Pages

ಧರ್ಮನಿರಪೇಕ್ಷತೆ: "ಸ್ನೇಹ - ಸಹಿಷ್ಣುತೆ"






"ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ
ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯ"
- ಬಸವಣ್ಣ

     ಗೆಳತಿ ಸಮೀನಾ ಮನೆಗೆ ಹೋಗಿದ್ದೆ..... ಈ ಸ್ನೇಹ ತೀರ ಇತ್ತೀಚಿನದ್ದಾದರೂ ಮೊದಲ ಭೇಟಿಯಲ್ಲೆ ಸಮೀನಾ ಅದರಲ್ಲು ಅವರ ತಾಯಿಯ ನಿಷ್ಕಲ್ಮಶ ಪ್ರೇಮಕ್ಕೆ ಮನಸ್ಸು ಫಿದಾ ಆಗಿತ್ತು...... ನನ್ನ ಮದುವೆ ನಿಶ್ಚಯದ ವಿಷಯ ಕೇಳಿ ಸ್ವಂತ ಮಗಳ ಮದುವೆಯೇನೊ ಎಂಬಂತೆ ಸಂತೋಷಪಟ್ಟರು. ತಿಂಡಿ ಪಾನಕಗಳಿಂದ ಉದರವನ್ನು, ಪ್ರೀತಿ ಮಮತೆಯಿಂದ ಹೃದಯವನ್ನು ತುಂಬಿದರು .....ಹರಸಿದರು. ಅವರೊಂದಿಗೆ ಇದ್ದಷ್ಟು ಹೊತ್ತು ನನಗೆ ಕಂಡಿದ್ದು ಒಂದೇ..... ಅವರ ಸರಳ ಸಹಜ ಪ್ರೀತಿ. ಅದು ಬಿಟ್ಟರೆ ಅವರ ಧರ್ಮ, ಬುರ್ಖಾ, ಕುಂಕುಮವಿರದ ಹಣೆ ಇವಾವುದು ಕಾಣಲೇ ಇಲ್ಲ. ಸಾಮರಸ್ಯ ಬೆಳೆಯಲು ಇದಕ್ಕಿಂತ ಹೆಚ್ಚಿನದೇನಿರಬೇಕೊ ತಿಳಿಯದು. ಈ ಸಮಯದಲ್ಲಿ ನನ್ನಜ್ಜಿ ಹೇಳಿದ ಕಥೆಯೊಂದು ಇಲ್ಲಿ ನೆನಪಾಗುತಿದೆ ಆಕೆ ಚಿಕ್ಕ ಹುಡುಗಿಯಾಗಿದ್ದಾಗ ದರ್ಗಾದಲ್ಲಿ ವರುಷಕ್ಕೊಮ್ಮೆ ನಡೆಯುವ ಉತ್ಸವದಲ್ಲಿ ಬಲು ಉತ್ಸಾಹದಿಂದ ಭಾಗವಹಿಸುತ್ತಿದ್ದರಂತೆ.... ಪವಿತ್ರಾಕ್ಷರಗಳ ಲೋಹಬಿಲ್ಲೆಗಳನ್ನು ಹೊತ್ತು ಊರೆಲ್ಲ ಸುತ್ತಾಡಿ ಅಗ್ನಿಕುಂಡದಲ್ಲಿ ಹಾಯುತ್ತಿದ್ದರಂತೆ... ಹೀಗೊಂದು ದಿನ ನಮ್ಮಜ್ಜಿ ಹಂದಿ ಮಾಂಸವನ್ನು ತಿಂದು ಮಲಗಿದಾಗ ಕನಸಲ್ಲಿ ಆ ದೇವರು ಬಂದು ಕೆನ್ನೆಗೆ ಬಾರಿಸಿದ್ದರಂತೆ (ಆಕೆಯ ಮನದ ಭಯ ಕನಸಾಗಿದೆಯೆಂದು ತಿಳಿಯದಷ್ಟು ಅಮಾಯಕತನ) ಮರುದಿನವೇ ಅಜ್ಜಿ ದರ್ಗಾಗೆ ಹೋಗಿ ಇನ್ನೆಂದೂ ಹಂದಿ ಮಾಂಸ ಮುಟ್ಟೆನೆಂದು ಅಲವತ್ತುಕೊಂಡರಂತೆ. ಈ ಘಟನೆ ಹೇಳುವಾಗೆಲ್ಲ ಈಗಲೂ ಆಕೆಯಲ್ಲಿ ಇನ್ನಿಲ್ಲದ ಶ್ರದ್ಧೆ ಭಕ್ತಿ. ಮೂಢನಂಬಿಕೆ, ಭ್ರಮೆ, ಆಸ್ತಿಕತೆ ಎಂಬಂಶಗಳನ್ನು ಪಕ್ಕಕಿಟ್ಟಾಗ....ಆ ಕಥೆಯಲ್ಲಿ ನನಗೆ ಎದ್ದು ಕಂಡಿದ್ದು ಆಕೆಯ ಅಪಾಯರಹಿತ ಅಜ್ಞಾನ, (ವಿಷ ತುಂಬುವ ಮೇಧಾವಿಗಿಂತ ಆಕೆಯದು ಉತ್ತಮತನ ಎಂದೆನಿಸಿತು) ದೇವರೆಂದರೆ ಎಲ್ಲರಿಗೂ ದೇವರೆ ಎಂಬ ಮೇರು ಭಕ್ತಿಭಾವ. ಇಲ್ಲಿ ನಮ್ಮಜ್ಜಿಯಂಥ ಮನಸುಗಳಿಗೆ ಒಳಿತು ಕೋರುವ ದೇವರಷ್ಟೇ ಬೇಕಿತ್ತು, ಧರ್ಮಗಳ ಗೊಡವೆ ಬೇಕಿರಲಿಲ್ಲ. ನಾವು ಇನ್ನೊಬ್ಬರ ಆಚಾರ ವಿಚಾರಗಳನ್ನು ಗೌರವಿಸಿ ಪಾಲಿಸುವುದು ಬೇಡ....ಕನಿಷ್ಠ ಸಹಿಷ್ಣುತಾ ಭಾವವಿಲ್ಲದೇ ಹೋದರೆ ನಮ್ಮ ಹಿರಿಯರಿಂದ ನಾವು ಕಲಿತದ್ದು ಸೊನ್ನೆ ಎಂತಾಗುತ್ತದೆ. ಇಂದು ನಾವು ಬಹಳ ತಿಳಿದುಕೊಂಡಿದ್ದೇವೆ. ಯಾವುದನ್ನೂ ಸಾಕ್ಷಿರಹಿತ ಒಪ್ಪೆವು. ಅಂತಹ ಜ್ಞಾನವು ಸಮಾಜದ ಒಳಿತಿಗೆ ದುಡಿಯಬೇಕೆ ವಿನಃ ಒಡೆಯುವುದೇಕೆ? ಅಂತಹ ಜ್ಞಾನವು ಸಮಾಜದ ಒಳಿತಿಗೆ ದುಡಿಯಬೇಕೆ ವಿನಃ ಒಡೆಯುವುದಕ್ಕಾಗಬಾರದು. ಒಡೆಯುವ ಜ್ಞಾನ ವ್ಯರ್ಥವೆಂದೆ ನನ್ನನಿಸಿಕೆ. ಗತಕಾಲದ ಪ್ರಮಾದಗಳಿಂದ ನಾವು ಪಾಠ ಕಲಿಯದಿದ್ದಲ್ಲಿ ಇತಿಹಾಸ ಮರುಕಳಿಸುತ್ತದೆ.....ಎಂಬ ಎಚ್ಚರಿಕೆ ನಮ್ಮಲ್ಲಿ ಸದಾ ರಿಂಗಣಿಸಬೇಕು. ಒಂದು ಸಣ್ಣ ಕಿಡಿ ಕಾಡ ಸುಡುವಂತೆ ಸೂಕ್ಷ್ಮತೆಯ ಗ್ರಹಿಸಿ ಜಾಗ್ರತೆ ವಹಿಸದಿದ್ದಲ್ಲಿ ನೆಮ್ಮದಿ, ಶಾಂತಿಯುತ ಜೀವನ ದೊರಕದೆ ಜೀವ ಕೈಲಿಡಿದು ಭೀತಿಯಿಂದ ಅಲೆಯುವಂಥ ದಿನಗಳು ದೂರದಲ್ಲಿಲ್ಲವೆಂದು ಅರಿಯಬೇಕಾಗುತ್ತದೆ. ಭೀಷ್ಮ ಸಹಾನಿಯವರ 'ತಮಸ್' ಇದಕ್ಕೆ ಒಂದು ಜೀವಂತ ಸಾಕ್ಷಿ.  ಪ್ರಪಂಚದಲ್ಲೆಲ್ಲೂ ಇರದ ವೈವಿಧ್ಯತೆಯ ನಾಡು ನಮ್ಮ ಭಾರತ. ಏಕತೆ ಅದರ ವೈಶಿಷ್ಟ್ಯ. ಇಂಥ ಶ್ರೇಷ್ಠ ಭೂಮಿಯಲ್ಲಿ ಜನಿಸಿದ ನಮ್ಮ ಧ್ಯೇಯ ವಾಕ್ಯ "ಸಹಿಷ್ಣುತೆ" ಎಂತಾಗಬೇಕು.


- ಉಷಾಗಂಗೆ.ವಿ

ಕಾಮೆಂಟ್‌ಗಳಿಲ್ಲ: