Pages

ವ್ಯಕ್ತಿ ಪರಿಚಯ - ಮೇಧಾ ಪಾಟ್ಕರ್




ನರ್ಮದಾ ನದಿ ಹೆಸರಿನೊಂದಿಗೆ ಕೇಳಿ ಬರುವ ಮತ್ತೊಂದು ಹೆಸರು ಪರಿಸರವಾದಿ, ಬುಡಕಟ್ಟು ಸಮುದಾಯದ ಪರ ನಿಂತು ಹೋರಾಟ ಮಾಡುತ್ತಿರುವ ಮಹಿಳೆ ಮೇಧಾ ಪಾಟ್ಕರ್.
ಮೇಧಾರವರು 1954 ಡಿಸೆಂಬರ್ 1 ರಂದು ಮುಂಬಯಿಯ ಚೆಂಬೂರಿನಲಿ ಜನಿಸಿದರು. ತಂದೆ ವಸಂತ ಖಾನೋಲ್ಕರ್, ಇವರು ಕೂಡ ಸ್ವಾತಂತ್ರ್ಯ ಹೋರಾಟಗಾರರು,ಕಾರ್ಮಿಕ ಚಳುವಳಿಯಲ್ಲಿ ಭಾಗವಹಿಸಿದವರು. ತಾಯಿ ಇಂದೂ ಖಾನೋಲ್ಕರ್ ಮಹಿಳಾ ಸಂಘಟನೆಯಲ್ಲಿ ಭಾಗವಹಿಸುತ್ತಿದ್ದರು. ಸ್ವಧಾರ್ ಎಂಬ ಸಂಘಟನೆಯಲ್ಲಿದ್ದವರು. ಇಂತಹ ಕುಟುಂಬದಲ್ಲಿ ಜನಿಸಿದ ಮೇಧಾರವರಲ್ಲಿ ಹೋರಾಟ ರಕ್ತಗತವಾಗಿಯೇ ಹರಿದು ಬಂದಿತು. ಬಾಲ್ಯದಿಂದಲೂ ಸಮಾಜಸೇವೆ ಎಂದರೆ ಮುನ್ನುಗ್ಗುತ್ತಿದ್ದರು. ತಮ್ಮ ಶಿಕ್ಷಣದಲ್ಲೂ ಸಮಾಜ ಸೇವೆಯನ್ನೇ ಆಯ್ದುಕೊಂಡರು. ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ನಲ್ಲಿ ಸಾಮಾಜಿಕ ಸೇವಾಕಾರ್ಯಗಳ ಬಗ್ಗೆ ಸ್ನಾತಕೋತ್ತರ ಪದವಿಯನ್ನು ಪಡೆದರು.  
ಶಿಕ್ಷಣ ಮುಗಿಸಿದ ನಂತರ ಇವರು ಮುಂಬೈನಲ್ಲಿ ಕೆಲವು ಸ್ವಯಂ ಸೇವಾ ಸಂಘದೊಡನೆ ಕೆಲಸ ಮಾಡಿದರು. ಮಕ್ಕಳಿಗೆ ಶಿಕ್ಷಣಮಹಿಳೆಯರಿಗೆ ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು ಹಾಗೂ  ಮೂಲಭೂತ ಸೌಕರ್ಯಗಳ ಬಗ್ಗೆ ಅವರಿಗೆ ವಿವರಿಸಿ ಅವರು ತಮ್ಮ ಹಕ್ಕುಗಳಿಗಾಗಿ ಹೋರಾಡುವಂತೆ ಉತ್ತೇಜಿಸಿದರು. ನಂತರ ಇವರು ಟಾಟಾ ಇನ್ಸಿಟ್ಯೂಟ್ನಲ್ಲಿ ಪಿಎಚ್‌ಡಿ  ಮಾಡುತ್ತಾ ಬೋಧನೆ ಕಾರ್ಯವನ್ನು ಮಾಡುತ್ತಿದ್ದರು. ಜೊತೆಯಲ್ಲಿಯೇ ಸಮಾಜ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು.
ಆ ಸಮಯದಲ್ಲಿ ಈಶಾನ್ಯ ಗುಜರಾತಿನಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದ ಬುಡಕಟ್ಟು ಸಮುದಾಯದವರ ಶೋಚನೀಯ ಸ್ಥಿತಿಯನ್ನು ನೋಡಿ ಮೇಧಾರವರು ತಮ್ಮ ವೈಯಕ್ತಿಕ ಸಾಧನೆಯನ್ನು ಬಿಟ್ಟು ಬುಡಕಟ್ಟು ಸಮುದಾಯದವರ ಸುಧಾರಣೆಗಾಗಿ ತಮ್ಮ  ಜೀವನವನ್ನು ಮುಡಿಪಾಗಿಟ್ಟರು.
ಸ್ವಾತಂತ್ರ್ಯಾ ನಂತರ ದೇಶದ ಅಭಿವೃದ್ಧಿ ಸರ್ಕಾರದ ಗುರಿಯಾಯಿತು. ಈ ನಿಟ್ಟಿನಲ್ಲಿ ಸರ್ಕಾರವು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಾರಂಭಿಸಿತು. ಪಂಚವಾರ್ಷಿಕ ಯೋಜನೆಗಳ ಮೂಲಕ ಹಲವಾರು ಬೃಹತ್‌ ಅಣೆಕಟ್ಟು  ಯೋಜನೆಗಳನ್ನು ಜಾರಿಗೆ ತಂದಿತು. ಇವುಗಳು ಬಹುಪಯೋಗಿ ಯೋಜನೆಗಳೆಂದು ಅಂದಿನ ಪ್ರಧಾನಿ ನೆಹರೂ ಅವರು "ಅಣೆಕಟ್ಟುಗಳು ಆಧುನಿಕ ಭಾರತದ ದೇವಾಲಯಗಳು" ಎಂದು ಅಭಿಪ್ರಾಯಪಟ್ಟಿದ್ದರು.
ಈ ಯೋಜನೆಗಳಿಂದ ಎಲ್ಲರಿಗೂ ಕುಡಿಯುವ ನೀರು ಕೃಷಿಕರಿಗೆ ನೀರಾವರಿ ಕೈಗಾರಿಕೆಗಳು ಮೊದಲಾದವುಗಳಿಗೆ ವಿದ್ಯುತ್ ಪೂರೈಕೆ ನಿರುದ್ಯೋಗ ಮೊದಲಾದ ಉಪಯೋಗಗಳು ಮೇಲ್ನೋಟಕ್ಕೆ ಕಾಣುತ್ತಿತ್ತು. ಆದರೆ ಒಳಹೊಕ್ಕು ನೋಡಿದರೆ ಇದರಲ್ಲಿ ಹಲವಾರು ಸಮಸ್ಯೆಗಳು ಇದ್ದವು. ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿ ದೊಡ್ಡ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಿದಾಗ ಅದು ಹಲವಾರು ಹಳ್ಳಿಗಳನ್ನು ಮುಳುಗಿಸುತ್ತಿತ್ತು. ಅಲ್ಲಿನ ಜನರೆಲ್ಲರೂ ತಮ್ಮ ಮನೆ ಜಮೀನು ಎಲ್ಲವನ್ನೂ ಬಿಟ್ಟು ಬೇರೆಡೆಗೆ ಹೋಗಬೇಕಾಗಿತ್ತು . ಇದರಿಂದ ಅವರ ಜೀವನ ರೀತಿ, ಸಂಸ್ಕೃತಿ ಎಲ್ಲವೂ ಬದಲಾಗುತ್ತಿತ್ತು. ಆರಂಭದಲ್ಲೇ ಇದಕ್ಕೆ ಪ್ರತಿರೋಧ ಕಂಡು ಬಂದರೂ ಯಾರೂ ಅಷ್ಟಾಗಿ ಚಿಂತಿಸಲಿಲ್ಲ ಸ್ವಾವಲಂಬಿ ರಾಷ್ಟ್ರದ ಚಿಂತನೆಯಲ್ಲಿದ್ದ ಸರ್ಕಾರ ಇದನ್ನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳಲಿಲ್ಲ. ಸಂತ್ರಸ್ತರು ತಮ್ಮ ಕಳೆದುಕೊಂಡ ಭೂಮಿಯಷ್ಟೇ ಮೌಲ್ಯದ ಭೂಮಿಯನ್ನು ಅಥವಾ ಜೀವನೋಪಾಯವನ್ನು ಕಲ್ಪಿಸಿಕೊಡಿ ಎಂದು ಹೋರಾಡಲು ಪ್ರಾರಂಭಿಸಿದರು. ಆದರೆ ಸಂತ್ರಸ್ತರಿಗೆ ಕನಿಷ್ಠ ಪರಿಹಾರ ನೀಡಿ ಅವರನ್ನು ಆ ಪ್ರದೇಶದಿಂದ ಬೇರೆ ಕಡೆಗೆ ಕಳುಹಿಸಲಾಗುತ್ತಿತ್ತು ವಿನಃ ಅವರ ಸಂಸ್ಕೃತಿ, ಜೀವನಪದ್ಧತಿಗಳ ಬಗ್ಗೆ ಸರ್ಕಾರ ಗಮನಿಸಲಿಲ್ಲ.
ಇಂತಹ ಅಣೆಕಟ್ಟು ಯೋಜನೆಗಳಲ್ಲಿ ನರ್ಮದಾ ಯೋಜನೆಯೂ ಒಂದು.  ನರ್ಮದಾ ನದಿಯ ಮಧ್ಯಪ್ರದೇಶದ ಅಮರಕಂಟಕ ಎಂಬಲ್ಲಿ  ಹುಟ್ಟುತ್ತದೆ. ಇದು ಮಧ್ಯಪ್ರದೇಶ ಮಹಾರಾಷ್ಟ್ರಗಳಲ್ಲಿ ಹರಿದು ಗುಜರಾತಿನಲ್ಲಿ ಬಂದು ಸಮುದ್ರಕ್ಕೆ ಸೇರುತ್ತದೆ. ನರ್ಮದಾ ನದಿ ಹರಿಯುವ ಪ್ರದೇಶಗಳು ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶಗಳಾಗಿವೆ. ಇಲ್ಲಿ ಬುಡಕಟ್ಟು ಸಮುದಾಯಗಳು ಆದಿವಾಸಿಗಳು ವಾಸಿಸುತ್ತಿದ್ದಾರೆ. ಇವರ ಕಸುಬು ಕೃಷಿ ಚಟುವಟಿಕೆ ಪಶುಸಂಗೋಪನೆ. ಈ ನಿತ್ಯದ ಚಟುವಟಿಕೆಗಳಿಗೆಲ್ಲ ನರ್ಮದೆಯ ಆಧಾರ. ಇಂತಹ ಪರಿಸ್ಥಿತಿಯಲ್ಲಿ ನರ್ಮದೆಗೆ ಅಣೆಕಟ್ಟು ಕಟ್ಟಿದರೆ ಇವರ ಬದುಕು ಬಹುತೇಕ ನಾಶವಾದಂತೆಯೇ ಸರಿ.
1921 ರಲ್ಲಿ ಬ್ರಿಟಿಷ್ ಸರಕಾರವೇ ನರ್ಮದೆಗೆ ಅಣೆಕಟ್ಟು ಕಟ್ಟುವ ಯೋಜನೆಯನ್ನು ಹೊಂದಿತ್ತು. 1961 ರಲ್ಲಿ ಗುಜರಾತ್ ಸರ್ಕಾರ ಮೊದಲ ಹಂತಕ್ಕೆ ಅನುಮತಿ ಕೊಟ್ಟಿತು. 1968ರಲ್ಲಿ ಸರ್ಕಾರ ಸಮಿತಿಯೊಂದನ್ನು ನೇಮಿಸಿತು. ಅದು 1971 ರಲ್ಲಿ ಸಮಿತಿ ತನ್ನ ವರದಿಯನ್ನು ನೀಡಿತು. ಇದರ ಪ್ರಕಾರ ಅಣೆಕಟ್ಟು ನಿರ್ಮಾಣದಿಂದ ಗುಜರಾತ್ ರಾಜಸ್ತಾನ ಮತ್ತು ಮಹಾರಾಷ್ಟ್ರಗಳ 5 ಕೋಟಿ ಜನರಿಗೆ ಕುಡಿಯುವ ನೀರು ಕೃಷಿಗೆ ನೀರಾವರಿ ಮತ್ತು ಕೈಗಾರಿಕೆಗಳಿಗೆ  ಬೇಕಾದ ವಿದ್ಯುತ್ ನೀಡುತ್ತೇವೆ, ಜೊತೆಗೆ ಅರಣ್ಯ ಪ್ರದೇಶಗಳ ನಾಶ ಹಲವು ಹೆಕ್ಟೇರ್ ಕೃಷಿ ಭೂಮಿ ಮತ್ತು ಮನೆಗಳ ಮುಳುಗಡೆ ಕೆಲವು ಸಾವಿರ ಜನರು ತಮ್ಮ ನೆಲೆ ಬಿಟ್ಟು ಬೇರೆಡೆಗೆ ಹೋಗಬೇಕು ಎಂದು ತಿಳಿಸಿತು ಹಾಗೂ ಸಂತ್ರಸ್ತರಿಗೆ ಪುನರ್ವಸತಿ ವ್ಯವಸ್ಥೆಯಾಗುವವರೆಗೆ ಗ್ರಾಮಗಳ ಮುಳುಗಡೆ ಆಗಬಾರದು ಎಂಬ ಷರತ್ತನ್ನು ಹಾಕಿತ್ತು.

ಯೋಜನೆ ಆರಂಭವಾಗುತ್ತಿದ್ದ೦ತೆಯೇ ಅಪಾಯದ ಅರಿವನ್ನರಿತ ಕೆಲವು ಸ್ಥಳೀಯರು ಹೋರಾಟ ಪ್ರಾರಂಭಿಸಿದರು. ಇಂತಹ ಸಂದರ್ಭದಲ್ಲಿ 1985 ರಲ್ಲಿ ಮೇಧಾರವರು ಟಾಟಾ ಇನ್ಸ್ಟಿಟ್ಯೂಟ್ ನ ಹಲವು ಸಹೋದ್ಯೋಗಿಗಳೊಂದಿಗೆ ಇಲ್ಲಿನ ವಿಷಯಗಳನ್ನು ತಿಳಿಯಲು ನರ್ಮದಾ ಕಣಿವೆಗೆ ಬಂದರು. ಅಲ್ಲಿನ ಜನರ ದಾರುಣ ಸ್ಥಿತಿಯನ್ನು ಕಂಡು ಮೇಧಾರವರು ಅವರಿಗೆ ಪರಿಸ್ಥಿತಿಯನ್ನು ವಿವರಿಸಿ ಅವರಲ್ಲಿ ಅರಿವು ಮೂಡಿಸುವಲ್ಲಿ ಯಶಸ್ವಿಯಾದರು. ಇದಕ್ಕಾಗಿ ಅವರು ತಮ್ಮ ಭಾಷೆ ಎಲ್ಲವನ್ನು ಬದಲಾವಣೆ ಮಾಡಿಕೊಂಡು ಸ್ಥಳೀಯರ ಭಾಷೆಯನ್ನು ಕಲಿತು ಆದಿವಾಸಿಗಳಲ್ಲಿ ಒಬ್ಬರಾಗಿದ್ದರು. ಮೇಧಾರವರು ಸರ್ಕಾರ ಮತ್ತು ಸ್ಥಳೀಯರ ನಡುವಿನ  ಸೇತುವೆಯಾಗಿದ್ದರು.
ಈ ಎಲ್ಲಾ ಓಡಾಟದ ನಡುವೆ ಅವರು ತಮ್ಮ ಪಿಎಚ್‌ಡಿ ಅಧ್ಯಯನವನ್ನು  ಮಧ್ಯದಲ್ಲಿಯೇ ನಿಲ್ಲಿಸಿ ಹೋರಾಟದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಈ ನಡುವೆ ವಿಶ್ವಬ್ಯಾಂಕ್ ಭಾರತಕ್ಕೆ ಆರ್ಥಿಕ ನೆರವು ನೀಡಲು ಮುಂದೆ ಬಂದಿತ್ತು. ಇದರಿಂದ ದೇಶದಲ್ಲಿ ಬಹುರಾಷ್ಟ್ರೀಯ ಕಾರ್ಪೋರೇಟ್ ಸಂಸ್ಥೆಗಳು ತಲೆ ಎತ್ತಬಹುದು ಎಂದರಿತ ಮೇಧಾರವರು ಇದನ್ನು ತಡೆಯಲು ಮುಂದಾದರು. ಇದಕ್ಕಾಗಿ ಮಧ್ಯಪ್ರದೇಶದಿಂದ ಸರ್ದಾರ್ ಸರೋವರದವರೆಗೆ 36 ದಿನಗಳ ಸುದೀರ್ಘ ಪ್ರತಿಭಟನಾ ಪಾದಯಾತ್ರೆ ಕೈಗೊಂಡರು. ಅಹಿಂಸಾತ್ಮಕ ಪ್ರತಿಭಟನೆ ಮಾಡುತ್ತಿದ್ದರೂ ಪೋಲಿಸರು ಸತ್ಯಾಗ್ರಹಿಗಳ ಮೇಲೆ ಕೈ ಮಾಡಿದರು. ಮೇಧಾರವರ ಮೇಲೂ ಕೈ ಮಾಡಿದರು. ಇದರಿಂದ ಅವರ ಹೋರಾಟಕ್ಕೆ ಮತ್ತಷ್ಟು ಬೆಂಬಲ ದೊರೆಯಿತು. ಸ್ಥಳೀಯವಾಗಿ ಹೋರಾಟ ನಡೆಸುತ್ತಿದ್ದ ಎಲ್ಲರೂ ಒಂದೆಡೆ ಸೇರಿದರು.

ಪರಿಣಾಮವಾಗಿ 1989 ರಲ್ಲಿ ಮೇಧಾರವರ ನೇತೃತ್ವದಲ್ಲಿ 'ನರ್ಮದಾ ಬಚಾವೊ ಆಂದೋಲನ' ರಚನೆಯಾಯಿತು. ಜನ ಜೀವನ ಮತ್ತು ಪರಿಸರಕ್ಕೆ ಮಾರಕವಾಗಿದ್ದ ಯೋಜನೆಯನ್ನು ನಿಲ್ಲಿಸುವುದು ವಿಶ್ವ ಬ್ಯಾಂಕನ್ನು ಇದರಿಂದ ಹೊರಗಿರಿಸುವುದು ಮತ್ತು ನರ್ಮದಾ ಕಣಿವೆಯ ಜನಕ್ಕೆ ಸರಿಯಾದ ಮಾಹಿತಿ ನೀಡಿ ಅವರ ಪುನರ್ವಸತಿ ಮತ್ತು ಪರಿಹಾರ ನೀಡಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಈ ಆಂದೋಲನಕ್ಕೆ ಯುವಕರು ಸಾಮಾಜಿಕ ಕಾರ್ಯಕರ್ತರು ಎಲ್ಲರೂ ಸೇರಿದರು. ಪ್ರಖ್ಯಾತ ಪರಿಸರವಾದಿ ಗಾಂಧಿವಾದಿ ಸಾಮಾಜಿಕ ಕಾರ್ಯಕರ್ತ ಬಾಬಾ ಆಮ್ಟೆ ಅವರು ಇವರ ಜೊತೆ ಕೈಜೋಡಿಸಿದರು. 1990 ರಲ್ಲಿ 5000 ಕ್ಕೂ ಹೆಚ್ಚು ಸಂತ್ರಸ್ತರು ಧರಣಿ ಸತ್ಯಾಗ್ರಹ ಮಾಡಿದರು.

1991ರ ಜನವರಿಯಲ್ಲಿ ಮೇಧಾರವರು ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಇವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಇಪ್ಪತ್ತೊಂದು ದಿನಗಳವರೆಗೆ ಮುಂದುವರಿಸಿದರು. ಆದರೆ ದೇಹಸ್ಥಿತಿ ವಿಷಮಿಸಿದ್ದರಿಂದ ಉಪವಾಸವನ್ನು ನಿಲ್ಲಿಸಿದರು. ಇದನ್ನೆಲ್ಲ ನೋಡಿದ ವಿಶ್ವ ಬ್ಯಾಂಕ್ ಯೋಜನೆಯ ಬಗ್ಗೆ ತಿಳಿಯಲು ಸಮಿತಿಯೊಂದನ್ನು ನೇಮಿಸಿತು. 1993 ರಲ್ಲಿ ಈ ಸಮಿತಿ ಪುನರ್ವಸತಿ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುವುದು ಸತ್ಯ ಎಂಬ ವರದಿಯನ್ನು ನೀಡಿತು. ಇದರಿಂದ ವಿಶ್ವ ಬ್ಯಾಂಕ್ ಹಣ ನೀಡುವುದಿಲ್ಲ ಎಂದು ತಿಳಿಸಿತು. ಇದು ಮೇಧಾರವರಿಗೆ ದೊರೆತ ಮೊದಲ ಗೆಲುವು. ವಿಶ್ವ ಬ್ಯಾಂಕ್ ನಿರಾಕರಣೆಯಿಂದ ಸರ್ಕಾರ ತಾನೇ ಮುಂದೆ ಬಂದು ಈ ಯೋಜನೆಗೆ ನೆರವು ನೀಡುವುದಾಗಿ ಘೋಷಿಸಿತು. ಮೇಧಾ ಮತ್ತು ಅವರ ಸಂಗಡಿಗರು ಪುನಃ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದರು. ಕೋರ್ಟ್ ಇವರ ವಾದವನ್ನು ಎತ್ತಿ ಹಿಡಿದು ಸರ್ಕಾರಕ್ಕೆ ಮುಂದುವರಿಯದಂತೆ ಹೇಳಿತು. ಇದು ಇವರಿಗೆ ದೊರೆತ ಎರಡನೇ ಗೆಲುವು. 1999ರಲ್ಲಿ ಸರ್ಕಾರ ಮತ್ತೆ ಮೇಲ್ಮನವಿ ಸಲ್ಲಿಸಿತು. ಆಗ ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ತೀರ್ಪನ್ನು  ಸರ್ಕಾರಕ್ಕೆ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಬಹುದು ಎಂದು ತಿಳಿಸಿತು. ಇದರಿಂದ ಸರ್ಕಾರ ಮತ್ತೆ ತನ್ನ ಕಾರ್ಯವನ್ನು ಆರಂಭಿಸಿತು.
ಮೇಧಾರವರು
 ಪುನರ್ವಸತಿ ವ್ಯವಸ್ಥೆಯನ್ನು ಮಾಡಿ ಮುಂದುವರಿಯಿರಿ ಅಂತ ಎಷ್ಟು ಹೇಳಿದರೂ ಕೇಳದೆ ಸರ್ಕಾರ ತನ್ನ ಕಾರ್ಯವನ್ನು ಮುಂದುವರಿಸಿತು. ಇದರಿಂದ 
ಮೇಧಾರವರು
 ತಮ್ಮ ಹೋರಾಟವನ್ನು ಇನ್ನೂ ಒಂದು ಹೆಜ್ಜೆ ಮುಂದಿಟ್ಟರು ಅದೇ ಸಮರ್ಪಣಾ ಸತ್ಯಾಗ್ರಹ. ಸರ್ದಾರ್ ಸರೋವರ ಅಣೆಕಟ್ಟಿನಲ್ಲಿ ನೀರನ್ನು ಸಂಗ್ರಹಿಸಿದಾಗ ಮೊದಲು ಮುಳುಗಡೆಯಾಗುವ ಹಳ್ಳಿ ಎಂದರೆ ಮಣಿಬೇಲಿ. 
ಮೇಧಾರವರು
 ಮಣಿಬೇಲಿಯಲ್ಲಿ ಆತ್ಮಸಮರ್ಪಣೆ ಸತ್ಯಾಗ್ರಹವನ್ನು ಪ್ರಾರಂಭಿಸಿದರು. 2002 ರಲ್ಲಿ  ನಡೆದ ಈ ಸಮರ್ಪಣಾ ಸತ್ಯಾಗ್ರಹದಲ್ಲಿ ಇವರ ಪ್ರಾಣಕ್ಕೆ ಅಪಾಯ ಉಂಟಾಗಿತ್ತು. ಅವರ ಬೆಂಬಲಿಗರು ಅವರನ್ನು ಉಳಿಸಿಕೊಂಡರು.


ನರ್ಮದಾ ಯೋಜನೆಯ ವಿರುದ್ಧ ಹೋರಾಟವಿಲ್ಲದೆ ಮೇಧಾರವರು ಇತರ ಅನೇಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಇದಕ್ಕಾಗಿ ಇವರು ಸ್ವಯಂಸೇವಾ ಸಂಘಟನೆಗಳ ಒಕ್ಕೂಟವನ್ನು ಕಟ್ಟಿದರು ಇದೇ ನ್ಯಾಷನಲ್ ಅಲಯನ್ಸ್ ಆಫ್ ಪೀಪಲ್ಸ್ ಮೂವ್ಮೆಂಟ್ (ಜನತಾ ಚಳವಳಿಗಳ ರಾಷ್ಟ್ರೀಯ ಒಕ್ಕೂಟ) ಸರ್ವರಿಗೂ ಸಮಾನ ಮತ್ತು ಸುಸ್ಥಿರ ಅಭಿವೃದ್ಧಿಯ ಒತ್ತಾಯ ಇದರ ಮೂಲ ಉದ್ದೇಶವಾಗಿತ್ತು. 
ಮೇಧಾರವರು 
ಹೋರಾಟಗಾರರು ಹಾಗೂ  ಉತ್ತಮ ವಾಗ್ಮಿ ಮತ್ತು  ಭಾಷಣಕಾರರು. ಮೂರು ಗಂಟೆಗಳ ಕಾಲ ಸುದೀರ್ಘವಾಗಿ ಭಾಷಣ ಮಾಡುತ್ತಿದ್ದರು. ಇವರು ಜನರೊಡನೆ ಸಂಪರ್ಕ ಬೆಳೆಸಲು ಸ್ಥಳೀಯ ಭಾಷೆಗಳನ್ನು  ಕಲಿತಿರುವರು. ಇವರು ಕರ್ನಾಟಕದಲ್ಲೂ ಸಹ ತಮ್ಮ ಹೋರಾಟವನ್ನು  ನಡೆಸಿರುವರು. ಕೆಜಿಎಫ್ ನಲ್ಲಿ ಚಿನ್ನದ ಗಣಿಯ ಕೆಲಸ ನಿಂತು ಹೋದ ನಂತರ ನಿರುದ್ಯೋಗಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ನಡೆದ ಹೋರಾಟದಲ್ಲಿ ಭಾಗವಹಿಸಿದ್ದರು. ಹಾಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಹೋರಾಟದಲ್ಲೂ ಸಹ ಪಾಲ್ಗೊಂಡಿದ್ದರು. ಮೇದಾರ ಅವರು ಸ್ಪೆಷಲ್ ಎಕನಾಮಿಕ್ ಝೋನ್ ಎಂಬ ಅಭಿವೃದ್ಧಿ ವಿಧಾನವನ್ನು ಸಹ ವಿರೋಧಿಸುತ್ತಿದ್ದರು ಹಾಗೂ ನದಿಗಳ ಜೋಡಣೆಯ ಬಗ್ಗೆ ಸಹಾಯ ಇವರ ವಿರೋಧವನ್ನು ತ್ತಿದ್ದರು.ಮೇದಾರವರು 2003 ರಲ್ಲಿ ಕೇರಳದ ಪಾಚಿಮಾಡ ಗ್ರಾಮದಲ್ಲಿ ನಡೆದ ಹೋರಾಟದಲ್ಲೂ ಸಹ ಕೈಜೋಡಿಸಿದರು. 1984ರಲ್ಲಿ ನಡೆದ ಭೋಪಾಲ್ ಅನಿಲ ದುರಂತದಲ್ಲಿ ಸಂತ್ರಸ್ತರ ಜೊತೆ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಛತ್ತೀಸ್ಗಢ ಆದಿವಾಸಿಗಳು, ಬುಡಕಟ್ಟು ಜನಾಂಗದವರು ತಮ್ಮ ಮೂಲಭೂತ ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟದಲ್ಲಿ ಭಾಗವಹಿಸಿದ್ದರು1997 ರಲ್ಲಿ ಪೋಕ್ರಾನ್ ನಲ್ಲಿ ಗುಪ್ತವಾಗಿ ಪರಮಾಣು ಬಾಂಬ್ ಗಳನ್ನು ಸ್ಪೋಟಿಸಲಾಯಿತು. "ನಮ್ಮ ದಲಿತರ ಆದಿವಾಸಿಗಳ ಬಡವರ ಹಸಿವು ಹಿಂಗದೆ ಯಾವ ರಾಷ್ಟ್ರವೂ ಸ್ವಾಭಿಮಾನಿ ಎನಿಸಲು ಸಾಧ್ಯವಿಲ್ಲ" ಎಂದು ಜನತೆಯ ಜೊತೆ ಪ್ರತಿಭಟಿಸಿದರು.
ಇಷ್ಟೆಲ್ಲಾ ಹೋರಾಟ ನಡೆಸಿದ ಇವರಿಗೆ 1990 ರಲ್ಲಿ ಗೋಲ್ಡ್ ಮ್ಯಾನ್ ಪ್ರಶಸ್ತಿಯನ್ನು ನೀಡಲಾಯಿತು. 1991ರಲ್ಲಿ ರೈಟ್ ಲೈವ್ಲಿ ಹುಡ್‌ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಹೀಗೆ ಹಲವಾರು ಹೋರಾಟಗಳಲ್ಲಿ ಭಾಗವಹಿಸಿದ ಇವರು ನೊಂದವರ ದನಿಯಾಗಿದ್ದಾರೆ. ಧರಣಿ ಮತ್ತು ಉಪವಾಸ ಸತ್ಯಾಗ್ರಹ ಇವರ ಆಯುಧಳಾಗಿದ್ದವು. ಇವರು ಸಮಾಜಸೇವೆಗಾಗಿ ತಮ್ಮ ವೈವಾಹಿಕ ಜೀವನವನ್ನು ತೊರೆದರು. ಗಂಡ ಪ್ರವೀಣ್ ಪಾಟ್ಕರ್ ಮತ್ತು ಮೇಧಾರವರು ಪರಸ್ಪರ ಒಪ್ಪಿ ವಿಚ್ಛೇದನ ಪಡೆದುಕೊಂಡರು. ಹೆಸರಿನಲ್ಲಿರುವಂತೆಯೇ ಮೇಧಾವಿಯಾಗಿದ್ದ ಇವರು ಬಾಲ್ಯದಿಂದಲೂ ಶೋಷಿತರ ಮತ್ತು ದುರ್ಬಲರ ಪರ ನಿಂತಿದ್ದರು. ವಿಶಾಲ ಮನಸ್ಸಿವರಾಗಿದ್ದ ಇವರದು ಬರೀ ಪ್ರತಿಭಟನಾ ಹೋರಾಟವಲ್ಲ‌ ಜೊತೆಯಲ್ಲೇ ಶೋಷಿತರ ಉದ್ಧಾರಕ್ಕಾಗಿಯೂ ಬಹಳ ಶ್ರಮಿಸಿ ಆದರ್ಶ ಮಹಿಳೆಯಾಗಿದ್ದಾರೆ.
- ವಿಜಯಲಕ್ಷ್ಮಿ ಎಂ ಎಸ್

ಕಾಮೆಂಟ್‌ಗಳಿಲ್ಲ: