಸಂಘಟಕರಾಗಿದ್ದರು. 
- ಅಶ್ವಿನಿ ವಿ       


ಸ್ವಾತಂತ್ರ್ಯಸಂಗ್ರಾಮದಲ್ಲಿನ ಪ್ರಮುಖ ಘಟನೆಗಳು



1. ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ – ಯುದ್ಧಾನಂತರ ಬ್ರಿಟಿಷ್ ಸರ್ಕಾರ ಸ್ವಾತಂತ್ರ್ಯ ಕೊಡುವ ತನ್ನ ಆಶ್ವಾಸನೆಯನ್ನು ಗಾಳಿಗೆ ತೂರಿ 1919ರಲ್ಲಿ ಮಾಂಟೆಗೊ- ಚೆಮ್ಸ್‍ಫೋರ್ಡ್ ಸುಧಾರಣೆಗಳನ್ನು ಮತ್ತು ಜೊತೆಗೆ ರೌಲತ್ ಕಾಯಿದೆಯನ್ನು ಜಾರಿಗೆ ತಂದಿತು. ರೌಲತ್ ಕಾಯಿದೆಯಲ್ಲಿ ಕ್ರಾಂತಿಕಾರಿ ಮತ್ತು ರಾಷ್ಟ್ರೀಯವಾದಿ ಚಟುವಟಿಕೆಗಳನ್ನು ದಮನಗೊಳಿಸುವ ಕ್ರಮಗಳನ್ನು ಒಳಗೊಂಡಿತ್ತು. ಇದರಿಂದ ನಿರಾಸೆಗೊಂಡ ಜನತೆ ಚಳುವಳಿಯ ಹಾದಿಯನ್ನು ತುಳಿದರು. ಗಾಂಧೀಜಿಯವರು ಏಪ್ರಿಲ್ 6 ರಂದು ಅಖಿಲ ಭಾರತ ಪ್ರತಿಭಟನಾ ದಿನವಾಗಿ ಆಚರಿಸಲು ಕರೆ ನೀಡಿದರು. ದೆಹಲಿ ಮತ್ತು ಮುಂಬೈನಲ್ಲಿ ಪೋಲಿಸರು ಶಾಂತ ಪ್ರತಿಭಟನಾಕಾರರ ಮೇಲೆ ಗುಂಡು ಸುರಿಸಿ ಜನರನ್ನು ಕೊಂದರು ಇದಕ್ಕೆ ಪ್ರತಿಯಾಗಿ ದೇಶದಾದ್ಯಂತ ಹಿಂದೂ- ಮುಸ್ಲಿಂರ ಐಕ್ಯ ಹೋರಾಟ ಆರಂಭವಾಯಿತು. ಮಾರ್ಚ್ 30, 1919ರಂದು ಪಂಜಾಬಿನ ಅಮೃತಸರದ ಜಲಿಯನ್‍ವಾಲಾಬಾಗ್ ಎಂಬ ಪಾರ್ಕ್‍ನಲ್ಲಿ             ಡಾ. ಸೈಫುದ್ದೀನ್ ಕಿಚ್ಲು ಮತ್ತು ಡಾ. ಸತ್ಯಪಾಲ್‍ರವರ ನೇತೃತ್ವದಲ್ಲಿ ಸಭೆ ಸೇರಲಾಯಿತು. ಪಂಜಾಬಿನ ಗವರ್ನರ್ ಆದ ಜನರಲ್ ಡಯರ್ ಇದ್ದ ಒಂದೇ ಮಾರ್ಗಕ್ಕೆ ಅಡ್ಡವಾಗಿ ನಿಂತು ಜನರ ಮೇಲೆ ಗುಂಡಿನ ಮಳೆಗರೆಯುವಂತೆ ಪೋಲಿಸರಿಗೆ ಆದೇಶವನ್ನು ನೀಡಿದನು. ಸುಮಾರು 400 ಜನರು ಹತ್ಯೆಯಾದರು ಮತ್ತು 2000 ಜನರು ತೀವ್ರವಾಗಿ ಗಾಯಗೊಂಡರು. ಒಂದು ಇಡೀ ತಿಂಗಳು ಪಂಜಾಬ್ ಭಾರತದಿಂದ ಬೇರ್ಪಟ್ಟಿತ್ತು ಮತ್ತು ತೀವ್ರವಾದ ಪೋಲೀಸ್ ದೌರ್ಜನ್ಯಕ್ಕೆ ಒಳಗಾಗಿತ್ತು. 

2. ಅಸಹಕಾರ ಚಳುವಳಿ - 1920-1922 - ಪಂಜಾಬಿನ ಹತ್ಯಾಕಾಂಡ ಮತ್ತು ರೌಲತ್ ವಿರೋಧಿ ಕಾಯ್ದೆ ಚಳುವಳಿಯ ಮೇಲಿನ ದೌರ್ಜನ್ಯವನ್ನು ಪ್ರತಿಭಟಿಸಿ ಕಾಂಗ್ರೆಸ್ ಅಸಹಾಕಾರ ಚಳುವಳಿಯನ್ನು ಆರಂಭಿಸಿತು. ದೇಶದಾದ್ಯಂತ ಜನತೆ ಬ್ರಿಟಿಷ್ ಸರ್ಕಾರದೊಂದಿಗೆ ಅಸಹಕಾರ ವ್ಯಕ್ತಪಡಿಸಲಾರಂಭಿಸಿದರು. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳನ್ನು ಬಹಿಷ್ಕರಿಸಿ ಹೊರನಡೆದರು. ಜನತೆ ಸರ್ಕಾರಿ ಕಛೇರಿಗಳನ್ನು ನ್ಯಾಯಾಲಯಗಳನ್ನು ಬಹಿಷ್ಕರಿಸಿದರು. ಎಲ್ಲೆಡೆ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಲಾಯಿತು. ಸಾವಿರಾರು ಜನರನ್ನು ಬಂಧಿಸಲಾಯಿತು. 1921ರ ಡಿಸೆಂಬರ್ 17 ರಂದು ವೇಲ್ಸ್‍ನ ರಾಜಕುಮಾರನ ಆಗಮನವನ್ನು ವಿರೋಧಿಸಿ ಬಾಂಬೆಯಲ್ಲಿ ಹರತಾಳವನ್ನು ಸಂಘಟಿಸಲಾಯಿತು. ಚಳುವಳಿಕಾರರ ಮೇಲೆ ಎಷ್ಟು ಅಮಾನುಷವಾಗಿ ಲಾಠಿ ಚಾರ್ಜ್ ಮಾಡಲಾಯಿತೆಂದರೆ ಬೀದಿಗಳಲ್ಲಿ ಅಂದು ರಕ್ತ ಹರಿಯಿತು. ಚೌರಿಚೌರಾ ಘಟನೆಯ ನಂತರ ಗಾಂಧೀಜಿ ಚಳುವಳಿ ಅಹಿಂಸಾ ಮಾರ್ಗವನ್ನು ತೊರೆದಿದೆ ಎಂಬ ಕಾರಣವನ್ನು ನೀಡಿ ಚಳುವಳಿಯನ್ನು ಹಿಂತೆಗೆದುಕೊಂಡರು. ಚಿತ್ತರಂಜನ್ ದಾಸ್, ಮೋತಿಲಾಲ್ ನೆಹರೂ, ಲಾಲಾಜಿ, ನೇತಾಜಿ, ನೆಹರೂ ಮತ್ತು ಲಕ್ಷಾಂತರ  ಕಾಂಗ್ರೆಸ್ ಕಾರ್ಯಕರ್ತರು ಈ ನಿರ್ಧಾರವನ್ನು ಪ್ರತಿಭಟಿಸಿದರು. ಬ್ರಿಟಿಷರಲ್ಲಿ ಭಯ-ನಡುಕಗಳನ್ನು ಹುಟ್ಟಿಸಿದ್ದ ಚಳುವಳಿಯನ್ನು ಕೈಬಿಡಬಾರದೆಂದು ಕೇಳಿಕೊಂಡರು. ಆದರೆ ಗಾಂಧೀಜಿ ಜಗ್ಗಲಿಲ್ಲ. 

3. ಸೈಮನ್ ಹಿಂತಿರುಗು ಚಳುವಳಿ - 1919ರ ಕಾಯ್ದೆಯ ಜಾರಿಯ ಪರಿಶೀಲನೆಗಾಗಿ ಕೇವಲ ಬ್ರಿಟಿಷ್ ಸದಸ್ಯರನ್ನೊಳಗೊಂಡ ಒಂದು ಸಮಿತಿ ಜಾನ್ ಸೈಮನ್ ರ ನೇತೃತ್ವದಲ್ಲಿ ಭಾರತಕ್ಕೆ ಬಂದಿತು. 1828ರ ಫೆಬ್ರವರಿ 3 ರಂದು ಮುಂಬೈಗೆ ಆಗಮಿಸಿತು. ಭಾರತೀಯರಿಗೆ ಈ ಸಮಿತಿಯಲ್ಲಿ ಸದಸ್ಯತ್ವ ಇಲ್ಲದ ಕಾರಣ ಭಾರತದೆಲ್ಲೆಡೆಯಲ್ಲೂ ಆಂದೋಲನ ಆರಂಭವಾಯಿತು. ಲಾಹೋರಿನಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನು ಹಿರಿಯ ನಾಯಕರಾದ ಲಾಲಾ ಲಜಪತ್ ರಾಯ್ರವರು ವಹಿಸಿದ್ದರು. ಪೋಲಿಸರು ಬರ್ಬರವಾಗಿ ಚಳುವಳಿಕಾರರ ಮೇಲೆ ಲಾಠಿಚಾರ್ಜ್ ಮಾಡಲಾರಂಭಿಸಿದರು. ಲಾಲಾಜಿಯವರು ಈ ಹೊಡೆತಗಳಿಂದ ತೀವ್ರವಾಗಿ ಆಘಾತಗೊಂಡರು ಮತ್ತು ಕೆಲವೇ ದಿನಗಳಲ್ಲಿ ಮರಣ ಹೊಂದಿದರು. “ನನ್ನ ಮೇಲೆ ಬಿದ್ದ ಪ್ರತಿ ಹೊಡೆತವೂ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಶವಪೆಟ್ಟಿಗೆಯ ಮೇಲಿನ ಮೊಳೆಗಳಾಗಿವೆ” ಎಂಬ ಅವರ ಘೋಷಣೆ ಸರಿ ಎಂಬಂತೆ ಭಾರತದಾದ್ಯಂತ ಬ್ರಿಟಿಷರ ವಿರುದ್ಧದ ಚಳುವಳಿ ತೀವ್ರಗೊಂಡಿತು.

4. ದಂಡಿ ಸತ್ಯಾಗ್ರಹ – ಬ್ರಿಟಿಷ್ ಸರ್ಕಾರ ಜನತೆಯ ಮೇಲೆ ಉಪ್ಪಿಗೆ ಶೇಕಡ 2400 ತೆರಿಗೆ ವಿಧಿಸಿತು. ಅಂದರೆ ಒಂದು ರೂಪಾಯಿಗೆ ಮಾರಬೇಕಿದ್ದ ಉಪ್ಪಿನ ಬೆಲೆ 24 ರೂಪಾಯಿಗಳಾದವು. ಜೊತೆಗೆ ಸರ್ಕಾರದ ಅನುಮತಿಯಿಲ್ಲದೆ ಯಾರೂ ಉಪ್ಪನ್ನು ತಯಾರಿಸುವಂತಿರಲಿಲ್ಲ. ಇದನ್ನು ವಿರೋಧಿಸಬೇಕೆಂದು ತೀರ್ಮಾನಿಸಿದ ಗಾಂಧೀಜಿಯವರು 1930ರ ಮಾರ್ಚ್ 12ರಂದು ತಮ್ಮ 78 ಸತ್ಯಾಗ್ರಹಿಗಳೊಂದಿಗೆ ಸಬರಮತಿ ಆಶ್ರಮದಿಂದ 241 ಮೈಲಿಗಳ ಪಾದಯಾತ್ರೆ ಮಾಡಿ ಏಪ್ರಿಲ್ 5ರಂದು ದಂಡಿಯನ್ನು ತಲುಪಿದರು. ಏಪ್ರಿಲ್ 6ರಂದು ಉಪ್ಪಿನ ಕಾನೂನು ಮುರಿದು ಉಪ್ಪನ್ನು ತಯಾರಿಸಿ ಸರ್ಕಾರದ ಉಪ್ಪಿನ ಕಾಯ್ದೆಯನ್ನು ಮುರಿದರು. ಸಾವಿರಾರು ಜನ ಇದನ್ನು ಅನುಸರಿಸಿ ಬೇರೆ ಬೇರೆ ಭಾಗಗಳಲ್ಲಿ ಕಾಯ್ದೆಯನ್ನು ಮುರಿದು ಉಪ್ಪನ್ನು ತಯರಿಸಿದರು. 


5. ಕಾನೂನು ಭಂಗ ಚಳುವಳಿ - ಗಾಂಧೀಜಿಯವರು ಆ ವಾರವನ್ನು ರಾಷ್ಟ್ರೀಯ ವಾರವೆಂದು ಘೋಷಿಸಿ ವಿದೇಶಿ ವಸ್ತ್ರಗಳನ್ನು ಮಾರುವ ಅಂಗಡಿಗಳ ಮುಂದೆ ಪಿಕೆಟಿಂಗ್ ಮಾಡಲು ಹೇಳಿದರು. ಕಾನೂನು ಭಂಗ ಚಳುವಳಿ ದೇಶದ ಮೂಲೆಮೂಲೆಗಳಲ್ಲಿಯೂ ಹರಡಿತು. ಸಾವಿರಾರು ಸರ್ಕಾರಿ ನೌಕರರು ಕೆಲಸಕ್ಕೆ ರಾಜಿನಾಮೆ ನೀಡಿ ಚಳುವಳಿಗೆ ಧುಮುಕಿದರು. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳನ್ನು ಬಹಿಷ್ಕರಿಸಿ ಹೊರನಡೆದರು. ರೈತರು ತೆರಿಗೆ ಕೊಡಲು ನಿರಾಕರಿಸಿದರು. ಸರ್ಕಾರ ಪೋ ಲಿಸ್ ಮತ್ತು ಸೈನ್ಯದ ಸಹಾಯದಿಂದ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿತು. ಸಾವಿರಾರು ಜನರನ್ನು ಬಂಧಿಸಿತು. ಆದರೆ ಜನ ಹಿಂಜರಿಯಲ್ಲಿಲ್ಲ. ಕೊನೆಗೆ ಸರ್ಕಾರ ದುಂಡು ಮೇಜಿನ ಪರಿಷತ್‍ಗೆ ಕಾಂಗ್ರೆಸ್ ಅನ್ನು ಆಹ್ವಾನಿಸಿತು ಮತ್ತು ಬಂಧಿತರಾದ ಎಲ್ಲಾ ಸತ್ಯಾಗ್ರಹಿಗಳನ್ನು ಬಿಡುಗಡೆ ಮಾಡಿತು.  


  


6. ಕ್ವಿಟ್ ಇಂಡಿಯಾ ಚಳುವಳಿ-1942 ರ ಆಗಸ್ಟ್ 9ರಂದು ಹಲವಾರು ನಾಯಕರ ಮತ್ತು ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಕಾಂಗ್ರೆಸ್ ‘ಭಾರತ ಬಿಟ್ಟು ತೊಲಗಿ’ ಗೊತ್ತುವಳಿಯನ್ನು ಅಂಗೀಕರಿಸಿತು. ಅಂದೇ ಕಾಂಗ್ರೆಸ್ ನ ಬಹುತೇಕ ನಾಯಕರನ್ನು ಬಂಧಿಸಲಾಯಿತು. ಮರುದಿನದಿಂದಲೇ ಐತಿಹಾಸಿಕ ಕ್ವಿಟ್ ಇಂಡಿಯಾ ಚಳುವಳಿ ಆರಂಭವಾಗಿತು. ದೇಶದಾದ್ಯಂತ ಜನತೆ ಬ್ರಿಟಿಷ್ ಆಳ್ವಿಕೆಯ ವಿರುದ್ಧ ದನಿಯೆತ್ತಿದರು. ‘ಮಾಡು ಇಲ್ಲವೇ ಮಡಿ’ ಎಂಬುದು ಅಂದಿನ ಘೋಷಣೆಯಾಗಿತ್ತು. ಎಲ್ಲಾ ವಿಭಾಗದ ಜನತೆ ಚಳುವಳಿಗೆ ಧುಮುಕಿದರು. ಹಳ್ಳಿ-ಪಟ್ಟಣಗಳೆನ್ನದೆ, ಸ್ತ್ರೀ- ಪುರುಷರೆನ್ನದೆ, ಬಡವ - ಬಲ್ಲಿದರೆನ್ನದೆ, ಯುವಕ – ಮುದುಕರೆನ್ನದೆ ಲಕ್ಷಾಂತರ ಜನ ಜೀವದ ಹಂಗು ತೊರೆದು ಅಂತಿಮ ಹೋರಾಟದಲ್ಲಿ ಪಾಲ್ಗೊಂಡರು. ಸರ್ಕಾರದ ಅಂಕಿಗಳ ಪ್ರಕಾರವೇ 1942ರ ಅಂತ್ಯದಲ್ಲಿ 60,229 ಜನರನ್ನು ಬಂಧಿಸಲಾಗಿತ್ತು, 18000 ಜನರನ್ನು ವಿಚಾರಣೆಯಿಲ್ಲದೆ ಬಂಧನದಲ್ಲಿಡಲಾಗಿತ್ತು, 940 ಜನ ಹತರಾಗಿದ್ದರು ಮತ್ತು 1630 ಜನ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಜನತೆಯ ಪ್ರಕಾರ ಸತ್ಯ ಇದಕ್ಕಿಂತ ಭಿನ್ನವಾಗಿತ್ತು. ಸಾವಿರಾರು ಜನ ಜೀವ ತೆತ್ತರು. ಎಲ್ಲಾ ಪಕ್ಷಗಳು ಈ ಚಳುವಳಿಗೆ ಧುಮುಕಿದವು. ಬಹಳಷ್ಟು ಕಡೆಗಳಲ್ಲಿ ಸರ್ಕಾರಿ ಯಂತ್ರ ಕುಸಿಯಿತು. ಜನತೆ ಸ್ವ-ಸರ್ಕಾರಗಳನ್ನು ಘೋಷಿಸಿಕೊಂಡರು. ಜನತೆ  ಬ್ರಿಟಿಷ್ ಸರ್ಕಾರದ ಬರ್ಬರತೆಗೆ ಸೆಡ್ಡು ಹೊಡೆದು ನಿಂತಿತು. ಸರ್ಕಾರ  ತತ್ತರಿಸಿತು. ಬ್ರಿಟಿಷ್ ಸರ್ಕಾರ ನಮ್ಮ ನಾಯಕರೊಂದಿಗೆ ಮಾತುಕತೆಯಾಡಲು ಕ್ರಿಪ್ಸ್ ಆಯೋಗವನ್ನು ಕಳಿಸಿತು. ಅದನ್ನು ನಿರಾಕರಿಸಿದ ಜನತೆ ಚಳುವಳಿಯನ್ನು ತೀವ್ರಗೊಳಿಸಿದರು. ಅಂತಿಮವಾಗಿ, ಬ್ರಿಟಿಷ್ ಸರ್ಕಾರ   ಕ್ಯಾಬಿನೆಟ್ ಆಯೋಗವನ್ನು ಕಳಿಸಿ ಭಾರತಕ್ಕೆ ಸ್ವಾತಂತ್ರ್ಯ ನೀಡಲು ಅಂಗೀಕರಿಸಿತು.


                                  

7. ಐ ಎನ್ ಎ ಹೋರಾಟ - ಭಾರತದಿಂದ ತಪ್ಪಿಸಿಕೊಂಡು ಹೋದ ನೇತಾಜಿಯವರು, ಜಪಾನಿನಲ್ಲಿ ರಾಸ್ ಬಿಹಾರಿ ಬೋಸ್‍ರವರು ಕಟ್ಟಿದ್ದ ‘ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್’ನ ಮತ್ತು ‘ಆಜಾದ್ ಹಿಂದ್ ಫೌಜ್ ನ ನಾಯಕತ್ವವನ್ನು ವಹಿಸಿಕೊಂಡರು. ಮಲಯಾ, ಸಿಂಗಪುರ, ಬರ್ಮಾ, ಜಪಾನ್ ಮತ್ತಿತರ ದೇಶಗಳನ್ನು ಸುತ್ತಿ ಆಜಾದ್ ಹಿಂದ್ ಫೌಜ್ ಅನ್ನು ಬಲಿಷ್ಠಗೊಳಿಸಿದರು. ಪೂರ್ವ ಏಷ್ಯಾದಲ್ಲಿದ್ದ ಭಾರತೀಯರು ಎಲ್ಲಾ ರೀತಿಗಳಿಂದಲೂ ನೇತಾಜಿಯವರನ್ನು ಬೆಂಬಲಿಸಿದರು. ಮಹಿಳಾ ತುಕಡಿ – ಝಾನ್ಸಿ ರಾಣಿ ತುಕಡಿಯನ್ನು ಕಟ್ಟಿದರು. ಸಾವಿರಾರು ಜನ ಭಾರತೀಯರು ಸೈನ್ಯವನ್ನು ಸೇರಿದರು. ಜಪಾನಿಯರು ತಾವು ಬ್ರಿಟಿಷರಿಂದ ವಶಪಡಿಸಿಕೊಂಡಿದ್ದ ಅಂಡಮಾನ್‍ಅನ್ನು ನೇತಾಜಿಯವರಿಗೆ ನೀಡಿದರು. ಅಲ್ಲಿ ನೇತಾಜಿಯವರು ಸ್ವತಂತ್ರ ಸರ್ಕಾರವನ್ನು ಸ್ಥಾಪಿಸಿದರು . ‘ದೆಲ್ಲಿ ಚಲೋ’ ಘೋಷಣೆಯಿಂದ ಪ್ರೇರೇಪಿತರಾದ ಸೈನಿಕರು ಭಾರತದ ಮೇಲೆ ದಾಳಿ ನಡೆಸಲು ಸಜ್ಜಾದರು.  ಆರಂಭದ ವಿಜಯಗಳ ನಂತರ ಜಪಾನಿಯರ ಮೋಸದಿಂದಾಗಿ ಹಿನ್ನಡೆ ಆರಂಭವಾಯಿತು. ನೂರಾರು ಯೋಧರು ಹಸಿವಿನಿಂದ, ರೋಗಗಳಿಂದ ಮೃತರಾದರು. ಆದರೆ ಉಳಿದವರು ಹಿಂಜರಿಯದೆ ತಮ್ಮ ಹೋರಾಟ ಮುಂದುವರೆಸಿದರು. 1945ರ ಏಪ್ರಿಲ್ 13ರಂದು ನೇತಾಜಿಯವರು ಹತ್ತಿದ ವಿಮಾನ ಫಾರ್ಮೋಸಾ ದ್ವೀಪದ ಬಳಿ ಅಪಘಾತಕ್ಕೀಡಾಯಿತು. ಐಎನ್‍ಎ ಸೈನಿಕರನ್ನು ಬ್ರಿತಿಷರು ಬಂಧಿಸಿ ವಿಚಾರಣೆ ಆರಂಭಿಸಿದರು. ಆದರೆ ಭಾರತದಾದ್ಯಂತ ಅವರ ಬಿಡುಗಡೆಗಾಗಿ ಹೋರಾಟ ನಡೆಯಿತು. ಅವರಿಗೆ ಶಿಕ್ಷೆ ವಿಧಿಸಿದರೆ ಬ್ರಿಟಿಷರಲ್ಲೊಬ್ಬನನ್ನೂ ಸುರಕ್ಷಿತವಾಗಿರಲು ಬಿಡುವುದಿಲ್ಲವೆಂಬ ಧೋರಣೆಯನ್ನು ಕಂಡು ಸರ್ಕಾರ ಅವರನ್ನು ಬಿಡುಗಡೆಗೊಳಿಸಿತು. ಆದರೆ ಇದಾದ ನಂತರ ಸೈನ್ಯ ಮತ್ತು ನೌಕಾದಳದಲ್ಲಿದ್ದ ಭಾರತೀಯರನ್ನು ನಂಬಲಾಗದು ಎನ್ನುವ ಸ್ಥಿತಿಯಲ್ಲಿ ಬ್ರಿಟಿಷರು ಭಾರತವನ್ನು ಬಿಡಲೇಬೇಕಾಯಿತು.


- ಸುಧಾ ಜಿ       

ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜ ಸುಧಾರಕರು



1. ದುರ್ಗಾದೇವಿ - 1907 ರಲ್ಲಿ ಅಲಹಾಬಾದ್ ನಲ್ಲಿ ಜನಿಸಿದ ಇವರು ವಿವಾಹದ ನಂತರ ತಮ್ಮ ಪತಿ ಮೋತಿಲಾಲ್ ವೋರಾ ರವರೊಂದಿಗೆ ಕ್ರಾಂತಿಕಾರಿ ಚಳುವಳಿಗೆ ಧುಮುಕಿದರು. ಪೋಲಿಸರ ಕಣ್ಣಿಗೆ ಬೀಳದಿರಲು ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಹಿಂದಿ ವಿಭಾಗದ ಮುಖ್ಯಸ್ಥೆಯಾಗಿ ಸೇರಿಕೊಂಡರು. ಎಚ್‍ಎಸ್‍ಆರ್‍ಎ ನಲ್ಲಿ ಗುಪ್ತಚಾರಳಾಗಿ ಕೆಲಸ ಮಾಡಿದರು. ಪತಿಯ ಮರಣದ ನಂತರವೂ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿದ ಇವರು ಸಾಂಡರ್ಸ್ ಹತ್ಯೆಯ ನಂತರ ಭಗತ್ ಸಿಂಗ್‍ರವರನ್ನು ಪೋಲಿಸರ ಕಣ್ಣಿನಿಂದ ತಪ್ಪಿಸಿ ಲಾಹೋರಿನಿಂದ ಹೊರಕಳಿಸಲು ಅವರ ಪತ್ನಿಯಾಗಿ ನಟಿಸಿದರು. ಭಗತ್ ಸಿಂಗ್‍ರ ಬಂಧನದ ನಂತರವೂ ಆಜಾದ್‍ರೊಂದಿಗೆ ಕೆಲಸ ಮಾಡುತ್ತಾ ಬಂಧನಕ್ಕೊಳಗಾದರು. 1 ವರ್ಷದ ಶಿಕ್ಷೆಯ ಜೊತೆಗೆ ಅವರ ಸಂಪೂರ್ಣ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಜೈಲಿನಿಂದ ಹೊರಬಂದ ಮೇಲೂ ತಮ್ಮ ಕ್ರಾಂತಿಕಾರಿ ಚಟುವಟಿಕೆಗಳೊಂದಿಗೆ ಲಕ್ನೋದಲ್ಲಿ ಶಾಲೆಯನ್ನು ತೆರೆದರು. 1999ರ ಅಕ್ಟೋಬರ್ 14ರಂದು ಮರಣ ಹೊಂದಿದರು.



2. ನವಾಬ್ ಫೈಜುನ್ನೀಸಾ ಚೌಧುರಾಣಿ – 1834 -1903 – ತ್ರಿಪುರಾದ ಕೊಮಿಲ್ಲಾ ಜಿಲ್ಲೆಯ ಪಶ್ಚಿಮ ಗ್ರಾಮದಲ್ಲಿ ಜನಿಸಿದರು. ಇವರು ಸಾಂಪ್ರದಾಯಿಕ ಶಾಲೆಯೊಂದನ್ನು, 11 ಪ್ರಾಥಮಿಕ ಶಾಲೆಗಳನ್ನು, ಒಂದು ಮಾಧ್ಯಮಿಕ ಇಂಗ್ಲಿಷ್ ಶಾಲೆಯನ್ನು ಮತ್ತು ಹೆಣ್ಣುಮಕ್ಕಳಿಗಾಗಿ ಹೈಸ್ಕೂಅನ್ನು ಕೊಮಿಲ್ಲಾ ಮತ್ತು ಬಂಗಾಲದ ಕೃಷ್ಣನಗರದಲ್ಲಿ ಸ್ಥಾಪಿಸಿದರು. ಇವರು ಬರಹಗಾರ್ತಿಯಾಗಿದ್ದರು. ಎರಡು ಉಚಿತ ಆಸ್ಪತ್ರೆಗಳನ್ನು ತೆರೆದರು. ತಮ್ಮ ಮರಣದ ಮುಂಚೆ ತಮ್ಮ ಇಡೀ ಆಸ್ತಿಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

3. ಪ್ರೀತಿಲತಾ ವೇದದ್ದಾರ್-  ಬಂಗಾಳದ ಚಟಗಾವ್‍ನಲ್ಲಿ 1911ರಲ್ಲಿ ಜನಿಸಿದರು. ತಮ್ಮ ಕಾಲೇಜು ದಿನಗಳಲ್ಲಿ ದೀಪಾಲಿ ಸಂಘವನ್ನು ಸೇರಿದರು ಮತ್ತು ನಂತರ ಸೂರ್ಯಸೇನ್ ರ ಕ್ರಾಂತಿದಳವನ್ನು ಸೇರಿದರು.ಅವರು ಬರಹಗಾರ್ತಿಯೂ ಆಗಿದ್ದರು. 1930 ಮತ್ತು 32ರಲ್ಲಿ ಪೋಲಿಸ್ ಠಾಣೆಗಳ ಮೇಲೆ ನಡೆದ ಆಕ್ರಮಣದಲ್ಲಿ ಭಾಗಿಯಾಗಿದ್ದರು. ಅವರ ಸಾಮರ್ಥ್ಯವನ್ನು ಕಂಡು ಸೂರ್ಯ ಸೇನರು ಚಿತ್ತಗಾಂಗ್‍ನ ಯೂರೋಪಿಯನ್ ಕ್ಲಬ್‍ನ ಮೇಲಿನ ದಾಳಿಯ ನೇತೃತ್ವವನ್ನು ಅವರಿಗೆ ವಹಿಸಿದರು. ಆಕ್ರಮಣದಲ್ಲಿ ತಮ್ಮ ಕೆಲಸವನ್ನು ಮುಗಿಸಿದ ನಂತರ ಅವರಿಗೆ ಅಲ್ಲಿಂದ ಪರಾರಿಯಾಗಲು ಅವಕಾಶವಿರಲಿಲ್ಲ. ಆದ್ದರಿಂದ ಅವರು ವಿಷವನ್ನು ಸೇವಿಸಿ ಹುತಾತ್ಮರಾದರು. 


4. ರೊಕೆಯ ಖಾತುನ್- 1882-1932- ರಂಗಪುರದ ಪೈರಾವಾಡ್‍ನಲ್ಲಿ ಜನನ (ಈಗ ಬಾಂಗ್ಲಾ ದೇಶನಲ್ಲಿದೆ) 1909 ರಲ್ಲಿ ಬಾಗಲ್‍ಪುರ್‍ನಲ್ಲಿ 1911 ರಲ್ಲಿ ಕಲ್ಕತ್ತಾದಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆಗಳನ್ನು ಆರಂಭಿಸಿದರು. ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆಂದು ಅವರನ್ನು ದೂಷಿಸಲಾಯಿತು. ಅವರು ಬರಹಗಾರ್ತಿಯೂ ಆಗಿದ್ದರು. ಮಹಿಳೆಯರ ಮೇಲಿನ ಅತ್ಯಾಚಾರಗಳ ವಿರುದ್ಧ ದನಿ ಎತ್ತಿದರು. 1916ರಲ್ಲಿ ಮುಸ್ಲಿಮ್ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲು ಮತ್ತು ಅವರಲ್ಲಿ ಜಾಗೃತಿಯನ್ನು ಮೂಡಿಸಲು ‘ ಅಂಜುಮಾನೆ ಖವಾತಿನೆ ಇಸ್ಲಾಮ್’ ಎನ್ನುವ ಸಂಘಟನೆಯನ್ನು ಆರಂಭಿಸಿದರು. 1932 ರ ಡಿಸೆಂಬರ್ 9 ರಂದು ಮರಣ ಹೊಂದಿದರು. 

5. ಸಾವಿತ್ರಿಬಾಯಿ ಫುಲೆ-  1831 ರ ಜನವರಿ 3 ರಂದು ಮಹಾರಾಷ್ಟ್ರದಲ್ಲಿ ಜನಿಸಿದರು. ಸಾಮಾಜಿಕ ಸುಧಾರಕರಾಗಿದ್ದ ಜ್ಯೋತಿಭಾ ಫುಲೆಯವರನ್ನು ವಿವಾಹವಾದರು. ಅವರಿಂದ ಶಿಕ್ಷಣವನ್ನು ಪಡೆದು, ತಾವೇ ಆರಂಭಿಸಿದ ಶಾಲೆಯಲ್ಲಿ ಶಿಕ್ಷಕಿಯಾದರು. ಅದಕ್ಕಾಗಿ ಅವರನ್ನು ದೂಷಿಸಲಾಯಿತು ಮತ್ತು ಅಪಮಾನ ಮಾಡಲಾಯಿತು. ಆದರೆ ಅವರು ಹಿಂಜರಿಯದೆ ಇನ್ನಷ್ಟು ಶಾಲೆಗಳನ್ನು ಆರಂಭಿಸಿದರು. ಜೊತೆಗೆ ‘ಬಾಲ ಹತ್ಯಾ ಪ್ರತಿಬಂಧಕ ಗೃಹ’ವನ್ನು ತೆರೆದು ಅತ್ಯಾಚಾರಕ್ಕೆ ಒಳಗಾಗಿ ಮನೆಗಳಿಂದ ಹೊರದೂಡಲ್ಪಟ್ಟ ಹೆಣ್ಣುಮಕ್ಕಳಿಗೆ ಆಶ್ರಯ ನೀಡಿದರು. ತಮ್ಮ ಪತಿಯೊಡಗೂಡಿ ಮಹಿಳೆಯರ ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದರು. ಪತಿಯ ಮರಣಾನಂತರ ಅವರು ಸ್ಥಾಪಿಸಿದ್ದ ಸತ್ಯ ಶೋಧಕ ಸಮಾಜದ ಜವಾಬ್ದಾರಿಯನ್ನು ಹೊತ್ತುಕೊಂಡರು. 1897ರಲ್ಲಿ ಪ್ಲೇಗ್ ಪೀಡಿತರ ಸೇವೆ ಮಾಡುತ್ತಾ ತಾವೂ ಆ ರೋಗಕ್ಕೆ ಬಲಿಯಾಗಿ ಮಾರ್ಚ್ 10ರಂದು ಮರಣ ಹೊಂದಿದರು.

6. ಲೀಲಾ ರಾಯ್ -  ಲೀಲಾವತಿ ನಾಗ್‍ರವರು 1900 ಅಕ್ಟೋಬರ್ 2ರಂದು ಢಾಕಾದಲ್ಲಿ ಜನಿಸಿದರು. ಶಾಲಾ ದಿನಗಳಿಂದಲೇ ಬ್ರಿಟಿಷರ ವಿರುದ್ಧ ಪ್ರತಿಭಟನೆಗಳನ್ನು ಸಂಘಟಿಸಿದರು. 1923ರಲ್ಲಿ ದೀಪಾಲಿ ಸಂಘವನ್ನು ಢಾಕಾದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸ್ಥಾಪಿಸಿದರು. ಈ ಸಂಘ ಮಹಿಳೆಯರ ವಿವಿಧ ಚಟುವಟಿಕೆಗಳ ಕೇಂದ್ರವಾಯಿತು. ಮಹಿಳೆಯರ ಗುಪ್ತಚಾರಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಢಾಕಾ ಮತ್ತು ಕಲ್ಕತ್ತಾದಲ್ಲಿ ಛಾತ್ರಿ ಸಂಘ ಮತ್ತು ಛಾತ್ರಿ ಭವನವನ್ನು ತೆರೆದರು. 1931ರಲ್ಲಿ ಬಂಧಿತರಾದ ಇವರನ್ನು ವಿಚಾರಣೆಯಿಲ್ಲದೆ 6 ವರ್ಷಗಳ ಕಾಲ ಜೈಲಿನಲ್ಲಿಡಲಾಯಿತು. ಬಿಡುಗಡೆಯಾದ ನಂತರ ನೇತಾಜಿಯವರೊಂದಿಗೆ ಕೆಲಸ ಮಾಡಿದರು. 1942ರಲ್ಲಿ ಬಂಧನಕ್ಕೊಳಗಾದ ಇವರನ್ನು 1946ರವರೆಗೂ ಜೈಲಿನಲ್ಲೇ ಇಡಲಾಯಿತು. ಬಿಡುಗಡೆಯಾದ ನಂತರ ನೌಕಾಲಿಯಲ್ಲಿ ಕೋಮುಗಲಭೆ ಪೀಡಿತರಿಗೆ ನೆರವನ್ನು ನೀಡಲು ಧಾವಿಸಿದರು. ಸ್ವತಂತ್ರ ಭಾರತದಲ್ಲಿ, ಮಹಿಳಾ ನಿರಾಶ್ರಿತರ ಪುನರ್ವಸತಿಗಾಗಿ ಶ್ರಮಿಸಿದರು. 1970ರ ಜೂನ್ 12ರಂದು ನಿಧನರಾದರು.

7. ಕುಲ್ಸಮ್ ಸಯಾನಿ -1900-1987 – ಇವರು ಮುಂಬೈ ಯಲ್ಲಿ 21 ಅಕ್ಟೋಬರ್ 1900ರಲ್ಲಿ ಜನಿಸಿದರು.  ಇವರು ಗಾಢವಾದ ದೇಶಭಕ್ತರು, ಪ್ರಖ್ಯಾತ ಕ್ರಿಯಾಶೀಲ ಕೆಲಸಗಾರರು, ವಯಸ್ಕರ ಶಿಕ್ಷಣಕ್ಕಾಗಿ ಜೀವನದಾದ್ಯಂತ ಶ್ರಮಿಸಿದರು. ಗಾಂಧೀಜಿಯವರ ವಿಚಾರಗಳಿಂದ ಪ್ರಭಾವಿತರಾದ ಇವರು, ಬಡತನ ಮತ್ತು ಅನಾರೋಗ್ಯಗಳಿಗೆ ಅನಕ್ಷರತೆ ಕಾರಣವೆಂದು ತಿಳಿದಿದ್ದರು. ತನ್ನ ಮನೆಯಲ್ಲಿ ಸಾಕ್ಷರತಾ ಕಾರ್ಯವನ್ನು ಪ್ರಾರಂಬಿಸಿದ ಇವರು, ನಂತರ     ರಾಹ್‍ಬರ್(ದಾರಿದೀಪಕರು) ಎಂಬ ಪತ್ರಿಕೆಯನ್ನು ಉರ್ದು, ಗುಜರಾತಿ ಹಾಗು ದೇವನಾಗರಿ ಭಾಷೆಗಳಲ್ಲಿ ಪ್ರಕಟಿಸಿದರು. ಅಖಿಲ ಭಾರತ ಮಹಿಳಾ ಸಮ್ಮೇಳನದ ಗೌರವಾಧ್ಯಕ್ಷರಾದರು. 1969ರಲ್ಲಿ ಇವರಿಗೆ “ನೆಹರು ಸಾಕ್ಷರತಾ ಪ್ರಶಸ್ತಿ” ಯನ್ನು ನೀಡಿ ಗೌರವಿಸಲಾಯಿತು. ಇವರು 1987ರಲ್ಲಿ ಮರಣಹೊಂದಿದರು.

8. ಮೇಡಮ್ ಭಿಕಾಜಿ ಕಾಮಾ – 1861-1936- ಮುಂಬೈನಲ್ಲಿ 1861ರಲ್ಲಿ ಜನಿಸಿದ ಇವರು ಅಲೆಕ್ಸಾಂಡ್ರಿಯಾ ಬಾಲಕಿಯರ ಶಾಲೆಯಲ್ಲಿ ಓದಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಇವರನ್ನು ಭಾರತದಿಂದ ಗಡೀಪಾರು ಮಾಡಿದರು. ಇವರು “ವಂದೇಮಾತರಂ” ಎಂಬ ಪತ್ರಿಕೆಯನ್ನು ಪ್ರಕಟಿಸಿದರು. 1936ರ ಆಗಸ್ಟ್ 30ರಂದು ನಿಧನಹೊಂದಿದರು. 
9. ನಾನಿ ಬಾಲ ದೇವಿ - 1888-1987 - ಪಶ್ಚಿಮ ಬಂಗಾಳದ ಒಂದು ಹಳ್ಳಿಯಲ್ಲಿ 1888ರಲ್ಲಿ ಜನಿಸಿದ ಇವರು ‘ಯುಗಾಂತರ’ ಎಂಬ ಕ್ರಾಂತಿಕಾರಿ ಸಂಘಟನೆಯ ನಾಯಕಿಯಾಗಿದ್ದರು. ಕ್ರಾಂತಿಕಾರಿಗಳಿಗೆ ಅನೇಕ ರೀತಿಯ ಸಹಾಯ ಮಾಡಿದರು. ಇವರನ್ನು ಬಂಧಿಸಿ ಎರಡು ವರ್ಷಗಳ ಕಾಲ ಹಿಂಸಿಸಿದರು. ಇವರು 1987ರಲ್ಲಿ ಮರಣಹೊಂದಿದರು. 

10.Image result for pandita ramabai ಪಂಡಿತ ರಮಾಬಾಯಿ ಸರಸ್ವತಿ -  1858-1922 – ಇವರು ಮಹಿಳಾ ವಿಮೋಚನಾ ಚಳುವಳಿಗೆ ಅಡಿಪಾಯ ಹಾಕಿದರು. ಮಧ್ಯಪ್ರದೇಶ ಮತ್ತು ಗುಜರಾತಿನ ಬರಗಾಲಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡರು. ಅವರಲ್ಲಿನ ಸಂಸ್ಕೃತ ಗ್ರಂಥಗಳ ಬಗೆಗಿನ ಜ್ಞಾನದಿಂದ ಇವರಿಗೆ ಪಂಡಿತ ಮತ್ತು ಸರಸ್ವತಿ ಎಂ¨ ಬಿರುದುಗಳಿವೆ. ಸಾಂಪ್ರದಾಯಿಕ ಬ್ರಾಹ್ಮಣರು ಅವರನ್ನು ತೀವ್ರವಾಗಿ ಖಂಡಿಸಿದರು ಹಾಗೂ ಮಹಿಳೆಯರಲ್ಲಿ ಬಂಡಾಯವನ್ನು ಸೃಷ್ಟಿಸುತ್ತಿದ್ದಾರೆಂದು ಆಪಾದಿಸಿದರು. ವಿಧವೆಯರು ಮತ್ತು ನಿರ್ಗತಿಕ ಮಹಿಳೆಯರಿಗಾಗಿ ಶಾರದ ಸದನವನ್ನು ಆರಂಭಿಸಿದರು. ಇವರು 1922ರಲ್ಲಿ ನಿಧನರಾದರು. 

     - ಉಷಾಗಂಗೆ



ಶಿಕ್ಷಣದ ಬಗ್ಗೆ ಸಮಾಜ ಸುಧಾರಕರ ಮತ್ತು ಸ್ವಾತಂತ್ರ್ಯ ಯೋಧರ ಅಭಿಪ್ರಾಯಗಳು


1. “ಅಜ್ಞಾನಿ ಮತ್ತು ಅನಕ್ಷರಸ್ಥ ರಾಷ್ಟ್ರವೆಂದು ಯಾವುದೇ ಸಾಮಾಜಿಕ ಪ್ರಗತಿಯನ್ನೂ ಸಾಧಿಸಲು      ಸಾಧ್ಯವಿಲ್ಲವೆಂಬುದನ್ನು ಮತ್ತು ಜೀವನದ ಓಟದಲ್ಲಿ ಹಿಂದೆ ಬೀಳುತ್ತದೆ ಎಂಬುದು ನಿರ್ವಿವಾದ”. – ಗೋಖಲೆ
2. “ಸುದೀರ್ಘ ಚಿಂತನೆ ನಂತರ ನಮ್ಮ ತಾಯ್ನಾಡಿನ ಮುಕ್ತಿ ಇರುವುದು ಶಿಕ್ಷಣದಲ್ಲಿ, ಜನತೆಯ ಶಿಕ್ಷಣದಲ್ಲಿ ಎಂಬ ತೀರ್ಮಾನಕ್ಕೆ ಬಂದಿದ್ದೇವೆ.” – ತಿಲಕ್
3. “ಶಿಕ್ಷಣವೆಂದರೆ ನಿಮ್ಮ ಮೆದುಳಿನಲ್ಲಿ ಸೇರಿಸಲಾಗುವ ಅಥವಾ ಮೆದುಳಿಗೆ ಹಾಕಲಾಗುವ ಮಾಹಿತಿಯ ಮೊತ್ತವಲ್ಲ, ಮತ್ತು ಅದು ಜೀವನದುದ್ದಕ್ಕೂ ಜೀರ್ಣವಾಗದೆ ಗೊಂದಲವನ್ನು ಸೃಷ್ಠಿಸುವುದಲ್ಲ, ಜೀವನ ಕಟ್ಟುವ, ಮನುಷ್ಯನನ್ನಾಗಿಸುವ ಚಾರಿತ್ರ್ಯವನ್ನು ಬೆಳೆಸುವ, ವಿಚಾರಗಳ ಸಂಗ್ರಹ ಹೌದು. ” – ವಿವೇಕಾನಂದ.
4. “ದೀಪವೊಂದು ತಾನು ಉರಿದು ಬೆಳಗದೆ ಇನ್ನೊಂದು ದೀಪವನ್ನು ಬೆಳಗಲಾರದು. ಅದೇ ರೀತಿ ಶಿಕ್ಷಕನು ತಾನು ಹೆಚ್ಚು ಹೆಚ್ಚು ಕಷ್ಟ-ಕಾರ್ಪಣ್ಯಗಳನ್ನು ಸಹಿಸುತ್ತಾ ಹೊಸ ಹೊಸ ಜ್ಞಾನವನ್ನು ಸಂಪಾದಿಸಿ ತನ್ನ ಶಿಷ್ಯರ ಮೂಲಕ ಸಮಾಜಕ್ಕೆ ವರ್ಗಾಯಿಸದಿದ್ದರೆ, ಅಂತಹ ಶಿಕ್ಷಕ ನಿಷ್ಪ್ರಯೋಜಕ”. – ರವೀಂದ್ರನಾಥ ಠಾಗೂರ್
5. “ಶಾಲೆ, ಕಾಲೇಜು, ನ್ಯಾಯಾಲಯ ಮತ್ತು ಶಾಸನಸಭೆಗಳು ಜಾತಿ, ವರ್ಣ ಮತ್ತು ಕುಲದ ಬೇಧಭಾವವಿಲ್ಲದೆ ಎಲ್ಲರಿಗೂ ಪ್ರವೇಶಿಸಲಾಗುವ ಮತ್ತು ಪೂಜಿಸುವಂತಹ ಮುಕ್ತ ದೇವಾಲಯಗಳಾಗಲು ಇರುವ ಎಲ್ಲಾ ಸಾಮಾಜಿಕ ಅಡೆತಡೆಗಳನ್ನು ತೆಗೆದುಹಾಕಬೇಕು.” - ಲಾಲಾ ಲಜಪತ್ ರಾಯ್ 
೬. ವಿದ್ಯೆಯೊಂದಿಗೆ ಆದರ್ಶ ಗುಣಗಳು ನಿನ್ನಲ್ಲಿ ಬರದಿದ್ದರೆ, ನೀನು ಓದಿದ್ದು ವ್ಯರ್ಥ -
ಪ್ರೇಮ್ ಚಂದ್ 
೭. ಕೌಶಲ್ಯ ಮಾಧ್ಯಮದ ಮೂಲಕ ಮಕ್ಕಳನ್ನು ದೈಹಿಕವಾಗಿ, ಬೌದ್ಧಿಕವಾಗಿ ಹಾಗೂ ನೈತಿಕವಾಗಿ ಬೆಳೆಸುವುದೇ ನಿಜವಾದ ಶಿಕ್ಷಣ - ಗಾಂಧೀಜಿ 
೮. ಶಿಕ್ಷಣವೆಂದರೆ ಮನಸ್ಸು ದೇಹ ಬುದ್ಧಿಗಳೊಂದಿಗೆ ದೊರೆಯುವ ಸಂಸ್ಕಾರ - ಹರ್ಡೆಕರ್  ಮಂಜಪ್ಪ   

   - ಲಕ್ಷ್ಮಿ ವಿ        

ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ನೀಡಿದ ಕವಿಗಳು ಮತ್ತು ಬರಹಗಾರರು


1. ಆನಂದರಾಮ್ ಫುಕಾನ್ – ಅಸ್ಸಾಮಿ – 1829-1859
2. ಭಾಯಿ ಭೀರ್ ಸಿಂಗ್ - ಪಂಜಾಬಿ – 1872-1924
3. ಬಂಕಿಮಚಂದ್ರ ಚಟರ್ಜಿ – ಬಂಗಾಳಿ - 1838-1894
4. ಭರತೇಂದು ಹರಿಶ್ಚಂದ್ರ - ಹಿಂದಿ - 1850-1885
5. ಗುರುಜಾಡ ಅಪ್ಪಾರಾವ್ – ತೆಲುಗು – 1861 – 1916
6. ಕುಮಾರನ್ ಅಶನ್ – ಮಲಯಾಳಿ - 1873 – 1924
7. ಮಹಮ್ಮದ್ ಇಕ್ಬಾಲ್ – ಉರ್ದು – 1875 – 1938
8. ಪಂಜೆ ಮಂಗೇಶರಾವ್ – ಕನ್ನಡ – 1874 – 1934
9.ಕೀರ್ ಮೋಹನ್ ಸೇನಾಪತಿ – ಒರಿಯಾ – 1843 -1938
10. ಪ್ರೇಮ್‍ಚಂದ್ - ಹಿಂದಿ - 1880-1936
11. ರವೀಂದ್ರನಾಥ್ ಟಾಗೂರ್ - ಬಂಗಾಳಿ - 1861 -1941
12. ಶರತ್‍ಚಂದ್ರ ಚಟರ್ಜಿ - ಬಂಗಾಳಿ - 1876 -1938
13. ಸುಬ್ರಹ್ಮಣ್ಯ ಭಾರತಿ – ತಮಿಳು – 1882 -1921
14. ವಿಷ್ಣು ಕೃಷ್ಣ ಚಿಪ್ಲೂಂಕರ್ – ಮರಾಠಿ – 1850-1882
15. ಖಾಜಿ ನಜ್ರುಲ್ ಇಸ್ಲಾಂ - ಬಂಗಾಳಿ - 1898 -1976
16. ಸುಭದ್ರ ಕುಮಾರಿ ಚೌಹಾನ್ - ಹಿಂದಿ - 1904 - 1948

 -  ರೂಪಶ್ರೀ ವಿ ಬಿ       

ಸ್ವಾತಂತ್ರ್ಯಕ್ಕೆ ಪ್ರೇರೇಪಣೆ ನೀಡಿದ ಪುಸ್ತಕಗಳು



1. ಆನಂದಮಠ - ಬಂಕಿಮಚಂದ್ರ
2. ನಾನೇಕೆ ನಾಸ್ತಿಕ -ಭಗತ್ ಸಿಂಗ್
3. ಎದ್ದೇಳು ಭಾರತ – ಆನಿ ಬೆಸೆಂಟ್
4. ಅಧಿಕಾರ - ಶರತ್ಚಂದ್ರ
5. ಭಾರತದ ರಾಜಕೀಯ ಭವಿಷ್ಯ - ಲಾಲಾ ಲಜಪತ್ ರಾಯ್ 
6. ಗೀತಾರಹಸ್ಯ – ತಿಲಕ್
7. ಲಭಿತಾ – ಜ್ಯೋತಿಪ್ರಸಾದ್ ಅಗರ್‍ವಾಲ್   
8. ಭಿಕ್ರಿ ಮೋತಿ - ಸುಭದ್ರಕುಮಾರಿ ಚೌಹಾನ್
9. ಅಗ್ನಿ ವೀಣಾ – ಖಾಜಿ ನಜ್ರುಲ್ ಇಸ್ಲಾಂ
10. ದೇಶೀಯ ಗೀತಂಗಳ್ - ಸುಬ್ರಮಣ್ಯ ಭಾರತಿ


 -  ರೂಪಶ್ರೀ ವಿ ಬಿ         

ಸೂಕ್ತಿಗಳು



1. “ಒಳ್ಳೆಯ ಸರ್ಕಾರವೆಂದೂ ಸ್ವ- ಸರ್ಕಾರಕ್ಕೆ ಪರ್ಯಾಯವಲ್ಲ.” – ದಯಾನಂದ ಸರಸ್ವತಿ

2. “ಸ್ವರಾಜ್ಯ ನನ್ನ ಆಜನ್ಮ ಸಿದ್ಧ ಹಕ್ಕು. ಅದನ್ನು ನಾನು ಪಡದೇ ತೀರುತ್ತೇನೆ .”– ತಿಲಕ್
3. “ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ.” - ನೇತಾಜಿ
4. “ಅಹಿಂಸೆಯ ಮೂಲಕ ಸ್ವಾತಂತ್ರ್ಯ ಗಳಿಸುವುದೇ ನಮ್ಮ ಗುರಿ.” - ಗಾಂಧೀಜಿ
5. “ರಾಜಕೀಯ ಹಕ್ಕುಗಳೆಂದೂ ಭಿಕ್ಷೆ ಬೇಡುವುದರಿಂದ ದೊರೆಯುವುದಿಲ್ಲ.” - ತಿಲಕ್
6. “ಜನ ಮೌನವಾಗಿದ್ದಾರೆ. ಮಾತು ಬಾರದವರ ಪ್ರತಿನಿಧಿಯಾಗುತ್ತೇನೆ.” - ಅನಿ ಬೆಸೆಂಟ್
7. “ಭಾರತ್ ಬದುಕಬೇಕಾದರೆ ವ್ಯಕ್ತಿ ಸಾಯಬೇಕು. ಇಂದು ಭಾರತ ಸ್ವಾತಂತ್ರ್ಯ ಗಳಿಸಬೇಕಾದರೆ ನಾನು ಸಾಯಬೇಕು.” – ಮದನ್‍ಲಾಲ್ ಧಿಂಗ್ರಾ
8. “ನಾನು ಜೀವನದಲ್ಲಿ ಮಾಡಿದ ಅತ್ಯಂತ ಒಳ್ಳೆಯ ಕಾರ್ಯವೆಂದರೆ ಅದು ವಿಧವಾ ವಿವಾಹವನ್ನು ಜಾರಿಗೆ ತಂದದ್ದು.” - ವಿದ್ಯಾಸಾಗರ್
9. “ಸತಿ ಪದ್ಧತಿ ಈ ದೇಶದ ಅನಿಷ್ಟ ಪದ್ಧತಿಗಳಲ್ಲೊಂದು”.- ರಾಜಾ ರಾಮ್‍ಮೋಹನ್ ರಾಯ್ 
10. “ದೇಶದ ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೂ ಆವರಿಸಿಕೊಂಡಿರುವ ಬಂಡಾಯದ ಸ್ಫೂರ್ತಿಯ ಸಂಕೇತ ಭಗತ್ ಸಿಂಗ್. ಆ ಸ್ಫೂರ್ತಿ ಹೊತ್ತಿಸಿದ ಜ್ವಾಲೆಗಳು ಆರುವುದಿಲ್ಲ.” - ನೇತಾಜಿ.
11. “ಭಾರತವು ಬದುಕಬೇಕಾದರೆ, ವ್ಯಕ್ತಿ  ಸಾಯಬೇಕು. ಇಂದು ಭಾರತವು ಸ್ವಾತಂತ್ರ್ಯ ಹೊಂದಬೇಕಾದರೆ, ನಾನು ಸಾಯಬೇಕು.” – ಮದನ್ ಲಾಲ್ ಧಿಂಗ್ರ


- ಉಷಾಗಂಗೆ        

ಸ್ವಾತಂತ್ರ್ಯ ಸಂಗ್ರಾಮವನ್ನು ಸಂಘಟಿಸಲು ಅಸ್ತಿತ್ವಕ್ಕೆ ಬಂದ ಸಂಸ್ಥೆಗಳು ಮತ್ತು ಪಕ್ಷಗಳು



1. 1885 - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ – ಡಬ್ಲು. ಸಿ. ಬ್ಯಾನರ್ಜಿ
2. 1902 - ಅನುಶೀಲನ ಸಮಿತಿ - ಪ್ರಮಥನಾಥ ಮಿತ್ರ, ಅರವಿಂದ್ ಘೋಷ್, ಸಿಸ್ಟರ್ ನಿವೇದಿತ
3. 1909 - ಹೋಂ ರೂಲ್ ಲೀಗ್ – ಅನಿಬೆಸೆಂಟ್
4. 1923 - ಹಿಂದೂಸ್ಥಾನ ಸೇವಾದಳ – ಎನ್.ಎಸ್. ಹರ್ಡೀಕರ್
5. 1923 - ಸ್ವರಾಜ್ಯ ಪಾರ್ಟಿ – ಮೋತೀಲಾಲ್ ನೆಹರು, ಚಿತ್ತರಂಜನ್ ದಾಸ್, ನೇತಾಜಿ
6. 1928 - ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ- ಭಗತ್ ಸಿಂಗ್, ಚಂದ್ರಶೇಖರ್   ಆಜಾದ್ 
7. 1928 - ಡೆಮಾಕ್ರೆಟಿಕ್ ಆರ್ಮಿ - ಸೂರ್ಯ ಸೇನ್
8. 1930 - ರೆಡ್ ಷರ್ಟ್ ವಾಲೆಂಟಿಯರ್ಸ್ – ಅಬ್ದುಲ್ ಗಫಾರ್ ಖಾನ್
9. 1937 - ಇಂಡಿಯನ್ ನ್ಯಾಷನಲ್ ಆರ್ಮಿ – ರಾಸ್ ಬಿಹಾರೀ ಬೋಸ್
10. 1939 - ಫಾರ್ವರ್ಡ್ ಬ್ಲಾಕ್ - ನೇತಾಜಿ

- ಶಿಲ್ಪಶ್ರೀ ವಿ ಬಿ

ಸ್ವಾತಂತ್ರ್ಯ ಯೋಧರಿಗೆ ಮತ್ತು ಸಮಾಜ ಸುಧಾರಕರಿಗೆ ಜನತೆ ನೀಡಿದ ಬಿರುದುಗಳು


1. ಭಾರತದ ನವೋದಯ ಧೃವತಾರೆ- ರಾಜಾರಾಮ್ ಮೋಹನ್ ರಾಯ್ 
2. ಭಾರತದ ಬಂಡಾಯ ಪಿತಾಮಹ - ಬಾಲ ಗಂಗಾಧರ ತಿಲಕ್
3. ಭಾರತದ ಕ್ರಾಂತಿಯ ಜನನಿ - ಮೇಡಮ್ ಕಾಮಾ
4. ಭಾರತದ ಕೋಗಿಲೆ - ಸರೋಜಿನಿ ನಾಯ್ಡು
5. ಭಾರತಿ - ಸುಬ್ರಹ್ಮಣ್ಯ
6. ಲಾಲ್-ಬಾಲ್-ಪಾಲ್ - ಲಾಲಾ ಲಜಪತ್ ರಾಯ್ , ಬಾಲ ಗಂಗಾಧರ ತಿಲಕ್, ಬಿಪಿನ್ ಚಂದ್ರ ಪಾಲ್
7. ಲೋಕ ನಾಯಕ – ಜಯಪ್ರಕಾಶ್ ನಾರಾಯಣ್
8. ಲೋಕಮಾನ್ಯ-ಬಾಲಗಂಗಾಧರ ತಿಲಕ್
9. ಸರಸ್ವತಿ - ಪಂಡಿತ ರಮಾಬಾಯಿ
10. ಶಹೀದ್-ಎ-ಅಜûಮ್- ಭಗತ್ ಸಿಂಗ್
11. ವಿದ್ಯಾಸಾಗರ ಮತ್ತು ಕರುಣಾಸಾಗರ - ಈಶ್ವರಚಂದ್ರ ಬಂದೋಪಾಧ್ಯಾಯ
12. ನೇತಾಜಿ - ಸುಭಾಷ್‍ಚಂದ್ರ ಬೋಸ್
13. ಪಂಜಾಬಿನ ಕೇಸರಿ - ಲಾಲಾ ಲಜಪತ್ ರಾಯ್ 
14. ಪಂಡಿತ್‍ಜಿ – ರಾಮ್‍ಪ್ರಸಾದ್ ಬಿಸ್ಮಿಲ್
15. ಬಂಗಾಳದ ಹುಲಿ - ಭಾಘಾ ಜತೀನ್
16. ಬಂಗಾಳದ ಕ್ರಾಂತಿ ಬ್ರಹ್ಮ – ಜತೀಂದ್ರನಾಥ್ ಬ್ಯಾನರ್ಜಿ
17. ಮಾಸ್ಟರ್‍ದಾ - ಸೂರ್ಯ ಸೇನ್
18. ಮೈಸೂರಿನ ಹುಲಿ - ಟಿಪ್ಪು ಸುಲ್ತಾನ್
19. ಅಗ್ನಿ ಶಿಶು- ಖುದಿರಾಮ್ ಬೋಸ್
20. ಜನತೆಯ ಕವಿ - ಖಾಜಿ ನಜ್ರುಲ್ ಇಸ್ಲಾಮ್
21. ಆಜಾದ್ - ಚಂದ್ರಶೇಖರ್
22. ಆಧುನಿಕ ಭಾರತದ ರಾಷ್ಟೀಯತೆಯ ಪಿತಾಮಹ - ಸ್ವಾಮಿ ವಿವೇಕಾನಂದ
23. ಭಾರತದ ವಯೋವೃದ್ಧ – ದಾದಾಬಾಯಿ ನೌರೋಜಿ
24. ಕರ್ನಾಟಕದ ಕುಲಪುರೋಹಿತ - ಆಲೂರು ವೆಂಕಟರಾಯರು
25. ಕರ್ನಾಟಕದ ಗಾಂಧಿ - ಹರ್ಡೀಕರ್ ಮಂಜಪ್ಪ
26. ಕಾಶ್ಮೀರದ ಹುಲಿ - ಶೇಕ್ ಅಬ್ದುಲ್ಲಾಹ್
27. ಗುರೂಜಿ – ರವೀಂದ್ರನಾಥ ಟಾಗೋರ್
28. ಗಡಿನಾಡ ಗಾಂಧಿ - ಖಾನ್ ಅಬ್ದುಲ್ ಗಫಾರ್ ಖಾನ್
29. ಬಂಗಾಳದ ಅನಧಿಕೃತ ರಾಜಾ - ಸುರೇಂದ್ರನಾಥ ಬ್ಯಾನರ್ಜಿ
30. ದೇಶಪ್ರಿಯ – ಜತೀಂದ್ರ ಮೋಹನ್ ಸೇನ್ ಗುಪ್ತ
31. ದೇಶಬಂಧು –ಚಿತ್ತರಂಜನ್ ದಾಸ್


- ಗಾಯತ್ರಿ        

ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆಗಳು ಮತ್ತು ಅವುಗಳ ಸಂಪಾದಕರು


1. ಖಾನ್ ಅಬ್ದುಲ್ ಗಫಾರ್ ಖಾನ್ - ಫಕ್ತೂನ್
2. ಅರವಿಂದ ಘೋಷ್ – ವಂದೇ ಮಾತರಂ
3. ಬಾಲ ಗಂಗಾಧರ ತಿಲಕ್ – ಕೇಸರಿ ಮತ್ತು ಮರಾಠ
4. ಬಿಪಿನ್ ಚಂದ್ರ ಪಾಲ್ - ನ್ಯೂ ಇಂಡಿಯಾ
5. ಗಣೇಶ್ ಶಂಕರ್ ವಿದ್ಯಾರ್ಥಿ - ಪ್ರತಾಪ್
6. ಗುಲಾಮ್ ಹುಸೇನ್ – ಇಂಕ್ವಿಲಾಬ್
7. ಲಾಲಾ ಲಜಪತ್ ರಾಯ್ – ಯಂಗ್ ಇಂಡಿಯಾ
8. ಲೀಲಾ ರಾಯ್ – ಜಯಶ್ರೀ
9. ಮೊಹಾರೆ ಹನುಮಂತ ರಾವ್ – ಕರ್ನಾಟಕ ವೈಭವ
10. ಮುಜಫರ್ ಅಹ್ಮದ್ ಮತ್ತು ನಜ್ರುಲ್ ಇಸ್ಲಾಮ್ - ಲಾಂಗಾಲ್ 
11. ರಾಮಕೃಷ್ಣ ಪಿಳ್ಳೈ – ದೇಶಾಭಿಮಾನಿ 
12. ಸಂತೋಷ್ ಸಿಂಗ್ – ಕೀರ್ತಿ 
13. ಸತೀಶ್ ಚಂದ್ರ ಮುಖರ್ಜಿ – ಡಾನ್ 
14. ಶಾಂತಿನಾರಾಯಣ್ - ಸ್ವರಾಜ್ಯ್ ಪತ್ರಿಕಾ
15. ಗೋಪಾಲ್ ಕೃಷ್ಣ ಗೋಖಲೆ - ಸುಧಾರಕ್

- ವಿಶಾಲಾಕ್ಷಿ      

ಪ್ರಥಮಗಳು ಮತ್ತು ಮೊದಲಿಗರು



1.     ಭಾರತದ ಮೊದಲ ಸಮಾಜ ಸುಧಾರಕರು – ರಾಜಾ ರಾಮ್‍ಮೋಹನ್ ರಾ0iÀiï
2.    ಭಾರತದ ಮೊದಲ ಹುತಾತ್ಮರು – ಚಾಪೇಕರ್ ಸಹೋದರರು
3.    ಭಾರತದ ಧ್ವಜವನ್ನು ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಹಾರಿಸಿದ ಮೊದಲ ವ್ಯಕ್ತಿ – ಮೇಡಮ್ ಕಾಮಾ
4.    ಸ್ವಾತಂತ್ರ್ಯಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿ ಹುತಾತ್ಮರಾದ ಮೊದಲ ವ್ಯಕ್ತಿ – ಜತೀಂದ್ರ ದಾಸ್
5.    ವಿಶ್ವದ ಮೊದಲ ಮಹಿಳಾ ಸೈನಿಕ ತುಕಡಿ – ಐ ಎನ್ ಎ ಯ ಝಾನ್ಸಿ ರಾಣಿ ರೆಜಿಮೆಂಟ್
6.    ಪತ್ರಿಕಾ ಸ್ವಾತಂತ್ರ್ಯ್ರಕ್ಕಾಗಿ ದನಿ0iÉುತ್ತಿದ ಮೊದಲ ವ್ಯಕ್ತಿ – ರಾಜಾ ರಾಮ್‍ಮೋಹನ್ ರಾ0iÀiï
7.    ಬಂಗಾಳದ ಮೊದಲ ಹುತಾತ್ಮ – ಖುದಿರಾಮ್ ಬೋಸ್
8.    ಬಂಗಳದಲ್ಲಿ ಬ್ರಿಟಿಷರ ವಿರುದ್ಧ ಮೊದಲು ಪ್ರತಿಭಟನೆ ಮಾಡಿದ ವ್ಯಕ್ತಿ - ನವಾಬ ಮೀರ್ ಖಾಸಿಮ್
9.    ಮೈಸೂರು ಸಂಸ್ಥಾನದಲ್ಲಿ ಸ್ವತಂತ್ರವೆಂದು ಘೋಷಿಸಿಕೊಂಡ ಮೊದಲ ಹಳ್ಳಿ – ಈಸೂರು
10.  ಮಹಿಳೆಯರಿಂದ ಬರೆಯಲ್ಪಟ್ಟು, ಸಂಪಾದಿಸಲ್ಪಟ್ಟು ಮತ್ತು ಮುದ್ರಿತವಾದ ಮೊದಲ ಪತ್ರಿಕೆ – ಜಯಶ್ರಿ (ಬಂಗಾಳಿ)
11.  ಮೊದಲ ಬಾಲಕಿಯರ ಶಾಲೆಯನ್ನು ಆರಂಭಿಸಿದವರು – ಜ್ಯೋತಿಭಾ ¥sóÀÅಲೆ ಮತ್ತು ಸಾವಿತ್ರಿಬಾಯಿ ¥sóÀÅಲೆ.
12.  ಮೊದಲ ವಿಧವಾ ವಿವಾಹವನ್ನು ನೆರವೇರಿಸಿದವರು – ಈಶ್ವರಚಂದ್ರ ವಿದ್ಯಾಸಾಗರ್
13.  ಮೊದಲ ನಾಟಕ - ನೀಲ ದರ್ಪಣ
14.  ಮೊದಲ ಮಹಿಳಾ ಶಿಕ್ಷಕಿ, ಕವಯತ್ರಿ, ಶಿಕ್ಷಣ ತಜ್ಞೆ ಮತ್ತು ಮಹಿಳಾ ವಿಮೋಚನಾ ಹೋರಾಟಗಾರ್ತಿ - ಸಾವಿತ್ರಿ ಬಾಯಿ ¥sóÀÅಲೆ
15.  ಮೊದಲ ಮಹಿಳಾ ಕ್ರಾಂತಿಕಾರಿ ಹುತಾತ್ಮರು - ಪ್ರೀತಿಲತಾ ವೇದದ್ದಾರ್
16.  ಮೊದಲ ಉದಾರವಾದಿ ಪತ್ರಿಕೆ - ಬಂಗಾಳ ಗೆeóÉಟ್
17.  ಜನರಿಂದ ಮಹಾತ್ಮ ಎಂದು ಬಿರುದು ಪಡೆದ ಮೊದಲ ವ್ಯಕ್ತಿ – ಜ್ಯೋತಿಭಾ ಫುಲೆ
18.  ಕರ್ನಾಟಕದಲ್ಲಿ ಪೋರ್ಚುಗೀಸರ ವಿರುದ್ಧ ಮೊದಲು ಪ್ರತಿಭಟನೆ ಮಾಡಿದ ಮಹಿಳೆ – ರಾಣಿ ಅಬ್ಬಕ್ಕ
19.  ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ಪ್ರತಿಭಟನೆ ಮಾಡಿದ ಮೊದಲಿಗರು - ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್
20.  ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ಮೊದಲು ಪ್ರತಿಭಟನೆ ಮಾಡಿದ ಮಹಿಳೆ – ಕಿತ್ತೂರು ರಾಣಿ ಚೆನ್ನಮ್ಮ
21.  ಹೊರದೇಶದಲ್ಲಿ ಭಾರತದ ಮೊದಲ ಹುತಾತ್ಮ – ಮದನ್ ಲಾಲ್ ಧಿಂಗ್ರ.
22.  ಭಾರತದ ಮೊದಲ ರಾಷ್ಟೀಯ ಶಾಲೆ – ರಂಗಾಪುರ ಶಾಲೆ – 8 ನವೆಂಬರ್ 1905.
23.  ಭಾರತದ ಮೊದಲ ರಾಜಕೀಯ ಸಂಘಟನೆ – ಯಂಗ್ ಬೆಂಗಾಲ್
24.  ಮೊದಲ ಕಾರ್ಮಿಕ ಪತ್ರಿಕೆ - ಭಾರತ್ ಶ್ರಮಜೀವಿ - 1874 - ಶಶಿಪಾದ ಬಂಧೋಪಾಧ್ಯಾಯ
25.  ಅಂಡಮಾನ್ ಜೈಲಿಗೆ ಕಳಿಸಲ್ಪಟ್ಟ ಮೊದಲ ಭಾರತೀಯ ಖೈದಿಗಳು – ವಹಾಬಿಗಳು
26.  ಇಂಗ್ಲೀಷಿನಲ್ಲಿ ಭಾರತದ ಬಗ್ಗೆ ಬರೆಯಲಾದ ಮೊದಲ ಕವಿತೆಯ ಕವಿ - ಡೆರೊಜಿûಯೊ
27.  ಭಾರತದಲ್ಲಿ ಮೊದಲ ಮಹಿಳಾ ಪರಿಷತ್ತನ್ನು ಸಂಘಟಿಸಿದವರು – ರಮಾಬಾಯಿ ರಾನಾಡೆ
28.  ಮುಂಬಯಿಯಲ್ಲಿ ಮೊದಲ ವಿಧವಾ ವಿವಾಹವನ್ನು ನೆರವೇರಿಸಿದವರು – ಮಹಾದೇವ ಗೋವಿಂದ ರಾನಾಡೆ.
29.  1920ರ ದಶಕದಲ್ಲಿ ರಾಜಕೀಯ ಚುನಾವಣೆಯಲ್ಲಿ ಸ್ಪರ್ಧಿಸಿದ ಮೊದಲ ಮಹಿಳೆ - ಕಮಲಾಬಾಯಿ ಚಟ್ಟೋಪಾಧ್ಯಾಯ
30.  ಬಾಂಬೆ ಪ್ರಾಂತ್ಯದಲ್ಲಿ ಉಪ್ಪಿನ ಕಾಯ್ದೆಯನ್ನು ವಿರೋಧಿಸಿದ್ದಕ್ಕಾಗಿ ಬಂಧಿತಳಾದ ಮೊದಲ ಮಹಿಳೆ – ಕಮಲಾಬಾಯಿ ಚಟ್ಟೋಪಾಧ್ಯಾಯ
31.  ಭಾರತದ ತ್ರಿವರ್ಣ ಧ್ವಜವನ್ನು ಮೊದಲ ಬಾರಿಗೆ ಭಾರತದಲ್ಲಿ ಹಾರಿಸಿದ್ದು ಏಪ್ರಿಲ್ 14, 1944ರಲ್ಲಿ, ಮಣಿಪುರದ ಮೊಯಿರಂಗ್ ನಲ್ಲಿ. (ಐ ಎನ್ ಎ)

- ಸೌಮ್ಯ

ಕವನ - ಬೇಕಿದೆ ಇನ್ನೊಂದು ಹೋರಾಟ

ಕವನ 
ಬಂದಿದೆಯೇ ನಮಗೆ ದಿಟದ ಸ್ವಾತಂತ್ರ್ಯ
ದೊರೆತಿದೆಯೇ ನಿಜದ ಸಾಮಾಜಿಕ ನ್ಯಾಯ?
ಕಂಡಿಹೆವು ಏನನ್ನು ಭಾರತದ ಭುವಿಯಲ್ಲಿ
ನಾಡ ಹಿರಿಯರ ಕನಸು ಮಣ್ಣಾಗಿಹುದು ಇಲ್ಲಿ!

ಬುದ್ಧನ ನಾಡಿನಲ್ಲಿ ಬಾಂಬುಗಳ ದಾಳಿ
ಬಸವನ ಬೀಡಿನಲಿ ಜಾತಿಯ ಹಾವಳಿ
ಗಾಂಧಿಯ ರಾಷ್ಟ್ರದಲಿ ಹಿಂಸೆಯ ಭೀತಿ
ಭಗತ್ ರ ದೇಶದಲಿ ಧರ್ಮ ಭೇದದ ರೀತಿ,
ನಜ್ರುಲ್ ರ ನೆಲದಲ್ಲಿ ಕೋಮುವಾದದ ಉರಿ
ಬಿಎಂಶ್ರೀ ಯ ಪ್ರದೇಶದಲಿ ಭಾಷಾ ದಳ್ಳುರಿ,
ವಿವೇಕಾನಂದರ ಮಣ್ಣಲ್ಲಿ ಸ್ತ್ರೀ ಮಾನಭಂಗ,
ಗಿಜುಭಾಯಿಯರ ಭೂಮಿಯಲಿ ಮಕ್ಕಳ ಆತ್ಮಭಂಗ,
ರಾಮ್ಮೋಹನ್ ರ ಕ್ಷಿತಿಯಲ್ಲಿ ಸತಿಪದ್ಧತಿಗೆ ಪುನಃಶ್ಚೇತನ
ವಿದ್ಯಾಸಾಗರರ ಭೂಭಾಗದಲಿ ವಿಧವೆಯರ ಅವಮಾನ,
ತಿಲಕರ ದೇಶದಲಿ ಸ್ವಾತಂತ್ರ್ಯದ ಹರಾಜು
ಅಂಬೇಡ್ಕರರ ರಾಷ್ಟ್ರದಲಿ ಹೆಂಡದ ಸರಬರಾಜು
ಗುರುಜಾಡರ ಮಣ್ಣಿನಲಿ ವರದಕ್ಷಿಣೆ ಪಿಡುಗು
ಜೆಪಿಯವರ ಜನಪದದಿ ಭ್ರಷ್ಟರ ಗುಡುಗು,
ಇಂತಹ ನಾಡಿಗಾಗಿಯೇ ಅವರ ಹೋರಾಟ?
ಇಂತಹ ಸ್ವಾತಂತ್ರ್ಯಕಾಗಿಯೇ
ಅವರ ಕಾದಾಟ?

ಕಸವೆಲ್ಲವ ಗುಡಿಸಬೇಕಿದೆ
ಮನಸೆಲ್ಲ ಸ್ವಚ್ಛಗೊಳಿಸಬೇಕಿದೆ
ಮತ್ತೊಂದು ಹೋರಾಟ ಬೇಕಿದೆ ಇಂದು
ಅವರೆಲ್ಲರ ಕನಸ ಸಾಕಾರಗೊಳಿಸಲೆಂದು!
- ಸುಧಾ ಜಿ    

   

ಕವನ - ಸ್ವಾತಂತ್ರ್ಯೋತ್ಸವ


ಒಂದು ದಿನ ಧ್ವಜವ
ಏರಿಸಿದರೆ ಸಾಕೆ?
ಇದೊಂದು ದಿನ ದೇಶವ
ಹಾಡಿ ಹೊಗಳಿದರೆ ಸಾಕೆ?
ಎಲ್ಲೆಲ್ಲೂ ತಳಿರುತೋರಣ
ಹಬ್ಬದ ವಾತಾವರಣ
ಬಾವುಟಗಳ ರಾರಾಜಿಸುವಿಕೆ
ಬಣ್ಣದ ಬಟ್ಟೆಗಳ ತೊಡುವಿಕೆ
ಸಿಹಿತಿಂಡಿಗಳ ಹಂಚಿಕೆ
ಭಾಷಣಗಳ ವಾಚಿಕೆ
ಮಕ್ಕಳ ನಾಟಕ ನೃತ್ಯಗಳು
ವಿದ್ಯಾರ್ಥಿಗಳ ಪೆರೇಡ್ ಗಳು
ಶಾಲೆಗೆ ರಜ
ಒಂದಷ್ಟು ಮಜ
ಸ್ವಾತಂತ್ರ್ಯೋತ್ಸವವೆಂದರೆ ಹೀಗೇನಾ?
ಲಕ್ಷಾಂತರ ಜನರ ತ್ಯಾಗಬಲಿದಾನದ
ಸ್ವಾತಂತ್ರ್ಯದಿನದಾಚರಣೆ ಇಷ್ಟೇನಾ?

ದಾಸ್ಯವಿರದ, ದಮನವಿರದ
ಹೀನ ಅಪಮಾನವಿರದ
ನೋವಿರದ, ಕಣ್ಣೀರಿರದ
ಜಾತಿಧರ್ಮ ಭೇದವಿರದ
ಸ್ವಾತಂತ್ರ್ಯ, ಸಮಾನತೆಯ
ಉದ್ಯೋಗ, ಸಾಕ್ಷರತೆಯ
ಸಮೃದ್ಧಿ , ನೆಮ್ಮದಿಯ
ಏಕತೆ, ಸೌಹಾರ್ದತೆಯ
ಹೊಸನಾಡಿನ ಕನಸ ಕಂಡರು
ಭವ್ಯಭಾರತದ ಆಶೆ ಹೊತ್ತರು

ನಮ್ಮಗಳ ಓದಿಗಾಗಿ
ಅವರು ಓದು ಬಿಟ್ಟರು
ನಮ್ಮ ಮುಕ್ತ ಬದುಕಿಗಾಗಿ
ಅವರು  ಕೆಲಸ ಬಿಟ್ಟರು
ನಮ್ಮ ಸ್ವಾತಂತ್ರ್ಯಕಾಗಿ
ಅವರು ಪ್ರಾಣ ಕೊಟ್ಟರು
ಹೊಸ ದೇಶದ ಕನಸಿಗಾಗಿ
ತಮ್ಮ ಕನಸ ಬಲಿಯಿತ್ತರು
ನಮ್ಮಯ ಸುಖಬಾಳಿಗಾಗಿ
ತನುಮನವ ತೆತ್ತರು
ಮನೆಮಠ ಆಸ್ತಿಪಾಸ್ತಿ
ಕಳೆದುಕೊಂಡರು
ಲಾಠಿ ಏಟು ಗುಂಡಿನೇಟು
ಸಹಿಸಿಕೊಂಡರು
ಜೈಲು ಶಿಕ್ಷೆ ಗಡಿಪಾರು ಶಿಕ್ಷೆ,
ಅನುಭವಿಸಿಯೇಬಿಟ್ಟರು
ದಮನದೌರ್ಜನ್ಯವ
ಎದುರಿಸಿಯೆಬಿಟ್ಟರು
ನೇಣುಗಂಬವನ್ನು ಸಹ
ನಗುತ ಏರಿಬಿಟ್ಟರು
ತಾವ್ ಕಂಡ ಕನಸಿಗಾಗಿ
ಕನಸಾಗಿ ಹೋಗಿಬಿಟ್ಟರು.
ಅವರ ಕನಸ ಸಾಕಾರಗೊಳಿಸುವುದೇ
ಅವರಿಗೆ ನಾವ್ ನೀಡುವ ನಿಜಗೌರವ
ಹೊಸ ನಾಡ ಕಟ್ಟಲು ಪಣತೊಡುವುದೇ
ನಿಜವಾದ ರೀತಿಯ ಸ್ವಾತಂತ್ರ್ಯೋತ್ಸವ.
ಬನ್ನಿ ಕಂಕಣ ತೊಡೋಣ ಇಂದೇ
ಸ್ವಾತಂತ್ರ್ಯ-ಸಮಾನತೆ-ಭ್ರಾತೃತ್ವಕ್ಕೆ ಶ್ರಮಿಸೋಣವೆಂದೇ.
- ಸುಧಾ ಜಿ