Pages

ಲಾವಣೆ - ಅಕ್ಷರದವ್ವನ ಕಥೆ

 ಲಾವಣಿ - ಅಕ್ಷರದವ್ವನ ಕಥೆ


ಅಕ್ಷರದವ್ವನ ಕಥೆಯನು ಹೇಳುವೆವು

ಕೇಳಿರಿ ನೀವು ಜನರೆಲ್ಲಾ

ಅಕ್ಷರಕ್ರಾಂತಿಯ ಮಾಡಿದ ದಿಟ್ಟೆ

ಸಾವಿತ್ರಿಬಾಯಿ ಕಥೆಯನ್ನು


ಸಾವಿರದ ಎಂಟನೂರ ಮೂವತ್ತೊಂದರಲಿ

ಮಹಾರಾಷ್ಟ್ರದಲಿ ಜನಿಸಿದರು

ವಿವಾಹವಾಗಿ ಬಾಲ್ಯದಲ್ಲಿಯೇ 

ಜ್ಯೋತಿಭಾ ಮನೆಯನು ಸೇರಿದರು


ರೀತಿರಿವಾಜು ಉಲ್ಲಂಘಿಸಿಯೇ

ಜ್ಯೋತಿಭಾರವರು ಗುರುವಾದರು

ಅಕ್ಷರ ಕಲಿತ ಸಾವಿತ್ರಿಬಾಯಿ

ದೇಶದ ಮೊದಲ ಶಿಕ್ಷಕಿಯಾದ್ರು


ಹೆಣ್ಣುಮಕ್ಕಳಿಗೆ ಶಾಲೆಯ ತೆರೆದು

ಪಾಠವ ಮಾಡಲು ಹೊರಟಾಗ

ಸಗಣಿಯ ಎರಚಿ ಬೆದರಿಸಲೆತ್ನಿಸಿ 

ವಿಫಲರಾದರು ಜನರಾಗ


ಹಿಂಜರಿಯದೆ ಕೆಲಸವ ಮಾಡಲು

ಫುಲೆಯು ಧೈರ್ಯವ ನೀಡಿದರು

ಅಂಜದೆ ಅಳುಕದೆ ಪಾಠವ ಮಾಡಲು

ಫಾತಿಮಾರವರು ಜೊತೆಯಾದರು


ಬಾಲ್ಯವಿವಾಹ, ವಿಧವಾ ಸಮಸ್ಯೆ

ಬಾಲಕಿಯರ ಗರ್ಭಪಾತ

ಎಲ್ಲವ ಕಂಡು ನೊಂದ ಅವರು

ಬಾಲಿಕಾಶ್ರಮವ ಕಟ್ಟಿದರು


ಹೆಣ್ಣುಮಕ್ಕಳಿಗೆ ಸ್ಟೈಫಂಡ್ ನೀಡುತ

ಉತ್ತೇಜನವ ನೀಡಿದರು

ಮರಾಠಿಯಲ್ಲಿ ಕವಿತೆಯ ಬರೆದು  

ಮೊದಲ ಕವಯಿತ್ರಿ ಎನಿಸಿದರು


ಸಮಾಜದೆಲ್ಲರ ಏಳಿಗೆ ಬಯಸುತ 

ಫುಲೆಯವರೊಂದಿಗೆ ಕೈಜೋಡಿಸಿ

"ಸತ್ಯಶೋಧಕ ಸಮಾಜ" ಕಟ್ಟಿ

ಜನರಿಗೆ ದಾರಿಯ ತೋರಿದರು


ಪ್ಲೇಗಿನ ಹಾವಳಿ ಎಲ್ಲೆಡೆ ಕಾಣಲು

ಹೆದರದೆ ಸೇವೆಗೆ ಸಜ್ಜಾದರು

ರೋಗಿಯ ಸೇವೆ ಮಾಡುತ ಇದ್ದಾಗ

ರೋಗಕೆ ತಾವೆ ಬಲಿಯಾದರು


ಬದುಕಿನುದ್ದಕೂ ಸೇವೆಯ ಮಾಡುತ

ಎಲ್ಲರ ಮನದಲಿ ನೆಲೆಸಿಹರು

ಅವರ ಹಾದೀಲಿ ನಡೆಯುತ ನಾವು

ಅಕ್ಷರದವ್ವನ ನೆನೆಯೋಣ

ಸಾವಿತ್ರಿಫುಲೆಯರ ನೆನೆಯೋಣ

- ವಿಜಯಲಕ್ಷ್ಮಿ ಎಂ ಎಸ್ ಮತ್ತು  

ಸುಧಾ ಜಿ