Pages

ವ್ಯಕ್ತಿ ಪರಿಚಯ - ಮತ್ತೆ ಮತ್ತೆ ಕಾಡುವ ಕಾಳಿಂಗರಾಯರು



ದೈಹಿಕವಾಗಿ ಕಣ್ಮರೆಯಾದರೂ ಜನಮಾನಸದಲ್ಲಿ ಸದಾ ಹಸಿರಾಗಿ ನೆನಪಿನಲ್ಲಿರುವ ಮತ್ತು ಆ ನೆನಪಿನೊಳಗೆ ಇದ್ದು ಮತ್ತೆ ಮತ್ತೆ ಕಾಡುವ ಕೆಲವೇ ಅಪರೂಪದ ವ್ಯಕ್ತಿಗಳಲ್ಲಿ ಕಾಳಿಂಗರಾಯರು ಒಬ್ಬರು. ಸುಗಮ ಸಂಗೀತವೆಂದ ಕೂಡಲೇ ನೆನಪಾಗುವುದು ಕಾಳಿಂಗರಾಯರು. ಅವರು ಕನ್ನಡ ಸಾಹಿತ್ಯದ ಶ್ರೇಷ್ಠ ಕವಿಗಳ ಅತ್ಯುತ್ತಮ ಕಾವ್ಯವನ್ನು ಮನೆಮಂದಿಗೆ ತಲುಪಿಸಿದರು; ಸಾಹಿತ್ಯದ ಸವಿಯನ್ನು ಸಂಗೀತದ ಬಟ್ಟಲಲ್ಲಿ ಹೊತ್ತು ತಂದವರು. ಕಾವ್ಯದೊಂದಿಗೆ ಗಾನಸುಧೆಯನ್ನು ಜನಸಾಮಾನ್ಯರಿಗೂ ಹರಿಸಿದವರು. ಸಂಗೀತದ ಬಗ್ಗೆ ಆಳವಾದ ಜ್ಞಾನವಿಲ್ಲದವನೂ ಅವರ ಹಾಡುಗಳನ್ನು ಗುನುಗಬಹುದು. ಕಾಳಿಂಗರಾಯರ ಹೆಸರಿಲ್ಲದೆ ಕರ್ನಾಟಕದಲ್ಲಿ ಸುಗಮ ಸಂಗೀತದ ಕುರಿತು ಮಾತು ಅಪೂರ್ಣ; ಅವರನ್ನು ನೆನೆಯದೆ ಭಾವಗೀತೆ ಗಾಯನ ಅಸಾಧ್ಯ. ಈ ವರ್ಷ 2014, ಅವರ ಜನ್ಮ ಶತಮಾನೋತ್ಸವದ ವರ್ಷ. ಹಾಗಾಗಿ ಅವರನ್ನು ನೆನಪಿಸಿಕೊಳ್ಳುವ ಸುಸಂದರ್ಭ.
ಕಾಳಿಂಗರಾಯರಂತೆ ಅನೇಕರು ಕನ್ನಡ ಗೀತೆಗಳನ್ನು, ಭಾವಗೀತೆಗಳನ್ನು ಹಾಡಿದ್ದಾರೆ, ಹಾಡುತ್ತಲೂ ಇದ್ದಾರೆ. ಅವರ ಕಾಲದಲ್ಲೇ ಕನ್ನಡ ಹಾಡುಗಳನ್ನು – ಅದು ಜಾನಪದ, ವಚನ, ಭಾವಗೀತೆ, ದಾಸರ ಪದಗಳು ಯಾವುದೇ ಆಗಿರಬಹುದು – ಎಲ್ಲ ಜನರಿಗೂ ಒಗ್ಗುವಂತೆ, ಎಲ್ಲರಿಗೂ ಕೇಳಲು ಇಷ್ಟವಾಗುವಂತೆ ಮತ್ತು ಎಲ್ಲದ್ದಕ್ಕಿಂತ ಹೆಚ್ಚಾಗಿ ಅದರ ಭಾವವು ಕೇಳುಗರ ಹೃದಯದಾಳಕ್ಕೆ ಇಳಿಯುವಂತೆ ಹಾಡುವ ಪ್ರಯತ್ನಗಳು ನಡೆದಿದ್ದವು. 
ಆದರೆ ಆ ಕಾಲದಲ್ಲಿ, ಅಂದರೆ ಸುಮಾರು 20ನೇ ಶತಮಾನದ 30ರ ದಶಕದಲ್ಲಿ ಎಂದುಕೊಳ್ಳಬಹುದೇನೋ, ಶುದ್ಧ ಶಾಸ್ತ್ರೀಯ ಸಂಗೀತ ಬಿಟ್ಟರೆ ಜಾನಪದ ಚಾಲ್ತಿಯಲ್ಲಿತ್ತು. ಜಾನಪದವನ್ನು ಎಲ್ಲರೂ ಕೇಳಲು ಸಾಧ್ಯವಾಗುತ್ತಿತ್ತು; ಆದರೆ ಶಾಸ್ತ್ರೀಯ ಸಂಗೀತವನ್ನು ಸಂಗೀತದ ವ್ಯಾಕರಣ ಬಲ್ಲವರಿಗೆ ಮಾತ್ರ ಆಸ್ವಾದಿಸಲು ಸಾಧ್ಯವಿತ್ತು. ಶ್ರೀಯುತ ಸಿ.ಎನ್.ಕೃಷ್ಣಮಾಚಾರ್ ಭಾಷೆಯಲ್ಲಿ ಹೇಳುವುದಾದರೆ: “ಆ ಕಾಲದಲ್ಲಿ ದಾಸರ ಪದಗಳನ್ನು ಶರಣರ ಪದಗಳನ್ನು ಹಾಡುವುದೆಂದರೆ ಸೂತಕದ ಮನೆ ಹೊಕ್ಕಂತೆ”
ಸಾಹಿತ್ಯ ಕ್ಷೇತ್ರವು ಮಾತ್ರ ನವೋದಯ ಚಳುವಳಿಯ ಕಾವಿನಲ್ಲಿ ಮಾನವತಾವಾದಿ ಮೌಲ್ಯಗಳನ್ನು ಪ್ರತಿಬಿಂಬಿಸುವ ಸಾಹಿತ್ಯ ಸೃಷ್ಟಿಯಲ್ಲಿ ದಾಪುಗಾಲು ಹಾಕುತ್ತಿತ್ತು. ಬಿ.ಎಂ.ಶ್ರೀ, ಬೇಂದ್ರೆ, ಕುವೆಂಪು, ಇನ್ನಿತರರ ಕಾವ್ಯಗಳು ಹಳೆಯ ಊಳಿಗಮಾನ್ಯ ಪದ್ಧತಿಯ ಮೌಲ್ಯಗಳನ್ನು ಧಿಕ್ಕರಿಸಿ ಮಾನವತಾವಾದಿ ಮೌಲ್ಯಪ್ರಜ್ಞೆಯನ್ನು ಪ್ರತಿಬಿಂಬಿಸುತ್ತಿದ್ದವು. ಆದರೆ ಆ ಸಾಹಿತ್ಯ ಕೇವಲ ಸಾಹಿತ್ಯಾಸಕರು, ವಿದ್ಯಾವಂತರು ಮಾತ್ರ ಆಸ್ವಾದಿಸಲು ಸಾಧ್ಯವಿತ್ತು. ಅದು ಜನರ ನಡುವೆ ಚಿರಪರಿಚಿತವಾಗಿರಲಿಲ್ಲ; ಹಾಗೆ ಆಗಬೇಕಾದದ್ದು ಅವಶ್ಯಕವಾಗಿತ್ತು.
ಇಂಥ ಹಿನ್ನೆಲೆಯಲ್ಲಿ, ಕೆಲವು ಸಂಗೀತಗಾರರು ಸಂಗೀತದ ಸವಿಯನ್ನೂ, ಸಾಹಿತ್ಯದ ಹೂರಣವನ್ನೂ ಎಲ್ಲ ಜನರಿಗೂ ಬಡಿಸುವ ಪ್ರಯತ್ನ ಮಾಡಿದರು. ಗಾನಸುಧಾಕರ ಎ.ಸುಬ್ಬರಾಯರು ದಾಸರ ಪದಗಳನ್ನು ಹಾಡುತ್ತಿದ್ದರಂತೆ. ಭಾವಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿ ಹಾಡಿದ ಶಾಸ್ತ್ರೀಯ ಸಂಗೀತಗಾರರಾದ ಆರ್.ಕೆ.ಶ್ರೀಕಂಠನ್ ಶರಣರ ಪದಗಳನ್ನು ಹಾಡುತ್ತಿದ್ದರಂತೆ. ಆ ಕಡೆ ಉತ್ತರ ಕರ್ನಾಟಕದಲ್ಲಿ ಬಾಳಪ್ಪ ಹುಕ್ಕೇರಿಯವರು ಹಿಂದುಸ್ಥಾನಿಯನ್ನು ಶಾಸ್ತ್ರಬದ್ಧವಾಗಿ ಕಲಿತಿದ್ದರೂ, ಲಘು ಸಂಗೀತದ ಮೂಲಕ ವಚನಗಳನ್ನು, ಜಾನಪದ ಗೀತೆಗಳನ್ನು ಜನಸಾಮಾನ್ಯರಿಗೆ ಹಾಡುತ್ತಿದ್ದರು. ಬಹುಶಃ ಅವರು 30ರ ದಶಕದಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರಿಂದ - ಅದಕ್ಕಾಗಿ ಅವರು ಜೈಲುವಾಸವನ್ನೂ ಅನುಭವಿಸಿದ್ದರು – ಮತ್ತು ದೇಶಭಕ್ತಿಯ ಭಾವನೆಗಳನ್ನು ಬಿತ್ತಲು ಹಾಡುತ್ತಿದ್ದರಿಂದಲೇ ಜನರಿಗೆ ತಲುಪುವ ಸಂಗೀತ ಅವರಿಗೆ ಸಿದ್ಧಿಸಿತ್ತು. ಸ್ವಾತಂತ್ರ್ಯಾನಂತರ ಬೇಂದ್ರೆ, ಕಾವ್ಯಾನಂದ ಮುಂತಾದವರ ಭಾವಗೀತೆಗಳನ್ನು ಭಾವಪೂರ್ಣವಾಗಿ ಸಂಗೀತದ ಸೌಂದರ್ಯದೊಂದಿಗೆ ಧ್ವನಿ ಮಾಧುರ್ಯದೊಂದಿಗೆ ಹಾಡಲು ಆರಂಭಿಸಿದರು. ಆದರೆ ಇದು ಇಂದು ನಾವು ಸುಗಮ ಸಂಗೀತವೆಂದು ಕರೆಯುವ ರೀತಿಯಲ್ಲಿ ಬೆಳೆದಿರಲಿಲ್ಲ. ಅದಕ್ಕಾಗಿ ಕಾಳಿಂಗರಾಯರಿಗೆ ಕಾಯಬೇಕಿತ್ತು.
ಇಂಥದೊಂದು ಹಿನ್ನೆಲೆಯಲ್ಲಿ ಕಾಳಿಂಗರಾಯರ ಪ್ರವೇಶವಾಯಿತು. ಸುಮಾರು ಐವತ್ತರ ದಶಕದಲ್ಲಿ ಆರಂಭವಾದ ರಾಯರ ಸುಗಮ ಸಂಗೀತದ ಹೊಳೆ ಅವರು ನಿಧನವಾಗುವವರೆಗೂ ನಿರಂತರವಾಗಿ ಹರಿಯುತ್ತಲೇ ಇತ್ತು. ಅವರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ನಾಡಪ್ರೇಮವನ್ನು ಹಚ್ಚಿದರೆ, ಬೇಂದ್ರೆ, ಕುವೆಂಪು, ಅಡಿಗ, ಜಿ.ಪಿ.ರಾಜತ್ನಂ, ಮುಂತಾದವರ ಕಾವ್ಯಗಳ ಭಾವಧಾರೆಯನ್ನು ಹರಿಸಿತು. ಭಾವಗೀತೆ, ವಚನ, ಜಾನಪದ ಗೀತೆ, ದಾಸರ ಪದಗಳನ್ನು ಶಾಸ್ತ್ರೀಯ ಸಂಗೀತದ ತಳಹದಿಯ ಮೇಲೆ ಸಾಹಿತ್ಯ ಮತ್ತು ಭಾವಕ್ಕೆ ಒತ್ತುಕೊಟ್ಟು ಹಾಡುವ ಶೈಲಿಯು ಸುಗಮ ಸಂಗೀತವಾಯಿತು. ಆ ಪ್ರಕಾರವಾಗಿ ಬೆಳೆಸಿ, ಪ್ರಚಾರ ಮಾಡಿ, ಅದಕ್ಕೊಂದು ಸ್ಥಾನಮಾನವನ್ನು ಕೊಟ್ಟವರೆಂದರೆ ಕಾಳಿಂಗರಾಯರೇ. ವಿದುಷಿ ಶ್ಯಾಮಲಾ ಜಿ. ಭಾವೆ ಹೇಳುತ್ತಾರೆ: “ಕನ್ನಡ ಸುಗಮ ಸಂಗೀತಕ್ಕೆ ನಾಂದಿಯಿಟ್ಟವರು ಅಮೀರಾಬಾಯಿ ಕರ್ನಾಟಕಿ ಮತ್ತು ಬಾಳಪ್ಪ ಹುಕ್ಕೇರಿಯವರಂತಹ ಮೇಧಾವಿಗಳಾಗಿದ್ದರೂ ಸಹ, ಅವರ ಹಾದಿಯಲ್ಲೇ ಬೆಳೆದು ಬಂದ ಕಾಳಿಂಗರಾಯರು ಈ ಕ್ಷೇತ್ರಕ್ಕೆ ಮೆರುಗುಕೊಟ್ಟ ಸುಗಮ ಸಂಗೀತರವನ್ನು ಸಂಗೀತ ಸಿಂಹಾಸನದ ಮೇಲೆ ಕುಳ್ಳಿರಿಸಿದ ವ್ಯಕ್ತಿ.” ಆದರೆ ಅವರ ಕ್ಷೇತ್ರ ಕೇವಲ ಸುಗಮ ಸಂಗೀತವಲ್ಲ. ಅದರಲ್ಲಿ ಅವರು ಮೇರು ಪರ್ವತದಂತೆ. ಹಾಗಾಗಿಯೇ ಅವರ ಇತರ ಕ್ಷೇತ್ರಗಳ ಕೆಲಸಗಳು, ಅದರಲ್ಲಿ ಅವರು ಮಾಡಿದ ಸಾಧನೆ, ಅವುಗಳಲ್ಲಿದ್ದ ಅವರ ಪ್ರತಿಭೆ ಹಿಂದೆ ಸರಿದಿವೆ. ಅವರು ಯಕ್ಷಗಾನ ನಟರು, ನಾಟಕ ಸಂಗೀತ ಸಂಯೋಜಕರು ಮತ್ತು ನಟರು, ಸಿನಿಮಾ ಸಂಗೀತ ನಿರ್ದೇಶಕರು ಮತ್ತು ನಟರು, ಹೀಗೆ ಎಲ್ಲವು. ಅವರು ಸುಗಮ ಸಂಗೀತವನ್ನು ಹುಟ್ಟುಹಾಕುವ ದೈತ್ಯಕೆಲಸಕ್ಕೆ ಇವೆಲ್ಲವೂ ಹಿನ್ನೆಲೆಯಾಗಿ, ತಯಾರಿಯಾಗಿ, ಪ್ರಯೋಗವಾಗಿ ಕೆಲಸ ಮಾಡಿವೆ. ಅದನ್ನು ಅವಲೋಕಿಸಬೇಕು.
ಶಾಲೆಗೆ ಚಕ್ಕರ್ ಯಕ್ಷಗಾನಕ್ಕೆ ಹಾಜರ್:
ದಕ್ಷಿಣ ಕನ್ನಡದ ಆರೂರು ಗ್ರಾಮದಲ್ಲಿ 1914ನೇ ಆಗಸ್ಟ್ 31ರಂದು ಜನಿಸಿದ ಕಾಳಿಂಗರಾಯರಿಗೆ ಶಾಲೆಯಲ್ಲಿ ಯಾವ ಆಕರ್ಷಣೆಯೂ ಕಾಣಲಿಲ್ಲ. ಬದಲಿಗೆ ಯಕ್ಷಗಾನದ ಬಣ್ಣದ ವೇಷ, ಕುಣ ತ, ಮದ್ದಳೆಯ ಬಡಿತ ಮನೋಹರವಾಗಿ, ಅತ್ಯಂತ ಆಕರ್ಷಣ ೀಯವಾಗಿ ಕಂಡಿರಬೇಕು. ಜೊತೆಗೆ ತಂದೆ ‘ಗೆಜ್ಜೆ ಪುಟ್ಟಯ್ಯ’ ಎಂದೇ ಪ್ರಖ್ಯಾತರಾಗಿದ್ದ ಪಾಂಡೇಶ್ವರ ನಾರಾಯಣರಾವ್ ಸ್ವತಃ ಯಕ್ಷಗಾನ ಕಲಾವಿದರು. ಸುತ್ತಮುತ್ತ ಯಕ್ಷಗಾನದ ವಾತಾವರಣ. ಯಕ್ಷಗಾನವನ್ನೇ ಉಸಿರಾಡುತ್ತಿದ್ದ ಕಾಳಿಂಗರಾಯರು ಯಕ್ಷಗಾನದ ಸೆಳೆತಕ್ಕೆ ಸೋತರು.  ಅವರು ಯಕ್ಷಗಾನದಲ್ಲಿ ಅಭಿನಯಿಸಲು ಆರಂಭಿಸಿದರು. ಏಳೆಂಟು ವರ್ಷಗಳ ಕಾಲ ಸಂಗೀತವನ್ನು ಅಭ್ಯಾಸ ಮಾಡಿದರು. ಮುಂಡಾಜೆ ರಂಗನಾಥ ಭಟ್ಟರ ‘ಅಂಬಾ ಪ್ರಸಾದಿತ ನಾಟಕ ಮಂಡಳಿ’ ರಾಯರನ್ನು ಸೆಳೆದುಕೊಂಡಿತ್ತು. ಅಲ್ಲಿ ಏಳೆಂಟು ವರ್ಷಗಳ ಕಾಲ ಯಕ್ಷಗಾನದಲ್ಲೇ ರಂಗದ ಹಿನ್ನೆಲೆಯಲ್ಲೇ ಹಾಡುತ್ತಾ ಕಾಲ ಕಳೆದರು. ಆನಂತರವೇ ಅವರಿಗೆ ಸ್ತ್ರೀ ಪಾತ್ರಗಳನ್ನು ಮಾಡುವುದಕ್ಕೆ ಅವಕಾಶ ಸಿಕ್ಕಿತು.
ಅವರು ಯಕ್ಷಗಾನದಿಂದ ಸಂಗೀತ ಕ್ಷೇತ್ರಕ್ಕೆ ಪೂರ್ಣವಾಗಿ ತೊಡಗಿಕೊಳ್ಳಲು ಶಿವಮೊಗ್ಗದಲ್ಲಿ ನಡೆದ ಘಟನೆಯೇ ದೊಡ್ಡ ತಿರುವು. ಸುಮಾರು ಹದಿನಾರರ ಹರೆಯದ ಯುವಕ, 1944ರಲ್ಲಿ ಶಿವಮೊಗ್ಗದಲ್ಲಿ ಸಂಗೀತ ಕಛೇರಿಯನ್ನು ನಡೆಸಿ ಜೈ ಎನಿಸಿಕೊಂಡರು. ಆಗಿನ ಜಿಲ್ಲಾಧಿಕಾರಿಗಳಾಗಿದ್ದ ಬಿ.ಟಿ.ಕೇಶವ ಅಯ್ಯಂಗಾರ್ಯರು ರಾಯರಿಗೆ ಶಾಲು ಹೊದಿಸಿ, ಚಿನ್ನದ ಕಡಗ ತೊಡಿಸಿ ಅಭಿನಂದಿಸಿದರು. ಇದರಿಂದ ರಾಯರು ಉತ್ತೇಜಿತರಾದರು; ಸಂಗೀತದ ಆಕರ್ಷಣೆ ಬಲವಾಯಿತು. ಅವರಿಗೆ ರಾಮಚಂದ್ರ ಬುವಾ ಮತ್ತು ರಾಮದುರ್ಗದ ವೆಂಕಟರಾವ್ ಬಳಿ ಹಿಂದೂಸ್ತಾನಿ ಸಂಗೀತವನ್ನು ಆಳವಾಗಿ ಅಭ್ಯಾಸವಾಯಿತು.
ಸಂಗೀತ, ಸಿನಿಮಾ ಮತ್ತು ರಂಗಭೂಮಿ
ಕಾಳಿಂಗರಾಯರು ರಂಗಭೂಮಿಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಒಂದು ರೀತಿಯಲ್ಲಿ ಅದು ಜೀವನೋಪಾಯವೂ ಆಗಿತ್ತು. ತಾವು ನಟಿಸುತ್ತಿದ್ದ ನಾಟಕ ಕಂಪೆನಿ ಮುಚ್ಚುವ ಹಂತದಲ್ಲಿದ್ದಾಗ, ಅದರ ಜವಾಬ್ದಾರಿಯನ್ನು ಹೊತ್ತುಕೊಂಡು ತಾವೇ ನಾಯಕರಾಗಿದ್ದ ‘ರಾಯರ ಸೊಸೆ’ಯನ್ನು 1947ರಲ್ಲಿ ರಂಗಕ್ಕೆ ತಂದರು. ಈ ಸಾಹಸ ಬಹಳ ಕಾಲ ನಡೆಯಲಿಲ್ಲ. ನಂತರ ತಮ್ಮನ್ನು ನಾಟಕಕ್ಕೆ ಸಂಗೀತ ನೀಡುವುದಕ್ಕೆ ಸೀಮಿತಗೊಳಿಸಿಕೊಂಡರು. ಇದು ಮುಂದೆ ಕಾಳಿಂಗರಾಯರು ಸಂಗೀತದ, ಸುಗಮ ಸಂಗೀತದ ಪ್ರವರ್ತಕನಾಗಲು ಅವಕಾಶವನ್ನು ತೆರೆದಿಟ್ಟಿತು. 1955ರಲ್ಲಿ ಗುಬ್ಬಿ ವೀರಣ್ಣನವರ ‘ದಶಾವತಾರ’ ನಾಟಕಕ್ಕೆ ಕಾಳಿಂಗರಾಯರು ಸಂಗೀತ ಸಂಯೋಜನೆ ಮಾಡಿದರು. ಅದು ಅದ್ಭುತ ಯಶಸ್ಸು ಕಂಡಿತು. ಕಾಳಿಂಗರಾಯರು ಸಂಗೀತಗಾರರಾಗಿ ಮುಂದೆ ಬಂದರು.
ಕಾಳಿಂಗರಾಯರಲ್ಲಿದ್ದ ಪ್ರತಿಭೆ ಸಿ.ರಾಜಗೋಪಾಲಾಚಾರ್ಯರ ಕಣ ್ಣಗೆ ಹೇಗೆ ಬಿತ್ತೊ ಗೊತ್ತಿಲ್ಲ. ಅವರು ಕಾಳಿಂಗರಾಯರನ್ನು ಮದರಾಸಿನ ‘ಹಿಂದಿ ಪ್ರಚಾರ ಸಭಾ’ದ ಪ್ರಾಂಶುಪಾಲರಾಗಲು ಆಹ್ವಾನಿಸಿದರು. ಆಹ್ವಾನವನ್ನು ಮನ್ನಿಸಿ ಕಾಳಿಂಗರಾಯರು ಮದರಾಸಿಗೆ ಪಯಣ ಬೆಳೆಸಿದರು. ಅಲ್ಲಿ ಅವರ ಸಂಗೀತ ಅಭ್ಯಾಸ ಚೆನ್ನಾಗಿ ಸಾಗಿತು ಎನ್ನುತ್ತಾರೆ. ಅವರಿಗೆ ಮೋಹನ್ ಕುಮಾರಿ ಮತ್ತು ಸೋಹನ್ ಕುಮಾರಿ ಸೋದರಿಯರು ದಿಕ್ಕುಕಾಣದೆ ಮದರಾಸಿಗೆ ಬಂದಿಳಿದಾಗ ಅವರ ಪರಿಚಯವಾಯಿತು. ಅಲ್ಲಿಂದಾಚೆಗೆ ಅವರಿಬ್ಬರೂ ಕಾಳಿಂಗರಾಯರ ಶಿಷ್ಯೆಯರು ಮತ್ತು ಸಂಗೀತದ ಒಂದು ಭಾಗವೇ ಆಗಿಬಿಟ್ಟರು. ಕನ್ನಡ ಕಲಿತು, ಕನ್ನಡಿಗರಿಗಿಂತ ಹೆಚ್ಚಾಗಿ ಕನ್ನಡ ಕೆಲಸ ಮಾಡಿದರು. ಒಂದು ರೀತಿಯಲ್ಲಿ ಅವರು ಇಲ್ಲದೆ ಕಾಳಿಂಗರಾಯರ ಸಂಗೀತ, ಹಾಡುಗಾರಿಕೆ ಅಪೂರ್ಣವೇನೋ!
ಆಗಿನ ಕಾಲದಲ್ಲಿ ಕನ್ನಡ ಸಿನಿಮಾದ ಧ್ವನಿಮುದ್ರಣ, ಸಂಕಲನಗಳು ಮದರಾಸಿನಲ್ಲೇ ನಡೆಯುತ್ತಿದ್ದವು. ಬಹುಶಃ ಆ ಕಾರಣದಿಂದಲೇ ಕಾಳಿಂಗರಾಯರಿಗೂ ಸಿನಿಮಾಗೂ ನಂಟು ಬೆಳೆದಿರಬಹುದು. ಜೊತೆಗೆ ಕಾಳಿಂಗರಾಯರು ರಂಗಭೂಮಿಯಲ್ಲಿ ಕೆಲಸ ಮಾಡಿದ್ದರಿಂದ ಸಿನಿಮಾದಲ್ಲೂ ರಂಗಭೂಮಿ ಕಲಾವಿದರೇ ಇದ್ದಿದ್ದರಿಂದ, ಅವರು ಸಿನಿಮಾ ರಂಗಕ್ಕೆ ಪ್ರವೇಶಿಸಲು ಕಾರಣವಾಯಿತು ಎಂದುಕೊಳ್ಳಬಹುದು.
ಚಿತ್ರರಂಗದಲ್ಲಿ ಕಾಳಿಂಗರಾಯರ ಸಂಗೀತ ನಿರ್ದೇಶನ ಅದ್ಭುತ ಯಶಸ್ಸು ಕಂಡಿತು. ಅವರಲ್ಲಿದ್ದ ದೈತ್ಯ ಪ್ರತಿಭೆಯ ಕಿರುನೋಟವನ್ನು ಕಾಣಬಹುದು. ತಮ್ಮ ಆರಂಭದ ಸಿನಿಮಾಗಳಲ್ಲಿ ನುರಿತ ಸಂಗೀತಗಾರನಂತೆ ಸಂಗೀತ ಅಳವಡಿಸಿದ್ದಾರೆ. ಭಾವನೆಗಳಿಗೆ ತಕ್ಕಂತೆ ಹಿನ್ನೆಲೆ ಸಂಗೀತ; ಹಾಡುಗಳಿಗೆ ಅವುಗಳ ಭಾವಗಳಿಗೆ ತಕ್ಕಂತೆ ಸಂಗೀತದ ಅಳವಡಿಕೆ; ಇದೆಲ್ಲವೂ ಬಹಳ ಅದ್ಭುತವಾಗಿದೆ. ಅವರು ಸಿನಿಮಾದಲ್ಲೇ ಶಾಸ್ತ್ರೀಯ ಸಂಗೀತದ ಜ್ಞಾನವನ್ನು, ಜಾನಪದ ಮತ್ತು ಪಾಶ್ಚಾತ್ಯ ಸಂಗೀತಗಳೊಂದಿಗೆ ಮೇಳೈಸಿ ಪರಿಣಾಮಕಾರಿಯಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರು ‘ಪ್ರೇಮಸಾಗರ’, ‘ವಸಂತಸೇನಾ’ (1941), ‘ಶ್ರೀಕೃಷ್ಣಲೀಲಾ’ (1947), ‘ಕೈವಾರ ಮಹಾತ್ಮೆ’, ‘ಭಕ್ತ ರಾಮದಾಸ’ (1948), ‘ಕಲಾವಿದ’ (1949), ‘ನಟಶೇಖರ’ (1954), ‘ಅಬ್ಬಾ ಆ ಹುಡುಗಿ’ (1959), ‘ಬ್ಲಾಕ್ ಮಾರ್ಕೆಟ್’, ‘ಮಹಾಶಿಲ್ಪಿ’ (1960), ‘ಹೃದಯ ವೀಣೆ’, ‘ಕಲ್ಪನಾ’, ‘ತುಂಬಿದ ಕೊಡ’, ಇನ್ನಿತರ ಕನ್ನಡ ಸಿನಿಮಾಗಳಿಗೆ ಮತ್ತು ‘ಶಶಿಧರನ್’, ‘ಚೇಚಿ’ ಮಲಯಾಳಂ ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡಿದರು ಮತ್ತು ಕೆಲವು ಸಿನಿಮಾಗಳಲ್ಲಿ ನಟಿಸಿ, ಹಾಡಿದ್ದಾರೆ.
ಇದೆಲ್ಲವೂ ಮುಂದೆ ಬರಲಿರುವ, ಬರಬೇಕಾಗಿದ್ದ ಸುಗಮ ಸಂಗೀತದ ಮಹಾಪ್ರದರ್ಶನಕ್ಕೆ ತಾಲೀಮಿನಂತಾಗಿತ್ತು. ಕಾಳಿಂಗರಾಯರಿಗೆ ಕಛೇರಿ ಕೊಡುವಷ್ಟು ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಜ್ಞಾನವಿತ್ತು. ಜಾನಪದ ಮತ್ತು ಪಾಶ್ಚಾತ್ಯ ಸಂಗೀತಗಳ ಪರಿಚಯವಿತ್ತು. ಸಂಗೀತದ ಗಂಧಗಾಳಿ ತಿಳಿಯದವರಿಂದ ಹಿಡಿದು ಸಂಗೀತಗಾರರವರೆಗೂ, ಎಲ್ಲರೂ ತಲೆತೂಗುವಂತಹ ಸಂಗೀತ ಸಂಯೋಜನೆಯ ಗುಟ್ಟು ತಿಳಿದಿತ್ತು. ಆದರೆ ಅದಕ್ಕೊಂದು ಸರಿಯಾದ ಗುರಿ, ಸ್ಪಷ್ಟದಾರಿಗಳನು ಕಂಡುಕೊಳ್ಳುವ ಅಗತ್ಯವಿತ್ತು. ಅಲ್ಲಿ ಕನ್ನಡದ ಭಾವಗೀತೆಗಳು ಅವರಿಗೆ ದಾರಿತೋರಿದವು.
ಸುಗಮ ಸಂಗೀತದ ಆದ್ಯ ಪ್ರವರ್ತಕ
ಕಾಳಿಂಗರಾಯರಿಗೆ ಅನಕೃ ‘ಶಾಸ್ತ್ರೀಯ ಸಂಗೀತ ಕೆಲವೇ ಜನಕ್ಕೆ ತಲುಪುವಂಥಾದ್ದು, ಆದರೆ ಭಾವಗೀತೆ ಮತ್ತು ಜನಪದ ಗೀತೆ ಎಲ್ಲಾ ವರ್ಗದ ಜನತೆಯನ್ನು ತಲುಪುತ್ತದೆ’ ಎಂದು ಹೇಳುತ್ತಿದ್ದರೆಂದು ಶ್ರೀ ಗಣೇಶ ಕಾಸರಗೋಡು ಬರೆಯುತ್ತಾರೆ. ಬಹುಶಃ ಸಿನಿಮಾ ಹಾಡುಗಳು ಕಾಳಿಂಗರಾಯರನ್ನು ತೃಪ್ತಿಪಡಿಸಲು ಸಾಧ್ಯವಾಗಿಲ್ಲ. ಅವರ ಅಭಿರುಚಿ ಬಹಳ ಉತ್ತಮವಾದದ್ದು ಮತ್ತು ಅವರ ಸೃಜನಶೀಲತೆಗೆ ಸಿನಿಮಾ ಸಂಗೀತ ಸಕಾಗಲಿಲ್ಲವೇನೋ! ಶ್ರೀಮತಿ ಎಚ್.ಆರ್.ಲೀಲಾವತಿಯವರ ಅಭಿಪ್ರಾಯದಂತೆ ಕಾಳಿಂಗರಾಯರು, “ಚಿತ್ರಬಹ್ಮರ ಅಪ್ಪಣೆಯ ಮೇರೆಗೆ ಟ್ಯೂನ್‍ಗಳನ್ನು ಸಿದ್ಧಪಡಿಸುವ ಕಾಯಕದಿಂದ ಬೇಸರಗೊಂಡರು. ಕಾಡಹಕ್ಕಿ ಸ್ವಾತಂತ್ರ್ಯ ಕಳೆದುಕೊಂಡು, ಪಂಜರದಲ್ಲಿ ಎಷ್ಟು ದಿನ ತಾನೆ ಬದುಕಲು ಸಾಧ್ಯ?” ಆದ್ದರಿಂದ ಅವರು ಕನ್ನಡ ಕಾವ್ಯದತ್ತ ಕಣ್ಣು ಹಾಯಿಸಿರಬಹುದು. ಜೊತೆಗೆ ಅಂದಿನ ಸಮಾಜದ ಸಾಂಸ್ಕøತಿಕ ಅಗತ್ಯಕ್ಕೆ ತಕ್ಕಂತೆ ಅವರ ಕಾವ್ಯಗಳ ಆಯ್ಕೆಯಿದೆ. ಅದು ದಾಸರ ಪದವಾಗಿರಬಹುದು, ಭಾವಗೀತೆಯಾಗಿರಬಹುದು, ಜಾನಪದ ಗೀತೆಯಾಗಿರಬಹುದು. ಅದೆಲ್ಲವೂ ಜನಜೀವನಕ್ಕೆ ಸಂಬಂಧಪಟ್ಟಿದ್ದು ಮತ್ತು ಸದ್ಭಾವವನ್ನು ಬೆಳೆಸುವಂತದ್ದು ಆಗಿದ್ದವು.
ಅವರನ್ನು ಖ್ಯಾತಿಯ ತುತ್ತತುದಿಗೇರಿಸಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಕರ್ನಾಟಕ ಏಕೀಕರಣದ ಚಳುವಳಿಯ ಭಾವವನ್ನು ಅಭಿವ್ಯಕ್ತಗೊಳಿಸುತ್ತದೆ. ಕಾಳಿಂಗರಾಯರು ಅಡಿಗರ ‘ಕಟ್ಟುವೆವು ನಾವು’ ಕವನದಲ್ಲಿರುವ ಸಾಮಾಜಿಕ ಸಮಾನತೆಯನ್ನು, ಬೇಂದ್ರೆಯವರ ‘ಮುಗಿಲ ಮಾರಿಗೆ’ಯಲ್ಲಿರುವ ಪ್ರೇಮಾನುಭವನ್ನು, ‘ಇಳಿದು ಬಾ ತಾಯಿ’ಯು ಕನ್ನಡ ತಾಯಿಗೆ ನೀಡುವ ಆಹ್ವಾನವನ್ನು, ಜಿ.ಪಿ.ರಾಜರತ್ನಂ ಕವಿತೆಗಳಲ್ಲಿ ಕಾಣುವ ತಳಮಟ್ಟದಲ್ಲಿರುವ ಜನರಲ್ಲೂ ಇರುವ ಉತ್ತಮ ಗುಣಗಳು, ಹಾಸ್ಯ ಪ್ರವೃತ್ತಿಗಳು, ಇದೆಲ್ಲವನ್ನೂ ತುಂಬಾ ಚೆನ್ನಾಗಿ ಸಂಗೀತದ ಮೂಲಕ ಅಭಿವ್ಯಕ್ತಿಗೊಳಿಸಿದ್ದಾರೆ.
ಅವರಿಗೆ ತಮ್ಮ ಶಾಸ್ತ್ರೀಯ ಸಂಗೀತದ ಪಾಂಡಿತ್ಯವನ್ನು ಪ್ರದರ್ಶಿಸುವ ಖಯ್ಯಾಲಿ ಇರಲಿಲ್ಲ. ಹಾಗೆಯೇ ಜನರನ್ನು ಹೇಗೋ ಒಂದು ರಂಜಿಸುವಂತಹ ಅಗ್ಗದ ಪ್ರಚಾರಪ್ರಿಯತೆಯೂ ಇರಲಿಲ್ಲ. ಈ ವಿಷಯದಲ್ಲಿ ಅವರ ನಿಲುವು ಬಹಳ ಸ್ಪಷ್ಟವಾಗಿದೆ. ಶ್ರೀಯುತ ಶಿವಮೊಗ್ಗ ಸುಬ್ಬಣ್ಣ ನೆನಪಿಸಿಕೊಳ್ಳುವಂತೆ ಕಾಳಿಂಗರಾಯರು, “ನೋಡಯ್ಯ, ನಾನು ಭೀಮಸೇನ ಜೋಶಿ ಅಥವಾ ಚಂಬೈ ವೈದ್ಯನಾಥ ಭಾಗವತರ ಕೆಲಸ ಮಾಡಬೇಕಿಲ್ಲ. ನನ್ನ ಕೆಲಸ ಕುವೆಂಪು, ಬೇಂದ್ರೆ, ಅಡಿಗ ಅವರ ಕಾವ್ಯವನ್ನು ಜನರಿಗೆ ಮುಟ್ಟಿಸುವುದೇ ಆಗಿದೆ. ನನ್ನದು ಕಛೇರಿಯಲ್ಲ” ಎನ್ನುತ್ತಿದ್ದರಂತೆ.
ಎಸ್.ಕೃಷ್ಣಮೂರ್ತಿಯವರು ತಮ್ಮ ನೆನಪಿನಾಳದಿಂದ ಕಾಳಿಂಗರಾಯರ ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ: “ಕಾಳಿಂಗರಾಯರು ‘ನನ್ನ ಸಂಗೀತರ ಗಗನಕುಸುಮವಾದರೆ ಏನು ಪ್ರಯೋಜನ? ನೆಲದ ಮಟ್ಟ ಮುಟ್ಟಿ ಮಣ ್ಣನ ಮಗ ಕುಣ ಯುವಂತಾಗಬೇಕು’ ಎನ್ನುತ್ತಿದ್ದರು. ಬರಬರುತ್ತ ಈ ಬಯಕೆ ಅವರಲ್ಲಿ ಆಳವಾಗಿ ಬೇರೂರಿಬಿಟ್ಟಿತು. ಅವರ ದೃಷ್ಟಿ ಶಾಸ್ತ್ರೀಯ ಸಂಗೀತದಿಂದ ‘ಲುಘು ಸಂಗೀತ’ದತ್ತ ವಾಲಿತು. ಆಗಿನ ದಿನಗಳಲ್ಲಿ ಈಗಿನ ಸುಗಮ ಸಂಗೀತವನ್ನು ‘ಲಘು ಸಂಗೀತ’ ಎಂದೇ ಕರೆಯುವುದು ರೂಢಿಯಲ್ಲಿತ್ತು. ಜಾನಪದ ಸಂಗೀತದ ಮೋಹಕ ಧಾಟಿಗಳು ಅವರ ಮನಸೆಳೆದವು. ಶಾಸ್ತ್ರೀಯ ಸಂಗೀತದ ಬುನಾದಿಯ ಮೇಲೆ ಜಾನಪದ ಸಂಗೀತದ ಸೌಧವನ್ನು ನಿರ್ಮಿಸಿದಾಗ ರಾಯರ ಹೆಸರು ಕನ್ನಡ ನಾಡಿನ ಮೂಲೆಮೂಲೆಯಲ್ಲಿಯೂ ಮನೆಮಾತಾಯಿತು.”
ಹಾಗಾಗಿ ಕವನಗಳ ಭಾವಾರ್ಥವನ್ನು ಅಭಿವ್ಯಕ್ತಿಗೊಳಿಸಲು ಸಂಗೀತವನ್ನು ಬಳಸಿಕೊಂಡರು. ಅವರಿಗೆ ಮುಖ್ಯವಾಗಿ ಬೇಕಾಗಿದ್ದು ಎಂದರೆ, ಕವನದ ಭಾವ ಕೇಳುಗನಿಗೆ ಮುಟ್ಟಬೇಕಾದದ್ದು. ಬೇಂದ್ರೆಯವರು ‘ಹುಟ್ಟುವ ಸಾಹಿತ್ಯ ಮುಟ್ಟುವುದರಲ್ಲಿದೆ’ ಎನ್ನುತ್ತಾರೆ. ಕಾಳಿಂಗರಾಯರಿಗೆ ‘ಕಟ್ಟುವ ಹಾಡು ಕೇಳುಗನನ್ನು ಮುಟ್ಟುವುದರಲ್ಲಿ’ ಇತ್ತು. ಕುವೆಂಪು ಒಮ್ಮೆ ಹೇಳಿದ್ದರಂತೆ: “ಸಂಗೀತ ಸಾಹಿತ್ಯವನ್ನು ಹೊತ್ತುಕೊಂಡು ಹೋಗಬೇಕೇ ಹೊರತು ಹತ್ತಿಕೊಂಡಲ್ಲ” ಎಂದು. ಈ ವಿಷಯದಲ್ಲಿ ಕಾಳಿಂಗರಾಯರನ್ನು ತುಂಬಾ ಮೆಚ್ಚಿಕೊಂಡು ಹೊಗಳಿದ್ದರಂತೆ.
ಕಾಳಿಂಗರಾಯರು ಸ್ವರ ಸಂಯೋಜನೆಯಲ್ಲಿ ಯಾವುದಕ್ಕೂ ಅಂಟಿಕೊಂಡವರಲ್ಲ; ಎಲ್ಲದಕ್ಕೂ ತೆರೆದುಕೊಂಡವರು. ಹಾಗಾಗಿ ಅವರ ಹಾಡುಗಳಲ್ಲಿ ವೈವಿಧ್ಯತೆ ಅಪಾರವಾಗಿದೆ. ಸಾಹಿತ್ಯಾರ್ಥಕ್ಕೆ ತಕ್ಕಂತೆ ಸಂಗೀತ. ಇದನ್ನು ಶ್ರೀಮತಿ ಎಚ್.ಆರ್.ಲೀಲಾವತಿ ಹೀಗೆ ವಿವರಿಸುತ್ತಾರೆ: “ರಾಗವೂ ವೈವಿಧ್ಯವೇ, ಸಾಹಿತ್ಯವೂ ವೈವಿಧ್ಯವೇ. ಕಾಳಿಂಗರಾಯರು ಕರ್ನಾಟಕ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಜೊತೆಗೆ ಪಾಶ್ಚಾತ್ಯ ಸಂಗೀತದ ಪರಿಚಯವನ್ನೂ ಮಾಡಿಕೊಂಡಿದ್ದರು. ಆದ್ದರಿಂದ ಅವರು ಆಯ್ಕೆ ಮಾಡಿ ಹಾಡುತ್ತಿದ್ದ ಸಾಹಿತ್ಯಗಳಿಗೆ ಉತ್ತರಾದಿ, ದಕ್ಷಿಣ, ಪೌರ್ವಾತ್ಯ, ಪಾಶ್ಚಿಮಾತ್ಯ, ಜಾನಪದ ಹಾಗೂ ಶಾಸ್ತ್ರೀಯ ಸಂಗೀತದ ಉಡಿಗೆ ತೊಡಿಗೆಗಳಿಂದಲಂಕರಿಸಿ ಹಾಡಿದರು. ಜನರ ಹೃದಯ ವೀಣೆಯನ್ನು ಮೀಟಿದರು. ರಾಗ, ಅರ್ಥ, ರಸಬಂಧಗಳೊಂದಿಗೆ ಜನರÀ ಹೃದಯಗಳನ್ನು ಗೆದ್ದರು. ...ಆಯಾಯ ಸಾಹಿತ್ಯದ ಸೊಗಡು, ಸೊಬಗು, ಧ್ವನಿಯನ್ನನುಸರಿಸಿ ಅದಕ್ಕೆ ರಾಗದ ಕವಚ. ಹಾಗಾಗಿ ಸಾಹಿತ್ಯದಲ್ಲಿ ಇರುವ ತನ್ನತನವನ್ನು ಕಾಪಾಡಿಕೊಂಡು ಬಂದಿದ್ದಾರೆ.”
ಇದು ಸಂಗೀತ ಸಂಯೋಜನೆ ಸಂಬಂಧಪಟ್ಟಿದ್ದು. ಅದನ್ನು ಹಾಡುವುದರಲ್ಲೂ ಕಾಳಿಂಗರಾಯರದ್ದು ವಿಶಿಷ್ಟ ಮತ್ತು ಅದ್ವತೀಯ. ಸಾಹಿತ್ಯಕ್ಕೆ ತಕ್ಕಂತೆ ಸಂಗೀತ ಹಾಕಿದರಷ್ಟೇ ಸಾಲದು. ಅದರ ಸರಿಯಾಗಿ ಅಭಿವ್ಯಕ್ತಿಯಾಗುವಂತೆ ಹಾಡಬೇಕು. ಅಲ್ಲಿ ಗಾಯಕನ ಪಾತ್ರ ಮತ್ತು ಪ್ರತಿಭೆ ಇದೆ. ಎಲ್ಲಿ ಸಂಗೀತದ ಏರಿಳಿತಗಳು ಭಾವಕ್ಕೆ ತಕ್ಕಂತೆ ಹೋಗಬೇಕು - ಅತಿ ಸಂಗೀತವೂ ಆಗಬಾರದು ಮತ್ತು ಅತಿ ಸರಳವೂ ಆಗಬಾರದು - ಎಲ್ಲಿ ಒತ್ತುಕೊಟ್ಟು ಹಾಡಬೇಕು ಮತ್ತು ಹೇಗೆ ಭಾವಪೂರ್ಣವಾಗಿ ಹಾಡಬೇಕು, ಇದೆಲ್ಲವೂ ಮುಖ್ಯವಾಗುತ್ತದೆ. ಶ್ರೀಯುತ ಶಿವಮೊಗ್ಗ ಸುಬ್ಬಣ್ಣ ಗಮನಿಸದಂತೆ: “ರಾಗಗಳ ಮೇಲೆ ಅತ್ಯಂತ ಪ್ರಭುತ್ವವಿದ್ದರೂ, ಕವನಗಳ ಅಭಿವ್ಯಕ್ತಿಗೇ ಹೆಚ್ಚಿನ ಮಹತ್ವ ಕೊಡತ್ತಿದ್ದುದರಿಂದ, ಅವರ ಗಾಯನ ಶೈಲಿಯಲ್ಲಿ ಕವಿಯ ಸಾಲುಗಳೇ ಪ್ರಧಾನವಾಗಿರುತ್ತಿದ್ದವೆ ಹೊರತು ಸಂಗೀತವಾಗಿರಲಿಲ್ಲ.”
ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರಾದ್ದರಿಂದ, ಸ್ವತಃ ನಟರೂ ಆಗಿದ್ದರಿಂದ ಹಾಡುಗಳನ್ನು ಅನುಭವಿಸಿ ಹಾಡುವುದಷ್ಟೇ ಅಲ್ಲದೆ ನಟಿಸಿ ಹಾಡುತ್ತಿದ್ದರು. ‘ವಸಂತಸೇನಾ’ದಲ್ಲಿ ಬೌದ್ಧಬಿಕ್ಷುವಾಗಿ ಮತ್ತು ‘ತುಂಬಿದಕೊಡ’ದಲ್ಲಿ ಗಾಯಕರಾಗೇ ನಟಿಸಿ ಹಾಡುವ ಹಾಡುಗಳನ್ನು ನೋಡಿದರೇ ಗೊತ್ತಾಗುತ್ತದೆ ಅವರ ಅಭಿನಯ-ಹಾಡುಗಾರಿಕೆ. ಅದನ್ನು ಎನ್ಕೆಯವರು ಹೀಗೆ ವಣ ್ಸುತ್ತಾರೆ: “...ಭಾವಗೀತೆಗಳನ್ನು, ಜಾನಪದ ಗೀತಗಳನ್ನು ಪ್ರಸ್ತುತಪಡಿಸುವಾಗಿನ ಅವರ ಆ ಅಭಿನಯ, ತಾಳಗತ್ತು, ಹೆಜ್ಜೆ ಹಾಕುತ್ತ, ಸಹಜವಾಗಿ ಧ್ವನಿಯ ಏರಿಳಿತಗಳನ್ನೂ ತಾನಗಳನ್ನೂ ತೆಗೆದುಕೊಳ್ಳುತ್ತಿರುವಾಗ, ಕಾವ್ಯದ ರಾಗ-ಭಾವಗಳು ಎದ್ದು ಬಂದು ಅಂತರಂಗವನ್ನು ಸ್ಪರ್ಶಿಸುತ್ತಿದ್ದವು.”
ಹೀಗೆ ಅವರು ಕನ್ನಡದ ಉತ್ತಮ ಕಾವ್ಯಗಳನ್ನು, ಜಾನಪದ ಗೀತೆಗಳನ್ನು ದಾಸರ ಪದಗಳನ್ನು, ವಚನಗಳನ್ನು ಜನರ ಮನ-ಮನೆಗಳಿಗೆ ಹೊತ್ತುಕೊಂಡು ಹೋದರು. ಅವರು, ಮೋಹನ್ ಕುಮಾರಿ, ಸೋಹನ್ ಕುಮಾರಿ ಜೊತೆಯಾಗಿ ನಾಡಿನಾದ್ಯಂತ ಹಾಡಿದರು. ಸುಗಮ ಸಂಗೀತ ಕಛೇರಿಗಳನ್ನು ನಡೆಸಿದರು. ಸಾಹಿತ್ಯದ ಕಾರ್ಯಕ್ರಮ, ಯಾವುದಾದರೂ ಆಚರಣೆಗಳಿಂದ ಹಿಡಿದು ಮದುವೆ ಮನೆಯವರೆಗೂ ಎಲ್ಲೆಡೆ ಹಾಡಿದರು. ಆತ್ಮೀಯರೊಂದಿಗೆ ಆ ಕ್ಷಣದಲ್ಲೇ ಹಾಡಿದರು. ಹಾಡುವುದು ಅವರ ಉಸಿರಾಯಿತು; ಅವರ ಬದುಕಾಯಿತು. ಅದರಿಂದ ಕನ್ನಡ ಸಾಹಿತ್ಯ ಜನರ ನಾಲಗೆಯಲ್ಲಿ ನಲಿದಾಡಿತು. ಸಂಗೀತ ಕಂಠದಲ್ಲಿ ಹರಿದಾಡಿತು. ಕಾಳಿಂಗರಾಯರು ಈ ದಿಕ್ಕಿನಲ್ಲಿ ಸುಗಮ ಸಂಗೀತವನ್ನು ಹುಟ್ಟುಹಾಕಿ, ಬೆಳೆಸಿದರು; ಅದಕ್ಕೆ ಅವರ ವ್ಯಕ್ತಿತ್ವ, ಅವರ ಬದುಕು, ಅವರ ಜನಾನುರಾಗ, ಸಾಹಿತ್ಯ ಪ್ರೇಮ, ಎಲ್ಲಕ್ಕಿಂತ ಮುಖ್ಯವಾಗಿ ಮಾನವತಾವಾದಿ ಧೋರಣೆಗಳು ಮುಖ್ಯ ಕಾರಣ.
ಉದಾರ ವ್ಯಕ್ತಿತ್ವದ ಸಂಗೀತ ಜಂಗಮ
ಕಾಳಿಂಗರಾಯರಿಗೆ ಸಂಗೀತವೇ ಬದುಕಾಗಿತ್ತೇ ಹೊರತು, ಸಂಗೀತದಿಂದ ಬದುಕಾಗಿರಲಿಲ್ಲ. ಅದರಿಂದಾಗಿಯೇ ಅವರು ಆಸ್ತಿ ಮಾಡಲಿಲ್ಲ. ಅವರೇ ಕನ್ನಡ ನಾಡಿಗೆ ಆಸ್ತಿಯಾದರು. ಅವರಿಗೆ ಹಣ ಬರಲೇ ಇಲ್ಲವೆಂದಲ್ಲ. ಆದರೆ ಅದು ಅವರ ಕೈಯಲ್ಲಿ ಉಳಿಯಲೇ ಇಲ್ಲ. ಅಥವಾ ಹಣಕ್ಕಾಗಿ ಅವರು ಹಾಡಲೂ ಇಲ್ಲ. ಒಂದು ರೀತಿಯ ಜಂಗಮ ಜೀವನ. ಹೋದಲ್ಲಿ ಊಟ, ಮಲಗಿದಲ್ಲಿ ಮನೆ. ಬೇಕಾಗಿದ್ದದ್ದು ಹಾಡಲು ಜಾಗ, ಕೇಳಲು ಜನ. ಅವರಿಗೆ ಹಾಡಲು ಇಂಥದೇ ವ್ಯವಸ್ಥೆ ಎಂತಿಲ್ಲ. ಅದಕ್ಕೆ ಬಹುಶಃ ಎರಡು ಕಾರಣಗಳು. ಒಂದು, ಅವರಿಗೆ ತಮ್ಮ ಹಾಡು ಜನರನ್ನು ತಲುಪಬೇಕು ಎನ್ನುವ ಕಾರಣಕ್ಕಾಗಿ ಪಕ್ಕಾ ಪಕ್ಕವಾದ್ಯವಿಲ್ಲದಿದ್ದರೂ, ಉತ್ತಮ ವ್ಯವಸ್ಥೆಯಿಲ್ಲದಿದ್ದರೂ ಅದೊಂದು ಕೊರತೆ ಎಂದು ಅವರಿಗೆ ಅನಿಸುತ್ತಿರಲಿಲ್ಲ. ಎರಡು, ತಮ್ಮ (ಮೋಹನ್ ಕುಮಾರಿ ಹಾಗೂ ಸೋಹನ್ ಕುಮಾರಿ ಸೇರಿದಂತೆ) ಧ್ವನಿಗಳ ಬಗ್ಗೆ ವಿಶ್ವಾಸವಿತ್ತು. ಅವರು ತಮ್ಮ ಹಾಡುಗಳಲ್ಲಿ ಎಂದೂ ಸಂಗೀತದ ಅಬ್ಬರ ಮಾಡಲೇ ಇಲ್ಲ. ಅದೊಂದು ಹಿನ್ನೆಲೆಯಾಗಿದ್ದು, ಮನುಷ್ಯನ ಧ್ವನಿ ಮುನ್ನೆಲೆಯಲ್ಲಿ ಇರುತ್ತಿತ್ತು. 
ಅವರೊಮ್ಮೆ ಒಂದು ಹಳ್ಳಿಗೆ ಹೋಗಿದ್ದಾಗ, ಪಕ್ಕವಾದ್ಯದವರು ಇಲ್ಲದೆ ಭಜನೆಯವರನ್ನೇ ವ್ಯವಸ್ಥೆ ಮಾಡಿದ್ದರಂತೆ. ಕಾಳಿಂಗರಾಯರು ಏನನ್ನೇ ಹಾಡಿದರೂ ಅವರು ಭಜನೆಯಂತೆ ವಾದ್ಯಗಳನ್ನು ನುಡಿಸುತ್ತಿದ್ದರಂತೆ. ಕೊನೆಗೆ ಕಾಳಿಂಗರಾಯರು ನಗುತ್ತಾ ಹಾಡನ್ನೇ ಭಜನೆಯಂತೆ ಹಾಡಿದರು. ಇಲ್ಲಿ ಅವರ ಹೃದಯ ವೈಶಾಲ್ಯತೆಯ ಜೊತೆಗೆ ಅವರ ಪ್ರಾವೀಣ್ಯತೆಯೂ ಕಾಣುತ್ತದೆ. ಯಾವ ಸಂದರ್ಭಕ್ಕಾದರೂ ಹಾಡಬಹುದು.
ಕಾಳಿಂಗರಾಯರಿಗೆ ತಾವು ಹೆಸರು ಮಾಡಬೇಕು ಎನ್ನುವುದು ಮನಸ್ಸಿಗೆ ಬರಲೇ ಇಲ್ಲ. ಹಾಗಾಗಿಯೇ ಅವರು ಎಲ್ಲರನ್ನೂ ಬೆಳೆಸಲು ಪ್ರಯತ್ನಿಸಿದರು. ಅಲ್ಲಿ ಅವರ ನಿಸ್ವಾರ್ಥ ಮನೋಭಾವ ಅನುಕರಣ ೀಯ. ಕಾಳಿಂಗರಾಯರ ಗಾಯನಕ್ಕೆ ಮೈಸೂರು ಅನಂತಸ್ವಾಮಿ ಮ್ಯಾಂಡೊಲಿನ್ ನುಡಿಸುತ್ತಿದ್ದರು. ಮೈಸೂರು ಅನಂತಸ್ವಾಮಿಯವರು ಬೇಂದ್ರೆಯವರ ‘ಇಳಿದು ಬಾ ತಾಯಿ’ ಹಾಡಿಗೆ ತಾವೇ ಸ್ವರ ಸಂಯೋಜನೆ ಮಾಡಿ ಹಾಡುತ್ತಿದ್ದಾಗ, ಅದನ್ನು ಕೇಳಿದ ಕಾಳಿಂಗರಾಯರು ‘ಇದನ್ನು ನಮ್ಮ ಅನಂತು ಮಾಡಿದ್ದು’ ಎನ್ನುತ್ತಾ ತಮ್ಮ ಕಛೇರಿಗಳಲ್ಲಿ ಹಾಡುತ್ತಿದ್ದರು ಎಂದು ಶ್ರೀ ಲಕ್ಷ್ಮಿನಾರಾಯಣ ಭಟ್ಟರು ನೆನಪಿಸಿಕೊಂಡಿದ್ದಾರೆ. ಮುಂದೆ ಕಾಳಿಂಗರಾಯರು ಆ ಹಾಡನ್ನು ಅದೇ ರಾಗದಲ್ಲಿ ಹಾಡುತ್ತಿದ್ದರೇ ಹೊರತು ಮತ್ತೊಂದು ರಾಗ ಸಂಯೋಜನೆ ಮಾಡಲಿಲ್ಲ.
ಅವರ ಈ ಬಗೆಯ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುವಂಥ ಒಂದೆರೆಡು ಘಟನೆಗಳನ್ನು ಶ್ರೀಮತಿ ಎಚ್.ಆರ್.ಲೀಲಾವತಿ ನೆನಪಿಸಿಕೊಳ್ಳುತ್ತಾರೆ: “ಇನ್ನೊಮ್ಮೆ ‘ಉಪಾಸನೆ’ ಚಿತ್ರದಲ್ಲಿ ಒಂದು ಪುಟಾಣ  ಹುಡುಗಿ (ಮೈಸೂರು ಎಸ್.ರಾಜಲಕ್ಷ್ಮಿ ಈಗ ಮೈಸೂರು ಆಕಾಶವಾಣ ಯ ನಿಲಯದ ಕಲಾವಿದೆ) ವೀಣೆ ನುಡಿಸಿದಳು. ಅವರ ಮನೆಗೆ ಸದಾ ಕಾಳಿಂಗರಾಯರು ಹೋಗುತ್ತಿದ್ದರು. ಹಾಗಾಗಿ ಆ ಪುಟಾಣ  ಹುಡುಗಿಯನ್ನು “ನನ್ನ ಕಾರ್ಯಕ್ರಮ ಟೌನ್‍ಹಾಲಿನಲ್ಲಿದೆ. ನೀನು ನನಗೆ ಬ್ಯಾಕ್‍ಗ್ರೌಂಡ್ ಮ್ಯೂಸಿಕ್ ನುಡಿಸಬೇಕು” ಎಂದು ಹೇಳಿಬಿಟ್ಟರು. ಹುಡುಗಿ ಭಯದಿಂದಲೇ ವೇದಿಕೆಗೆ ಹೋದಳು. ಮೋಹನ ರಾಗದಲ್ಲಿ ಒಂದು ಗೀತೆಯನ್ನು ಹಾಡುತ್ತಾ ಮಧ್ಯೆ ಹುಡುಗಿಯ ಕಡೆ ನೋಡಿದರಂತೆ ರಾಯರು. ಹುಡುಗಿ ಮಧ್ಯೆ ಬಂದ ಅಂತರವನ್ನು ಅಚ್ಚುಕಟ್ಟಾಗಿ, ಧೈರ್ಯದಿಂದ ನುಡಿಸಿದಾಗ ರಾಯರಿಗೆ ವಿಪರೀತ ಸಂತೋಷವಾಗಿ ಹಾಡುವುದನ್ನು ನಿಲ್ಲಿಸಿ, ಆ ಹುಡುಗಿಯ ಕೈಗೆ ನೂರೊಂದು ರೂಪಾಯಿ ಕೊಟ್ಟು ಹುಡುಗಿಯನ್ನು ಎತ್ತಿ ಹಿಡಿದು ಸಭಿಕರಿಗೆ ತೋರಿಸಿದರಂತೆ.
ಮತ್ತೊಂದು ಸಾರಿ ಬೆಂಗಳೂರು ಟೌನ್‍ಹಾಲ್‍ನಲ್ಲಿ ರಾಯರು ಹಾಡುತ್ತಿದ್ದ ಸಮಯ ಅವರ ಅಭಿಮಾನಿ ಕಾಲೇಜು ಹುಡುಗನೊಬ್ಬ, ಅವರ ಹಾಡು ಕೇಳುತ್ತ ಸ್ಟೇಜ್ ಹತ್ತಿರವೇ ನಿಂತಿದ್ದ. ಅವನು ಹಾಡುತ್ತಿದ್ದುದನ್ನೂ ರಾಯರು ಕೇಳಿದ್ದರು. ಹಾಗಾಗಿ ರಾಯರು ಅರ್ಧ ಹಾಡಿದ ಮೇ¯, “ಈಗ ನೀನೊಂದೆರೆಡು ಹಾಡು ಹಾಡೆಂದು” ಹೇಳಿ ಬೆನ್ನು ತಟ್ಟಿ, ಹುಡುಗನನ್ನು ಸ್ಟೇಜಿಗೆ ಕಳುಹಿಸಿದರಂತೆ. ಆ ಹುಡುಗ ಬೇರೆ ಯಾರೂ ಅಲ್ಲ, ನನ್ನ ಪತಿ ಎಸ್.ಜಿ.ರಘುರಾಂ.” ಇನ್ನೂ ಅಪರೂಪವಾದ ಘಟನೆಯೆಂದರೆ, ಭಿಕ್ಷುಕಿಯೊಬ್ಬಳು ತುಂಬಾ ಚೆನ್ನಾಗಿ ಹಾಡುತ್ತಿದ್ದುದನ್ನು ಕೇಳಿದ ರಾಯರು ಆಕೆಯಿಂದು ‘ಭಕ್ತ ರಾಮದಾಸ’ ಸಿನಿಮಾದಲ್ಲಿ ಒಂದು ಹಾಡನ್ನು ಹಾಡಿಸಿದರಂತೆ.
ಹೀಗೆ ಎಲ್ಲಿ ಪ್ರತಿಭೆಗಳು ಕಾಣಲಿ ಅದನ್ನು ಗುರುತಿಸಿ ಅದಕ್ಕೆ ಸೂಕ್ತ ಬೆಲೆಯನ್ನು ಕೊಡುತ್ತಿದ್ದವರು ರಾಯರು. ಹಾಗಾಗಿಯೇ ಅವರ ನಂತರ, ಅವರ ನೆರಳಿನಂತಿದ್ದ, ಅವರಿಂದ ಪ್ರಭಾವಿತಗೊಂಡ ದೊಡ್ಡ ಸುಗಮ ಸಂಗೀತಗಾರರ ತಂಡವೇ ಬೆಳೆದಿದೆ. ಮೈಸೂರು ಅನಂತಸ್ವಾಮಿಯವರನ್ನು ಮದರಾಸಿನಿಂದ ಕರ್ನಾಟಕಕ್ಕೆ ಸಂಗೀತ ಸಂಯೋಜನೆಯನ್ನು ಸ್ವಂತವಾಗಿ ಮಾಡೆಂದು ಕಳುಹಿಸಿದವರೇ ಕಾಳಿಂಗರಾಯರು ಎನ್ನುತ್ತಾರೆ.
ಅವರಂತೆ ಇನ್ನೊಬ್ಬರಿಲ್ಲ
ಹೀಗೆ, ಸಂಗೀತವನ್ನೇ ತನ್ನ ಕಾಯಕವನ್ನಾಗಿ, ಕಾಯದುಸಿರನ್ನಾಗಿ ಮಾಡಿಕೊಂಡ ಕಾಳಿಂಗರಾಯರು ಬಹಳ ಎತ್ತರಕ್ಕೆ ಬೆಳೆದರು. ಅವರಿಗೆ ಮಧ್ಯಸೇವನೆಯ ಅಭ್ಯಾಸವೊಂದು ಅವರ ಆರೋಗ್ಯವನ್ನು ಹಾಳು ಮಾಡಿತು ನಿಜ. ಆದರೆ ಅದೆಂದೂ ಅವರ ವ್ಯಕ್ತಿತ್ವವನ್ನು ಹಾಳು ಮಾಡಲಿಲ್ಲ. ಈಗ ಸಾಕಷ್ಟು ಸಂಖ್ಯೆಯಲ್ಲಿ ಭಾವಗೀತೆಗಳನ್ನು ಹಾಡುವವರೂ, ಕೇಳುವವರೂ ಇದ್ದಾರೆ. ಆದರೆ ಒಂದು ಕಾಲದಲ್ಲಿ ಅದರ ಸ್ಪಷ್ಟ ಕಲ್ಪನೆಯೇ ಇಲ್ಲದಿದ್ದಾಗ, ಅದರ ದಾರಿಯೊಂದು ಅರಿಯದೇ ಇದ್ದಾಗ, ಕಾಳಿಂಗರಾಯರ ಸೃಷ್ಟಿಸಿದ ಸುಗಮ ಸಂಗೀತ ಶ್ರೇಷ್ಠವಾದದ್ದು. ಜೊತೆಗೆ ಸುಗಮ ಸಂಗೀತದ ನಿಜವಾದ ಅರ್ಥದಲ್ಲಿ ತೆಗೆದುಕೊಂಡರೆ ಅವರೇ ಇಂದಿಗೂ ಶ್ರೇಷ್ಠ.
ಅವರ ನಂತರದಲ್ಲಿ ಮೈಸೂರು ಅನಂತಸ್ವಾಮಿಯವರು ಅದೇ ದಾರಿಯಲ್ಲಿ ಸಾಗಿ ಬಲುದೂರ ಹೋದವರು. ಅಶ್ವತ್ಥ್ ಭಾವಗೀತೆಗೆ ಮತ್ತಷ್ಟು ಪ್ರಖ್ಯಾತಿಯನ್ನು ತಂದುಕೊಟ್ಟರು. ಇತ್ತೀಚಿನ ಸುಗಮ ಸಂಗೀತದಲ್ಲಿ ಸಂಗೀತ ಮತ್ತು ಸಾಹಿತ್ಯಗಳೆರೆಡೂ ಕಳೆಗುಂದುತ್ತಿವೆ. ಅಬ್ಬರದ ಪಕ್ಕವಾದ್ಯಗಳು ಸರ್ವವ್ಯಾಪಿಯಾಗಿ ಮನುಷ್ಯ ಧ್ವನಿ ಮತ್ತು ಸಾಹಿತ್ಯ ಪಕ್ಕಕ್ಕೆ ತಳ್ಳಲ್ಪಟ್ಟಿವೆ. ಇನ್ನೂ ಭಾವವೋ, ಅದರ ಅಭಾವವೇ ಜಾಸ್ತಿ. ಹಾಡಿಗಾಗಿ ಆರಿಸಿಕೊಳ್ಳುವ ಸಾಹಿತ್ಯದಲ್ಲೂ ಹುರಳಿಲ್ಲ. ಇಲ್ಲವೆಂದಲ್ಲೆ ಮತ್ತೆ ಬೇಂದ್ರೆ, ಕುವೆಂಪು, ಆ ಹಿಂದಿನ ತಲೆಮಾರಿಗೇ ಹೋಗಬೇಕು. ಇನ್ನು ಇತ್ತೀಚಿನ ಸಿನಿಮಾಗಳಲ್ಲಂತೂ ಜಾನಪದ ಗೀತೆಗಳನ್ನು ಮತ್ತು ಭಾವಗೀತೆಗಳನ್ನು ಬಲುಘೋರವಾಗಿ ಬಳಸಿಕೊಂಡಿದ್ದಾರೆ. ಪಾಪ್ ಸಂಗೀತಕ್ಕೂ ಆ ಹಾಡಿಗೂ ತುಂಬಾ ವ್ಯತ್ಯಾಸವಿಲ್ಲ. 
ಇಂದು ಸಿನಿಮಾ ಸಂಗೀತವಾಗಲಿ, ಸುಗಮ ಸಂಗೀತವಾಗಲಿ ಆ ಮಟ್ಟದಿಂದ ಕೆಳಗೆ ಕುಸಿದುಬಿಟ್ಟಿದೆ. ಒಂದು, ಹಣದ ಲೆಕ್ಕಾಚಾರದಲ್ಲಿ ಗುಣಮಟ್ಟಕ್ಕೆ ಬೆಲೆಯಿಲ್ಲವಾಗಿದೆ. ಅಭಿರುಚಿಯೂ ಹಾಳಾಗಿ ಹೋಗಿದೆ. ಸಂಗೀತವನ್ನು ಆಳವಾಗಿ ಅರಿಯದೇ ನಿರ್ದೇಶಕರಾಗಿ ಹೊರಟವರು ಸಂಗೀತವನ್ನು ಕೊಂದರೆ, ಸಾಹಿತ್ಯ ಅರ್ಥವಾಗದವರು ಕಾವ್ಯವನ್ನು ಕೊಲ್ಲುತ್ತಿದ್ದಾರೆ. ಎಲ್ಲೋ ಕೆಲವು ಅಪವಾದಗಳಿರಬಹುದು ಅಷ್ಟೇ!
ಕಾಳಿಂಗರಾಯರ ವೈಶಿಷ್ಟ್ಯತೆ, ಪ್ರಾಮುಖ್ಯತೆ, ಮಹತ್ವಗಳಿರುವುದೇ ಇಲ್ಲಿ. ಸಂಗೀತದ ಸೌಂದರ್ಯವನ್ನು - ಸ್ವರ, ರಾಗ, ತಾಳ ಹಾಗೂ ಪಕ್ಕವಾದ್ಯಗಳ ಸೌಂದರ್ಯವನ್ನು ಬಿಡಲಿಲ್ಲ ಅಥವಾ ಲಘುವಾಗಿಸಲೂ ಇಲ್ಲ. ಅಥವಾ ಶಾಸ್ತ್ರೀಯ ಸಂಗೀತವನ್ನು ಹೇರಿ ಸಾಹಿತ್ಯದ ಸಾರವನ್ನೂ ಬಿಡಲಿಲ್ಲ. ಹಾಡುಗಾರಿಕೆ ಯಾಂತ್ರಿಕವಾಗಿರಲಿಲ್ಲ. ಅವರು ತನು ತುಂಬಿ, ಮನ ತುಂಬಿ, ಎದೆ ತುಂಬಿ ಹಾಡುತ್ತಿದ್ದರು.
ಕಾಳಿಂಗರಾಯರು ಬಾಳಿನುದ್ದಕ್ಕೂ ಸಂಗೀತಕ್ಕಲ್ಲದೆ ಬೇರೆಯದಕ್ಕೆ - ಹಣ, ಅಂತಸ್ತು, ಪದವಿ, ಪ್ರಶಸ್ತಿಗಳಿಗೆ ತಲೆಬಾಗದೆ, ಕೈಯೊಡ್ಡದೆ, ಸಂಗೀತ ಸಾಮ್ರಾಟನಾಗಿ ಮರೆದರು. ಭಾವುಕ ಪ್ರೇಕ್ಷಕರು, ಸಾಹಿತಿಗಳು, ಸದಭಿರುಚಿಯ ರಾಜಕೀಯ ಕಾರ್ಯಕರ್ತರು, ಎಲ್ಲರೂ ಅವರಲ್ಲಿಗೆ ಸಂಗೀತದ ಸವಿಗಾಗಿ ಬೊಗಸೆಯೊಡ್ಡಿ ಬಂದರು. ಎಲ್ಲರಿಗೂ ಬೇಕೆನಿಸುವಷ್ಟೂ ಉಣಬಡಿಸಿದರು; ಎತ್ತರದ ಸ್ಥಾನದಲ್ಲೇ ನಿಂತರು. ಇಂತಹ ಸಂದರ್ಭದಲ್ಲೇ ಕಾಳಿಂಗರಾಯರಂತಹವರು ಮತ್ತೆ ಮತ್ತೆ ಕಾಡುತ್ತಾರೆ.
ಶ್ರೀ ಲಕ್ಷ್ಮಿನಾರಾಯಣ ಭಟ್ಟರ ಈ ಮಾತುಗಳು ಇಂದಿಗೆ ಬಹಳ ಪ್ರಸ್ತುತವೆನಿಸುತ್ತದೆ: “ಸುಗಮ ಸಂಗೀತಕ್ಕೆ ಇಂದು ಸುಲಭ ಪ್ರಸಿದ್ಧಿ, ಹಣ, ಮಾಧ್ಯಮಗಳ ಬಲ ಎಲ್ಲವೂ ಸಿಗುತ್ತಿದೆ. ತಕ್ಕಮಟ್ಟಿನ ಸಾಧನೆ ಮಾಡಿದವರಿಗೂ ಏನಾದರೊಂದು ಸನ್ಮಾನ ಪ್ರಶಸ್ತಿಗಳ ಮನ್ನಣೆ ಇದೆ. ಆದರೆ ಅಂಥದೊಂದು ಜನಪ್ರಿಯ ಸಂಗೀತ ಶಾಖೆಯನ್ನು ಬಿತ್ತು ಬೆಳೆದದ್ದಲ್ಲದೆ ಅದರ ಸಮಸ್ತಾಂಶಗಳನ್ನು ಎತ್ತರದ ನೆಲೆಯಲ್ಲಿ ಮೈಗೂಡಿಸಿಕೊಂಡು ಕವಿತಾ ಸಂಗೀತವೇ ಮೈದಾಳಿ ಬಂದಂತಿದ್ದ ಕಾಳಿಂಗರಾಯರಿಗೆ ಸಮವೆನ್ನಿಸಬಹುದಾದ ಕಲಾಭಿಜ್ಞರು ಯಾರೂ ಕಾಣುತ್ತಿಲ್ಲ. ಈ ಮಾತು ಈಗಿನ ಅನೇಕ ಗಾಯಕಿ, ಗಾಯಕರಿಗೆ ಪ್ರಿಯವೆನಿಸದಿದ್ದರೂ ಅದು ಸತ್ಯ. ಉತ್ತಮ ಕವಿತೆಗಳ ಆಯ್ಕೆ, ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತಗಳ ಗಾಢ ತಿಳುವಳಿಕೆ, ಅತಿ ಸಂಗೀತವನ್ನು ಬಳಸದೆ ಕವಿತೆಯನ್ನೇ ಮುಂದೆ ಮಾಡಿಕೊಂಡು ನಡೆಯುವ ಮೋಹಕ ಸ್ವರ ಸಂಯೋಜನೆ, ಹಾಡುವಾಗಿನ ಸಾಭಿನಯ ಠೀವಿ, ಇವುಗಳಿಂದಾಗಿ ಕಾಳಿಂಗರಾವ್ ಅಪ್ರತಿಮ ಗಾಯಕರಾಗಿಬಿಟ್ಟರು. ನವ್ಯ ಕಾವ್ಯವನ್ನು ಹುಟ್ಟು ಹಾಕಿದ ಅಡಿಗರೇ ಈ ತನದ ಆ ಕಾವ್ಯದ ಅತ್ಯುತ್ತಮ ಪ್ರತಿನಿಧಿಯಾಗಿ ಉಳಿದಂತೆ, ಸುಗಮ ಸಂಗೀತದ ಪ್ರವರ್ತಕರಾದ ಕಾಳಿಂಗರಾಯರೇ ಕವಿತಾಗಾಯನದ ಅತ್ಯುತ್ತಮ ಮಾದರಿಯಾಗಿ ಉಳಿದಿದ್ದಾರೆ. ಕಳೆದ ಶತಮಾನದ ಐದು ಆರನೆಯ ದಶಕಗಳಲ್ಲಿ ನಾಡಿನಗಲ ತಂಗಾಳಿಯಾಗಿ ಬೀಸಿ ಸದಭಿರುಚಿಯ ಸಾಮಾನ್ಯ ಜನರನ್ನು ಸುಗಮ ಸಂಗೀತದ ಮಲ್ಲಿಗೆ ವನದಲ್ಲಿ ಅವರಂತೆ ವಿಹಾರ ಮಾಡಿಸಿದವರು ಬೇರೆ ಯಾರಿದ್ದಾರೆ?”

ಎಸ್.ಎನ್.ಸ್ವಾಮಿ

ವ್ಯಕ್ತಿ ಪರಿಚಯ - ಮೇರಿ ಕ್ಯೂರಿ


ಮಹಿಳಾ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರು ಮೇರಿ ಕ್ಯೂರಿ. ಸ್ತ್ರೀಯರು ಪುರುಷರಿಗಿಂತ ಎಲ್ಲದರಲ್ಲೂ ಕೀಳು, ಎರಡನೆಯ ದರ್ಜೆ ಪ್ರಜೆಗಳು ಮುಂತಾದ ನಂಬಿಕೆ ಇರುವಂತಹ ಜಗತ್ತಿನಲ್ಲಿ ಮೇರಿ ಕ್ಯೂರಿ ‘ಅದೆಲ್ಲವೂ ಸುಳ್ಳು, ಸ್ತ್ರೀಯರು ಪುರುಷರಿಗಿಂತ ಯಾವುದರಲ್ಲೂ ಕೀಳಲ್ಲ’ ಎಂಬುದನ್ನು ಸಾಬೀತು ಪಡಿಸಿದರು. ಅಷ್ಟೇ ಅಲ್ಲದೆ ಎರಡು ವಿಜ್ಞಾನ  ಕ್ಷೇತ್ರಗಳಲ್ಲಿ ನೊಬೆಲ್ ಪಾರಿತೋಷಕವನ್ನು ಗಳಿಸಿದ ಪ್ರಥಮ ವ್ಯಕ್ತಿಯಾಗಿ ಮಹಾನತೆಯನ್ನು ಮೆರೆದರು.
ಇಂತಹ ಅಪರೂಪದ ವ್ಯಕ್ತಿ ಜನಿಸಿದ್ದು, ಪೋಲೆಂಡಿನ ಒಂದು ಚಿಕ್ಕ  ಹಳ್ಳಿಯಲ್ಲಿ ನವೆಂಬರ್ 7, 1867 ರಲ್ಲಿ. ಚಿಕ್ಕಂದಿನಿಂದಲೂ ಆಕೆ ಮಿತಭಾಷಿಣಿ, ಮೃದುಹೃದಯಿ. ಬಹಳ ಕಷ್ಟಗಳನ್ನು ಅನುಭವಿಸಿಯೇ ಆಕೆ ಓದಿದಳು. ಹೆಚ್ಚಿನ ಓದಿಗಾಗಿ ಪ್ಯಾರಿಸ್ಸಿಗೆ ತೆರಳಿದ ಆಕೆ ಒಂದು ಚಿಕ್ಕ ಕೋಣೆಯಲ್ಲಿ ಯಾವುದೇ ಕನಿಷ್ಟ ಸೌಕರ್ಯಗಳೂ ಇರದೆ, ಒಣ ಬ್ರೆಡ್ಡನ್ನು ತಿಂದು, ಕೆಲವೊಮ್ಮೆ ಅದೂ ಇಲ್ಲದೆ ನೀರು ಕುಡಿದು ಮಲಗುತ್ತಿದ್ದರು. ಆದರೆ ಓದಿನ ಬಗ್ಗೆ ಮಾತ್ರ ಆಕೆಗೆ ಅತ್ಯಂತ ಆಸಕ್ತಿ. ಆಕೆ ನಿದ್ರಾಹಾರಗಳ ಬಗ್ಗೆ, ಉಡುಗೆ-ತೊಡುಗೆಗಳ ಬಗ್ಗೆ ಆಸಕ್ತಿ ವಹಿಸಲೇ ಇಲ್ಲ. ನೊಬೆಲ್ ಪಾರಿತೋಷಕವನ್ನು ಸ್ವೀಕರಿಸಲು ಹೋಗಬೇಕಾದ ಸಂದರ್ಭದಲ್ಲಿ ಅಲ್ಲಿ ಹಾಕಿಕೊಳ್ಳಲು ಒಂದು ಗೌನೂ ಇರಲಿಲ್ಲ ಎಂದರೆ ಆಕೆಯ ಸರಳ ಜೀವನದ ಬಗ್ಗೆ ಅರಿಯಬಹುದು.
ಪ್ಯಾರಿಸ್‍ನಲ್ಲಿ ಆಕೆಗೆ ಪರಿಚಯವಾದ ವ್ಯಕ್ತಿ ಪಿಯರಿ ಕ್ಯೂರಿ. ಆತ ಕೂಡ  ವಿಜ್ಞಾನಿ. ಮೇರಿಯ ಉತ್ತಮ ಸ್ನೇಹಿತ. ಸ್ನೇಹ ಪ್ರೇಮಕ್ಕೆ ತಿರುಗಿ ಇಬ್ಬರ ವಿವಾಹವಾಯಿತು. ವಿವಾಹವಾದ ಸಂಜೆಯೇ ಇಬ್ಬರೂ ಪ್ರಯೋಗಾಲಯಕ್ಕೆ ಮರಳಿದರು ಎಂದರೆ ಅವರ ಸಂಶೋಧನೆಯ ತೀವ್ರತೆ ಎಷ್ಟಿತ್ತೆಂದು ಊಹಿಸಬಹುದು.
ರೇಡಿಯಂ ಅನ್ನು ಕಂಡುಹಿಡಿದಾಗ ಅತ್ಯಂತ ಸಂತೋಷವನ್ನು ಅನುಭವಿಸಿದ ಅವರು ಅದನ್ನು ಪೇಟೆಂಟ್ ಮಾಡಲು (ಅಂದರೆ ಅದರ ಹಕ್ಕುಸ್ವಾಮ್ಯ ಪಡೆಯಲು) ಹೋಗಲಿಲ್ಲ. ಮೇರಿ ಕ್ಯೂರಿ ಆ ಬಗ್ಗೆ ಹೇಳಿದ್ದು ಹೀಗೆ, “ರೇಡಿಯಂ ವಿಜ್ಞಾನದ ಆವಿಷ್ಕಾರ. ಅದನ್ನು ನಾನು ಕಂಡುಹಿಡಿದೆ ಎಂಬುದು ಆಕಸ್ಮಿಕ. ಅದನ್ನು  ಪೇಟೆಂಟ್ ಮಾಡಿಕೊಳ್ಳಲಾರೆ.”
ನಂತರದ ದಿನಗಳಲ್ಲಿ ಹೆಚ್ಚಿನ ಪ್ರಯೋಗಕ್ಕೆ ರೇಡಿಯಂ ಅನ್ನು ಕೊಳ್ಳಲು ಮೇರಿಯವರ ಬಳಿ ಹಣವಿರಲಿಲ್ಲ ಎಂದಾಗ ಆಕೆಯ ಮಹಾನತೆಯ ಅರಿವಾಗುತ್ತದೆ. ಏಕೆಂದರೆ ಹಕ್ಕುಸ್ವಾಮ್ಯ ಪಡೆದಿದ್ದರೆ ಆಕೆಗೆ ಮಿಲಿಯಾಂತರ ಡಾಲರ್‍ಗಳು ಸಿಗುತ್ತಿದ್ದವು.
ಒಂದು ಸಣ್ಣ ಪ್ರಯೋಗಾಲಯದಲ್ಲಿ ಆಕೆ ತನ್ನ ಪ್ರಯೋಗಗಳನ್ನು ಮುಂದುವರೆಸಿದರು. 1911 ರಲ್ಲಿ ಆಕೆಗೆ ಮತ್ತೊಂದು ನೊಬೆಲ್ ಪ್ರಶಸ್ತಿ ಸಿಕ್ಕಿತು. ಅಂದಿನ ದಿನವನ್ನು ಮಹಿಳೆಯರು ತಮ್ಮ ವಿಜಯದ ದಿನ ಎಂದು ಆಚರಿಸಿಕೊಳ್ಳಬಹುದು. ಏಕೆಂದರೆ ಇಡೀ ವಿಶ್ವದಲ್ಲಿ ಯಾರೂ ಮಾಡದ ಸಾಧನೆಯನ್ನು ಆಕೆ ಮಾಡಿದ್ದರು. ಇಷ್ಟಾದರೂ ಆಕೆ ಎಲ್ಲೂ ಪ್ರಚಾರಕ್ಕೆ ಸಿಗುತ್ತಿರಲಿಲ್ಲ.
ಪತಿ ಅಪಘಾತಕ್ಕೀಡಾಗಿ ಮರಣ ಹೊಂದಿದಾಗ ಮೇರಿ ತೀವ್ರ ಆಘಾತಕ್ಕೆ ಒಳಗಾದರು. ಪತಿ ಅವರಿಗೆ ಜೀವನದ ಸಂಗಾತಿಯೂ ಹೌದು, ವಿಜ್ಞಾನದ ಸಂಗಾತಿಯೂ ಹೌದು.ಆದರೂ ಧೃತಿಗೆಡದ ಮೇರಿ ಪ್ರಯೋಗ, ಕುಟುಂಬ, ಮಕ್ಕಳು, ಎಲ್ಲವನ್ನೂ ನಿಭಾಯಿಸಿದರು.
ಹೆಚ್ಚು ಸೌಲಭ್ಯಗಳಿಲ್ಲದ ಪ್ರಯೋಗಾಲಯ, ವಿಕಿರಣಗಳ ದಾಳಿ ಅವರ ಆರೋಗ್ಯವನ್ನು ಹದಗೆಡಿಸಿತ್ತು. ಅಂತಿಮವಾಗಿ ಅದೇ ಅವರ ಸಾವಿಗೆ ಕೂಡ ಕಾರಣವಾಯಿತು. ಜುಲೈ 4, 1934ರಂದು ಮರಣಹೊಂದಿದರು.
ಅವರಿಗೆ ದೊರೆತ ಬಹುಮಾನಗಳು, ಬಿರುದುಗಳು ಅಪಾರ. ಮೇರಿಯವರು ಇದ್ದ ಕಾಲದಲ್ಲಿ ಫ್ರಾನ್ಸ್ ಬಲಿಷ್ಟ ಪುರುಷ ಪ್ರಧಾನ ಸಮಾಜವನ್ನು ಹೊಂದಿತ್ತು ಅಂದರೆ ಸ್ತ್ರೀಯರಿಗೆ ಗೌರವ, ಸ್ಥಾನಮಾನ ಇರಲಿಲ್ಲ. ಅಂತಹ ಸಮಾಜಕ್ಕೆ ಸೆಡ್ಡು ಹೊಡೆದು ತನ್ನನ್ನೇ ತಾನು ಸ್ಥಾಪಿಸಿಕೊಂಡ ಮೇರಿ ಕ್ಯೂರಿಯವರ ಹೆಸರು ಅಜರಾಮರ. ಅವರ ಹೆಸರು ಸಾಧನೆಗೊಂದು ಪರ್ಯಾಯ ಪದ.
   -  ದೀಪಶ್ರೀ ಜೆ         

ಪ್ರವಾಸ ಕಥನ

        ಪರಿಪೂರ್ಣತೆಗೆ ಮತ್ತೊಂದು ಹೆಸರಿನಂತಿರುವ ಅಮೇರಿಕಾ ಮಾದರಿ ರಾಷ್ಟ್ರವಾಗಬಲ್ಲದೆ?


ಅಭಿವೃದ್ಧಿ ಹೊಂದುತ್ತಿರುವ ಹಾಗು ಅಭಿವೃದ್ಧಿ ಹೊಂದಿರುವ ದೇಶಗಳ ನಡುವೆ ಅಗಾಧವಾದ ವ್ಯತ್ಯಾಸವಿದ್ದರೂ ಹೋಲಿಕೆ ಮಾಡುತ್ತೇವೆ. ಅಭಿವೃದ್ಧಿ ಹೊಂದಿರುವ ದೇಶಗಳು ಮಾದರಿಯಾಗಿವೆ. ಖಂಡಿತ ಅಲ್ಲಿನ ಕೆಲವು ಒಳ್ಳೆ ಅಂಶಗಳನ್ನು ನಾವು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಆದರೆ ಅಳವಡಿಸಿಕೊಳ್ಳಲು ಹೊರಟರೆ ನಮ್ಮ ಪರಿಸ್ಥಿತಿ ಹಾಗೂ ಅವರ ಪರಿಸ್ಥಿತಿ ಭಿನ್ನವಾಗಿರುವುದರಿಂದ ಅಳವಡಿಕೆ ಕಷ್ಟಸಾಧ್ಯವಾಗುತ್ತದೆ. ಕೆಲವು ಕಾರ್ಯಗಳನ್ನು ಕೈಗೊಳ್ಳಲು ಅಭಿವೃದ್ಧಿ ದೇಶಗಳನ್ನು ಮಾದರಿಯಾಗಿಟ್ಟುಕೊಂಡರೂ ನಮ್ಮ ಭೌಗೋಳಿಕ, ಆರ್ಥಿಕ, ರಾಜಕೀಯ, ಸಾಮಾಜಿಕ ಪರಿಸ್ಥಿತಿಗಳನ್ನು ಗಮನದಲ್ಲಿ  ಇಟ್ಟುಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ಆಗುತ್ತಿರುವ ಬದಲಾವಣೆ ಸುಧಾರಣೆಗು ಅಭಿವೃದ್ಧಿ ದೇಶಗಳಲ್ಲಿ ಈಗಾಗಲೇ ಆಗಿರುವಂತದ್ದನ್ನು ಗಮನಿಸಲು ಆ ದೇಶಗಳಿಗೆ ಭೇಟಿ ನೀಡಿದಾಗ ಅರ್ಥಮಾಡಿಕೊಳ್ಳಬಹುದು.

ಕೆಲವು ತಿಂಗಳ ಹಿಂದೆ ಅಮೇರಿಕಾ ಪ್ರವಾಸ ಕೈಗೊಳ್ಳುವ ಅವಕಾಶ ದೊರಕಿತು. ಅತ್ಯಂತ ಕಡಿಮೆ ಅವಧಿಯಲ್ಲಿ ಕೆಲವೇ ರಾಜ್ಯ, ಸ್ಥಳಗಳನ್ನು ನೋಡಿ ಬರಲು ಸಾದ್ಯವಾಯಿತು. ನಾನು ನೋಡಿದ್ದನ್ನು, ಅನುಭವಿಸಿದ್ದನ್ನು ಭಾರತ ಮತ್ತು ಅಮೇರಿಕಾವನ್ನು ತುಲನಾತ್ಮಕವಾಗಿ ಗಮನಿಸಿದ್ದನ್ನು ಈ ಲೇಖನದ ಮುಲಕ ಓದುಗರೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಎಲ್ಲವನ್ನು ಇಲ್ಲಿ ವಿವರಿಸಲು ಸಾಧ್ಯವಿಲ್ಲ. ನನಗೆ ಪ್ರಮುಖ ಅನಿಸಿದ ಕೆಲವು ವಿಷಯಗಳನ್ನು ಮಾತ್ರ ಪ್ರಸ್ತಾಪಿಸಲು ಪ್ರಯತ್ನಿಸುತ್ತೇನೆ.
ಅಮೇರಿಕಾದಲ್ಲಿ ಕಂಡು ಬಂದ ಮೂಲಸೌಕರ್ಯ, ಸ್ವಚ್ಚತೆ, ಗುಣಮಟ್ಟ, ಆರ್ಥಿಕ ಪರಿಸ್ಥಿತಿ ಮತ್ತುರಾಜಕೀಯ ಚಟುವಟಿಕೆ ಇವುಗಳನ್ನು ನಾನು ಗಮನಿಸಿದಂತೆ ಭಾರತದ ಪರಿಸ್ಥಿತಿಗೆ ಹೋಲಿಸುತ್ತಾ ವಿವರಿಸಲು ಯತ್ನಿಸುತ್ತೇನೆ.
ನಾನು ನೋಡಿದ ಸ್ಥಳಗಳೆಂದರೆ ಲಾಂಗ್‍ಐಲ್ಯಾಂಡ್, ನ್ಯೂಯಾರ್ಕ್, ವಾಷಿಂಗ್‍ಟನ್ ಡಿ.ಸಿ. ಫೀಲಿಡಾಲ್ಫಿಯಾ, ಡೆಟ್ರಾಯಿಟ್, ಆ್ಯನ್‍ಆರ್ಬರ್, ನಯಾಗಾರ ಫಾಲ್ಸ್, ಮತ್ತು ಒಹಾಯೋ, ಹವಾಗುಣ ಬಿಟ್ಟರೆ ಉಳಿದಂತೆ ಈ ಸ್ಥಳಗಳು ಅಮೇರಿಕವನ್ನು ಪ್ರತಿನಿಧಿಸುತ್ತವೆ ಎಂದು ಹೇಳಬಹುದು. ಮೂಲಸೌಕರ್ಯಗಳಲ್ಲಿ ರಸ್ತೆ, ಅದರ ದಿಕ್ಸೂಚಿ, ಹುಲ್ಲುಹಾಸು ಹಾಗೂ ಉದ್ಯಾನವನ ಅವುಗಳ ನಿರ್ವಹಣೆಗೆ ತಂತ್ರಜ್ಞಾನದ ಬಳಕೆ ಪ್ರಮುಖವಾಗಿ ಕಂಡುಬರುತ್ತದೆ. 19ನೇ ಶತಮಾನಕ್ಕಿಂತ ಮೊದಲು ನೀರಿನ ಸಾರಿಗೆಯನ್ನು ಅವಲಂಬಿಸಿದ್ದ ಅಮೇರಿಕಾ 19 ಮತ್ತು 20ನೇ ಶತಮಾನದಲ್ಲಿ ಇಡೀ ದೇಶದಲ್ಲಿ ರಸ್ತೆ ಸಾರಿಗೆಯನ್ನು ಏಕರೂಪದಲ್ಲಿ ಅತ್ಯಂತ ಮುಂಜಾಗ್ರತೆ ಹಾಗೂ ಯೋಜನಾ ಬದ್ಧವಾಗಿ ಕಟ್ಟಿಕೊಂಡಿದೆ. ದೇಶ ತುಂಬ ವಿಶಾಲವಾಗಿರುವುದರಿಂದ  ಸಂಪತ್ತು  ಭರಿತವಾಗಿರುವುದರಿಂದ ಗುಣಮಟ್ಟದ  ರಸ್ತೆ ವ್ಯವಸ್ಥೆ ಮಾಡಿಕೊಂಡಿದೆ. ಆದರೆ ಇದಕ್ಕೆ ಬೇಕಾದದೈಹಿಕ  ಶ್ರಮದ ಕೆಲಸಕ್ಕೆ ಆಗ ಜಾರಿಯಲ್ಲಿದ್ದ ಗುಲಾಮ ಪದ್ಧತಿಯನ್ನು ಬಳಸಿಕೊಂಡಿರುವುದನ್ನು ಮರೆಯುವಂತಿಲ್ಲ. ಕೌಶಲ್ಯಭರಿತ ಕೆಲಸಗಾರರು ಹಾಗೂ ಶ್ರಮಜೀವಿಗಳು ಪ್ರಾಮಾಣಿಕವಾಗಿ ದುಡಿದುದ್ದರಿಂದ ಇವತ್ತೂ ಉತ್ಕ್ರಷ್ಟ ಗುಣಮಟ್ಟದ ರಸ್ತೆ ವ್ಯವಸ್ಥೆಯನ್ನು ಹೊಂದಿದೆ. ಈಗಿನ ನಿರ್ವಹಣೆಯ ಹಿಂದೆಯೂ ಶ್ರಮಿಕ ವರ್ಗದ ಕೊಡುಗೆ ಅಪಾರವಿದೆ. 
ಅಮೇರಿಕಾದಲ್ಲಿ ಕಂಡುಬಂದ ಅಂಶವೆಂದರೆ ಜನರ ಮತ್ತು ಪರಿಸ್ಥಿತಿಯ ಅವಶ್ಯಕತೆಗೆ ತಕ್ಕಂತೆ ಆಲೋಚನೆ ಮತ್ತು ಕ್ರಿಯೆಗಳನ್ನು ಕೈಗೊಳ್ಳುತ್ತಾರೆ. ಅದಕ್ಕೆ ವಿಜ್ಞಾನ ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಹಾಗೆ ಇರುವುದರಲ್ಲೆ  ಮುಂದುವರೆಯುವುದು, ಈಗ ಕೆಲಸವಾದರೆ ಸಾಕು ಮುಂದೆ ನೋಡಿಕೊಳ್ಳೋಣ ಎಂದು ಹೊಂದಾಣಿಕೆ ಮಾಡಿಕೊಂಡು ಹೋಗುವುದಿಲ್ಲ. ಇಲ್ಲಿಯ ಸ್ವಚ್ಚತೆ ನಿಜಕ್ಕೂ ಅನುಕರಣೀಯ. ಹವಾಗುಣ, ಕಡಿಮೆ ಜನಸಂಖ್ಯೆ, ವಿಸ್ತಾರವಾದ ಜಾಗ, ನಾಗರೀಕ ಪ್ರಜ್ಞೆ ಸ್ವಚ್ಚತೆಯನ್ನು ಕಾಪಾಡಲು ಪೂರಕವಾಗಿವೆ. ನಮ್ಮಲ್ಲಿ ಸ್ವಚ್ಛತೆ ಕಾಪಾಡುವುದು ಕಷ್ಟವಾದರೂ ಅಸಾಧ್ಯವೇನಲ್ಲ. ಅದಕ್ಕೆ ಮುರು ಕ್ರಮಗಳನ್ನು ಕೈಗೊಳ್ಳಬಹುದೆಂದು ನನ್ನ ಅನಿಸಿಕೆ. 
1. ಸ್ವಚ್ಛತಾ ಕಾರ್ಯವನ್ನು ಉದ್ಯೋಗ ಆಂದೋಲನವಾಗಿ ರೂಪಿಸಬಹುದು. ಈಗ ದುಡಿಯುತ್ತಿರುವ ಪೌರಕಾರ್ಮಿಕರು ಹಾಗೂ ಯುವಜನಾಂಗಕ್ಕೆ ಉತ್ತಮ ವೇತನ, (ತಿಂಗಳಿಗೆ 25000 ರೂ ಕೊಟ್ಟರೂ ತಪ್ಪೇನು) ಈ ಕೆಲಸಕ್ಕು ವಿದ್ಯಾರ್ಹತೆ, ಕೌಶಲ್ಯ ತರಬೇತಿ ಕೊಟ್ಟು, ತಂತ್ರಜ್ಞಾನವನ್ನು ಬಳಸಿಕೊಂಡು ಮೂಲ ಸವಲತ್ತುಗಳನ್ನು ನೀಡುವುದರ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಒಂದು ಘನತೆಯನ್ನು ತಂದುಕೊಡಬಹುದು. 
2. ನಮ್ಮಲ್ಲಿ ಕಸ ಹಾಕಬಾರದು, ಗಲೀಜು ಮಾಡಬಾರದು ಅನ್ನುವ ಪ್ರಜ್ಞೆಯೇ ಕಡಿಮೆ. ಅದನ್ನು ಬರಿಸಬೇಕೆಂದರೆ ದಂಡ ಹಾಕುವುದೊಂದೆ ದಾರಿ. 
3. ಕಸ ಸೃಷ್ಟಿಮಾಡುವವರು ಅದರ ವಿಲೇವಾರಿ ಜವಾಬ್ದಾರಿಯನ್ನು ಹೊರುವಂತೆ ಮಾಡಬೇಕು. ಉದಾ: ಹಳೆ ಮನೆ ರಿಪೇರಿ ಅಥವಾ ಕೆಡವಿ ಕಟ್ಟುವವರು ಉಳಿಕೆಯನ್ನು ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುತ್ತಾರೆ. ಅದನ್ನು ರೀಸೈಕಲ್ ಮಾಡಬೇಕು ಇಲ್ಲವೆ ದಂಡ ಅಥವಾ ತೆರಿಗೆ ನೀಡುವಂತೆ ಮಾಡಬೇಕು. ಇವೆಲ್ಲವನ್ನು ಕಾರ್ಯರೂಪಕ್ಕೆ ತರುವುದು ಕಷ್ಟವಾದರು ನಿರಂತರ ಪ್ರಯತ್ನಗಳನ್ನು ಮಾಡುತ್ತಾ ಹೋಗಬೇಕು.


ಅಮೇರಿಕಾದಲ್ಲಿ ಗುಣಮತ್ತಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಗುಣಮಟ್ಟದ ವಸ್ತು ತಯಾರಿಕೆ ಖಂಡಿತಾ ಒಳ್ಳೆಯದು. ಆದರೆ ಅದಕ್ಕೆ ಹೆಚ್ಚಿನ ಬೆಲೆ ನೀಡಬೇಕಾಗುತ್ತದೆ. ಉನ್ನತ ಗುಣಮಟ್ಟದ ಕಚ್ಚಾ ಸಾಮಾಗ್ರಿ, ಕೌಶಲ್ಯ ಮತ್ತು ತಂತ್ರಜ್ಞಾನದಿಂದ ತಯಾರಿಸಿದ ವಸ್ತುಗಳ ಬೆಲೆ ಹೆಚ್ಚಿರುತ್ತದೆ. ನಮ್ಮಲ್ಲಿ ಎಲ್ಲರಿಗೂ ಹೆಚ್ಚಿನ ಬೆಲೆ ಕೊಟ್ಟು ವಸ್ತುಗಳನ್ನು ಕೊಂಡುಕೊಳ್ಳಲಾಗುವುದಿಲ್ಲ. ಅವರ ಸಾಮಥ್ರ್ಯಕ್ಕೆ ತಕ್ಕಂತೆ ಗುಣಮಟ್ಟವನ್ನು ನೀಡಬೇಕಾಗುತ್ತದೆ. ಆದರೆ ಸಾರ್ವಜಜಿಕ ನಿರ್ಮಾಣ ಕಾರ್ಯಗಳಲ್ಲಿ ಗುಣಮಟ್ಟ ಕಾಪಾಡಲು ಖಂಡಿತ ಸಾಧ್ಯವಿದೆ. ಅಧಿಕಾರದ ಸದ್ಬಳಕೆಯಾಗಿ ಭ್ರಷ್ಟಾಚಾರ ಕಡಿಮೆಯಾದರೆ ಮಾತ್ರ ಇದು ಸಾಧ್ಯ. ನನ್ನ ಪ್ರಕಾರ ಗುಣಮಟ್ಟ ಕಡಿಮೆಯಾಗಲು ಮೂಲ ಕಾರಣ ನಿಜವಾಗಲು ದೈಹಿಕ ಶ್ರಮ ನೀಡುವ ಕೆಲಸಗಾರರಿಗೆ ಅತ್ಯಂತ ಕಡಿಮೆ ವೇತನ ನೀಡುತ್ತಿರುವುದು, ಮೂಲ ಸೌಕರ್ಯ ಒದಗಿಸಿಕೊಡದಿರುವುದು. ಯೋಜನೆಯ ಹೆಚ್ಚಿನೆ ಭಾಗ ಮೇಲುಸ್ತರದ ಕೆಲವೇ ಮಂದಿಗೆ ಸೇರುವಂತಿರುವುದು ಅದರಲ್ಲೂ ಬಂಡವಾಳ ಹೂಡುವವರು ಯೋಜನೆಯ ಅತ್ಯದಿಕ ಪಾಲನ್ನು ಪಡೆಯುತ್ತಾರೆ. ಅಮೇರಿಕಾದಲ್ಲಿದೈಹಿಕ ಶ್ರಮದಕೆಲಸಕ್ಕೆ ಸೂಕ್ತ ಸಂಭಾವನೆ ನೀಡುವುದರಿಂದ ಶ್ರಮದಘನತೆ ಹೆಚ್ಚಾಗಿದೆ, ಮಾಡುವಎಲ್ಲಾ ಕೆಲಸದಲ್ಲೂಗುಣ ಮಟ್ಟಕಾಪಾಡಲು ಸಾದ್ಯವಾಗಿದೆ.

ಇಡೀ ದೇಶದಲ್ಲಿ ಏಕ ರೀತಿಯ ರಸ್ತೆ ಸಾರಿಗೆ, ಮಾಹಿತಿ ಲಭ್ಯತೆ, ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನ ಬಳಕೆ, ಉತ್ಕ್ರಷ್ಟ ಗುಣಮಟ್ಟ ಕಾಪಾಡುವಿಕೆ, ಸ್ವಚ್ಚತೆ, ಜನರ ಅವಶ್ಯಕತೆಗಳ ಪೂರೈಕೆಗೆ ಆದ್ಯತೆ ಮುಂತಾದವುಗಳನ್ನು ಪ್ರಶಂಸಿಸಲೇಬೇಕು. ಪ್ರತೀ ರಾಜ್ಯದ ಪ್ರವೇಶದಲ್ಲಿ ಮಾಹಿತಿ ಕೇಂದ್ರಗಳು ಇರುತ್ತವೆ. ಅಲ್ಲಿ ಶೌಚಾಲಯ, ತಿಂಡಿತಿನಿಸುಗಳ ಅಂಗಡಿ, ರಾಜ್ಯದ ನಕ್ಷೆ, ಹೆದ್ದಾರಿಗಳ ರೂಟ್, ನಾವೆಲ್ಲಿದ್ದೇವೆ ಮುಂದೆ ಹೇಗೆ ಹೋಗಬೇಕು, ನೋಡಬಹುದಾದ ಸ್ಥಳ, ಹೊಟೆಲ್, ಏರ್ ಪೋರ್ಟ್, ಹವಾಗುಣ, ರಾಜ್ಯದ ಚಿಹ್ನೆ, ಪಾಣಿ ಪಕ್ಷಿ, ಬಣ್ಣ ಮುಂತದವುಗಳ ಬಗ್ಗೆ ಮಾಹಿತಿ ಇಟ್ಟಿರುತ್ತಾರೆ. ಅಮೇರಿಕಾದಲ್ಲಿ ಎಲ್ಲದಕ್ಕೂ ಮಾಹಿತಿಯಿರುತ್ತದೆ ಅದನ್ನು ಹೇಗೆ ತಿಳಿಯಬೇಕು ಅನ್ನುವುದು ಪ್ರವಾಸಿಗರಿಗೆ ಸವಾಲು.
ಅಮೇರಿಕಾದ ಆರ್ಥಿಕ ಪರಿಸ್ಥಿಯನ್ನು  ಗಮನಿಸಿದರೆ ಭಾರತದಲ್ಲಿ ಉಂಟಾಗಿರುವಂತೆ ಒಂದು ವರ್ಗದ ಜನರ ಆರ್ಥಿಕ ಪರಿಸ್ಥಿತಿ ಅತಿ ವೇಗವಾಗಿ ಮೇಲೇರುತ್ತಿದ್ದರೆ, ಅಧಿಕ ಪ್ರಮಾಣದ ಮಧ್ಯಮ ವರ್ಗದವರು ಹೋರಾಟದ ಬದುಕನ್ನು ನಡೆಸಬೇಕಾಗಿದೆ. ಜೀವನ ವೆಚ್ಚ ಅಧಿಕವಾಗಿರುವುದರಿಂದ ದುಡಿಯುವ ವರ್ಗದವರು ಹೆಚ್ಚು ಶ್ರಮ ಪಡಬೇಕಾಗಿದೆ. ಒಂದು ಅನುಕೂಲವೆಂದರೆ ಶ್ರಮದ ಕೆಲಸಗಳು ಸುಲಭವಾಗಿ ದೊರಕುತ್ತವೆ. ಅದಕ್ಕೆ ಸೂಕ್ತ ಸಂಭಾವನೆಯು ದೊರೆಯುತ್ತದೆ. 
ತಂದೆತಾಯಿ ಹದಿನೆಂಟು ವರ್ಷದವರೆಗೆ ಮಾತ್ರ ಪಾಲನೆ ಮಾಡುವುದರಿಂದ ಮಕ್ಕಳು ಬೇಗ ದುಡಿಯಲು ಆರಂಭಿಸುತ್ತಾರೆ. ಉನ್ನತ ಶಿಕ್ಷಣವು ತುಂಬ ದುಬಾರಿಯಾಗಿರುವುದರಿಂದ ಹೆಚ್ಚು ಸಂಪಾದನೆ ಮಾಡಿಕೊಂಡವರು ತಂದೆತಾಯಿ ಹಣದ ಸಹಾಯ ನೀಡಿದವರು ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಾರೆ. ಹೀಗಾಗಿ ಮೂಲ ಅಮೇರಿಕನ್ನರು ಉನ್ನತ, ಕೌಶಲ್ಯ, ತಾಂತ್ರಿಕ, ಸಂಶೋಧನೆ ಹಾಗೂ ಆಡಳಿತಾತ್ಮಕ ಹುದ್ದೆಗಳನ್ನು ಹೊಂದುವುದು ಕಡಿಮೆ. ಹೊರಗಿನಿಂದ ಬಂದವರು ಹೆಚ್ಚು ಅವಕಾಶ ಪಡೆಯುತ್ತಾರೆ. ಇದರಿಂದ ಮೂಲ ಅಮೇರಿಕನ್ನರಲ್ಲಿ ಅಸಹಿಷ್ಣುತೆ, ಜನಾಂಗೀಯ ಅಸಹನೆ ಉಂಟಾಗುತ್ತಿರುವಂತೆ ತೋರುತ್ತದೆ. ಇದನ್ನು ಟ್ರಂಪ್ ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ಕಂಡುಬರುತ್ತದೆ. ತಮ್ಮ ಜನರ ಕೌಶಲ್ಯ, ಶಿಕ್ಷಣ ಭೌದ್ದಿಕ ಮಟ್ಟವನ್ನು ಉತ್ತಮಪಡಿಸುವ  ಸೂಕ್ತ ಕಾರ್ಯನೀತಿ ರೂಪಿಸಿಕೊಳ್ಳದೆ ವಲಸೆ ಬಂದ ಜನರಲ್ಲಿ ಅಸಹನೆ ತೋರುವುದು ಸರಿಯಲ್ಲ.
ನಾನು ಗಮನಿಸಿದಂತೆ  ದೂರದ ಬೆಟ್ಟ ನುಣ್ಣಗೆ ಅನ್ನುವಂತೆ ಮೇಲು ನೋಟಕ್ಕೆ ಅಮೇರಿಕಾದಲ್ಲಿ ಎಲ್ಲವೂ ಚೆನ್ನಾಗಿರುವಂತೆ ಕಂಡಬಂದರೂ, ಎಲ್ಲವೂ ಸರಿಯಾಗಿಲ್ಲವೆಂದೆನಿಸುತ್ತದೆ. ಬೃಹತ್ ಕಟ್ಟಡಗಳು, ಮೂಲಸೌಕರ್ಯ, ಸ್ವಚ್ಛತೆ ಎಲ್ಲವೂ ಇದ್ದರೂ ಇದೆಲ್ಲ ಸಾಧ್ಯವಾಗಲು ಕಾರಣರಾದ ಶ್ರಮಿಕ ಜನರ ಪರಿಸ್ಥಿತಿ ಹೇಗಿದೆಯೆನ್ನುವುದನ್ನು ಹತ್ತಿರದಿಂದ ಗಮನಿಸಬೇಕಾಗುತ್ತದೆ. ಮೇಲು ವರ್ಗದ ಜನರ ದೃಷ್ಟಿಯಿಂದ ನೋಡಿದರೆ ಖಂಡಿತ ಅಮೇರಿಕ ಸ್ವರ್ಗದಂತೆ ತೋರಬಹುದು. ಆದರೆ ಮಧ್ಯಮ ಮತ್ತು ಕೆಳಸ್ತರದ ಸಾಮಾನ್ಯ ಜನರ ಪರಿಸ್ಥಿತಿ ತೃಪ್ತಿದಾಯಕವಾಗಿಲ್ಲವೆನಿಸುತ್ತದೆ. ಏನೆಂದರೆ, ಕೆಲವು ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವಷ್ಟು ಆದಾಯ ಬರುವುದರಿಂದ ಬಡತನದ ಬೇಗೆ ಇಲ್ಲ. ಆದರೂ ನ್ಯೂಯಾರ್ಕ್‍ನಲ್ಲಿ ಭಿಕ್ಷುಕರು ಅಧಿಕವಾಗಿ ಕಂಡು ಬಂದರು. ಅಲ್ಲಲ್ಲಿ ಗಲೀಜು ಮತ್ತು ನಿಯಮಗಳ ಮೀರುವಿಕೆ ಕಂಡು ಬರುತ್ತಿತ್ತು. ಮೇಲು ಸ್ತರದ ಜನರ ಮೇಲ್ಮುಖ ಚಲನೆ ಶೀಘ್ರವಾಗಿದ್ದರೆ ಶ್ರಮಿಕ ವರ್ಗದವರ ಪರಿಸ್ಥಿತಿ ಸ್ಥಗಿತಗೊಂಡಿದ್ದು, ಅದು ಅವರ ಮನೋಭಾವ, ನಡವಳಿಕೆಯಲ್ಲಿ ಎದ್ದು ಕಾಣುತ್ತಿತ್ತು. ಉದಾಹರಣೆಗೆ ಏರ್‍ಪೋರ್ಟಿನ ಕೆಲಸಗಾರರು, ಬಸ್ ಚಾಲಕರು ಹಾಗು ಇತರ ದೈಹಿಕ ಶ್ರಮದ ಕೆಲಸಗಾರರಲ್ಲಿ ಇದು ಕಂಡು ಬರುತ್ತಿತ್ತು. ಅಲ್ಲಿಯೂ ಆದಾಯ ಮತ್ತು ಸಂಪತ್ತು ಕೆಲವೇ ಜನರ ಕೈಯಲ್ಲಿ ಸಂಗ್ರಹವಾಗಿ ಅಧಿಕ ಜನರ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿರುವಂತೆ ತೋರಿತು. ಯಾವಾಗ ಮಧ್ಯಮ ವರ್ಗದವರ ಪರಿಸ್ಥಿತಿ ಅತ್ಯಂತ ನಿಧಾನಗತಿಯಲ್ಲಿ ಸುಧಾರಿಸುತ್ತಿದ್ದು  ಮೇಲು ವರ್ಗದ ಜನರ ಪರಿಸ್ಥಿತಿ ಅವರ ಕಣ್ಣೆದುರೆ ಮೇಲೇರುತ್ತಿದ್ದರೆ ಅದನ್ನು ಒಪ್ಪಿಕೊಳ್ಳಲು ಕಷ್ಟವಾಗಿ ಜನರು ಅಸಹನೆಯಿಂದ ಸೋತವರಂತೆ ಕಂಡು ಬಂದರು. ವರ್ಗಗಳ ನಡುವಿನ ಅಂತರವೂ ಹೆಚ್ಚಾಗುತ್ತಿದೆ.
ಬಹುಶಃ 30-40 ವರ್ಷಗಳ ಹಿಂದೆ ವಿವಿಧ ವರ್ಗಗಳ ನಡುವೆ ಅಂತರ ಕಡಿಮೆಯಿದ್ದಿದ್ದರಿಂದ ಎಲ್ಲಾ ಜನರೂ ದೇಶ ಕಟ್ಟುವ, ನಿರ್ವಹಿಸುವ ಕಾರ್ಯದಲ್ಲಿ ಸಂಶೋಷದಿಂದ ಪಾಲ್ಗೊಳುತ್ತಿದ್ದರು. ಆದರೆ ಜಾಗತೀಕರಣದ ನಂತರ ಬಂಡವಾಳಶಾಹಿ ವ್ಯವಸ್ಥೆಯ ಪ್ರಾಬಲ್ಯ ಮತು ್ತಜನರ ಆದ್ಯತೆಗಳು (ಫಾಸ್ಟ್‍ಫುಡ್, ಮನರಂಜನೆ, ಪ್ರವಾಸ, ತಂತ್ರಜ್ಞಾನ ಬಳಕೆ) ಬದಲಾದಂತೆ ಪ್ರಜಾಪ್ರಭುತ್ವ, ಸಮಾನತೆ, ಸ್ವಾತಂತ್ರದ ತತ್ವಗಳು ಹಾಗೂ ಮಾನವೀಯ ಮೌಲ್ಯಗಳ ಪ್ರಭಾವ ಕುಸಿಯುತ್ತಿರುಂತೆ ತೋರುತ್ತದೆ. ಅದೃಷ್ಟವಶಾತ್ ಸೂಕ್ತ ಮಟ್ಟದಲ್ಲಿ ಇನ್ನು ಲಂಚ, ಭ್ರಷ್ಟಾಚಾರ ತಲೆಯೆತ್ತದಿರುವುದರಿಂದ ದಿನನಿತ್ಯದ ಕಾರ್ಯಗಳು ಸುಲಲಿತವಾಗಿ ನಡೆದುಕೊಂಡು ಹೋಗುತ್ತಿವೆ. ಜನರಲ್ಲಿ ನೈತಿಕತೆಯಿನ್ನು ಉಳಿದಿರುವುದರಿಂದ ಇದೆಲ್ಲದರ ನಡುವೆ ಎಲ್ಲದರ ನಿರ್ವಹಣೆಯು ದಕ್ಷವಾಗಿ ನಡೆಯುತ್ತಿರುವುದನ್ನು ಶ್ಲಾಘಿಸಲೇಬೇಕು.
ಶಿಕ್ಷಣ ಮತ್ತು ಉದ್ಯೋಗಕ್ಕೆಂದು ಹೋದ ವಲಸಿಗರು ಪ್ರಾರಂಭದ ವರ್ಷಗಳಲ್ಲಿ ಕಷ್ಟಪಟ್ಟು ದುಡಿದು ಜೀವನ ಕಟ್ಟಿಕೊಂಡಿದ್ದಾರೆ. ಆದರೆ ಮೇಲು ಹಂತಕ್ಕೆ ಹೋದಂತೆ ಹೆಚ್ಚು ಮೆಟೀರಿಯಲಿಸ್ಟಿಕ್ ಆಗಿ ವೈಭವಯುಕ್ತವಾಗಿ ಮನೆ ಕಟ್ಟಿಸುವುದು , ದುಬಾರಿ ಸಾಮಾನುಗಳನ್ನು ಖರೀದಿಸುವುದು, ಮಕ್ಕಳಿಗೆ ಸವಲತ್ತುಗಳನ್ನು ಒದಗಿಸುವುದು, ಪಾರ್ಟಿ, ಪೂಜೆ, ಮದುವೆ, ಮುಂಜಿಗಳನ್ನು ನಡೆಸುವುದು, ಸ್ವದೇಶದಲ್ಲಿ ಆಸ್ತಿಮಾಡುವುದು ಮುಂತಾದವುಗಳಲ್ಲಿ ತೊಡಗಿರುವುದು ಕಂಡುಬಂದಿತು. ನಾವು ಕಷ್ಟಪಟ್ಟು ದುಡಿಯುತ್ತೇವೆ ನಮಿಷ್ಟದಂತೆ ಖರ್ಚು ಮಾಡುತ್ತೇವೆ ಎನ್ನಬಹುದು.  ಆದರೆ ಅವರ ಜೀವನ ಸುಲಲಿತವಾಗಿ ನಡೆಯುತ್ತಿರುವುದಕ್ಕೆ ಸಾವಿರಾರು ಜನ ಕೊಡುಗೆ ಸಲ್ಲಿಸುತ್ತಿದ್ದಾರೆ  ಅವರ ಬಗ್ಗೆ ನಮ್ಮ ಕಾಳಜಿ, ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕಿದೆ. ಅನಿವಾಸಿ ಭಾರತಿಯರ ಜೀವನ ಶೈಲಿ   ನಮ್ಮ ದೇಶದ ಮಧ್ಯಮ ವರ್ಗದವರಿಗೆ ಮಾದರಿಯಾದರೆ ಅಪಾಯ. 
ನಾನು ಹೋದ ಸಮಯದಲ್ಲಿ ಅಂತಿಮ ಚುನಾವಣೆ ಪ್ರಚಾರ ಭರದಿಂದ ಸಾಗಿತ್ತು. ಎರಡು ದಿನ ಡೋನಾಲ್ಡ್‍ಟ್ರಂಪ್ ಮತ್ತು ಹಿಲರಿ ಕ್ಲಿಂಟನ್ ಅವರ ಸಾರ್ವಜನಿಕ ಚರ್ಚೆ ಇತ್ತು. ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಇಬ್ಬರು ಉತ್ತರ ನೀಡಬೇಕಿತ್ತು. ಹಿಲರಿ ಕ್ಲಿಂಟನ್‍ಅವರ ವಿಷಯ ಮಂಡನೆ ಗಂಭೀರವಾಗಿತ್ತು, ಕೇಂದ್ರೀಕೃತವಾಗಿರುತ್ತಿತ್ತು, ಕೆಲವು ಹೇಳಿಕೆಗಳು ರಾಜಕೀಯ ಗಿಮಿಕ್‍ನಿಂದ ಕೂಡಿರುತ್ತಿದ್ದರೂ ಎಲ್ಲೆ ಮೀರುತ್ತಿರಲಿಲ್ಲ. ಆದರೆ ಟ್ರಂಪ್‍ನ ಮಾತುಗಳು ಅಕ್ರಮಣಕಾರಿ, ಬೋಗಸ್ ಆಗಿರುತ್ತಿತ್ತು ಹಾಗೂ ಖಚಿತ ನಿಲುವಿರುತ್ತಿರಲಿಲ್ಲ, ಉದ್ಘಟತನವಿತ್ತು. ಹಿಲರಿಯವರಿಗೆ ‘ಶೇಮ್ ಆನ್ ಯು’ ಎಂದು ಅನೇಕ ಬಾರಿ ಉಚ್ಚರಿಸಿದ್ದರು. ಅಲ್ಲಿಯ ಒಂದು ವಿಶ್ಲೇಷಣೆಯಂತೆ ಟ್ರಂಪ್ ಅಂತಿಮ ಸುತ್ತಿಗೆ ಬರಬಹುದೆಂದು ರಿಪಬ್ಲಿಕ್ ಪಕ್ಷದವರೆ ಊಹಿಸಿರಲಿಲ್ಲವಂತೆ. ಅಮೇರಿಕಾದ ಇತಿಹಾಸದಲ್ಲಿ ದಾಖಲೆ ಮಾಡಿಸುವಂತೆ ಹಿಲರಿ ಗೆದ್ದು ಬಂದರೆ ಸಾಮಾನ್ಯ ವರ್ಗದ ಜನರು, ವಲಸಿಗರು ಹಾಗೂ ವಿವಿಧ ಜನಾಂಗೀಯರು ತುಸು ನೆಮ್ಮದಿ ಪಡೆಯಬಹುದೆಂಬ ಆಶಯವಿತ್ತು. ಆದರೆ ಬಹುಜನರ ಆಸೆ ನಿರೀಕ್ಷೆಯನ್ನು ಮೀರಿ ಟ್ರಂಪ್ ಗೆದಿದ್ದಾರೆ. ಜಂಡರ್ ಸಮಾನತೆಯನ್ನು ಅಮೇರಿಕ ಇನ್ನೂ ಒಪ್ಪಿಕೊಂಡಿಲ್ಲ ಅನ್ನುವುದು ಸಾಬೀತಾಯಿತು. ಟ್ರಂಪ್‍ನಂತ ವ್ಯಕ್ತಿಯನ್ನು ಅಮೇರಿಕದ ಜನರು ಒಪ್ಪಿಕೊಳ್ಳುತ್ತಾರೆ ಅಂದರೆ ಅದು ಪ್ರಜಾಪ್ರಭುತ್ವ, ಸಮಾನತೆ  ಮಾನವೀಯ ಮೌಲ್ಯಗಳು ಅವನತಿ ಹೊಂದುತ್ತಿರುವುದರ ಸಂಕೇತವೆ ?
ವಾಂಷಿಂಗ್ಟನ್ ಡಿ ಸಿ ಮತ್ತು ಫಿಲಿಡಾಲ್ಫಿಯ ರಾಜ್ಯಗಳಿಗೆ ಪ್ಯಾಕೇಜ್‍ಟ್ರಿಪ್  ಹೋಗಿದ್ದೆವು. ನಮ್ಮ ದೇಶದ ಟ್ರಾವಲ್ ಏಜೆಂಟ್‍ಗಳಂತೆ ಕೆಲವೇ ಸ್ಥಳಗಳನ್ನು ದೂರದಿಂದ ತೋರಿಸಿ ತಮಗೆ ಲಾಭತರುವ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಾರೆ. ವೈಟ್ ಹೌಸ್‍ನ್ನು, ಲಿಬರ್ಟಿ ಗಂಟೆಯನ್ನು ಹತ್ತಿರದಿಂದ ತೋರಿಸಲಿಲ್ಲ. ಅಮೇರಿಕಾ ಮೂಲ ನಿವಾಸಿಗಳಾದ ‘ಅಮಿಷಾ’ ಜನಾಂಗದ ಬಗ್ಗೆ ಪರಿಚಯಿಸಿದರು. ಅವರ ಗ್ರಾಮಗಳಿಗೆ ಕರೆದೊಯ್ಯುತ್ತೇವೆ ಎಂದು 4 ಗಂಟೆ ಪ್ರಯಾಣ ಮಾಡಿಸಿ  ಬಸ್ಸಿನಿಂದಲೆ ತೋರಿಸಿದರು.  ಅವರ ಮಾರಾಟಕೇಂದ್ರದಲ್ಲಿ ವಸ್ತುಗಳನ್ನು ಕೊಳ್ಳಲು ಇಳಿಸಿದರು. ಅಮಿಷಾ ಜನ ವಿಶಿಷ್ಟವಾದವರು, ಆದುನಿಕರಣದ ಪ್ರಭಾವಕ್ಕೆ ಒಳಗಾದೆ ತಮ್ಮ ಸಂಪ್ರದಾಯವನ್ನೆ ಅನುಸರಿಸಿಕೊಂಡು ಜೀವನ ನಡೆಸುತಿದ್ದಾರೆ. ಕೃಷಿಕರಾದ ಇವರು ಮೂಲಭೂತ ಅವಶ್ಯ ವಸ್ತುಗಳನ್ನು ತಾವೆ ತಯಾರಿಸಿಕೊಳ್ಳುತ್ತಾರೆ. ವಿದ್ಯುತ್ ಬಳಸುವುದಿಲ್ಲ, ಟಿ ವಿ ಇಲ್ಲ, ಮನೆ ಒಳಗೆ ದೂರವಾಣಿ ಸಂಪರ್ಕ ಇಟ್ಟುಕೊಂಡಿಲ್ಲ. ಹೀಗೆ ಅಮೇರಿಕಾದಂತ ಅತ್ಯಾಧುನಿಕ ಜಗತ್ತಿನೊಳಗೆ ಇದ್ದುಕೊಂಡು ಸಾಂಪ್ರದಾಯಿಕ ಚೌಕಟ್ಟಿನಲ್ಲೆ ಬದುಕುತ್ತಿರುವ ಅಮಿಷಾ ಜನರು ವಿಶೇಷವಾಗಿದ್ದಾರೆ. 
ಪ್ಯಾಕೇಜ್ ಟೂರ್ ನಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾಲಯಕ್ಕೆ ಕರೆದುಕೊಂಡು ಹೋಗಿದ್ದರು. ನಮ್ಮಿಂದ ಹತ್ತು ಡಾಲರ್ ಹಣ ಸಂಗ್ರಹಿಸಿಕೊಂಡುರು.  ಆ ವಿಶ್ವವಿದ್ಯಾಲಯಕ್ಕೆ ಮುಕ್ತ ಪ್ರವೇಶವಿತ್ತು. ಗೈಡ್ ಮೂಲ ಒಳಗೆಲ್ಲ ತೋರಿಸಿದರು ಆದರೆ ಹಣ ಸಂಗ್ರಹಿಸಬೇಕಿತ್ತಾ? ಕಡಿಮೆ ವೆಚ್ಚದ ಪ್ರವಾಸ ಎಂದು ಕರೆದುಕೊಂಡು ಹೋಗಿ ತಮಗೆ ಲಾಭ ತರುವ ಸ್ಥಳಗಳನ್ನು ತೋರಿಸಿ ನಾವು ನೋಡಲೇಬೇಕಾದ ಸ್ಥಳಗಳನ್ನು ತೋರಿಸುವುದಿಲ್ಲ. 
ನಯಾಗಾರ ಫಾಲ್ಸ್ ಜಗತ್ತಿನ ಅತ್ಯುತ್ತಮ ಪ್ರವಾಸಿ ತಾಣ. ಇದು ಅಮೇರಿಕಾ ಮತ್ತು ಕೆನಡಾ ನಡುವೆ ಹಂಚಿಕೆಯಾದ ಸ್ಥಳವೆಂದು ಕೇಳಿದ ತಕ್ಷಣ ಒಂದು ವೇಳೆ ಅಂತಹ ಸ್ಥಳ ಭಾರತ ಮತ್ತು ಪಾಕಿಸ್ತಾನದ ನಡುವೆ ಇದಿದ್ದರೆ ಹೇಗಿರುತಿತ್ತು ಅನ್ನುವ ಆಲೋಚನೆ ಬಂದಿತು. ತುಂಬಾ ಚೆನ್ನಾಗಿ ನಿರ್ವಹಣೆ ಮಾಡಿದ್ದಾರೆ. ಭಾರತೀಯರು ಮತ್ತು ಚೀನಿಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಎಲ್ಲೊ ಒಂದು ಕಡೆ ಇಪ್ಪತ್ತು ಮುವತ್ತು ವರ್ಷಗಳ ಹಿಂದೆ ಇರಬಹುದಾಗಿದ್ದ ಅಚ್ಚುಕಟ್ಟುತನದಲ್ಲಿ ಸಣ್ಣ ಕೊರತೆ ಉಂಟಾಗಿದೆ ಅಂತ ಅನಿಸಿತು. 
ಅಮೇರಿಕಾದಲ್ಲಿ ವಸ್ತು ಸಂಗ್ರಹಾಲಯಗಳನ್ನು ತುಂಬಾ ಚನ್ನಾಗಿ ನಿರ್ವಹಣೆ ಮಾಡಿದ್ದಾರೆ. ಮಿಷಿಗನ್ ನ ಡಿಯರ್‍ಬಾರ್ನ್ ನಲ್ಲಿರುವ ಹೆನ್ರಿ ಫೋರ್ಡ್ ವಸ್ತು ಸಂಗ್ರಹಾಲಯವು, ಕಳೆದ 200 ವರ್ಷಗಳಲ್ಲಿ ಅಮೇರಿಕಾದಲ್ಲಿ ಕೃಷಿ, ಕೈಗಾರಿಕೆ, ಆಟೋಮೊಬೈಲ್, ವಿಮಾನಯಾನ, ಕಾರು ಉತ್ಪಾದನೆಗೊಂಡ ಇತಿಹಾಸವನ್ನು ತೋರಿಸುವ ಮತ್ತು ಹಿಂದೆ ಜನರು ಬಳಸುತ್ತಿದ್ದ ವಸ್ತುಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ. ಇದು ಮಕ್ಕಳಿಗೆ ಮಾಹಿತಿ, ಜ್ಞಾನ ನೀಡುವ ಕೇಂದ್ರವಾಗಿದೆ. ಇನ್ನೊಂದು ವಿಶೇಷವೆಂದರೆ. ಮಾದರಿ ವಸ್ತುಗಳನ್ನು ತಯಾರಿಸುವ ಯಂತ್ರ ಇಟ್ಟಿರುತ್ತಾರೆ 2 ಡಾಲರ್ ಹಾಕಿದರೆ ನಾವು ಆಯ್ಕೆ ಮಾಡಿದ ವಸ್ತು ಪ್ಲಾಸ್ಟಿಕ್ ರೂಪದಲ್ಲಿ 2 ನಿಮಿಷದಲ್ಲಿ ಹೊರಬರುತ್ತದೆ.  
ಶಿಕಾಗೊದಲ್ಲಿ ವಿವೇಕಾನಂದರು ಭಾಷಣ ಮಾಡಿದ ಸ್ಥಳಕ್ಕೆ ಭೇಟಿ ನೀಡಿದೆವು ಪಾಠದಲ್ಲಿ ಕೇಳಿದ್ದನ್ನು ನೋಡಿದಾಗ ತುಂಬ ಸಂತೋಷವಾಯಿತು. ಕಟ್ಟದ ಮುಂದಿನ ರಸ್ತೆಗೆ ವಿವೇಕಾನಂದ ಮಾರ್ಗ ಎಂದು ಹೆಸರಿಟ್ಟಿದ್ದಾರೆ.
ಜಗತ್ತಿಗೆ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಸಾರುವ ಅಮೇರಿಕಾದಲ್ಲಿ ವರ್ಣಬೇಧದ ಬೇರಿದೆ. ಕಪ್ಪು ವರ್ಣದ ಜನರ ಎರಡು ಹೋರಾಟ ಪ್ರಕರಣಗಳನ್ನು ಕೇಳೀದೆ. ಒಂದು ಅಲಬಮಾದ ಕಪ್ಪು ಮಹಿಳೆ ರೋಸಾ ಪಾರ್ಕ್ ಬಸ್ಸನ ಮುಂದಿನ ಭಾಗದಲ್ಲಿ ಕುಳಿತಿದ್ದಾಗ ಬಿಳಿಜನರು ಹಿಂದೆ ಹೋಗಿ ಕುಳಿತುಕೊಳ್ಳಲು ಹೇಳುತ್ತಾರೆ. ಅವಳು ನಿರಾಕರಿಸುತ್ತಾಳೆ. ತುಂಬಾ ಒತ್ತಾಯ ಮಾಡಿದಾಗ ಪ್ರತಿಭಟನೆ ತೋರುತ್ತಾಳೆ. ಈ ಪ್ರಕರಣ ವರ್ಣಬೇಧ ನೀತಿಯನ್ನು ನಿಷೇಧಿಸುವ ಕಾಯಿದೆ ಜಾರಿಗೆ ಬರಲು ಕಾರಣವಾಗುತ್ತದೆ.  ಇದೇ ರೀತಿಯಲ್ಲಿ ಡೆತ್ರಾಯಿಟ್ನಲ್ಲಿ ಬಾಕ್ಸಿಂಗ್ ಆಟದಲ್ಲಿ ಭಾಗವಹಿಸಲು ಕಪ್ಪು ಪುರುಷನಿಗೆ ನಿರಾಕರಿಸಲಾಗುತ್ತದೆ. ಅವನೂ ಪ್ರತಿಭಟನೆ ಮಾಡಿ ಆಟದಲ್ಲಿ ಭಾಗವಹಿಸಿ ಗೆಲ್ಲುತ್ತಾನೆ. ಅದರ ನೆನಪಿಗೆ ಕಬ್ಬಿಣದ ಕೈಯನ್ನು ಊರಿನ ಮಧ್ಯಭಾಗದಲ್ಲಿ ನೇತುಹಾಕಿದ್ದಾರೆ.
ಡೆತ್ರಾಯಿಟ್ ನಲ್ಲಿರುವ ಜಮರಲ್ ಮೋಟಾರ್ಸ್ ನ ಮುಖ್ಯ ಕಛೇರಿಗೆ ಭೇಟಿ ನೀಡಿದೆವು. ಕಛೇರಿಯ ಶೋರೂಮ್ ನಲ್ಲಿ ಪಿಂಕ್ ಬಣ್ಣದ ಕಾರ್ ನ್ನು ಇಟ್ಟಿದ್ದರು. ಪಿಂಕ್ ಬಣ್ಣದ ಕಾರನ್ನು ಮಾರಾಟ ಮಾಡಿ ಬಂದ ಹಣವನ್ನು ಮಹಿಳೆಯರ ಕ್ಯಾನ್ಸರ್ ಚಿಕಿತ್ಸೆಗೆ ನೀಡುವ ಯೋಜನೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿದುಬಂತು.
ಮಿಷಿಗನ್ ವಿಶ್ವವಿದ್ಯಾಲಯದ ಮಹಿಳಾ ಶಿಕ್ಷಣ ಕೇಂದ್ರಕ್ಕೆ ಹೋಗಿದ್ದೆ. ಆ ಕೇಂದ್ರವು ಶಾಳೆ ಕಾಳೇಜು ಬಿಟ್ಟ ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಜನಾಂಗೀಯ ತಾರತಮ್ಯಕ್ಕೆ ಒಳಗಾದ, ಆರ್ಥಿಕವಾಗಿ ಹಿಂದುಳಿದ, ಅಲ್ಪಸಂಖ್ಯಾತ ಹೆಣ್ಣುಮಕ್ಕಳಿಗೆ ಅನುದಾನ, ವಿದ್ಯಾರ್ಥಿವೇತನ, ಆಪ್ತಸಮಾಲೋಚನೆ, ಉನ್ನತ ಶಿಕ್ಷಣದ ಬಗ್ಗೆ ಮಾಹಿತಿ ನೀಡುವ, ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿದೆ. 
ಭಾರತದಲ್ಲಿದ್ದಾಗ ನೇಮದಿಂದ ಪೂಜೆ, ವೃತ, ಹಬ್ಬಹರಿದಿನಗಳನ್ನು ಆಚರಿಸುತ್ತೇವೊ ಇಲ್ಲವೊ  ಆದರೆ ಹೊರ ದೇಶಗಳಿಗೆ ಹೋದಾಗ ಅವುಗಳಿಗೆ ಹೆಚ್ಚಿ ಮಹತ್ವವನ್ನು ಕೊಡುತ್ತೇವೆ. ಎರಡು ಧಾರ್ಮಿಕ ಸ್ಥಳಗಳಿಗೆ ಬೇಟಿ ನೀಡಿದೆವು. ಒಂದು  ಆ್ಯನ್ ಆರ್ಬರ್ ನಲ್ಲಿರುವ ಚಿನ್ಮಯ ಮಿಷನ್ ಕೇಂದ್ರ. ಇದನ್ನು ತಮಿಳು ದಂಪತಿಗಳು 35 ವರ್ಷಗಳಿಂದ ನಡೆಸಿಕೊಂಡು ಬರುತಿದ್ದಾರೆ. ಭಗವತ್‍ಗೀತೆ, ಉಪನಿಷತ್ ಹಾಗು ವೇದಗಳ ಪಠಣ, ಮಕ್ಕಳ ಕೂಟ ಅದರಲ್ಲಿ ಮಕ್ಕಳಿಗೆ ನಮ್ಮ ಸಂಸ್ಕøತಿ ಬಗ್ಗೆ ಪರಿಚಯ ಮಾಡಿಕೊಡುವ ತರಗತಿಗಳು ಹಾಗು ದೊಡ್ಡವರಿಗೆ ಅಧ್ಯಯನ ಗುಂಪುಗಳನ್ನು ನಡೆಸುತ್ತಾರೆ. ಎಲ್ಲಾ ಭಾರತೀಯ ಹಬ್ಬಗಳನ್ನು ಆಚರಿಸುತ್ತಾರಂತೆ. ನಾವು ನವರಾತ್ರಿ ಸಮಯದಲ್ಲಿ ಹೋಗಿದ್ದರಿಂದ ಎರಡು ದಿನ ಪೂಜೆಯನ್ನು ನೋಡಲು ಹೋಗಿದ್ದೆವು ಸಂಜೆ ಏಳು ಗಂಟೆಯಿಂದ ಒಂಭತ್ತುವರೆವರೆಗೆ ನಡೆಸಿದರು. ಇನ್ನೊಂದು ನೈಯಾರ್ಕ್‍ನ ಫ್ಲಷಿಂಗಟನ್ ನಲ್ಲಿರುವ ಗಣಪತಿ ದೇವಸ್ಥಾನ. ಒಂದೇ ಸ್ಥಳದಲ್ಲಿ ಎಲ್ಲಾ ದೇವರುಗಳ ಪ್ರತಿಷ್ಟಾಪನೆ ಮಾಡಿದ್ದಾರೆ. (ಬಹುಶ: ಇದೇ ಪರಿಕಲ್ಪನೆ ನಮ್ಮ ದೇಶದಲ್ಲೂ ಹೊಸ ದೇವಸ್ಥಾನಗಳನ್ನು ಕಟ್ಟುವಾಗ ಎಲ್ಲಾ ದೇವರುಗಳನ್ನು ಪ್ರತಿಷ್ಟಾಪಿಸುವ ಪದ್ದತಿ ಬೆಳೆದುಬಂದಿರಬೇಕು.) ಎಲ್ಲಾ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿತ್ತು. ನಂಬಿಕೆ ಆಚರಣೆಗಳು ಭೂಮಿ ಮೇಲಲ್ಲ ಆಕಾಶಕ್ಕೆ ಹೋದರು ನಮ್ಮನ್ನು ಬಿಡುವುದಿಲ್ಲವೆನಿಸುತ್ತದೆ.
ಎಲ್ಲವೂ ಚೆನ್ನಾಗಿದ್ದರೂ ಅದುವೆ ಅಂತಿಮವಲ್ಲ. ಎಲ್ಲರಿಗೂ ಮಾದರಿಯಾಗಲು ಸಾಧ್ಯವಿಲ್ಲ. ಒಳ್ಳೆಯದು ಅನಿಸಿದ್ದನ್ನು ನಮ್ಮ ಪರಿಸ್ಥಿತಿಗೆ ಅನುಗುಣವಾಗಿ ಅಳವಡಿಸಿಕೊಂಡರೆ ಸೂಕ್ತವೆನಿಸುತ್ತದೆ. 
ಅಮೇರಿಕಾದ ಬಗ್ಗೆ ಹೇಳಲು, ಚರ್ಚಿಸಲು ಇನ್ನೂ ಸಾಕಷ್ಟು ವಿಷಯಗಳಿದ್ದರು ನನ್ನ ಜ್ಞಾನ, ಮಾಹಿತಿಯ ಮಿತಿಯೊಳಗೆ ಕೆಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ. ಇದು ಸಂಪೂರ್ಣವಾಗಿ ನನ್ನ ವೈಯಕ್ತಿಕ ಅನಿಸಿಕೆ ಅಭಿಪ್ರಾಯವಷ್ಟೆ.



ಡಾ|| ಹೇಮಲತಾ ಎಚ್.ಎಮ್

ಮಹಿಳಾ ಅಧ್ಯಯನ ವಿಭಾಗ
ಕರ್ನಾಟಕ  ರಾಜ್ಯ ಮಹಿಳಾ ವಿಶ್ವವಿದ್ಯಾಲಯ
ಸ್ನಾತಕೋತ್ರರ ಮತ್ತು ಸಂಶೋಧನಾ ಹೊರಾವರಣ ಕೇಂದ್ರ
ಮಂಡ್ಯ.

ಅನುವಾದಿತ ನಾಟಕ - ಹೊಸ ಕಳೆ



ಮೂಲ : ಜೆ.ಎಂ.ಬ್ಯಾರಿ (ಟ್ವೆಲ್ ಪೌಂಡ್ ಲುಕ್-1950)
ನಾಟಕ ರೂಪಾಂತರ : ಎಸ್.ಎನ್.ಸ್ವಾಮಿ

(ಇದನ್ನು ಹತ್ತು ವರ್ಷಗಳ ಹಿಂದೆ ನಡೆದ ಕಥೆಯೆಂದು ತಿಳಿದುಕೊಳ್ಳಬೇಕು. ನಿಮಗೆ ಅನುಕೂಲವಾಗಿದ್ದರೆ, ಈ ದೃಶ್ಯವು ನಿಮ್ಮ ಮನೆಯಲ್ಲೇ ನಡೆಯುತ್ತಿದೆ ಎಂದುಕೊಳ್ಳಬೇಕು. ಮತ್ತೆ ನೀವೇ ಗಿರೀಶ್‍ಮೂರ್ತಿ ಎಂದುಕೊಳ್ಳಬೇಕು. ಮನೆಯ ಅಲಂಕಾರ ನಿರರ್ಥಕವಾದ ಪ್ರದರ್ಶನ ಆಗಿರಬಹುದು, ಆದರೆ ನಿಮಗೆ ಅದರ ಬಗ್ಗೆ ಆಕ್ಷೇಪಣೆಯಿದ್ದರೆ ಅದನ್ನು ಸರಿಪಡಿಸಬಹುದು; ಕೇವಲ ರೇಷ್ಮೆ ಬಟ್ಟೆ ಅಥವಾ ಭವ್ಯ ಮೇಜುಗಳ ಸಣ್ಣ ವಿಷಯಕ್ಕೆ ನೀವು ಗಿರೀಶ್ ಮೂರ್ತಿಯಾಗದೆ ಉಳಿಯಬಾರದು ನೋಡಿ. ಆತನನ್ನು ನಗರದ ಪ್ರತಿಷ್ಟಿತ ವ್ಯಕ್ತಿಯನ್ನಾಗಿ ಮಾಡುವುದು ನಮಗಿಷ್ಟ. ಆದರೆ (ನಿಮ್ಮನ್ನು ಕಳೆದುಕೊಳ್ಳಬಾರದಲ್ಲ) ಪೆನ್ನನ್ನು ಗೀಚಿ ಒಬ್ಬ ಅಗರ್ಭ ಶ್ರೀಮಂತ ಡಾಕ್ಟರ್, ಪ್ರಗತಿಪರ ಉದ್ಯಮಿ, ಪ್ರಸಿದ್ಧ ಸಾಹಿತಿ, ಸರ್ಕಾರದ ಕಾರ್ಯದರ್ಶಿ ಅಥವಾ ನಿಮ್ಮಿಷ್ಟ ಬಂದಂತೆ ಮಾಡಬಹುದು. ಆತನು ದಪ್ಪನಾದ ಕೆಂಪು ಕತ್ತಿರುವ, ಪ್ರಫುಲ್ಲನಾದ ದುಂಡನೆಯ ವ್ಯಕ್ತಿಯೆಂದು ನಾವು ಊಹಿಸಿಕೊಳ್ಳುತ್ತೇವೆ. ಆದರೆ ಆತ ಸಣ್ಣಗಿರುವ ವಿಷಯ ನಿಮಗೆ ಗೊತ್ತಿದ್ದರೆ ಅದನ್ನು ಬಿಟ್ಟು ಬಿಡುತ್ತೇವೆ.
ಆ ದಿನವೇ, ನಿಮ್ಮ ಜೀವನದಲ್ಲಿ ಎಲ್ಲವೂ ಸುಲಲಿತವಾಗಿ, ಸರಿಯಾಗಿಯೇ ನಡೆಯುತ್ತಿದೆ ಎಂದುಕೊಂಡು ಆರಾಮವಾಗಿದ್ದಾಗಲೇ ಎಲ್ಲವೂ ಎಡವಟ್ಟಾಗಿದ್ದು.
ಗಿರೀಶನ ವಿಷಯದಲ್ಲಿ ಹಾನಿಯುಂಟಾಗಿದ್ದು ಓರ್ವ ಮಹಿಳೆಯಿಂದ. ಆಕೆ ಬಹಳ ಒಳ್ಳೆಯ ಸಮಯದಲ್ಲಿ ಗಿರೀಶನ ಮನೆಗೆ ಬಂದಳು. ಜೊತೆಗೆ ಅವನನ್ನು ಮೆಚ್ಚುವುದಿಲ್ಲವೆಂದು ಹೇಳಿದಳು. ಆಕೆಯನ್ನು ಆತ ತನ್ನ ಮನೆಯಿಂದೋಡಿಸಿದ್ದೇನೊ ನಿಜ. ಸ್ವಲ್ಪ ಸಮಯದಲ್ಲಿಯೇ ಆತನೂ ಹೊರಗೋದ. ಆದರೆ ಅದು ಅವನ ಇಡೀ ಬೆಳಗಿನ ಸಮಯವನ್ನು ಹಾಳು ಮಾಡಿತು. ಇದೇ ನಾಟಕದ ವಿಷಯ ಮತ್ತು ಇಷ್ಟು ಸಾಕೆನಿಸುತ್ತದೆ.
ಗಿರೀಶ್ ಮೂರ್ತಿಯು ಇನ್ನು ಕೆಲವೇ ದಿನಗಳಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾನೆ. ನಾವು ಆತನನ್ನು ಭವ್ಯ ಕಟ್ಟಡದ ಬೆಚ್ಚಗಿರುವ ಬೆಂಗಳೂರಿನ (ಅಥವಾ ಮೈಸೂರೇ?) ಆತನ ಮನೆಯಲ್ಲಿ ಕಾಣಬಹುದು. ಹಾಗೂ ಆತನ ಪತ್ನಿಯ ಜೊತೆ ಪ್ರಶಸ್ತಿ ಸಮಾರಂಭದ ರಿಹರ್ಸಲ್ ಮಾಡುತ್ತಿರುವುದನ್ನು ನೋಡಬಹುದು. ಅದು ಸಂತೋಷದ ವಿಷಯವೇ! ಸರೋಜಾ ಮೂರ್ತಿ  (ಹಾಗೆ ಆಕೆಯನ್ನು ನಾವು ಕಡೆಯ ಬಾರಿಗೆ ಕರೆಯಬಹುದು) ಅತ್ಯಂತ ಬೆಲೆಬಾಳುವ ರೇಷ್ಮೆ ಸೀರೆಯನ್ನು ಉಟ್ಟಿದ್ದಾಳೆ; ಆಕೆ ರಾಜಗಾಂಭೀರ್ಯದಲ್ಲಿ ಕುಳಿತಿದ್ದಾಳೆ. ಆಕೆಯ ಕತ್ತಿನ ಸುತ್ತ ತೂಗುತ್ತಿರುವ ಆಭರಣಗಳನ್ನು ನೋಡಿದರೇ ಸಾಕು, ಆಕೆಯ ಗಂಡ ಅದೆಷ್ಟು ಉದಾರಿಯೆಂಬುದು ತಿಳಿಯುತ್ತದೆ. ಆಕೆ ಅಸಾಧಾರಣ ಮತ್ತು ಹೆಮ್ಮೆಯಿಂದಿರುವ ಮಹಿಳೆ ಇರಬೇಕು. ಹಾಗಿದ್ದರೂ, ಆಕೆ ಯಾರಿಗೆ ತುಂಬಾ ಹೆದರುತ್ತಾಳೋ ಆ ವ್ಯಕ್ತಿಯು ಪಕ್ಕದಲ್ಲಿಯೇ ನಿಂತಿದ್ದಾನೇನೊ ಎಂಬಂತೆ ಮುಖದಲ್ಲಿ ಭೀತಿಯಿದೆ ಮತ್ತು ಆಕೆ ಕುಗ್ಗಿದ್ದಾಳೆ. ಗಿರೀಶನಿಗೆ ಸೂಚನೆ ಕೊಡುವಂತೆ ಎದ್ದು ನಿಲ್ಲುತ್ತಾಳೆ. ಆತ ಅರ್ಧಂಬರ್ಧ ಉಡುಪು ಧರಿಸಿದ್ದಾನೆ. ಅಂದರೆ ಸೂಟು ಬೂಟು ಧರಿಸಿಯಾಗಿದೆ, ಆದರೆ ಗೌನ್ ಇನ್ನೂ ಬರಬೇಕಾಗಿದೆ. ತಲೆಬಾಗಿ, ಮೆಲುನಡಿಗೆಯಲ್ಲಿ ಆತ ಹೆಂಡತಿಯ ಹತ್ತಿರ ಹೋಗಿ, ದೈನ್ಯ ಭಾವದಿಂದ ಕೈಕುಲುಕಿ, ಕಾಲಿಗೆ ನಮಸ್ಕಾರ ಮಾಡುವಂತೆ ಬಗ್ಗುತ್ತಾನೆ. ಆಕೆ ಆತನ ಎರಡೂ ಭುಜಗಳನ್ನು ಹಿಡಿದು, ‘ಇರಲಿ, ಇರಲಿ, ಎದ್ದೇಳಿಎನ್ನುತ್ತಾಳೆ. ಆತ ಮೇಲಕ್ಕೆದ್ದು ಆಕೆಗೆ, ಜೊತೆಗೆ ರೂಮಿನಲ್ಲಿರುವ ಎಲ್ಲಾ ಕುರ್ಚಿಗಳಿಗೂ ತಲೆಬಾಗುತ್ತಾ ಹೋಗುತ್ತಾನೆ. ಇದೊಂದು ಮನೆಯಲ್ಲಿ ನಡೆದ ಮಹಾ ಸಂತೋಷದ ದೃಶ್ಯ. ಮತ್ತು ಗಿರೀಶ ಅದೆಷ್ಟು ತನ್ಮಯನಾಗಿ, ಗಾಂಭೀರ್ಯದಿಂದ ಮಾಡುತ್ತಿದ್ದನೆಂದರೆ ಎದುರುಗಡೆ ಗಣ್ಯರೇ ಬಂದು ರಿಹರ್ಸಲ್ ಮಾಡುತ್ತಿದ್ದಾರೇನೋ ಎನ್ನುವಂತಿತ್ತು.)
ಗಿರೀಶ್ ಮೂರ್ತಿ : (ಸಂತೃಪ್ತಿಯಿಂದ) ನೋಡೋದಿಕ್ಕೆ ಪರವಾಗಿಲ್ಲ ಅನ್ಸುತ್ತಾ, ಹಾಂ?
ಸರೋಜಾ ಮೂರ್ತಿ : (ಬಿಡುಗಡೆಯ ಭಾವದಿಂದ) ಸರಿಯಾಗೇ ಬಂದಿದೆ ಅನ್ಸುತ್ತೆ.
ಗಿರೀಶ್ ಮೂರ್ತಿ : ಆದರೆ ಗಂಭೀರವಾಗಿತ್ತು ತಾನೆ?
ಸರೋಜಾ ಮೂರ್ತಿ : ಹೌದೌದು.   ಗೌನ್ ಬಂದ ಮೇಲಂತೂ ಇನ್ನೂ ಚೆನ್ನಾಗಿರುತ್ತೆ.
ಗಿರೀಶ್ ಮೂರ್ತಿ : ಗೌನ್. ಹೌದು ಗೌನ್ ಅದಕ್ಕೊಂದು ಕಳೆ ಕೊಡುತ್ತೆ. ಅಲ್ಲಿ ಸರಿಯಾಗಿ ನಾಲ್ಕು ರಿವಾಜುಗಳಿವೆ. (ಮಾತಿಗೆ ತಕ್ಕಂತೆ ನಟಿಸುತ್ತಾ) ಕೈಕುಲುಕುವುದು - ಬಗ್ಗಿ ನಮಸ್ಕಾರ ಮಾಡೋದು - ಭುಜ ಹಿಡಿದು ಎತ್ತುವುದು ಮತ್ತೆ ಪ್ರಶಸ್ತಿ ಪಡೆಯೋದು. ಚಿಕ್ಕದಾದರೂ ಚೊಕ್ಕವಾದ ಕಾರ್ಯಕ್ರಮ. ಸುಂದರವಾದದ್ದು. (ಮೃದುವಾಗಿ) ಏನಾದರೂ ಹೇಳೋದಿದೆಯಾ?
ಸರೋಜಾ ಮೂರ್ತಿ : ಇಲ್ಲ, ಹಾಂ ಇಲ್ಲ, ಇಲ್ಲ. (ಕುರ್ಚಿಯ ಕಾಲುಗಳಿಗೇ ನಮಸ್ಕಾರ ಮಾಡಲು ಹೋಗುತ್ತಿರುವುದನನ್ನು ನೋಡಿ ದುರ್ಬಲಳಾಗಿ) ಏನು ಮಾಡಬೇಕು ಅನ್ನೋದನ್ನ ಚೆನ್ನಾಗಿ ಗೊತ್ತಿದೆ ಅನ್ನೋವರೆಗೂ, ರಿಹರ್ಸಲ್ ಮಾಡಿದೀನಿ ಅಂತ ನೀವು ತಿಳಿದಿಲ್ಲ ತಾನೆ?
(ಆತ ಸ್ವರ್ಗಸುಖದಿಂದ ಪ್ರಸನ್ನನಾಗಿದ್ದನು. ಆದರೆ ಅಂತಹ ಕ್ಷುಲ್ಲಕವಾದ ಟೀಕೆ ಯಾರನ್ನೇ ಆಗಲಿ ಕೆರಳಿಸುವಂತಹುದು)
ಗಿರೀಶ್ ಮೂರ್ತಿ : ಇಲ್ಲ. ಹುಚ್ಚುಚ್ಚಾಗಿ ಏನೇನೋ ಮಾತಾಡಬೇಡ. ನಿನ್ನ ಅಭಿಪ್ರಾಯ ಕೇಳೋವರೆಗೂ ಸುಮ್ಮನಿರು.
ಸರೋಜಾ ಮೂರ್ತಿ : (ನಾಚಿಕೆಯಿಂದ) ಸಾರಿ.
 (ಅಷ್ಟರಲ್ಲಿ ಅಡುಗೆಭಟ್ಟ ಬಂದು ವಿಸಿಟಿಂಗ್ ಕಾರ್ಡ್ ಕೊಡುತ್ತಾನೆ)
ಗಿರೀಶ್ ಮೂರ್ತಿ : ಹಾಂ! ಹೌದು. ಯಾರನ್ನಾದರೂ ಕಳುಹಿಸಿ ಅಂತ ಫೋನ್ ಮಾಡಿದ್ದೆ. ಯಾರೊ ಲೇಡಿ ಬಂದಿರಬೇಕು, ಅಲ್ವಾ ಭಟ್ರೆ?
ಭಟ್ಟ : ಹೌದು.
ಗಿರೀಶ್ ಮೂರ್ತಿ : ಸರಿ, ಒಳಗಡೆ ಕಳುಹಿಸು. (ಬಹಳ ವಿಶ್ವಾಸದಿಂದ ಕೇಳುತ್ತಾನೆ) ಕೆಳಗಡೆ ಬಂದಿರುವವರು ಇಷ್ಟಪಡ್ತಾರೆ, ಅಲ್ವಾ?
ಭಟ್ಟ : (ಪ್ರಸನ್ನಚಿತ್ತದಿಂದ) ಅದರಲ್ಲೂ ಹೆಂಗಸರು.
ಕಾತ್ಯಾಯಿನಿ : (ಉಪಯೋಗಿಸಿಕೊಳ್ಳಲು ಸರಿಪಡಿಸಿಕೊಳ್ಳುತ್ತಾ) ಹೌದು. (ಹೌದು ಮೇಡಮ್ಅಲ್ಲ. ಹಾಗೆಂದು ಕರೆಯಬೇಕಾಗಿತ್ತು) ಇಲ್ಲಿ ಕೆಲಸ ಮಾಡಬೇಕಾದರೆ ಇದನ್ನು (ತನ್ನ ಓವರ್‍ಕೋಟ್ ಬಗ್ಗೆ) ತೆಗೆದರೇ ಉತ್ತಮ ಅನ್ನಿಸುತ್ತೆ.
ಗಿರೀಶ್ ಮೂರ್ತಿ : ಸರಿಯಾಗೇ ಹೇಳಿದೆ. ಹಾಂ! ಆಕೆನ ಒಳಗಡೆ ಕಳುಹಿಸು. (ಅಡುಗೆಭಟ್ಟ ತನ್ನ ಮಹತ್ಕಾರ್ಯಕ್ಕೆ ತೆರಳುತ್ತಾನೆ) ಆಕೆಗೆ ಯಾತಕ್ಕೋಸ್ಕರ ಕರೆಸಿದ್ದು ಅಂತ ನೀನೇ ಹೇಳು ಸರೋಜ. ನಾನು ಬಟ್ಟೆ ಬದಲಾಯಿಸಿ ಬರುತ್ತೇನೆ. (ತನ್ನ ಬಗ್ಗೆ ತಾನೇ ಹೇಳಿಕೊಳ್ಳಲಾರದಷ್ಟು ವಿನಯವಂತ. ಆ ಉದ್ದೇಶಕ್ಕಾಗಿಯೇ ಮನೆಯಲ್ಲಿ ಹೆಂಡತಿಯಿರಲು ಇಷ್ಟಪಡುತ್ತಾನೆ) ನಿನಗೆ ಹೇಗೆ ಚೆನ್ನಾಗಿ ಬರುತ್ತೋ ಹಾಗೇ ನನ್ನ ಬಗ್ಗೆ ಹೇಳು. (ಸಂತೋಷದಿಂದ ನಗುತ್ತಾ) ಭಟ್ಟರು ಹೇಳಿದ್ದು ಕೇಳಿಸ್ತಾ, ‘ಅದರಲ್ಲೂ ಹೆಂಗಸರು.ಅವರು ಸರಿಯಾಗೇ ಹೇಳಿದ್ರು. Success! ಯಶಸ್ಸು! ಗಂಡಸರಿಗಿಂತ ಹೆಂಗಸರೇ ಹೆಚ್ಚು ಇಷ್ಟಪಡುತ್ತಾರೆ. ಅದು ಸರಿಯಾದದ್ದೇ. ಅವರು ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಾರೆ. ನೀನು ಮಾತಾಡು ಸರೋಜ. ಈ ರೇಷ್ಮೆ ಸೀರೆ ನೋಡಿ ಯಾವ ಹೆಂಗಸಾದರೂ ಹೊಟ್ಟೆಕಿಚ್ಚಿನಿಂದ ನರಳ ಬೇಕು. ಅವರ ಬಗ್ಗೆ ನನಗ್ಗೊತ್ತು. ನಮ್ಮ ಎಲ್ಲಾ ಸ್ನೇಹಿತೆಯರಿಗೂ ತೋರಿಸು. ಅವರು ಒಂದು ವಾರ ನರಳೋ ಹಾಗೆ ಮಾಡುತ್ತೆ.
(ಈ ಭಾವನೆಗಳು ಅವನ ಮನಸ್ಸನ್ನು ಹಗುರಗೊಳಿಸಿದವು ಮತ್ತು ಇದೀಗ ಶಾಂತಿಭಂಗದ ವಸ್ತುವೊಂದು ಒಳಬಂದಿತು. ಆಕೆ ಕೇವಲ ಒಬ್ಬ ಸ್ಟೆನೋಗ್ರಾಫರ್. ಸಾಮಾನ್ಯವಾಗಿ ಕಾಣದಿರುವ ಒಳ್ಳೆ ಅಭಿರುಚಿಯುಳ್ಳ ಬಟ್ಟೆ ಧರಿಸಿದ್ದಾಳೆ; ಆಕೆ ಚಿಕ್ಕ ಟೈಪ್‍ರೈಟರ್ ಒಂದನ್ನು ಗುಲಾಮಗಿರಿಯ ಸಂಕೇತದ ಬದಲು ತುಂಬಾ ಸ್ನೇಹಭಾವದಿಂದ ತಾನೇ ಹಿಡಿದುಕೊಂಡು ಬರುತ್ತಿದ್ದಾಳೆ. ಆಕೆಯ ಕಣ್ಣುಗಳು ಸ್ವಚ್ಛವಾಗಿ ಹೊಳೆಯುತ್ತಿವೆ. ಸರೋಜಾ ಮೂರ್ತಿಗೆ ತದ್ವಿರುದ್ಧವಾಗಿ ಆಕೆ ಸ್ವಾವಲಂಬಿ ಮತ್ತು ಪ್ರಶಾಂತವಾಗಿದ್ದಳು)
ಕಾತ್ಯಾಯಿನಿ : (ಗೌರವದಿಂದ, ಆದರೂ ಸರೋಜಾ ಮೂರ್ತಿ ಮಾತನಾಡುವವರೆಗೂ ಕಾಯಬೇಕಾಗಿತ್ತು) ನಮಸ್ಕಾರ ಮೇಡಮ್.
ಸರೋಜಾ ಮೂರ್ತಿ : (ಆಕೆ ಗೊಂದಲಗೊಂಡು ಮತ್ತು ಸ್ಟೆನೊ ನಾಲಗೆ ಸದಾ ಸಿದ್ಧವಾಗಿದೆ ಎಂಬುದನ್ನು ಗಮನಿಸದೆ) ನಮಸ್ಕಾರ. (ನಿಜವಾಗಿಯೂ ಸರೋಜಾ ಮೂರ್ತಿ ಮೊದಲನೆ ಭೇಟಿಯಲ್ಲೇ ಈ ಮಹಿಳೆಯನ್ನು ಇಷ್ಟಪಡುತ್ತಾಳೆ. ಮತ್ತೆ ಈ ಮಹಿಳೆ - ಹಾಗೇನಾದರೂ ಹೇಳಬಹುದಾದರೆ ಆಕೆಯನ್ನು ಇಷ್ಟಪಡುತ್ತಾಳೆ. ಸರೋಜಾ ಮೂರ್ತಿಗೆ ಕೈಗೊಬ್ಬ, ಕಾಲಿಗೊಬ್ಬ ಆಳುಗಳಿದ್ದಾರೆ. ಆಕೆ ಸ್ವಲ್ಪ ಹೊಟ್ಟೆಕಿಚ್ಚಿನಿಂದಲೇ ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವ ಮಹಿಳೆಯನ್ನು ರೆಪ್ಪೆ ಮಿಟುಕಿಸದೆ ನೋಡುತ್ತಾಳೆ) ಅದು ಟೈಪ್‍ರೈಟಿಂಗ್ ಮೆಷಿನ್ನಾ?
ಸರೋಜಾ ಮೂರ್ತಿ : ಹೌದೌದು. ನಾನೂ ರೇಷ್ಮೆ ಸೀರೆ ತೆಗೀಬೇಕು ಅಂತಿದ್ದೆ. ಆದರೆ ಹೊಸದಾಗಿ ತಂದಿದ್ದು. ಸರಿಹೋಗುತ್ತಾ ಅಂತ ನೋಡ್ತಾ ಇದ್ದೆ. ಫಂಕ್ಷನ್ಸ್ ಬಿಟ್ಟು ಬೇರೆ ಕಡೆ ಉಪಯೋಗಿಸಬೇಕು ಅಂದರೆ ಸಂಕೋಚ ಆಗುತ್ತೆ. (ಮುಖದಲ್ಲಿ ಯಾವ ಸಂಕೋಚದ ಭಾವವೂ ಇಲ್ಲ. ಬದಲಿಗೆ ತನ್ನ ರೇಷ್ಮೆ ಸೀರೆಯ ವೈಭವಕ್ಕೆ ಅಂಟಿಕೊಳ್ಳುತ್ತಿದ್ದಾಳೆ - ಸ್ಪಷ್ಟವಾಗಿ ಅಲ್ಲದಿದ್ದರೂ ಚಂಚಲತೆಯಿಂದ. ಎಷ್ಟೇ ಆದರೂ ಪ್ರತಿಷ್ಟೆಯ ಪ್ರಶ್ನೆ)
ಸರೋಜಾ ಮೂರ್ತಿ : ಎಷ್ಟು ಬೇಗ ಮಾಡ್ತೀರ! ಯಾವ ಕೆಲಸವನ್ನಾದರೂ ಮಾಡೋದಕ್ಕೆ ಸಾಧ್ಯವಾದರೆ ಸಂತೋಷವಾಗಲೇಬೇಕು. ಅದರಲ್ಲೂ ಚೆನ್ನಾಗಿ ಮಾಡಿದರೆ!
ಕಾತ್ಯಾಯಿನಿ : ನಿಜ ಹೇಳಬೇಕೆಂದೆರೆ, ತುಂಬಾ ಚೆನ್ನಾಗಿದೆ. (ನಿಷ್ಕಪಟದಿಂದ ಹೊಗಳಿದಳು)
ಸರೋಜಾ ಮೂರ್ತಿ : (ರೇಷ್ಮೆ ಸೀರೆಯ ಹೆಮ್ಮೆಯಿಂದ ಕೆಂಪಾಗಿ) ಹೌದು, ತುಂಬಾ ಚೆನ್ನಾಗಿದೆ. (ಅದರ ಸೌಂದರ್ಯ ಆಕೆಗೆ ಧೈರ್ಯ ಕೊಡುತ್ತದೆ) ದಯವಿಟ್ಟು ಕುಳಿತುಕೊಳ್ಳಿ.
ಕಾತ್ಯಾಯಿನಿ : (ಏನೇ ಆಗಲಿ, ಹೇಳದಿದ್ದರೂ ಕುಳಿತುಕೊಳ್ಳುವಂತಹ ಹೆಣ್ಣು) ನಿಮಗೆ ಪತ್ರಗಳ ಹಲವಾರು ಛಿoಠಿies ಮಾಡಿಕೊಡಬೇಕು ಅನ್ಸುತ್ತೆ? ನನಗೆ ಏನನ್ನೂ ಸ್ಪಷ್ಟವಾಗಿ ಹೇಳಲಿಲ್ಲ. ಎಂಪ್ಲಾಯ್‍ಮೆಂಟ್ ಬ್ಯೂರೊನವರು ಈ ಅಡ್ರೆಸ್‍ನ ಕೈಗೆ ಕೊಟ್ಟು, ಇಲ್ಲಿಗೆ ಹೋಗಿ ಅಂತ ಹೇಳಿದರು, ಅಷ್ಟೇ!
ಸರೋಜಾ ಮೂರ್ತಿ : (ಹೆಚ್ಚುಕಡಿಮೆ ಕೆಲಸದಾಳಿನ ವಿನಯದಿಂದ) ನನ್ನ ಕೆಲಸ ಅಲ್ಲ. ನಮ್ಮ ಯಜಮಾನರದ್ದು. ಮತ್ತೆ ಅವರಿಗೆ ಬೇಕಾಗಿರೋದು copies ಅಲ್ಲ. (ಗಿರೀಶನ ಬಗ್ಗೆ ಹೆಮ್ಮೆಯಿಂದ ಉಬ್ಬುತ್ತಾ) ಸಾಕಷ್ಟು ಪತ್ರಗಳಿಗೆ ಉತ್ತರ ಕಳುಹಿಸಬೇಕು - ನೂರಾರು congratulation letters ಮತ್ತು telegrams.
ಕಾತ್ಯಾಯಿನಿ : (ದಿನದ ಕೆಲಸದಲ್ಲಿ ಇವೆಲ್ಲಾ ಸೇರಿಕೊಂಡಿದೆಯೇನೋ ಎಂಬಂತೆ) ಹೌದಾ?
ಸರೋಜಾ ಮೂರ್ತಿ : (ಪ್ರತಿಯೊಬ್ಬ ಹೆಂಡತಿಯೂ ತನ್ನ ಕರ್ತವ್ಯವನ್ನು ನಿರ್ವಹಿಸಬೇಕೆಂದು ಗಿರೀಶ ನಿರೀಕ್ಷಿಸುತ್ತಾನೆಂಬುದನ್ನು ನೆನಪಿಸಿಕೊಳ್ಳುತ್ತಾ) ನಮ್ಮ ಯಜಮಾನರು ಅಸಾಧಾರಣದವರು. ಅವರಿಗೆ ಭಾರತ ರತ್ನ ಪದವಿ ಕೊಡುತ್ತಿದ್ದಾರೆ. (ವಿರಾಮ. ಆದರೆ ಕಾತ್ಯಾ ನೆಲಕ್ಕೇನೂ ಕುಸಿಯಲಿಲ್ಲ) ಭಾರತ ರತ್ನ ಕೊಡುತ್ತಿರುವುದು ಅವರು ಮಾಡಿರುವ ಸೇವೆಗಳಿಗೆ, ಬೇರೆ ಬೇರೆ ರಂಗಗಳಲ್ಲಿ – (ಏನೋ ಹೊಳೆದು) ಅದೇ ಅವರ ಸೇವೆಗಳಿಗೆ. (ಗಿರೀಶನಿಗೆ ನ್ಯಾಯ ಒದಗಿಸುತ್ತಿಲ್ಲವೆಂದು ಅರಿತುಕೊಂಡು) ನನಗಿಂತ ಅವರೇ ಚೆನ್ನಾಗಿ ಹೇಳ್ತಾರೆ.
ಕಾತ್ಯಾಯಿನಿ : (ವ್ಯಾಪಾರದ ರೀತಿಯಲ್ಲಿ) ಅವರಿಗೆ ಬರುವ ಶುಭಾಶಯಗಳಿಗೆ ಉತ್ತರಿಸಬೇಕು?
ಸರೋಜಾ ಮೂರ್ತಿ : (ಇದು ಕಷ್ಟಕರವಾದ ಕೆಲಸವೆಂದು ಭಯಗೊಳ್ಳುತ್ತಾ) ಹೌದು.
ಕಾತ್ಯಾಯಿನಿ : (ಗೆಲುವಿನಿಂದ) ಈ ಕೆಲಸದಲ್ಲಿ ನನಗೆ ಸ್ವಲ್ಪ ಅನುಭವವಿದೆ. (ಟೈಪ್ ಮಾಡಲು ಆರಂಭಿಸುತ್ತಾಳೆ)
ಸರೋಜಾ ಮೂರ್ತಿ : ಆದರೆ ಅವರ ಉತ್ತರ ಏನೂ ಅಂತ ಗೊತ್ತಿಲ್ಲದೆ, ಶುರು ಮಾಡೋದಿಕ್ಕಾಗಲ್ಲ.
ಕಾತ್ಯಾಯಿನಿ : ಸುಮ್ಮನೆ, specimen ಅಷ್ಟೇ. ಅದು ಮಾಮೂಲಿಯಾಗೇ ಇರುತ್ತಲ್ಲ?
ಸರೋಜಾ ಮೂರ್ತಿ : (ಆಕೆಗೆ ಇದೊಂದು ಹೊಸ ವಿಚಾರ) ಮಾಮೂಲಿಯಾಗಿ? ಸಾಮಾನ್ಯವಾಗಿ ಒಂದು ರೀತಿ ಅಂತ ಇರುತ್ತಾ?
ಕಾತ್ಯಾಯಿನಿ : ಹೌದು. (ಆಕೆ ಟೈಪ್ ಮಾಡಲು ಆರಂಭಿಸುತ್ತಾಳೆ. ಸರೋಜಾ ಮೂರ್ತಿ ಅರ್ಧ ಸುಪ್ತಾವಸ್ಥೆಯಲ್ಲಿ ಆಕೆಯ ಚುರುಕಿನ ಬೆರಳುಗಳನ್ನು ನೋಡಿದಳು. ನಿರುಪಯೋಗಿ ಮಹಿಳೆಯೊಬ್ಬಳು ಉಪಯೋಗಿ ಮಹಿಳೆಯನ್ನು ಗಮನಿಸುತ್ತಾ ನಿಟ್ಟುಸಿರು ಬಿಡುತ್ತಾಳೆ. ಆಕೆಗೇ ಏಕೆಂಬುದು ತಿಳಿದಿಲ್ಲ)
ಕಾತ್ಯಾಯಿನಿ : (ಕೃತಜ್ಞತೆಯಿಂದ) ಹೌದು, ತುಂಬಾ ಸಂತೋಷವಾಗುತ್ತೆ.
ಸರೋಜಾ ಮೂರ್ತಿ :  ಇವರೇ ಸ್ಟೆನೋಗ್ರಾಫರ್.
ಮಿಸೆಸ್‍ಲಮೂರ್ತಿ ; (ಮತ್ತೆ ತನ್ನ ಹೆಚ್ಚುಗಾರಿಕೆಗೆ ಕಾರಣವನ್ನು ನೆನಪಿಸಿಕೊಳ್ಳುತ್ತಾ) ಆದರೆ ಕ್ಷಮಿಸಿ. ಅದೇನೂ ತುಂಬ ಉಪಯೋಗಕ್ಕೆ ಬರಲ್ಲ ಅನ್ಸುತ್ತೆ. ಇದು ಬೇರೆ ವಿಷಯ, ಹಾಗಂತ ನಮ್ಮ ಯಜಮಾನರು ಹೇಳು ಎಂದಿದ್ದಾರೆ. ಈ ಗೌರವವನ್ನು ಪಡೆದುಕೊಳ್ಳಲು ಅವರು ಯಾವ ರೀತಿಯ ಪ್ರಯತ್ನವನ್ನೂ ಮಾಡಲಿಲ್ಲ. ಅವರಿಗೂ ಇದು ಸಂಪೂರ್ಣವಾಗಿ, ಆಶ್ಚರ್ಯಕರವಾಗಿ...
ಕಾತ್ಯಾಯಿನಿ : (ಅವಳಂತೂ ಮಹಾ ವಾಸ್ತವವಾದಿ, ವ್ಯಂಗ್ಯದ ವ್ಯಾಪಾರಿ) ಅದನ್ನೇ ಬರೆದಿರೋದು.
ಸರೋಜಾ ಮೂರ್ತಿ : (ವ್ಯಂಗ್ಯವೆಂದರೆ ತಣ್ಣಗೆ ಪ್ರತಿಕ್ರಿಯೆ ನೀಡುವಾಕೆ) ನಿಮಗೆ ಹೇಗೆ ಗೊತ್ತಾಯ್ತು?
ಕಾತ್ಯಾಯಿನಿ : ಊಹಿಸಿದೆ.
ಸರೋಜಾ ಮೂರ್ತಿ : ಸಾಮಾನ್ಯವಾಗಿ ಹಾಗೇನಾ?
ಕಾತ್ಯಾಯಿನಿ : ಹೌದು.
ಸರೋಜಾ ಮೂರ್ತಿ : ಅವರ್ಯಾರೂ ಪ್ರಶಸ್ತಿ ಪಡೆಯೋದಿಕ್ಕೆ ಪ್ರಯತ್ನ ಮಾಡೋದಿಲ್ವೆ?
ಕಾತ್ಯಾಯಿನಿ : ಅದು ನನಗೆ ಗೊತ್ತಿಲ್ಲ. ಆ ರೀತಿ ಉತ್ತರ ಬರಿಬೇಕೂಂತ ನಮಗೆ ಹೇಳಿದ್ದಾರೆ.
 (ಈಗ ಅವಳಿಗೆ ಪತ್ರದಲ್ಲಿ ಮುಖ್ಯವಾದ ವಿಷಯವೆಂದರೆ, ಒಂದು ಪತ್ರಕ್ಕೆ ಹತ್ತು ರೂ.ನಂತೆ ನೂರು ಪ್ರತಿಗಳು)
ಸರೋಜಾ ಮೂರ್ತಿ : (ಗೊತ್ತಿರುವ ವಿಷಯಕ್ಕೆ ಬರುತ್ತಾ) ಇನ್ನೊಂದು ವಿಷಯ ಹೇಳಬೇಕು. ನಮ್ಮ ಯಜಮಾನರು ಕೀರ್ತಿಗಾಗಿ ಚಿಂತಿಸುವಂತಹ ವ್ಯಕ್ತಿಯಲ್ಲ. ಎಲ್ಲಿಯತನಕ ತನ್ನ ಕರ್ತವ್ಯವನ್ನು...
ಕಾತ್ಯಾಯಿನಿ : ಸರಿ, ಅದನ್ನೇ ಸೇರಿಸ್ತಾ ಇದ್ದೇನೆ.
ಸರೋಜಾ ಮೂರ್ತಿ : ಹೌದಾ? ಆದರೆ ಅವರಿಗೆ ಬೇಕಾಗಿರೋದು ಪ್ರಮಖವಾಗಿ ಒಂದು ವಿಷಯ. ಅದು ಎಲ್ಲರಿಗೂ ಗೊತ್ತಾಗಬೇಕು. ಅಂದರೆ, ತಮಗೆ ಬಂದ ಈ ಪ್ರಶಸ್ತಿಯನ್ನು ಬೇಡ ಎಂದೇ ಹೇಳುತ್ತಿದ್ದರು. ಆದರೆ ಕೇವಲ...
ಕಾತ್ಯಾಯಿನಿ : ಅದನ್ನೂ ಇಲ್ಲಿ ಸೇರಿಸಿದ್ದೇನೆ.
ಸರೋಜಾ ಮೂರ್ತಿ : ಏನನ್ನ?
ಕಾತ್ಯಾಯಿನಿ : (ಓದುತ್ತಾ) ನಿಜವಾಗಿಯೂ ನನ್ನ ಪತ್ನಿಯ ಮತ್ತು ಸ್ನೇಹಿತರ ಸಂತೋಷಕ್ಕಲ್ಲದಿದ್ದರೆ ಪ್ರಶಸ್ತಿಯನ್ನು ನಿರಾಕರಿಸಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತಿದ್ದೆ.
ಸರೋಜಾ ಮೂರ್ತಿ : (ಭಾರವಾದ ಧ್ವನಿಯಲ್ಲಿ) ಅದೇ ವಿಷಯ ಅಂತ ನಿಮಗೆ ಹೇಗೆ ಗೊತ್ತಾಯ್ತು?
ಕಾತ್ಯಾಯಿನಿ : ಇದಾ?
ಸರೋಜಾ ಮೂರ್ತಿ : (ಪ್ರಶ್ನೆ ಕೇಳುವ ಹಕ್ಕನ್ನು ಪಡೆದುಕೊಂಡಿರುವಾಕೆ) ಅವರೆಲ್ಲ ಇದೇ ಕಾರಣಕ್ಕೆ ಒಪ್ಪಿಕೊಳ್ತ್ತಾರಾ?
ಕಾತ್ಯಾಯಿನಿ : ಅದೇ ರೀತಿ ಉತ್ತರ ಬರೀಬೇಕೂಂತ ಹೇಳಿದ್ದಾರೆ.
ಸರೋಜಾ ಮೂರ್ತಿ : (ಯೋಚನಾರಹಿತಳಾಗಿ) ಒಳ್ಳೆ, ನಮ್ಮೆಜಮಾನರು ನಿಮಗೆ ಗೊತ್ತಿದೆಯೇನೋ ಅನ್ನೋ ಹಾಗಿದೆ.
ಕಾತ್ಯಾಯಿನಿ : ನಿಜವಾಗಿಯೂ, ನನಗೆ ಅವರ ಹೆಸರೂ ಸಹ ತಿಳಿದಿಲ್ಲ.
ಸರೋಜಾ ಮೂರ್ತಿ : (ತಕ್ಷಣ ತನಗೆ ಅವನ ಬಗ್ಗೆ ಗೊತ್ತಿದೆ ಎನ್ನುವುದನ್ನು ತೋರಿಸುತ್ತಾ) ಹೋ! ಇದು ಅವರಿಗೆ ಇಷ್ಟವಾಗೋದಿಲ್ಲ.
 (ಈಗ ಆನಂದ ತನ್ನ casual wear ನಲ್ಲಿ ಬರುತ್ತಾನೆ. ಉಲ್ಲಾಸಭರಿತನಾಗಿ ಕಾಣುತ್ತಾ, ಖುಷಿಯಿಂದಿರುವ ಅವನಿಗಾಗಿ ಕಣ್ಣೀರು ಸುರಿಸೋಣ. ಹೇಗಾದರಾಗಲಿ ಕಾಟ ಕೊಡುವ ಕಾತ್ಯಾಯಿನಿಗೂ ಸಹ ಆಶ್ಚರ್ಯವೇ)
ಗಿರೀಶ್ ಮೂರ್ತಿ : (ಕಾಲರ್ ಸರಿಪಡಿಸಿಕೊಳ್ಳುತ್ತಾ) ಹಾಂ! ಹಾಂ! ನಮಸ್ಕಾರ.
ಗಿರೀಶ್ ಮೂರ್ತಿ : ಅವಳು ಇಂದು ಒಬ್ಬ ಸಾಧಾರಣ ಸ್ಟೆನೊಗ್ರಾಫರ್. ನನ್ನವಳಿಗೆ ನಾಲ್ಕು ಜನ ಸೇವಕರಿದ್ದಾರೆ. ಹೊ! ಅವಳು ರೇಷ್ಮೆ ಸೀರೆಯುಟ್ಟುಕೊಂಡು ಬರೋದನ್ನ ನೋಡಬೇಕು!
 (ಅವರಿಬ್ಬರೂ ಒಬ್ಬರನ್ನೊಬ್ಬರನ್ನು ಬಾಯ್ತೆರೆದುಕೊಂಡು ನೋಡುತ್ತಾರೆ. ಆದರೆ ಮಾತುಕತೆಯಿಲ್ಲ. ಮೊದಲು ಆಶ್ಚರ್ಯಗೊಂಡರೂ ನಂತರ ಪರಿಸ್ಥಿತಿ ಹಾಸ್ಯಮಯವಾಗಿ ಕಾಣುತ್ತದೆ. ಆದರೆ ಆನಂದ ಸಿಡಿಲು ಬಡಿದವನಂತೆ ನಿಂತಿದ್ದಾನೆ)
ಸರೋಜಾ ಮೂರ್ತಿ : (ಯಾವುದನ್ನೂ ನೋಡದೆ) ನಾನು ಆಕೆಗೆ ಏನ್ ಹೇಳ್ತಾ ಇದ್ದೆ ಅಂದ್ರೆ...
ಗಿರೀಶ್ ಮೂರ್ತಿ : ಹೆ! ಏನು? (ತನ್ನನ್ನೇ ಸಂಭಾಳಿಸಿಕೊಳ್ಳುತ್ತಾ) ನನಗೆ ಬಿಡು ಸರೋಜ. ನಾನು ನೋಡಿಕೊಳ್ತೇನೆ. (ತಾನು ಯಜಮಾನರನ್ನು ರೇಗಿಸಿದನೇನೋ ಎಂಬ ಭಯಭೀತಿಯೊಂದಿಗೆ ಸರೋಜಾ ಮೂರ್ತಿ ಹೋಗುತ್ತಾಳೆ. ಆನಂದ ಒಳನುಗ್ಗಿದಾಕೆಯನ್ನು ವಿಚಾರಿಸಿಕೊಳ್ಳುತ್ತಾನೆ)
ಗಿರೀಶ್ ಮೂರ್ತಿ : (ಅತ್ಯಂತ ತಿರಸ್ಕಾರದಿಂದ) ನೀನು?
ಕಾತ್ಯಾಯಿನಿ : (ಅದನ್ನು ಒಪ್ಪಿಕೊಳ್ಳುವಂತೆ) ಹೌದು! ಬಹಳ ವಿಚಿತ್ರವಾಗಿದೆ.
ಗಿರೀಶ್ ಮೂರ್ತಿ : ಇಲ್ಲಿಗೆ ಬರೋ ಧೈರ್ಯ ಮಾಡಿದ್ದಕ್ಕೆ ನಾಚಿಕೆ ಆಗಬೇಕು.]
ಕಾತ್ಯಾಯಿನಿ : ನನ್ನನ್ನ ನಂಬಿ. ನನಗೆ ನಿಮಗಿಂತ ಕಡಿಮೆ ಆಶ್ಚರ್ಯವೇನೂ ಆಗಿಲ್ಲ. ಬರೇ ವ್ಯಾಪಾರದ ರೀತೀಲಿ ನನ್ನನ್ನ ಇಲ್ಲಿಗೆ ಕಳುಹಿಸಿದರು. ನನಗೆ ಮನೆಯ ಅಡ್ರೆಸ್ ಮಾತ್ರ ಹೇಳಿದ್ದರು. ಹೆಸರನ್ನೂ ಹೇಳಿರಲಿಲ್ಲ.
ಗಿರೀಶ್ ಮೂರ್ತಿ : (ಅವಳನ್ನು ಕೀಳಾಗಿ ನೋಡುತ್ತಾ) ಸಾಧಾರಣವಾದ ವ್ಯಾಪಾರದ ರೀತಿಯಲ್ಲಿ! ಈ ಮಟ್ಟಕ್ಕೆ ಬಂದು ಬಿದ್ದಿದ್ದೀಯ ಒಬ್ಬ ಸ್ಟೆನೊಗ್ರಾಫರ್!
ಕಾತ್ಯಾಯಿನಿ : (ವಿಚಲಿತಗೊಳ್ಳದೆ) ಹಾಗೆ ತಿಳಿದುಕೊಳ್ಳಿ.
ಗಿರೀಶ್ ಮೂರ್ತಿ : ಅದೂ ಬಹಳ ಕಷ್ಟಪಟ್ಟು.
ಕಾತ್ಯಾಯಿನಿ : (ಕೆಲವು ಕರಾಳ ನೆನಪುಗಳೊಂದಿಗೆ) ಇನ್ನೂ ಕೆಟ್ಟ ಕಷ್ಟಗಳಿಂದ.
ಗಿರೀಶ್ ಮೂರ್ತಿ : (ಅಯ್ಯೊ, ಕೀಳುನಗೆಯೊಂದಿಗೆ) ನನ್ನ ಶುಭಾಷಯಗಳು.
ಕಾತ್ಯಾಯಿನಿ : ಥ್ಯಾಂಕ್ಯೂ ಯು ಗಿರೀಶ್.
ಗಿರೀಶ್ ಮೂರ್ತಿ : (ಅಕೆ ಕುಗ್ಗದೆ ಹೋದುದನ್ನು ನೋಡಿ ರೇಗಿಕೊಂಡು - ಬೇರಾವ ಗಂಡಸಿಗಾದರೂ ಆಗುತ್ತಿದ್ದ ಹಾಗೆ) ಹೆ! ನನ್ನನ್ನ ಏನಂತ ಕರೆದಿರಿ ಮೇಡಮ್?
ಕಾತ್ಯಾಯಿನಿ : ಗಿರೀಶ್ ಅಲ್ಲವೆ? ಅಯ್ಯೊ ದೇವರೇ! ನಾನು ಹೆಚ್ಚುಕಡಿಮೆ ಮರೆತೇಬಿಟ್ಟಿದ್ದೇನೆ.
ಗಿರೀಶ್ ಮೂರ್ತಿ : ನಿನಗೆ ನಾನು ಗಿರೀಶ್ ಅಲ್ಲ. ನನ್ನ ಹೆಸರು, ಗಿರೀಶ್ ಮೂರ್ತಿ?
ಕಾತ್ಯಾಯಿನಿ : ಹೌದು ಅದನ್ನು ಮರೆತಿರಲಿಲ್ಲ. ಅದರೊಂದಿಗೆ ನನ್ನ ಹೆಸರೂ ಸೇರಿಕೊಂಡಿತ್ತು.
ಗಿರೀಶ್ ಮೂರ್ತಿ: (ಉತ್ತಮ ನಡೆತೆಯಿಂದ) ಅದನ್ನು ಬರೆದುಕೊಳ್ಳುವ ಹಕ್ಕನ್ನು ಕಳೆದುಕೊಳ್ಳುವವರೆಗೂ ನಿನ್ನ ಹೆಸರಿನೊಂದಿಗೆ ಆ ಹೆಸರೂ ಇತ್ತು.
ಕಾತ್ಯಾಯಿನಿ : ಹೌದು.
ಗಿರೀಶ್ ಮೂರ್ತಿ : (ಹಿಗ್ಗಿನಿಂದ) ನಿನ್ನನ್ನು ಇಲ್ಲಿ ನೋಡಿದ್ದರಿಂದ ಕೋಪ ಬಂತು. ಆದರೆ ಇನ್ನೊಮ್ಮೆ ಯೋಚಿಸಿದಾಗ ಸಂತೋಷವೂ ಆಯಿತು. (ತನ್ನ ಆಳವಾದ ನೈತಿಕ ಸ್ವಭಾವದಿಂದ) ಇದರಲ್ಲಿ ನಿರ್ದಯವಾದ ನ್ಯಾಯವಿದೆ.
ಕಾತ್ಯಾಯಿನಿ : (ಕರುಣೆಯೊಂದಿಗೆ) ಹೇಳಿ.
ಗಿರೀಶ್ ಮೂರ್ತಿ : ಇಲ್ಲಿಗೆ ನಿನ್ನನ್ನ ಕರೆಸಿದ್ದು ಯಾಕೆ ಅಂತ ಗೊತ್ತಾ?
ಕಾತ್ಯಾಯಿನಿ : ಈಗ ತಾನೇ ಅದನ್ನ ತಿಳಿದುಕೊಳ್ತಾ ಇದ್ದೆ. ನಿಮಗೆ ಭಾರತ ರತ್ನ ಪ್ರಶಸ್ತಿ ಸಿಕ್ಕಿದೆ. ನಿಮಗೆ ಬರೋ ಶುಭಾಷಯ ಪತ್ರಗಳಿಗೆ ಉತ್ತರ ಬರೀಬೇಕು.
ಗಿರೀಶ್ ಮೂರ್ತಿ : ಅದೇ! ಅದೇ! ನೀನು ನನ್ನಲ್ಲಿ ಕೆಲಸಕ್ಕೆ ಬಂದಿದೀಯ.
ಕಾತ್ಯಾಯಿನಿ : ನಾನು! ಯಾರು ಮಿಸೆಸ್ ಮೂರ್ತಿಯಾಗಿಬೇಕಿತ್ತೋ ಅವಳು!
ಕಾತ್ಯಾಯಿನಿ : (ಆಲೋಚಿಸುತ್ತಾ) ಅದು ನಿಮ್ಮನ್ನ ಯೋಚನೆಗೀಡು ಮಾಡುತ್ತೆ ಅಂದುಕೊಂಡಿದ್ದೆ.
ಕಾತ್ಯಾಯಿನಿ : ನನಗೆ ವಾಶ್ ಮಾಡೋದಿಕ್ಕಾದ್ರೂ ಬಿಡ್ತಾರಾ ಅಂತ ಒಂದು ಅನುಮಾನವಿದೆ, ಗಿರೀಶ್ ಮೂರ್ತಿ?
 (ಅವಳ ಅಭಿರುಚಿ ಅವನಿಗೆ ಅಸಹ್ಯವಾಗುತ್ತದೆ)
ಗಿರೀಶ್ ಮೂರ್ತಿ : (ಠೀವಿಯಿಂದ) ನೀನು ಹೋಗಬಹುದು. ಕೆಲವೇ ಮೆಟ್ಟಿಲುಗಳು ನಿನ್ನನ್ನು ನನ್ನ ಮುಗ್ಧ ಮಕ್ಕಳಿಂದ ಬೇರ್ಪಡಿಸುತ್ತವೆ ಅನ್ನೋ ಯೋಚನೇನೇ...
 (ಅವಳ ಮುಖದಲ್ಲಿ ಹೊಸಬೆಳಕು ಬಂದುದೇಕೆ ಎಂಬುದೇ ಅವನಿಗೆ ಅರ್ಥವಾಗಲಿಲ್ಲ)
ಕಾತ್ಯಾಯಿನಿ : (ನಿಧಾನವಾಗಿ) ನಿಮಗೆ ಮಕ್ಕಳಿದ್ದಾರ?
ಗಿರೀಶ್ ಮೂರ್ತಿ : (ಗರ್ವದಿಂದ) ಎರಡು.
 (ಅವಳೇಕೆ ಉತ್ತರ ಕೊಡಲು ಅಷ್ಟೊಂದು ನಿಧಾನ ಮಾಡುತ್ತಾಳೆಂಬುದು ಅವನಿಗೆ ಅರ್ಥವೇ ಆಗಲಿಲ್ಲ)
ಕಾತ್ಯಾಯಿನಿ : (ಅಧಿಕ ಪ್ರಸಂಗತನದಿಂದ) ಬಹಳ ಒಳ್ಳೆಯ ಸಂಖ್ಯೆ.
ಗಿರೀಶ್ ಮೂರ್ತಿ : (ಭಾರಿ ಜಂಭದಿಂದ) ಎರಡೂ ಗಂಡು.
ಕಾತ್ಯಾಯಿನಿ : ಎಲ್ಲದರಲ್ಲೂ ಯಶಸ್ವಿ, ಅವೂ ನಿಮ್ಮ ಹಾಗೆ ಇವೆಯಾ, ಗಿರೀಶ್ ಮೂರ್ತಿ?
ಗಿರೀಶ್ ಮೂರ್ತಿ : (ಉಬ್ಬಿಹೋಗಿ) ಅವೂ ನನ್ನ ಹಾಗೆಯೇ!
ಕಾತ್ಯಾಯಿನಿ : ತುಂಬಾ ಒಳ್ಳೆಯದು. (ಇಂತಹ ವಿಷಯದಲ್ಲಿ ಅವಳು ಭಂಡಳಾಗಿರಬಹುದು)
ಗಿರೀಶ್ ಮೂರ್ತಿ : ದಯವಿಟ್ಟು, ಹೊರಟು ಹೋಗ್ತೀಯಾ?
ಕಾತ್ಯಾಯಿನಿ : ನನ್ನ ಬಾಸ್‍ಗೆ ಏನು ಹೇಳಲಿ?
ಗಿರೀಶ್ ಮೂರ್ತಿ : ಅದು ನನಗೆ ಸಂಬಂಧಪಟ್ಟಿದ್ದಲ್ಲ.
ಕಾತ್ಯಾಯಿನಿ : ನಿಮ್ಮ ಹೆಂಡತಿಗೆ ಏನು ಹೇಳ್ತೀರಾ?
ಗಿರೀಶ್ ಮೂರ್ತಿ : ನಾನು ಏನೇ ಹೇಳಿದ್ರೂ ನನ್ನ ಹೆಂಡತಿ ಎರಡನೇ ಮಾತಿಲ್ಲದೆ ಒಪ್ಪಿಕೊಳ್ಳುತ್ತಾಳೆಂದು ಹೆಮ್ಮೆಯಿಂದ ಹೇಳಬಲ್ಲೆ. (ಆಕೆ ನಗುತ್ತಾಳೆ. ಅದನ್ನು ಮುಂದಿನ ಮಾತು ವಿವರಿಸದಿದ್ದರೆ ಆಕೆ ನಕ್ಕಿದ್ದು ಯಾಕೆಂದು ದೇವರಿಗೇ ಗೊತ್ತು)
ಕಾತ್ಯಾಯಿನಿ : ಅದೇ ಗಿರೀಶ್.
ಗಿರೀಶ್ ಮೂರ್ತಿ : ಅಂದರೆ?
ಕಾತ್ಯಾಯಿನಿ : ಗಂಡಸರು, ಮತ್ತೆ ಹೆಂಗಸರ ಬಗ್ಗೆ ನಿಮಗಿರುವ ಆಳವಾದ ತಿಳುವಳಿಕೆ ಬಗ್ಗೆ, ಇನ್ನೂ ಆ ಹಳೇ ನಂಬಿಕೆಯನ್ನೇ ಇಟ್ಟುಕೊಂಡಿದ್ದೀರಲ್ಲಾ, ಅದಕ್ಕೇ ನಗು ಬಂತು.
ಗಿರೀಶ್ ಮೂರ್ತಿ : (ಅವಳ ನೈತಿಕತೆಯಂತೇ ಅವಳ ಬುದ್ಧಿವಂತಿಕೆಯೂ ಕೂಡ ಕಡಿಮೆಯೆಂದೇ ಯೋಚಿಸುತ್ತಾ) ನನ್ನ ಹೆಂಡತಿ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ ಎಂದುಕೊಂಡಿದ್ದೇನೆ.
ಕಾತ್ಯಾಯಿನಿ : ನನಗೂ ಹಾಗೇ ಅನ್ಸುತ್ತೆ. ಒಂದು ವಿಷಯ ನೆನಪಿಗೆ ಬರ್ತಾ ಇದೆ. ನಾನು ನಿಮ್ಮ ಹೆಂಡತಿಯಾಗಿದ್ದಾಗಲೂ, ನನ್ನ ಬಗ್ಗೆ ನೀವು ಹೀಗೆ ತಿಳಿದುಕೊಂಡಿದ್ರಿ. (ಅವಳ ಜೊತೆ ಅವನು ಸುಮ್ಮನೆ ಸಮಯ ಹಾಳು ಮಾಡುತ್ತಿದ್ದಾನೆ. ಬಾಗಿಲ ಕಡೆ ಕೈ ತೋರಿಸುತ್ತಿದ್ದಾನೆ. ಆದರೆ ಆಕೆ ಕೆಟ್ಟದಾಗಿ ಹೋಗುವಾಕೆ ಅಲ್ಲ) ಆಯ್ತು ಬರ್ತೇನೆ, ಗಿರೀಶ್ ಮೂರ್ತಿ. ಬೆಲ್ ಮಾಡೋದಿಲ್ವೆ? ನಾಲ್ಕು ಜನ ಸೇವಕರು ನನಗೆ ದಾರಿ ತೋರಿಸುವುದಕ್ಕೆ?
 (ಆದರೆ ಆತ ಸಂಕೋಚಪಡುತ್ತಾನೆ)
ಗಿರೀಶ್ ಮೂರ್ತಿ : (ಅವನು ಅವನೇ ಆಗಿದ್ದರೂ ಸಹ) ನೀನು ಇಲ್ಲೇ ಇರೋದ್ರಿಂದ ನಿನ್ನಿಂದ ಒಂದು ವಿಷಯ ಗೊತ್ತಾಗಬೇಕು. (ಕಡಿಮೆ ಕುತೂಹಲದಿಂದ ಕೇಳಬೇಕೆಂದು ಯೋಚಿಸುತ್ತಾ) ಹೇಳು, ಯಾರವನು?
 (ವಿಚಿತ್ರ ಹೆಂಗಸು ಆಕೆ ಆತನಿಗೆ ಯಾವಾಗಲೂ ವಿಚಿತ್ರವಾಗಿದ್ದಳೆಂದು ಈಗ ಸ್ಪಷ್ಟವಾಗುತ್ತಿದೆ - ಸಹನೆಯಿಂದ ನಗುತ್ತಿದ್ದಾಳೆ)
ಕಾತ್ಯಾಯಿನಿ : ನಿಮಗೆ ಹುಡುಕೋದಿಕ್ಕೆ ಆಗಲೇ ಇಲ್ವಾ?
ಗಿರೀಶ್ ಮೂರ್ತಿ : ನನಗೆ ಯಾವಾಗಲೂ ಸ್ಪಷ್ಟವಾಗಲಿಲ್ಲ.
ಗಿರೀಶ್ ಮೂರ್ತಿ : ನೀನ್ ಹೇಳ್ತೀಯಾ ತಾನೆ? ಸರಿ ಹಾಗಾದರೆ. ಮಾತು ಅಂದ್ರೆ ಮಾತು.
ಗಿರೀಶ್ ಮೂರ್ತಿ : (ತಿರಸ್ಕಾರದ ನಗೆ ನಕ್ಕು) ಅವನು ನಿನ್ನನ್ನ ಬೇಗನೆ ಬಿಟ್ಟುಬಿಟ್ಟ ಅನ್ನೋದಂತು ಸ್ಪಷ್ಟವಾಗಿದೆ.
ಕಾತ್ಯಾಯಿನಿ : ಹೌದು, ತುಂಬಾ ಬೇಗ.
ಗಿರೀಶ್ ಮೂರ್ತಿ : ನಾನು ನಿನಗೆ ಮೊದಲೇ ಹೇಳಬೇಕೂ ಅಂತಿದ್ದೆ. (ಆಕೆ ಮೋನಾಲಿಸಾ ನಗೆಯೊಂದಿಗೆ ಆತನನ್ನು ಪರೀಕ್ಷಿಸುತ್ತಿದ್ದಾಳೆ. ಕರಡಿ ಜಾತಿಗೆ ಸೇರಿದ ಮನುಷ್ಯ ದೈನ್ಯದಿಂದ ಕೇಳಬೇಕಾಯಿತು) ಅವನು ಯಾರು? ಅದಾಗಿದ್ದು ಬಹಳÀ ಹಿಂದೆ, ಮತ್ತೆ ಈಗ ನಮ್ಮಿಬ್ಬರಿಗೂ ಅದರಿಂದ ಏನೂ ಆಗಲ್ಲ. ಕಾತ್ಯಾ, ಅವನು ಯಾರು ಹೇಳು?
ಕಾತ್ಯಾಯಿನಿ : (ತಾಯಿಯಂತೆ ತಲೆ ಅಲ್ಲಾಡಿಸುತ್ತಾ) ಕೇಳದಿದ್ದರೇ ಉತ್ತಮ.
ಗಿರೀಶ್ ಮೂರ್ತಿ : ನಾನು ಕೇಳೇ ಕೇಳ್ತಿನಿ. ಹೇಳು.
ಕಾತ್ಯಾಯಿನಿ : ನಿಮಗೆ ಹೇಳದೆ ಇರೋದೇ ಒಳ್ಳೆಯದು.
ಗಿರೀಶ್ ಮೂರ್ತಿ : ಹಾಗಾದರೆ, ದೇವರೇ, ನನ್ನ ಸ್ನೇಹಿತರಲ್ಲೇ ಒಬ್ಬನು? ಯಾರು? ಕೇಶವನಾ? (ತಲೆ ಅಲ್ಲಾಡಿಸುತ್ತಾಳೆ) ನನ್ನ ಮನೆಗೆ ಈಗಲೂ ಬರುತ್ತಿರುವವರಲ್ಲಿ ಒಬ್ಬನಿರಬೇಕು.
ಕಾತ್ಯಾಯಿನಿ : ಇಲ್ಲ ಅನ್ಸುತ್ತೆ. (ನೆನಪಿನಾಳಕ್ಕೆ ಇಳಿಯುತ್ತಾ) ಹತ್ತು ವರ್ಷದ ಹಿಂದೆ! ಆ ರಾತ್ರಿ ನೀವು ಮನೆಗೆ ಹೋದಾಗ ನನ್ನ ಕಾಗದವನ್ನು ನೋಡಿದಿರಾ?
ಗಿರೀಶ್ ಮೂರ್ತಿ : (ಅಶಾಂತಿಯಿಂದ) ಹೌದು.
ಕಾತ್ಯಾಯಿನಿ : ಆದನ್ನು ವಿಸ್ಕಿ ಬಾಟಲಿಗೆ ಒರಗಿಸಿಟ್ಟಿದ್ದೆ. ನೀವದನ್ನ ನೋಡೇ ನೋಡ್ತೀರ ಅಂತ ಯೋಚಿಸಿದೆ. ಆ ರೂಮು ಸಹ ಇದಕ್ಕಿಂತ ಬೇರೆ ರೀತಿಯೇನೂ ಇರಲಿಲ್ಲ. ಕುರ್ಚಿ ಮೇಜುಗಳನ್ನು ಹೀಗೆ ಬಹಳ ಅಂದವಾಗಿ ಜೋಡಿಸಿತ್ತು. ಹಾಂ! ನನಗೀಗ ಎಲ್ಲವೂ ಚೆನ್ನಾಗಿ ನೆನಪಿಗೆ ಬರುತ್ತಿದೆ. ನೀವು ನನ್ನನ್ನು ನೋಡಲಿಲ್ಲ. ಗಿರೀಶ್, ಶಾಲನ್ನು ಹೊದ್ದುಕೊಂಡು, ಕಾಗದವನ್ನು ಅಲ್ಲಿಟ್ಟು, ಕೊನೆಬಾರಿಗೆ ಎಲ್ಲಾ ಕಡೆ ಒಂದು ಸುತ್ತು ಹಾಕಿ, ನಂತರ ರಾತ್ರಿಯಲ್ಲಿ ನುಸುಳಿಕೊಂಡು ಅವನನ್ನು...
ಗಿರೀಶ್ ಮೂರ್ತಿ: ಯಾರನ್ನು?
ಕಾತ್ಯಾಯಿನಿ : ಅವನನ್ನೇ. ಗಂಟೆಗಳು ಉರುಳಿದವು. ರೂಮಿನಲ್ಲಿ ಗಡಿಯಾರದ ಟಿಕ್‍ಟಿಕ್ ಶಬ್ಧ ಬಿಟ್ಟರೆ ಬೇರೆ ಯಾವ ಶಬ್ಧವೂ ಇಲ್ಲ. ಸುಮಾರು ಮಧ್ಯರಾತ್ರಿಯ ಸಮಯ. ನೀವೊಬ್ಬರೇ ವಾಪಸ್ ಬಂದಿರಿ. ನೀವು...
ಗಿರೀಶ್ ಮೂರ್ತಿ : (ಒರಟಾಗಿ) ನಾನೇನು ಒಬ್ಬನೇ ಇರಲಿಲ್ಲ.
ಕಾತ್ಯಾಯಿನಿ : (ಮನಸ್ಸಿನಲ್ಲಿದ್ದ ಚಿತ್ರ ಹಾಳಾಯಿತು) ಇಲ್ಲ? ಹೊ! (ಆಪಾದಿತಳ ದನಿಯಲ್ಲಿ) ಹಾಗಾದರೆ ಇಷ್ಟು ವರ್ಷಗಳ ಕಾಲ ನಾನು ತಪ್ಪಾಗಿ ಅರ್ಥಮಾಡಿಕೊಂಡಿದ್ದೆ. (ಅವನ ಮುಖವನ್ನೇ ಗಮನಿಸುತ್ತಾಳೆ) ಏನೋ, ತುಂಬಾ ಕುತೂಹಲಕಾರವಾದದ್ದೇ ನಡೆದಿತ್ತೇನೋ? ಅಲ್ಲಾ?
ಗಿರೀಶ್ ಮೂರ್ತಿ : (ಗದರಿಸುತ್ತಾ) ತುಂಬಾ ಕೋಪ ಬರಿಸುವಂತದ್ದೇನೋ.
ಕಾತ್ಯಾಯಿನಿ : (ಪುಸಲಾಯಿಸುತ್ತಾ) ದಯವಿಟ್ಟು ಅದೇನೂಂತ ಹೇಳಿ.
ಗಿರೀಶ್ ಮೂರ್ತಿ : ಅದರ ಬಗ್ಗೆ ಈಗ ಮಾತಾಡೋದು ಬೇಡ. ಆ ಮನುಷ್ಯ ಯಾರೂಂತ ಹೇಳು. ತನ್ನ ಹೆಂಡತಿ ಯಾರೊಂದಿಗೆ ಓಡಹೋದಳು ಅಂತ ತಿಳಿದುಕೊಳ್ಳೋದಿಕ್ಕೆ ಗಂಡನಿಗೆ ಹಕ್ಕಿದೆ.
ಕಾತ್ಯಾಯಿನಿ : (ಯಾರಿಗಾದರೂ ರೋಸಿಹೋಗುವಂತೆ ತನ್ನ ನಾಲಿಗೆಯನ್ನು ಸದಾ ಸಿದ್ದವಾಗಿಟ್ಟುಕೊಂಡಿರುವಾಕೆ) ಖಂಡಿತವಾಗಿ. ಹಾಗೇನೇ ಅದನ್ನ ತನ್ನ ಗಂಡ ಹೇಗೆ ತೆಗೆದುಕೊಂಡ ಅಂತ ತಿಳಿದುಕೊಳ್ಳೋಕೆ ಹೆಂಡತಿಗೆ ಹಕ್ಕಿದೆ. (ಹೆಂಗಸರಿಗೆ ಇಷ್ಟವಾದ ಚೌಕಾಸಿಯ ಬುದ್ಧಿ ಇಲ್ಲಿ ಅವಳ ಸಹಾಯಕ್ಕೆ ಬರುತ್ತದೆ) ಗಿರೀಶ್, ಒಂದು ಮಾತು. ಅಲ್ಲಿ ಏನಾಯ್ತು ಅಂತ ನೀವ್ ಹೇಳಿ. ಆತ ಯಾರೂಂತ ನಾನ್ ಹೇಳ್ತೀನಿ.
ಕಾತ್ಯಾಯಿನಿ : (ಕುಟ್ಟಿ ಪುಡಿಪುಡಿಯಾಗದೆ) ಅದನ್ನ ಮತ್ತೆ ನೋಡಬೇಕು. ತೋರಿಸಿ. (ಅವನ ಕಣ್ಣು ಮೇಜಿನತ್ತ ಹಾಯುತ್ತಿರುವುದನ್ನು ಗಮನಿಸಿದಳು)
(ಇದೇ ಪ್ರಪಥಮ ಬಾರಿಗೆ ಅವರಿಬ್ಬರೂ ಒಪ್ಪಂದಕ್ಕೆ ಬರುತ್ತಾರೆ ಮತ್ತು ಗಿರೀಶ್ ಮೂರ್ತಿ ತನ್ನನ್ನೇ ಮರೆತು ಸೋಫಾದಲ್ಲಿ ಅವಳ ಪಕ್ಕವೇ ಕುಳಿತುಕೊಳ್ಳುತ್ತಾನೆ. ಆತ ಅವಳಿಗೆ ಏನನ್ನೋ ಹೇಳಬೇಕೆನ್ನುವುದನ್ನು ಮಾತ್ರವೇ ಯೋಚಿಸುತ್ತಿದ್ದಾನೆ. ಆದರೆ ಆಕೆ ತನ್ನ ಜಾಗದ ಬಗ್ಗೆ ಎಚ್ಚರದಿಂದ ಇದ್ದಾಳೆ)
ಕಾತ್ಯಾಯಿನಿ : (ಅಭಿರುಚಿಯಿಲ್ಲದೆ) ಅದೇ, ಹಳೇ ರೀತೀನೆ. (ಅವನು ಕೋಪದಿಂದ ದೂರ ಸರಿದು ಕುಳಿತುಕೊಳ್ಳುತ್ತಾನೆ) ಮುಂದುವರೆಸಿ, ಗಿರೀಶ್.
ಗಿರೀಶ್ ಮೂರ್ತಿ : (ಯಾವುದನ್ನೇ ಆಗಲಿ ತನ್ನ ಉಪಯೋಗಕ್ಕೆ ಬರುವಂತೆ ಹಾರಿಸಿ ಮಾತನಾಡುವವ) ಸರಿ, ನಿನಗೇ ಗೊತ್ತಿದ್ದ ಹಾಗೆ, ಆ ರಾತ್ರಿ ಕ್ಲಬ್‍ನಲ್ಲಿ ಊಟ ಮಾಡ್ತಾ ಇದ್ದೆ.
ಕಾತ್ಯಾಯಿನಿ : ಹೌದು.
ಗಿರೀಶ್ ಮೂರ್ತಿ : ಆನಂದಕುಮಾರ್ ಕಾರಿನಲ್ಲೇ ಮನಗೆ ಬಂದೆ. ಲಂಬೇಶ್ ನನ್ನ ಜೊತೆಯಲ್ಲಿದ್ದ. ಒಂದರೆಡು ನಿಮಿಷ ಒಳಗಡೆ ಬನ್ನಿಅಂತ ಕರೆದೆ.
ಕಾತ್ಯಾಯಿನಿ : ಆನಂದಕುಮಾರ್, ಲಂಬೇಶ್? ಹಾಂ, ಇನ್ನೂ ನೆನಪಿದೆ. ಲಂಬೇಶ್ ಪರಿಷತ್‍ನಲ್ಲಿದ್ದರು.
ಗಿರೀಶ್ ಮೂರ್ತಿ : ಇಲ್ಲ, ಅದು ಆನಂದಕುಮಾರ್. ಅವರಿಬ್ಬರೂ ನನ್ನ ಜೊತೆ ಮನೆಗೆ ಬಂದರು, ಆಮೇಲೆ... (ಇದ್ದಕ್ಕಿದ್ದಂತೆ ಕೋಪದಿಂದ) ಅವನೇನಾ?
ಕಾತ್ಯಾಯಿನಿ : (ದಿಗ್ಭ್ರಮೆಯಾಗಿ) ಯಾರು?
ಗಿರೀಶ್ ಮೂರ್ತಿ : ಲಂಬೇಶನಾ?
ಕಾತ್ಯಾಯಿನಿ : ಏನು?
ಡಾ.ಆನಂದಮೂತಿ : ಆ ಮನುಷ್ಯ.
ಕಾತ್ಯಾಯಿನಿ : ಯಾವ ಮನುಷ್ಯ? (ಅರ್ಥಮಾಡಿಕೊಂಡು) ಹೊ! ಹೊ! ಇಲ್ಲಾ! ಅವರು ನಿಮ್ಮ ಜೊತೆ ಮನೆಗೆ ಬಂದರು ಅಂತ ಹೇಳ್ತಾ ಇದೀರಾ ಅಂದುಕೊಂಡೆ.
ಗಿರೀಶ್ ಮೂರ್ತಿ : ಬಹುಶಃ ಕತ್ತಲಾಗಿತ್ತು.
ಕಾತ್ಯಾಯಿನಿ : ಕತ್ತಲಾಗಿರಲಿಲ್ಲ. ಇರಲಿ ಹೇಳಿ.
ಗಿರೀಶ್ ಮೂರ್ತಿ : ಕ್ಲಬ್‍ನಲ್ಲಿ ನಡೆದ ಮಾತುಕತೆಯನ್ನ ಮುಗಿಸೋದಿಕ್ಕೆ ಅಂತ ಒಳಗಡೆ ಬಂದರು.
ಕಾತ್ಯಾಯಿನಿ : ನೋಡಿದ್ರೆ, ಮಾತುಕತೆ ಬಹಳ ಕುತೂಹಲಿಕಾರಿಯಾದದ್ದೇ ಅಂತ ಕಾಣ್ಸುತ್ತೆ.
ಗಿರೀಶ್ ಮೂರ್ತಿ : ಕೈಗಾರಿಕೋದ್ಯಮಿಯ ಹೆಂಡತಿಯೊಬ್ಬಳು ಯಾರ ಜೊತೇನೋ ಓಡಿಹೋಗಿದ್ದಳು. ಅದೇ ವಿಷಯ ಪೇಪರ್ ತುಂಬಾ ತುಂಬಿಹೋಗಿತ್ತು. ಅವಳ ಹೆಸರೇನೋ...
ಕಾತ್ಯಾಯಿನಿ : ಅದು ಬೇಕಾ?
ಗಿರೀಶ್ ಮೂರ್ತಿ : ಬೇಡ ಬಿಡು. (ಇಲ್ಲಿಗೆ ಆ ಹೆಂಗಸಿನ ಕಥೆ ಮುಗೀತು) ಆ ವಿಷಯದ ಬಗ್ಗೇನೇ ಮಾತಾಡ್ತಾ ಇದ್ವಿ. (ವಕ್ರಮುಖ ಧರಿಸಿ) ನಾನು ಸ್ವಲ್ಪ ಬಿಸಿಯಾಗೇ ಇದ್ದೆ.
ಕಾತ್ಯಾಯಿನಿ : (ಅಹಿತಕರ ಆನಂದದಿಂದ) ನಾನು ಊಹಿಸಿಕೊಳ್ಳಬಲ್ಲೆ. ಅವನಿಗೆ ಸರಿಯಾಗೇ ಆಯ್ತು. ತನ್ನ ಹೆಂಡತಿಯನ್ನು ನೋಡಿಕೊಳ್ಳೋದಿಕ್ಕೆ ಆಗದ ಮನಷ್ಯ, ಅವಳನ್ನು ಕಳೆದುಕೊಳ್ಳೋದೆ ಸರಿಅಂತ ನೀವು ಹೇಳ್ತಾ ಇದ್ದಿರಬಹುದು.
ಗಿರೀಶ್ ಮೂರ್ತಿ : (ಕಹಿಯಾಗಿ) ಬಹುಶಃ ಅದೇ ರೀತಿ ಏನೋ.
ಕಾತ್ಯಾಯಿನಿ : ಮತ್ತೆ, ಅಷ್ಟೂ ಸಮಯ ಕಾಗದ ಅಲ್ಲೇ ಬಿದ್ದಿತ್ತು, ಕಾಯ್ತಾ. ಬಹುಶಃ ಗಡಿಯಾರ ಬಿಟ್ಟರೆ ನಿಮ್ಮಲ್ಲಿ ಯಾರಿಗೂ ಕಾಗದವೊಂದು ಅಲ್ಲಿದೆಯೆಂದು ಗೊತ್ತಿರಲಿಲ್ಲ. ಗಿರೀಶ್, ನೀವು ತುಂಬಾ ಒಳ್ಳೆಯವರು, ಅಲ್ವಾ? ಹೇಳಿ. (ಅವನ ಮುಖದಲ್ಲಿ ಒಳ್ಳೆಯತನದ ಯಾವ ಲಕ್ಷಣವೂ ಇಲ್ಲ. ಅನಕ್ಷರಸ್ಥ ಮಹಿಳೆ ತಪ್ಪು ವಿಶೇಷಣವನ್ನು ಉಪಯೋಗಿಸಿದ್ದಾಳೆ) ಆಂ, ಕಾಗದದಲ್ಲಿ ಏನು ಬರೆದಿದ್ದೆ ಅನ್ನೋದೇ ಮರೆತು ಹೋಗಿದೆ.
ಗಿರೀಶ್ ಮೂರ್ತಿ : (ಅವಳನ್ನು ಕುಟ್ಟಿ ಪುಡಿಪುಡಿ ಮಾಡುವಂತೆ) ನನಗೂ ಅಷ್ಟೆ. ಅದರೆ ಅದು ಇನ್ನೂ ನನ್ನಲ್ಲಿ ಇದೆ.
ಗಿರೀಶ್ ಮೂರ್ತಿ : ಅದು ನಿನಗೆ ನನ್ನ ಪ್ರೆಸೆಂಟೇಷನ್ ತಗೊ. (ಆ ದುರ್ವಿಧಿಯ ಕಾಗದ, ಸತ್ತುಹೋದ ಸಣ್ಣ ವಸ್ತು, ಬೀಗ ಜಡಿದ ಡ್ರಾಯರಿನಿಂದ ಬೆಳಕಿಗೆ ಬಂತು)
ಕಾತ್ಯಾಯಿನಿ : (ತೆಗೆದುಕೊಳ್ಳುತ್ತಾ) ಹೌದು ಗಿರೀಶ್, ಇದೇ ಕಾಗದ. ಅದ್ಹೇಗೆ ಮುದುರಿದ್ದೀರಾ! (ಅವಳು ಓದುತ್ತಾಳೆ, ಕುತೂಹಲ ಇಲ್ಲ ಅಂತೇನಿಲ್ಲ)
ಕಾತ್ಯಾಯಿನಿ : ತಿಳಿದುಕೊಳ್ಳಲೇಬೇಕು ಅಂತ ನಿರ್ಧಾರ ಮಾಡಿದ್ದೀರಾ?
 “ಪ್ರಿಯ ಯಜಮಾನರೇ - ಹಾಗೆಂದು ಕಡೆಯ ಬಾರಿಗೆ ಕರೆಯುತ್ತಿದ್ದೇನೆ - ನಾನು ಹೋಗುತ್ತಿದ್ದೇನೆ. ನೀವು ಹೇಳೋ ಹಾಗೆ, ಓಡಿಹೋಗುತ್ತಿದ್ದೇನೆ. ನನ್ನ ಬಗ್ಗೆ ಕ್ಷಮೆಯನ್ನು ಕೇಳುವುದಕ್ಕೆ ಅಥವಾ ವಿವರಿಸುವುದಕ್ಕೆ ಪ್ರಯತ್ನ ಪಡುವುದಿಲ್ಲ. ಏಕೆಂದರೆ ನೀವು ಕ್ಷಮಿಸುವುದಿಲ್ಲ ಅಥವಾ ವಿವರಣೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ನಿಮಗೆ ಸ್ವಲ್ಪ ಆಘಾತವಾಗಬಹುದು; ಆದರೆ ಅದು ಕೇವಲ ನಿಮ್ಮ ಜಂಭಕ್ಕೆ; ನಿಮ್ಮಂತಹ ಒಬ್ಬ ಗಂಡಸನ್ನು ಯಾವ ಹೆಂಗಸಾದರೂ ಬಿಟ್ಟುಬಿಡುವಷ್ಟು ಮೂರ್ಖಳಾಗಬಹುದೇ ಎಂಬುದು ನಿಮಗೆ ಅತ್ಯಂತ ಆಶ್ಚರ್ಯದ ವಿಷಯವಾಗಬಹುದು. ನಿಮಗೆ ಸೇರಿದ ಯಾವುದನ್ನೂ ತೆಗೆದುಕೊಳ್ಳುತ್ತಿಲ್ಲ. ನೀವು ಸಂತೋಷದಿಂದಿರಿ. ನಿಮ್ಮ ಅವಿಶ್ವಾಸಿ - ಕಾತ್ಯಾ.
ದಯವಿಟ್ಟು ಗಮನಿಸಿ: ಆತ ಯಾರೆಂದು ಹುಡುಕುವ ಅಗತ್ಯವಿಲ್ಲ. ನೀವು ಪ್ರಯತ್ನಿಸಬಹುದು. ಆದರೆ ಯಶಸ್ವಿಯಾಗುವುದಿಲ್ಲ. (ಆ ಕೊಳಕು ಪದಾರ್ಥವನ್ನು ಆಕೆ ಜೋಪಾನವಾಗಿ ಮಡಿಚಿಟ್ಟುಕೊಳ್ಳುತ್ತಾಳೆ) ಇದನ್ನು ನಾನೇ ಇಟ್ಟುಕೊಳ್ಳಬಹುದಾ?
ಗಿರೀಶ್ ಮೂರ್ತಿ : ಖಂಡಿತವಾಗಿಯೂ ಇಟ್ಕೊ.
ಕಾತ್ಯಾಯಿನಿ : (ನಿರ್ಲಜ್ಜೆಯಿಂದ) ಟೈಪ್ ಮಾಡಿದ ಪ್ರತಿಯೊಂದು ಬೇಕಿದ್ದರೆ...
ಗಿರೀಶ್ ಮೂರ್ತಿ : (ತನ್ನ ಅಜ್ಜಿಯನ್ನು ಹೆದರಿಸುತ್ತಿದ್ದ ಸ್ವರದಲ್ಲಿ) ಅದು ನಿನ್ನ ಕೆಲಸವಲ್ಲ. (ಅಳುಕುತ್ತಾ) ಅದನ್ನು ಕೊನೆಯಲ್ಲಿ ಅವರಿಗೆ ತೋರಿಸಬೇಕಾಯಿತು.
ಕಾತ್ಯಾಯಿನಿ : ಅವರು ಅದನ್ನು ಓದುತ್ತಾ ಇದ್ದುದನ್ನು ಚಿತ್ರಿಸಿಕೊಳ್ಳಬಲ್ಲೆ.
ಗಿರೀಶ್ ಮೂರ್ತಿ : ಭಿಕಾರಿ ದರ್ಜಿಯ ಮಗಳು.
ಕಾತ್ಯಾಯಿನಿ : ನಾನು ಯಾವತ್ತೂ ಅಷ್ಟೆ.
ಗಿರೀಶ್ ಮೂರ್ತಿ : ನಾವು ಎರಡು ದಿನ ಎಲ್ಲಾ ಕಡೆ ಹುಡುಕಿದ್ವಿ.
ಕಾತ್ಯಾಯಿನಿ : ಖಾಸಗಿ ಪತ್ತೇದಾರರೇ?
ಗಿರೀಶ್ ಮೂರ್ತಿ : ಅವರಿಗೆ ನಿನ್ನ ದಾರಿ ಸಿಗಲಿಲ್ಲ.
ಕಾತ್ಯಾಯಿನಿ : (ನಗುತ್ತಾ) ಇಲ್ಲಾ?
ಗಿರೀಶ್ ಮೂರ್ತಿ : ಕೊನೆಗೆ, ಅಪರಿಚಿತ ವ್ಯಕ್ತಿಯ ಜೊತೆ ಓಡಿ ಹೋಗಿದ್ದಾಳೆ ಎನ್ನುವ ಕಾರಣದ ಮೇಲೆ ಕೋರ್ಟಿನಲ್ಲಿ ಡೈವೋರ್ಸ್ ಸಿಕ್ತು. ನಾನು ಸ್ವತಂತ್ರನಾದೆ.
ಕಾತ್ಯಾಯಿನಿ : ಅದನ್ನು ಪೇಪರ್‍ನಲ್ಲಿ ನೋಡಿದೆ. ನಿಮ್ಮ ಬಗ್ಗೆ ಕೇಳಿದ್ದು ಅದೇ ಕೊನೆ.
ಗಿರೀಶ್ ಮೂರ್ತಿ : (ಪ್ರತಿಯೊಂದು ಪದವೂ ಆಕೆಗೆ ಒಂದೊಂದು ಹೊಡೆತ) ನನಗೆ ಸಾಧ್ಯವಾದ ಕೂಡಲೇ ಮತ್ತೆ ಮದುವೆಯಾದೆ.
ಕಾತ್ಯಾಯಿನಿ : ಜನ ಹೇಳ್ತಾರೆ, ಅದು ಮೊದಲನೆ ಹೆಂಡತಿಗೆ ವರ ಕೊಟ್ಟ ಹಾಗೆ ಅಂತ.
ಗಿರೀಶ್ ಮೂರ್ತಿ : ನಾನು ಅವರಿಗೆ ತೋರಿಸಿಕೊಟ್ಟೆ.
ಕಾತ್ಯಾಯಿನಿ : ಒಬ್ಬ ಹೆಂಗಸು ಮೂರ್ಖಳಾದರೆ, ಆರಿಸಿಕೊಳ್ಳೋದಿಕ್ಕೆ ಸಾಕಷ್ಟಿದಾರೆ ಅನ್ನೋದನ್ನ ಅವರಿಗೆ ತೋರಿಸಿದಿರಿ.
ಗಿರೀಶ್ ಮೂರ್ತಿ : ಕುಮಾರ್ ಸಹಾಯದಿಂದ ಆ ಕೆಲಸ ಮಾಡಿದೆ.
ಕಾತ್ಯಾಯಿನಿ : (ಅವನನ್ನು ಧರೆಗಿಳಿಸುತ್ತಾ) ಹಾಗಿದ್ದರೂ ಸಹ, ಆತ ಯಾರೂಂತ ಆಶ್ಚರ್ಯ ಅಯ್ತು?
ಗಿರೀಶ್ ಮೂರ್ತಿ : ನಾನು ಸಾಕಷ್ಟು ಯೋಚನೆ ಮಾಡಿದೆ. ಹಣ ಅಲ್ಲ - ಸೌಂದರ್ಯ ಇರಬೇಕು. ಒಂದು ಗೊಂಬೆಯಂತಹ ಮುಖ. (ವಿಚಲಿತನಾಗಿ ಅವಳ ಮುಖ ನೋಡುತ್ತಾ) ನನ್ನಲ್ಲಿದ್ದ ಎಲ್ಲವನ್ನೂ ನೀನು ಬಿಟ್ಟು ಹೋಗಬೇಕು ಅಂದರೆ, ಅವನಲ್ಲಿ ಅದ್ಭುತವಾದದ್ದು ಏನೋ ಇತ್ತು ಅನ್ಸುತ್ತೆ.
ಕಾತ್ಯಾಯಿನಿ : (ಅವನೊಬ್ಬ ಮುಠ್ಠಾಳ ಎನ್ನುವಂತೆ) ಅಯ್ಯೋ ಗಿರೀಶ. ಪಾಪ!
ಗಿರೀಶ್ ಮೂರ್ತಿ : ಬಹಳ ದಿನದಿಂದ ನಡೀತಾ ಇರಲಿಲ್ಲ. ಇಲ್ಲ ಅಂದಿದ್ರೆ ನಿನ್ನಲ್ಲಿ ಬದಲಾವಣೆ ಆಗೋದನ್ನ ಕಂಡು ಹೀಡೀತಾ ಇದ್ದೆ.
ಕಾತ್ಯಾಯಿನಿ : ಕಂಡು ಹಿಡಿಯೋದಕ್ಕೆ ಆಗ್ತಿತ್ತಾ?
ಗಿರೀಶ್ ಮೂರ್ತಿ : ನಿನ್ನ ಬಗ್ಗೆ ನನಗೆ ಚೆನ್ನಾಗಿ ಗೊತ್ತಿತ್ತು.
ಕಾತ್ಯಾಯಿನಿ : ತಾವು ನಿಜಕ್ಕೂ ಅದ್ಭುತ ವ್ಯಕ್ತಿ.
ಗಿರೀಶ್ ಮೂರ್ತಿ : ಅವನು ಅಂತಹವನಾ? ನಿಜ ಹೇಳು.
ಗಿರೀಶ್ ಮೂರ್ತಿ : ನೀನೇ ಕೊಟ್ಟ ಮಾತು.
ಕಾತ್ಯಾಯಿನಿ : ನಾನು ಹೇಳಲೇಬೇಕು ಅನ್ನೋದಾದ್ರೆ – (ಆಕೆ ಭಾರಿ ಖಳನಾಯಕಿ, ಆದರೆ ಈ ವಿಷಯದಲ್ಲಿ ಅವನನ್ನು ನೋಯಿಸುವುದಕ್ಕೆ ಇಷ್ಟಪಡುತ್ತಿಲ್ಲವೆಂದು ಅರ್ಥಮಾಡಿಕೊಳ್ಳಬೇಕು) ನಾನು ಮಾತು ಕೊಟ್ಟಿದ್ದಕ್ಕೆ ಕ್ಷಮಿಸಿಬಿಡಿ. (ಅವನನ್ನೇ ನೋಡುತ್ತಾ) ಯಾರೂ ಇರಲಿಲ್ಲ, ನಿಜವಾಗಿಯೂ ಯಾರೂ ಇಲ್ಲ.
ಗಿರೀಶ್ ಮೂರ್ತಿ : (ಎದ್ದೇಳುತ್ತಾ) ನನ್ನ ಜೊತೆ ಆಟ ಆಡಬಹುದೂಂತ ನೀನು ತಿಳ್ಕೊಂಡಿದ್ದೀಯಾ.
ಕಾತ್ಯಾಯಿನಿ : ನೀವು ಇಷ್ಟಪಡೋದಿಲ್ಲಾಂತ ಮೊದಲೇ ಹೇಳಿದೆ.
ಗಿರೀಶ್ ಮೂರ್ತಿ : ನಂಬೋದಿಕ್ಕೆ ಸಾಧ್ಯವೇ ಇಲ್ಲ.
ಕಾತ್ಯಾಯಿನಿ : ಅದು ನಿಜ. ನನಗ್ಗೊತ್ತು, ನಂಬೋದಿಕ್ಕೆ ಸಾಧ್ಯವೇ ಇಲ್ಲಾಂತ. ಆದರೆ ಅದೇ ಸತ್ಯ.
ಕಾತ್ಯಾಯಿನಿ : ಪಾಪ, ನಿಮ್ಮ ಧರ್ಮ ಯಾವುದು ಅಂತ ನಿಮಗೇ ಗೊತ್ತಿಲ್ಲ. ನಿಮ್ಮ ವೈಭವಯುತ ಸಂಸ್ಕಾರದವರೆಗೂ ನಿಮಗೆ ಗೊತ್ತಾಗುವುದೇ ಇಲ್ಲ.  (ಜೀವನ ಆಕೆಗೆ ಕಲಿಸಿದ ಪಾಠಮೊಂದು ಇಲ್ಲಿದೆ) ಒಬ್ಬನ ಧರ್ಮವೆಂದರೆ ಅವನಿಗೆ ಅತ್ಯಂತ ಆಸಕ್ತಿ ಇರೋ ಯಾವುದಾದರೂ ಒಂದು. ನಿಮ್ಮದು ಯಶಸ್ಸು?
ಗಿರೀಶ್ ಮೂರ್ತಿ : ನಿನ್ನ ಕಾಗದಾನೇ ಅದು ಸುಳ್ಳೂಂತ ಹೇಳುತ್ತೆ.
ಕಾತ್ಯಾಯಿನಿ : ಅದನ್ನು ಬೇಕೂ ಅಂತಾನೇ ಮಾಡಿದ್ದು. ಸತ್ಯ ಗೊತ್ತಾದರೆ ನಿಮಗೆ ಸ್ವತಂತ್ರರಾಗಲು (ವಿಚ್ಛೇದನ ಪಡೆಯಲು) ಕಷ್ಟವಾಗಬಹುದು ಅನ್ನೋ ಯೋಚನೆ ಬಂತು. ನನಗೆ ಸ್ವಾತಂತ್ರ್ಯ ಸಿಕ್ಕ ಮೇಲೆ, ನಿಮಗೂ ಸಿಗಬೇಕಾದದ್ದು ನ್ಯಾಯ ಅನ್ನಿಸಿತು. ಅವರು ಹೇಗೆ ಅರ್ಥಮಾಡಿಕೊಂಡರು ಅಂತ ನೀವು ಹೇಳಿದ್ರೋ, ಅವರು ಅದೇ ರೀತಿ ಅರ್ಥ ಮಾಡಿಕೊಳ್ಳಲಿ ಅಂತಾನೇ ಕಾಗದದಲ್ಲಿ ಹಾಗೆ ಬರೆದೆ. ಮತ್ತೆ, ಕಾನೂನು ಸಹ ನಿಮ್ಮ ಅಭಿಪ್ರಾಯಾನೇ ಬೆಂಬಲಿಸುತ್ತೆ ಅಂತ ನನಗೆ ಗೊತ್ತಿತ್ತು. ಯಾಕೆಂದರೆ, ನಿಮ್ಮ ಹಾಗೇ ನಿಮ್ಮ ಕಾನೂನಿಗೂ ಸಹ ಮಹಿಳೆಯರ ಬಗ್ಗೆ ಆಳವಾದ ತಿಳುವಳಿಕೆ ಇದೆ ನೋಡಿ.
ಗಿರೀಶ್ ಮೂರ್ತಿ : (ನೇರವಾಗಿ ನಿಲ್ಲುವುದಕ್ಕೆ ಪ್ರಯತ್ನಿಸುತ್ತಾ) ಅದ್ರೂ ನಿನ್ನನ್ನ ನಂಬಲಿಕ್ಕೆ ಆಗ್ತಾ ಇಲ್ಲ.
ಕಾತ್ಯಾಯಿನಿ : (ಈ ಬಡಪಾಯಿ ಮನುಷ್ಯನನ್ನು ಕರುಣೆಯಿಂದ ನೋಡುತ್ತಾ) ಬಹುಶಃ ಹಾಗೇ ತಿಳಿದುಕೊಳ್ಳೋದು ಉತ್ತಮ ಅನ್ಸುತ್ತೆ. ಅದು ಸತ್ಯಕ್ಕಿಂತ ಕಡಿಮೆ ತೊಂದರೆ ಕೊಡುತ್ತೆ. ಆದರೆ ನನಗೆ ನೀವೊಬ್ಬರೇ ಇದ್ದದ್ದು. (ಅವಳ ಜೀವನವನ್ನು ಒಟ್ಟುಗೂಡಿಸಿ) ನೀವೇ ಸಾಕಾಯ್ತು.
ಗಿರೀಶ್ ಮೂರ್ತಿ : ಯಾವ ಹುಚ್ಚು ಕ್ಷಣ ಕ...
ಕಾತ್ಯಾಯಿನಿ : ಕ್ಷಣ ಕ ಅಲ್ಲ ಗಿರೀಶ್. ಅದರ ಬಗ್ಗೆ ಒಂದು ವರ್ಷದಿಂದ ಯೋಚ್ನೆ ಮಾಡ್ತಾ ಇದ್ದೆ.
ಗಿರೀಶ್ ಮೂರ್ತಿ : ಒಂದು ವರ್ಷದಿಂದ? (ದಿಗ್ಭ್ರಮೆಯಿಂದ) ಇದನ್ನು ಕೇಳಿದರೆ ನಾನು ನಿನಗೆ ಒಳ್ಳೆಯ ಗಂಡನಾಗಿರಲಿಲ್ಲ ಅಂತ ಯಾರಾದರೂ ಯೋಚನೆ ಮಾಡ್ತಾರೆ.
ಕಾತ್ಯಾಯಿನಿ : (ದುಃಖದ ನಗೆಯಿಂದ) ನಿಮ್ಮ ಪ್ರಕಾರ ನೀವು ಒಳ್ಳೆಯ ಗಂಡನೇ!
ಗಿರೀಶ್ ಮೂರ್ತಿ : (ಧೈರ್ಯದಿಂದ) ಹೌದು, ಹಾಗೇನೆ.
ಕಾತ್ಯಾಯಿನಿ : ಒಬ್ಬ ನೀತಿವಂತ ಗಂಡ, ಮತ್ತೆ ಮಾತುಗಾರ, ಹಾಗೇನೇ ಧರ್ಮದಾತ.
ಗಿರೀಶ್ ಮೂರ್ತಿ : (ಗಟ್ಟಿ ನೆಲದ ಮೇಲೆ ನಿಂತು) ಎಲ್ಲಾ ಹೆಂಗಸರೂ ನಿನ್ನ ಬಗ್ಗೆ ಅಸೂಯೆಪಟ್ಟರು.
ಕಾತ್ಯಾಯಿನಿ : ಇನೊಬ್ಬರು ಅಸೂಯೆಪಡುವಷ್ಟು ನನ್ನನ್ನು ಪ್ರೀತಿಸಿದ್ರಿ.
ಗಿರೀಶ್ ಮೂರ್ತಿ : ನಿನ್ನನ್ನು ಐಷಾರಾಮದಲ್ಲಿ ಮುಳುಗಿಸಿದ್ದೆ.
ಕಾತ್ಯಾಯಿನಿ : (ತನ್ನ ಮಹಾಸತ್ಯವನ್ನು ಹೊರಹಾಕುತ್ತಾ) ಅದೇನೇ.
ಗಿರೀಶ್ ಮೂರ್ತಿ : (ಶೂನ್ಯ ನೋಟದಿಂದ) ಏನು?
ಕಾತ್ಯಾಯಿನಿ : (ಎಲ್ಲಾ ಮುಗಿದುಹೋಗಿದ್ದರಿಂದ ಶಾಂತವಾಗಿ) ನಾನು ನಿಮ್ಮ ತುಂಬಿದ ಭೋಜನಕೂಟಗಳಲ್ಲಿ, ಮೈತುಂಬಾ ಆಭರಣಗಳೊಂದಿಗೆ, ಸುತ್ತಲೂ ಸೇರಿದ್ದ ನಿಮ್ಮ ತುಂಬಿಕೊಂಡಸ್ನೇಹಿತರ ನಡುವೆ ಕುಳಿತಿದ್ದಾಗ, ನೀವು ಅದೆಷ್ಟು ಸಂತೋಷದಿಂದ ಉಬ್ಬಿ ಹೋಗ್ತಾ ಇದ್ರಿ.
ಗಿರೀಶ್ ಮೂರ್ತಿ : (ದೂರುವ ದನಿಯಲ್ಲಿ) ಅವರೇನೂ ಅಷ್ಟು ದಪ್ಪವಾಗಿರಲಿಲ್ಲ.
ಕಾತ್ಯಾಯಿನಿ : (ಮತ್ತೊಂದು ಸಣ್ಣ ವಿಷಯ) ಸಣ್ಣಗಿದ್ದವರನ್ನು ಬಿಟ್ಟರೆ ಉಳಿದವರು. ಗಿರೀಶ್, ತುಂಬಾ ಆಭರಣಗಳು ಒಬ್ಬ ಮಹಿಳೆಯನ್ನು ಊಹಿಸಲಾರದಷ್ಟು ಹಿಗ್ಗಿಸುತ್ತೆ ಅಥವಾ ಕುಗ್ಗಿಸುತ್ತೆ ಅನ್ನೋದನ್ನ ಯಾವತ್ತಾದರೂ ಗಮನಿಸಿದ್ದೀರಾ?
ಗಿರೀಶ್ ಮೂರ್ತಿ : (ಕೂಗುತ್ತಾ) ಇಲ್ಲಾ. (ಆಕೆಯೊಡನೆ ವಾದ ಮಾಡುವುದರಲ್ಲಿ ಅರ್ಥವಿದೆಯೇ?) ಅಷ್ಟೇ ಅಲ್ಲ. ನಮ್ಮ ಭೋಜನಕೂಟಗಳಲ್ಲಿ ಎಲ್ಲಾ ಜನರು ಇದ್ದರು. ನಮ್ಮ ಕಾಲದ ಎಲ್ಲಾ ಪ್ರತಿಷ್ಠಿತ ವ್ಯಕ್ತಿಗಳು ಬರುತ್ತಿದ್ದರು. ಬರೀ ಸಾಹಿತಿಗಳಲ್ಲ, ರಾಜಕಾರಣ ಗಳು, ಕಲೆಗಾರರು, ವ್ಯಾಪಾರಿಗಳು...
ಕಾತ್ಯಾಯಿನಿ : ಬರೀ ಅದ್ಭುತವಾದ, ಕಣ್ಣುಕುಕ್ಕುವ ಯಶಸ್ಸು. ಹೊ! ಹೊಟ್ಟೆ ತುಂಬಿದ ಮೇಲೆ ಬರುವ ದೊಡ್ಡ ಮಾತುಗಳು ಯಾರು ಚೆನ್ನಾಗಿ ಮುಂದುವರೆದ, ಯಾರು ಜಾರಿ ಬಿದ್ದ, ಹೊಸ ಮನೆಯ ಬೆಲೆ ಎಷ್ಟು, ಯಾರಿಗೆ ಪ್ರಶಸ್ತಿ ಬಂತು, ಹೊಸ ಕಾರು, ಹೊಸ ಚಿನ್ನದ ತಟ್ಟೆ, ಹೊಸದಾಗಿ ಡಾಕ್ಟರೇಟ್ ಅಥವಾ ಜ್ಞಾನಪೀಠ ಯಾರಿಗೆ ಸಿಗುತ್ತೆ, ಇವುಗಳ ಬಗ್ಗೇನೆ.
ಗಿರೀಶ್ ಮೂರ್ತಿ : (ಮೊದಲಿಂದ ಕೊನೆಯವರೆಗೂ ಉತ್ತರ ಕೊಡಲಾರದವನು) ನನಗಿಂತ ಯಾರಾದರೂ ದೊಡ್ಡವರಾಗ್ತಾ ಇದ್ರಾ? ಅದರಿಂದಾಗಿ ನೀನು?
ಕಾತ್ಯಾಯಿನಿ : ಅದರಿಂದಾಗಿ ನಾನು! ಅಯ್ಯೋ ಗಿರೀಶ. ನೀವು... ಮತ್ತೆ ನಿಮ್ಮ ಮಹಾನ್ ಧರ್ಮ...
ಗಿರೀಶ್ ಮೂರ್ತಿ : (ಪ್ರಾಮಾಣ ಕ ಹೃದಯ) ನನ್ನ ಧರ್ಮ? ಧರ್ಮದ ಬಗ್ಗೆ ನಾನು ಯಾವತ್ತೂ ಮಾತನಾಡಿದವನಲ್ಲ, ಆದರೆ...
ಗಿರೀಶ್ ಮೂರ್ತಿ : (ಬೆಳಗಿನ ಪತ್ರಿಕೆಯನ್ನು ಉದ್ದರಿಸುತ್ತಾ) ಮಹತ್ವಾಕಾಂಕ್ಷೆ ಮಹಾನ್ ವ್ಯಕ್ತಿಗಳ ಕಡೆಯ ಕೊರತೆ.
ಕಾತ್ಯಾಯಿನಿ : ಮಹಾನ್ ವ್ಯಕ್ತಿಗಳ!
ಕಾತ್ಯಾಯಿನಿ : (ಬಾಲಿಶ ಮಾತುಗಳಿಗೆ ನಗುತ್ತಾ) ಸ್ವಲ್ಪವೂ ಇಲ್ಲ. ಅದಕ್ಕೊಂದು ದಾರಿಯಿದೆ ಎನಿಸಿದ ಕೂಡಲೇ, ಎಲ್ಲಾ ನೋಡಿ ನಗು ಬರ್ತಾ ಇತ್ತು. ನಿಮ್ಮ ಬಗ್ಗೆ ಬಹಳ ಕನಿಕರ ಅನ್ಸುತ್ತೆ. ನಿಮಗೆ ನೀವೇ ಸಹಾಯ ಮಾಡಿಕೊಳ್ಳೋದಿಕ್ಕೂ ಆಗ್ಲಿಲ್ಲಾ ಅಂತ. ಯಶಸ್ಸು ಅನ್ನೋದು ಭಯಂಕರ ಕೊಡುಗೆ. ಅತಿ ಪ್ರೀತಿಯೂ ಸಹ.
ಗಿರೀಶ್ ಮೂರ್ತಿ : (ಕೊನೆಗೂ ಆಕೆ ಯಾವುದರ ಬಗ್ಗೆ ಮಾತನಾಡುತ್ತಿದ್ದಾಳೆಯೆಂದು ಅರ್ಥ ಮಾಡಿಕೊಳ್ಳುತ್ತಾ) ನನ್ನ ಯಶಸ್ಸಿನಿಂದಾಗೇ ನನ್ನನ್ನ ಬಿಟ್ಟೆ ಅಂತ ಹೇಳ್ತಾ ಇಲ್ಲ ತಾನೆ?
ಕಾತ್ಯಾಯಿನಿ : ಹೌದು, ಅದಕ್ಕಾಗಿಯೇ ಬಿಟ್ಟೆ. (ಇದೀಗ ಅವಳು ಅವನಿಗೆ ಅರ್ಥವಾಗುತ್ತಿದ್ದಾಳೆ) ಅದನ್ನ ಸಹಿಸೋದಕ್ಕೆ ಆಗಲಿಲ್ಲ. ಆಗೀಗ ಸೋಲು ಬಂದಿದ್ದರೆ...  ಆದರೆ ಯಶಸ್ಸು ಉಸಿರು ಕಟ್ಟಿಸ್ತಾ ಇತ್ತು. (ಭಾವನೆಗಳಲ್ಲಿ ಕಠಿಣಳು) ಅದನ್ನ ಬಿಟ್ಟುಬಿಡಬೇಕೆಂಬ ಅದಮ್ಯ ಆಕಾಂಕ್ಷೆ; ಯಶಸ್ವಿಯಾಗದ ಜನರ ನಡುವೆ ಇರಬೇಕೆಂಬ ಆಸೆ.
ಗಿರೀಶ್ ಮೂರ್ತಿ : (ಸರಿಯಾದ ಉತ್ಸಾಹದಿಂದ) ಆ ರೀತಿ ಬಹಳ ಜನ ಇದ್ದಾರೆ.
ಕಾತ್ಯಾಯಿನಿ : ನಮ್ಮ ಗುಂಪಿನಲ್ಲಿ ಯಾರೂ ಇರಲಿಲ್ಲ. ಅವರು ಬೀಳ್ತಾ ಇದಾರೆ ಅಂದ ಕೂಡಲೇ ನಮ್ಮ ಕಣ ್ಣನಿಂದ ಮರೆಯಾಗ್ತಾ ಇದ್ದರು.
ಗಿರೀಶ್ ಮೂರ್ತಿ : (ಅದನ್ನೇ ಹಿಡಿದುಕೊಂಡು) ಕೇಳು, ನಾನೀಗ ಹಲವು ಕೋಟಿಗಳ ಒಡೆಯ.
ಕಾತ್ಯಾಯಿನಿ : (ಮುಖವೇನೂ ಕೆಂಪಾಗಲಿಲ್ಲ) ನಿಮಗೆ ನಿಮ್ಮ ಬೆಲೆ ಅಷ್ಟೇ. ಆದರೆ ನನಗೆ ನಿಮ್ಮ ಬೆಲೆ ಎಷ್ಟು ಅಂತ ಹೇಳ್ತೇನೆ ಕೇಳಿ. ಹೆಚ್ಚುಕಡಿಮೆ ಒಂದು ಹತ್ತು ಸಾವಿರ. ಮೊದಲು ನಾನು ಹತ್ತು ಸಾವಿರ ದುಡಿಯಬಹುದು ಎಂಬ ಧೈರ್ಯ ಬಂದ ಮೇಲೆ, ಪ್ರಪಂಚದಲ್ಲಿ ಒಬ್ಬಂಟಿಯಾಗಿಯೇ ಪಯಣ ಬೆಳೆಸಬಹುದು ಎಂಬ ನಿರ್ಧಾರಕ್ಕೆ ಬಂದೆ. ಮತ್ತೆ, ಅಷ್ಟನ್ನು ಗಳಿಸಿದ ಕೂಡಲೇ ನಿಮ್ಮನ್ನು ಬಿಟ್ಟೆ.
ಗಿರೀಶ್ ಮೂರ್ತಿ : (ತೂಕ ಮಾಡುತ್ತಾ) ಹತ್ತು ಸಾವಿರ!
ಕಾತ್ಯಾಯಿನಿ : ಒಬ್ಬ ಹೆಂಗಸಿನ ಬೆಲೆ, ನಿಮ್ಮ ಪ್ರಕಾರ. ಅದನ್ನು ಗಳಿಸಲಾರದೆ ಹೋದರೆ, ಅವಳು ನಿಮಗೇ ಜೋತು ಬೀಳಬೇಕು.
ಗಿರೀಶ್ ಮೂರ್ತಿ : (ಶ್ರೀಮಂತಿಕೆಯನ್ನು ನೆನಪಿಸಿಕೊಳ್ಳುತ್ತಾ) ನೀನು ಮದುವೆಯಾದಾಗ ನನಗೆ ಅದಕ್ಕಿಂತ ಹೆಚ್ಚು ಬೆಲೆ ಕೊಟ್ಟಿದ್ದೆ.
ಕಾತ್ಯಾಯಿನಿ : (ಅದನ್ನೇ ನೆನಪಿಸಿಕೊಳ್ಳುತ್ತಾ) ಆಹಾ, ಆಗ ನನಗೆ ನಿಮ್ಮ ಬಗ್ಗೆ ಗೊತ್ತಿರಲಿಲ್ಲ. ನೀವು ಒಬ್ಬ ಮನುಷ್ಯರಾಗಿದ್ದರೆ!
ಗಿರೀಶ್ ಮೂರ್ತಿ : ಒಬ್ಬ ಮನುಷ್ಯ? ಒಬ್ಬ ಮನುಷ್ಯ ಅಂದರೆ ಏನು ನಿನ್ನ ಅರ್ಥ?
ಕಾತ್ಯಾಯಿನಿ : (ಶ್ರೀಮಂತಿಕೆ ಬಿಟ್ಟು) ಅವರ ಬಗ್ಗೆ ನೀವು ಕೇಳಿಲ್ಲವೆ? ಅವರೊಂದು ರೀತಿ ಚೆನ್ನಾಗಿರ್ತಾರೆ. ಆಕೆ ಮದುವೆಯಾದಾಗ, ತಾನೇ ಕೆಳಮಟ್ಟದವಳಾದರೂ, ಒಂದು ಒಳ್ಳೆಯ ಜೀವನ ನಡೆಸಬೇಕು ಅಂತ ಒಳಗಿನೊಂದು ಬಯಕೆಯಿರುತ್ತೆ. ಜೊತೆಗೆ ಕೆಟ್ಟತನಗಳ ಬಗ್ಗೆಯೂ ಅರಿವಿರುತ್ತೆ. ಅವನಲ್ಲೇ ಎಲ್ಲಾ ಇದೆ ಅಂತ ಗೊತ್ತು. ಅವನಲ್ಲೇನಾದರೂ ಒಳ್ಳೆಯತನ ಇದ್ರೆ, ಅವಳ ಒಳ್ಳೆಯತನ ಅದನ್ನ ಕಂಡುಹಿಡಿಯುತ್ತೆ. ಮೂಲಭೂತ ಅವಶ್ಯಕತೆಗಳಿಗೆ ಅವರು ತಮ್ಮೆಲ್ಲಾ ಶಕ್ತಿಗಳನ್ನು ಒಟ್ಟುಗೂಡಿಸುತ್ತಾರೆ. ಅದಕ್ಕೇ ಗಿರೀಶ್, ನಾನು ಬೇಕೂಂತ ನಿಮ್ಮನ್ನು ಬಿಡಲಿಲ್ಲ. ನಿಮ್ಮನ್ನು ವಿವರಿಸೋದಕ್ಕೆ, ಎಲ್ಲಾ ರೀತಿಯ ಸಿದ್ಧಾಂತಗಳನ್ನು ಸೃಷ್ಟಿಸಿದೆ. ನಿಮ್ಮ ಗಟ್ಟಿತನ ಅತಿ ಭಾವುಕತೆಯ ಸುಂದರ ಬಯಕೆ; ನಿಮ್ಮ ಒರಟುತನ ಅದು ನಿಮ್ಮಲ್ಲಿರೋ ಶಕ್ತಿ; ನೀವು ಅಸಹ್ಯಪಟ್ಟುಕೊಳ್ಳುವುದು ಅದು ನಿಮ್ಮ ಪೌರುಷ; ನಿಮ್ಮ ಆದರ್ಶಗಳ ಬಯಕೆ ಒಂದು ಸ್ಪಷ್ಟ ನೋಟ; ಮಹಿಳೆಯರ ಬಗ್ಗೆ ನಿಮಗಿರುವ ಅಗೌರವದ ಅಭಿಪ್ರಾಯಗಳು ಅದೊಂದು ತಮಾಷೆ ವಿಷಯ. ಹೀಗೆಲ್ಲಾ ಯೋಚಿಸಲು ಪ್ರಯತ್ನಪಟ್ಟೆ. ನನ್ನನ್ನು ನಿಮ್ಮ ಜೊತೆಯೇ ಉಳಿಸಿಕೊಳ್ಳಲು ನಿಮಗೇ ಹೊಂದಿಕೊಂಡೆ. ಆದರೆ ಕಡೆಗೆ ನಾನು ಬಿಡಲೇ ಬೇಕಾಯ್ತು; ನಿಮಗಿದ್ದದ್ದು ಒಂದೇ ಗುಣ, ಅದೇ ಯಶಸ್ಸು; ಅದು ನಿಮ್ಮಲ್ಲಿ ಎಷ್ಟಿತ್ತೆಂದರೆ ಅದು ಬೇರೆಲ್ಲವನ್ನೂ ನುಂಗಿಬಿಟ್ಟಿತು.
ಗಿರೀಶ್ ಮೂರ್ತಿ : (ಮುಖ್ಯವಾದ ವಿಷಯದಿಂದ ತಪ್ಪಿಸಿಕೊಳ್ಳಲು ಅವಕಾಶ ಕೊಡದೆ) ಆ ಹತ್ತು ಸಾವಿರ ಹೇಗೆ ಸಂಪಾದಿಸಿದೆ?
ಕಾತ್ಯಾಯಿನಿ : ಅದಕ್ಕೇ ಆರು ತಿಂಗಳು ಬೇಕಾಯ್ತು. ಆದರೆ ನ್ಯಾಯವಾಗೇ ಸಂಪಾದಿಸಿದೆ. (ಹೆಣ್ಣುಮಕ್ಕಳು ಮಲ್ಲಿಗೆ ಹೂವನ್ನು ಸವರುವಂತೆ ಆಕೆ ಟೈಪ್‍ರೈಟರನ್ನು ಸವರುತ್ತಾಳೆ) ಇದನ್ನು ಕಲಿತೆ. ಇದನ್ನು ಬಾಡಿಗೆ ತೆಗೆದುಕೊಂಡು, ನಾನೇ ಕಲಿತೆ. ನನ್ನ ಸ್ನೇಹಿತರಿಂದ ಸ್ವಲ್ಪ ಕೆಲಸ ಸಿಕ್ಕಿತು. ಮೊದಲು ಮೆಷಿನ್ ದುಡ್ಡು ವಾಪಸ್ ಕೊಟ್ಟೆ. ಆಮೇಲೆ ನಾನು ಹೊರಗೆ ಹೋಗುವುದಕ್ಕೆ ಸ್ವತಂತ್ರಳು ಅಂದುಕೊಂಡ ಕೂಡಲೇ ಹೊರಟುಬಿಟ್ಟೆ.
ಗಿರೀಶ್ ಮೂರ್ತಿ : ನೀನು ವೈಭವದ ಮಡಿಲಲ್ಲಿ ಮಲಗಿರುವಾಗಲೇ, ಇದೆಲ್ಲಾ ನನ್ನ ಮನೇಲೇ ನಡೀತು. (ಆಕೆ ತಲೆಯಲ್ಲಾಡಿಸಿದಳು) ದೇವರೇ, ನೀನು ಆಗಲೇ ನಿರ್ಧರಿಸಿದ್ದೆ.
ಕಾತ್ಯಾಯಿನಿ : ಹೌದು.
ಗಿರೀಶ್ ಮೂರ್ತಿ : (ದಿಟ್ಟಿಸಿ ನೋಡುತ್ತಾ) ನೀನು ನನ್ನನ್ನು ಅದೆಷ್ಟು ದ್ವೇಷಿಸಿರಬೇಕು.
ಗಿರೀಶ್ ಮೂರ್ತಿ : ವಂದನೆಗಳು.
ಕಾತ್ಯಾಯಿನಿ : ನನಗೆ ಆಶ್ಚರ್ಯವಾಗುತ್ತೆ.
ಕಾತ್ಯಾಯಿನಿ : (ಪ್ರೀತಿಯ ಸ್ನೇಹಿತರು, ನನ್ನಂತಹವರು, ನಿಮ್ಮಂತಹವರು ಮುಂದಿದ್ದಾರೇನೋ ಎನ್ನುವ ಹಾಗೆ) ನಿಮ್ಮ ಹಲವಾರು ಯಶಸ್ಸುಗಳಿಂದ ನಿಮ್ಮ ಸ್ನೇಹಿತರಿಗೆ ಒಂದಂತೂ ಗೊತ್ತಿತ್ತು. ಅವರು ಮೇಲಕ್ಕೆ ಬರದೇ ಹೋದರೆ ಎಲ್ಲೋ ಹೋಗಿ ನಿಂತುಬಿಡುತ್ತಾರೆಂಬ ಭಯ ಕಾಡುತ್ತಿತ್ತೇನೋ; ಅದಕ್ಕೆ ಅವರಲ್ಲಿ ಒಂದಿಬ್ಬರು ಕೆಲವೊಮ್ಮೆ ದುಃಖದಲ್ಲಿರುತ್ತಿದ್ದರು.
ಗಿರೀಶ್ ಮೂರ್ತಿ : (ಅಪವಿತ್ರತೆಯ ಬಗ್ಗೆ ಭಯಭೀತನಾಗಿರುವವನು) ಆ ಸೋತು ಸುಣ್ಣವಾಗಿರೋ ಜನರ ನಡುವೆ ನೀನು ಜೀವನ ಮಾಡ್ತೀಯಾ ಯಶಸ್ಸು ಗಳಿಸೋದಕ್ಕೆ ಪ್ರಯತ್ನಿಸೋದು ಮತ್ತು ಸೋಲೋದು. ಅದನ್ನು ಬಿಟ್ಟರೆ ಅವರಲ್ಲಿ ಇನ್ನೇನಿದೆ?
ಕಾತ್ಯಾಯಿನಿ : ಅದೇ, ಅದೇ. ಅವರು ಪ್ರಯತ್ನ ಮಾಡ್ತಾ ಇರ್ತಾರೆ; ಆದರೆ ಸೋಲ್ತಾರೆ.
ಗಿರೀಶ್ ಮೂರ್ತಿ : ಮತ್ತೆ ಯಾವಾಗಲೂ ಸೋಲ್ತಾನೆ ಇರ್ತಾರೆ.
ಕಾತ್ಯಾಯಿನಿ : ಯಾವಾಗಲೂ ನಾನು ಅವರಿಗೆ ಹೇಳ್ತಾ ಇರ್ತೇನೆ ಅಯ್ಯೋ ಪಾಪ ಅಂತ. ಅವರು ನನಗೆ ಹೇಳ್ತಾ ಇರ್ತಾರೆ ಅಯ್ಯೋ ಪಾಪ ಅಂತ. ಅದೇ ನಮ್ಮನ್ನು ಮನುಷ್ಯರನ್ನಾಗಿಸುತ್ತೆ. ಅದಕ್ಕೇ ಅವರೆಂದರೆ ನನಗೆ ಬೇಸರ ಆಗೋದೇ ಇಲ್ಲ.
ಗಿರೀಶ್ ಮೂರ್ತಿ : (ಪೂರ್ಣ ಧ್ವನಿಯಿಂದ) ವ್ಹಾ! ಕಾತ್ಯಾ, ಈಗ ನಾನು ಹಲವು ಕೋಟಿಗಳ ಅಧಿಪತಿ.
ಕಾತ್ಯಾಯಿನಿ : ಹೌದು. ನೀವು ದಪ್ಪ ಆಗ್ತಾ ಇದೀರಿ, ಗಿರೀಶ್.
ಗಿರೀಶ್ ಮೂರ್ತಿ : ಇಲ್ಲ, ದಪ್ಪ ಆಗ್ತಾ ಇಲ್ಲ.
ಕಾತ್ಯಾಯಿನಿ : ಆ ದಪ್ಪಗಿದ್ದ ವ್ಯಕ್ತಿ, ನಮ್ಮ ಭೋಜನಕೂಟಗಳಲ್ಲಿ ಯಾವಗಲೂ ನಿದ್ದೆ ಹೊಡೀತಿದ್ದರಲ್ಲ, ಅವರ ಹೆಸರೇನು?
ಗಿರೀಶ್ ಮೂರ್ತಿ : ಯಾರು, ಡಾ.ಭವಪ್ರಿಯಾ?
ಕಾತ್ಯಾಯಿನಿ : ಹೌದು, ಅವರೇ. ಅದ್ಭುತ ಯಶಸ್ಸಿನ ಸರಿಯಾದ ಚಿತ್ರವೆಂದರೆ, ನನಗೆ ಹೊಳೆಯೋದೆ ಡಾ.ಭವಪ್ರಿಯ. ಅವರೆಷ್ಟು ತುಂಬಿಕೊಂಡಿದ್ದರೆಂದರೆ, ಅವರು ಸಿಕ್ಕಾಪಟ್ಟೆ ದಪ್ಪ ಇದ್ದರು. ಕುರ್ಚಿ ಮೇಲೆ ಈ ರೀತಿ ಕುಳಿತುಕೊಳ್ತಾ ಇದ್ದರು. (ಅವಳ ಎರಡೂ ಕೈಗಳು ಹೊಟ್ಟೆಯ ಮುಂದೆ ಕೂಡಿಕೊಳ್ಳುತ್ತವೆ) ತಮ್ಮ ಯಶಸ್ಸನ್ನೆಲ್ಲಾ ಹಿಡಿದಿಟ್ಟುಕೊಂಡಿದ್ದಾರೇನೋ ಎಂಬಂತೆ. ನೀವು ಅದಕ್ಕೇ ಪ್ರಯತ್ನಿಸ್ತಾ ಇದೀರಿ. ಆಗ ನಿಮಗೆ ಇನ್ನೂ ಹಲವು ಕೋಟಿಗಳು ಒಟ್ಟಿಗೇ ಸಿಗುತ್ತೆ.
ಗಿರೀಶ್ ಮೂರ್ತಿ : (ನಿಜವಾಗಿಯೂ ಇದುವರೆಗೂ ಶಾಂತವಾಗಿದ್ದವನು) ದಯವಿಟ್ಟು, ನನ್ನ ಮನೆ ಬಿಟ್ಟು ಹೋಗ್ತೀಯಾ?
ಕಾತ್ಯಾಯಿನಿ : (ಅವಳ ಹಳೆಯದಾದ ಓವರ್‍ಕೋಟನ್ನು ಹಾಕಿಕೊಳ್ಳುತ್ತಾ) ಆದರೆ ನಾವು ಕೋಪದಿಂದ ಬೇರೆಯಾಗೋದು ಬೇಡ. ನಾನು ಈಗ ನೋಡೋದಿಕ್ಕೆ ಹೇಗೆ ಕಾಣ ್ತೀನಿ? ಆಗಿನ ಪೇಲವವಾದ, ಮರಗಟ್ಟಿಹೋದ, ನಿನ್ನ ಕಾರುಗಳಲ್ಲಿ ಓಡಾಡುತ್ತಿದ್ದ ಒಂದು ವಸ್ತುವಿಗೆ ಹೋಲಿಸಿದರೆ?
ಗಿರೀಶ್ ಮೂರ್ತಿ : (ಒಡೆಯನ ಶೈಲಿಯಲ್ಲಿ) ನೀನು ಹೇಗಿದ್ದೆ ಅಂತ ಮರೆತುಬಿಡ್ತೀನಿ. ಒಂದಂತೂ ನಿಜ, ನೀನು ನನ್ನ ಹೆಂಡತಿಗೆ ಆರತಿ ಎತ್ತೋದಕ್ಕೂ ಲಾಯಕ್ಕಿಲ್ಲ.
ಕಾತ್ಯಾಯಿನಿ : ಅದು ಆಕೆಯ ಚಿತ್ರ, ಹೌದಲ್ಲಾ?
ಗಿರೀಶ್ ಮೂರ್ತಿ : (ಅವನು ಸಿಕ್ಕ ಅವಕಾಶವನ್ನು ಹಿಡಿದುಕೊಳ್ಳುತ್ತಾ) ಅವಳ ಮದುವೆಯ ಸೀರೆಯಲ್ಲಿ. ಅವಳ ಪೈಂಟಿಂಗ್ ಮಾಡಿದವರು ಎಮ್‍ಎಸ್‍ಎನ್.
ಕಾತ್ಯಾಯಿನಿ : (ದುಷ್ಟತನದಿಂದ) ಡಾಕ್ಟರೇಟ್?
ಗಿರೀಶ್ ಮೂರ್ತಿ : (ಮೋಸಹೋಗಿ) ಹೌದು.
ಕಾತ್ಯಾಯಿನಿ : (ಮಿಸೆಸ್ ಮೂರ್ತಿಯನ್ನು ಇಷ್ಟಪಡುತ್ತಾಳೆ. ಅವಳ ಕಲ್ಪನೆಯ ಚಿತ್ರ) ಅದು ಬಹಳ ಸುಂದರವಾದ ಮುಖ.
ಗಿರೀಶ್ ಮೂರ್ತಿ : (ಆ ವಸ್ತುವನ್ನು ಹೊಂದಿದವನ ಹೆಮ್ಮೆಯಿಂದ) ಎಲ್ಲರೂ ಸುಂದರಿಯೆಂದು ಒಪ್ಪಿಕೊಂಡಿದ್ದಾರೆ.
ಕಾತ್ಯಾಯಿನಿ : ಅವಳ ಕಣ್ಣುಗಳಲ್ಲಿ ಸಂತಸದ ಹೊಳಪಿದೆ. ಅವಳಲ್ಲಿ ವ್ಯಕ್ತಿತ್ವವಿದೆ.
ಗಿರೀಶ್ ಮೂರ್ತಿ : (ಹರಾಜು ಹಾಕುವವನ ಶೈಲಿಯಲ್ಲಿ) ಬುದ್ಧಿವಂತಿಕೆಗೆ ಪ್ರಸಿದ್ಧಳು.
ಕಾತ್ಯಾಯಿನಿ : ಅದೆಲ್ಲಾ ಅವಳ ಪೈಂಟಿಂಗ್ ಮಾಡಿದ ಹಿಂದಿನ ದಿನಗಳ ಕಥೆ. ಅದೊಂದು ದೈವಿಕವಾದ ಮುಖ ಸಹ. (ಕೂಡಲೇ ಕೋಪದಿಂದ ತಿರುಗುತ್ತಾಳೆ) ಹೋ, ಗಿರೀಶ್. ನೀನೊಬ್ಬ ಪಶು.
ಗಿರೀಶ್ ಮೂರ್ತಿ : (ತತ್ತರಿಸುತ್ತಾ) ಹೆಯ್ ? ಏನಂದೆ?]
ಕಾತ್ಯಾಯಿನಿ : ಆಕೆ ಒಬ್ಬ ಉದಾತ್ತ ಹೆಂಗಸಾಗಬಹುದಿತ್ತು ಅಥವಾ ತಾಯಿಯಾಗಬಹುದಿತ್ತು. ಆ ಸುಂದರ ಜೀವಿ. ಅಯ್ಯೋ, ಈಗ ಕೆಲವು ನಿಮಿಷಗಳ ಹಿಂದೆ ನೋಡಿದಾಗ ಜೀವಂತಿಕೆ ಇಲ್ಲದಿರೋ ಹೆಂಗಸಂತೆ ಕಂಡಳು. ನಾನು ನಿನ್ನಿಂದ ತಪ್ಪಿಸಿಕೊಂಡಿದ್ದರಿಂದ ಕ್ಷಮಿಸಬಹುದು. ಆದರೆ ಆ ಪಾಪದ ಹೆಂಗಸು. ಅಯ್ಯೋ, ಗಿರೀಶ್, ಗಿರೀಶ್.
ಗಿರೀಶ್ ಮೂರ್ತಿ : (ಬಾಗಿಲತ್ತ ಕೈ ತೋರಿಸುತ್ತಾ) ಥ್ಯಾಂಕ್ ಯೂ. ತನ್ನ ಗಂಡನ ಬಗ್ಗೆ ಹೆಮ್ಮೆ ಮತ್ತು ವೈವಾಹಿಕ ಜೀವನದಲ್ಲಿ ಸಂತೋಷಪಟ್ಟ ಒಬ್ಬ ಮಹಿಳೆಯಿದ್ದರೆ, ಅದು ಮಿಸೆಸ್ ಮೂರ್ತಿ, ನನ್ನ ಹೆಂಡತಿ.
ಗಿರೀಶ್ ಮೂರ್ತಿ : ನೀನೇನು ಆಶ್ಚರ್ಯಪಡಬೇಕಾಗಿಲ್ಲ.
ಗಿರೀಶ್ ಮೂರ್ತಿ : (ಬಿಸಿಯೇರಿ) ಅವಳ ರೀತೀನೆ ಇಷ್ಟ ಆಗೊಲ್ಲ.
ಕಾತ್ಯಾಯಿನಿ : ನಾನೇನಾದ್ರೂ ಗಂಡನಾಗಿದ್ರೆ ಆಗಾಗ ಹೆಂಡತಿಯ ಮುಖ ನೋಡ್ತಾ ಇದ್ದೆ ಎಲ್ಲಾ ಗಂಡಂದಿರಿಗೂ ಇದು ನನ್ನ ಸಲಹೆ; ಆಗಾಗ್ಗೆ ನಿಮ್ಮ ಹೆಂಡತಿಯ ಮುಖ ನೋಡ್ತಾ ಇರಿ. ಅವರಲ್ಲೇನಾದರೂ ಹೊಸ ಕಳೆ, ಹತ್ತು ಸಾವಿರದ ಲಕ್ಷಣವೇನಾದರೂ ಇದೆಯಾ ಅಂತ. ಇಬ್ಬರು ಗಂಡು ಮಕ್ಕಳಲ್ಲಾ? ಇಬ್ಬರೂ ನಿಮ್ಮ ಹಾಗೇನಾ?
ಗಿರೀಶ್ ಮೂರ್ತಿ : ಅದನ್ನು ಕಟ್ಟಿಕೊಂಡು ನಿನಗೇನಾಬೇಕು?
ಕಾತ್ಯಾಯಿನಿ : (ಸ್ನಿಗ್ಧ ಕಣ್ಣುಗಳಲ್ಲಿ) ನಾನು ಅದರ ಬಗ್ಗೆ ಯೋಚಿಸ್ತಾ ಇದ್ದೆ. ನಿಮ್ಮಂತೇ ಆಗೋ ಇಬ್ಬರು ಗಂಡು ಮಕ್ಕಳು! ಅದೆಲ್ಲೋ ಎರಡು ಪುಟ್ಟ ಹುಡುಗಿಯರ ಜೀವಗಳಿವೆ. ಅವುಗಳು ಬೆಳೆದ ಮೇಲೆ, ಆ ಮುದ್ದು ಮುಖದ ಹುಡುಗಿಯರು, ಗಂಡಸರಿಗೋಸ್ಕರ ಇರುವವರು... ಬೇಡ, ಮುಂದೆ ಬೇಡ, ಇರಲಿ. ನಮಸ್ಕಾರ ಗಿರೀಶ್ ಮೂರ್ತಿ?
ಗಿರೀಶ್ ಮೂರ್ತಿ : (ಸ್ವಲ್ಪ ಮನುಷ್ಯರ ದುರ್ಬಲತೆ ತೋರಿಸುತ್ತಾ) ನೀನು ಹೋಗುವ ಮೊದಲು ತಪ್ಪಾಯ್ತುಅಂತ ಹೇಳು.
ಕಾತ್ಯಾಯಿನಿ : ಯಾಕೆ?
ಗಿರೀಶ್ ಮೂರ್ತಿ : ನನ್ನನ್ನ ಬಿಟ್ಟುಹೋಗಿದ್ದಕ್ಕೆ. ಅದರಿಂದಾಗಿ ತುಂಬಾ ಬೇಜಾರಾಯ್ತು ಅಂತ ಹೇಳಿಹೋಗು. ನೀನು ಹಾಗೆ ಮಾಡ್ತೀಯ ಅಂತ ನನಗೆ ಗೊತ್ತಿದೆ? (ಅವಳು ನಗುತ್ತಾಳೆ, ತಲೆಯಾಡಿಸುತ್ತಾಳೆ. ಅವನು ಸಣ್ಣತನದವನು. ಜೋರಾಗಿ ಕೂಗುತ್ತಾನೆ) ನನ್ನ ಇಡೀ ದಿನಾನೇ ಹಾಳು ಮಾಡಿದೆ.
ಕಾತ್ಯಾಯಿನಿ : (ಸಮಾಧಾನಗೊಳಿಸಲು) ಅದಕ್ಕಾಗಿ ನನಗೂ ಬೇಸರವಾಗುತ್ತೆ. ಅದೊಂದು ಸೂಜಿ ಚುಚ್ಚಿದ ಹಾಗೆ ಗಿರೀಶ್. ನಿಮ್ಮ ವಿಜಯೋತ್ಸವದ ಸಂದರ್ಭದಲ್ಲಿ, ನಿಮ್ಮ ಹಳೇ ಸ್ನೇಹಿತೆ ನೀನು ಯಶಸ್ವಿಯಾಗಲಿಲ್ಲ ಎಂದಳು ಅನ್ನೋದು ದೊಡ್ಡ ವಿಷಯ ಏನಲ್ಲ. ನೀವು ಬಹಳ ಬೇಗ ಅದನ್ನು ಮರೆತುಬಿಡ್ತೀರಿ. ಒಬ್ಬ ಸ್ಟೆನೊ ಏನನ್ನುತ್ತಾಳೆ ಅನ್ನೋದನ್ನ ಯಾರು ಮನಸ್ಸಿಗೆ ಹಾಕ್ಕೊಳ್ತಾರೆ?
ಗಿರೀಶ್ ಮೂರ್ತಿ : (ಸಮಾಧಾನಗೊಂಡು) ಯಾರೂ ಇಲ್ಲ. ವಾರಕ್ಕೆ ಒಂದು ಸಾವಿರ ದುಡಿಯೋ ಸ್ಟೆನೊ.
ಕಾತ್ಯಾಯಿನಿ : (ಹೆಮ್ಮೆಯಿಂದ) ಅಷ್ಟು ಕಡಿಮೆ ಅಲ್ಲ. ಅದಕ್ಕಿಂತಲೂ ಸಾಕಷ್ಟು ಜಾಸ್ತಿ.
ಗಿರೀಶ್ ಮೂರ್ತಿ : (ಸರಾಗವಾಗಿ) ಅದ್ಭುತ. (ಸಣ್ಣಗೆ ಬಾಗಿಲು ಬಡಿದ ಶಬ್ಧ)
ಸರೋಜಾ ಮೂರ್ತಿ : ಒಳಗೆ ಬರಬಹುದೆ?
ಗಿರೀಶ್ ಮೂರ್ತಿ : (ಸ್ವಲ್ಪ ದೈನತೆಯಿಂದಲೇ) ಅದು ಮಿಸೆಸ್ ಮೂರ್ತಿ.
ಕಾತ್ಯಾಯಿನಿ : ನಾನೇನೂ ಹೇಳಲ್ಲ. ಬಾಗಿಲು ಬಡಿಯದೇ ಗಂಡನ ರೂಮಿಗೆ ಬರಲು ಆಕೆಗೆ ಅಂಜಿಕೆ.]
ಗಿರೀಶ್ ಮೂರ್ತಿ : ಹಾಗೇನಿಲ್ಲ. (ಹೆಂಡತಿಯ ದಾಸನಂತೆ) ಬಾ, ಒಳಗೆ ಬಾ ಸರೋಜ. (ಸರೋಜ ಬರುತ್ತಾಳೆ, ಗೌನ್‍ನೊಂದಿಗೆ. ಈ ಕಾಟದ ವ್ಯಕ್ತಿ ಇಲ್ಲಿರುವಾಗ ಅದನ್ನಿಲ್ಲಿ ತರಬಾರದೆಂಬ ಬುದ್ಧಿಯಿರಬೇಕಿತ್ತು)
ಸರೋಜಾ ಮೂರ್ತಿ : (ಅದಕ್ಕೆ ಸ್ವಾಗತ ದೊರೆಯುತ್ತೆ ಎಂದು ಯೋಚಿಸಿ ತಂದಿದ್ದಳು) ಗಿರೀಶ್, ಗೌನ್ ಬಂದಿದೆ.
ಗಿರೀಶ್ ಮೂರ್ತಿ : (ಈ ಕ್ಷಣ ಅದನ್ನು ಇಷ್ಟಪಡುವುದಿಲ್ಲ) ಸರಿ, ಸರಿ.
ಸರೋಜಾ ಮೂರ್ತಿ : ಆದರೆ ಇದನ್ನು ಹಾಕಿಕೊಂಡು ನೊಡೋದಿಕ್ಕೆ, ಪ್ರ್ಯಾಕ್ಟೀಸ್ ಮಾಡೋದಿಕ್ಕೆ ಆತುರದಲ್ಲಿದ್ದೀರಾ ಅಂದುಕೊಂಡಿದ್ದೆ. (ಅದನ್ನು ನೋಡಿ ಕಾತ್ಯಾಯಿನಿ ನಗುತ್ತಾಳೆ. ನಗುತ್ತಿದ್ದಾಳೋ ಇಲ್ಲವೋ ಅಂತ ನೋಡಬಾರದಿತ್ತು ಅಂದುಕೊಂಡನು)
ಗಿರೀಶ್ ಮೂರ್ತಿ : (ತೀಕ್ಷ್ಣವಾಗಿ) ಅಲ್ಲಿಡು.
(ಮಿಸೆಸ್ ಮೂರ್ತಿಯ ಮುಖ ಕೆಂಪಗಾಗುತ್ತದೆ. ಅದನ್ನು ಪಕ್ಕದಲ್ಲಿಡುತ್ತಾಳೆ)
ಕಾತ್ಯಾಯಿನಿ : (ತಾನೇ ಪರಾಜಿತಳಾಗುವ ಸೌಜನ್ಯದಿಂದ) ನಿಜ ಹೇಳಬೇಕೂಂದ್ರೆ, ಗೌನ್ ತುಂಬಾ ಚೆನ್ನಾಗಿದೆ.
ಸರೋಜಾ ಮೂರ್ತಿ : (ಸಹಾಯಗೊಂಡು) ಹೌದು.
 (ಅವನನ್ನು ತಪಿÀ್ಪತಸ್ಥನನ್ನಾಗಿ ಮಾಡಬಹುದು ಎಂದುಕೊಂಡಿದಾಳೆ. ಆಕೆಗೆ ಸಾಧ್ಯವೇ? ಅವನೇನೂಂತ ತೋರಿಸುತ್ತಾನೆ)
ಗಿರೀಶ್ ಮೂರ್ತಿ : (ಒಂದು ಕಣ್ಣನ್ನು ಕಾತ್ಯಾಳ ಮೇಲಿಟ್ಟು) ಸರೋಜ, ನಿನ್ನ ಕತ್ತಿಗೆ ಇನ್ನಷ್ಟು ಆಭರಣಗಳು ಬೇಕೆನಿಸುತ್ತೆ.
ಸರೋಜಾ ಮೂರ್ತಿ : (ದುರ್ಬಲಳಾಗುತ್ತಾ) ಇನ್ನೂ!?
ಗಿರೀಶ್ ಮೂರ್ತಿ : ಕೆಲವು ಮುತ್ತಿನ ಸರಗಳು. ಅದನ್ನು ನಾನು ನೋಡ್ತೀನಿ ಬಿಡು. ನನಗದು ಆಟ ಆಡೋ ರೀತಿ. (ಕಾತ್ಯಾ ತನ್ನ ದುಃಖವನ್ನು ಮರೆಮಾಚುತ್ತಾಳೆ. ಅವಳಿಗೆ ಹೋಗು ಎಂದರೆ ಸಾಕಾಗಿದೆ. ಅವನು ಬೆಲ್ ಮಾಡುತ್ತಾನೆ) ಇನ್ನು ಹೆಚ್ಚು ಹೊತ್ತು ನಿಮ್ಮನ್ನು ಉಳಿಸಿಕೊಳ್ಳುವುದಿಲ್ಲ.
ಕಾತ್ಯಾಯಿನಿ : ಥ್ಯಾಂಕ್ ಯೂ.
ಸರೋಜಾ ಮೂರ್ತಿ : ನೀವು ಆಗ್ಲೇ ಹೋಗ್ತಾ ಇದೀರಾ? ನೀವು ಬಹಳ ಬೇಗ ಕೆಲಸ ಮಾಡ್ತೀರಾ!
ಗಿರೀಶ್ ಮೂರ್ತಿ : ಸರೋಜ, ಆಕೆ ನಮಗೆ ಸರಿ ಹೋಗೋದಿಲ್ಲ.
ಸರೋಜಾ ಮೂರ್ತಿ : ಹೋ, ಸಾರಿ, ಸಾರಿ.
ಕಾತ್ಯಾಯಿನಿ : ಇರಲಿ ಬಿಡಿ, ಏನೂ ಮಾಡೋದಿಕ್ಕಾಗಲ್ಲ. ನಾನಿನ್ನು ಬರ್ತೀನಿ ಮೇಡಮ್. ಬರ್ತೀನಿ ಗಿರೀಶ್ ಮೂರ್ತಿ.
 (ವಿನಯದಲ್ಲಿ ಉದ್ದಟತನವಿರುವ ಅನುಮಾನವಿದೆ. ಭಟ್ಟ ಬಂದು ಅವಳನ್ನು ಕರೆದುಕೊಂಡು ಹೋಗುತ್ತಾನೆ. ಆಕೆ ಹೋದ ಮೇಲೆ ರೂಮಿನಲ್ಲಿ ಉಸಿರಾಡುವಂತಾಗುತ್ತದೆ. ಗಿರೀಶ್ ಮೂರ್ತಿ ಅದನ್ನು ಗಮನಿಸುತ್ತಾನೆ)
ಸರೋಜಾ ಮೂರ್ತಿ : (ಯಾವಾಗಲೂ ತಪ್ಪನ್ನೇ ಹೇಳುವ ಅಭ್ಯಾಸವಿರುವವಳು) ಆಕೆ ಬಹಳ ಒಳ್ಳೆ ಟೈಪಿಸ್ಟ್ ಅನ್ನಿಸುತ್ತೆ.

ಸರೋಜಾ ಮೂರ್ತಿ : (ವಿನೀತ ಭಾವದಿಂದ) ಅದು ಸರಿ. ಅದು ನಿಮಗೇ ಚೆನ್ನಾಗಿ ಗೊತ್ತು. (ಇದು ನಿಜವಾದ ಮಹಿಳೆಯ ರೀತಿ ನೀತಿ)
ಗಿರೀಶ್ ಮೂರ್ತಿ : (ಅದನ್ನು ದೃಢಪಡಿಸುವ ಕಾತುರತೆಯಿಂದ) ಮುತ್ತಿನ ಹಾರಗಳನ್ನು ನಿನಗೆ ಕೊಡಿಸಬೇಕು ಅಂದಾಗ, ಅದ್ಹೇಗೆ ಬೆಚ್ಚಿಬಿದ್ದಳು.
ಸರೋಜಾ ಮೂರ್ತಿ : ಹೌದಾ? ನಾನು ನೋಡಲೇ ಇಲ್ಲ. ಹಾಗೇ ಇರಬೇಕು.
ಗಿರೀಶ್ ಮೂರ್ತಿ : (ಹುಬ್ಬುಗಂಟಿಕ್ಕಿ) ಇರಬಹುದೇನು? ಅದು ನನಗೆ ಚೆನ್ನಾಗಿ ತಿಳಿಯುತ್ತೆ. ಹೆಂಗಸರ ವಿಷಯ ನನಗೆ ಚೆನ್ನಾಗಿ ಗೊತ್ತು.
ಸರೋಜಾ ಮೂರ್ತಿ : ಹೌದು, ಹೌದು.
ಗಿರೀಶ್ ಮೂರ್ತಿ : (ಅಷ್ಟು ವಿಶ್ವಾಸವುಳ್ಳ ಮನುಷ್ಯ ಈ ರೀತಿ ಕೇಳೋದು ಸ್ವಲ್ಪ ವಿಚಿತ್ರ) ಸರೋಜ, ನಿನ್ನ ಬಗ್ಗೆ ನನಗೆ ಚೆನ್ನಾಗಿ ಗೊತ್ತು, ಅಲ್ವಾ? ಪುಸ್ತಕ ಓದೋ ಹಾಗೆ ನಿನ್ನನ್ನ ಓದಬಲ್ಲೆ, ಅಲ್ಲಾ?
ಸರೋಜಾ ಮೂರ್ತಿ : (ದುರ್ಬಲಳಾಗಿ) ಹೌದು, ಗಿರೀಶ್.
ಗಿರೀಶ್ ಮೂರ್ತಿ : (ಖುಷಿಯಾಗಿ, ಆದರೆ ಪ್ರಶ್ನಾರ್ಥಕವಾಗಿ) ಆ ಬಡ ಒಂಟಿ ಪಿಶಾಚಿಯ ಜೀವನಕ್ಕೂ ನಿನಗೂ ಅದೆಷ್ಟು ವ್ಯತ್ಯಾಸವಿದೆ, ಅಲ್ಲಾ?
ಸರೋಜಾ ಮೂರ್ತಿ : ಹೌದು. ಆದರೆ ಆಕೆ ಮುಖದಲ್ಲಿ ಬಹಳ ತೃಪ್ತಿ ಕಾಣ ಸ್ತಾ ಇತ್ತು.
ಗಿರೀಶ್ ಮೂರ್ತಿ : (ಕಾಲಲ್ಲಿ ಒದೆಯುತ್ತಾ) ಅದೆಲ್ಲಾ ತೋರಿಕೆಗೆ. ಏನು?
ಸರೋಜಾ ಮೂರ್ತಿ : (ಹೆದರಿಕೆಯಿಂದ) ನಾನೇನೂ ಹೇಳ್ಲಿಲ್ಲ.
ಗಿರೀಶ್ ಮೂರ್ತಿ : (ತಟ್ಟನೆ) ಯಾರಾದರು ನೋಡಿದರೆ, ನೀನು ಅವಳ ಬಗ್ಗೆ ಅಸೂಯೆ ಪಡ್ತಾ ಇದೀಯ ಅನ್ಕೋತಾರೆ.
ಸರೋಜಾ ಮೂರ್ತಿ : ಅಸೂಯೆ!? ಇಲ್ಲ, ಇಲ್ಲ. ಆದರೆ ಅವಳಲ್ಲಿ ಅದೆಷ್ಟು ಜೀವಂತಿಕೆ ಇದೆ ಅನ್ಸುತ್ತೆ. ಅದರಲ್ಲೂ ಆ ಮೆಷಿನ್ ಜೊತೆ ಕೆಲಸ ಮಾಡೋವಾಗ.
ಗಿರೀಶ್ ಮೂರ್ತಿ : ಜೀವಂತಿಕೆ? ಅದೊಂದು ಜೀವನಾನೇ ಅಲ್ಲ. ನಿನ್ನಲ್ಲಿ ಜೀವಂತಿಕೆ ಇದೆ. (ಸ್ವಲ್ಪ ಬಿಗಿಯಾಗಿ) ನನಗೆ ಸಾಕಷ್ಟು ಕೆಲಸ ಇದೆ, ಸರೋಜ. (ಅವನು ತನ್ನ ಮೇಜಿನ ಮೇಲೆ ಕೂರುತ್ತಾನೆ)
ಸರೋಜಾ ಮೂರ್ತಿ : (ಕರ್ತವ್ಯಬದ್ಧಳಾಗಿ) ಸಾರಿ, ನಾನು ಹೋಗ್ತೇನೆ. ಗಿರೀಶ್, (ಅಸಂಗತವಾಗಿ) ಅವು ತುಂಬಾ ದುಬಾರೀನಾ?
ಗಿರೀಶ್ ಮೂರ್ತಿ : ಯಾವುದು?
ಸರೋಜಾ ಮೂರ್ತಿ : ಆ ಮೆಷಿನ್?
 (ಅವಳು ಹೋದ ಮೇಲೆ ಅವಳ ಪ್ರಶ್ನೆಯ ಅರ್ಥ ಅವನನ್ನು ಬೆಚ್ಚಿಬೀಳಿಸುತ್ತದೆ. ಪರದೆಯು ಅವನನ್ನು ನಮ್ಮಿಂದ ಮರೆಮಾಚುತ್ತದೆ. ಆದರೆ ಆತ ಮತ್ತೆ ಸೌಮ್ಯವಾಗುತ್ತಾನೆಂದು ನಮಗೆ ಖಾತ್ರಿಯಿದೆ. ಈಗ ನಾವು ಆರಾಮವಾಗಿ ಉಸಿರಾಡಬಹುದು. ಏಕೆಂದರೆ, ನನ್ನಲ್ಲಾಗಲಿ ಅಥವಾ ನಿಮ್ಮಲ್ಲಾಗಲಿ ಗಿರೀಶ್ ಮೂರ್ತಿಯಂತವಹವರು ಇಲ್ಲ)