Pages

ಸ್ವಾತಂತ್ರ್ಯ ಯೋಧರು - ಅದಮ್ಯ ಚೇತನ ನೇತಾಜಿ ಸುಭಾಷ್ ಚಂದ್ರ ಬೋಸ್


ಭಾರತ ಕಂಡ ಧೀರೋದಾತ್ತ ನಾಯಕರಲ್ಲಿ ನೇತಾಜಿಯವರು ಅಗ್ರಗಣ್ಯರೆಂದರೆ ತಪ್ಪಾಗಲಾರದು. ಸ್ವಾತಂತ್ರ್ಯ ಹೋರಾಟದ ಬಿಸಿ ಎಲ್ಲೆಡೆ ಕಾಡ್ಗಿಚ್ಚಿನಂತೆ ವ್ಯಾಪಿಸುವ ವೇಳೆಯಲ್ಲಿ ಅಹಿಂಸಾವಾದಿಗಳ ಸಂಧಾನಪರ ನೀತಿಯು ಜನರ ಉತ್ಸಾಹಕ್ಕೆ ತಣ್ಣೀರೆರಚುತ್ತಿತ್ತು. ಬ್ರಿಟಿಷ್ ಸರ್ಕಾರವು ಎಂತಹ ನೀಚ ಕೃತ್ಯವೆಸಗಿದರೂ ಯಾವುದೇ ಹಿಂಸಾತ್ಮಕ ಪ್ರತಿಭಟನೆ ನಡೆಸಬಾರದು, ಸರ್ಕಾರ ನೋವು ನೀಡಿದರೆ ಅದನ್ನು ಸಹಿಸಬೇಕೇ ವಿನಾ ಪ್ರತಿನೋವು ಕೊಡಬಾರದು ಎಂಬ ಅರ್ಥವಿಲ್ಲದ ನೀತಿಯಿಂದ ಬೇಸತ್ತಿದ್ದ ಜನರಿಗೆ ತಮ್ಮಲ್ಲಿ ಕುದಿಯುತ್ತಿದ್ದ ಬಡಬಾಗ್ನಿಯನ್ನು ಹೊರಚೆಲ್ಲಲು ಒಬ್ಬ ಪ್ರಚಂಡ ನಾಯಕನಿಗಾಗಿ ಪರಿತಪಿಸುತ್ತಿದ್ದಾಗ ಎದ್ದವರೇ ನೇತಾಜಿ.
1897ರ ಜನವರಿ 23 ರಂದು ಒರಿಸ್ಸಾ ರಾಜ್ಯದ ಕಟಕ್ ನಗರದಲ್ಲಿ ಪ್ರಖ್ಯಾತ ವಕೀಲರಾದ ಜಾನಕೀನಾಥ್ ಬೋಸ್ ಮತ್ತು ಪ್ರಭಾವತಿ ದೇವಿಯವರ ಮಗನಾಗಿ ಸುಭಾಷ್ ಜನಿಸಿದರು. ತಂದೆ ತಾಯಿಯರ ವ್ಯಕ್ತಿತ್ವದಿಂದ ಪ್ರಭಾವಿತರಾದ ಬೋಸ್‍ರವರು, ಪ್ರಮುಖವಾಗಿ ತಮ್ಮ ತಾಯಿಯ ಆದರ್ಶಗಳು ಮತ್ತು ದೇಶಪ್ರೇಮವು ಅವರನ್ನು ಒಬ್ಬ ಸ್ವಾತಂತ್ರ್ಯ ಸಂಗ್ರಾಮದ ಯೋಧನನ್ನಾಗಿಸಿತು. 
ಬಾಲ್ಯದಲ್ಲಿ ತನ್ನ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿದ್ದ ಚಳುವಳಿ, ಮುಷ್ಕರ, ವಿದೇಶಿ ಸರಕುಗಳ ಬಹಿಷ್ಕಾರ ಮುಂತಾದ ಘಟನೆಗಳು ಇವರಲ್ಲಿ ದೇಶಪ್ರೇಮದ ಜ್ವಾಲೆಯನ್ನು ಹೊತ್ತಿಸಿತು. ಅಲ್ಲದೆ ಇವರು ಓದುತ್ತಿದ್ದ ಯೂರೋಪಿಯನ್ ಶಾಲೆಯಲ್ಲಿ ಆಂಗ್ಲರ ಮಕ್ಕಳಿಗಿದ್ದ ವಿಶೇಷ ಸವಲತ್ತುಗಳು ನಮಗೇಕಿಲ್ಲವೆಂದು ಚಿಂತಿಸುತ್ತಿದ್ದರು. ವಿದ್ಯಾರ್ಥಿಯಾಗಿರುವಾಗಲೇ ನಾಯಕನಾಗಿ ಮಾನವ ಹಕ್ಕುಗಳ ಪರ ಹೋರಾಡಿ ಕಾಲೇಜಿನಿಂದ ಬಹಿಷ್ಕರಿಸಲ್ಪಟ್ಟರು. ಧೃತಿಗೆಡದ ಬೋಸರು ಆ ಸಮಯದಲ್ಲಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡು ತಮ್ಮ ಆತ್ಮಸ್ಥೈರ್ಯವನ್ನು ಇನ್ನೂ ಬಲಗೊಳಿಸಿಕೊಂಡರು. 
ಇಂಗ್ಲೆಂಡಿನಲ್ಲಿ 1920ರಲ್ಲಿ ತಂದೆಯ ಸಲಹೆಯಂತೆ ಇಂಡಿಯನ್ ಸಿವಿಲ್ ಸರ್ವಿಸ್ ಅರ್ಹತಾ ಪರೀಕ್ಷೆಯಲ್ಲಿ 4 ನೇ  ಸ್ಥಾನ ಪಡೆದು ಉತ್ತೀರ್ಣರಾದರು. ಆದರೆ ಅವರು ಆಳುವ ಸರ್ಕಾರದ ಸೇವಕನಾಗಲು ಸುತರಾಂ ಒಪ್ಪದೆ, ಸರ್ಕಾರಿ ಸವಲತ್ತುಗಳನ್ನೊಳಗೊಂಡ ಉನ್ನತ ಪದವಿಯನ್ನು ತ್ಯಜಿಸಿ, ದೌರ್ಜನ್ಯಕ್ಕೆ ಸಿಲುಕಿದ ಜನರನ್ನು ರಕ್ಷಿಸಲೋಸುಗ ಸ್ವಾತಂತ್ರ್ಯ ಸಮರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಜ್ಜಾದರು. 

ಕಾಂಗ್ರೆಸ್ಸನ್ನು ಸೇರಿದ ಸುಭಾಷರಿಗೆ ಗಾಂಧೀಜಿಯವರು ತಳೆದ ನಿಲುವು ಮತ್ತು ಕೈಗೊಂಡ ಕಾರ್ಯಗಳಾವುದರಿಂದಲೂ ಸ್ವಾತಂತ್ರ್ಯ ಲಭಿಸುವ ಲಕ್ಷಣಗಳು ಯಾವುದೂ ಇವರಿಗೆ ಕಂಡುಬರಲಿಲ್ಲ. ತಮ್ಮದೇ ಆದಂಥ ಕಾರ್ಯ ವೈಖರಿ ಮತ್ತು ತೀಕ್ಷ ಭಾಷಣಗಳಿಂದ ಜನಮನ ಸೂರೆಗೊಂಡರು. ಅನೇಕ ಬಾರಿ ಕಠಿಣ ಜೈಲುವಾಸ ಅನುಭವಿಸಿದರು. ಬಹುಬೇಗನೆ ಜನಪ್ರಿಯರಾಗಿ 1927ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾದರು. 
ನಂತರ ಗಾಂಧೀಜಿಯವರು ಹಾಗೂ ಸುಭಾಷರಿಗೆ ಭಿನ್ನಾಭಿಪ್ರಾಯಗಳು ಕಂಡುಬಂದವು. ಕಾಂಗ್ರೆಸ್‍ನಲ್ಲಿ ಒಡಕು ಉಂಟಾಗಿ ಎರಡನೇ ಬಾರಿ ಕೂಡ ಗಾಂಧೀಜಿಯವರ ತೀವ್ರ ವಿರೋಧದೊಂದಿಗೆ ಸಹ ಎಲ್ಲರ ಆಶಯದಂತೆ ಅಧ್ಯಕ್ಷರಾಗಿ ಆಯ್ಕೆಯಾದರು. ಅಧಿಕಾರ ದಾಹ ಎಳ್ಳಷ್ಟೂ ಇರದ ಸುಭಾಷರು ಅಹಿಂಸಾವಾದಿಗಳ ವರ್ತನೆಯಿಂದ ನೊಂದು 1939 ಏಪ್ರಿಲ್ 29ರಂದು ಅಧಿಕಾರ ಸ್ಥಾನಕ್ಕೆ ರಾಜೀನಾಮೆ ನೀಡಿದರು. 
ನಂತರ ಕಾಂಗ್ರೆಸ್ ನಲ್ಲೇ ಮೋತಿಲಾಲ್ ನೆಹರೂರವರೊಂದಿಗೆ ಸೇರಿ  ‘ಫಾರ್ವರ್ಡ್ ಬ್ಲಾಕ್’ ನಿರ್ಮಿಸಿ ಎಂದಿಗಿಂತಲೂ ಹೆಚ್ಚಿನ ಚಟುವಟಿಕೆಗಳಲ್ಲಿ ನಿರತರಾದರು. ದೇಶದೆಲ್ಲೆಡೆ ಸಂಚರಿಸಿ ಜನರನ್ನು ಒಗ್ಗೂಡಿಸಿದರು. ಹೋದೆಡೆಯೆಲ್ಲಾ ಜನರ ಮಹಾಪೂರವೇ ನೇತಾಜಿಯವರ ಹಿಂದೆ ಹರಿದುಬರುತ್ತಿತ್ತು. ಅವರ ಮಾತುಗಳಲ್ಲಿ ಅಂತಹ ಸೆಳೆತವಿತ್ತು. ಇವರ ಜನಪ್ರಿಯತೆಯನ್ನು ಸಹಿಸದ ಗಾಂಧೀವಾದಿಗಳು ಇವರನ್ನು ಕಾಂಗ್ರೆಸ್‍ನಿಂದ ಹೊರಹಾಕಿದರು. 
ನೇತಾಜಿಯವರು ಫಾರ್ವರ್ಡ್ ಬ್ಲಾಕ್‍ನ ಮೂಲಕ ಕಾನೂನುಭಂಗ ಚಳುವಳಿಗೆ ಕರೆ ನೀಡಿ ಗೃಹಬಂಧನಕ್ಕೊಳಗಾದರು. ವೀರನಾಯಕನಿಗೆ ಸುಮ್ಮನೆ ಕೂರಲಾಗುವುದೇ? ಒಬ್ಬ ಮೌಲ್ವಿಯ ವೇಷದಲ್ಲಿ ಚತುರತೆಯಿಂದ ಪರಾಗಿ ಜರ್ಮನಿಯನ್ನು ತಲುಪಿದರು. ನಂತರ ಜಪಾನಿಗೆ ತೆರಳಿ ರಾಸ್ಬಿಹಾರಿ ಬೋಸ್ ರವರು ಸ್ಥಾಪಿಸಿದ್ದ ಐ ಎನ್ ಎ ನಾಯಕತ್ವವನ್ನು ವಹಿಸಿದರು. ಹೀಗೆ ದೇಶವಿದೇಶಗಳಲ್ಲಿನ ಬಾರತೀಯರನ್ನು, ಯುದ್ಧಖೈದಿಗಳನ್ನು ಒಗ್ಗೂಡಿಸಿ ಸೈನ್ಯ ಶಕ್ತಿಯನ್ನು ನಿರ್ಮಿಸಿದರು. 

ಬಂಡವಾಳಶಾಹಿಯನ್ನು ವಿರೋಧಿಸಿದ ನೇತಾಜಿಯವರಿಗೆ ಅಧಿಕಾರ ಜನಸಾಮಾನ್ಯರ ಕೈಗೆ ಬರಬೇಕೆಂಬ ಆಸೆಯಿತ್ತು. ದೇಶದಲ್ಲಿ ಶ್ರೀಮಂತ-ಬಡವ, ಮೇಲ್ಜಾತಿ- ಕೆಳಜಾತಿ, ಗಂಡು- ಹೆಣ್ಣಿನ ನಡುವೆ ಇರುವ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಇವರು ಬಹಳಷ್ಟು ಶ್ರಮಿಸಿದರು. ಹೆಣ್ಣುಮಕ್ಕಳೂ ಸಮಾಜದಲ್ಲಿ ಸಮಾನರು; ಅವರು ಅಬಲೆಯರಲ್ಲ. ಅವರಲ್ಲಿರುವ ಮನೋಬಲ ಅಮೋಘವೆಂದು ಗುರುತಿಸಿ ಐಎನ್‍ಎ ನಲ್ಲಿ ಮಹಿಳಾ ಪಡೆಯನ್ನು ನಿರ್ಮಿಸಿದರು. 1943 ಅಕ್ಟೋಬರ್ 22ರಂದು ಸಿಂಗಪೂರಿನಲ್ಲಿ ಮಹಿಳಾ ಯೋಧರ ಪಡೆಯೊಂದನ್ನು ಸ್ಥಾಪಿಸಿದರು. 

ಆಗಿನ ಕಾಲದಲ್ಲಿ ಮನೆಯ ಹೊಸ್ತಿಲಿನಿಂದ ಹೊರಬರುವುದು ಕೂಡ ಮಹಿಳೆಗೆ ದುಸ್ತರವಾಗಿತ್ತು. ಆದರೂ ಸುಭಾಷರ ಕರೆಗೆ ಓಗೊಟ್ಟು ಹೆಣ್ಣು ಮಕ್ಕಳು ಸೈನ್ಯವನ್ನು ಸೇರಿದರು. ‘ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಹುದು’ ಎಂಬ ಮಾತಿಗೆ ಅನುಗುಣವಾಗಿ ಆ ನಾರಿಯರು ಬಂದೂಕುಗಳನ್ನು ಹಿಡಿದು ಹೋರಾಟದಲ್ಲಿ ಪಾಲ್ಗೊಂಡರು. ಹೋರಾಟದ ಪಥ ಅತ್ಯಂತ ಕಠಿಣ ಎಂದರಿತೂ ವಿದೇಶದಲ್ಲಿ ಸೈನಿಕ ತರಬೇತಿ ಪಡೆದು ಯುದ್ಧಕ್ಕೆ ಸನ್ನದ್ಧರಾದರು. ಅದರ ಹಿಂದಿನ ಪ್ರೇರಕ ಶಕ್ತಿ, ಸುಭಾಷ್.
ನೇತಾಜಿಯವರು ಹೆಣ್ಣುಮಕ್ಕಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡರು ಈ ರೀತಿಯ ಅಪಾಯಕಾರಿ ಕೆಲಸಗಳಲ್ಲಿ, ಅದರಲ್ಲೂ ಸೈನ್ಯದಲ್ಲಿರಬಾರದು ಎಂಬುದನ್ನು ನಂಬದೆ ಸ್ತ್ರೀ ಅಬಲೆಯಲ್ಲ ಸಬಲೆ, ಪ್ರತಿಯೊಬ್ಬ ಹೆಣ್ಣಿನಲ್ಲೂ ದಿಟ್ಟತನವಿದೆ ಎಂಬುದನ್ನು ಇಡೀ ಜಗತ್ತಿಗೇ ತೋರಿಸಿಕೊಟ್ಟರು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ತ್ರೀಯರು ಸಹ ಸಮಸಮನಾಗಿ ಭಾಗಿಯಾಗಬೇಕೆಂದು ನಂಬಿ, ಹೆಣ್ಣು ಮಕ್ಕಳು ಹೋರಾಟದಲ್ಲಿ ಧುಮುಕುವಂತೆ ಪ್ರೇರೇಪಿಸಿದರು. “ನಮಗೆ ಬೇಕಿರುವುದು ಸಹಸ್ರ ಸಹಸ್ರ ಝಾನ್ಸಿ ರಾಣಿಯರು, ಕೇವಲ ಒಬ್ಬರಲ್ಲ,” ಎಂದು ಹೇಳಿ ಅಸಂಖ್ಯಾತ ಹೆಣ್ಣುಮಕ್ಕಳಲ್ಲಿ ದೇಶಕ್ಕಾಗಿ ಜೀವತ್ಯಾಗ ಮಾಡುವ ಮನೋಸ್ಥೈರ್ಯವನ್ನು ತುಂಬಿದರು. ಇಂತಹ ವೀರ ರಾಣಿಯರ ಪಡೆಯೇ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರೆಜಿಮೆಂಟ್. ಇಡೀ ಜಗತ್ತಿನಲ್ಲಿ ಮೊಟ್ಟಮೊದಲನೆಯ ಮಹಿಳಾ ರೆಜಿಮೆಂಟ್. ಸೈನ್ಯದಲ್ಲಿಯೂ ಸಹ ಹೆಣ್ಣುಮಕ್ಕಳನ್ನು ಪುರುಷರಿಗೆ ಸಮಾನವಾಗಿ ನೋಡಿಕೊಂಡ ನೇತಾಜಿ ಅವರನ್ನು ತಮ್ಮ ಸಹವರ್ತಿಗಳಾಗಿ ಕಂಡರು. ಲಿಂಗತಾರತಮ್ಯವಿಲ್ಲದ, ಜಾತಿ, ಭಾಷೆ, ಕೋಮು ಇತ್ಯಾದಿಗಳ ಭೇದವಿಲ್ಲದ ಒಂದು ಪುಟ್ಟ ಭಾರತ ಅಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಇದೇ ರೀತಿಯ ಸಮಾಜವನ್ನು ಭಾರತದುದ್ದಗಲಕ್ಕೂ ಕಟ್ಟಲು ನೇತಾಜಿ ಆಶಿಸಿದ್ದರು. 
ಇವರ ಶಿಸ್ತು, ಪಥಸಂಚಲನ ಮತ್ತು ಶಸ್ತ್ರಗಳನ್ನು ಬಳಸುವ ವೈಖರಿ ಕಂಡು ಮೊದಲು ಅನುಮಾನಿಸಿದ ಜಪಾನಿಯರೇ ಅಚ್ಚರಿಗೊಂಡರು. ಈ ಅದ್ಭುತ ಕಾರ್ಯ ಸಾಧ್ಯವಾದದ್ದು ನೇತಾಜಿಯವರಿಂದ ಮಾತ್ರ. ಅವರ ದೃಷ್ಟಿಕೋನ ಪ್ರಗತಿಪರವಾದದ್ದು. ನಂತರ ಇವರು ಬ್ರಿಟಿಷರ ಮೇಲೆ ಯುದ್ಧ ಘೋಷಿಸಿ, ಅಚಲ ವಿಶ್ವಾಸದಿಂದ ಮುನ್ನುಗ್ಗಿದರು. ಮೊದಲು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ವಶಪಡಿಸಿಕೊಂಡರು. 1944 ಫೆಬ್ರವರಿ 4 ರಂದು ಅರಕಾನ್‍ನಲ್ಲಿ ನಡೆದ ಯುದ್ಧದಲ್ಲಿ ನೇತಾಜಿ ಸೈನ್ಯ ಬ್ರಿಟಿಷ್ ಸೇನೆಯನ್ನು ಸೋಲಿಸಿ ಇತಿಹಾಸ ನಿರ್ಮಿಸಿತು. ನಂತರ ಬರ್ಮಾದ ಕಡೆಯಿಂದ ಇಂಪಾಲ ಮತ್ತು ಕೊಹಿಲಾಗಳಲ್ಲಿ ಯುದ್ಧ ಮುಂದುವರಿಸಿದರು. ಆ ದಟ್ಟ ಅಡವಿಯಲ್ಲಿ ನಿದ್ರಾಹಾರವಿಲ್ಲದೆ ಯೋಧರು ಯುದ್ಧ ಮಾಡಿದರು. ಜೊತೆಗೆ ಭೋರಿಡುವ ಮಳೆ ಬೇರೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಬ್ರಿಟಿಷರ ವೈಮಾನಿಕ ದಾಳಿಯಿಂದ ಯೋಧರು ತತ್ತರಿಸಿಹೋದರು. ಇತ್ತ ಕಡೆ ಜಪಾನ್ ಸಹಾಯವೂ ನಿಂತು ಹೋಯಿತು.
ಐಎನ್‍ಎ ದಿಗ್ವಿಜಯಕ್ಕೆ ಪ್ರಕೃತಿ ವಿಕೋಪದ ಜೊತೆಗೆ ಕಾಲರಾ, ಮಲೇರಿಯಾ ಮಾರಕವಾಗಿ ಪರಿಣಮಿಸಿತು. ಜೊತೆಗೆ 1945 ರಲ್ಲಿ ದ್ವಿತೀಯ ಮಹಾಯುದ್ಧದಲ್ಲಿ ಜಪಾನ್ ಸೋಲನ್ನಪ್ಪಿತು. ಇನ್ನು ರಷ್ಯಾದ ನೆರವು ಅವಶ್ಯಕವೆಂದರಿತು ಅವರು ವಿಮಾನ ಪ್ರಯಾಣ ಕೈಗೊಂಡರು. ಮಾರ್ಗ ಮಧ್ಯೆ ಅಪಘಾತದಲ್ಲಿ ಮರಣಿಸಿದರೆಂಬ ಸುದ್ದಿ ಕೇಳಿ ಬಂದಿತು. ಐಎನ್‍ಎ ಸೈನಿಕರನ್ನು ಬಂಧಿಸಿ ಬ್ರಿಟಿಷ್ ಸರ್ಕಾರ ಬಹಳಷ್ಟು ಜನರಿಗೆ ಗಲ್ಲು ಶಿಕ್ಷೆ, ಗಡಿಪಾರು ಶಿಕ್ಷೆ ವಿಧಿಸಿತು. ರಾಷ್ಟ್ರದ್ಯಾಂತ ಬ್ರಿಟಿಷರ ವಿರುದ್ಧ, ಐಎನ್‍ಎ ಸೈನಿಕರ ಪರ ಜನತೆ ಪ್ರತಿಭಟನೆಗಳನ್ನು ಮಾಡಿದರು. ನಂತರ ಆಗಸ್ಟ್ 15 1947ರಂದು ಭಾರತ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. 
ಸ್ವಾತಂತ್ರ್ಯವನ್ನೇ ತಮ್ಮ ಜೀವನವೆಂದು ಭಾವಿಸಿ ತಮ್ಮ ಇಡೀ ಬದುಕನ್ನು ಅದಕ್ಕಾಗಿ ಮುಡಿಪಾಗಿಟ್ಟು, ಆ ಹೋರಾಟದಲ್ಲಿ ಮಡಿದ ಆ ಅಮರ ಚೇತನ ಇಂದಿಗೂ ಭಾರತೀಯರಿಗೆ ಪ್ರಾತಃಸ್ಮರಣೀಯರೇ. ಅವರ ತ್ಯಾಗ, ಬಲಿದಾನಗಳೂ ಇಂದಿಗೂ ಎಲ್ಲಾ ಜನರಿಗೆ ಮಾರ್ಗದರ್ಶಕವೇ. ಮಹಿಳೆಯರು ಅಬಲೆಯರಲ್ಲ ಎಂದು ವಿಶ್ವಕ್ಕೆ ಸಾರಿದ ಆ ವಿಶ್ವಮಾನ್ಯ ವ್ಯಕ್ತಿ ಜಗತ್ತಿನ ಎಲ್ಲಾ ಮಹಿಳೆಯರಿಗೂ, ಅವರ ಹೋರಾಟಗಳಿಗೂ ಆದರ್ಶವೇ ಆಗಿದ್ದಾರೆ.   
 ದೀಪಶ್ರೀ ಜೆ

ಕಾಮೆಂಟ್‌ಗಳಿಲ್ಲ: