Pages

ಅನುವಾದಿತ ಕವಿತೆ - ಆದರೂ ನಾ ಮತ್ತೇಳುವೆ


[Maya Angelou ಅವರ Still I Rise ಎಂಬ ಪದ್ಯದ ಭಾವಾನುವಾದ]


ನಿಮ್ಮ ಕಹಿಯಾದ, ತಿರುಚಿದ ಸುಳ್ಳುಗಳಿಂದ 
ಇತಿಹಾಸದ ಪುಟಗಳಿಂದ ನನ್ನ ಅಳಿಸಬಹುದು
ಕಸದ ರಾಶಿಯಲ್ಲಿ ನನ್ನ ಹೊಸಕಬಹುದು, 
ಆದರೂ ಆ ಧೂಳಿನ ಕಣದಂತೆ ನಾ ಏಳುವೆ

ಸೂರ್ಯ ಚಂದ್ರರಂತೆ 
ಸಮುದ್ರದ ಅಲೆಗಳಂತೆ
ಭರವಸೆಗಳು ಚಿಮ್ಮುವಂತೆ
ನಾ ಏಳುವೆ

ತಲೆ ಭಾಗಿ, ಕಣ್ಣುಗಳು ಕಳಾಹೀನವಾಗಿ ನಾನು ಕುಸಿಯುವುದನ್ನು 
ಕಣ್ಣಾಳಿಗಳಲ್ಲಿ ನೀರು ತುಂಬಿ
ಭುಜಗಳು ಕುಂದುವುದನ್ನು, 
ಭಾವಾತ್ಮಕ ಅಳುವಿನಿಂದ ದುರ್ಬಲಗೊಂಡಿರುವುದನ್ನು
ನೀವು ನೋಡಬಯಸಿದರೇನು ?

ನಿಮ್ಮ ಮಾತುಗಳಿಂದ ನನ್ನ ಚುಚ್ಚಬಹುದು
ನಿಮ್ಮ ಕಣ್ಣುಗಳಿಂದ ಕತ್ತರಿಸಬಹುದು
ನಿಮ್ಮ ದ್ವೇಷಾಸೂಯೆಯಿಂದ 
ಕೊಲ್ಲಲೂಬಹುದು
ಆದರೂ ನಾ ಏಳುವೆ

ನನ್ನ ಪೂರ್ವತಿಹಾಸದ ಅಪಮಾನದ ಗುಡಿಸಲುಗಳಿಂದ, 
ನೋವು ತುಂಬಿದ ಜೀವನದಿಂದ
ನಾ ಏಳುವೆ

ಹಿಂಸೆ ಮತ್ತು ಭಯದ ರಾತ್ರಿಗಳನ್ನು ಹಿಂದಕ್ಕಿಕ್ಕುತ್ತಾ,  
ನಾಳಿನ ಸುಂದರ ಬೆಳಕಿಗಾಗಿ
ನಾ ಏಳುವೆ

ನನ್ನ ಪೂರ್ವಜರು ನೀಡಿದ ಉಡುಗೊರೆಗಳನ್ನು 
ಸಂತಸದಿ ನೋಡುತ್ತಾ, 
ನನ್ನ ಕನಸುಗಳು ಸಾಕಾರಗೊಳಿಸುವ, 
ಎಲ್ಲ ದಮನಿತರ ಭರವಸೆಯಾಗಿ
ನಾ ಏಳುವೆ
ನಾ ಏಳುವೆ
ನಾ ಏಳುವೆ
ಮಯಾ ಅಂಜೆಲೊ 

- ಡಾ. ಗಿರಿಜಾ ಕೆ. ಎಸ್

ಅನುವಾದ - ಮಹಿಳೆಯರ ಮತದಾನದ ಹಕ್ಕು ಪುರುಷರಿಗೇಕೆ ಬೇಕು




ಮಹಿಳೆಯರಿಂದ ಬರುವ ಅಪಾಯವು ಮನೆಯ ಹೊಸ್ತಿಲ ಬಳಿಗೆ ಬಂದಿದೆಯೆಂದು ತುಂಬಾ ಜನ ಹೇಳುತ್ತಿದ್ದಾರೆ. ಅದು ಸತ್ಯವೆನ್ನುವುದರಲ್ಲಿ ನನಗೆ ಸ್ವಲ್ಪವೂ ಸಂದೇಹವಿಲ್ಲ. ಅದು ಈಗಾಗಲೇ ಮನೆಯೊಳಗೆ ಹೊಕ್ಕಿದೆಯೆಂದು ನನ್ನ ಶಂಕೆ. ಅದನ್ನು ದೊಡ್ಡ ಸಂಖ್ಯೆಯ ಗಂಡಸರು ಊಟ ಮಾಡುವಾಗ ಎದುರಿಸುತ್ತಿರುವುದಂತೂ ಖಂಡಿತ. ಅವರು ಎಷ್ಟೇ ಕಿವುಡರಂತೆ ನಟನೆ ಮಾಡಿದರೂ, ಅದರ ಮಾತುಗಳನ್ನು ಕೇಳದೇ ಬೇರೆ ದಾರಿಯಿಲ್ಲ.
ಮಹಿಳೆಯರು ತಮ್ಮ ‘ಪವಿತ್ರ ಹಕ್ಕುಗಳು’, ‘ಬದಲಾಗದ ಹಕ್ಕುಗಳು’, ‘ಪರಭಾರೆ ಮಾಡಲಾಗದ ಹಕ್ಕುಗಳು’ ಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಪದಗುಚ್ಛಗಳು ನಾವು ಬಯಸಿದಂತೆ ಸೂಕ್ಷ್ಮಸಂವೇದಿಯಾಗುತ್ತಿಲ್ಲ. ಅದರ ಬಗ್ಗೆ ಯಾರಾದರೂ ಯೋಚಿಸಲು ಶುರು ಮಾಡಿದರೆ, ಪವಿತ್ರ, ಬದಲಾಗದ, ಪರಭಾರೆ ಮಾಡಲಾಗದ ಹಕ್ಕುಗಳು ಎನ್ನುವಂತದ್ದು ಏನೂ ಇಲ್ಲ. ನಾವು ಕೇಳಿದುದನ್ನು ಸರಿಯಾಗಿ ಬಳಸಿಕೊಳ್ಳುವಷ್ಟು ಗಟ್ಟಿಯಾದಾಗ ದೊರಕುವಂತದ್ದೇ ಹಕ್ಕುಗಳು. ಈಗ ಪುರುಷರು ಪವಿತ್ರ, ಬದಲಾಗದ, ಪರಭಾರೆ ಮಾಡಲಾಗದ ಹಕ್ಕುಗಳೆಂದು ಕರೆಯುವುದನ್ನು ಪಡೆಯಲು ಅವರು ನೂರಾರು ವರ್ಷಗಳನ್ನು ತೆಗೆದುಕೊಂಡರು ಮತ್ತು ಸಾಕಷ್ಟು ಬೆವರು ಸುರಿಸಿದರು. ಇಂದು ಮಹಿಳೆಯರು ಯಾವ ಹಕ್ಕುಗಳನ್ನು ಕೇಳುತ್ತಿದ್ದಾರೆಂದರೆ, ಮುಂದೊಂದು ದಿನ ಅದನ್ನು ಪ್ರಶ್ನೆ ಮಾಡುವಷ್ಟು ಯಾರೂ ಮೂರ್ಖರಾಗುವುದಿಲ್ಲ.
ವಿಷಯಗಳು ಅರ್ಥವಾಗುವಷ್ಟು ಬುದ್ಧಿಯಿರುವವರಿಗೆ ತಮ್ಮ ದೀರ್ಘಕಾಲದ ಶತ್ರು ಮತ್ತು ಹೊಸ ಯುಗದ ಪ್ರಶ್ನಿಸುವ ಮನಸ್ಸು ಮುಂದೆ ಬರುತ್ತಿದ್ದಂತೆಯೇ, ಅದರ ಮುಂದೆ ನಮ್ಮ ಹಳೆಯ ವಿಚಾರಗಳು ಮೂಲೆ ಗುಂಪಾಗಿರುವುದು ಮತ್ತು ಸಂಪ್ರದಾಯಗಳು ದಿಕ್ಕಾಪಾಲಾಗಿರುವುದು ತಿಳಿದಿದೆ. ನಾವು ಹೊಸ ಪರಿಸ್ಥಿತಿಗಳು ಮತ್ತು ಹೊಸ ವಿಚಾರಗಳ ಬೆಳಕಿನಲ್ಲಿ ಮಾನವನ ವ್ಯವಹಾರಗಳನ್ನು ಸರಿಯಾಗಿ ಪರಿಶೀಲಿಸುವ ಕಾಲ ಬಂದಿದೆ ಮತ್ತು ಈ ಸಂಶೋಧನೆಯಲ್ಲಿ ಪುರುಷ ಸಹಜವಾಗಿ ಮನುಕುಲದ ಗಮ್ಯಸ್ಥಾನದ ಯಜಮಾನನೆನ್ನುವ ಸಂಪ್ರದಾಯಕ್ಕೇ ಮೊದಲ ಹೊಡೆತ ಬೀಳುವುದು.
ನಮ್ಮ ಪ್ರಪಂಚದಲ್ಲಿ ಸಾಕಷ್ಟು ವಿಷಯಗಳಲ್ಲಿ ತಪ್ಪುಗಳಿವೆ ಎಂಬುದು ಮಂಕುದಿಣ್ಣೆಗೂ ಕಾಣತ್ತದೆ. ಹಳೆಯ ರೀತಿನೀತಿಗಳೇ ಹಳ್ಳ ಹಿಡಿಯುತ್ತಿರುವುದು. ನಮ್ಮಲ್ಲಿ ಜಾಣ್ಮೆಯ ಮಾರ್ಗ ಮತ್ತು ನಿಯಂತ್ರಣಗಳ ಕೊರತೆಯಿದೆ. ನಮ್ಮ ಮುಂದಿರುವ ಅವಕಾಶಗಳು ಮತ್ತು ಅನುಕೂಲಗಳಿಂದ ಹೆಚ್ಚಿನದನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ನಾವು ಜೀವನದ ಯೋಜನೆಯನ್ನು ರೂಪಿಸಬೇಕು ಮತ್ತು ಆ ಕೆಲಸಕ್ಕೆ ಹೊಸ ಸಲಕರಣೆಗಳ ಅಗತ್ಯವಿದೆ. ಇಂದಿನ ಅರಾಜಕ ಪರಿಸ್ಥಿತಿಗೆ, ಪ್ರಪಂಚವು ಕೇವಲ ಅರ್ಧ ಭಾಗದವರಿಂದ ಹೇಗೋ ಹೆಣಗಲು ಪ್ರಯತ್ನಿಸುತ್ತಿರುವುದು ಮುಖ್ಯ ಕಾರಣಗಳಲ್ಲಿ ಒಂದಿರಬಹುದು. ಪ್ರಪಂಚವನ್ನು ಮನುಕುಲಕ್ಕೆ ಒಂದು ಸಭ್ಯ ಮನೆಯನ್ನಾಗಿ ಮಾಡಲು ಉಪಯೋಗಿಸಿಕೊಳ್ಳಬೇಕಾಗಿದ್ದ ಮಹಿಳೆಯರ ಶಕ್ತಿಯನ್ನು ವ್ಯರ್ಥ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಸಂತೋಷವಾಗಿ ಮತ್ತು ಸುಖವಾಗಿ ಬದುಕಲು ಇರುವ ಸಮಸ್ಯೆಯನ್ನು ಬಗೆಹರಿಸಲು ಮಹಿಳೆಯರ ಮತಗಳು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ನೋಡೋಣ.
ಮಹಿಳೆಯರು ಮತದಾನ ಮಾಡಿದಾಗ ಪುರುಷರಿಗೆ ಮಹಿಳೆಯರ ಆಕಾಂಕ್ಷೆಗಳ ಬಗ್ಗೆ ಊಹಿಸುವ, ಅದೂ ತಪ್ಪಾಗಿ ಊಹಿಸುವ ಅಗತ್ಯ ಬರುವುದಿಲ್ಲ.  ತಮ್ಮ ಹಿತಕ್ಕೆ ವಿರುದ್ಧವಾಗಿರುವ ಪುರುಷ ಮಾಡಿದ ಕಾನೂನುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸ್ತ್ರೀಯರಿಗೆ ಸಾಧ್ಯವಾಗುತ್ತದೆ.  ಪುರುಷರಿಗೆ ಸ್ತ್ರೀಯರ ಬಗ್ಗೆಯಿರುವ ಉದಾರತೆಯ ಗುಣವು ಅವನು ಸ್ತ್ರೀಯರೊಂದಿಗೆ ಮಾನವೀಯವಾಗಿ ನಡೆದುಕೊಳ್ಳುವಂತೆ ಮತ್ತು ಅವಳ ಹಕ್ಕುಗಳನ್ನು ರಕ್ಷಿಸುವಂತೆ ಮಾಡುತ್ತದೆಯೆಂದು ಕೆಲವರು ಕಲ್ಪಿಸಿಕೊಳ್ಳಲು ಇಷ್ಟಪಡುತ್ತಾರೆ. ಕೆಲವು ಪುರಷರು ಮಹಿಳೆಯರನ್ನು ರಕ್ಷಿಸುವುದೇನೋ ನಿಜ. ಎಲ್ಲಾ ಮಹಿಳೆಯರಿಗೂ ತಮ್ಮನ್ನು ರಕ್ಷಿಸಿಕೊಳ್ಳುವ ಮತ್ತು ಈ ಫ್ಯೂಡಲ್ ಜವಾಬ್ದಾರಿಯಿಂದ ಪುರುಷನನ್ನು ಮುಕ್ತಗೊಳಿಸುವ ಹಕ್ಕಿದೆಯೆಂದು ಒತ್ತಾಯಿಸುತ್ತೇವೆ.
ರಾಜಕೀಯ ಅಧಿಕಾರವು ರಾಜ್ಯದ ವ್ಯವಹಾರಗಳನ್ನು ರೂಪಿಸುತ್ತದೆ ಮತ್ತು ಮನುಷ್ಯರ ನಡುವೆ ದಿನನಿತ್ಯದ ಪರಸ್ಪರ ಸಂಬಂಧಗಳನ್ನು ನಿರ್ಧರಿಸುತ್ತದೆ. ಮತದಾನದ ಹಕ್ಕಿರುವ ನಾಗರಿಕನು ತನ್ನ ಭವಿಷ್ಯದ ಯಜಮಾನ. ಈ ಶಕ್ತಿಯಿರದ ಮತ್ತು “ಸಹಜ ರಕ್ಷಕರು” ಇಲ್ಲದ ಮಹಿಳೆಯರು ಪುರುಷ ನಿರ್ಮಿತ ಕಾನೂನಿನ ಕೃಪಾಕಟಾಕ್ಷದಲ್ಲಿರಬೇಕು. ಮತ್ತೆ ಈ ಕಾನೂನುಗಳು ಸಾಮಾನ್ಯವಾಗಿ ಮಹಿಳೆಯರಿಗೆ ಅನ್ಯಾಯ ಮಾಡುವುದನ್ನು ನಮ್ಮ ಅನುಭವವು ಹೇಳುತ್ತದೆ. ತಮ್ಮನ್ನು ನೋಡಿಕೊಳ್ಳಲು ತಂದೆ ಮತ್ತು ಗಂಡ ಇರುವ ಮಹಿಳೆಯರನ್ನು ರಕ್ಷಿಸಲು ಮಾಡಿರುವ ಕಾನೂನುಗಳು ದುಡಿಯುವ ಮಹಿಳೆಯನ್ನು ರಕ್ಷಿಸುವುದಿಲ್ಲ; ಅವರಿಗೆ ರಾಜ್ಯದ ಪೊಲೀಸ್ ಏಕಮಾತ್ರ ರಕ್ಷಕ.
ಕೆಲವು ರಾಜ್ಯಗಳಲ್ಲಿ ಮಹಿಳೆಯರ ಸಂಬಳವು ಅವರ ತಂದೆ ಅಥವಾ ಗಂಡನಿಗೆ ಸೇರುತ್ತದೆ. ಅವರು ಆಸ್ತಿಯನ್ನು ಹೊಂದುವಂತಿಲ್ಲ. ಈ ಪ್ರಜ್ಞಾವಂತ ಪ್ರಜಾತಂತ್ರದ ಕೆಲವು ಭಾಗಗಳಲ್ಲಿ ತಂದೆ ಮಗನ ಏಕೈಕ ಮಾಲೀಕ. ಅವನು ಇನ್ನೂ ಹುಟ್ಟದ ಮಗುವಿಗೆ ಉಯಿಲಿನಲ್ಲಿ ಏನೂ ಕೊಡದೆ ಬಿಡಬಹುದು ಎಂದು ಕೇಳಿದ್ದೇನೆ. ಕಾನೂನು ರಚಿಸುವವರ ಅಂಗಳದಲ್ಲಿ ಮಹಿಳೆಯರ ಧ್ವನಿ ಅಡಗಿಸಲಾಗಿದೆ ಎನ್ನುವುದಕ್ಕೆ ಒಪ್ಪಿಗೆಯ ವಯಸ್ಸು (ಮದುವೆ, ಮತ್ತೊಂದಕ್ಕೆ) ಕುರಿತು ಇರುವ ಶಾಸನವೇ ಸಾಕ್ಷಿ. ಪುರುಷರು ತಮ್ಮ “ಸಹಜ ಅವಲಂಬಿತ”ರನ್ನು ಕಾಪಾಡಲು ಸಮಯವಿಲ್ಲದಷ್ಟು ಕಾರ್ಯನಿರತರಾಗಿರುವುದು ದುಡಿಯುವ ಮಹಿಳೆಯರನ್ನು ಕಾಡುವ ಕಾನೂನುಗಳಿರುವುದೇ ಸಾಕ್ಷಿ.
ಆರ್ಥಿಕ ತುರ್ತುಗಳು ಮಹಿಳೆಯರನ್ನು ಮತದಾನ ಕೇಳುವಂತೆ ಮಾಡಿವೆ. ಎಲ್ಲಾ ಬಾಲ್ಯಗಳನ್ನು ತರಬೇತುಗೊಳಿಸುವ ಬಹುಮುಖ್ಯವಾದ ಸಾರ್ವಜನಿಕ ಕಾರ್ಯವನ್ನು ದೊಡ್ಡ ಸಂಖ್ಯೆಯ ಮಹಿಳೆಯರಿಗೆ ನೀಡಲಾಗಿದೆ. ಹಾಗಿದ್ದರೂ ಕೂಡ, ತಮ್ಮ ಸಂಬಳದಲ್ಲಿ ಶಿಕ್ಷಕರಿಯರಿಗೆ ಸಭ್ಯ ಜೀವನ ನಡೆಸುವುದು ಕಷ್ಟ. ಈ ಅತಿಯಾಗಿ ದುಡಿದವರಿಗೆ, ಕಡಿಮೆ ಸಂಬಳ ಪಡೆದವರಿಗೆ ಮತದಾನದ ಹಕ್ಕು ಬಿಟ್ಟು ಬೇರಾವ ಪರಿಹಾರವಿದೆ? ಅವರನ್ನು ರಾಜಕೀಯವಾಗಿ ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ.
ಇತ್ತೀಚಿಗೆ, ನ್ಯೂಯಾರ್ಕ್‍ನಲ್ಲಿ ಮಹಿಳೆಯರ ಸಂಘವೊಂದು ಶಾಸಕಾಂಗವು ಕ್ಷೇಮಾಭಿವೃದ್ಧಿಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಬಯಸಿತು. ಇಂತಹ ಮಸೂದೆಯ ಬಗ್ಗೆ ವರದಿ ಒಪ್ಪಿಸಬೇಕಾಗಿದ್ದ ಸಮಿತಿಯ ಅಧ್ಯಕ್ಷರಿಗೆ ಸುಮಾರು 5,000 ಮಹಿಳೆಯರ ಸಹಿಯಿದ್ದ ಹಕ್ಕೊತ್ತಾಯದ ಮನವಿಯನ್ನು ಸಲ್ಲಿಸಿದರು. ಮಸೂದೆಯು ಉತ್ತಮವಾಗಿದೆ, ಅದು ಅಂಗೀಕಾರವಾಗಲೇಬೇಕೆಂದು ಅಧ್ಯಕ್ಷರು ಹೇಳಿದರು. ಮಹಿಳೆಯರು ಸಾಕಷ್ಟು ಸಮಯ ಕಾದ ಮೇಲೆ, ಮಸೂದೆಯ ಗತಿಯೇನಾಯಿತೆಂದು ತಿಳಿದುಕೊಳ್ಳಲು ಮನವಿಯನ್ನು ಕಳುಹಿಸಿದರು. ಅಧ್ಯಕ್ಷರು ಮಸೂದೆಯ ಬಗ್ಗೆ ನನಗೇನೂ ಗೊತ್ತಿಲ್ಲವೆಂದು ಹೇಳಿದರು. ಆಗ 5,000 ಮಹಿಳೆಯರ ಸಹಿಯಿದ್ದ ಮನವಿ ನೀಡಿದ್ದನ್ನು ನೆನಪಿಸಿದರು. ಆಗ ಅಧ್ಯಕ್ಷರು ಉತ್ತರಿಸಿದರು: “ಹೋ, ಅದಾ! 5,000 ಸಾವಿರ ಮಹಿಳೆಯರ ಸಹಿಯಿರುವ ಮನವಿಗೆ ಸಹಿ ಹಾಕಿದ ಕಾಗದದಷ್ಟೂ ಬೆಲೆಯಿಲ್ಲ. ಕೇವಲ 5 ಪುರುಷರ ಸಹಿ ತನ್ನಿ. ನಾವು ಏನನ್ನಾದರೂ ಮಾಡುತ್ತೇವೆ.” ನಾವು ಇದೊಂದೇ ಕಾರಣಕ್ಕಾಗಿ ಮತದಾನವನ್ನು ಕೇಳುತ್ತೇವೆ - ನಮಗೆ ಐವರು ಪುರುಷರಿಗಿಂತ ಐದು ಸಾವಿರ ಮಹಿಳೆಯರು ಹೆಚ್ಚೆಂದು ಲೆಕ್ಕಕ್ಕೆ ತೆಗೆದುಕೊಳ್ಳಬೇಕು.
ಮತದಾನ ಬಯಸುವವರಲ್ಲಿ ಹೆಚ್ಚಿನ ಮಹಿಳೆಯರು ಸಂಬಳಕ್ಕಾಗಿ ದುಡಿಯುವವರು. ಕೈಗಾರಿಕಾ ಪ್ರಪಂಚದಲ್ಲಿ ಕೈಗಳಿಂದ ಬಳಸುವ ಸಾಧನಗಳ ಜಾಗದಲ್ಲಿ ವಿದ್ಯುತ್ ಚಾಲಿತ ಸಾಧನಗಳು ಬಂದ ಮೇಲೆ ಮಹತ್ತರ ಬದಲಾವಣೆಗಳಾಗಿವೆ. ಪುರುಷರು ಮತ್ತು ಮಹಿಳೆಯರು ಹೊಸ ಉತ್ಪಾದನೆ ಮತ್ತು ವಿತರಣೆಯ ವ್ಯವಸ್ಥೆಗೆ ತಮ್ಮನ್ನೇ ಒಗ್ಗಿಸಿಕೊಳ್ಳುವ ಅನಿವಾರ್ಯತೆಗೆ ಒಳಗಾಗಿದ್ದಾರೆ. ಹಿಂದೆ ಯಾವಾಗಲೂ ಶೋಷಿಸದ ರೀತಿಯಲ್ಲಿ ಪುರುಷರ ಮತ್ತು ಮಹಿಳೆಯರ ಶ್ರಮವನ್ನು ಶೋಷಿಸಲು ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಬದಲಾವಣೆಯಿಂದ ಬಂದಿರುವ ಬದುಕುಳಿಯುವ ಹೋರಾಟದಲ್ಲಿ ಮಹಿಳೆಯರು ಮತ್ತು ಮಕ್ಕಳು ಪುರುಷರಿಗಿಂತ ಹೆಚ್ಚು ಸಂಕಷ್ಟಕ್ಕೊಳಗಾಗಿದ್ದಾರೆ. ನಿಜ, ಆರ್ಥಿಕ ಒತ್ತಡವು ಹಲವಾರು ಮಹಿಳೆಯರು ತಮ್ಮ ಲೈಂಗಿಕತೆಯನ್ನು ಬಿಕರಿಗಿಡುವಂತೆ ಮಾಡಿದೆ.
ಹಾಗಿದ್ದರೂ ಕೂಡ, ಮಹಿಳೆಯರಿಗೆ ತಾವು ಬದುಕುತ್ತಿರುವ ಮತ್ತು ದುಡಿಯುತ್ತಿರುವ ಪರಿಸ್ಥಿತಿಯ ಬಗ್ಗೆ ಹೇಳಲು ಏನೂ ಇರುವುದಿಲ್ಲ. ಅಸಹಾಯಕರಾದ, ನಿರ್ಲಕ್ಷಿತರಾದ ಅವರು ದುರ್ಗತಿ ಮತ್ತು ಅವನತಿಗೆ ತಳ್ಳುವ ಕಷ್ಟಗಳನ್ನು ಸಹಿಸಿಕೊಳ್ಳಲೇಬೇಕು. ಅವರು ಕ್ರೌರ್ಯ ಮತ್ತು ದೇಹ ಹಾಗೂ ಮೆದುಳಿನ ಬೆಳವಣಿಗೆಯನ್ನು ಕುಂಠಿತಗೊಳಿಸಿ ಅಕಾಲಿಕ ಮರಣ ಅಥವಾ ಅಕಾಲಿಕ ವೃದ್ದಾಪ್ಯವನ್ನು ತರುವ ಪ್ರಕ್ರಿಯೆಯ ವಿರುದ್ಧ ತಮ್ಮನ್ನು ರಕ್ಷಿಸಿಕೊಳ್ಳಲು ಕೈಯೆತ್ತುವುದಿಲ್ಲ.
ದುಡಿಯುವ ಮಹಿಳೆಯ ಅಸಹಾಯಕತೆಯಿಂದ ದುಡಿಯುವ ಪುರುಷರು ಕಷ್ಟ ಅನುಭವಿಸುತ್ತಾರೆ. ಅವರು ಸರಿಯಾದ ಕಾನೂನುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲಾಗದ ಮಹಿಳೆಯರೊಂದಿಗೆ ಒಂದೇ ಕಛೇರಿಗಳಲ್ಲಿ ಮತ್ತು ಕೈಗಾರಿಕೆಗಳಲ್ಲಿ ಸ್ಪರ್ಧೆಗಿಳಿಯಬೇಕು. ಅವರು ಮನೆಯೆಂದು ಕರೆಯುವ ನೈರ್ಮಲ್ಯವಿಲ್ಲದ ಕೋಣೆಗಳಲ್ಲಿ ಕೆಲಸ ಮಾಡುವ, ರಾತ್ರಿಯ ಹೊತ್ತು ಒಂದು ಕಾಲಲ್ಲಿ ತೊಟ್ಟಿಲನ್ನು ತೂಗುತ್ತಾ ಮಂದ ಬೆಳಕಿನಲ್ಲಿ ಕೆಲಸ ಮಾಡುವ ಮಹಿಳೆಯರ ಜೊತೆ ಸ್ಪರ್ಧೆ ನಡೆಸಬೇಕು. ಎಲ್ಲಾ ಕಾರ್ಮಿಕರ ಹಿತದೃಷ್ಟಿಯಿಂದ ಈ ಮೂರ್ಖತನದ, ಏಕಮುಖದ ಏಕಬಲ ವ್ಯವಸ್ಥೆಯನ್ನು ಕೊನೆಗಾಣಿಸಬೇಕು.
ಪುರುಷರು ಮಾಡಿದ ಕಾನೂನುಗಳು ಮಹಿಳೆಯರ ದೇಹ ಮತ್ತು ಮನಸ್ಸುಗಳೆರಡನ್ನೂ ಆಳುತ್ತವೆ. ಪುರುಷರು ನೋಡಿಕೊಳ್ಳುವ ಶಾಲೆಗಳನ್ನು ಹೇಗೆ ನಡೆಸುತ್ತಾರೆಂದರೆ, ಅಲ್ಲಿ ಮಹಿಳೆಯರ ಆದರ್ಶಗಳನ್ನು ಘೋರ ರೂಪಗಳಿಗೆ ತಕ್ಕಂತೆ ತಿರುಚುತ್ತಾರೆ. ಸರ್ಕಾರಗಳು ಮತ್ತು ಶಾಲೆಗಳು ಯುದ್ಧ ಯಾವಾಗ ಬೇಕಾದರೂ ಸಂಭವಿಸಬಹುದೆಂಬ ಸಾರ್ವಜನಿಕ ಆಕ್ರಮಣಕಾರಿ ಅಭಿಪ್ರಾಯವನ್ನು ಹುಟ್ಟು ಹಾಕುತ್ತವೆ ಮತ್ತು ಪೋಷಿಸುತ್ತವೆ. ಪುರುಷ ಬರೆದ ಇತಿಹಾಸ, ಕಟ್ಟುಕಥೆ ಮತ್ತು ಕಾವ್ಯಗಳು ಯುದ್ಧವನ್ನು ವೈಭವೀಕರಿಸುತ್ತವೆ. ದೇಶದ ಬಗ್ಗೆ ಪ್ರೀತಿಯೆಂದರೆ ನಗಾರಿಗಳು, ಬಾವುಟಗಳು ಮತ್ತು ದೇಶದ ಆಳ್ವಿಕರಿಗಾಗಿ ಜೀವ ಕೊಡಲು ತಯಾರಿರುವ ಯುವಜನರು ಎಂದು ಸೂಚಿಸುವ ದೇಶಪ್ರೇಮಕ್ಕೆ ಪರಿವರ್ತಿಸಲಾಗಿದೆ. ನಮ್ಮ ಶಾಲೆಗಳು ಅಂತಹ ವಿಚಾರಗಳು ಪ್ರಚಲಿತವಾಗಿರುವಂತೆ ಮಾಡುತ್ತಿರುವವರೆಗೂ ಯುದ್ಧಗಳು ಮುಂದುವರೆಯುತ್ತಿರುತ್ತವೆ.
ಮಹಿಳೆಯರಿಗೆ ನೋವನ್ನು ಅನುಭವಿಸುವ ಮತ್ತು ಬಲಿದಾನ ಮಾಡುವ ಅರ್ಥದಲ್ಲಿ ಮಾನವ ಜೀವನದ ಬೆಲೆ ಗೊತ್ತು; ಆದರೆ ಪುರುಷರಿಗೆ ಅದು ಯಾವತ್ತೂ ಗೊತ್ತಾಗುವುದಿಲ್ಲ. ಮಹಿಳೆಯರು ಯುದ್ಧವನ್ನು ತಡೆಯಲು ಮತ್ತು ಯುದ್ಧವನ್ನು ಸಾಧ್ಯಗೊಳಿಸುವ ವಿಚಾರಗಳನ್ನು ನಾಶ ಮಾಡಲು ಮತದಾನವನ್ನು ಬಳಸಿಕೊಳ್ಳುತ್ತಾರೆಂಬುದು ನನ್ನ ನಂಬಿಕೆ. ಶಿಕ್ಷಣವು ತಮ್ಮ ಪುರುಷತ್ವದ ಆದರ್ಶಗಳಲ್ಲಿ ಮಿಲಿಟರಿಯ ಅಂಶವನ್ನು ವೈಭವೀಕರಿಸಲು ಕಲಿಸಿದ್ದರೂ ಸಹ, ಯಾರು ತನ್ನ ದೇಶಕ್ಕಾಗಿ ಬಾಳುತ್ತಾರೋ ಮತ್ತು ಅದಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಾರೋ ಅವರು ದೇಶವನ್ನು ಅತ್ಯುತ್ತಮವಾಗಿ ಪ್ರೀತಿಸುತ್ತಾರೆ ಎಂಬ ಜ್ಞಾನೋದಯಕ್ಕೆ ಅವರು ತೆರೆದುಕೊಳ್ಳುತ್ತಾರೆ. ಅವರು ಯುದ್ಧದ ಧೀರರಿಗಿಂತ ಹೆಚ್ಚಾಗಿ ಶಾಂತಿಯ ಧೀರರಿಗೆ ಗೌರವ ಸಲ್ಲಿಸುವುದನ್ನು ಮಕ್ಕಳಿಗೆ ಕಲಿಸುತ್ತಾರೆ.
ಮತದಾನದ ಹಕ್ಕಿರುವ ಪುರುಷರಿಗಿಂತ ಮಹಿಳೆಯರೇ ಈಗಲೂ ಶಾಲೆಗಳು, ಹಾಲು ಸರಬರಾಜು ಮತ್ತು ಉತ್ತಮ ಗುಣಮಟ್ಟದ ಆಹಾರಕ್ಕೆ ಸಂಬಂಧಪಟ್ಟ ಸಾಮಾಜಿಕ ಶಾಸನ ಮತ್ತು ಕಾನೂನುಗಳಿಗಾಗಿ ಕೆಲಸ ಮಾಡುತ್ತಿರುವವರು. ಮೂಲಭೂತವಾಗಿ, ಪುರುಷರಿಗಿಂತ ಮಹಿಳೆಯರೇ ಹೆಚ್ಚು ಸಮಾಜ ಜೀವಿ. ಪುರುಷ ಹೆಚ್ಚು ವ್ಯಕ್ತಿ ಕೇಂದ್ರೀತವಾಗಿದ್ದರೆ, ಆಕೆ ಇಡೀ ಕುಟುಂಬದ ಕಾಳಜಿ ವಹಿಸುತ್ತಾಳೆ. ಆತನಲ್ಲಿ ಸಾಮಾಜಿಕ ಪ್ರಜ್ಞೆ ಅಷ್ಟೊಂದು ಬಲವಾಗಿರುವುದಿಲ್ಲ. ಹಲವಾರು ಪ್ರಶ್ನೆಗಳನ್ನು – ಮಹಿಳೆಯರು ಕೆಲಸ ಮಾಡುವ ಕಡೆ ಸುರಕ್ಷತೆ ಮತ್ತು ಸಣ್ಣ ಮಕ್ಕಳ ಹಕ್ಕುಗಳಂತಹ ಪ್ರಶ್ನೆಗಳನ್ನು ಮಹಿಳೆಯರ ಸಾಮಾಜಿಕ ಅನುಭವದ ಸಹಾಯದಿಂದ ಬಗೆಹರಿಸಬಹುದು.
ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲು ವಿರೋಧಿಸುವ ವಾದಗಳಿಗೆ ಅವಳಲ್ಲಿರುವ ವಿಶಿಷ್ಟ ಜ್ಞಾನ ಮತ್ತು ಸಾಮಥ್ರ್ಯಗಳನ್ನೇ ಆಧಾರ ಮಾಡಿಕೊಳ್ಳಲಾಗಿದೆ. ತಾಯ್ತನದ ಉದ್ದೇಶಗಳಿಗೆ ಮಹಿಳೆ ರೂಪಿತವಾಗಿದ್ದಾಳೆಂಬುದು ನಿರ್ವಿವಾದ ಸತ್ಯ. ಹಾಗೆಯೇ ಪುರಷನು ತಂದೆಯ ಉದ್ದೇಶಗಳಿಗೆ ರೂಪಿತನಾಗಿದ್ದಾನೆ. ಆದರೆ ಅದರಿಂದಾಗಿ ಆತ ನಾಗರಿಕನಾಗಲು ಅಸಮರ್ಥನೆಂದು ಯಾರೂ ಯೋಚಿಸುವುದಿಲ್ಲ. ಪುರುಷ ಮತ್ತು ಮಹಿಳೆಯರ ನಡುವೆ ಮೂಲಭೂತ ವ್ಯತ್ಯಾಸಗಳಿದ್ದರೆ, ವ್ಯತ್ಯಾಸವಿದೆಯೆಂದು ಹೇಳುವುದಕ್ಕೆ ನಾನಂತೂ ದೂರ, ಆಗ ಆಕೆಯ ಮಾತನ್ನೂ ಕೇಳಬೇಕೆಂಬುದು ಇನ್ನೂ ಹೆಚ್ಚು ವಿವೇಕವಾಗುತ್ತದೆ.
ನನ್ನ ಕಡೆಯಿಂದ, ಜನಾಂಗದ ದುರ್ಬಲ ಅರ್ಧಭಾಗವನ್ನು ವಿಮೋಚನೆಗೊಳಿಸಲು ಪುರುಷನ ದೀನರಕ್ಷಕನ ಗುಣವೇ ಕಾರಣವಾಗಬೇಕೆಂದೇ ನಾನು ಯೋಚಿಸುತ್ತೇನೆ. ಆತನಿಗೆ ಮತದಾನದ ಹಕ್ಕು ಸಿಗುವಾಗ ಅದನ್ನು ತನ್ನ ಪ್ರೀತಿಯ ಸಂಗಾತಿಯೊಂದಿಗೆ ಹಂಚಿಕೊಳ್ಳಬೇಕೆಂಬುದು ಮನಸಿಗೆ ಬರದೇ ಹೋದ್ದದ್ದು ವಿಚಿತ್ರವೆನ್ನುವುದಂತೂ ಸತ್ಯ. ಮತದಾನದ ಪ್ರಶ್ನೆಯಲ್ಲಿ ಆತನಿಗೆ ಆಕೆಯ ಬಗ್ಗೆಯಿರುವ ಧೋರಣೆಯಲ್ಲಿ ನನಗೆ ದಬ್ಬಾಳಿಕೆಯಿರುವ ಅನುಮಾನ ಕಾಣುತ್ತದೆ. ಹಾಗಾದರೆ ಈ ದಬ್ಬಾಳಿಕೆಯು ದೀನರಕ್ಷಕನ ಮುಖವಾಡವನ್ನು ಹಾಕಿಕೊಂಡಿದೆಯೇ? ದಯವಿಟ್ಟು ನನ್ನನ್ನು ತಪ್ಪರ್ಥ ಮಾಡಿಕೊಳ್ಳಬೇಡಿ. ನಾನು ದೀನರಕ್ಷಣೆಯನ್ನು ನಿಂದಿಸುತ್ತಿಲ್ಲ. ಅದರಲ್ಲೇನಿದೆ – ಅದೊಂದು ಸುಂದರವಾದ ವಿಷಯ. ಆದರೆ ಅದು ಸಾಕಷ್ಟಿಲ್ಲದಿರುವುದೆ ಸಮಸ್ಯೆ. ಮಹಿಳೆಯರು ಗಳಿಸಿಕೊಂಡಿರುವ ಶೈಕ್ಷಣಿಕ ಮತ್ತು ರಾಜಕೀಯ ಅವಕಾಶಗಳೆಲ್ಲವೂ ಪ್ರತಿಯೊಂದು ಕಡೆಯಲ್ಲೂ ಸೆಣಸಾಟದಿಂದ ವಿಜಯ ಸಾಧಿಸುವ ಗತಿಯಲ್ಲಿ ಪಡೆದದ್ದು.
ಹಾಗಾಗಿ, ಪುರುಷರ ದೀನರಕ್ಷಣೆಯು ವಿಫಲವಾಗಿರುವುದರಿಂದ, ನಾವು ಸ್ವಲ್ಪ ಅವಸರ ಮಾಡಬೇಕು ಮತ್ತು ನಮಗಾಗಿ ನಾವೇನು ಮಾಡಿಕೊಳ್ಳಬೇಕೆಂದು ನೋಡಬೇಕು; ನಮಗೆ ಮತದಾನದ ಹಕ್ಕು ಪುರುಷರಿಗೆ ಬೇಕು. ಮೊಟ್ಟಮೊದಲಿಗೆ, ನಾವು ಸಂಘಟಿತರಾಗಬೇಕು. ಒಂದು ರಾಜಕೀಯ ಅಂಶವಾಗಿ ನಮ್ಮನ್ನು ನಾವು ಎಷ್ಟು ಆಕ್ರಮಣಶೀಲರನ್ನಾಗಿ ಮಾಡಿಕೊಳ್ಳಬೇಕೆಂದರೆ, ನಾವು ಯಾವುದರ ಕೆಳಗೆ ಬದುಕುತ್ತಿದ್ದೇವೆಯೋ ಆ ಕಾನೂನುಗಳಿಗೆ ಮಾರ್ಗದರ್ಶನ ನೀಡಲು ಮತ್ತು ರೂಪಿಸಲು ನಮ್ಮ ಧ್ವನಿಯನ್ನು ನಮ್ಮ ಸಹಜ ರಕ್ಷಕರು ನಿರಾಕರಿಸಲು ಅಸಾಧ್ಯವಾಗಬೇಕು.
ತಮ್ಮ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮಹಿಳೆಯರು ಮತ್ತು ಪುರುಷರು ಒಟ್ಟಿಗೆ ಕೆಲಸ ಮಾಡುವವರೆಗೂ, ನಾವು ಬಂಡವಾಳವಾದದ ಅಂತ್ಯ ಮತ್ತು ಪ್ರಜಾತಂತ್ರದ ವಿಜಯವನ್ನು ಕಾಣಲು ಸಾಧ್ಯವಿಲ್ಲ. ಎಲ್ಲರ ಸ್ವಾತಂತ್ರ್ಯಕ್ಕಾಗಿ ನಡೆಯುವ ನಮ್ಮ ಹೋರಾಟದಲ್ಲಿ ಮತದಾನವು ಹಲವಾರು ಆಯುಧಗಳಲ್ಲಿ ಒಂದೇ ಒಂದು ಎಂಬುದು ನನಗೆ ಮನವರಿಕೆಯಾಗಿದೆ. ಆದರೆ ಪ್ರತಿಯೊಂದು ಮಾರ್ಗವೂ ಅಮೂಲ್ಯವಾದದ್ದು; ಮತದಾನದ ಹಕ್ಕಿನೊಂದಿಗೆ ಮಹಿಳೆಯರು ಮತ್ತು ಪುರುಷರು ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವಗಳ ಯುಗಯುಗದ ಕನಸು ನನಸಾಗುವ ದಿನವನ್ನು ಬೇಗನೆ ತರುತ್ತಾರೆ.

 ಮೂಲ: ಹೆಲೆನ್ ಕೆಲರ್
(ನ್ಯೂಯಾರ್ಕ್, ‘ಕಾಲ್’, ಅಕ್ಟೋಬರ್ 15, 1915)
ಅನುವಾದ: ಎಸ್.ಎನ್.ಸ್ವಾಮಿ 

ವ್ಯಕ್ತಿ ಪರಿಚಯ - ಅಲೆಗ್ಸಾಂಡರ್ ಗ್ರಹಾಂ ಬೆಲ್




ಸೂರ್ಯೋದಯವಾಗುವುದೇ ತಡ ನಮ್ಮನ್ನು ಎಬ್ಬಿಸುವುದು ಅದು. ಎಲ್ಲೋ ದೂರದಲ್ಲಿರುವವರನ್ನು ಸಂಪರ್ಕಿಸುವುದು ಅದು. ತಿಳಿಯಿತಾ ಯಾವುದರ ಬಗ್ಗೆ ಎಂದು? 
ಅದೇ ನಮ್ಮ ಇಂದಿನ ಸ್ಮಾರ್ಟ್ ಫೋನ್. ಈ ಫೋನ್ ಇಲ್ಲದಿದ್ದರೆ ಈ ಜಗತ್ತು ಹೇಗಿರುತ್ತದೆ ಎಂದು ಊಹಿಸಲಸಾಧ್ಯ. ಈ ಬಹು ಉಪಯೋಗಿ ಉಪಕರಣದ ಸಂಶೋಧನೆ ಮಾಡಿದವರ ಬಗ್ಗೆ ಸ್ವಲ್ಪ ತಿಳಿಯೋಣ.

ಅಲೆಗ್ಸಾಂಡರ್ ಬೆಲ್ 1847  ಮಾರ್ಚ್ 3 ರಂದು ಇಂಗ್ಲೆಂಡಿನಲ್ಲಿ ಅಲೆಗ್ಸಾಂಡರ್ ಮೆಲ್ವಿಲ್ಲೆ ಬೆಲ್ ಮತ್ತು ಏಲಿಜಾ ಗ್ರೇಸ್ ಸೈಮಂಡ್ ಬೆಲ್ ರವರ ಮಗನಾಗಿ ಜನಿಸಿದನು. ಅಲೆಗ್ಸಾಂಡರ್ ಬೆಲ್ ಎಂಬುವುದು ಹುಟ್ಟಿದ ಹೆಸರು. ತನ್ನ 11 ನೇ ವಯಸ್ಸಿನಲ್ಲಿ "ಗ್ರಹಾಂ" ಎಂಬುವುದನ್ನು ಸೇರಿಸಿಕೊಂಡನು. 
ಬಾಲ್ಯದಿಂದಲೇ ಕುತೂಹಲ ಸ್ವಭಾವದ ಬೆಲ್ ಸಸ್ಯ ಮಾದರಿಗಳನ್ನು ಸಂಗ್ರಹಿಸುತ್ತಿದ್ದನು. ಬೆಲ್ ಗೆ ಓದುವುದರಲ್ಲಿ ಅಷ್ಟೇನೂ  ಆಸಕ್ತಿ ಇರಲಿಲ್ಲ. ಆದರೆ ಹಲವಾರು ಪ್ರಯೋಗಗಳನ್ನು. ಮಾಡುತ್ತಿದ್ದನು. ಗೆಳೆಯ ಬೆನ್ ಹೆರ್ಡ್ ಮನ್ ನ ಹಿಟ್ಟಿನ ಗಿರಣಿಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದನು. ಹೊಟ್ಟು ತೆಗೆಯಲು ಕಷ್ಟ ಪಡುತ್ತಿರುವುದನ್ನ ಕಂಡನು. ತನ್ನ 12ನೇ ವಯಸ್ಸಿನಲ್ಲಿ ಹೊಟ್ಟನ್ನು ಬೇರ್ಪಡಿಸುವ ಯಂತ್ರವನ್ನು ಸಂಶೋಧಿಸಿದನು. 
ಬೆಲ್ ಕಲೆ ಸಂಗೀತ ಮತ್ತು ಸಾಹಿತ್ಯದಲ್ಲೂ ಆಸಕ್ತಿಯನ್ನು ಹೊಂದಿದ್ದನು. ಪಿಯಾನೋ ನುಡಿಸುವುದನ್ನು ಕಲಿತನು. ಅಲ್ಲದೆ ಧ್ವನಿ ಅನುಕರಣೆ ಮಾಡುತ್ತಿದ್ದನು. ಕ್ರಮೇಣ ತಾಯಿಯ ಶ್ರವಣ ಶಕ್ತಿ ಕಡಿಮೆಯಾಗುತ್ತಿರುವುದನ್ನು ಕಂಡು ಕೈಬೆರಳುಗಳ ಸಂಜ್ಞೆಯ ಭಾಷೆಯನ್ನು ಕಲಿತನು. ಇದರ ಸಹಾಯದಿಂದ ತಾಯಿಯ ಜೊತೆ ಮಾತನಾಡುತ್ತಿದ್ದನು. ಪರಿಣಾಮವಾಗಿ ಬೆಲ್ ನ ಗಮನ ಶ್ರವಣ ವಿಜ್ಞಾನದ ಕಡೆಗೆ ಹರಿಯಿತು. 
ಪ್ರಾರಂಭದಲ್ಲಿ ಬೆಲ್ ಕಲಿಯುವಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿಲ್ಲದಿದ್ದರೂ ತಾತನ ಜೊತೆಯಲ್ಲಿ ವಾಸಿಸಲು ಪ್ರಾರಂಭಿಸಿದ ಮೇಲೆ ಕಲಿಕೆಯಲ್ಲಿನ ಆಸಕ್ತಿ ಹೆಚ್ಚಿತು. ಅಲ್ಲದೆ ತಾತ ತಂದೆ ಮತ್ತು ಸೋದರರು ವಾಕ್ ಶಕ್ತಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದರು. ಇದರಿಂದ ಬೆಲ್ ಗೂ ಸಹ ಆ ಕ್ಷೇತ್ರದಲ್ಲಿ ಆಸಕ್ತಿ ಬಂದಿತು. ತಂದೆಯ ಪ್ರೋತ್ಸಾಹ ಹಾಗು ಅಣ್ಣನ ನೆರವಿನಿಂದ ಮಾತನಾಡಬಲ್ಲ ಯಂತ್ರ ಮಾನವನನ್ನು ಸಿದ್ಧ ಪಡಿಸಿದನು.
ತನ್ನ 16 ನೇ ವಯಸ್ಸಿನಲ್ಲಿ ವೆಸ್ಟರ್ನ್ ಹೌಸ್ ನ ಅಕಾಡೆಮಿಯಲ್ಲಿ ಬೋಧಕನ ಸ್ಥಾನ ಗಳಿಸಿದನು. ಸೇರಿದ್ದು ವಿದ್ಯಾರ್ಥಿಯಾಗಿ ಆದರೆ ಪಡೆದದ್ದು ಬೋಧಕನ ಸ್ಥಾನ. ನಂತರ ಲಂಡನ್ ಯುನಿವರ್ಸಿಟಿ ಕಾಲೇಜಿನಲ್ಲಿ ‌ಪದವಿ ಪರೀಕ್ಷೆಯನ್ನು ತೆಗೆದುಕೊಂಡು ಬಿಡುವಿನ ವೇಳೆಯಲ್ಲಿ ತಂದೆಗೆ ನೆರವಾಗುತ್ತಿದ್ದನು. ಕಿವುಡು ಮೂಗರಿಗೆ ಬೋಧಿಸಿ ಅವರ ಪ್ರಗತಿಗೆ ಕಾರಣರಾದನು.
ಕುಟುಂಬದವರ ಅನಾರೋಗ್ಯದ ಕಾರಣ ಇಂಗ್ಲೆಂಡ್ ನಿಂದ ಕೆನಡಾಗೆ ಬಂದರು. ಇಲ್ಲಿ ಮೊಹಾವ್ಕ್ ಭಾಷೆಯನ್ನು ಕಲಿತು ಅದರ ಅಲಿಖಿತ ಶಬ್ದ ಭಂಡಾರವನ್ನು ಗೋಚರಿಸುವ ಸಂಕೇತಗಳಾಗಿ‌ ಅನುವಾದಿಸಿದರು. ಇದಕ್ಕಾಗಿ ಬೆಲ್ ರವರನ್ನು ಗೌರವಿಸಿ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ನಂತರ ಅಮೆರಿಕದ ಶಾಲೆಯಲ್ಲಿ ಬೋಧಕರಿಗೆ ತರಬೇತಿ ನೀಡುವಲ್ಲಿ ಬೆಲ್ ಯಶಸ್ವಿಯಾದರು.
1872ರಲ್ಲಿ ಸ್ಕೂಲ್ ಆಫ್ ವೋಕಲ್ ಫಿಸಿಯಾಲಜಿ ಅಂಡ್ ಮೆಕಾನಿಕ್ಸ್‌ ಆಫ್ ಸ್ಪೀಚ್ ಎಂಬ ಶಾಲೆಯನ್ನು ಬಾಸ್ಟನ್ ನಲ್ಲಿ ಪ್ರಾರಂಭಿಸಿದರು. ಪ್ರಖ್ಯಾತ ಲೇಖಕಿ ಹಾಗೂ ಸಮಾಜ ಕಾರ್ಯಕರ್ತೆ ಹೆಲನ್ ಕೆಲ್ಲರ್ ಸಹ ಬೆಲ್ ರವರ ವಿದ್ಯಾರ್ಥಿ ಗಳಲ್ಲಿ ಒಬ್ಬಳಾಗಿದ್ದಳು. 
ನಂತರ ಬೆಲ್ ಧ್ವನಿ ಶರೀರ ವಿಜ್ಞಾನ ಮತ್ತು ವಾಗ್ವೈಖರಿ ವಿಷಯಗಳ ಪ್ರಾಧ್ಯಾಪಕರಾದರು. ಆಗಲೂ ಸಹ ವಿದ್ಯುತ್ ಮತ್ತು ಶಬ್ಧತರಂಗಗಳ ಮೇಲೆ ನಡೆಸುತ್ತಿದ್ದ ಪ್ರಯೋಗವನ್ನು ಮುಂದುವರಿಸುತ್ತಿದ್ದರು.  1874 ರಲ್ಲಿ ಬೆಲ್ ಸಹಯೋಗಿ ಥಾಮಸ್ ವಾಟ್ಸನ್ ರೊಡನೆ ವಿದ್ಯುತ್ ಉಪಕರಣಗಳ ಅಂಗಡಿಯಲ್ಲಿ ಧ್ವನಿ ತರಂಗಗಳನ್ನು ಒಂದೇ ತಂತಿಯಲ್ಲಿ ಒಂದು ವಿಶಿಷ್ಟ ಸ್ಥಿತಿಯಲ್ಲಿ ಹಲವಾರು ಶಬ್ಧಗಳು ಬರುವುದನ್ನು ಗಮನಿಸಿದರು. ನಂತರ ತಮ್ಮ ಪ್ರಯೋಗಶಾಲೆಯಲ್ಲಿ ಪ್ರಯೋಗವನ್ನು ಮುಂದುವರಿಸಿ ಅಂತಿಮವಾಗಿ 1876 ಮಾರ್ಚ್ 10 ರಂದು "ಮಿಸ್ಟರ್ ವಾಟ್ಸನ್ ಇಲ್ಲಿಗೆ ಬನ್ನಿ, ನಿಮ್ಮನ್ನೊಮ್ಮೆ ನೋಡಬೇಕಿದೆ" ಎಂಬ ಕರೆಯೊಂದಿಗೆ ದೂರವಾಣಿಯನ್ನು ಸಂಶೋಧಿಸಿದರು. 1877 ರಲ್ಲಿ ಬೆಲ್ ಟೆಲಿಫೋನ್ ಕಂಪನಿಯು ಸ್ಥಾಪನೆಯಾಯಿತು. ನಂತರ ಬೆಲ್ ರವರು ಮೇಬಲ್ ಹಬಾರ್ಡ್ ರವರನ್ನು ವಿವಾಹವಾದರು.
ತಮ್ಮ ತಾಯಿ ಮತ್ತು ಪತ್ನಿ ಕಿವಡರಾಗಿದ್ದ ಕಾರಣ ಅವರ ಅನುಕೂಲಕ್ಕಾಗಿ ಉಪಕರಣವೊಂದರ ಸಂಶೋಧನೆ ಅವರ ಉದ್ದೇಶವಾಗಿತ್ತು. ಆದರೆ ಆವಿಷ್ಕಾರವಾದದ್ದು ದೂರವಾಣಿ.
ಸದಾ ಚಿಂತನೆಯಲ್ಲಿಯೇ ಇರುತ್ತಿದ್ದ ಬೆಲ್ ದೂರವಾಣಿಯಲ್ಲದೆ ಫೋಟೋಫೋನ್, ಲೋಹಶೋಧಕ, ಹೈಡ್ರೋಫಾಯಿಲ್ ಮತ್ತು ಆಡಿಯೋಮೀಟರ್ ಗಳನ್ನು ಕಂಡು ಹಿಡಿದಿದ್ದಾರೆ. ಈ ಆವಿಷ್ಕಾರಗಳಿಂದ ಬೆಲ್ ರವರ ಹೆಸರು ಪ್ರಸಿದ್ಧಿಯಾಯಿತು. ಇಂಗ್ಲೆಂಡ್, ಕೆನಡಾ ಮತ್ತು ಅಮೆರಿಕ ಮೂರು ರಾಷ್ಟ್ರಗಳು ಇವರನ್ನು ಹೆಮ್ಮೆಯಿಂದ ತಮ್ಮ ದೇಶದ ಮಗ ಎಂದು ಹೇಳಿಕೊಳ್ಳುತ್ತವೆ. ಇವರು ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿಯ ಎರಡನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 
ಇಷ್ಟೆಲ್ಲಾ ಆವಿಷ್ಕಾರಗಳನ್ನು ಮಾಡಿದ ಬೆಲ್ ರವರು‌ 1922 ಆಗಸ್ಟ್ ನಲ್ಲಿ ಮಧುಮೇಹ ರೋಗದಿಂದ ಸಾವನ್ನಪ್ಪಿದರು. ಅಂದು ಇವರ ಗೌರವಾರ್ಥವಾಗಿ ಅಮೆರಿಕ ಮತ್ತು ಕೆನಡಾದ ಟೆಲಿಫೋನ್ ಗಳು ಕೆಲಕಾಲ ಮೌನವಾಗಿದ್ದವು.
ಹೀಗೆ ಕೇವಲ ಅಂಗೈಯಗಲದ ಇಂದಿನ ಸ್ಮಾರ್ಟಫೋನ್ ಗಳ  ಸಹಾಯದಿಂದ ಇಡೀ ವಿಶ್ವದ ವಿಚಾರಗಳನ್ನು ತಿಳಿಯಲು ಕಾರಣರಾದ ಮೂಲಪುರುಷ ಅಲೆಗ್ಸಾಂಡರ್ ಗ್ರಹಾಂ ಬೆಲ್ ರವರಿಗೆ ಮನಃಪೂರ್ವಕವಾಗಿ ನಮಿಸೋಣ.
 - ವಿಜಯಲಕ್ಷ್ಮಿ ಎಂ ಎಸ್   

ವಿನೋದ - ಪ್ರವಾಸ



ನಾವೆಲ್ಲಾ ಹೊರಟೆವು ಒಂದು ದಿನದ ಪ್ರವಾಸ
ಹೊರಡುವಾಗ ನಮಗೆಲ್ಲಾ ಉಲ್ಲಾಸವೊ ಉಲ್ಲಾಸ
ನಡುದಾರಿಯಲ್ಲಿ ಕೆಟ್ಟು ನಿಂತ ಬಸ್ಸಿನ ಸಹವಾಸ
ಮಂಗಮಾಯವಾಯಿತು ನಮ್ಮ ಉತ್ಸಾಹ
ಸುಡುಬಿಸಿಲಿನ ತಾಪಕಾಯ್ತು ಎಲ್ಲರಿಗೂ ಆಯಾಸ
ಹಿಂಡು ಕೋತಿಗಳ  ದಾಳಿಯಿಂದ ನಮಗೆಲ್ಲ ಉಪವಾಸ
ಸರಿಹೋಗದು ಬಸ್ ಗಾಗಿ ಕಾದುಕಾದು ನಮಗೆಲ್ಲ ವನವಾಸ
ಎಲ್ಲರ ಹೊಟ್ಟೆಯಲ್ಲಿ ಶುರುವಾಯ್ತು ಹಸಿವೆಂಬ ಗರಗಸ
ಅಲ್ಲಿದ್ದ ತೋಟದ ಮನೆಯೋರು ಮಾಡಿ ಬಡಿಸಿದ್ರು ಅನ್ನರಸ
ಅದನು ತಿಂದು ರಿಪೇರಿಯಾದ ಬಸ್ಸಲ್ಲಿ ಕೂತದ್ದೇ ಸಾಹಸ
ಅಂತೂಇಂತೂ ಮತ್ತೆ ಪ್ರಯಾಣ ಶುರುವಾದಾಗ ಎಲ್ಲರಿಗೂ ಉಲ್ಲಾಸ
ನಡುರಾತ್ರಿಯಲ್ಲಿ ಎಲ್ಲರೂ ಸೇರಿದ್ರು ಅವರವರ ಮನೆ ವಿಳಾಸ
ಪಾಪಿ ಸಮುದ್ರಕ್ಕೋದ್ರು ಮೊಳಕಾಲುದ್ದ ನೀರು ಅನ್ನೋ ಹಾಗಾಯ್ತು ನಮ್ಮ ಕೆಲಸ.
- ವಿಶಾಲ


ಕಥೆ - ಮಾತೆಯ ಮಮತೆ



ಬಸ್‍ನಲ್ಲಿ ಕಿಟಕಿಯ ಪಕ್ಕ ಸೀಟು ಸಿಕ್ಕಾಗ ಬಹಳ ಸಂತೋಷವಾಗಿತ್ತು ಪ್ರಿಯಾಳಿಗೆ. ಬಸ್ ಇನ್ನೇನು ಹೊರಡುವುದರಲ್ಲಿದ್ದಾಗ ಸುಮಾರು 17 -18 ರ ಹುಡುಗನೊಬ್ಬ ಅವಳ ಪಕ್ಕ ಬಂದು ಕುಳಿತುಕೊಂಡ. ನೋಡಲು ಬಹಳ ವಿಚಿತ್ರವಾಗಿದ್ದ. ಉದ್ದುದ್ದ ಕೂದಲು, ಒಂದು ಕಿವಿಗೆ ಓಲೆ, ಕೈಯಲ್ಲೊಂದು ದಪ್ಪದ ಕಬ್ಬಿಣದ ಕಡಗ, ಕಿವಿಗೆ ಇಯರ್ ಫೋನ್. 
ಕಾಲೇಜಿನಲ್ಲಿ ಅಧ್ಯಾಪಕಿಯಾಗಿದ್ದ ಅವಳಿಗೆ ಇದೆಲ್ಲಾ ಏನೂ ಹೊಸದಾಗಿರಲಿಲ್ಲ. ಕಂಡಕ್ಟರ್ ಬಂದು ಟಿಕೆಟ್ ಕೇಳಿದಾಗಲೇ ಅವಳಿಗೆ ಅರ್ಥವಾಗಿದ್ದು ಆ ಹುಡುಗ ಕೂಡ ದಾವಣಗೆರೆಗೆ ಎಂದು. ಅವಳಿಗೆ ಸಮಸ್ಯೆಯೊಂದು ಪರಿಹಾರವಾದಂತೆನಿಸಿತು.
ಪರ್ಸ್‍ನಿಂದ ತನ್ನಕ್ಕನ ಮನೆಯ ವಿಳಾಸವಿದ್ದ ಚೀಟಿಯನ್ನು ತೋರಿಸಿ “ಈ ವಿಳಾಸ ಎಲ್ಲಿ ಬರುತ್ತೆ?” ಎಂದು ಕೇಳಿದಳು.
ಅದನ್ನು ನೋಡಿ ಆ ಹುಡುಗ ಮುಖ ಸಿಂಡರಿಸಿಕೊಂಡು, “ನಂಗೊತ್ತಿಲ್ಲ” ಎಂದ.
‘ಗೊತ್ತಿಲ್ಲ ಎಂದರಾಗುತ್ತಿತ್ತು, ಮುಖವೇಕೆ ಸಿಂಡರಿಸಿಕೊಳ್ಳಬೇಕು’ ಎಂದುಕೊಂಡು “ಹೋಗಲಿ ಬಿಡಪ್ಪಾ” ಎಂದಳು.
ಅಕ್ಕನ ಮನೆಗೆ ಫೋನ್ ಮಾಡಿದಾಗ ಅಕ್ಕನ ಮಗ ಸಂಜಯ್ ಮನೆಗೆ ಬಂದಿದ್ದಾನೆಂದು, ಅವನೇ ಬಂದು ಕರೆದುಕೊಂಡು ಹೋಗುತ್ತಾನೆ ಎಂದಾಗ ಪ್ರಿಯಾ ನಿರಾತಂಕವಾಗಿ ‘ಅಂಕಲ್ ಟಾಮ್ಸ್ ಕ್ಯಾಬಿನ್’ ಪುಸ್ತಕ ಓದಲು ಶುರುಮಾಡಿದಳು.
ಒಂದು-ಒಂದೂವರೆ ಘಂಟೆಯಾದ ಮೇಲೆ ಇದ್ದಕ್ಕಿದ್ದಂತೆ ಎಚ್ಚರವಾಯಿತು ಪ್ರಿಯಾಳಿಗೆ. ಓದುತ್ತಾ ಓದುತ್ತಾ ಹಾಗೆಯೇ ನಿದ್ದೆ ಹೋಗಿದ್ದಳವಳು. ಏನದು ಸದ್ದು ಎಂದು ನೋಡಿದಾಗ ಆ ಹುಡುಗ ಇಯರ್ ಫೋನ್ ತೆಗೆದು ಲೌಡ್ ಸ್ಪೀಕರ್ ಆನ್ ಮಾಡಿದ್ದ. ಸ್ವಲ್ಪ ಕಸಿವಿಸಿ ಆದರೂ ತೋರಿಸಿಕೊಳ್ಳದೆ, “ನೋಡಪ್ಪಾ, ನಿನಗೆ ಹಾಡು ಕೇಳಬೇಕೆನಿಸಿದರೆ ಇಯರ್ ಫೋನ್ ಹಾಕಿಕೊಂಡು ಕೇಳು, ಇತರರಿಗೆ ಕಷ್ಟವಾಗುತ್ತೆ” ಎಂದಳು.
ತಕ್ಷಣವೇ ಆ ಹುಡುಗ ಲೌಡ್ ಸ್ಪೀಕರ್ ಆಫ್ ಮಾಡಿದ. ಪ್ರಿಯಾ “ಥ್ಯಾಂಕ್ಸ್” ಎಂದಳು. ಹುಡುಗ ಗಲಿಬಿಲಿಗೊಳಗಾದವನಂತೆ ಕಂಡು ಬಂದ.
“ಥ್ಯಾಂಕ್ಸ್ ಏಕೆ ಹೇಳಿದಿರಿ” ಕೇಳಿದ.
“ನಾನು ಕೇಳಿದ ತಕ್ಷಣ ನೀನು ಆಫ್ ಮಾಡಿದ್ದಕ್ಕೆ” ಎಂದಳು. ಅಷ್ಟು ಹೊತ್ತಿನ ಪ್ರಯಾಣದಲ್ಲಿ ಮೊದಲಬಾರಿಗೆ ಮುಗುಳ್ನಕ್ಕ, ಅದೂ ಸಂಕೋಚದಿಂದ.
ಪ್ರಿಯಾ ತನ್ನ ಓದನ್ನು ಮುಂದುವರೆಸಿದಳು. ಸ್ವಲ್ಪ ಹೊತ್ತಿಗೆ ಮಗುವೊಂದು ಅಳಲಾರಂಭಿಸಿತು. ಅದರ ತಾಯಿ ಅದನ್ನು ಸಮಾಧಾನ ಮಾಡತೊಡಗಿದಳು. ಎಷ್ಟು ತಾಳ್ಮೆಯಿಂದ ಆ ಮಗುವನ್ನು ಸಮಾಧಾನ ಮಾಡಿದಳೆಂದರೆ ಕೆಲವೇ ನಿಮಿಷಗಳಲ್ಲಿ ಮಗು ನಗುತ್ತಾ ಆಟವಾಡಲಾರಂಭಿಸಿತು.
ಪಕ್ಕದಲ್ಲಿ ಕುಳಿತಿದ್ದ ಹುಡುಗ ಇಯರ್ ಫೋನ್ ತೆಗೆದು ಪಕ್ಕಕ್ಕಿಟ್ಟು ಒಂದು ರೈಟಿಂಗ್ ಪ್ಯಾಡ್ ತೆಗೆದುಕೊಂಡ. ಆಶ್ಚರ್ಯವೆನಿಸಿತು ಪ್ರಿಯಾಳಿಗೆ. ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿಗೆ ಪುಸ್ತಕ ತರುವುದೇ ಕಷ್ಟ, ಅಂತಹದ್ದರಲ್ಲಿ..... ಕುತೂಹಲ ತಡೆಯಲಾಗದೆ ಅವನ ಕಡೆ ನೋಡಿದಳು.
ಅವನು ಬಹಳ ತನ್ಮಯತೆಯಿಂದ ಏನೋ ಬರೆಯುತ್ತಿದ್ದ. ಕೇವಲ 15 ನಿಮಿಷದಲ್ಲಿ ಕವನವೊಂದು ರೆಡಿಯಾಗಿತ್ತು. ಕುತೂಹಲ ತಡೆಯಲಾಗದೆ ಓದೇಬಿಟ್ಟಳು. ಕವನ ಅದ್ಭುತವಾಗಿತ್ತು. ಅನುಭವವುಳ್ಳ ಕವಿ ಬರೆದ ಹಾಗಿತ್ತು. ತನಗೇ ಗೊತ್ತಿಲ್ಲದೆ, “ವಾಹ್, ಅದ್ಭುತ” ಎಂದಳು.
ಆಗಲೇ ಅವನು ತಲೆ ಎತ್ತಿ ನೋಡಿದ. ಕಣ್ಣಲ್ಲಿ ಆಶ್ಚರ್ಯವಿತ್ತು.
“ಸಾರಿನಪ್ಪಾ, ಓದಬಾರದಾಗಿತ್ತು. ಆದರೆ ಕುತೂಹಲ ತಡೆಯಲಾರದೆ ಓದಿಬಿಟ್ಟೆ. ಈಗನಿಸುತ್ತಿದೆ, ಓದದೇ ಇದ್ದಿದ್ದರೆ ನಷ್ಟವಾಗುತ್ತಿತ್ತು. ಎಂತಹ ಉತ್ತಮ ಕವಿತೆ. ಎಷ್ಟು ವರ್ಷದಿಂದ ಬರೆಯುತ್ತಿದ್ದೀಯಾ? ಒಳ್ಳೆ ನುರಿತ ಕವಿಯಂತೆ ಬರೆದಿದ್ದೀಯಾ” ಎಂದಳು.
“ನಿಜವಾಗಿಯೂ ಚೆನ್ನಾಗಿದೆಯಾ?” ಕೇಳಿದ.
“ಹೌದಪ್ಪಾ ನಿಜಕ್ಕೂ ಚೆನ್ನಾಗಿದೆ. ಈಗಷ್ಟೇ ಕಣ್ಮುಂದೆ ನಡೆದ ಒಂದು ಘಟನೆಯ ಬಗ್ಗೆ ಇಷ್ಟು ಚೆನ್ನಾಗಿ ಬರೆದಿದ್ದೀಯಾ ಎಂದರೆ ನೀನು ಸಾಮಾನ್ಯನಲ್ಲಪ್ಪ” ಎಂದಳು.
ಹೆಮ್ಮೆಯಿಂದ ಅವನ ಮುಖ ಅರಳಿತು. ನಕ್ಕಾಗ ಬಹಳ ಚೆನ್ನಾಗಿ ಕಾಣುತ್ತಿದ್ದ. ಕೆನ್ನೆಯ ಮೇಲೆ ಮೂಡಿದ್ದ ಗುಳಿ ಇನ್ನಷ್ಟು ಚೆನ್ನಾಗಿ ಕಾಣುವಂತೆ ಮಾಡಿತು.
“ಆದರೆ ಹೆಸರೇಕೆ ಇಟ್ಟಿಲ್ಲ” ಕೇಳಿದಳು.
“ಅಮ್ಮನ ಪ್ರೀತಿಗೆ ‘ಮ’ ಅಕ್ಷರದಿಂದ ಯಾವುದಾದರೂ ಪದವಿದೆಯೇ ಎಂದು ಹುಡುಕುತ್ತಿದ್ದೇನೆ” ಎಂದ.
ತಕ್ಷಣವೇ ಅವಳು “ಮಮತೆ” ಎಂದಳು. ಅವನದನ್ನು ಪೇಪರ್ ಮೇಲೆ ಬರೆದ – ‘ಮಾತೆಯ ಮಮತೆ’.
“ಥ್ಯಾಂಕ್ಸ್ ಆಂಟಿ” ಎಂದ. ಮೊದಲ ಬಾರಿಗೆ ಅವನು ಆಂಟಿ ಎನ್ನುವ ಪದ ಬಳಸಿದ್ದ.
ಅವಳು ಅದನ್ನು ಗಮನಿಸಿದರೂ ಗಮನಿಸದಂತೆ “ಪರವಾಗಿಲ್ಲ ಬಿಡಪ್ಪಾ” ಎಂದಳು.
ಸ್ವಲ್ಪ ಹೊತ್ತಿನ ನಂತರ ಅವನು ಮಾತಿಗಾರಂಭಿಸಿದ. “ಆಂಟಿ ನಿಮಗೆ ಕವಿತೆ ಎಂದರೆ ಇಷ್ಟವೇ?”
“ಹೌದಪ್ಪಾ. ಬಹಳ ಇಷ್ಟ. ಆದರೆ ನಿನ್ನಂತೆ ಬರೆಯಲು ಬರುವುದಿಲ್ಲ.”
ಸಂಕೋಚದಿಂದ “ಅಯ್ಯೋ, ಇಲ್ಲ ಆಂಟಿ. ನೀವೊಬ್ಬರೇ ಆ ರೀತಿ ಹೇಳಿರುವುದು” ಎಂದ.
“ಇಲ್ಲಪ್ಪ, ನಿಜವಾಗಲೂ ಚೆನ್ನಾಗಿದೆ. ನೀನು ಹೀಗೇ ಮುಂದುವರೆದರೆ ಉತ್ತಮ ಕವಿಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.”
“ಅಷ್ಟು ಖಚಿತವಾಗಿ ಹೇಗೆ ಹೇಳ್ತೀರಿ?” ಕೇಳಿದ.
“ಏಕೆಂದರೆ ನಾನು ಕಾಲೇಜಿನಲ್ಲಿ ಕನ್ನಡ ಕವಿತೆಗಳನ್ನು ಹೇಳಿಕೊಡುವ ಶಿಕ್ಷಕಿಯಾದ್ದರಿಂದ.”
“ಹೌದಾ ಆಂಟಿ, ಮತ್ತೆ ಇಂಗ್ಲೀಷ್  ಪುಸ್ತಕ ಓದುತ್ತಿದ್ದೀರಾ?”
“ಏಕೆ ಕನ್ನಡ ಶಿಕ್ಷಕಿಯಾದರೆ ಇಂಗ್ಲಿಷ್ ಓದಬಾರದಾ?”
“ಹಾಗೇನಿಲ್ಲ ಆಂಟಿ” ಸ್ವಲ್ಪಹೊತ್ತು ಮೌನವಾಗಿದ್ದು, ನಂತರ “ಆಂಟಿ ನಿಜಕ್ಕೂ ನಾನು ಉತ್ತಮ ಕವಿಯಾಗ್ತೀನಾ?” ಕೇಳಿದ.
“ನೂರು ಪರ್ಸೆಂಟ್” ಹೇಳಿದಳು. ಆಗ ಅವನ ಕಂಗಳಲ್ಲಿ ಹೊಳೆದ ಕಾಂತಿಯನ್ನು ಕಂಡು ಚಕಿತಳಾದಳು.
ಇನ್ನೇನು ದಾವಣಗೆರೆ ಹತ್ತಿರ ಬಂದಾಗ ಅವನು “ಆಂಟಿ, ನನ್ನ ಹೆಸರು ಧನುಷ್. ನಾನು, ನಿಮ್ಮ ಅಕ್ಕನ ಮಗ ಕಾರ್ತಿಕ್ ಒಂದೇ ಕ್ಲಾಸಿನಲ್ಲಿ ಓದ್ತೀವಿ. ನಮ್ಮ ಮನೆಯ ಪಕ್ಕವೇ ಅವರ ಮನೆ ಇರುವುದು. ನಾನೇ ಕರ್ಕೊಂಡು ಹೋಗ್ತೀನಿ” ಎಂದ.
“ಬೇಡಪ್ಪ, ಕಾರ್ತಿಕ್‍ನ ಅಣ್ಣ ಸಂಜಯ್ ಬರ್ತಾ ಇದ್ದಾನೆ. ಥ್ಯಾಂಕ್ಸ್” ಎಂದಳು.
ಬಸ್ ಇಳಿದಾಗ ಸಂಜಯ್ ಕಾರ್ ತಂದಿದ್ದ. ಅದನ್ನು ನೋಡಿ ಪ್ರಿಯಾ, “ಧನುಷ್, ನೀನೂ ನನ್ನ ಜೊತೆ ಬಾ” ಎಂದಳು. 
ಆದರೆ ಅವನು, “ಇಲ್ಲ ಆಂಟಿ, ನನ್ನ ಗೆಳೆಯ ಬರ್ತಾನೆ. ನೀವು ಹೋಗಿ” ಎಂದ. ಸಂಜಯ್ ಧನುಷ್‍ನನ್ನು ನೋಡಿದ ತಕ್ಷಣ ಮುಖ ಸಿಂಡರಿಸಿಕೊಂಡಿದ್ದನ್ನು ಪ್ರಿಯಾ ಗಮನಿಸಿದ್ದಳು. ಆದ್ದರಿಂದ ಒತ್ತಾಯಿಸಲಿಲ್ಲ. 
ದಾರಿಯಲ್ಲಿ ಸಂಜಯ್, “ಅವನ ಹತ್ತಿರ ಏಕೆ ಮಾತಾಡಿದ್ರಿ ಆಂಟಿ, ಅವನೊಬ್ಬ ವೇಸ್ಟ್ ಫೆಲೊ. ನಮ್ಮ ಕಾರ್ತಿಕ್ ಕ್ಲಾಸ್‍ನವನೇ. 10ನೇ ತರಗತಿಯವರೆಗೂ ಚೆನ್ನಾಗಿಯೇ ಓದಿದ. 90% ಮೇಲೆ ಬಂದಿತ್ತು. ಪಿಯುಸಿಗೆ ಹೋಗಿ ಏನಾಯ್ತೊ ಗೊತ್ತಿಲ್ಲ. ಓದುವುದನ್ನೂ ಬಿಟ್ಟ. ಈಗ ನೋಡಿದಿರಲ್ಲ ಅವನ ಅವತಾರಾನಾ. ಓದುವುದಿಲ್ಲ, ಬರೆಯುವುದಿಲ್ಲ. ಪ್ರಥಮ ಪಿಯುಸಿ 40% ತಗೊಂಡು ಹೇಗೊ ಪಾಸಾದ. ಅದಕ್ಕೆ ಈಗ ನಾವು ಕಾರ್ತಿಕ್‍ನಿಗೆ ಕೂಡ ಮಾತನಾಡಲು ಬಿಡುವುದಿಲ್ಲ” ಕೇಳಿ ದಂಗಾದಳು ಪ್ರಿಯಾ.
ಅಷ್ಟು ಸುಂದರ ಕವಿತೆಯನ್ನು ರಚಿಸುವ ಹುಡುಗ ಓದುವುದಿಲ್ಲ, ತಿರುಗುತ್ತಾನೆ, ತಂದೆ-ತಾಯಿಯರನ್ನೂ ಗೌರವಿಸುವುದಿಲ್ಲ ಎಂದರೆ ನಂಬುವುದಾದರೂ ಹೇಗೆ? ಏನೋ ಸಮಸ್ಯೆಯಿರಬೇಕು ಎಂದುಕೊಂಡಳು.
ನಂತರ ಮಾತು ಅಕ್ಕ-ಭಾವ, ಮನೆ ಇತ್ಯಾದಿ ಕಡೆ ಹೊರಳಿತು. ಮನೆಗೆ ಬಂದು ಊಟ ಮಾಡಿ ರೆಸ್ಟ್ ತಗೊಂಡು ಸಂಜೆ ವಾಕಿಂಗ್ ಹೋಗುವುದೆಂದು ಹೊರಟಳು. ಅಕ್ಕನಿಗೆ ಏನೊ ಕೆಲಸವಿದ್ದುದ್ದರಿಂದ ತಾನೇ ಹತ್ತಿರದ ಪಾರ್ಕಿಗೆ ಹೋಗುವೆನೆಂದು ಹೊರಟಳು.
ಮನೆಯಿಂದ ಹೊರಟಾಗ ಪಕ್ಕದ ಮನೆಯ ಕಾಂಪೌಂಡ್‍ನಲ್ಲಿ ಧನುಷ್ ಕಾಣಿಸಿಕೊಂಡ. “ಹಾಯ್” ಎಂದಳು. ಅವನು ಸಂಕೋಚದಿಂದಲೇ “ಹಲೊ ಆಂಟಿ” ಎಂದು ಒಳಗೆ ಹೊರಟುಹೋದ. ಸ್ವಲ್ಪ ದೂರ ಹೋಗುತ್ತಿದ್ದ ಹಾಗೆ ಯಾರೋ ‘ಆಂಟಿ’ ಎಂದು ಕರೆದ ಹಾಗಾಯಿತು. ಈ ಊರಿನಲ್ಲಿ ಯಾರಪ್ಪಾ ಎಂದು ತಿರುಗಿನೋಡಿದರೆ ಧನುಷ್ ಓಡೋಡಿ ಬರುತ್ತಿದ್ದ, ನಿಂತಳು.
“ಮನೆಯ ಹತ್ತಿರ ಮಾತನಾಡಿಸಿದರೆ ಸರಿಯಾಗಿ ಮಾತಾಡಲಿಲ್ಲ” ಆಕ್ಷೇಪಿಸಿದಳು. 
“ಹಾಗಲ್ಲ ಆಂಟಿ, ನಿಮ್ಮ ಮನೆಯವರಿಗೆ ನನ್ನ ಕಂಡರೆ ಆಗುವುದಿಲ್ಲ. ಅವರು ನಿಮಗೆ ಏನಾದರೂ ಅಂತಾರೇನೋ ಅಂತ ಮಾತನಾಡಲಿಲ್ಲ. ನಿಮಗೆ ಕೂಡ ಏನು ಹೇಳಿರ್ತಾರೊ. ನೀವು ಮಾತಾಡ್ತೀರೊ ಇಲ್ಲವೊ ಎಂದುಕೊಂಡೆ. ಆದರೆ ನೀವು ಹಾಯ್ ಎಂದಾಗ ತುಂಬಾ ಸಂತೋಷ ಆಯಿತು. ಅದಕ್ಕೆ ಬಂದೆ.”
ಪಾರ್ಕಿಗೆ ಹೋಗಿ ವಾಕಿಂಗ್ ಮಾಡುತ್ತಲೇ, “ನಮ್ಮ ಮನೆಯವರಿಗೆ ನಿನ್ನನ್ನು ಕಂಡರೆ ಏಕೆ ಆಗುವುದಿಲ್ಲ” ಕೇಳಿದಳು. 
“ನಾನು ಓದುವುದಿಲ್ಲ, ಹೀಗೆ ತಿರುಗ್ತೀನಿ ಎಂದು.” 
ಅಲ್ಲಿಯೇ ಬೆಂಚಿನ ಮೇಲೆ ಕುಳಿತು, “ಯಾಕೆ ಧನುಷ್, ಅಷ್ಟು ಉತ್ತಮ ಕವಿತೆಯನ್ನು ಬರೆಯುವವನು, ಓದಲ್ಲ ಎಂದರೆ ಹೇಗೆ?” ಕೇಳಿದಳು. 
“ಅದೊಂದು ದೊಡ್ಡ ಕಥೆ.”
“ಸರಿ ಶುರು ಮಾಡು.”
“ಆಂಟಿ ಇವತ್ತು ಲೇಟಾಗುತ್ತೆ. ನಾಳೆ  ಬೆಳಗ್ಗೆ ಹೇಳ್ತೀನಿ.” 
“ನಾಳೆ ನಾನು ಹರಿಹರ ನೋಡಲು ಹೋಗ್ತಿದ್ದೀನಿ, ಸಂಜೆ ಎಷ್ಟೊತ್ತಾಗುತ್ತೋ?”
“ಆಂಟಿ ನಾನೂ ನಿಮ್ಮ ಜೊತೆ ಬರ್ತೀನಿ.”
“ಕಾಲೇಜಿಲ್ವಾ?”
“ಇದೆ ಆಂಟಿ. ಆದ್ರೆ ಹೋಗೊಲ್ಲ.”
“ಯಾಕೆ? ನನಗದು ಇಷ್ಟವಾಗೋಲ್ಲ.”
“ಪ್ಲೀಸ್ ಆಂಟಿ. ಇಷ್ಟು ದಿನದಲ್ಲಿ ನನಗೆ ಯಾರೊಂದಿಗೂ ನನ್ನ ಸಮಸ್ಯೆ ಹೇಳಿಕೊಳ್ಳಬೇಕು ಎನಿಸಿರಲಿಲ್ಲ. ಆದ್ರೆ ನೀವು ಮಾತನಾಡುವ ಧಾಟಿ ನೋಡಿದ್ರೆ ನನ್ನ ಸಮಸ್ಯೆ ಅರ್ಥ ಮಾಡಿಕೊಳ್ತೀರಾ ಅನಿಸುತ್ತೆ. ಪ್ಲೀಸ್ ಆಂಟಿ.” ‘ನೋಡೋಣ ಅವನ ಸಮಸ್ಯೆ ಏನಿರಬಹುದೆಂದೆನಿಸಿ, “ಸರಿ ಹಾಗೆ ಮಾಡು. ಬೆಳಗ್ಗೆ 9.30ಕ್ಕೆ ಮನೆ ಬಿಡ್ತೀನಿ” ಎಂದಳು.
“ಆಂಟಿ, ಮನೆ ಹತ್ತಿರ ಬೇಡ. ಬಸ್‍ಸ್ಟಾಪ್‍ನಲ್ಲಿ 10ಕ್ಕೆ ಇರ್ತೀನಿ.” 
ಸರಿ ಎಂದು ವಾಪಾಸ್ಸಾಗುತ್ತಾ, ಇನ್ನೇನು ಮನೆ ಬಂತು ಎನ್ನವ ಕ್ರಾಸ್‍ನಲ್ಲಿ “ಆಂಟಿ ನೀವು ಹೋಗಿ ನಾನು ಬರ್ತೀನಿ” ಎಂದು ಹೊರಟುಹೋದ.
ಮನೆಗೆ ಹಿಂತಿರುಗಿದಾಗ ಭಾವ ಬಂದಿದ್ದರು. ಎಲ್ಲರೂ ಮಾತನಾಡುತ್ತಾ, ಊಟ ಮಾಡಿದ ನಂತರ ಹರಿಹರಕ್ಕೆ ಹೋಗುವ ಪ್ಲಾನ್ ತಿಳಿಸಿದೆ. ಭಾವ “ಅಯ್ಯೋ, ನನಗೆ ರಜಾ ಇಲ್ವಲ್ಲಮ್ಮಾ” ಎಂದರು. 
“ಪರವಾಗಿಲ್ಲ ಭಾವ. ನನ್ನ ಗೆಳತಿಯೊಬ್ಬಳು ಅಲ್ಲಿಯೇ ಲೆಕ್ಚರರ್. ಅವಳಿಗೆ ಫೋನ್ ಮಾಡಿದ್ದೇನೆ. ಬಸ್ ಸ್ಟಾಪ್‍ಗೆ ಬರುತ್ತಾಳೆ.”
ಬೆಳಗ್ಗೆ 10.00 ಗಂಟೆಗೆ ಸರಿಯಾಗಿ ಧನುಷ್ ಬಸ್‍ಸ್ಟಾಂಡ್‍ನಲ್ಲಿ ಕಾಯುತ್ತಿದ್ದ. ಬಸ್ ಹೊರಟ ಮೇಲೆ “ಈಗ ಹೇಳು ನಿನ್ನ ಕಥೆ” ಎಂದಳು. 
ಸಂಕೋಚದಿಂದಲೇ ಆರಂಭಿಸಿದ. “ಆಂಟಿ ಎಲ್ಲರೂ ಇಂಜಿನಿಯರ್, ಡಾಕ್ಟರ್ ಆಗಬೇಕೇ? ಇಲ್ಲದಿದ್ದರೆ ಅವರಿಗೇನೂ ಬೆಲೆ ಇರುವುದಿಲ್ಲವೇ?” ಕೇಳಿದ.
“ಯಾರಪ್ಪಾ ಹೇಳಿದ್ದು, ಹಾಗೆ ಅಂತಾ. ನಾನೇ ಇಲ್ಲವಾ ಕನ್ನಡ ಮೇಡಮ್” ನಕ್ಕಳು.
“ನೀವೊಬ್ರು ಹೀಗೆ ಹೇಳ್ತೀರಾ ಆಂಟಿ. ಆದ್ರೆ ಎಲ್ಲರೂ ಹೇಳೋದು ಬೇರೆ.”
“ಬಿಡಿಸಿ ಹೇಳು.”
“ಆಂಟಿ ನನಗೆ ಈ ಬರೆಯೋ ಹವ್ಯಾಸ 6ನೇ ಕ್ಲಾಸಿನಂದಲೂ ಇದೆ. 10ನೇ ಕ್ಲಾಸಿನಲ್ಲಿ 94% ತೆಗೆದೆ. ಆಮೇಲೆ ಪಿಯುಸಿ ಆರ್ಟ್ಸ್s ತೆಗೆದುಕೊಂಡು ಕನ್ನಡ ಮೇಜರ್ ತೆಗೆದುಕೊಳ್ಳಬೇಕು, ಕನ್ನಡ ಎಮ್.ಎ ಮಾಡಬೇಕು ಎಂದುಕೊಂಡೆ. ಅದಕ್ಕೆ ಮನೆಯಲ್ಲಿ ಎಲ್ಲರೂ ಒಂದೇ ಸಮನೆ ಬೈದರು. ಆಗುವುದಾದರೆ ಇಂಜಿನಿಯರ್ ಆಗಲೇಬೇಕು. ಅದು ಬೇಡ ಅಂದ್ರೆ ಡಾಕ್ಟರ್ ಆಗು ಅಂದ್ರು. ನನಗೆ ಎರಡೂ ಇಷ್ಟವಿರಲಿಲ್ಲ. ದೊಡ್ಡ ರಾದ್ಧಾಂತವಾಯಿತು.”
“ಕೊನೆಗೆ ಅಪ್ಪ ಅಮ್ಮ ಪಟ್ಟು ಹಿಡಿದು ಪಿಯುಸಿ ಸೈನ್ಸ್‍ಗೆ ಸೇರಿಸಿದರು. ನಾನು ಅಸಹಾಯಕನಾಗಿದ್ದೆ. ನೀನು ಕೇಳಿದ್ದನ್ನೆಲ್ಲಾ ತೆಗೆಸಿಕೊಡ್ತೀವಿ. ಆದ್ರೆ ಪಿಯುಸಿ 95% ತೆಗೆದು ಇಂಜಿನಿಯರ್ ಆಗು ಎನ್ನುವುದು ಅವರ ಜಪ. ನಾನೇನು ಮಾಡಲಿ. ಅವರ ಮೇಲೆ ಕೋಪ ಬಂತು. ಹೇಗೆ ತೀರಿಸಿಕೊಳ್ಳಲಿ? ಅದಕ್ಕೆ ಈ ರೀತಿಯಾದೆ. ಅವರ ಮೇಲೆ ಸೇಡು ತೀರಿಸಿಕೊಳ್ತಿದ್ದೀನಿ. ಅವರು ಏನೇನು ಮಾಡಬಾರದು ಎಂದು ಹೇಳ್ತಾರೊ ಅದೆಲ್ಲವನ್ನೂ ನಾನು ಮಾಡ್ತಾ ಇದ್ದೀನಿ. ಈ ಕೂದಲು ನೋಡಿ, ಇದು ನನಗೇ ಇಷ್ಟ ಇಲ್ಲ. ಆದ್ರೆ ಅವರಿಗೆ ಕೋಪ ಬರಲಿ ಎಂದೇ ಈ ರೀತಿ ಮಾಡ್ತೀನಿ.”
ಆವೇಶದಿಂದ ಅವನ ಮುಖ ಕೆಂಪಾಗಿ ಹೋಗಿತ್ತು. ಆ ಮುಗ್ಧ ಮುಖದ ಹಿಂದೆ ಇಷ್ಟು ನೋವಿತ್ತೆಂದು ಅರಿತಾಗ ಆಘಾತವಾಗಿತ್ತು ಪ್ರಿಯಾಳಿಗೆ. ಏನು ಹೇಳುವುದು ಎನ್ನುವಷ್ಟರಲ್ಲಿ ಬಸ್ ಹರಿಹರ ತಲುಪಿತ್ತು.
ಬಸ್‍ಸ್ಟಾಂಡ್‍ನಲ್ಲಿ ಗೆಳತಿ ಅನುಪಮಾ ಕಾಯುತ್ತಿದ್ದಳು. ಇವಳನ್ನು ಮಾತನಾಡಿಸಿದ ಅನುಪಮಾ ಪಕ್ಕದಲಿದ್ದ ಹುಡುಗನನ್ನು ನೋಡಿ, “ಅಕ್ಕನ ಮಗನಾ” ಕೇಳಿದಳು. 
“ಅಲ್ಲ, ನನ್ನ ಪುಟ್ಟ ಸ್ನೇಹಿತ” ಎಂದು ಹೇಳಿ ಬಸ್ ಕಥೆಯನ್ನು ಹೇಳಿದ್ದಷ್ಟೇ ಅಲ್ಲದೆ “ಇವನು ಬಹಳ ಉತ್ತಮ ಕವಿ” ಎಂದು ಪರಿಚಯಿಸಿದಳು. 
ಧನುಷ್‍ಗೆ ಎಷ್ಟು ಸಂತೋಷವಾಗಿತ್ತೆಂದರೆ ಮಾತೇ ಹೊರಡಲಿಲ್ಲ. ಮೂವರು ಹೋಟೆಲ್‍ಗೆ ಹೋಗಿ ತಿಂಡಿ ತಿಂದು, ದೇವಸ್ಥಾನ, ಹೊಳೆ ಎಲ್ಲವನ್ನೂ ನೋಡಿದರು. ಅನುಪಮಾ ಬೇಗ ಊಟ ಮುಗಿಸಿ ಕ್ಲಾಸ್ ಇದೆ ಎಂದು ಹೇಳಿ ಹೊರಟುಹೋದಳು. ಹೋಗುತ್ತಿರುವಾಗ “ನಿನ್ನ ಕವನಗಳನ್ನು ಕಳಿಸಪ್ಪಾ. ನಾನೂ ಓದ್ತೀನಿ. ಹಾಗೆ ಪೇಪರ್‍ಗೂ ಕೊಡು, ಪ್ರಕಟಿಸು” ಎಂದು ಹೇಳಿ ಅವನ ಬೆನ್ನು ತಟ್ಟಿ ಹೋದಳು. ಧನುಷ್ ಮುಖ ಸಂತಸದಿಂದ ಉಬ್ಬಿಹೋಗಿತ್ತು.
“ಈಗ ಹೇಳು, ಡಾಕ್ಟರ್, ಇಂಜಿನಿಯರ್ ಆದ್ರೆ ಮಾತ್ರ ಗೌರವಿಸ್ತಾರಾ?” 
“ಇಲ್ಲ ಆಂಟಿ, ಆದ್ರೆ ಅಪ್ಪ-ಅಮ್ಮ.......?”
“ಅವರಿಗೆ ಹೇಳುವುದು ನಂತರ. ಆದ್ರೆ ಅದಕ್ಕಾಗಿ ನಿನ್ನ ಮೇಲೆ ನೀನೇ ಸೇಡು ತೀರಿಸಿಕೊಳ್ಳುತ್ತಿದ್ದೀಯಲ್ಲಾ?”
“ನನ್ನ ಮೇಲೆ ನಾನಾ? ಅದು ಹೇಗೆ ಆಂಟಿ?”
“ಮತ್ತಿನ್ನೇನು, ಈ ಕೂದಲು ನಿನಗಿಷ್ಟವಿಲ್ಲ, ಈ ಓಲೆ, ಈ ಕಡಗ, ಅದು ಬಿಡು, ಚೆನ್ನಾಗಿ ಓದುವ ನೀನು ಈಗ 40% ತೆಗೆದು ಎಲ್ಲರೂ ಛೀ ಎನ್ನುವ ಮಟ್ಟಕ್ಕೆ ಬಂದಿದ್ದೀಯಾ ಎಂದರೆ....”
“ಅಂದರೆ 90% ತೆಗೆದರೆ ಮಾತ್ರ ಎಲ್ಲರೂ ನನ್ನನ್ನು ಗೌರವಿಸಬೇಕೇ?”
“ಖಂಡಿತ ಆ ರೀತಿ ಅಲ್ಲ. ಆದ್ರೆ ನಿನ್ನ ಸಾಮರ್ಥ್ಯ ಹಾಳಾಗ್ತಾ ಇದ್ದರೆ ಎಲ್ಲರೂ ಅದನ್ನೇ ಬೆಟ್ಟು ಮಾಡಿ ತೋರಿಸ್ತಾರೆ. ನಿನ್ನ ಸಾಧನೆಯನ್ನು ತೋರಿಸಬೇಕೆ ಹೊರತು ನಿನ್ನ ಸಾಮರ್ಥ್ಯ ಹಾಳುಮಾಡಿಕೊಳ್ಳಬಾರದು.”
“ಹಾಗಿದ್ದರೆ ನಾನು ಏನು ಮಾಡಬೇಕು?”
“ನೀನು ಪಿಯುಸಿ ಸೈನ್ಸ್ ತೆಗೆದುಕೊಂಡಿದ್ದೀಯಾ. ನಿನಗೆ ಓದುವುದೇನೂ ಕಷ್ಟವಲ್ಲ. ಚೆನ್ನಾಗಿ ಓದು. ನಿನ್ನ ಕವಿತೆಯ ಬರವಣಿಗೆಯನ್ನೂ ಮುಂದುವರೆಸು. ಕವನಗಳನ್ನು ಪತ್ರಿಕೆಗೆ ಕಳಿಸು. ನಿನ್ನ ಮನೆಯವರಿಗೆ ಆ ರೀತಿ ತೋರಿಸು.”
“ಇಲ್ಲ ಆಂಟಿ. ನಾನು 50% ತೆಗೆದ್ರೂ ದುಡ್ಡು ಕೊಟ್ಟಾದ್ರೂ ಇಂಜಿನಿಯರಿಂಗ್ ಸೇರಿಸ್ತಾರೆ.”
“ಆ ಬಗ್ಗೆ ನೀನೇನೂ ಯೋಚ್ನೆ ಮಾಡಬೇಡ. ನಾನು ನಿನ್ನ ತಂದೆ-ತಾಯಿಯರ ಹತ್ತಿರ ಮಾತಾಡ್ತೀನಿ. ಆದ್ರೆ ನಿನ್ನ ವ್ಯಕ್ತಿತ್ವವನ್ನು ನೀನು ಹಾಳು ಮಾಡಿಕೊಳ್ಳಬೇಡ.” 
“ಇಲ್ಲ ಆಂಟಿ. ನೀವು ಹೇಗೆ ಹೇಳಿದ್ರೆ ಹಾಗೆ ಮಾಡ್ತೀನಿ.”
“ಆ ರೀತಿ ಹೇಳುವುದೂ ಸರಿಯಲ್ಲ ಧನುಷ್. ನೀನು ಯೋಚಿಸಿ ನಿರ್ಧಾರ ತೆಗೆದುಕೊ.”
“ಸರಿ ಆಂಟಿ” ಎಂದು ಬಿಲ್ಲು ಕೊಡಲು ಕೈಗೆತ್ತಿಕೊಂಡ.
“ಅದೆಲ್ಲಾ ನೀನು ದುಡಿಯಲು ಶುರು ಮಾಡಿದ ಮೇಲೆ” ಎನ್ನುತ್ತಾ ತಾನೇ ಬಿಲ್ಲು ನೀಡಿದಳು ಪ್ರಿಯಾ.
“ಆಂಟಿ ನೀವು ಎಲ್ಲರಿಗಿಂತ ಬಹಳ ಭಿನ್ನ” ಎಂದ. ನಕ್ಕಳು ಪ್ರಿಯಾ. ಇಬ್ಬರೂ ಮನೆಯವರೆಗೂ ಜೊತೆಯಾಗಿಯೇ ಬಂದರು. ಧನುಷ್ ಬೇಡವೆಂದರೂ ಪ್ರಿಯಾ ಕರೆದುಕೊಂಡು ಬಂದಳು. 
ಅಕ್ಕ ಅದನ್ನು ಕಂಡು ಅಸಮಾಧಾನದಿಂದಲೇ “ನಿನಗೆ ಎಲ್ಲಿ ಸಿಕ್ಕಿದ ಅವನು?” ಎಂದಳು. 
“ನನ್ನೊಂದಿಗೆ ಹರಿಹರಕ್ಕೆ ಬಂದಿದ್ದ.” 
 ಹೌಹಾರಿದಳು ಅಕ್ಕ. “ಏನಾಯ್ತೆ ನಿನಗೆ? ಅದೂ ಅವನ ಜೊತೆ......”
“ಅಕ್ಕ ನಾನು ಒಬ್ಬ ಶಿಕ್ಷಕಿ ಎನ್ನುವುದನ್ನು ಮರೆಯಬೇಡ. ಧನುಷ್ ಬಹಳ ಒಳ್ಳೆಯ ಹುಡುಗ.”
“ಹೌದಮ್ಮ ಹೌದು, ನೀನೊಬ್ಬಳೇ ಹೇಳಬೇಕು” ವ್ಯಂಗ್ಯವಾಡಿದಳು.
“ಅಲ್ಲಕ್ಕ ಕಾರ್ತಿಕ್‍ನೇ ಹೀಗೆ ವರ್ತಿಸಿದ ಎಂದುಕೊ ಆಗ ಏನು ಮಾಡ್ತಿದ್ದೆ?”
“ನಾನಾ? ಅವನ ಕಾಲು ಮುರಿದು ಮನೆಯಲ್ಲಿ ಕೂರಿಸ್ತಿದ್ದೆ” ಆಶ್ಚರ್ಯಚಕಿತಳಾಗಿ ನೋಡಿದಳು ಪ್ರಿಯಾ. ವಿದ್ಯಾವಂತೆಯಾದ ತನ್ನಕ್ಕ ಮಾತನಾಡಿದ ರೀತಿ ಅವಳಿಗೆ ಸರಿಯೆನಿಸಲಿಲ್ಲ.
ಮಾರನೆ ದಿನ ಬೆಳಗ್ಗೆ  ಧನುಷ್ ಮನೆಗೆ ಹೋಗಲೆಂದು ಹೊರಗೆ ಬಂದವಳಿಗೆ ಧನುಷ್ ಕಾಣಿಸಿದಾಗ ತನ್ನ ಕಣ್ಣನ್ನೇ ನಂಬಲಾಗಲಿಲ್ಲ. ಹೇರ್ ಕಟ್ ಮಾಡಿಸಿದ್ದ, ಕಿವಿಯಲ್ಲಿ ಓಲೆ, ಕೈಯಲ್ಲಿ ಕಡಗವಿರಲಿಲ್ಲ. ನೂರಾರು ಜೇಬಿದ್ದ ಪ್ಯಾಂಟ್‍ಗೆ ಬದಲಾಗಿ ನೀಲಿಯ ಜೀನ್ಸ್ ಪ್ಯಾಂಟ್ ಹಾಕಿ ಅದೇ ಬಣ್ಣದ ಟೀಶರ್ಟ್ ಹಾಕಿದ್ದ. 
“ವಾಹ್, ಏನು ಬದಲಾವಣೆ” ಎಂದಳು. 
“ಚೆನ್ನಾಗಿದ್ದೀನಾ ಆಂಟಿ?” ಹತ್ತಿರ ಬಂದ. 
“ನಿಜಕ್ಕೂ ಚೆನ್ನಾಗಿದೆ.” 
ಗೇಟಿನ ಹತ್ತಿರ ಇವಳನ್ನು ಕಂಡ ಧನುಷ್ ತಾಯಿ, “ಓಹ್ ನೀವೇನಾ ಕಾರ್ತಿಕ್‍ನ ಚಿಕ್ಕಮ್ಮ, ಬನ್ನಿ ಒಳಗೆ” ಎಂದರು.
ಒಳಗೆ ಹೋಗುತ್ತಲೇ “ಕುಳಿತುಕೊಳ್ಳಿ, ಟೀ ಮಾಡಿಕೊಂಡು ಬರ್ತೀನಿ ಇರಿ” ಎಂದರು. 
“ಬೇಡ ಬನ್ನಿ, ನಿಮ್ಮ ಹತ್ತಿರ ಸ್ವಲ್ಪ ಮಾತನಾಡಬೇಕು” ಎಂದಳು. 
“ಆಂಟಿ, ನಾನು ಟೀ ಮಾಡ್ಕೊಂಡು ಬರ್ತೀನಿ” ಅಂದ ಧನುಷ್.
ಪ್ರಿಯಾಳ ಮುಖದ ಮೇಲಿನ ಗಾಬರಿಯನ್ನು ಗಮನಿಸಿ, “ಆಂಟಿ, ಗಾಬರಿಯಾಗಬೇಡಿ. ನಾನು ಬಹಳ ಚೆನ್ನಾಗಿ ಟೀ ಮಾಡ್ತೀನಿ” ಎಂದು ಒಳಗೆ ಹೋದ. ಸಂಜಯ್ ತಾಯಿಯ ಕಣ್ಣಲ್ಲಿ ಸಂತಸ ಕಂಡಳು ಪ್ರಿಯಾ.
ಅವನ ತಾಯಿ ಹೆಚ್ಚು ಓದಿದಂತೆ ಕಾಣಲಿಲ್ಲ. ಒಬ್ಬನೇ ಮಗ. ಅವನದ್ದೇ ಚಿಂತೆಯಲ್ಲಿ ಸೊರಗಿದಂತಿತ್ತು. “ನಿಮಗೆ ತುಂಬಾ ಥ್ಯಾಂಕ್ಸ್. ನಿಮ್ಮಿಂದಲೇ ಅವನಲ್ಲಿ ಈ ಬದಲಾವಣೆ” ಎಂದರು. 
ಪ್ರಿಯಾ ನೇರವಾಗಿ ವಿಷಯಕ್ಕೆ ಬಂದಾಗ, “ಓದಿನ ಬಗ್ಗೆ ನನಗೆ ಅಷ್ಟೆಲ್ಲಾ ತಿಳಿಯದಮ್ಮಾ. ಎಲ್ಲಾ ನೆಂಟರಿಷ್ಟರ ಮಕ್ಕಳು ಇಂಜಿನಿಯರಿಂಗ್ ಓದುತ್ತಿರುವಾಗ, ಅದೂ ಇವನಿಗಿಂತ ಕಡಿಮೆ ಅಂಕಗಳನ್ನು ತೆಗೆದುಕೊಂಡವರು, ನಮಗೂ ಅದೇ ಆಸೆಯಾಯ್ತು. ಆದ್ರೆ ಅದರಿಂದ ನನ್ನ ಮಗ ಹೀಗಾಗ್ತಾನೆ ಅಂತ ತಿಳ್ಕೊಂಡಿರಲಿಲ್ಲ” ಎಂದರು. 
ಧನುಷ್ ಟೀ ಮಾಡಿಕೊಂಡು ಬರುವಷ್ಟರಲ್ಲಿ ತಾಯಿಯ ಮುಖ ಪೂರ್ಣ ಅರಳಿತ್ತು. “ತುಂಬಾ ಚೆನ್ನಾಗಿದೆ ಧನು” ಎಂದಾಗ ತಲೆಯೆತ್ತಿ ನೋಡಿದ ಧನುಷ್ ಅಮ್ಮನ ಬಳಿ ಇದ್ದ ಪೇಪರ್ ಗಮನಿಸಿದ. ಏನೆಂದು ನೋಡಿದರೆ ಅದು ಅವನದ್ದೇ ಕವನ ‘ಮಾತೆಯ ಮಮತೆ’ಯಾಗಿತ್ತು. ಅದನ್ನು ಪ್ರಿಯಾ ಇಟ್ಟುಕೊಂಡಿದ್ದಳು. ಅಮ್ಮನ ಹೊಗಳಿಕೆ ಕೇಳಿ ಧನುಷ್‍ಗೆ ಖುಷಿಯನ್ನು ತಡೆದುಕೊಳ್ಳಲಾಗದೆ ಹತ್ತಿರ ಬಂದು ಅಮ್ಮನ ತೊಡೆಯ ಮೇಲೆ ತಲೆಯಿಟ್ಟು ಅಳಲಾರಂಭಿಸಿದ. 
“ಅಮ್ಮಾ ನನ್ನನ್ನು ಕ್ಷಮಿಸಿಬಿಡು. ನಿನಗೆ ತುಂಬಾ ನೋವು ಕೊಟ್ಟಿದ್ದೇನೆ. ಇನ್ನೆಂದೂ ಹಾಗೆ ಮಾಡಲಾರೆ” ಎಂದ. ಅದನ್ನು ಕೇಳಿ ಆಕೆಯೂ ಅತ್ತರು. 
“ಧನುಷ್, ನೀನು ಏನೇ ಓದಿದರೂ ಓದಿಸಲು ಅಮ್ಮ ತಯಾರಾಗಿದ್ದಾರೆ. ಈಗ ನೀನೂ ಸಹ ನಿನ್ನ ಸಾಮರ್ಥ್ಯವನ್ನು ತೋರಿಸು” ಎಂದಳು. 
ಮಾರನೇ ದಿನ ಬಸ್ ಹತ್ತಿಸಲು ಧನುಷ್ ಬಂದಿದ್ದ. “ಆಂಟಿ, ಇನ್ನೂ ಸ್ವಲ್ಪ ದಿನ ಇರಬೇಕಿತ್ತು” ಎಂದ.
“ಮತ್ತೆ ಬರ್ತೀನಿ, ಅಷ್ಟರಲ್ಲಿ.........”
“ಗೊತ್ತು, ಗೊತ್ತು ಆಂಟಿ.”
ಊರಿಗೆ ಬಂದ ನಂತರವೂ ಪ್ರತಿನಿತ್ಯ ಫೋನ್ ಮಾಡುತ್ತಿದ್ದ. ಪತ್ರ ಬರೆದು ತನ್ನ ಕವನಗಳನ್ನು ಕಳಿಸುತ್ತಿದ್ದ. ಧನುಷ್‍ನ ತಾಯಿಯೂ ಫೋನ್ ಮಾಡುತ್ತಿದ್ದರು. ಪಿಯುಸಿಯಲ್ಲಿ ಅವನಿಗೆ 96% ಬಂದಿತ್ತು. ಅವನು ಬಿಎಗೆ ಸೇರಿ ಮೇಜರ್ ಕನ್ನಡ ತೆಗೆದುಕೊಂಡ.
ಅದೊಂದು ದಿನ ಪ್ರಿಯಾಗೆ ಪಾರ್ಸಲ್ ಬಂದಿತ್ತು. ಕಳಿಸಿದವರ ವಿಳಾಸವಿರಲಿಲ್ಲ. ಬಿಚ್ಚಿ ನೋಡಿದರೆ ಕವನ ಸಂಕಲನ. 5 ಪುಸ್ತಕಗಳಿದ್ದವು. ‘ಯಾರದಪ್ಪ’ ಎಂದು ನೋಡಿದರೆ ಹೆಸರೇನೋ ಇತ್ತು. ‘ಯಾರೋ ಗೊತ್ತಿಲ್ಲವಲ್ಲ’ ಎಂದುಕೊಂಡು ಪುಟ ತಿರುವಿಹಾಕಿದಳು. ಅರ್ಪಣೆ ಎನ್ನುವ ಕಡೆಯಲ್ಲಿ ‘ಜೀವ ಕೊಟ್ಟ ತಾಯಿಗೆ’ ಮತ್ತು ಅದರ ಕೆಳಗೆ ‘ದಾರಿ ತೋರಿದ ತಾಯಿಗೆ’ ಎಂದಿತ್ತು. ತಕ್ಷಣವೇ ಮಿಂಚೊಂದು ಸುಳಿದು ಬೆನ್ನುಡಿಯನ್ನು ನೋಡಿದರೆ ಅಲ್ಲಿ ಕವಿಪರಿಚಯದಲ್ಲಿ ಧನುಷ್‍ನ ಫೋಟೋ ಇತ್ತು. ಪ್ರಿಯಾಳ ಸಂತೋಷಕ್ಕೆ ಎಣೆಯೇ ಇರಲಿಲ್ಲ. ತಕ್ಷಣವೇ ಧನುಷ್‍ಗೆ ಫೋನ್ ಮಾಡಲು ಮೊಬೈಲ್ ಕೈಗೆತ್ತಿಕೊಂಡಳು.

- ಸುಧಾ ಜಿ

ಅನುಭವ - ನನ್ನ ಗೆಳತಿ



ಬಾಲ್ಯದಿಂದಲೂ ತುಂಟತನದ ಹಾಗೂ ನಿರ್ಧಾರ ತೆಗೆದುಕೊಂಡರೆ ಪಟ್ಟುಬಿಡದ  ಉಡದ ಸ್ವಭಾವ! ಮುಂದೆ ಕಾಲೇಜಿನಲ್ಲಿ ಮಿಸ್ ವಿಟ್ಟಿ!! 
ಯಾವುದೇ ವಿಷಯವೊಂದು ಹೃದಯಕ್ಕೊಮ್ಮೆ ತಟ್ಟಿತೆಂದರೆ ಮುಗಿಯಿತು. ಬಗೆಹರಿಯದೆ ಬಿಡುವ ಜಾಯಮಾನವಲ್ಲ! ಆಕೆಯ ಆತ್ಮೀಯರು, ಗಂಡ ಎಲ್ಲರ ಸ್ನಾಯುಗಳನ್ನು ಸಡಿಲಿಸಬಲ್ಲವಳು! 
ಎಲ್ಲಾ ಮಧ್ಯ ವಯಸ್ಸಿನ ಹೆಣ್ಣು ಮಕ್ಕಳಂತೆ ಇರದೆ ವಿಭಿನ್ನ ಪ್ರವೃತ್ತಿಯವಳು. ದಿನದಿನವೂ ಹೊಸ ಕನಸುಗಳ ಬೆಂಬತ್ತಿ ಆಶಾಭಾವನೆಯನ್ನು ಮೂಡಿಸಬಲ್ಲವಳು! 
ಮಾರ್ದವತೆಯಿಂದ ಸ್ಪಂದಿಸಬಲ್ಲವಳು. ವೈಯಕ್ತಿಕ ಜೀವನದಲ್ಲಿ ಕಷ್ಟಗಳ ಅರಿವಿಲ್ಲ! ಆದರೆ ನಮ್ಮೊಂದಿಗೆ ಮಿಡಿಯುವ ಸ್ವಭಾವ! ಆದರೆ ಕಥಾಸಾಹಿತ್ಯ, ಸಿನಿಮಾಗಳ ಪಾತ್ರಗಳಲ್ಲಿ ಆಕೆಯೂ ಒಂದಾಗಿ ಬಿಡುತ್ತಾಳೆ

- ಸಂಧ್ಯಾ ಪಿ ಯಸ್

ಕವನ

ಸೋತ ಮಾತು
ಹುಗಿದು
ಗಿಡ ನೆಡಬೇಕು
ಅರಳಿದ ಹೂವಾದರೂ
ಮಾತ ಕಲಿಸಿಯಾತು!!

ಒಳಗಿದ್ದೂ ಹೊರಬರದ
ಹಠಕ್ಕೆ ಬಿದ್ದ
ಮಾತುಗಳನ್ನು
ಗೆಲ್ಲಿಸಲಾಗದ ಸೋಲಿಗೆ
ಯಾವ ಹೆಸರು!?

ಇಟ್ಟಾಡುವ ಪದಗಳೇ
ಆದರೂ
ಎತ್ತಿ ಕಟ್ಟುವುದು
ಎಷ್ಟು ಕಷ್ಟ!!
 - ರಂಗಮ್ಮ ಹೊದೇಕಲ್

ಸರಣಿ ಲೇಖನ - ಏಕಪತ್ನಿ ವ್ರತಸ್ಥನು, ಪತಿವ್ರತೆಯು


-೧- 
ದೇಹ ಶೀಲ

ದೇಹ - ಶೀಲ ಎಂಬ ಭಿನ್ನ ಅಂಶಗಳು ಒಂದರೊಳಗೊಂದು ಮೇಳೈಸಿಕೊಂಡಿದ್ದು ವಿಚಿತ್ರ. ಸಮಾಜದ ವ್ಯವಸ್ಥೆಯಲ್ಲಿ ಸ್ತ್ರೀ ಪುರುಷ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳಲು ಹೆಣಗಾಡುತ್ತಿರುವುದಕ್ಕೆ ಬಹುಶಃ ಕಾರಣ.  ಮಹಾ ಮಹಾಕಾವ್ಯಗಳ ರಚನೆಗೆ ಕಾರಣ ಈ ಎರಡು ಅಂಶಗಳೇ. 

ದೇಹದ ಭಾಷೆ, ನಡವಳಿಕೆ, ಅಪೇಕ್ಷೆ ಬೇರೆ. ಕಾಲದ ಜೊತೆ ಸಾಗುವಂಥದ್ದು. ಶೀಲ ಭಾವದ ಭಾಷೆ ವಾತಾವರಣದಲ್ಲಿ ಒಂದೇ ಎಂಬ ರೀತಿಯಲ್ಲಿ ರೂಪಿತವಾದರು, ಗಂಡಿಗೆ ಸ್ವಚ್ಛಂದ, ಸ್ವತಂತ್ರವಾಗಿ ಬೆಳೆದರೆ ಹೆಣ್ಣಿಗೆ ಕಣ್ಗಾವಲು. ದೇಹವೆಂಬುದು ಲೈಂಗಿಕ ಸೀಮಿತತೆಯಲ್ಲಿ ರೂಪಿತಗೊಂಡಿತು. 

ಉದಾಹರಣೆಗೆ ಲಕ್ಷ್ಮಣ ಸೀತೆಯ ಬೆರಳಿನ ಕಾಲುಂಗರ ಮಾತ್ರ ನೋಡಿದ್ದ ಎಂದು ಹೇಳುವುದು, ಸೀತೆ ರಾವಣನ ಹೆಬ್ಬೆರಳನ್ನು ಮಾತ್ರ ನೋಡಿದ್ದೆ ಎನ್ನುವಂತದ್ದು ಕಂಡಾಗ ಒಬ್ಬ ಪುರುಷನನ್ನ, ಸ್ತ್ರೀಯನ್ನ ನೋಡಿಲ್ಲ ಎಂಬುದು ಪವಿತ್ರ, ಪಾವಿತ್ಯ ಹೇಗಾಗುತ್ತದೆ ಅಥವಾ ಕೇವಲ ಗೌರವ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಎಷ್ಟು ಔಚಿತ್ಯ ಎಂದು ಯೋಚಿಸಿದರೆ ಕಸಿವಿಸಿಗೆ ಒಳಗಾಗುತ್ತೇವೆ.

ಮನುಷ್ಯನ ಕಣ್ಣು ಬಹಳ ಸ್ಪಷ್ಟ. ವ್ಯಕ್ತಿಯೋರ್ವನ ಕಾಮಭಾವ ಅತ್ಯುತ್ತಮವಾಗಿ ಅಭಿವ್ಯಕ್ತಿಸುವ ಹಾಗು ನಿರ್ಲಿಪ್ತನಂತೆ ನಟಿಸುವ ರೀತಿಗಳನ್ನು ಕಣ್ಣುಗಳು ಮಾತ್ರ ಪಟಕ್ಕಂತ ಹಿಡಿದು ಅಂತರ್ ಭಾವಕ್ಕೆ ಮನದಟ್ಟು ಮಾಡಿಸುತ್ತದೆ. ಅರಿಯಲು ಸಾಧ್ಯವಿಲ್ಲ ಎಂದವರಿಗೆ ನನ್ನಲ್ಲಿ ಉತ್ತರವಿಲ್ಲ. ಆದರೆ ಪರಪುರುಷ, ಸ್ತ್ರೀ ನೋಡುವುದೆ, ಮಾತಾಡುವುದೇ ಅಪರಾಧ, ನೋಡದಿರುವುದು ಪಾವಿತ್ರ್ಯ ಕಲ್ಪನೆಯೆ ಸರಿಯಾದುದಲ್ಲ. 

ಸಮಾಜ ಗಂಡು ಹೆಣ್ಣು ರಚನೆಯಿಂದ ಬೆಳೆಯಲ್ಪಟ್ಟಿದೆ. ಆದರೆ ಇವರನ್ನು ಸಂಭಾಳಿಸುವ ಕ್ರಮ ಇವತ್ತಿನ ಈ ಕ್ರಮಗಳು ಎಷ್ಟು ಸರಿಯಾದುದು? ಅಂದರೆ ಕೇವಲ ದೇಹ ಭಾಷೆಯಿಂದ ನೋಡುವ ಕ್ರಮ ಹಾಗು ದೇಹಭಾಷೆಯ ಹಿನ್ನಲೆಯಲ್ಲಿ ಶೀಲ ಎಂಬ ಕಲ್ಪನೆ ನೋಡುವ ಕ್ರಮ ಯೋಚಿಸಬೇಕಾದುದು. ಶೀಲ ಕಲ್ಪನೆ ಸಮಾಜದಲ್ಲಿ, ಕುಟುಂಬದಲ್ಲಿ ಹೆಣ್ಣು ಗಂಡುಗಳ ಸಂಬಂಧ ಸರಳ ಸುಂದರವಾಗಿರಲಿ ಬದ್ಧನಿಷ್ಟವಾಗಿರಲಿ ಎಂದು ರಚಿತವಾದದ್ದು ಎಂದು ಹೇಳಿದರೆ ನಿಜವಾಗಲು ಸರಿ. ಆದರೆ ಇಂದು ಇವುಗಳೆ ಅನುಮಾನ, ಇಬ್ಬರ ಜೀವನ್ಮರಣ ಪ್ರಶ್ನೆಗಳಿಗೆ, ಒಬ್ಬರಿನ್ನೊಬ್ಬರು ಕೊಲ್ಲುವ ಕ್ರಿಯೆಗಳಿಗೆ ಕಾರಣವಾಗುತ್ತಿರುವುದು ಕಾಣುತ್ತಿದ್ದೇವೆ. ಹೆಚ್ಚುಹೆಚ್ವು ಅನುಮಾನ ಪ್ರವೃತ್ತಿಯವರಾಗಿ ಬದಲಾಗಲು ನಿಷ್ಠೆಯ ಭಾಗವಾಗಿ, ಬಂಧನವಾಗಿ ಬದಲಾಗಿರುವ ಈ 'ದೇಹ ಶೀಲ' ಅಂಶಗಳೆ ಕಾರಣ.
(ಮುಂದುವರೆಯುತ್ತದೆ)
 -  ಸವಿತಾ ರವಿಶಂಕರ್

ಕಥೆ - ಲಹರಿ


'ತೇರಿ ವಿಠೋಬಸೆ ಮೇರಿ ಕ್ಯಾ ಲೇನಾದೇನಾ. ಬ್ಹೇಸ್ ಪಡಿ ಹೆ ದೂದ್ ಸೆ ಮೇರೆ ಬಚ್ಚೋಕಾ ದೇಖಬಾಲ್ ಹೋತಾಹೆ. ಮೇನಹಿ ಆವೂಂಗಿ' ಎಂದ ದಡ್ಡ ಕೋಡಿ ತುಕಾರಮನ ಹೆಂಡ್ತಿ, ಪುಷ್ಪಕ ವಿಮಾನಬಂದರು ಹೋಗಲಿಲ್ಲ ಕೋಡಿ. ಅಂತ ಮುತ್ಯಾ ಕತಿ ಹೇಳ್ತಿದ್ದರ ನಗ್ತಿದ್ವಿ. 
ಎಂಥ ಹುಚ್ಚ ಇರ್ತಾವು ಹೆಣ್ಣಮಕ್ಕಳು ಅಂದಾಗ, ಖರೆ ವಿಮಾನದಾಗ ಗಂಡನ ಕೂಡೆ ಹೋಗದ ಬಿಟ್ಟು, ಎಮ್ಮಿದ  ಸಗಣಿ ಎತ್ತೋದರಾಗ ಏನ ಸುಖ ಕಾಣ್ತಿದ್ದಾಳು,  ಅಳೋ ಕೂಸಿನ ನಡಕ ಏನ ಸುಖಪಟ್ಟಾಳು ಅಂತ ಮನಸಿಗೆ ಅನಿಸಿದ್ದು ಸುಳ್ಳಲ್ಲ. 
ಯಾಕಂದ್ರ  ಅಜ್ಜನಂಗ ಯೋಚನಿ, ಅಪ್ಪನಂಗ ಯೋಚನಿ ಮಾಡ್ತಿದ್ದ ಕಾಲ. ಅವ್ವ ಹೇಳೋದು, ಮಾತಾಡೋದು ಯೋಚನಿ ಮಾಡೋದು ಎಲ್ಲಾ ತಪ್ಪು, ಅರ್ಥ ಇಲ್ಲದ್ದು. ಒಂದಕ್ಕು ಲಾಭಂತು ಇಲ್ಲ. ನಷ್ಟ ಅಂದ್ರ ಅಕಿ ಬದುಕನ್ನ ಕಳಕೋತ ಹೋದದ್ದಷ್ಟೆ ಬಂತು. ಅಪ್ಪ, ಅಜ್ಜ ಇಬ್ಬರ ಖರೆ. ಅವರಷ್ಟ ಕರೆಕ್ಟ್ ಯೋಚನಿ ಮಾಡ್ತಾರ. 
ಅವರಂಗ ನಾ ಶಾಣ್ಯಕಿ ಆಗಬೇಕು ಅಂತ ಬೆಳದಕಿ ನಾ. ಆದರ ಆದದ್ದು ಮತ್ತ ಅಮ್ಮನಂಗ ಯೋಚನಿ ಮಾಡೋದ. 
ಕೂಸು ಕುನ್ನಿ ಬಿಡಲಿಕ್ಕೆ ಗಂಡಿಗಷ್ಟ ಸಾಧ್ಯ. ಅವ ಏನ ಹೋತ್ತಾನ ಹೆತ್ಯಾನ, ಅತ್ತಾಗ ಹಾಲ ಹಾಕ್ಯಾನ, ಎದೆಯಾನ ಜೀವ ಹರಸಿ, ಮೈ ಹಂಚಿ ಬೆಳದ ಕೂಸು ಹೊರಗ ಒಗಿಯೋ ಕಸದ್ಹಾಂಗ ಸಂಸಾರ ಒಗದ ಹೋಗ್ಲಿಕ್ಕೆ ಅವಂಗಷ್ಟ ಸಾಧ್ಯ, ನನಗಲ್ಲ, ಎಂದಿರಬಹುದಾದ ತುಕಾರಾಮನ ಹೆಂಡ್ತಿ ಹ್ಹಂಗ ಇರೋ ಮಂದಿ. 
ಅವ್ವನು ಆಕಿ ಹಂಗ ಸಗಣಿ ಹಾಲು ಕಾಣದಿದ್ದರ ಏನಾತು ಎಲ್ಲರು ತುಕಾರಾಮನ ಹೆಂಡತಿ  ಕುಲದವರು. ಸಗಣಿ ಬಳದು, ಹಾಲಕರದು, ಹುಲ್ಲಹಾಕಿ, ನಾಕ ಮಂದಿ ಕೆಳಗ ದಗದ ಮಾಡಿ ಬಾಳ್ವೆ ದೂಕ್ತಿವೆ ಹೊರತು ವಿಠೋಬ ಅಂತ ಬದುಕ ಬಿಟ್ಟು ಬರೋರಲ್ಲ. ನಮಗ ಹಾಲು ಕೋಡೋ ಎಮ್ಮಿನ ವಿಠೋಬ. ಹಾಲು ಕುಡುದು ನಗೋ ಕೂಸ ವಿಠೋಬ. ಹೊತ್ತಿಗೆ ತಿಂದುಂಡು ಹರಸೋ ಅತ್ತಿ ಮಾವ, ಅಪ್ಪ ಅಮ್ಮನ ವಿಠೋಬ ರುಕ್ಮಾಯಿ. 
ಆಧುನಿಕ ಮಠದ ಮಂದಿ ಕರೆಯೋ ಹಂಗ ನಿತ್ಯನಾರಕಿಗಳು, ಅಂದರ್ರ ಇರೋ ಕಷ್ಟದಾಗ ಸುಖ ಅಂದುಕೊಂಡು ಬಾಳುವ ಸಂಸಾರಿಗಳೋ, ನಾವಂತು ಬದುಕನ್ನ ಪ್ರೀತಿಸೋ ಮಂದಿ. 
ಬೆಳೆಯಾಗ ಕಳೆ ಬಂದ್ಹಾಂಗ ತ್ರಾಸು ಅಂಬೋವು. ಕಳೆನ ಕಿತ್ತು ಎತ್ತಿಗೆ ಹಾಕಿ ಉಳುಮೆ ಮಾಡ್ತೀವಿ, ಇಲ್ಲ ಆಕಳಿಗೆ ಹಾಕಿ ಹಾಲ ಕಾಣ್ತೀವಿ. ನಾವು ಅಂಜೋಮಂದಿ ಅಲ್ರಿ. ಬದುಕ ನಮ್ಮ ದೇವರು. ಮಕ್ಕಳ ನಮ್ಮ ಸುಖಗಳು. ಮಂದೀನ ನಮ್ಮ ಬಂಧುಗಳು.
ನೀವೇನಂತೀರಿ?
    - ಸವಿತಾ ರವಿಶಂಕರ್