Pages

ಸ್ವಾತಂತ್ರ್ಯ ಸಂಗ್ರಾಮ: "ನೇತಾಜಿ"



ಭಾರತ ಕಂಡ ಧೀರೋದಾತ್ತ ನಾಯಕರಲ್ಲಿ ನೇತಾಜಿಯವರೇ ಅಗ್ರಗಣ್ಯರೆಂದರೆ ತಪ್ಪಾಗಲಾರದು. ಸ್ವಾತಂತ್ರ್ಯ ಹೋರಾಟದ ಬಿಸಿ ಎಲ್ಲೆಡೆ ಕಾಡ್ಗಿಚ್ಚಿನಂತೆ ವ್ಯಾಪಿಸುವ ವೇಳೆಯಲ್ಲಿ ಅಹಿಂಸಾವಾದಿಗಳ ಸಂಧಾನಪರ ನೀತಿಯು ಜನರ ಉತ್ಸಾಹಕ್ಕೆ ತಣ್ಣೀರೆರಚುತ್ತಿತ್ತು. ಬ್ರಿಟಿಷ್ ಸರ್ಕಾರವು ಎಂತಹ ನೀಚ ಕೃತ್ಯವೆಸಗಿದರೂ ಯಾವುದೇ ಹಿಂಸಾತ್ಮಕ ಪ್ರತಿಭಟನೆ ನಡೆಸಬಾರದು, ಸರ್ಕಾರ ನೋವು ನೀಡಿದರೆ ಅದನ್ನು ಸಹಿಸಬೇಕೇ ವಿನಾ ಪ್ರತಿನೋವು ಕೊಡಬಾರದು ಎಂಬ ಅರ್ಥವಿಲ್ಲದ ನೀತಿಯಿಂದ ಬೇಸತ್ತಿದ್ದ ಜನರಿಗೆ ತಮ್ಮಲ್ಲಿ ಕುದಿಯುತ್ತಿದ್ದ ಬಡಬಾಗ್ನಿಯನ್ನು ಹೊರಚೆಲ್ಲಲು ಒಬ್ಬ ಪ್ರಚಂಡ ನಾಯಕನಿಗಾಗಿ ಪರಿತಪಿಸುತ್ತಿದ್ದಾಗ ಎದ್ದವರೇ ನೇತಾಜಿ.

1897ರ ಜನವರಿ 23 ರಂದು ಒರಿಸ್ಸಾ ರಾಜ್ಯದ ಕಟಕ್ ನಗರದಲ್ಲಿ ಪ್ರಖ್ಯಾತ ವಕೀಲರಾದ ಜಾನಕೀನಾಥ್ ಬೋಸ್ ಮತ್ತು ಪ್ರಭಾವತಿ ದೇವಿಯವರ ಮಗನಾಗಿ ಸುಭಾಷ್ ಜನಿಸಿದರು. ತಂದೆ ತಾಯಿಯರ ವ್ಯಕ್ತಿತ್ವದಿಂದ ಪ್ರಭಾವಿತರಾದರು ಬೋಸ್ ರವರು. ಪ್ರಮುಖವಾಗಿ ಅವರ ತಾಯಿಯ ಆದರ್ಶಗಳು ಮತ್ತು ದೇಶಪ್ರೇಮವು ಅವರನ್ನು ಒಬ್ಬ ಸ್ವಾತಂತ್ರ್ಯ ಸಂಗ್ರಾಮದ ಯೋಧನನ್ನಾಗಿಸಿತು. ಬಾಲ್ಯದಲ್ಲಿ ತನ್ನ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿದ್ದ ಚಳುವಳಿ, ಮುಷ್ಕರ, ವಿದೇಶಿ ಸರಕುಗಳ ಬಹಿಷ್ಕಾರ ಮುಂತಾದ ಘಟನೆಗಳು ಇವರಲ್ಲಿ ದೇಶಪ್ರೇಮದ ಜ್ವಾಲೆಯನ್ನು ಹೊತ್ತಿಸಿತು. ಅಲ್ಲದೆ ಇವರು ಓದುತ್ತಿದ್ದ ಯೂರೋಪಿಯನ್ ಶಾಲೆಯಲ್ಲಿ ಆಂಗ್ಲರ ಮಕ್ಕಳಿಗಿದ್ದ ವಿಶೇಷ ಸವಲತ್ತುಗಳು ನಮಗೇಕಿಲ್ಲವೆಂದು ಚಿಂತಿಸುತ್ತಿದ್ದರು. ವಿದ್ಯಾರ್ಥಿಯಾಗಿರುವಾಗಲೇ ನಾಯಕನಾಗಿ ಮಾನವ ಹಕ್ಕುಗಳ ಪರ ಹೋರಾಡಿ ಕಾಲೇಜಿನಿಂದ ಬಹಿಷ್ಕಾರವನ್ನು ಪಡೆದರು. ಧೃತಿಗೆಡದ ಬೋಸರು ಆ ಸಮಯದಲ್ಲಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡು ತಮ್ಮ ಆತ್ಮಸ್ಥೈರ್ಯವನ್ನು ಇನ್ನೂ ಬಲಗೊಳಿಸಿಕೊಂಡರು. ಇಂಗ್ಲೆಂಡಿನಲ್ಲಿ 1920ರಲ್ಲಿ ತಂದೆಯ ಸಲಹೆಯಂತೆ ಇಂಡಿಯನ್ ಸಿವಿಲ್ ಸರ್ವಿಸ್ ಅರ್ಹತಾ ಪರೀಕ್ಷೆಯಲ್ಲಿ 4 ನೇ gÁåAPï ಪಡೆದರು. 
ನೇತಾಜಿಯವರು ಫಾರ್ವರ್ಡ್ ಬ್ಲಾಕ್‍ನ ಮೂಲಕ ಕಾನೂನು ಭಂಗ ಚಳುವಳಿಗೆ ಕರೆ ನೀಡಿ ಗೃಹಬಂಧನಕ್ಕೊಳಗಾದರು. ವೀರನಾಯಕನಿಗೆ ಸುಮ್ಮನೆ ಕೂರಲಾಗುವುದೇ? ಒಬ್ಬ ಮೌಲ್ವಿಯ ವೇಷದಲ್ಲಿ ಚತುರತೆಯಿಂದ ಪಾರಾಗಿ ಜರ್ಮನಿಯನ್ನು ತಲುಪಿದರು. ನಂತರ ಜಪಾನಿಗೆ ತೆರಳಿ ರಾಸ್ ಬಿಹಾರಿ ಬೋಸ್ ರವರು ಸ್ಥಾಪಿಸಿದ್ದ ಐ ಎನ್ ಎನ ನಾಯಕತ್ವವನ್ನು ವಹಿಸಿದರು. ಹೀಗೆ ದೇಶವಿದೇಶಗಳಲ್ಲಿನ ಭಾರತೀಯರನ್ನು, ಯುದ್ಧಖೈದಿಗಳನ್ನು ಒಗ್ಗೂಡಿಸಿ ಸೈನ್ಯ ಶಕ್ತಿಯನ್ನು ನಿರ್ಮಿಸಿದರು.

ಬಂಡವಾಳಶಾಹಿಯನ್ನು ವಿರೋಧಿಸಿದ ನೇತಾಜಿಯವರಿಗೆ ಅಧಿಕಾರ ಜನಸಾಮಾನ್ಯರ ಕೈಗೆ ಬರಬೇಕೆಂಬ ಆಸೆಯಿತ್ತು. ದೇಶದಲ್ಲಿ ಶ್ರೀಮಂತ-ಬಡವ, ಮೇಲ್ಜಾತಿ-ಕೆಳಜಾತಿ, ಗಂಡು-ಹೆಣ್ಣಿನ ನಡುವೆ ಇರುವ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಇವರು ಬಹಳಷ್ಟು ಶ್ರಮಿಸಿದರು. ಹೆಣ್ಣುಮಕ್ಕಳೂ ಸಮಾಜದಲ್ಲಿ ಸಮಾನರು; ಅವರು ಅಬಲೆಯರಲ್ಲ. ಅವರಲ್ಲಿರುವ ಮನೋಬಲ ಅಮೋಘವೆಂದು ಗುರುತಿಸಿ ಐ ಎನ್ ಎ ನಲ್ಲಿ ಮಹಿಳಾ ಪಡೆಯನ್ನು ನಿರ್ಮಿಸಿದರು. 1943 ಅಕ್ಟೋಬರ್ 22ರಂದು ಸಿಂಗಪೂರಿನಲ್ಲಿ ಮಹಿಳಾ ಯೋಧರ ಪಡೆಯೊಂದನ್ನು ಸ್ಥಾಪಿಸಿದರು. ಆಗಿನ ಕಾಲದಲ್ಲಿ ಮನೆಯ ಹೊಸ್ತಿಲಿನಿಂದ ಹೊರಬರುವುದು ಕೂಡ ಮಹಿಳೆಗೆ ದುಸ್ತರವಾಗಿತ್ತು. ಆದರೂ ಸುಭಾಷರ ಕರೆಗೆ ಓಗೊಟ್ಟು ತಂದೆ ತಾಯಿಯರನ್ನು, ಗಂಡನನ್ನು, ಮಕ್ಕಳನ್ನು, ಒಡಹುಟ್ಟಿದವರನ್ನು ತೊರೆದು ಸೈನ್ಯವನ್ನು ಸೇರಿದರು. ತಮ್ಮ ಕೋಮಲ ಹಸ್ತಗಳಲ್ಲಿ ಬಂದೂಕು ಮತ್ತು ರೈಫಲ್ ಗಳನ್ನು ಹಿಡಿದು ಹೋರಾಟದಲ್ಲಿ ಪಾಲ್ಗೊಂಡರು. ಹೋರಾಟದ ಪಥ ಅತ್ಯಂತ ಕಠಿಣ ಎಂದರಿತೂ ವಿದೇಶದಲ್ಲಿ ಸೈನಿಕ ತರಬೇತಿ ಪಡೆದು ಯುದ್ಧಕ್ಕೆ ಸನ್ನದ್ಧರಾದರು. ಅದರ ಹಿಂದಿನ ಪ್ರೇರಕ ಶಕ್ತಿ, ಸುಭಾಷ್.

ನೇತಾಜಿಯವ್‍ರು ಎಲ್ಲರಂತೆ ಹೆಣ್ಣು ಅಬಲೆಯೆಂದೆಣಿಸದೆ, ಪ್ರತಿಯೊಬ್ಬ ಹೆಣ್ಣಿನಲ್ಲೂ ವೀರತನವನ್ನು ಗುರುತಿಸಿದರು. “ನಮಗೆ ಬೇಕಿರುವುದು ಸಹಸ್ರ ಸಹಸ್ರ ಝಾನ್ಸಿ ರಾಣಿಯರು, ಕೇವಲ ಒಬ್ಬರಲ್ಲ” ಎಂದು ಹೇಳಿ ಅಸಂಖ್ಯಾತ ಹೆಣ್ಣುಮಕ್ಕಳಲ್ಲಿ ದೇಶಕ್ಕಾಗಿ ಜೀವತ್ಯಾಗ ಮಾಡುವ ಮನೋಸ್ಥೈರ್ಯವನ್ನು ತುಂಬಿದರು. ಇಂತಹ ವೀರ ರಾಣಿಯರ ಪಡೆಯೇ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ರೆಜಿಮೆಂಟ್.

ಇವರ ಶಿಸ್ತು, ಪಥಸಂಚಲನ ಮತ್ತು ಶಸ್ತ್ರಗಳನ್ನು ಬಳಸುವ ವೈಖರಿ ಕಂಡು ಮೊದಲು ಅನುಮಾನಿಸಿದ ಜಪಾನಿಯರೇ ಅಚ್ಚರಿಗೊಂಡರು. ಈ ಅದ್ಭುತ ಕಾರ್ಯ ಸಾಧ್ಯವಾದದ್ದು ನೇತಾಜಿಯವರಿಂದ ಮಾತ್ರ. ಅವರ ದೃಷ್ಟಿಕೋನ ಪ್ರಗತಿಪರವಾದದ್ದು. ನಂತರ ಇವರು ಬ್ರಿಟಿಷರ ಮೇಲೆ ಯುದ್ಧ ಘೋಷಿಸಿ, ಅಚಲ ವಿಶ್ವಾಸದಿಂದ ಮುನ್ನುಗ್ಗಿದರು. ಮೊದಲು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ವಶಪಡಿಸಿಕೊಂಡರು. 1944 ಫೆಬ್ರವರಿ 4 ರಂದು ಅರಕಾನ್ ನಲ್ಲಿ ನಡೆದ ಯುದ್ಧದಲ್ಲಿ ನೇತಾಜಿ ಸೈನ್ಯ ಬ್ರಿಟಿಷ್ ಸೇನೆಯನ್ನು ಸೋಲಿಸಿ ಇತಿಹಾಸ ನಿರ್ಮಿಸಿತು. ನಂತರ ಬರ್ಮಾದ ಕಡೆಯಿಂದ ಇಂಪಾಲ ಮತ್ತು ಕೊಹಿಲಾಗಳಲ್ಲಿ ಯುದ್ಧ ಮುಂದುವರಿಸಿದರು. ಆ ದಟ್ಟ ಅಡವಿಯಲ್ಲಿ ನಿದ್ರಾಹಾರವಿಲ್ಲದೆ ಯೋಧರು ಯುದ್ಧ ಮಾಡಿದರು. ಜೊತೆಗೆ ಭೋರಿಡುವ ಮಳೆಬೇರೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಬ್ರಿಟಿಷರ ವೈಮಾನಿಕ ಧಾಳಿಯಿಂದ ಯೋಧರು ತತ್ತರಿಸಿಹೋದರು. ಇತ್ತ ಕಡೆ ಜಪಾನ್ ಸಹಾಯವೂ ನಿಂತು ಹೋಯಿತು.

ಐ ಎನ್ ಎ ದಿಗ್ವಿಜಯಕ್ಕೆ ಪ್ರಕೃತಿ ವಿಕೋಪ ಜೊತೆ ಕಾಲರಾ, ಮಲೇರಿಯಾ ಮಾರಕವಾಗಿ ಪರಿಣಮಿಸಿತು. ಮುಂದಿನ ತೊಂದರೆ ಅರಿತ ನೇತಾಜಿ ಸೈನ್ಯವನ್ನು ಹಿಂತೆಗೆದುಕೊಂಡರು. ಅಲ್ಲಿಗೆ 1945 ರಲ್ಲಿ ದ್ವಿತೀಯ ಮಹಾಯುದ್ಧದಲ್ಲಿ ಜಪಾನ್ ಸೋಲನ್ನಪ್ಪಿತು. ಇನ್ನು ರಷ್ಯಾದ ನೆರವು ಅವಶ್ಯಕವೆಂದರಿತು ವಿಮಾನ ಪ್ರಯಾಣ ಕೈಗೊಂಡರು. ಮಾರ್ಗ ಮಧ್ಯೆ ಅಪಘಾತದಲ್ಲಿ ಮರಣಿಸಿದರೆಂಬ ಸುದ್ದಿ ಎಲ್ಲೆಡೆ ಹಬ್ಬಿತು. 
ಅವರ ಅಪೂರ್ಣಗೊಂಡ ಕಾರ್ಯವನ್ನು ಇತರೆ ಸ್ವಾತಂತ್ರ್ಯ ಹೋರಾಟಗಾರರು ಪೋರ್ಣಗೊಳಿಸಿದರು. ಇಂದೂ ಸಹ ಅವರ ಸಾಹಸಮಯ ಬದುಕು ಅನ್ಯಾಯದ ವಿರುದ್ಧ ಹೋರಾಡುವ ಎಲ್ಲರಿಗೂ ಸ್ಫೂರ್ತಿಯ ಸಂಕೇತವಾಗಿದೆ. 

- ಸುಧಾ ಜಿ

ಕಾಮೆಂಟ್‌ಗಳಿಲ್ಲ: