Pages

ವ್ಯಕ್ತಿ ಪರಿಚಯ - ಸಸ್ಯವಿಜ್ಞಾನಿ ಬಿ ಜಿ ಎಲ್ ಸ್ವಾಮಿ


ಸಸ್ಯವಿಜ್ಞಾನಿ ಬೆಂಗಳೂರು ಗುಂಡಪ್ಪ ಲಕ್ಮೀನಾರಾಯಣ ಸ್ವಾಮಿಯವರ ಪರಿಚಯವನ್ನು ಮಾಡಿಕೊಡುವ ಒಂದು ಸಣ್ಣ ಪ್ರಯತ್ನವಷ್ಟೆ ಇದು. ಕನ್ನಡದ ಪ್ರಸಿದ್ಧ ಲೇಖಕ "ಮಂಕುತಿಮ್ಮ ಕಗ್ಗ"ವನ್ನು ರಚಿಸಿದ ಡಿ.ವಿ. ಗುಂಡಪ್ಪನವರ ಮಗನಾಗಿ ಸ್ವಾಮಿಯವರು 1918 ಫೆಬ್ರವರಿ 5 ರಂದು  ಜನಿಸಿದರು.ತಾಯಿ ಭಾಗೀರತ್ನಮ್ಮನವರು ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡಿದ್ದರಿಂದ ಇವರು ಅಜ್ಜಿ ಮತ್ತು ಸೋದರತ್ತೆಯ ಮಡಿಲಲ್ಲಿ ಬೆಳೆದರು.
ಇವರಿಗೆ ಬಾಲ್ಯದಲ್ಲಿಯೇ ಪುಸ್ತಕದ ಜೊತೆ ನಂಟು ಪ್ರಾರಂಭವಾಯಿತು. ರಜೆಯ ಸಮಯದಲ್ಲಿ ತಂದೆ ಹಲವಾರು ಪುಸ್ತಕಗಳನ್ನು  ಕೊಟ್ಟು  ಓದಲು ಹೇಳುತ್ತಿದ್ದರು. ನಂತರ ಅದರ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು.ಮತ್ತು ತಂದೆಯನ್ನು ನೋಡಲು ಬರುತ್ತಿದ್ದ ಪ್ರಖ್ಯಾತ ಸಾಹಿತಿಗಳ ಪ್ರಭಾವವು ಇವರ ಮೇಲಿತ್ತು.
ಇವರು " ನ್ಯಾಷನಲ್ ಹೈಸ್ಕೂಲಿನಲ್ಲಿ" ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ, ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ  ಎರಡು ವರ್ಷ ಶಿಕ್ಷಣವನ್ನು ಮುಗಿಸಿದಾಗ ಇವರಿಗೆ ಪ್ರಾಣಿ ವಿಜ್ಞಾನದ ಬಗ್ಗೆ ಆಸಕ್ತಿಯಿತ್ತು.ಆದರೆ ಹಿರಿಯ ವಿದ್ವಾಂಸ ಎ.ಆರ್.ಕೃಷ್ಣಶಾಸ್ತ್ರಿ ಗಳ "ಪ್ರಾಣಿಗೀಣಿ ಕುಯ್ದು ಕೊಂಡು ಏನಯ್ಯ ನೀನು! ಸುಮ್ನೆ ಬಾಟನಿ ತಗೋ, ಹೂವು, ಗಿಡ ಎಲ್ಲಾ ಇರುತ್ತೆ, ಚೆನ್ನಾಗಿರುತ್ತದೆ"  ಎಂಬ ಮಾತಿನಿಂದ ಪ್ರಭಾವಿತರಾಗಿ, ಸಸ್ಯವಿಜ್ಞಾನವನ್ನು ತೆಗೆದುಕೊಂಡು ಸೆಂಟ್ರಲ್ ಕಾಲೇಜಿಗೆ ಸೇರಿದರು. ಇದೇ ಮುಂದೆ ಅವರ ಜೀವನದ ಅವಿಭಾಜ್ಯ ಅಂಗವಾಗಿ ಹೋಯಿತು.
1939 ರಲ್ಲಿ ಇವರು ಪ್ರಥಮ ಶ್ರೇಣಿಯಲ್ಲಿ ಬಿ.ಎಸ್ಸಿ ಪದವಿ ಮುಗಿಸಿದಾಗ ಆಗಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ರವರು ಕೆಲಸ ಕೊಡಿಸುತ್ತೇನೆ ಎಂದಾಗ ಸ್ವಾಮಿಯವರು ನಿರಾಕರಿಸಿ, "ಟಾಟಾ ವಿಜ್ಞಾನ ಮಂದಿರ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ನಲ್ಲಿ ಒಂದು ವರ್ಷ ಸಂಶೋಧಕರಾಗಿ ಕೆಲಸ ಮಾಡಿದರು. ಆ ಸಂದರ್ಭದಲ್ಲಿ ಅವರ ಹಲವು ಸಂಶೋಧನಾ ಲೇಖನಗಳು ಹೊರಬಂದವು.
  ನಂತರ ತಂದೆ ಕೊಡಿಸಿದ ಸೆಕೆಂಡ್ ಹ್ಯಾಂಡ್ ಮೈಕ್ರೋಸ್ಕೋಪ್, ಮೊದಲಾದ ಸಂಶೋಧನೆಗೆ ಅವಶ್ಯಕವಾಗಿರುವ ಪರಿಕರಗಳನ್ನು ಕೊಂಡು ಸಂಶೋಧನೆಯನ್ನು ಪ್ರಾರಂಭಿಸಿದರು. ಇವರ ಬರಹಗಳು "18 ನಾಗಸಂದ್ರ ರಸ್ತೆ, ಬೆಂಗಳೂರು" ಎಂಬ ವಿಳಾಸದಿಂದ ಪ್ರಕಟಗೊಂಡವು. ಇವರ ಲೇಖನಗಳನ್ನು ಓದಿ ಸಂತೋಷಗೊಂಡ ಪ್ರಸಿದ್ಧ ವಿಜ್ಞಾನಿ ಡಾ.ಪಂಚಾನನ ಮಾಹೇಶ್ವರಿ ಇವರಿಗೆ ವಿದೇಶಿ ವಿಜ್ಞಾನಿಗಳ ಪರಿಚಯ ಮಾಡಿಕೊಟ್ಟರು.
1947 ರಲ್ಲಿ ಇವರ ಸಂಶೋಧನೆಗಳಿಗಾಗಿ ಮೈಸೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಯನ್ನು ನೀಡಿತು. 1947ರಲ್ಲಿ ಭಾರತ ಸರ್ಕಾರ ಇವರನ್ನು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಕಳುಹಿಸಿಕೊಟ್ಟಿತು. ಅಲ್ಲಿ ವಿಶ್ವವಿಖ್ಯಾತ ವಿಜ್ಞಾನಿ ಪ್ರೊ.ಇರ್ವಿಂಗ್ ಬೈಲಿರವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ನಡೆಸಿದರು. ಪ್ರೊ.ಬೈಲಿರವರು ತಮ್ಮ
40 ವರ್ಷಗಳ ಅವಧಿಯಲ್ಲಿ ತಾವು ಕಂಡ ಅತ್ಯುತ್ತಮ ವಿದ್ಯಾರ್ಥಿಗಳಲ್ಲಿ ಸ್ವಾಮಿ ಒಬ್ಬರು ಎಂದು ಹೇಳಿದ್ದರಂತೆ.
ಈ ಸಂದರ್ಭದಲ್ಲಿ  ಸ್ವಾಮಿಯವರಿಗೆ ಹೆಸರಾಂತ ಸಸ್ಯವಿಜ್ಞಾನಿಗಳಾದ ಡಾ.ಪಂಚಾನನ ಮಾಹೇಶ್ವರಿ ಮತ್ತು ಬೀರಬಲ್ ಸಾಹನಿಯವರ ಒಡನಾಟವು ದೊರೆಯಿತು. ನಂತರ ಇವರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಸಂಶೋಧನ ವೇತನವನ್ನು ಪಡೆದು ಮದರಾಸು ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ವಿಜ್ಞಾನಿಯಾಗಿ ಕೆಲಸ ಮಾಡಿದರು.
ನಂತರ 1953 ರಲ್ಲಿ ತಮ್ಮ ಸಂಶೋಧನೆಗಳನ್ನು ಮುಂದುವರಿಸುವ ಸಲುವಾಗಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇರಿದರು. 1953ರಲ್ಲಿ ಇವರ ವಿವಾಹವು ವಸಂತರವರೊಡನೆ ನಡೆಯಿತು. ಮಡದಿ ಇವರ ಸಂಶೋಧನೆಗಳಿಗೆ ನೆರವಾಗಿ ಪತಿಗೆ ತಮ್ಮ ಬೆಂಬಲವನ್ನು ನೀಡಿದರು.
ಇವರು ಸಸ್ಯವಿಜ್ಞಾನದ ಅಧ್ಯಯನದ ಜೊತೆಗೆ ಅನೇಕ ಸಸ್ಯಗಳನ್ನು ಕಂಡುಹಿಡಿದಿದ್ದಾರೆ ಹಾಗು ಅವುಗಳಿಗೆ ತಮ್ಮ ಗುರುವಾದ ಪ್ರೊ.ಬೈಲಿಯವರ ಹೆಸರು ಮತ್ತು ತಾವು ಗೌರವಿಸುತ್ತಿದ್ದ ಪಂಚಾನನ ಮಾಹೇಶ್ವರಿಯವರ ಹೆಸರುಗಳನ್ನು ಇಟ್ಟಿದ್ದಾರೆ. ಇವರು ವಿದ್ಯಾರ್ಥಿಗಳನ್ನು ಪ್ರತಿ ವರ್ಷವೂ ಅಧ್ಯಯನಕ್ಕಾಗಿ ಅರಣ್ಯಪ್ರದೇಶಗಳಿಗೆ ಪ್ರವಾಸವನ್ನು ಕರೆದುಕೊಂಡು ಹೋಗುತ್ತಿದ್ದರು. ಹಾಗೆ ಹೋದಾಗ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡುವುದರ ಮೂಲಕ ಅವರಲ್ಲಿನ ಉತ್ಸಾಹವನ್ನು ಹೆಚ್ಚಿಸುತ್ತಿದ್ದರು. ಇವರು ಸಸ್ಯವಿಜ್ಞಾನವಲ್ಲದೆ ಬೇರೆ ವಿಷಯಗಳನ್ನು ತಿಳಿಸುತ್ತಿದ್ದರು. "ಬೆಳೆಯುವ, ಕಲಿಯುವ ಕುತೂಹಲವಿರುವ ಎಳೆಯರಿಗೆ ಹೇಳಿಕೊಡಬೇಕಾದದ್ದು ನನ್ನ ಕರ್ತವ್ಯ" ಎನ್ನುತ್ತಿದ್ದರು.
ಇವರು ಸಸ್ಯವಿಜ್ಞಾನ ಕ್ಷೇತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ವಿಶಿಷ್ಟ ರೀತಿಯ ಬರವಣಿಗೆಯ ಮೂಲಕ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ. ತಿಳಿಹಾಸ್ಯ ಹಾಗು ಸರಳ ರೀತಿಯಲ್ಲಿ  ಕೃತಿಗಳನ್ನು ಬರೆದಿದ್ದಾರೆ.
1962 ರಲ್ಲಿ " ಕಾಲೇಜು ರಂಗ" ಕೃತಿಯು ಪ್ರಕಟಣೆಯಾಯಿತು. ಇದರಲ್ಲಿ ಶಿಕ್ಷಣ ಕ್ಷೇತ್ರಗಳಲ್ಲಿ  ನಡೆಯುತ್ತಿದ್ದ ಅವ್ಯವಹಾರಗಳನ್ನು, ಮತ್ತು ಕುಸಿಯುತ್ತಿರುವ ಶಿಕ್ಷಣಮಟ್ಟವನ್ನು ಹಾಸ್ಯದ ಶೈಲಿಯಲ್ಲಿ ಬರೆದಿದಿದ್ದಾರೆ. ಇವರು " ಪ್ರಾಧ್ಯಾಪಕ ಪೀಠದಲ್ಲಿ" ಎಂಬ ಕೃತಿಯಲ್ಲಿ ತಾವು ಕೆಲಸ ಮಾಡುವ ಸಮಯದಲ್ಲಿ ಎದುರಿಸಿದ ತೊಂದರೆಗಳನ್ನು ಹಾಸ್ಯಮಯವಾಗಿ ತಿಳಿಸಿದ್ದಾರೆ.
1976 ರಲ್ಲಿ ಪ್ರಕಟಗೊಂಡ " ಹಸುರು ಹೊನ್ನು" ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇವರ ಈ ಪುಸ್ತಕವನ್ನು ಓದಿದ ಇವರ ತಂದೆ ಡಿ.ವಿ.ಜಿ ಯವರು " ಕನ್ನಡದಲ್ಲಿ ಇಂಥ ಪುಸ್ತಕಗಳು ಬೇಕು " ಎಂದಿದ್ದರಂತೆ. ಅದೆ ವರ್ಷದಲ್ಲಿ ಇವರಿಗೆ "ಬೀರಬಲ್ ಸಾಹನಿ" ಪ್ರಶಸ್ತಿ ದೊರೆಯಿತು.
ಇವರ "ಸಸ್ಯಜೀವಿ ಪ್ರಾಣಿಜೀವಿ" ಎಂಬ ಕೃತಿಯಿಂದಾರಿಸಿದ ಮಕ್ಕಳಿಗಾಗಿ ಬರೆದ 
" ಗಿಣಿಯ ಹಸಿರು ಎಲೆಯ ಹಸಿರು"  ಲೇಖನದಲ್ಲಿ ವಿಜ್ಞಾನದ ಬರವಣಿಗೆ ಸಾಮಾನ್ಯರಿಗೂ ಅರ್ಥವಾಗುವಂತೆ ಹಾಗೂ ಕುತೂಹಲ ಬೆಳೆಸುವಂತೆ ಇರಬೇಕು ಎಂಬ ಇವರ ಶೈಲಿಗೆ ಉತ್ತಮ ಉದಾಹರಣೆಯಾಗಿದೆ. ನಮ್ಮಲ್ಲಿ ದೊರೆಯುವ ವಿದೇಶಿ ಹಣ್ಣು ತರಕಾರಿಗಳ ಬಗ್ಗೆ “ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ” ಎಂಬ ಪುಸ್ತಕವನ್ನು ಬರೆದರು. ಇವರು ತಮ್ಮ ಕ್ಷೇತ್ರ ಸಸ್ಯಜಗತ್ತಿನೊಡನೆ ಮಾನವ ನಂಟನ್ನು ಕುರಿತು ಹೊಸ ವಿಷಯಗಳನ್ನು ತಿಳಿಯಲು ಶಾಸನಗಳ ಅಧ್ಯಯನವನ್ನು ಕೈಗೊಂಡರು. ಇದರ ಫಲವಾಗಿ ಬಂದುದೇ “ಶಾಸನಗಳಲ್ಲಿ ಗಿಡಮರಗಳು” ಎಂಬ ಕೃತಿ. ಇವುಗಳಲ್ಲದೆ “ಪಂಚಕಲಶ ಗೋಪುರ” ಮೈಸೂರು ಡೈರಿ, ದೌರ್ಗಂಧಿಕಾ ಅಪಹರಣ, ಬೃಹದಾರಣ್ಯಕ, ಸಾಕ್ಷಾತ್ಕಾರದ ದಾರಿಯಲ್ಲಿ, ಸಸ್ಯ ಪುರಾಣ ಮೊದಲಾದವುಗಳು ಇವರ ಪ್ರಮುಖ ಕೃತಿಗಳಾಗಿವೆ. “ತಮಿಳು ತಲೆಗಳ ನಡುವೆ” ಅವರ ಮದ್ರಾಸಿನ ಕಾಲೇಜಿನ ಅನುಭವವನ್ನು ಕುರಿತದ್ದಾಗಿದೆ.
ಇವರು ಕನ್ನಡವಲ್ಲದೆ ತಮಿಳು ಭಾಷೆಯಲ್ಲೂ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. “ಕಲೈ ಕದಿರ್” ಎಂಬ ಮಾಸಪತ್ರಿಕೆಯಲ್ಲಿ ವಿಜ್ಞಾನ ಲೇಖನಗಳನ್ನು ಬರೆಯುತ್ತಿದ್ದರು. ಜ್ಞಾನರಥ, ಬೆಳದಿಂಗಳಲ್ಲಿ ಅರಳಿದ ಮೊಲ್ಲೆ, ನಡೆದಿಹೆ ಬಾಳೌ ಕಾವೇರಿ, ಇವು ಸ್ವಾಮಿಯವರು ತಮಿಳಿನಿಂದ ಕನ್ನಡಕ್ಕೆ ಅನುವಾದಿಸಿದ ಕೃತಿಗಳು. ಅಲ್ಲದೆ ಸುಬ್ರಮಣ್ಯ ಭಾರತಿಯವರ ತಮಿಳು ಕಥೆಗಳನ್ನು ನವತಂತ್ರ ಕಥೆಗಳು ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ.
ಇದಲ್ಲದೆ ಇವರು ಚಿದಂಬರಂ ಅಂಡ್ ನಟರಾಜ್ ಎಂಬ ಇಂಗ್ಲಿಷ್ ಕೃತಿಯನ್ನು ರಚಿಸಿದ್ದಾರೆ. ಸ್ವಾಮಿಯವರಿಗೆ ಇಂಗ್ಲಿಷ್, ತಮಿಳು ಭಾಷೆಗಳೊಂದಿಗೆ ಫ್ರೆಂಚ್, ಜರ್ಮನ್, ಲ್ಯಾಟಿನ್, ಸ್ಪಾನಿಷ್ ಭಾಷೆಗಳೂ ತಿಳಿದಿದ್ದವು. ಇವರು ಬರವಣಿಗೆಯಲ್ಲದೆ ತಮ್ಮ ಹಾಸ್ಯ ಬರಹಕ್ಕೆ ತಕ್ಕಂಥ ವ್ಯಂಗ್ಯ ಚಿತ್ರಗಳನ್ನು ಸ್ವತಃ ಅವರೇ ರಚಿಸಿ, ಚಿತ್ರಕಲಾಕಾರರಾಗಿದ್ದರು. ಸುಧಾರಿತ ಸೌಭದ್ರೆ ಎಂಬ ನಾಟಕದಲ್ಲಿ ಅಭಿನಯಿಸಿದ್ದರು. ಅಭಿನಯವಲ್ಲದೆ ಸಂಗೀತದಲ್ಲೂ ಅಪಾರ ಆಸಕ್ತಿಯನ್ನು ಹೊಂದಿದ್ದರು. ತಾವೇ ರಚಿಸಿದ್ದ ಮೀನಾಕ್ಷಿ ಸೌಗಂಧ ಎನ್ನುವ ರೂಪಕದಲ್ಲಿ  ಹಾಡನ್ನು ಹಾಡಿದ್ದರು.
ಇವರ ವೃತ್ತಿ ಶಿಕ್ಷಣವನ್ನು ಬೋಧಿಸುವುದಾದರೂ ಸಂಗೀತ, ಸಾಹಿತ್ಯ, ನಾಟಕ ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ ಮಹಾನ್ ಚೇತನ 1981ರ ನವೆಂಬರ್ 2 ರಂದು ತೀವ್ರವಾದ ಹೃದಯಾಘಾತದಿಂದ ನಿಧನರಾದರೂ ಅವರ ಬರಹಗಳ ರೂಪದಲ್ಲಿ ಇಂದಿಗೂ ಎಲ್ಲರ ಮನದಲ್ಲಿ ಅಜರಾಮರವಾಗಿ ಉಳಿದಿದ್ದಾರೆ.
   - ವಿಜಯಲಕ್ಷ್ಮಿ  ಎಂ ಎಸ್ 

ಪ್ರಸ್ತುತ - ಗುಲಬರ್ಗಾದ 'ನೆವರ್ ಸ್ಲೀಪಿಂಗ್' ತಾಣ



ಹೆಚ್ಚೇನೂ ಬೇಡ. ಸಂಜೆ ಅಥವಾ ರಾತ್ರಿ ವೇಳೆ ಬರೀ 30 ನಿಮಿಷ. ಅಲ್ಲಿರುವ ಕಟ್ಟೆ ಮೇಲೆ ಕೂರಿ. ಇಲ್ಲದಿದ್ದರೆ, ಅದರ ಬದಿ ನಿಲ್ಲಿ. ಅಪರಿಚಿತರಾಗಿ ಇರಿ. ಯಾರನ್ನೂ ಮಾತನಾಡಿಸಬೇಡಿ. ಪರಿಚಯಿಸಿಕೊಳ್ಳುವ ಗೋಜಿಗೂ ಹೋಗಬೇಡಿ. ತಲೆಯಲ್ಲಿ ಎಂತಹದ್ದು ಯೋಚನೆ ಇಟ್ಟುಕೊಳ್ಳಬೇಡಿ. ಜೇಬು ಅಥವಾ ಪರ್ಸ್ ನಲ್ಲಿರುವ ಮೊಬೈಲ್ ಫೋನ್ ಹೊರತೆಗೆಯಬೇಡಿ. ಮೌನವಾಗಿ ಗಮನಿಸಿ. ನಿಮಗೆ ಗೊತ್ತಿಲ್ಲದಂತೆ ಸೂಕ್ಷ್ಮತೆಯಿಂದ ಕೂಡಿರುವ ಬದುಕಿನ ಇನ್ನೊಂದು ಮುಖಕ್ಕೆ ಸಾಕ್ಷಿಯಾಗುತ್ತೀರಿ. ಹಾಗಂತ ಎಲ್ಲಿ ಬೇಕೆಂದಲ್ಲಿ ನಿಲ್ಲಬೇಡಿ. ನಿಮ್ಮ ದೊಡ್ಡೂರಿನ ರೈಲು ನಿಲ್ದಾಣದಲ್ಲಿ ಸೂಕ್ತ ಸ್ಥಳ. ಇಲ್ಲಿ ಗುಲಬರ್ಗಾ ರೈಲು ನಿಲ್ದಾಣದ ಕತೆ ಹೇಳ್ತೀನಿ. ಬಹುತೇಕ ಮಂದಿಗೆ ಅದು ಬರೀ ರೈಲು ನಿಲ್ದಾಣ. ಆದರೆ ನನ್ನ ಪಾಲಿಗೆ ಅದು 'ನೆವರ್ ಸ್ಲೀಪಿಂಗ್' (ಎಂದೂ ಮಲಗದ) ತಾಣ. 

ಸೂರ್ಯ ಮುಳುಗಿ, ಇನ್ನೇನೂ ಕತ್ತಲು ಆವರಿಸತೊಡಗುತ್ತದೆ. ಬೀದಿ ಬೀದಿ ತಿರುಗಿ ಬಿಸಿಲಲ್ಲಿ ಬೆಂದ ಭಿಕ್ಷುಕ ನಿಲ್ದಾಣದ ಮೂಲೆಯೊಂದರಲ್ಲಿ ಸೇರಿಕೊಳ್ಳುತ್ತಾನೆ. ಹರಿದ ಬಟ್ಟೆ ತೊಟ್ಟ ಪುಟ್ಟ ಮಕ್ಕಳೊಂದಿಗೆ ಬರುವ ಅನಾರೋಗ್ಯಪೀಡಿತ ತಾಯಿ ಜೋಳಿಗೆಯಿಂದ ಕಟಕಟಿ ರೊಟ್ಟಿ, ತಂಗಳನ್ನ ಹೊರತೆಗೆಯುತ್ತಾಳೆ. ಕೂದಲು ಕೆದರಿಕೊಂಡ ಮಾನಸಿಕ ಅಸ್ವಸ್ಥನೊಬ್ಬ ಚರಂಡಿ ಬದಿ ಕೂತು ಎಲ್ಲರನ್ನೂ ಬಯ್ಯತೊಡಗುತ್ತಾನೆ. ಅಲ್ಲಿ ಇಲ್ಲಿ ಅಲ್ಪಸ್ವಲ್ಪ ದುಡಿದ ಹಣದಿಂದ ಬಾಲಕ ರಸ್ತೆ ಬದಿ ಆಲೂ ಬಾತ್ ತಿಂದು ತಂಪಾದ ನೆಲದ ಮೇಲೆ ನಿದ್ದೆಗೆ ಜಾರಲು ಪ್ರಯತ್ನಿಸುತ್ತಾನೆ. ಸ್ನಾನ ಮಾಡದೇ ಮತ್ತು ಮುಖ ತೊಳೆಯದೇ ವರ್ಷಗಳಿಂದ ಒಂದೇ ಕಡೆ ಸ್ಥಳದಲ್ಲಿ ಉಳಿದಿರುವ ಅಂಗವಿಕಲ ಹಿರಿಯಜ್ಜನೊಬ್ಬ ಇವರೆಲ್ಲ ಹಾಜರಾತಿ ಖಾತ್ರಿಪಡಿಸಿಕೊಳ್ಳುತ್ತಾನೆ. ವಿಶೇಷವೆಂದರೆ, ನಿಲ್ದಾಣದ ಆವರಣದಲ್ಲಿದ್ದರೂ ಇವರು ಯಾರೂ ಸಹ ಪರಸ್ಪರ ಮಾತನಾಡಿಸುವುದಿಲ್ಲ. ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಇರುತ್ತಾರೆ. ಅವರದ್ದೇ ಆದ ಪ್ರಪಂಚದಲ್ಲಿ!

ಈವರೆಗೆ ಹೇಳಿದ್ದು ಅನಿಶ್ಚಿತತೆ ಮೇಲೆ ಬದುಕುತ್ತಿರುವವರ ಬಗ್ಗೆ. ಇಲ್ಲಿ ಇನ್ನಷ್ಟು ಜನರು ಬರುತ್ತಾರೆ. ಪುಟ್ಟದಾದ ಗಂಟುಮೂಟೆ ಅಥವಾ ಬ್ಯಾಗು ತಲೆ ಕೆಳಗೆ ಹಾಕಿಕೊಂಡು ಮಲಗಿಬಿಡುತ್ತಾರೆ. ಇನ್ನೂ ಕೆಲವರು ಹೊದಿಕೆ ಮತ್ತು ಹರಿದ ದಿಂಬನ್ನು ಹೊತ್ತು ತಂದು ಅಲ್ಲಿ ನಿದ್ರಿಸುತ್ತಾರೆ. ಹಣವಿರದ ಕಾರಣ ಟಿಕೆಟ್ ಖರೀದಿಸಲಾಗದೇ ದಿಕ್ಕು ತೋಚದೇ ಮೈಮುದುಡಿಕೊಂಡು ಮಲಗಿದವರು ಸಿಗುತ್ತಾರೆ. ಈಗೇಕೆ ಅವಸರ, ನಾಳೆ ಹೋದರಾಯಿತು ಎಂದು ಕೆಲ ಪ್ರಯಾಣಿಕರು ಕುಟುಂಬ ಸಮೇತ ಅಲ್ಲಿಯೇ ನಿದ್ದೆ ಮಾಡಿಬಿಡುತ್ತಾರೆ. ತರಗಟ್ಟುವ ಚಳಿಯಿದ್ದರೂ, ತಣ್ಣನೆಯ ನೆಲವಿದ್ದರೂ ಬೆಚ್ಚನೆಯ ನಿದ್ದೆಗೆ ಹಪಹಪಿಸುತ್ತಾರೆ. ಇವರೆಲ್ಲರ ಮಧ್ಯೆ ಇನ್ನೂ ಕೆಲವರು ಸೇರಿರುತ್ತಾರೆ. ಅವರು ಇಲ್ಲಿ ನಿದ್ದೆ ಮಾಡುತ್ತಿರುವುದಕ್ಕೆ ಇನ್ನಷ್ಟು ಕಾರಣಗಳಿರುತ್ತವೆ. ಇವರೆಲ್ಲರೂ ನಿದ್ದೆ ಮಾಡಲೆಂದೇ ಕೆಲವರು ಎಚ್ಚರ ಇರುತ್ತಾರೆ. ಅವರು ನಿದ್ದೆ ಮಾಡಿದ ಕೂಡಲೇ ಅವರ ಬಳಿಯಿರುವುದನ್ನ ತೆಗೆದುಕೊಂಡು ಓಡಿ ಬಿಡಬೇಕೆಂದು ಹೊಂಚು ಹಾಕಿರುತ್ತಾರೆ. ಅವರು ಯಾರು, ಎಲ್ಲಿ ಓಡಿ ಹೋಗುತ್ತಾರೆ ಮತ್ತು ಅವರನ್ನು ಹೇಗೆ ಹಿಡಿಯಬೇಕು ಎಂದು ಅರಿತಿರುವ ಪೊಲೀಸರು ಸಹ ಅಲ್ಲೇ ಕಾವಲಿಗೆ ಇರುತ್ತಾರೆ!

ನಿಲ್ದಾಣದ ಕಾಯಂ ಅತಿಥಿಗಳು ಸೇರಿದಂತೆ ಎಲ್ಲರೂ ನಿದ್ದೆ ಮಾಡಿದ ಕೂಡಲೇ ಎಲ್ಲವೂ ಸ್ತಬ್ಧವಾಯಿತು ಅಂತ ಅನ್ನಿಸಬಹುದು. ಆದರೆ, ಅದು ಹಾಗೆ ಆಗುವುದಿಲ್ಲ. ನಿಜವಾದ ಚಟುವಟಿಕೆ ಆರಂಭವಾಗುವುದೇ ಆಗ. ಇಲ್ಲಿ ರಾತ್ರಿ ಎಂಬುದು ನಿದ್ರಾರಹಿತ ಚಟುವಟಿಕೆ. ಆವರಣದಲ್ಲಿ ಎಲ್ಲರೂ ಒಂದೊಂದು ದಿಕ್ಕಿನಲ್ಲಿ ಮಲಗುತ್ತಾರೆ. ಟಿಕೆಟ್ ಕೌಂಟರ್, ಹೊರಾಂಗಣ, ಮೊಬೈಲ್ ಚಾರ್ಜರ್ ಬಳಿ, ಪ್ರವೇಶದ್ವಾರದ ಹತ್ತಿರ ಎಲ್ಲಿ ಬೇಕೆಂದರಲ್ಲಿ ಸಿಗುತ್ತಾರೆ. ನಡೆದಾಡಲು ಜಾಗ ಇರುವುದಿಲ್ಲ. ಅವರು ಕಾಲಿನಡಿ ಸಿಕ್ಕಿಬಿಡುತ್ತಾರೆ. ಅದಕ್ಕಾಗಿ ಓಡಾಡುವವರು ಎಚ್ಚರಿಕೆಯಿಂದ ನಡೆಯಬೇಕು.

ಇಲ್ಲಿ ರಾತ್ರಿ ಪೂರ್ತಿ ರೈಲುಗಳ ಆಗಮನ-ನಿರ್ಗಮನ ಆಗುವ ಕಾರಣ ಅಪಾರ ಸಂಖ್ಯೆಯಲ್ಲಿ ಪ್ರಯಾಣಿಕರು ಬರುತ್ತಲೇ ಇರುತ್ತಾರೆ. ಯಾರು ನಿದ್ದೆ ಮಾಡಲಿ-ಬಿಡಲಿ ಜನರ ದಂಡು ಬರುತ್ತಲೇ ಇರುತ್ತದೆ. ಇಲ್ಲಿನ ಕ್ಯಾಂಟೀನ್, ಹೋಟೆಲ್ ಅಥವಾ ತಿಂಡಿತಿನಿಸು ಮಳಿಗೆ ಯಾವಾಗಲೂ ತೆರೆದಿರುತ್ತದೆ. ಮಧ್ಯರಾತ್ರಿ 1 ಅಥವಾ 2 ಗಂಟೆಯಾದರೂ ಬೆಳಗಿನ 8ರ ಚಹಾ ಕುಡಿದಷ್ಟೇ ಖುಷಿಯಾಗುತ್ತದೆ. ಜೊತೆಗೆ ತಿಂಡಿ, ಮಸಾಲೆ ದೋಸೆ, ಆಲೂಬಾತ್ ಮುಂತಾದವು ಇದ್ದೇ ಇರುತ್ತದೆ. ಅವುಗಳೊಂದಿಗೆ ಚಹಾ ಸೇವಿಸುವ ಕ್ಷಣ ಮನಸ್ಸಿಗೆ ಮುದ ನೀಡುತ್ತದೆ. ರಾತ್ರಿ ಪೂರ್ತಿ ಚಟುವಟಿಕೆಯೇ ಹೀಗೆ ನಡೆಯುತ್ತದೆ.
ಇವೆಲ್ಲದರ ಮಧ್ಯೆ ಬಿಸ್ಕತ್, ಚಹಾ, ಕಾಫಿ, ವಡಾ ಪಾಂವ್, ಇಡ್ಲಿವಡಾ, ಭೇಲ್ಪೂರಿ ಮುಂತಾದವು ಮಾರುವವರೂ ಇರುತ್ತಾರೆ. ಅವರೊಂದಿಗೆ ಮಾತನಾಡಿಸಿದರೆ, ಬದುಕಿನ ಇನ್ನೊಂದು ಮಗ್ಗಲು ಬೆಳಕಿಗೆ ಬರುತ್ತದೆ. ಒಬ್ಬೊಬ್ಬರದ್ದು ಒಂದೊಂದು ಕತೆ, ಒಂದೊಂದು ಅನುಭವದ ಪಾಠ ಹೇಳುತ್ತವೆ.

ರೈಲು ನಿಲ್ದಾಣ ಎಂಬುದು ಬರೀ ಪ್ರಯಾಣಿಕರು ಬಂದು-ಹೋಗುವ ಸ್ಥಳವಲ್ಲ. ಅದು ಬದುಕಿನ ಹಲವು ಮುಖಗಳನ್ನು ಪರಿಚಯಿಸುವ ಜಾಗವೂ ಹೌದು. ಈ ತಾಣವು ಕೆಲವರಿಗೆ ನಿರಂತರ ಆಶ್ರಯವಾದರೆ, ಇನ್ನೂ ಕೆಲವರ ಬಾಳಿನ ತಿರುವಿಗೂ ಕಾರಣವಾಗುತ್ತದೆ. ಈ ಬರಹದಲ್ಲಿ ದಾಖಲಾಗಿರುವ ವ್ಯಕ್ತಿಗಳು ಅಲ್ಲದೇ ಒಂದಿಲ್ಲೊಂದು ರೀತಿಯಲ್ಲಿ ಸಹಾಯ ಮಾಡುವ ಜನರೂ ಇರುತ್ತಾರೆ. ಅಸಹಾಯಕ ಸ್ಥಿತಿಯಲ್ಲಿ ಇರುವವರನ್ನು ಸಹಾಯ ಮಾಡುವ ಹಿರಿಯರು ಮತ್ತು ಕಾಳಜಿಯುಳ್ಳವರು ಇರುತ್ತಾರೆ. ಬೇರೆ ಬೇರೆ ಕಾರಣಗಳಿಂದ ಬಹುತೇಕ ಮಂದಿ ನಿಲ್ದಾಣದಲ್ಲಿ ಪದೇ ಪದೇ ಕಾನೂನು ಉಲ್ಲಂಘಿಸುತ್ತಾರೆ. ನಿಯಮಗಳನ್ನು ಪಾಲಿಸುವುದಿಲ್ಲ. ತಪ್ಪುಗಳನ್ನು ಮುಂದುವರೆಸುತ್ತಾರೆ. ಆದರೂ ಸಹ ಇವೆಲ್ಲವನ್ನೂ ಕಂಡು ರೈಲ್ವೆ ಮತ್ತು ಪೊಲೀಸ್ ಇಲಾಖೆಯ ಸಹಿಸಿಕೊಳ್ಳುತ್ತಾರೆ. ಕೆಲವರಿಗೆ ಮುಲಾಜಿಲ್ಲದೇ ದಂಡ ವಿಧಿಸುತ್ತಾರೆ. ಇನ್ನೂ ಕೆಲವರಿಗೆ ಮಾನವೀಯತೆ ತಳಹದಿ ಮೇಲೆ ಕರುಣೆ ತೋರುತ್ತಾರೆ. ರಾತ್ರಿ ಕಳೆಯುತ್ತಿದ್ದಂತೆಯೇ, ಮತ್ತೊಂದು ರಾತ್ರಿ ಬರುತ್ತದೆ. ಎಲ್ಲರೂ ನಿದ್ದೆ ಮಾಡಿದ ನಂತರವೂ "ನೆವರ್ ಸ್ಲೀಪಿಂಗ್" ತಾಣದಲ್ಲಿ ಚಟುವಟಿಕೆ ಮುಂದುವರೆಯುತ್ತ!
- ವಿಸ್ಮಯ್ 

ವಿನೋದ - ವಿನಾಯಕ ಚೌತಿ

(ಚಲಂರವರ ತೆಲುಗು ಬರಹ ವಿನಾಯಕ ಚೌತಿಯ ಅನುವಾದ) 
   


ಹುಡುಗ: ಅಪ್ಪ, ನಿಜವಾಗಲೂ ವಿನಾಯಕ ದೇವರೇನಾ?
ಅಪ್ಪ: ಯಾಕಾ ಸಂದೇಹ?
ಹುಡುಗ: ಏನೋ ಆ ಸೊಂಡಿಲು, ಬೊಜ್ಜು ನೋಡುತ್ತಿದ್ದರೆ ನಗು ಬರುತ್ತೆ.
ಅಪ್ಪ: ಹಾಗೆ ನಗಬಾರದು. ಕಥೆ ಗೊತ್ತಲ್ವಾ ನಿನಗೆ, ಆನೆ ತಲೆ ಹೇಗೆ ಬಂತು ಅಂತಾ?
ಹುಡುಗ: ಗೊತ್ತು ಬಿಡು, ಆ ಹಿಟ್ಟಿನ ಬೊಂಬೆ ದೊಡ್ಡದಾಗಿದ್ದು. ದೇವರುಗಳು ಕೂಡ ಬೆಳೆಯುತ್ತಾರಾ?
ಅಪ್ಪ: ಹೌದು.
ಹುಡುಗ: ಎಷ್ಟು ದೊಡ್ಡವರಾಗುತ್ತಾರೆ? ಮುದುಕರಾಗುತ್ತಾರಾ?
(ತಂದೆಗೇ ಸಂದೇಹ ಬಂತು. ಅವನು ಯಾವತ್ತೂ ಅದರ ಬಗ್ಗೆ ಯೋಚಿಸಿರಲಿಲ್ಲ)
ಅಪ್ಪ: ಅವರಿಗೆ ವೃದ್ಧಾಪ್ಯ ಇಲ್ಲ.
ಹುಡುಗ: ಹಾಗಾದರೆ ದೊಡ್ಡವರಾಗಿ ಏನಾಗುತ್ತಾರೆ? ಬರೀ ಎತ್ತರಕ್ಕೆ ಬೆಳೆಯುವುದೇನಾ?...... ಸತ್ತುಹೋಗ್ತಾರಾ?
ಅಪ್ಪ: ಅವರಿಗೆ ಸಾವಿಲ್ಲ.
ಹುಡುಗ: ಬೆಳೆಯಲು ಅವರು ತಿನ್ನಬೇಕಲ್ವಾ. ತಿಂತಾರಾ?
ಅಪ್ಪ: ಅವರೇನೋ ಅಮೃತ ಕುಡಿಯುತ್ತಾರೆ ಅಂತಾರೆ.
ಹುಡುಗ: ಅಮೃತ ಕುಡಿದು ಬೆಳೆಯುತ್ತಾರೆ ಅಂತಾನಾ. ಅಮೃತ ಅಂದರೆ ಬೆಳೆಯುತ್ತಾ? ಅದು ಎಲ್ಲಿ ಸಿಗುತ್ತೆ? ಅದನ್ನು ತಿಂತಾರಾ? ಕುಡಿಯುತ್ತಾರಾ?
ಅಪ್ಪ: ಗೊತ್ತಿಲ್ಲ ಕಣೊ.
ಹುಡುಗ: ಈ ದೇವರ ಸಂಗತಿ ಯಾರಿಗೆ ಗೊತ್ತು? ಹೇಗೆ ಗೊತ್ತು?
ಅಪ್ಪ: ಹಿಂದಿನ ಕಲದ ಋಷಿಗಳು ಪುರಾಣಗಳಲ್ಲಿ ಬರೆದಿದ್ದಾರೆ. ದೇವರು ಅವರಿಗೆ ಹೇಳಿದ್ದಾರೆ.
ಹುಡುಗ: ಏನೂ ತಿನ್ನದಿದ್ದರೆ ಅಷ್ಟು ದೊಡ್ಡ ಬಾಯಿ - ಸೊಂಡಿಲು ಏತಕ್ಕೆ ವಿನಾಯಕನಿಗೆ?
ಅಪ್ಪ: ಸುಮ್ಮನೆ ಆಕಾರಕ್ಕೋಸ್ಕರ.
ಹುಡುಗ: ಈ ಬೊಂಬೆಗಳು ಮಾತ್ರಾನಾ, ನಿಜವಾಗಲೂ ವಿನಾಯಕ ಇದ್ದಾನಾ?
ಅಪ್ಪ: ಇರದೆ ಏನು?
ಹುಡುಗ: ನಾವು ನೈವೇದ್ಯ ಅಂತ ಈ ಉಂಡೆಗಳನ್ನು ಇಟ್ಟರೆ ತಿಂತಾನಾ?
ಅಪ್ಪ: ತಿನ್ನದೇ ಏನು?
ಹುಡುಗ: ಅಮೃತ ಬಿಟ್ಟು ಬೇರೆ ಏನೂ ತಿನ್ನುವುದಿಲ್ಲ ಎಂದೆ?
ಅಪ್ಪ: ನಮ್ಮ ನೈವೇದ್ಯ ತಿಂತಾನೆ.
ಹುಡುಗ: ಇಷ್ಟವಿದ್ದರು, ಇಷ್ಟವಿಲ್ಲದಿದ್ದರೂ. ಹೊಟ್ಟೆ ತುಂಬಿದರೂ, ನಾವು ಇಟ್ಟಿದ್ದನ್ನು ತಿನ್ನಲೇಬೇಕಲ್ಲವೆ? ಎಷ್ಟೊಂದು ಉಂಡೆಗಳು, ಎಷ್ಟೊಂದು ಜನ ಇಡ್ತಾರಲ್ವಾ?
ಅಪ್ಪ: ತಿನ್ನುವುದಿಲ್ಲ.
ಹುಡುಗ: ಅದೇನಪ್ಪ. ಈಗ ಹೀಗೆ ಹೇಳ್ತಾ ಇದ್ದೀಯ. ಒಂದೊಂದು ಸಾರಿ ಒಂದೊಂದು ಹೇಳ್ತಾ ಇದ್ದೀಯ?
ಅಪ್ಪ: ಮತ್ತೆ ನೀನು ಕೇಳುವ ಪ್ರಶ್ನೆಗಳು ಹಾಗಿವೆ.
ಹುಡುಗ: ನನಗೆ ಗೊತ್ತಿಲ್ಲ ಅಂತ ತಾನೆ ನಿನ್ನನ್ನು ಕೇಳುವುದು? ನನ್ನ ಪ್ರಶ್ನೆಗಳು ಹೇಗಿವೆ. ಸರಿಯಾಗಿಯೇ ಕೇಳಿದ್ದೇನೆ? ವಿನಾಯಕಾನೇ ತಿಂತಾನಾ? ಮತ್ತೆ ಉಂಡೆಗಳೆಲ್ಲ ಹಾಗೆ ಇರ್ತಾವೆ?
ಅಪ್ಪ: ರುಚಿ ನೋಡುತ್ತಾನೆ.
ಹುಡುಗ: ಉಂಡೆಗಳಿಗೆ ರುಚಿ ಏನಿದೆ? ತಿನ್ನುವವರು ಯರು? ಈ ಬೊಂಬೆಯಾ? ಕೈಲಾಸದಲ್ಲಿರುವ ವಿನಾಯಕಾನಾ? ಈ ಬೊಂಬೆ ತಿಂದರೆ ನಮಗೇನು? ಅದು ನಿಜವಾದ ವಿನಾಯಕ ತಿನ್ನಬೇಕಲ್ಲವೇ?
ಅಪ್ಪ: ನೀನು ಇಲ್ಲಿ ನೈವೇದ್ಯ ಇಟ್ಟರೆ ಅಲ್ಲಿ ವಿನಾಯಕನಿಗೆ ಸೇರುತ್ತದೆ.
ಹುಡುಗ: ಹೇಗೆ ಸೇರುತ್ತದೆ ಅಪ್ಪ? ಎಲ್ಲಾ ಇಂತಹವೇ ಹೇಳ್ತೀಯ?
ಅಪ್ಪ: ಏನೋ ತಲುಪುತ್ತದೆ ಅಂತಾರೆ.
ಹುಡುಗ: ಆ ವಿನಾಯಕನಿಗೆ ಗೊತ್ತಾಗುತ್ತಾ ಯಾರ್ಯಾರು ಎಷ್ಟೆಷ್ಟು ನೈವೇದ್ಯ ಇಡುತ್ತಾರೆ ಅಂತಾ?
ಅಪ್ಪ: ಮೇಲಿಂದ ಎಲ್ಲಾ ನೋಡ್ತಾನೆ.
ಹುಡುಗ: ಸರಿಯಾಗಿ ಹೇಳು ಅಪ್ಪ. ವಿನಾಯಕ ಎಲ್ಲಿದ್ದಾನೆ? ಕೈಲಾಸದಲ್ಲಾ? ಅವನಿಗೆ ಹೊಟ್ಟೆ, ಸೊಂಡಿಲು ಇದೆಯಲ್ಲಾ, ಹೇಗೆ ಇರುತ್ತಾನೆ?
ಅಪ್ಪ: ವಿನಾಯಕ ಅಂತಾ ಗೊತ್ತಾಗಲಿ ಅಂತ ಒಂದು ರೂಪ ಕೊಟ್ಟಿದ್ದಾರೆ. ಅವನಿಗೆ ಶರೀರ ಇಲ್ಲ.
ಹುಡುಗ: ಇಲ್ಲದಿದ್ದರೆ ಉಂಡೆಯನ್ನು ಹೇಗೆ ತಿಂತಾನೆ?
ಅಪ್ಪ: ಏನೋ ಕಣೊ ನನ್ನನ್ನು ಸಾಯಿಸಬೇಡ. ಅದನ್ನು ಇಟ್ಟವರನ್ನು ಕೇಳು.
ಹುಡುಗ: ಯಾರು ಇಟ್ಟವರು?
ಅಪ್ಪ: ಯಾರೋ ದೊಡ್ಡವರು.
ಹುಡುಗ: ಅವರು ಎಲ್ಲಿದ್ದಾರೆ?
ಅಪ್ಪ: ಸತ್ತುಹೋಗಿದ್ದಾರೆ.
ಹುಡುಗ: ಅವರಿಗೆ ಗೊತ್ತು ಅಂತಾ ನಿನಗೆ ಹೇಗೆ ಗೊತ್ತು?
ಅಪ್ಪ: ಏನೋ ಕಣೋ ಎಲ್ಲರೂ ಹಾಗೆ ಹೇಳ್ತಾರೆ.
ಹುಡುಗ: ಕೆಲವರು ಮಾಡುವುದಿಲ್ಲವಲ್ಲ.
ಅಪ್ಪ: ಅವರ ಇಷ್ಟ.
ಹುಡುಗ: ನಮ್ಮ ಇಷ್ಟ ಅಲ್ಲವಾ? ಬೆಳಿಗೆ ಎದ್ದು ಚಳಿಯಲ್ಲ್ಲಿ ತಲೆಗೆ ಸ್ನಾನ ಮಾಡಿಸು ಅಂದಿದ್ದಾರಾ ಆ ದೊಡ್ಡವರು. ಹೇಳಿದ್ದಾರೋ ಇಲ್ಲವೊ ನಿನಗೆ ಹೇಗೆ ಗೊತ್ತು?
ಅಪ್ಪ: ಏನೋ ಎಲ್ಲರೂ. . .
ಹುಡುಗ: ಎಲ್ಲರೂ ಸಿಗರೇಟು ಸುಡುತ್ತಾರಾಲ್ವಾ, ನೀನ್ಯಾಕೆ ಸೇದುವುದಿಲ್ಲ?
ಅಪ್ಪ: ಅವರು ಒಳ್ಳೆಯವರಲ್ಲ.
ಹುಡುಗ: ಸಿಗರೇಟು ಸೇದುವವರು ಒಳ್ಳೆಯವರಲ್ವಾ?
ಅಪ್ಪ: ಅಲ್ಲ.
ಹುಡುಗ: ಚಿಕ್ಕಪ್ಪ್ಪ?
ಅಪ್ಪ: ಒಳ್ಳೆಯವನೇ, ಆದರೆ ಆ ಸಿಗರೇಟು. . .
ಹುಡುಗ: ಸೇದುವವರು ಒಳ್ಳೆಯವರಲ್ಲ ಅಂದೆ?
ಅಪ್ಪ: ಆ.
ಹುಡುಗ: ಸರಿ ತಮ್ಮನಿಗೆ ಹನ್ನೆರಡು ವರ್ಷಗಳಾದಾಗ ಅರಿಶಿನ ಹಚ್ಚಿದ್ದೀರಲ್ಲ, ವಿಘ್ನೇಶ್ವರ ಎಂದಿರಲ್ಲ, ಆ ಮುದ್ದೆ ಕೂಡ ವಿನಾಯಕನಾ?
ಅಪ್ಪ: ಅರಿಶಿನ ಶುಭ ಅದಕ್ಕೆ.
ಹುಡುಗ: ಶುಭ ಅಂದರೆ?
ಅಪ್ಪ: ಒಳ್ಳೆಯದು ಮಾಡುತ್ತೆ.
ಹುಡುಗ: ಯಾರಿಗೆ?
ಅಪ್ಪ: ನಮಗೆ.
ಹುಡುಗ: ಏನು ಒಳ್ಳೆಯದು?
ಅಪ್ಪ: ಎಲ್ಲವೂ.
ಹುಡುಗ: ಏನು ಮಾಡಿದ್ರೆ?
ಅಪ್ಪ: ಅರಿಶಿನ ಉಪಯೋಗಿಸಿದರೆ.
ಹುಡುಗ: ಹೇಗೆ?
ಅಪ್ಪ: ಏನೋ ಕಣೊ ಹೋಗು.
ಹುಡುಗ: ಹಾಗಿದ್ರೆ ನೀನೇಕೆ ಅರಿಶಿನ ಹಚ್ಚಿಕೊಳ್ಳುವುದಿಲ್ಲ?
ಅಪ್ಪ: ಹೆಂಗಸರು. . . .
ಹುಡುಗ: ಏಕೆ ಗಂಡಸರಿಗೆ ಶುಭವಾಗುವುದು ಬೇಡವೇ?
ಅಪ್ಪ: ಅವರಿಗೆ ಬೇರೆ
ಹುಡುಗ: ಬೇರೆ ಏನು?
ಅಪ್ಪ: ಅದು ಹೇಳೋಕಾಗಲ್ಲ ಕಣೊ.
ಹುಡುಗ: ಸರಿ ಶುಭ ಅಂದ್ರೆ?
ಅಪ್ಪ: ಅದರಲ್ಲಿ ವಿನಾಯಕ ಇರ್ತಾನೆ ಅಂತಾ.
ಹುಡುಗ: ಅರಿಶಿನದಲ್ಲಿನಾ?
ಅಪ್ಪ: ಹೌದು.
ಹುಡುಗ: ಅರಿಶಿನದಲ್ಲಿ ಹೇಗೆ ಇರ್ತಾನೆ ಅಪ್ಪ?
ಅಪ್ಪ: ಏನೋ ಗೊತ್ತಿಲ್ಲ ಕಣೊ.
ಹುಡುಗ: ಇನ್ನೂ ಶುಭವೆನ್ನುವುದು ಬೇರೆ ಏನಾದರೂ ಇದೆಯಾ?
ಅಪ್ಪ: ಇವೆ.
ಹುಡುಗ: ಅದರಲ್ಲಿ ಕೂಡ ಇರ್ತಾನಾ?
ಅಪ್ಪ: ಬೇರೆ ದೇವತೆಗಳು ಇರ್ತಾರೆ.
ಹುಡುಗ: ಮಣ್ಣಿನಲ್ಲಿ ವಿನಾಯಕನನ್ನು ಮಾಡ್ತಾರಲ್ಲ, ಮಣ್ಣಿನಲ್ಲೂ ಇರ್ತಾನಾ?
ಅಪ್ಪ: ಹೌದು.
ಹುಡುಗ: ಮಣ್ಣು ಕೂಡ ಶುಭಾನಾ?
ಅಪ್ಪ: ಶುದ್ಧವಾಗಿರುವ ಮಣ್ಣು.
ಹುಡುಗ: ಹಾಗಿದ್ದರೆ ಅರಿಶಿನ ಕೊಂಡುಕೊಳ್ಳುವುದು ಏಕೆ?
ಅಪ್ಪ: ನನಗೆ ಗೊತ್ತಿಲ್ಲ.
ಹುಡುಗ: ನೀನು ಕೊಂಡುಕೊಳ್ತೀಯಾ, ಮತ್ತೆ ಗೊತ್ತಿಲ್ಲ ಅಂತೀಯ. ನನಗೇನಾದರೂ ಗೊತ್ತಿಲ್ಲದೆ ಕೊಂಡುಕೊಂಡರೆ ಸುಮ್ಮನೆ ಇರ್ತೀಯಾ? ನಾನು ಚೆನ್ನಾಗಿದೆ ಅಂದರೂ ಒಪ್ಪಿಕೊಳ್ಳುವುದಿಲ್ಲವಲ್ಲ.
ಅಪ್ಪ: ಚಿಕ್ಕವನು ಅಂತಾ.
ಹುಡುಗ: ದೊಡ್ಡವರು ಗೊತ್ತಿಲ್ಲದೆಯೇ ಎಲ್ಲವನ್ನೂ ಕೊಳ್ತಾರಲ್ಲ. ನೀವೆ ನಮಗೆ ಈ ಬುದ್ಧಿ ಇರದ ಕೆಲಸಗಳನ್ನು ಕಲಿಸುವುದು. ಶುಭವಾಗಿರೋದರಲ್ಲಿ ಮಾತ್ರಾನಾ ವಿನಾಯಕ ಇರುವುದು? ದೇವರು ಎಲ್ಲದರಲ್ಲಿಯೂ ಇರ್ತಾನೆ ಅಂತೀರಾ?
ಅಪ್ಪ: ಇರ್ತಾನೆ.
ಹುಡುಗ: ಮತ್ತೆ ಎಲ್ಲವನ್ನೂ ಪೂಜೆ ಮಾಡುವುದಿಲ್ಲ?
ಅಪ್ಪ: ಏನೋ ಕೆಲವನ್ನು ಮಾತ್ರ ಪೂಜೆಗೆ ಆರಿಸಿಕೊಂಡಿದ್ದಾರೆ.
ಹುಡುಗ: ನಾನು ಬೇರೆಯದನ್ನು ಆರಿಸಿಕೊಂಡರೆ?
ಅಪ್ಪ: ಆರಿಸಿಕೊ.
ಹುಡುಗ: ಹಾಗಿದ್ದರೆ ನಾನು ನನ್ನ ನಾಯಿಮರಿಯನ್ನು ಆರಿಸಿಕೊಳ್ಳುತ್ತೇನೆ.
ಅಪ್ಪ: ಛಿ, ನಾಯಿಮರಿನಾ?
ಹುಡುಗ: ಅದರಲ್ಲಿ ದೇವರಿಲ್ಲವಾ?
ಅಪ್ಪ: ಇದ್ದಾನೆ, ಆದರೆ ಅದು ಗಲೀಜು.
ಹುಡುಗ: ನಾನು ಶುಭ್ರವಾಗಿ ಇಟ್ಟುಕೊಳ್ತೀನಿ. ಮತ್ತೆ ಅಜ್ಜಿ ಎಷ್ಟು ಗಲೀಜು... .
ಅಪ್ಪ: ಹಾಗೆ ಅನ್ನಬಾರದು, ದೊಡ್ಡವರನ್ನು.
ಹುಡುಗ: ಯಾಕೆ ಅನ್ನಬಾರದು? ಅವರು ಅಷ್ಟು ಗಲೀಜಾಗಿರ್ತಾರೆ.. .
ಅಪ್ಪ: ದೊಡ್ಡವರು.
ಹುಡುಗ: ಆದರೆ
ಅಪ್ಪ: ಅವರನ್ನು ಅನ್ನಬಾರದು.
ಹುಡುಗ: ಯಾಕೆ?
ಅಪ್ಪ: ತಪ್ಪು.
ಹುಡುಗ: ಯಾಕೆ ತಪ್ಪು? ಈ ತಪ್ಪುಗಳೆಲ್ಲ ನಿನಗೆ ಹೇಗೆ ಗೊತ್ತಾಯಿತು ಅಪ್ಪ? ಯಾರು ಮಾಡಿದ್ದು?
ಅಪ್ಪ: ಏನೋ ಕಣೋ. ಅದೆಲ್ಲ ಯಾಕೆ? ವಿನಾಯಕನ ಸಂಗತಿ ಮಾತನಾಡು.
ಹುಡುಗ: ಏನೋ, ಮಾತನಾಡಿದರೆ ಚಿಕ್ಕಮಕ್ಕಳಿಗೆ ಏನೂ ಗೊತ್ತಿಲ್ಲ ಅಂತೀರಾ. ದೊಡ್ಡವರಿಗೇ ಗೊತ್ತಿಲ್ಲ. ನಮಗೆ ಗೊತ್ತಿಲ್ಲ ಅಂತ ಸುಮ್ಮನಾಗ್ತೀವಿ. ನಿಮಗೆ ಗೊತ್ತು ಅಂತ ಹೇಳಿ ನಮ್ಮನ್ನು ದಬಾಯಿಸಿ ಸುಳ್ಳುಗಳನ್ನು ಹೇಳ್ತೀರಾ.
ಅಪ್ಪ: ನಾನು ಏನು ಸುಳ್ಳು ಹೇಳಿದೆ?
ಹುಡುಗ: ಅಮ್ಮ ಹೇಳ್ತಾಳೆ. ನೀನಾದರೂ ಒಂದಕ್ಕಾದರೂ ಸರಿಯಾಗಿ ಉತ್ತರ ಹೇಳಿದ್ಯಾ? ಮತ್ತೆ ವಿನಾಯಕ ಎಲ್ಲದರಲ್ಲೂ ಇದ್ದರೆ, ಮತ್ತೆ ಕೈಲಾಸದಲ್ಲಿದ್ದಾನೆ ಅಂತಾ ಯಾಕಂತಾರೆ?
ಅಪ್ಪ: ಅಲ್ಲಿ, ಇಲ್ಲಿ, ಎಲ್ಲಾ ಕಡೆ ಇರ್ತಾನೆ.
ಹುಡುಗ: ಹಾಗಿದ್ದರೆ ಕೈಲಾಸದಲ್ಲಿ ಇದ್ದಾನೆ ಅನ್ನೋದು ಏತಕ್ಕೆ? ಇಲ್ಲೇ ಇರುವವರನ್ನು?
ಅಪ್ಪ: ಅಲ್ಲಿ ಕಾಣಿಸುತ್ತಾರೇನೋ.
ಹುಡುಗ: ಯಾರಿಗೆ?
ಅಪ್ಪ: ಅಲ್ಲಿ ಋಷಿಗಳಿಗೆ, ದೇವತೆಗಳಿಗೆ.
ಹುಡುಗ: ಅಲ್ಲಿ ಅವರಿಗೆ ಕಾಣಿಸುತ್ತಾರಲ್ಲ?
ಅಪ್ಪ: ಇಲ್ಲಿ ಕಾಣಿಸುವುದಿಲ್ಲ.
ಹುಡುಗ: ಹಾಗಿದ್ದರೆ ಇಲ್ಲಿ ಇದ್ದಾರೆ ಅಂತಾ ನೋಡಿದವರು ಯಾರು?
ಅಪ್ಪ: ನನಗೆ ಗೊತ್ತಿಲ್ಲ ಕಣೊ.
ಹುಡುಗ: ವಿನಾಯಕನಿಗೆ ಹಸಿವು ಇಲ್ಲದಿದ್ದರೆ, ನೈವೇದ್ಯ ಇಡುವುದು ಯಾತಕ್ಕೆ?
ಅಪ್ಪ: ನಮ್ಮ ಭಕ್ತಿ ತೋರಿಸಿಕೊಳ್ಳಲು.
ಹುಡುಗ: ಎಲೆ, ಹೂವು ಸಾಲದಾ? ಹೋಗಲಿ ನನಗೆ ಸಂಡಿಗೆ ಇಷ್ಟ, ಅದನ್ನೇ ಇಟ್ಟರೆ?
ಅಪ್ಪ: ನಿನ್ನ ಇಷ್ಟದಂತಾ?
ಹುಡುಗ: ಮತ್ತೆ ಯಾರ ಇಷ್ಟದಂತೆ?
ಅಪ್ಪ: ವಿನಾಯಕನ ಇಷ್ಟ.
ಹುಡುಗ: ಹಸಿವು ಇಲ್ಲದವನಿಗೆ ಇಷ್ಟವೇನು?
ಅಪ್ಪ: ಅಲ್ಲಾ, ಋಷಿಗಳು ಆ ರೀತಿ ಇಡಿ ಅಂತಾ ಹೇಳಿದ್ದಾರೆ.
ಹುಡುಗ: ಅಂದರೆ ಋಷಿಗಳಿಗೆ ಅವೆಲ್ಲ ಇಷ್ಟ ಅಂತರ್ಥ. ನಾವು ಭಕ್ತಿ ಯಾತಕ್ಕೆ ತೋರಿಸಬೇಕು? ನನಗೇನೂ ಭಕ್ತಿ ಇಲ್ಲವೇ?
ಅಪ್ಪ: ನಮಸ್ಕಾರ ಮಾಡಿ ಪೂಜೆ ಮಾಡಿದರೆ ಭಕ್ತಿ ಇದ್ದಂತೆಯೇ.
ಹುಡುಗ: ದೇವರು ಅಂದುಕೊಳ್ತಾನಾ, ಭಕ್ತಿ ಇದೆ ಅಂತಾ?
ಅಪ್ಪ: ಹೌದು.
ಹುಡುಗ: ದೇವರಿಗೆ ತಿಳಿದುಕೊಳ್ಳಲು ಸಾಧ್ಯವಿಲ್ಲವಾ?
ಅಪ್ಪ: ನಮಸ್ಕಾರ ಹಾಕ್ತಾ ಇದ್ದರೆ ಭಕ್ತಿ ಅದಷ್ಟಕ್ಕೆ ಬರುತ್ತೆ.
ಹುಡುಗ: ಅಣ್ನ ಹೆಡ್ಮಾಷ್ಟರ್‍ಗೆ ದಿನಕ್ಕೆ ಐದು ಬಾರಿ ನಮಸ್ಕರಿಸುತ್ತಾನೆ, ಆದರೆ ಒಂಚೂರು ಭಕ್ತಿ ಇಲ್ಲ ಅವನಿಗೆ. ಇಷ್ಟು ವರ್ಷದಿಂದ ನೀನು ನಮಸ್ಕಾರ ಮಾಡ್ತಾನೆ ಇದ್ದೀಯ, ನಿನಗೇನೂ ಭಕ್ತಿ ಇಲ್ಲವಲ್ಲ ದೇವರ ಮೇಲೆ?
ಅಪ್ಪ: ಇಲ್ಲದೇ ಏನು?
ಹುಡುಗ: ಮತ್ತೆ ಎಷ್ಟೊಂದು ಸಾರಿ ದೇವರನ್ನು ಬೈದುಕೊಂಡಿದ್ದೀಯಾ? ನಿನಗೆ ಸರಿಯಾಗಿ ಸಂಬಳ ಬಾರದೇ ಇದ್ದಾಗ.
ಅಪ್ಪ: ಅದು ನನಗೆ ಬುದ್ದಿ ಇಲ್ಲದೆ.
ಹುಡುಗ: ನೀನು ಬುದ್ಧಿ ಕಡಿಮೆ ಇರುವವನಾ? ಮತ್ತೆ ನನ್ನನ್ನು ಯಾಕೆ ಬುದ್ಧಿ ಇಲ್ಲ ಅಂತಾ ಬೈತೀಯಾ?
ಅಪ್ಪ: ಸುಮ್ಮನೆ ಮಾತಿಗೆ ಹಾಗೆ ಹೇಳಿದೆ. ನಿನಗಿಂತ ಹೆಚ್ಚು ಬುದ್ಧಿ ಇದೆ. ದೇವರ ಮುಂದೆ ಬುದ್ಧಿ ಕಡಿಮೆಯೆ.
ಹುಡುಗ: ಇಷ್ಟು ವರ್ಷ ಪೂಜೆ ಮಾಡಿದೆಯಲ್ಲಾ, ಏನು ಬಂತು?
ಅಪ್ಪ: ನನಗೆ ಗೊತ್ತಿಲ್ಲ. ನಾವು ಮಾಡುವ ಪಾಪಗಳನ್ನು ಕ್ಷಮಿಸುತ್ತಾನೆ. ನಮಗೆ ಒಳ್ಳೆಯದನ್ನು ಮಾಡ್ತಾನೆ, ಈಶ್ವರ.
ಹುಡುಗ: ಪೂಜೆ ಅಂದ್ರೆ ಇಷ್ಟಾನಾ ಈಶ್ವರನಿಗೆ?
ಅಪ್ಪ: ಹೌದು.
ಹುಡುಗ: ತುಂಬಾ ಬಡಾಯಿಯವನಾ, ನಮ್ಮ ಊರು ಛೇರ್ಮನ್ ತರಾ?
ಅಪ್ಪ: ಅಲ್ಲ, ಪೂಜೆ ಮಾಡುವುದು ನಮ್ಮ ಧರ್ಮ.
ಹುಡುಗ: ಯಾಕೆ?
ಅಪ್ಪ: ಮತ್ತೆ ನನ್ನನ್ನು ಹುಟ್ಟಿಸಿಲ್ಲವಾ?
ಹುಡುಗ: ಹುಟ್ಟಿಸಿದರೆ ನನಗೇನು? ಹುಟ್ಟಿಸಬೇಡ ಅಂತ ಹೇಳು.
ಅಪ್ಪ: ಹೋಗಲಿ ಉಸಿರಾಡಲು ಗಾಳಿ, ಕುಡಿಯಲು ನೀರು . ..
ಹುಡುಗ: ಇವೆಲ್ಲ ಇಡದಿದ್ದರೆ ಅವನು ಹುಟ್ಟಿಸಿದವರು ಸತ್ತು ಹೋಗ್ತಾರೆ. ನನಗೋಸ್ಕರ ಇಟ್ಟನಾ? ಅಷ್ಟೊಂದು ಜನ ಪೂಜೆ ಮಾಡ್ತಾ ಇದ್ದರೆ ಅವೆಲ್ಲ ಲೆಕ್ಕ ಇಡ್ತಾ ಕೂತ್ಕೋತಾನಾ ದೇವರು? ಯಾರು ಎಷ್ಟು ನಮಸ್ಕಾರ ಹಾಕಿದರು? ಎಷ್ಟು ಹೂವ ಇಟ್ಟರು ಅಂತಾ?
ಅಪ್ಪ: ದೇವರಿಗೆ ಅವೆಲ್ಲ ಗೊತ್ತಾಗುತ್ತೆ.
ಹುಡುಗ: ಪೂಜೆ ಮಾಡದೆ ಇದ್ದರೆ ಈಶ್ವರನಿಗೆ ಕೋಪ ಬರುತ್ತಾ?
ಅಪ್ಪ: ಹೌದು ನಮ್ಮ ಧರ್ಮ ನಾವು ಮಾಡ್ತಾ ಇಲ್ಲವೆಂದು.
ಹುಡುಗ: ಯಾಕೆ ನಮ್ಮ ಧರ್ಮ? ಪೂಜೆ ಮಾಡುವುದಾ? ಹೋಗಲಿ ಮುಸಲ್ಮಾನರು ವಿನಾಯಕನ ಪೂಜೆ ಮಾಡುವುದಿಲ್ಲವಲ್ಲ, ಅವರ ಮೇಲೆ ಕೋಪಾನಾ?
ಅಪ್ಪ: ಅವರ ದೇವರನ್ನು ಅವರು ಪೂಜಿಸ್ತಾರೆ.
ಹುಡುಗ: ಮತ್ತೆ ವಿನಾಯಕನಿಗೆ ಕೋಪ ಬರೋಲ್ವ?
ಅಪ್ಪ: ಅವರು ಮಾಡಿದರೆ ಇಷ್ಟವಾಗೋಲ್ಲ.
ಹುಡುಗ: ಯಾಕೆ?
ಅಪ್ಪ: ಅವರು ಮುಸಲ್ಮಾನರು ಅದಕ್ಕೆ.
ಹುಡುಗ: ಅವರನ್ನು ಅವರ ದೇವರು ಹುಟ್ಟಿಸಿದನಾ?
ಅಪ್ಪ: (ಅನುಮಾನವಾಗಿ) ಹೌದು.
ಹುಡುಗ: ಹಾಗಿದ್ದರೆ ಅವರನ್ನು ಬೇರೆ ಲೋಕದಲ್ಲಿ ಸೃಷ್ಟಿಸದೆ ನಮ್ಮ ದೇವರ ಲೋಕದಲ್ಲಿ ಯಾಕೆ ಹುಟ್ಟಿಸಿದ್ದು? ಅವರ ದೇವರಿಗೆ ಲೋಕಗಳನ್ನು ಮಾಡುವುದು ಗೊತ್ತಿಲ್ಲವಾ?
ಅಪ್ಪ: (ವಿಧಿ ಇಲ್ಲದೆ) ಎಲ್ಲ ದೇವರುಗಳೂ ಒಂದೇ, ಹೆಸರುಗಳು ಮಾತ್ರ ಬೇರೆ.
ಹುಡುಗ: ಹಾಗಿದ್ದರೆ ನಾನು ಮುಸಲ್ಮಾನರ ದೇವರನ್ನು . .. .
ಅಪ್ಪ: ಸಾಧ್ಯವಿಲ್ಲ. ನೀನು ಮುಸಲ್ಮಾನ ಅಲ್ಲವಲ್ಲ?
ಹುಡುಗ: ಅವನು ಮುಸಲ್ಮಾನ ಹೇಗೆ ಆದ? ದೇವರು ಹೇಳಿದನಾ? ಹೇಗೆ ಗೊತ್ತಾಗುತ್ತೆ?
ಅಪ್ಪ: ಅದು ಒಂದು ಧರ್ಮ.
ಹುಡುಗ: ಧರ್ಮ ಅಂದರೆ?
ಅಪ್ಪ: ಈಗಲೆ ನಿನಗದೆಲ್ಲ ಗೊತ್ತಾಗುವುದಿಲ್ಲ ಕಣೊ.
ಹುಡುಗ: ಇಷ್ಟೊತ್ತಿನವರೆಗೆ ಬಹಳ ದೇವರಿದ್ದಾರೆ ಅಂದೆ. ಈಗ ಒಬ್ಬನೇ ಅಂತೀಯ. ಒಬ್ಬನೇ ಆದ್ರೆ ವಿನಾಯಕ ಇದ್ದಾನಾ, ಇಲ್ಲವಾ?
ಅಪ್ಪ: ಅವೆಲ್ಲ ದೇವರಿಗೆ ಹೆಸರುಗಳು. ಓದು ಬೇಕು ಅಂದ್ರೆ ವಿನಾಯಕ ಅಂತ ಪೂಜೆ ಮಾಡ್ತೀವಿ, ಹಣ ಬೇಕಂದ್ರೆ, ಲಕ್ಷ್ಮಿ ಅಂತಾ. . .
ಹುಡುಗ: ಓದು ಬೇಕು ಅಂದ್ರೆ ಲಕ್ಷ್ಮಿನಾ ಕೇಳಬಾರದಾ?
ಅಪ್ಪ: ಉಹೂ
ಹುಡುಗ: ಮುಸಲ್ಮಾನರು ವಿನಾಯಕನನ್ನು ಪೂಜೆ ಮಾಡುವುದಿಲ್ಲ. ಅವರಿಗೆ ಓದು ಬರುತ್ತದಲ್ವಾ?
ಅಪ್ಪ: ಅವರ ದೇವರು ಕೊಡ್ತಾನೆ.
ಹುಡುಗ: ಅವರಿಗೆ ಎಷ್ಟು ಮಂದಿ ದೇವರು?
ಅಪ್ಪ: ಒಬ್ಬನೆ.
ಹುಡುಗ: ಊಟ ಅವನೇ ಕೊಡ್ತಾನಾ?
ಅಪ್ಪ: ಹೌದು.
ಹುಡುಗ: ನಮ್ಮ Œದೇವರುಗಳೇನಾ ಇಷ್ಟೊಂದು ದೇವರು? ಅವರದೇ ಸುಲಭವಲ್ಲವಾ? ಸುಶೀಲ ಮನೇಲಿ ಪೂಜೇನೇ ಮಾಡೋದಿಲ್ವೆ, ಅವರ ಹತ್ತಿರ ಹಣವಿದೆ?
ಅಪ್ಪ: ಹಿಂದಿನ ಜನ್ಮದಲ್ಲಿ ಮಾಡಿರ್ತಾರೆ.
ಹುಡುಗ: ಮತ್ತೆ ಈಗ ಮಾಡುವ ಪೂಜೆ ಮುಂದಿನ ಜನ್ಮಕ್ಕಾ, ಈ ಜನ್ಮಕ್ಕಾ?
ಅಪ್ಪ: ಎರಡಕ್ಕೂ.
ಹುಡುಗ: ಸುಂದರ ಎಷ್ಟೊಂದು ಪೂಜೆ ಮಾಡ್ತಾನೆ, ಆದರೆ ಅವನಿಗೆ ಓದು ಬರಲ್ವೇ?
ಅಪ್ಪ: ಅದು ಅವನ ಕರ್ಮ.
ಹುಡುಗ: ಕರ್ಮ ಅಂದ್ರೆ?
ಅಪ್ಪ: ನಿನಗೆ ಈಗ ಅರ್ಥವಾಗೋಲ್ಲ
ಹುಡುಗ: ಅವನಿಗೆ ವಿನಾಯಕ ಓದು ಯಾಕೆ ಕೊಡೋಲ್ಲ. ಅವನ ಕರ್ಮ ಆ ರೀತಿ ಇದ್ದರೆ ದೇವರು ಕೊಡುವುದಿಲ್ಲವಾ?
ಅಪ್ಪ: ಮುಂದಿನ ಜನ್ಮದಲ್ಲಿ ಕೊಡ್ತಾನೆ.
ಹುಡುಗ: ಮುಂದಿನ ಜನ್ಮದಲ್ಲಿಯೂ ಅವನ ಕರ್ಮ ಹಾಗೆ ಇದ್ದರೆ?
ಅಪ್ಪ: ನಿನಗೆ ಈಗ ಇದೆಲ್ಲ ಅರ್ಥವಾಗೋಲ್ಲ ಕಣೊ.
ಹುಡುಗ: ನಿನಗೆ ಗೊತ್ತಾ ಹೋಗಲಿ?
ಅಪ್ಪ: (ಸಂದೇಹವಾಗಿ) ಹೌದು.
ಹುಡುಗ: ಹಾಗಿದ್ದರೆ ಹೇಳು. ಗೊತ್ತಾಗುತ್ತೋ ಇಲ್ಲವೋ ನೋಡ್ತೀನಿ.
ಅಪ್ಪ: ನಾನು ಹೇಳೋಕ್ಕಾಗಲ್ಲ, ಇನ್ನು ನೀನು ಹೋಗು.
*****



- ಸುಧಾ ಜಿ     

ಶಾಲಾ ಡೈರಿ - 3




ಶಾಲೆಯೊಳಗೆ ಹೆಜ್ಜೆ ಇಟ್ಟಾಕ್ಷಣ ನನಗೆ ಬರುತ್ತಿದ್ದ ದೂರು ಮಾತ್ರ ಅವನದೇ. ಸುನಿಲ್ ಅಂತ ಹೆಸರು ಮೂರನೇ ತರಗತಿ ಓದ್ತಾ ಇದ್ದಾನೆ. ಮಿಸ್ ಸುನಿಲ್ ಹೊಡೆದ ಸುನಿಲ್ ಬೈದ ಸುನಿಲ್ ಅದನ್ನ ಮುರಿದ ಸುನಿಲ್ ಮಾತ್ರ home work ಬರೆದಿಲ್ಲ ...ಹೀಗೆ ತರಹೇವಾರಿ ಬೇಡದ ಕೆಲಸಗಳ ಸರದಾರ. ಅವನ ಮುಖ ಲಕ್ಷಣವೂ ಆಂಗಿಕ ಚಲನೆಯೂ ವಿಚಿತ್ರವೇ ತೀರ ವಯಸ್ಸಾದವನಂತೆ ಕಾಣುತ್ತಿದ್ದ. ಮೊದಲಿಗೆ ಒಳ್ಳೆ ಮಾತಿನಲ್ಲಿ ಬೋಧನೆ. ನಂತರ ಕೋಪದಲ್ಲಿ ಎಚ್ಚರಿಕೆ, ಸಹನೆ ಮೀರಿ ಹೊಡೆತಗಳು ಬಿದ್ದವು. ಯಾವುದಕ್ಕೂ ಜಗ್ಗಲಿಲ್ಲ. ಸಮಸ್ಯೆಯಾಗಿಯೇ ಉಳಿದ. ಅವನ ಪೋಷಕರೊಂದಿಗೆ ಮಾತಾನಾಡುವುದು ಅಂತಿಮ ದಾರಿಯಾಗಿ ಕಂಡಿತು. ಕರೆಸಿದೆ. ತಾಯಿ ಬಂದಳು ಹುಟ್ಟು ಕುರುಡು. ತಾಯಿಗೆ ಮಗನ ಮೇಲೆ ಎಲ್ಲಿಲ್ಲದ ಭರವಸೆ. ಅವನು ಚೆನ್ನಾಗಿ ಓದಬೇಕೆಂಬುದು ಅವಳ ಆಸೆ. ಅವನ ಬಗ್ಗೆ ಹೇಳಿದ್ದಾಯಿತು. ಆಕೆ ಪೂರ್ತಿ ಜವಾಬ್ದಾರಿ ನನಗೇ ವಹಿಸಿದಳು. ನೀವು ಏನು ಮಾಡಿದರೂ ನಾ ಯಾಕೆ ಅಂತ ಕೇಳೋಲ್ಲ ಅವನ ತಿದ್ದುಕೊಡಿ ಅವನಪ್ಪ ಕುಡುಕ ನನಗೋ ಕುರುಡು ಎಂದು ನೊಂದುಕೊಂಡಳು. ಆಕೆಯ ಅರಿಕೆಗೆ ಮನಸ್ಸು ಚಿಂತೆಗೊಳಗಾಯಿತು. ಅವನ ಕೈಲಿ ಓದಿಸುವುದು ಈಗ ದೂರದ ಮಾತು. ತಕ್ಷಣಕ್ಕೆ ಅವನ ಕಾಡು ವರ್ತನೆ ನಿಲ್ಲಿಸಲು ಬಹಳ ಚಂತಿಸಿದೆ. ಅವನ ಬಗ್ಗೆ ಊರಲ್ಲಿ ವಿಚಾರಿಸಿದೆ ಎಲ್ಲರೂ ದೂರುವವರೇ. 

ಒಂದು ದಿನ ಅವನನ್ನು ಬಳಿಗೆ ಕರೆದೆ. ಅವನೊಂದಿಗೆ ಮಾತಿಗಿಳಿದೆ. ಅವನಿಗಿಷ್ಟವಾದ ವಿಷಯ ಕೆಲಸಗಳನ್ನು ನೆನಪಿಸಿ ಖುಷಿಪಡಿಸಿದೆ. ನಿಧಾನಕ್ಕೆ ಅವರ ತಾಯಿಯ ಬಗ್ಗೆ ಕೇಳಿದೆ. ಅಂದು ನಾ ಎಂದು ನೋಡಿರದ ಸುನಿಲ್ ಹೊರಬಂದ. ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ತೀಯ ಎಂದು ಕೇಳಿದ್ದಕ್ಕೆ ನಮ್ ಶಾಲೆ ಮಕ್ಕಳು ....ಊ ಮಿಸ್ ಅವರಮ್ಮನಿಗೆ ಮುದ್ದೆ ಕೂಡ ಮಾಡಿ ಕೊಡ್ತಾನೆ ಎಲ್ಲ ಸಹಾಯ ಮಾಡ್ತಾನೆ ಅಂತ ಹೇಳಿದ್ರು. ಸುನಿಲ್ ಸುಮ್ಮನೇ ಇದ್ದ. ನನಗಂತೂ ಬಲು ಖುಷಿಯಾಯಿತು. ಅವರ ತಂದೆ ಬಗ್ಗೆ ವಿಚಾರಿಸಿದೆ. ಅವನೇನು ಹೇಳಲಿಲ್ಲ ಪುನಃ ಮಕ್ಕಳೇ ಮಿಸ್ ಅವರಪ್ಪ ಕುಡಿದು ಬಂದು ಪಾಪ ಅವರಮ್ಮನ್ನ ಹೊಡೀತಾರೆ. ನಮ್ಮ ಸುನಿಲ್ ಆಗ ಅವರಪ್ಪನ್ನ ಹೊಡೀಬೇಡ ಅಂತ ಬೈತಾನೆ ದೂರ ತಳ್ತಾನೆ  ಮಿಸ್ ಅವರಪ್ಪ ಅಂದರೆ ಇವನಿಗಾಗಲ್ಲ ಅಂತ ಹೇಳಿದ್ರು.  ಇಷ್ಟು ಸಣ್ಣ ಹುಡುಗನ ಮನೆ ಚಿತ್ರಣ ಕೇಳಿ ಕಣ್ತುಂಬಿತು. ಇವನ ವರ್ತನೆಗೆ ಕಾರಣ ತಿಳಿಯಿತು. 
ಅದನ್ನ ತೋರ್ಗೊಡದೆ ಅಂದು ಮನಸಾರೆ ಸುನಿಲ್ ನ ಮೆಚ್ಚಿಕೊಂಡೆ. ಅಕ್ಷರಭ್ಯಾಸಕ್ಕಿಂತ ಅಮ್ಮನ ಮೇಲಿನ ಪ್ರೀತಿ ದೊಡ್ಡದು. ನಮ್ ಸುನಿಲ್ ಓದದೆ ಇರ್ಬೋದು ಆದ್ರೆ ಅವನು ತುಂಬಾ ಒಳ್ಳೇವ್ನು. ಅವನನ್ನ ನೋಡಿ ಕಲೀರಿ ಅಂತ ಅವನ ಬೆನ್ನನ್ನು ತಟ್ಟಿದೆ. ಅಂದಿನಿಂದ ಅವನನ್ನು ನಡೆಸಿಕೊಳ್ಳುವ ರೀತಿ ಬದಲಾಯಿಸಿದೆ. ಕ್ರಮೇಣ ಅವ ಬದಲಾದ. ಅವನ ಮೇಲಿನ ದೂರುಗಳು ಮಾಯವಾದವು. ಅವನ ಮುಖವೂ ಲಕ್ಷಣವಾಯಿತು. ಶಾಲೆಗೆ ನೀಟಾಗಿ ಬರತೊಡಗಿದ. ನಗತೊಡಗಿದ ಓದಲೂ ಶುರುಮಾಡಿದ. ನನಗದೇ ಸಮಾಧಾನ.
   - ಉಷಾಗಂಗೆ   

ಅನುವಾದ - ಕರ್ತವ್ಯ


(ಎ. ಇಜ್ ಬೆಕ್ ರವರ ರಷ್ಯಾದ ಕಥೆ 'ಡ್ಯೂಟಿ' ಇಂಗ್ಲಿಷ್ ನಿಂದ ಅನುವಾದಿತ)
ಯುದ್ಧ ಆರಂಭವಾಗುತ್ತಿದ್ದಂತೆ ತಮರಾ ಕಾಲ್‍ನಿನಾ ಯುದ್ಧರಂಗದಲ್ಲಿ ನರ್ಸ್ ಆಗಿ ಸೇರಿಕೊಂಡಳು. ಆಗವಳಿಗೆ ಕೇವಲ 17 ವರ್ಷ. ಆದರೆ ಅವಳು ತುಂಬಾ ಧೈರ್ಯದಿಂದ ರಣರಂಗಕ್ಕೆ ತೆರಳಿದಳು. ಗುಂಡಿನ ಅಥವಾ ಶೆಲ್‍ನ ಶಬ್ಧವನ್ನು ಕಡೆಗಣಿಸಿ ಶಾಂತವಾಗಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನಿಡುತ್ತಿದ್ದಳು. ಅವಳು ಅವರ ಜ್ವರಪೀಡಿತ ಹಣೆಯ ವೇಲೆ ಕೈಯಿಟ್ಟಾಗ ಅದು ಆ ಸೈನಿಕರಿಗೆ ತಮ್ಮ ಪ್ರೀತಿಪಾತ್ರ ಸೋದರಿಯ ಸ್ಪರ್ಶವೆನಿಸುತ್ತಿತ್ತು.
ಒಂದು ದಿನ ಗುಂಡಿನ ತೀವ್ರ ಚಕಮಕಿ ನಡೆದ ನಂತರ ತವರಾಗೆ ಮೋಟಾರ್ ಆಂಬುಲೆನ್ಸ್‍ನಲ್ಲಿ ಗಾಯಗೊಂಡ ಸೈನಿಕರನ್ನು ಹಾಗೂ ಕಮಾಂಡರ್‍ಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ನೀಡಾಲಾಯಿತು. ಮಾರ್ಗ ಮಧ್ಯದಲ್ಲಿ ಅವರು ಏಳು ಶತ್ರು ವಿಮಾನಗಳನ್ನು ಎದುರಿಸಿದರು. ಕಾರಿನ ಮೇಲೆ ರೆಡ್‍ಕ್ರಾಸ್ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆ ಕಾರಣಕ್ಕಾಗಿಯೇ ಬಹುಶಃ ಫ್ಯಾಸಿಸ್ಟರು ಅದನ್ನು ಹಾಗೂ ಅದರಲ್ಲಿದ್ದ ಗಾಯಾಳುಗಳನ್ನು ನಾಶಮಾಡಬೇಕೆಂದು ನಿರ್ಧರಿಸಿದರು. ಎಲ್ಲಾ ಏಳು ವಿಮಾನಗಳು ಕೆಳಗಿಳಿದು, ಹಿಂದಕ್ಕೆ, ಮುಂದಕ್ಕೆ ಹಾರಾಡುತ್ತಾ ಕಾರಿನ ಮೇಲೆ iಟಿಛಿeಟಿಜiಚಿಡಿಥಿ ಗುಂಡುಗಳ ಸುರಿಮಳೆ ಸುರಿಸಿದವು. 
ಮೊದಲ ಬಾರಿ ಆಕ್ರಮಣ ಎರಗಿದಾಗ ತಮರಾ ಆ ಭಯಾನಕತೆಗೆ ಗರಬಡಿದವಳಂತೆ ಕಾರಿನ ಮೂಲೆಯಲ್ಲಿ ಮುದುಡಿ ಕುಳಿತಳು. ಗಾಯಾಳುಗಳು ನರಳಾಡಿದರು. ಅವಳು ಅವರ ಬ್ಯಾಂಡೇಜ್ ಅನ್ನು ಸರಿಪಡಿಸಿದಳು, ತನ್ನ ಪ್ಲಾಸ್ಕಿನಿಂದ ಅವರಿಗೆ ನೀರುಣಿಸಿದಳು ಮತ್ತು  ಅವರಿಗೆ ಸಾಂತ್ವನ ನಿಡುವಲ್ಲಿ ಯಶಸ್ವಿಯಾದಳು. ನಂತರ ಇನ್ನೊಂದು ಬಾರಿ ಭೀಕರ ಅಸ್ತ್ರಗಳ ಆಕ್ರಮಣ ಬಂದಿತು, ಕಾರ್ ಹತ್ತಿ ಉರಿಯಲಾರಂಭಿಸಿತು. ಕಾಡಿನ ಮಧ್ಯದಲ್ಲಿ ಅದು ಉರಿಯುತ್ತ ನಿಂತು ಹೋಯಿತು. ಗಾಯಾಳುಗಳು ಭಯಪೀಡಿತರಾದರು. ತಮ್ಮ ಬರ್ತ್‍ಗಳಿಂದ ಕೆಳಗೆ ಜಿಗಿದರು. ಹಾಗೆ ಮಾಡುವಾಗ ತಮ್ಮ ಬ್ಯಾಂಡೇಜ್‍ಗಳನ್ನು ಹರಿದುಕೊಂಡರು.  ಉಸಿರುಗಟ್ಟಿ ಉಸಿರಿಗಾಗಿ ಕಷ್ಟಪಟ್ಟರು. ಒಂದು ಕ್ಷಣ, ಒಂದೇ ಒಂದು ಕ್ಷಣ ಆ ಹುಡುಗಿ ತನ್ನ ಸ್ಥಿತಪ್ರಜ್ಞತೆಯನ್ನು ಕಳೆದುಕೊಂಡಳು. ಉರಿಯುವ ಕಾರಿನಿಂದ ಹೊರಕ್ಕೆ ಎಗರಿ ಆ ಭಯಾನಕತೆಯಿಂದ ತಪ್ಪಿಸಿಕೊಳ್ಳಲು ಕಾಡಿನೊಳಗೋಡಿದಳು.
ಆದರೆ ಮರುಕ್ಷಣವೇ ತನ್ನನ್ನು ತಾನೇ ಸಂಭಾಳಿಸಿಕೊಂಡಳು. ಅವಳ ಮನಸ್ಸಾಕ್ಷಿ ಮಾತನಾಡಿತು – “ಎಲ್ಲಿಗೆ ಹೋಗುತ್ತಿದ್ದೀಯಾ? ಯುವ ಕಮ್ಯೂನಿಸ್ಟ್ ದಳದವಳೇ! ಸ್ವಯಂ ಸೇವಕಿ! ಯಾರನ್ನು ನಿನ್ನ ವಶಕ್ಕೆ ಒಪ್ಪಿಸಿತ್ತೋ ಅವರನ್ನು ಮರೆತು, ಈ ಗಾಯಾಳುಗಳನ್ನು ಅವರ ವಿಧಿಗೆ ನೂಕಿ ಓಡಿಹೋಗುತ್ತಿದ್ದೀಯಾ? ಇದಾದ ನಂತರ ಮತ್ತೆ ಜನರಿಗೆ ಯಾವ ರೀತಿ ಮಖ ತೋರಿಸುತ್ತೀಯಾ?”
ಕಾರಿಗೆ ತ್ವರಿತವಾಗಿ ಹಿಂತಿರುಗಿದಳು. ಸಣ್ಣಗೆ ಅಶಕ್ತಿಯಿಂದಿದ್ದ ಅವಳೇ ಒಂದು ಮಗು, ಆದರು ಆ ಗಾಯಾಳುಗಳನ್ನು ರಸ್ತೆಗೆ ಎಳೆಯಲಾರಂಭಿಸಿದಳು. ಚಾಲಕ ಅವಳ ಸಹಾಯಕ್ಕೆ ಬಂದ. ಆದರೆ ಆ ದಯಾಹೀನ ಕ್ರೂರಿ ಶತ್ರು ಯಂತ್ರಗಳು ಹಿಂತಿರುಗಿ ಉರಿಯುವ ಕಾರಿನ ಮೇಲೆ ಮತ್ತೆ ಗುಂಡಿನ ಸುರಿಮಳೆ ಸುರಿಸಿದರು. ಚಾಲಕನಿಗೆ ಏಟು ಬಿದ್ದು ಆತ ಮಾರ್ಗ ಮಧ್ಯೆ ಸತ್ತುಬಿದ್ದ.
ಈಗ ತಮರಾ ಕಾಡಿನಲ್ಲಿ ಒಂಟಿಯಾಗಿದ್ದಳು. ಹದಿನೈದು ಗಾಯಾಳುಗಳನ್ನೊಳಗೊಂಡ ಉರಿಯುವ ಕಾರಿನ ಸಮೇತ. ಹದಿನೈದು ಬಾರಿ ಅವಳು ಜ್ವಾಲೆಯೊಳಗೆ ನುಗ್ಗಿ ಅಸ್ಸಹಾಯಕ ದೇಹಗಳನ್ನು ರಸ್ತೆ ಬದಿಯ ಹಳ್ಳದೊಳಗೆ ಎಳೆದಳು. ಪ್ರತಿ ಬಾರಿಯೂ ಒಂದು ಕ್ಷಣ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಳು – ಉರಿಯುತ್ತಿದ್ದ ತನ್ನ ಬಟ್ಟೆಗಳಿಂದ ಬೆಂಕಿಯನ್ನು ಆರಿಸಿಕೊಂಡು ಸ್ವಚ್ಛ ಗಾಳಿಯನ್ನೊಮ್ಮೆ ಒಳಗೆ ಎಳೆದುಕೊಂಡು ಮತ್ತೆ ಬೆಂಕಿಗೆ ಹಾರಲು.
ಇದು ಅಸಾಧ್ಯವೆನಿಸುತ್ತದೆ, ಅತಿ ಮಾನವ ಎನಿಸುತ್ತದೆ. ಆದರೆ ಇದು ಸತ್ಯ; ವಾಸ್ತವವಾಗಿ ನಡೆದದ್ದು. ಈ ಕ್ಷೀಣ ಹುಡುಗಿ ಜ್ವಾಲೆಯನ್ನು ವಶಪಡಿಸಿಕೊಂಡಳು. ಏಳು ಫ್ಯಾಸಿಸ್ಟ್ ರಣಹದ್ದುಗಳನ್ನು ಎದುರಿಸಿ ಸಾವನ್ನೂ ಸಹ ಗೆದ್ದಳು.
ಗಾಯಾಳುಗಳಲ್ಲಿ ಕೆಲವರು ಎಚ್ಚರ ತಪ್ಪಿದರು. ಇತರರು ತಮ್ಮ ಕಣ್ತೆರೆದರು, ಆಶ್ಚರ್ಯದಿಂದ ಸುತ್ತಲೂ ನೋಡಿದರು. ನಂತರ ಕೃತಜ್ಞತೆಯಿಂದ ಮತ್ತು ಮೆಚ್ಚುಗೆಯಿಂದ ತಮ್ಮ ಪುಟ್ಟ ರಕ್ಷಕಿಯನ್ನು ದಿಟ್ಟಿಸಿದರು.
“ಕಾಳಜಿ ಪಡಬೇಕಾದದ್ದೇನೂ ಇಲ್ಲ, ನನ್ನ ಆತ್ಮೀಯರೇ”, ಆಕೆ ಕಷ್ಟದಿಂದ ತನ್ನ ಒಡೆದ, ದಪ್ಪಗೊಂಡ ತುಟಿಯ ಮೂಲಕ ಅವರಿಗೆ ಹೇಳಿದಳು. “ಏನೂ ಚಿಂತೆಯಿಲ್ಲ, ಎಲ್ಲವೂ ಕಳೆಯುತ್ತದೆ. ನಾನು ನಿಮ್ಮನ್ನು ಬಿಡುವುದಿಲ್ಲ, ನಿಮ್ಮನ್ನೆಂದಿಗೂ ಬಿಡುವುದಿಲ್ಲ”. ಅವಳ ಕಂಗಳು, ಅವಳ ದೊಡ್ಡ ಆಳವಾದ ಕಂಗಳು ಸಸ್ನೇಹ ಮುಗುಳ್ನಗುವನ್ನು ಹೊರಸೂಸುತ್ತಿದ್ದವು.
ಎಲ್ಲಾ ಹದಿನೈದು ಮಂದಿಯನ್ನು ರಸ್ತೆ ಬದಿಗೆ ತರುವಷ್ಟರಲ್ಲಿ ಆ ಕಾರು ಬೂದಿಯ ಗುಡ್ಡೆಯಾಗಿ ಮಾರ್ಪಾಡಾಗಿತ್ತು. ಬೆಂಕಿ ಹತ್ತಿದ ತನ್ನ ಬಟ್ಟೆಗಳನ್ನು ಹರಿಯುತ್ತಾ ಸುಟ್ಟಗಾಯಗಳಿಂದ ಉಂಟಾದ ನೋವನ್ನು ಕಡೆಗಣಿಸಿ ಅವಳು ಓಡಿದಳು, ಬಡಬಡಿಸುತ್ತಾ ಆಸ್ಪತ್ರೆಯವರೆಗೆ; ಅಲ್ಲಿ ತಲುಪಿ ಏದುಸಿರಿನ ದನಿಯಲ್ಲೇ ಎಲ್ಲವನ್ನೂ ವಿವರಿಸಿ ಪ್ರಜ್ಞಾಶೂನ್ಯಳಾಗಿ ನೆಲಕ್ಕೊರಗಿದಳು.

ಆ ಹದಿನೈದು ಜನರನ್ನು ಉಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಹಳಷ್ಟು ಜನರಿಗೆ, ತಮ್ಮ ಜೀವ ಉಳಿಸಿದ ಯಾವ ಧೀರ ಹುಡುಗಿಗೆ ಚಿರಋಣಿಯಾಗಬೇಕಿತ್ತೋ ಅವಳ ಹೆಸರನ್ನು ಸಹ ತಿಳಿದುಕೊಳ್ಳಲಾಗಲಿಲ್ಲ. ಅವಳ ಹೆಸರು  ತಮರಾ ಕಾಲ್‍ನಿನಾ. ನೀನು, ಓದುಗ, ಈ ಹೆಸರನ್ನೆಂದಿಗೂ ಮರೆಯುವುದಿಲ್ಲ ಅಲ್ಲವೇ?
ಅವಳ ಗಾಯಗಳು ಮುಕ್ಕಾಲುಪಾಲು ಅವಳನ್ನು ಬಲಿ ತೆಗೆದುಕೊಳ್ಳುತ್ತವೇನೋ ಎಂಬಂತಿದ್ದವು. ಮರಣಾಸನ್ನ ಸ್ಥಿತಿಯಲ್ಲಿ ಅವಳನ್ನು ವಿಮಾನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಅವಳನ್ನು ಸಾವಿನ ದವಡೆಯಿಂದ ಹೊರಗೆಳೆದರು. ಅವಳು ಬದುಕುಳಿದಳು, ಅವಳುಳಿಸಿದ ಗಾಯಾಳುಗಳಂತೆ!
ಈ ಮಹಾನ್ ದೇಶಪ್ರೇಮಿ ಯುದ್ಧದ ನೆನಪಿನಲ್ಲಿ, ದೇಶದ ಪ್ರಸಿದ್ಧ ಶಿಲ್ಪಿಗಳು, ಸ್ಮಾರಕಗಳನ್ನು ಕಡೆಯುವಾಗ, ಪುಟ್ಟ ತಮರಾಳ ಶಿಲ್ಪವನ್ನೂ ಸಹ ಕಡೆಯುತ್ತಾರೆ. ಇಡೀ ನಾಡಿನಲ್ಲಿ ಪ್ರಸಿದ್ಧವಾಗಿರುವ ಗ್ಯಾಸ್‍ಟೆಲ್ಲೋ, ಮಾಮೆಡೊವ್, ಮುಂತಾದ ಧೀರ ವಿಮಾನ ಚಾಲಕರ, ಟ್ಯಾಂಕ್‍ಮೆನ್‍ಗಳ, ರೈಫೆಲ್‍ಮೆನ್‍ಗಳ ಪಕ್ಕದಲ್ಲಿ ಅವಳೂ ನಿಲ್ಲುತ್ತಾಳೆ.
ಉತ್ತರ-ಪಶ್ಚಿಮ ಫ್ರಂಟ್ ನ ಮಿಲಿಟರಿ ಕೌನ್ಸಿಲ್‍ನ ಆಜ್ಞೆಯ ಮೇರೆಗೆ ತಮರಾಗೆ “ಆರ್ಡರ್ ಆಫ್ ಲೆನಿನ್” ಪದಕವನ್ನು ನೀಡಲಾಯಿತು.
          - ಸುಧಾ ಜಿ

ಕವನ - ನಾವು ಪ್ರೇಮ ಭಿಕ್ಷೆ ಬೇಡುವುದಿಲ್ಲ



ನಿಮಗೆ
ಪರಂಪರೆಯಿಂದ ಬಂದದ್ದೆಷ್ಟು
ನೀವು ಗಳಿಸಿದ್ದೆಷ್ಟು?
ಖಾಲಿ ಬಿದ್ದ ಜಮೀನು!
ಮುಳ್ಳು ಬೇಲಿಯೊಳಗಿನ ತೋಟ!
ಪಾಳು ಬಿದ್ದ ಮನೆ!
ನಿಮ್ಮ ಮಹಲು!
ಬಾಡಿಗೆಗೆ ಬಿಟ್ಟಿರುವ ಮನೆಗಳು!
ಎಷ್ಟು ಕೇಜಿ ಬಂಗಾರವಿದೆ?
ಪಾಲಿನಲ್ಲಿ ಬಂದದ್ದು
ನೀವೇ ಸಂಪಾದಿಸಿದ್ದು!
ನಿಮ್ಮ ಕೈ ಕೊರಳು ಕಾಲುಗಳನ್ನು
ಚಿನ್ನದ ಸರಪಳಿಯಲ್ಲೇ
ಬಿಗಿದುಕೊಂಡಿದ್ದೀರಾ?
ಬಸ್ಸು..ಕಾರು..ಸ್ಕೂಟರು
ಮನೆಯ ತುಂಬಾ
ಆಳು ಕಾಳು
ಎಷ್ಟು ನಾಯಿಗಳಿವೆ
ಕಾಂಪೌಂಡಿನೊಳಗೆ!
ದೊಡ್ಡ ಪರದೆಯ ಟೀವಿ
ರೂಮುಗಳ ತುಂಬಾ
ಕಂಪ್ಯೂಟರುಗಳು
ಬೀರುವಿಗೂ ಮಿಕ್ಕ ಬಟ್ಟೆಗಳು!
ಪ್ರದರ್ಶನಕ್ಕಿಟ್ಟ ಪಾತ್ರೆ ಪರಿಕರಗಳು!
ಸ್ವಾಮಿ
ಲೆಕ್ಕ ಕೇಳುತ್ತಿಲ್ಲ ನಾವು!
ನಮಗೆ ಗೊತ್ತು
ನಿಮ್ಮ ಮಹಲಿನಲ್ಲಿ
ಗೋಡೆಗಳು ಬೆಳೆದಿವೆ!
ಅಲ್ಲೊಂದು ಮೂಲೆಯಲ್ಲಿ
ಅಮ್ಮ ಅನಾಥೆಯಾಗಿದ್ದಾಳೆ!
ಕಿಟಕಿಯ ಕಂಡಿಯಿಂದ
ಇಳಿಸಂಜೆಯಲ್ಲಿ ಸೂರ್ಯನನ್ನು
ಕಾಣುವ ಅಪ್ಪನ ಕಂಗಳಲ್ಲಿ ನೀರಿದೆ!
ಮಗ ದಾರಿ ತಪ್ಪಿದ್ದಾನೆ!
ಮಗಳು ಕಂಗಾಲಾಗಿದ್ದಾಳೆ
ಸಂಬಂಧಗಳಿಗೆ
'ನಾಯಿಗಳಿವೆ ಎಚ್ಚರಿಕೆ!'
ಫಲಕ  ಎದ್ದು ಕಾಣುತ್ತದೆ!!
ಗೊತ್ತು
ನೀವು ಚಿನ್ನವನ್ನೇನು ತಿನ್ನಲಾರಿರಿ!
ನಾವು ಕೇಳಿದ್ದು
ತುತ್ತು ಅನ್ನವಷ್ಟೆ
ಮುಖದ ತುಂಬ ಮುಳ್ಳುಕಂಟಿ
ಬೆಳೆದುಕೊಂಡವರಲ್ಲಿ
ಪ್ರೇಮ ಭಿಕ್ಷೆ ಬೇಡಲಾರೆವು!!
  ~ ರಂಗಮ್ಮ ಹೊದೇಕಲ್.

ಭಾರತ ಸ್ವಾತಂತ್ರ್ಯ ಸಂಗ್ರಾಮದ ಧ್ರುವತಾರೆ ಶಹೀದ್ ಭಗತ್‍ಸಿಂಗ್ – 6

(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ) 



ಭಗತ್‍ಸಿಂಗ್‍ರ ಬಲಿದಾನದ ಆಕಾಂಕ್ಷೆ

ಈ ಕಾರ್ಯಕ್ಕೆ ತಾವೇ ಹೋಗಬೇಕೆಂದು ಭಗತ್ ವಾದ ಮಾಡಿದರು. ಏಕೆಂದರೆ, ಕೋರ್ಟ್‍ನ ಕಟಕಟೆಯಲ್ಲಿ ನಿಂತು ತಮ್ಮ ಪಕ್ಷದ ವಿಚಾರಗಳ ಬಗ್ಗೆ ಸವಿಸ್ತಾರವಾಗಿ, ಸುಸ್ಪಷ್ಟವಾಗಿ ಮಂಡಿಸಬಹುದೆಂದು ಅವರ ಭಾವನೆ. ಅವರಿಗೆ ಹಿಂದಿ, ಉರ್ದು, ಪಂಜಾಬಿ ಮತ್ತು ಇಂಗ್ಲಿಷ್ ಭಾಷೆಗಳ ಅರಿವಿತ್ತು. ಅವರು ಆಳವಾಗಿ ಅಧ್ಯಯನ ಮಾಡಿದ್ದರಿಂದ ವಿಚಾರಗಳ ಬಗ್ಗೆ ಸ್ಪಷ್ಟತೆ ಇತ್ತು. ಆದರೆ ಪಕ್ಷದ ಇತರರು, ಮುಖ್ಯವಾಗಿ ಆಜಾದ್ ಇದಕ್ಕೆ ತಯಾರಿರಲ್ಲಿಲ್ಲ. ಈಗಾಗಲೇ ಪೊಲೀಸರು ಸ್ಯಾಂಡರ್ಸ್ ಕೊಲೆಯಲ್ಲಿ ಇವರನ್ನು ಹುಡುಕುತ್ತಿರುವುದರಿಂದ ಈಗ ಸಿಕ್ಕಿ ಬಿದ್ದರೆ ಗಲ್ಲುಶಿಕ್ಷೆ ಖಚಿತವೆಂಬುದು ಅವರ ಅಭಿಪ್ರಾಯವಾಗಿತ್ತು. ಬಾಂಬ್ ಸ್ಫೋಟದ ನಂತರ ತಪ್ಪಿಸಿಕೊಂಡು ಬರಲು ಒಪ್ಪಿಕೊಂಡರೆ ಕಳಿಸಿಕೊಡಬಹುದೆಂದು ಹೇಳಿದರು. ಆದರೆ ಭಗತ್‍ಸಿಂಗ್ ಅದಕ್ಕೆ ಸಿದ್ಧರಿರಲಿಲ್ಲ.  “ಈಗ ಬ್ರಿಟಿಷರೊಂದಿಗೆ ವಾದ ಮಾಡುವ ಸಮಯ ಬಂದಿದೆ. ಜನತೆಯ ಪ್ರಜ್ಞೆಯನ್ನು ಎಚ್ಚರಿಸುವ ಘಳಿಗೆ ಬಂದಿದೆ. ಆಳ್ವಿಕರನ್ನು ಧಿಕ್ಕರಿಸುವ ಘಟ್ಟ ಬಂದಿದೆ. ನ್ಯಾಯಾಲಯವನ್ನು ಬಳಸಿಕೊಂಡು ಕ್ರಾಂತಿಕಾರಿ ದೇಶಪ್ರೇಮಿ ವಿಚಾರಗಳನ್ನು ಪ್ರಚಾರ ಮಾಡುವ, ಆ ಮೂಲಕ ರಾಷ್ಟಪ್ರೇಮವನ್ನು ಜಾಗೃತಗೊಳಿಸುವ ಕಾಲ ಬಂದಿದೆ” ಎಂದರು. ತಮ್ಮ ಸಿದ್ಧಾಂತದ, ವಿಚಾರಗಳ ಅತ್ಯುತ್ತಮ ಪ್ರತಿಪಾದಕ ತಾನು ಎಂದು ಹೇಳಲು ಪ್ರಯತ್ನಿಸಿದರು. ಆದರೆ ಆಜಾದ್ ಖಚಿತವಾಗಿ ನಿರಾಕರಿಸಿದರು. 
ಆದರೆ ಸುಖದೇವ್ ಆಗ್ರಾಗೆ ತಲುಪಿದಾಗ ಈ ವಿಚಾರ ಕೇಳಿ ವ್ಯಥೆ ಪಟ್ಟರು. “ನಮ್ಮನ್ನು ಕೊಲೆಗಡುಕರೆಂದು ಬ್ರಿಟಿಷರು ಚಿತ್ರಿಸಿದ್ದಾರೆ. ಇಡೀ ದೇಶಕ್ಕೆ, ಇಡೀ ಪ್ರಪಂಚಕ್ಕೆ ಕ್ರಾಂತಿಯ ಬಗ್ಗೆ ನಮಗಿರುವ ನಂಬಿಕೆಯ ಬಗ್ಗೆ ತಿಳಿಯಬೇಕು. ನಾವು ಕೊಲೆಗಡುಕರಲ್ಲ, ಉಗ್ರಗಾಮಿಗಳಲ್ಲ, ನಾವು ಸ್ವಾತಂತ್ರ್ಯ ಯೋಧರು, ಸ್ವಾತಂತ್ರ್ಯಕ್ಕಾಗಿ ಎಂತಹ ಬಲಿದಾನಕ್ಕೂ ಸಿದ್ಧರು, ಎಂಬುದನ್ನು ಎಲ್ಲರೂ ಅರಿಯಬೇಕು. ಈ ಕೆಲಸ ಮಾಡಲು ಅತ್ಯಂತ ಯೋಗ್ಯ ವ್ಯಕ್ತಿ ಎಂದರೆ ಭಗತ್‍ಸಿಂಗ್” ಎಂದರು. ರಾಮ್‍ಶರಣ್‍ದಾಸ್‍ರ ಬದಲಿಗೆ ತಮ್ಮನ್ನು ನೇಮಿಸುವಂತೆ ಎಲ್ಲರ ಮನವೊಲಿಸಿದರು ಭಗತ್‍ಸಿಂಗ್. ಇದಾದ ನಂತರ ಆಜಾದ್‍ರಿಗೆ ಭಗತ್‍ಸಿಂಗ್‍ರ ದಿನಗಳು ಕೈಬೆರಳೆಣಿಕೆಯಷ್ಟು ಎಂಬುದು ಖಚಿತವಾಗಿಬಿಟ್ಟಿತು. ಮತ್ತೆಂದೂ ಭಗತ್‍ಸಿಂಗ್‍ರನ್ನು ಸ್ವತಂತ್ರ ವ್ಯಕ್ತಿಯನ್ನಾಗಿ ಕಾಣುವುದಿಲ್ಲವೆಂಬುದು ಅರ್ಥವಾಯಿತು. ಆದರೂ ಅವರ ಈ ತ್ಯಾಗ ಭಾರತದಲ್ಲಿ ಕ್ರಾಂತಿಗೆ ಭದ್ರ ಬುನಾದಿಯನ್ನು ಹಾಕಬಲ್ಲದು ಎಂಬುದು ಅವರ ನಂಬಿಕೆಯಾಗಿತ್ತು. ಹಾಗಾಗಿ ಎಷ್ಟೇ ನೋವಿದ್ದರೂ, ಪಕ್ಷದ ನಾಯಕನಾಗಿ ಈ ಕಾರ್ಯಕ್ಕೆ ಒಪ್ಪಿಗೆ ನೀಡಿದರು.

ಕಿವುಡರಿಗೆ ಕೇಳಿಸಲು ಜೋರು ದನಿ

1929ರ ಏಪ್ರಿಲ್ 8ರಂದು ವೈಸ್‍ರಾಯ್ ಇರ್ವಿನ್ ಎರಡೂ ಮಸೂದೆಗಳನ್ನು ಮಂಡಿಸಲು ತೀರ್ಮಾನಿಸಿದರು. ಏಪ್ರಿಲ್ 6ರಂದೇ ಭಗತ್‍ಸಿಂಗ್ ಮತ್ತು ಬಟುಕೇಶ್ವರ ದತ್‍ರವರು ಕೇಂದ್ರೀಯ ಶಾಸನ ಸಭೆಯ (ಅಸೆಂಬ್ಲಿ)  ಒಳಗೆ ಹೋಗಿ ನೋಡಿಕೊಂಡು ಬಂದಿದ್ದರು. ಏಕೆಂದರೆ ಬಾಂಬುಗಳನ್ನು ಯಾರೂ ಇಲ್ಲದ ಕಡೆ ಮತ್ತು ಯಾರಿಗೂ ಹಾನಿಯಾಗದ ರೀತಿಯಲ್ಲಿ ಹಾಕಬೇಕೆಂಬುದು ಅವರ ಉದ್ದೇಶವಾಗಿತ್ತು. 
ಏಪ್ರಿಲ್ 8ರ ಬೆಳಿಗ್ಗೆ ಭಗತ್ ಮತ್ತು ದತ್ ಇಬ್ಬರೂ ಹಸನ್ಮುಖರಾಗಿ ಮನೆಯಿಂದ ಹೊರಟಾಗ ಇತರ ಸಂಗಾತಿಗಳು ನೋವಿನಿಂದಲೇ ಇವರನ್ನು ಬೀಳ್ಕೊಟ್ಟರು. ಸಾವಿನ ದವಡೆಗೆ ಹೋಗುತ್ತಿದ್ದೇವೆಂದು ಅವರಿಬ್ಬರಿಗೆ ತಿಳಿದಿದ್ದರೂ ಅವರಲ್ಲಿ ಕಿಂಚಿತ್ತಾದರೂ ಭಯವಿರಲಿಲ್ಲ. ದೇಶಕ್ಕಾಗಿ ಬಲಿದಾನವಾಗಲು ಹೋಗುತ್ತಿದ್ದೇವೆಂಬ ಹೆಮ್ಮೆ ಸ್ಪಷ್ಟವಾಗಿ ಕಾಣುತಿತ್ತು. ಅವರು ಬೆಳಿಗ್ಗೆ 11 ಘಂಟೆಗೆ ವೀಕ್ಷಕರ ಗ್ಯಾಲರಿಯಲ್ಲಿ, ಮೊದಲೇ ನಿರ್ಧರಿಸಿದ್ದ ಜಾಗದಲ್ಲಿ ಬಂದು ಕುಳಿತರು. ಸದನದಲ್ಲಿ ಚರ್ಚೆ ಆರಂಭವಾಯಿತು. ಕೆಲವು ಸದಸ್ಯರು ಬ್ರಿಟಿಷರ ಏಜೆಂಟರಂತೆ ಮಸೂದೆಗಳನ್ನು ಜಾರಿಗೊಳಿಸಲೇಬೇಕೆಂದು ಆಗ್ರಹಿಸುತ್ತಿದ್ದುದನ್ನು ಕಂಡು ಇಬ್ಬರೂ ನಕ್ಕರು.

ಭಗತ್‍ಸಿಂಗ್‍ರಿಗೆ ಅವರ ಬಾಂಬುಗಳು ಮಸೂದೆಗಳು ಜಾರಿಯಾಗುವುದನ್ನು ತಡೆಯುವುದಿಲ್ಲ ಎಂದು ಖಚಿತವಾಗಿತ್ತು. ಏಕೆಂದರೆ ಅಸೆಂಬ್ಲಿಯಲ್ಲಿ ಅವು ಅಂಗೀಕೃತವಾಗದಿದ್ದರೂ ವೈಸ್‍ರಾಯ್ ತನಗಿದ್ದ ಅಸಾಮಾನ್ಯ ಅಧಿಕಾರವನ್ನು ಬಳಸಿ ಅವುಗಳನ್ನು ಜಾರಿಗೊಳಿಸಬಹುದಿತ್ತು. (ನಂತರದ ದಿನಗಳಲ್ಲಿ ಆ ಮಸೂದೆಗಳು ಜಾರಿಗೆ ಬಂದದ್ದು ಹಾಗೆ). “ಕಿವುಡರಿಗೆ ಕೇಳಿಸಲು ದೊಡ್ಡ ಶಬ್ದವಾಗಬೇಕು.” ಎಂದು ಸಾರಿದ ಫ್ರೆಂಚ್ ಕ್ರಾಂತಿಕಾರಿಯೊಬ್ಬರ ಮಾತಿನಂತೆ ಕಿವುಡು ಬ್ರಿಟಿಷ್ ಸರ್ಕಾರಕ್ಕೆ ಬಾಂಬ್ ಸ್ಫೋಟದ ಮೂಲಕ ಜನತೆಯ ಅಭಿಪ್ರಾಯವನ್ನು ಕೇಳಿಸುವುದು ಅವರ ಪ್ರಯತ್ನವಾಗಿತ್ತು.

ಮೊದಲ ಮಸೂದೆ – ಕಾರ್ಮಿಕರ ವಿರೋಧಿ ಮಸೂದೆ ಸದನದಲ್ಲಿ ಅಂಗೀಕೃತವಾಯಿತು. ಸಾರ್ವಜನಿಕ ರಕ್ಷಣಾ ಮಸೂದೆಗೆ ಅಧ್ಯಕ್ಷರಾದ ವಿಠ್ಠಲ್‍ಬಾಯಿ ಪಟೇಲ್‍ರವರು ಇನ್ನೂ ತಮ್ಮ ರೂಲಿಂಗ್ ನೀಡಿರಲಿಲ್ಲ. ಭಗತ್‍ರಿಗೆ ಅದೇ ಸರಿಯಾದ ಸಮಯ ಎನಿಸಿತು. ಒಂದು ಬಾಂಬನ್ನು ಜಾಗರೂಕತೆಯಿಂದ ಯಾರೂ ಕುಳಿತಿಲ್ಲದ ಕಡೆ ಒಗೆದರು. ಅದರ ಸ್ಫೋಟಕ್ಕೆ ಇಡೀ ಸದನ ಬೆಚ್ಚಿಬಿದ್ದಿತು. ಆಗ ದತ್ ಇನ್ನೊಂದು ಬಾಂಬನ್ನು ಒಗೆದರು. ಅಲ್ಲಿದ್ದ ಜನ ಭಯದಿಂದ ಹೊರಗೋಡಿದರು.



ಬಾಂಬ್‍ಗಳು ಭಾರಿ ಶಬ್ದವನ್ನು ಮಾಡಿದರೂ ಅವು ಯಾರಿಗೂ ಹೆಚ್ಚು ಹಾನಿಯನ್ನು ಮಾಡಲಿಲ್ಲ. ಹತ್ತಿರದಲ್ಲಿದ್ದ ಕೆಲವು ಬೆಂಚುಗಳು ಮುರಿದುಬಿದ್ದು, ಅವುಗಳ ಚೂರುಗಳು ನಾಲ್ಕೈದು ಜನರಿಗೆ ತಗುಲಿದ್ದವು. ಇಡೀ ಸದನ ಹೊಗೆಯಿಂದ ತುಂಬಿತ್ತು. ಭಗತ್ ಮತ್ತು ದತ್ ಇಬ್ಬರೂ ಆ ಗೊಂದಲದಲ್ಲಿ ಸುಲಭವಾಗಿ ತಪ್ಪಿಸಿಕೊಳ್ಳಬಹುದಿತ್ತು. ಆದರೆ ಅವರಿಬ್ಬರೂ ಹಾಗೆ ಮಾಡದೆ ಅಚಲವಾಗಿ ನಿಂತು “ಇಂಕ್ವಿಲಾಬ್ ಜಿಂದಾಬಾದ್”, “ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ದಿಕ್ಕಾರ”, ಎಂದು ಘೋಷಿಸಲಾರಂಭಿಸಿದರು. ತಮ್ಮ ಕೈಯಲ್ಲಿದ್ದ ಕರಪತ್ರಗಳನ್ನು ಸದನದಲ್ಲಿ ಎಲ್ಲೆಡೆ ತೂರಿದರು. ಹಿಂತಿರುಗಿ ಬಂದ ಸದಸ್ಯರು ಕರಪತ್ರವನ್ನು ಕೈಗೆ ಎತ್ತಿಕೊಂಡು, ಓದಲಾರಂಭಿಸಿದರು.

ಕರಪತ್ರದ ಸಾರಾಂಶ

“ಈ ಸಭೆಯನ್ನು ಭಾರತದ ಪಾರ್ಲಿಮೆಂಟ್ ಎಂದು ಕರೆಯುವುದೇ ನಾಚಿಕೆಗೇಡಿನ ಪ್ರಸಂಗ.  ಸರ್ಕಾರವು ಹೊಸ ದಮನಕಾರಿ ಕ್ರಮಗಳನ್ನು ನಮ್ಮ ಮೇಲೆ ಹೇರುತ್ತಿದೆ. ಸಾರ್ವಜನಿಕ ರಕ್ಷಣಾ ಕಾಯಿದೆ ಮತ್ತು ಕಾರ್ಮಿಕ ವಿವಾದಗಳ ಕಾಯಿದೆಗಳು ಅಂತಹವು. ಮುಂದಿನ ಅಧಿವೇಶನದಲ್ಲಿ ಪತ್ರಿಕಾ ಸ್ವಾತಂತ್ರ್ಯಹರಣದ ಕಾಯಿದೆಯನ್ನು ಮಂಡಿಸಲಾಗುತ್ತದೆ. ಕಾರ್ಮಿಕ ನಾಯಕರ ದಸ್ತಗಿರಿಯ ಅವಿವೇಕತನವನ್ನೂ ನಾವು ನೋಡಿದ್ದೇವೆ. ಈ ನಾಯಕರಾದರೋ ಬಹಿರಂಗವಾಗಿ ಕೆಲಸ ಮಾಡುತ್ತಿದ್ದಂತಹವರು. ಅವಮಾನಕರ ಪ್ರಹಸನಗಳು ಇನ್ನಾದರೂ ಕೊನೆಗೊಳ್ಳಲಿ ಎಂಬುದು ಇದರ ಹಿಂದಿನ ಆಶಯ. ಪರದೇಶಿ ಅಧಿಕಾರದ ಗುಂಗಿನಲ್ಲಿರುವ ಶೋಷಕರು ತಮ್ಮ ಮನಬಂದಂತೆ ನಡೆದುಕೊಳ್ಳಲಿ. ಆದರೆ ಹೀಗೆ ಮಾಡುವ ಅವರನ್ನು ಬೆತ್ತಲೆಯಾಗಿಸಿ ಸಾರ್ವಜನಿಕರ ಕಣ್ಣಿನೆದುರು ನಿಲ್ಲಿಸಬೇಕಾದ್ದು ಅಗತ್ಯವಾಗಿದೆ. 
“ಜನರ ಪ್ರತಿನಿಧಿಗಳು ತಮ್ಮ ತಮ್ಮ ಚುನಾವಣಾ ಕ್ಷೇತ್ರಗಳಿಗೆ ಹಿಂದಿರುಗಿ, ಬರಲಿರುವ ಕ್ರಾಂತಿಗೆ ಜನರನ್ನು ಸನ್ನದ್ಧಗೊಳಿಸಲಿ; ಮತ್ತು ಸರ್ಕಾರವು ಇದನ್ನು ತಿಳಿಯಲಿ: ಸಾರ್ವಜನಿಕ ರಕ್ಷಣಾ ಕಾಯಿದೆ, ಕಾರ್ಮಿಕ ವಿವಾದಗಳ ಕಾಯಿದೆ, ಲಾಲಾಲಜಪತ್‍ರಾಯ್ ಅವರ ಹೇಯವಾದ ಹತ್ಯೆ, ಇತ್ಯಾದಿಗಳ ವಿರುದ್ಧ ಅಸಹಾಯಕ ಭಾರತ ಜನಸಮುದಾಯದ ಪರವಾಗಿ ಪ್ರತಿಭಟನೆಯನ್ನು ಸಲ್ಲಿಸುತ್ತಿರುವ ಈ ಸಂದರ್ಭದಲ್ಲಿ ನಾವು ಒತ್ತಿ ಒತ್ತಿ ಹೇಳುತ್ತೇವೆ. ದೊಡ್ಡ ದೊಡ್ಡ ಸಾಮ್ರಾಜ್ಯಗಳು ಉರುಳಿಹೋದವು. ಆದರೆ ಭಾವನೆಗಳು ಚಿರನೂತನವಾಗಿ ಉಳಿದಿವೆ. . . ಮಾನವಜೀವಕ್ಕೆ ನಾವು ಅತ್ಯಂತ ಹೆಚ್ಚಿನ ಮಹತ್ವ ನೀಡುತ್ತೇವೆ, ಭವ್ಯ ಭವಿಷ್ಯದ ಕನಸನ್ನು ಕಾಣುತ್ತೇವೆ. ಆ ಭವಿಷ್ಯದಲ್ಲಿ ಮಾನವ ಸಂಪೂರ್ಣ ಶಾಂತಿ ಮತ್ತು ಸ್ವಾತಂತ್ರ್ಯಗಳನ್ನು ಅನುಭವಿಸುತ್ತಾನೆ. ಇಂತಹ ನಂಬಿಕೆಯುಳ್ಳ ನಾವು ಮಾನವನ ರಕ್ತ ಹರಿಸಬೇಕಾಗಿ ಬಂದುದಕ್ಕೆ ವ್ಯಥೆ ಪಡುತ್ತೇವೆ. ಆದರೆ ಸರ್ವರಿಗೂ ಸ್ವಾತಂತ್ರ್ಯವನ್ನು ದಕ್ಕಿಸಿಕೊಟ್ಟು ಮಾನವನಿಂದ ಮಾನವನ ಶೋಷಣೆಯನ್ನು ಅಸಾಧ್ಯವನ್ನಾಗಿಸುವ ಮಹಾನ್ ಕ್ರಾಂತಿಯ ಬಲಿಪೀಠದಲ್ಲಿ ಇದು ಅನಿವಾರ್ಯವಾಗಿದೆ. ಕ್ರಾಂತಿ ಚಿರಾಯುವಾಗಲಿ.” ಈ ಕರಪತ್ರ ಬ್ರಿಟಿಷರಿಗೆ ವಿರುದ್ಧವಾಗಿದ್ದರಿಂದ ತಕ್ಷಣವೇ ಎಲ್ಲವನ್ನು ಪೊಲೀಸರು ವಶಪಡಿಸಿಕೊಂಡರು. ಆದರೆ “ದಿ ಹಿಂದುಸ್ಥಾನ್ ಟೈಮ್ಸ್”ನ ವರದಿಗಾರನೊಬ್ಬ ಒಂದು ಕರಪತ್ರವನ್ನು ಸಂಪಾದಿಸಿ ಪತ್ರಿಕೆಯಲ್ಲಿ ಪ್ರಕಟಿಸಿದ.

ಧೀರರ ಬಂಧನ

ಘೋಷಣೆಗಳನ್ನು ಕೂಗುತ್ತಲೇ ಇದ್ದ ಆ ಇಬ್ಬರು ಯುವಕರನ್ನು ಬಂಧಿಸಲು ಪೊಲೀಸರು ಭಯದಿಂದ ಮುಂದೆ ಬರಲಿಲ್ಲ. ಆದರೆ ಅವರಿಬ್ಬರು ತಾವೇ ಸ್ವತಃ ಬಂಧನಕ್ಕೊಳಗಾದರು. ಈ ಘಟನೆಯಿಂದ ಬ್ರಿಟಿಷ್ ಸರ್ಕಾರ ಬೆಚ್ಚಿಬಿದ್ದಿತು. ಸ್ಯಾಂಡರ್ಸ್ ಕೊಲೆಯ ಆಘಾತದಿಂದಲೇ ಬಹುಶಃ ಸರ್ಕಾರವಿನ್ನೂ ಚೇತರಿಸಿಕೊಂಡಿರಲಿಲ್ಲ! ಇಡೀ ದೇಶ ಈ ಯುವಕರ ಸಾಹಸವನ್ನು ಕಂಡು ಹೆಮ್ಮೆ ಪಟ್ಟತು. ‘ಸಿಂಹದ ಗುಹೆಯಲ್ಲಿಯೇ ಅದರ ಹುಟ್ಟಡಗಿಸುವುದು’ ಎಂಬಂತೆ ಬ್ರಿಟಿಷರ ಸದನದಲ್ಲಿಯೇ ಬಾಂಬನ್ನು ಸ್ಫೋಟಿಸಿದ್ದು, ಜನತೆಗೆ ಮೆಚ್ಚುಗೆಯೆನಿಸಿತು. ಜನತೆ, ಮುಖ್ಯವಾಗಿ ಯುವಜನತೆ ಭಗತ್ ಮತ್ತು ದತ್‍ರ ಅಭಿಮಾನಿಗಳಾದರು. 



ವಿಚಾರಣೆಯ ನಾಟಕ

ಇಬ್ಬರ ಮೇಲೆಯೂ ಐ.ಪಿ.ಸಿ 307ನೆಯ ವಿಧಿಯ ಪ್ರಕಾರ ಹತ್ಯಾ ಪ್ರಯತ್ನದ ಆರೋಪವನ್ನು ಹೊರಿಸಲಾಯಿತು. 1929ರ ಮೇ 7ರಂದು ವಿಚಾರಣೆ ಆರಂಭವಾಯಿತು. ಬ್ರಿಟಿಷ್ ಜಡ್ಜ್ ಪಿ.ಬಿ ಪೂಲ್ ಮ್ಯಾಜಿಸ್ಟ್ರೇಟ್ ಆಗಿದ್ದರು. ಇಬ್ಬರನ್ನು ಕೋರ್ಟಿಗೆ ಹಾಜರುಪಡಿಸುತ್ತಿದ್ದಂತೆಯೇ ಇಬ್ಬರೂ “ಇಂಕ್ವಿಲಾಬ್ ಜಿಂದಾಬಾದ್”, “ಸಾಮ್ರಾಜ್ಯವಾದ ಮುರ್ದಾಬಾದ್” ಎಂದು ಘೋಷಿಸಿದರು. ಮ್ಯಾಜಿಸ್ಟ್ರೇಟ್ ಅವರಿಗೆ ಕೋಳವನ್ನು ಹಾಕಲು ಆದೇಶಿಸಿದರು. ಅಲ್ಲಿದ್ದ ಜನ ಆಶ್ಚರ್ಯಚಕಿತರಾದರು. ಕೋರ್ಟಿನಲ್ಲಿ ಕೋಳವನ್ನು ಹಾಕಬಾರದು ಎಂಬ ಸಾಮಾನ್ಯ ನಿಯಮವನ್ನು ಸಹ ಬ್ರಿಟಿಷ್ ಸರ್ಕಾರ ಉಲ್ಲಂಘಿಸುತ್ತದೆ ಎನ್ನುವುದಾದರೆ, ವಿಚಾರಣೆ ನಿಜಕ್ಕೂ ಸರಿಯಾಗಿ ನಡೆಯುತ್ತದೆಯೇ ಎಂಬ ಸಂದೇಹ ಎಲ್ಲರಲ್ಲೂ ಮೂಡಿತು. ಬ್ರಿಟಿಷ್ ಪೊಲೀಸರು ಹನ್ನೊಂದು ಜನ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿದ್ದರು. ಭಗತ್ ಮತ್ತು ದತ್ ಇಬ್ಬರೂ ಅಂದು ಯಾವುದೇ ಹೇಳಿಕೆಯನ್ನೂ ನೀಡಲಿಲ್ಲ. ಆದರೆ “ಸದನದಲ್ಲಿ ನಾವು ಗುಂಡು ಹಾರಿಸಲಿಲ್ಲ” ಎಂದು ಹೇಳಿದರು.

ನ್ಯಾಯಾಲಯದಲ್ಲಿ ಹೇಳಿಕೆ- ‘ರಕ್ಷಣಾ ಮಸೂದೆಗಳು ಭಾರತದ ಸ್ವಾತಂತ್ರ್ಯದ ಜ್ವಾಲೆಯನ್ನು ಆರಿಸಿಯಾವೆ?’
ಜೂನ್‍ನಲ್ಲಿ ಸೆಷನ್ಸ್ ಕೋರ್ಟಿನಲ್ಲಿ ಜಡ್ಜ್ ಲಿಯೋನಾರ್ಡ್ ಮಿಡ್ಲ್‍ಟನ್ ಮುಂದೆ ವಿಚಾರಣೆ ಆರಂಭವಾಯಿತು. ಈ ಹಂತದಲ್ಲಿ ಹೇಳಿಕೆ ನೀಡಲು ಸರಿಯಾದ ಸಮಯವೆನಿಸಿ ಭಗತ್‍ಸಿಂಗ್‍ರು ತಾವು ಬಾಂಬುಗಳನ್ನು ಹಾಕಲು ಕಾರಣಗಳನ್ನು ವಿವರಿಸಿ ಹೇಳಿಕೆಗಳನ್ನು ನೀಡಿದರು. ಅದರ ಸಂಕ್ಷಿಪ್ತ ರೂಪ ಇಲ್ಲಿದೆ- “ಇಂಗ್ಲೆಂಡ್‍ನ್ನು ಅದರ ಕನಸಿನಿಂದ ಎಚ್ಚರಿಸುವುದು ಅವಶ್ಯವಿತ್ತು. ತಮ್ಮ ಹೃದಯಾಂತರಾಳದ ನೋವನ್ನು ವ್ಯಕ್ತಪಡಿಸಲು ಬೇರಾವುದೇ ಮಾರ್ಗವಿಲ್ಲದ ಜನರ ಪರವಾಗಿ ನಾವು ನಮ್ಮ ಪ್ರತಿಭಟನೆಯನ್ನು ಸೂಚಿಸಲು ಈ ಸದನದಲ್ಲಿ ಬಾಂಬ್ ಹಾಕಿದ್ದೇವೆ. ಕಿವುಡರಿಗೆ ಕೇಳಿಸುವಂತೆ ಮಾಡುವುದು ಮತ್ತು ಮಾತು ಕೇಳದಿದ್ದವರಿಗೆ ಸೂಕ್ತವಾದ ಸಮಯದಲ್ಲಿ ಎಚ್ಚರ ನೀಡುವುದು ನಮ್ಮ ಉದ್ದೇಶವಾಗಿತ್ತು. 
ಸರ್ಕಾರವು ಹೊಸ ಹೊಸ ದಮನಕಾರಿ ನೀತಿಗಳನ್ನು ನಮ್ಮ ಮೇಲೆ ಹೇರುತ್ತಿದೆ. ಸಾರ್ವಜನಿಕ ರಕ್ಷಣಾ ಕಾಯಿದೆ, ಕಾರ್ಮಿಕ ವಿವಾದಗಳ ಕಾಯಿದೆ, ಲಾಲಾಲಜಪತ್ ರಾಯ್ರವರ ಹೇಯವಾದ ಹತ್ಯೆ ಇತ್ಯಾದಿಗಳ ವಿರುದ್ಧ ಅಸಹಾಯಕ ಭಾರತ ಜನ ಸಮುದಾಯದ ಪರವಾಗಿ ಪ್ರತಿಭಟನೆಯನ್ನು ಸಲ್ಲಿಸುತ್ತಿರುವ ಈ ಸಂದರ್ಭದಲ್ಲಿ ನಾವು ಒತ್ತಿ ಒತ್ತಿ ಹೇಳುತ್ತೇವೆ - ಹಲವು ವ್ಯಕ್ತಿಗಳನ್ನು ನೀವು ಸಾಯಿಸಬಹುದು ಆದರೆ ಅವರ ಭಾವನೆಗಳನ್ನು ನೀವು ಸಾಯಿಸಲಾರಿರಿ.. . . .
ನಾವು ಮಾನವ ಕುಲವನ್ನು ಪ್ರೀತಿಸುವಲ್ಲಿ ಯಾರಿಗೇನೂ ಕಡಿಮೆಯಿಲ್ಲ. ನಮಗೆ ಯಾವುದೇ ಒಬ್ಬ ವ್ಯಕ್ತಿಯ ಬಗ್ಗೆ ದ್ವೇಷವಿಲ್ಲ ಬದಲಿಗೆ ಮಾನವ ಜೀವ ಪವಿತ್ರವಾದದ್ದೆಂದು ಭಾವಿಸುತ್ತೇವೆ. ನಮ್ಮ ಈ ಹೋರಾಟ ಗುರು ಗೋವಿಂದ್ ಸಿಂಗ್, ಕೆಮಲ್ ಪಾಷ, ವಾಷಿಂಗ್ಟನ್, ಗ್ಯಾರಿಬಾಲ್ಡಿ ಮತ್ತು ಲೆನಿನ್‍ರ ವಿಚಾರಗಳಿಂದ ಸ್ಪೂರ್ತಿ ಪಡೆದಿದೆ. ವಿದೇಶಿ ಸರ್ಕಾರ ಮತ್ತು ಭಾರತದ ಸಾರ್ವಜನಿಕ ನಾಯಕರು ಈ ಚಳುವಳಿಗೆ ಕಣ್ಮುಚ್ಚಿ ಕುಳಿತಿದ್ದಾರೆಂದು ಅವರಿಗೆ ಎಚ್ಚರಿಕೆ ನೀಡಬೇಕಾಗಿರುವುದು ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ. . . . . .



ಗುರು ಗೋವಿಂದ ಸಿಂಗ್ 

 ಕೆಮಲ್ ಪಾಷಾ 

ಜಾರ್ಜ್ ವಾಷಿಂಗ್ಟನ್ 

ಗ್ಯಾರಿಬಾಲ್ಡಿ 

ಲೆನಿನ್ 

ಮಾನವ ಜೀವ ಎಲ್ಲಕ್ಕಿಂತ ಅಮೂಲ್ಯ ಎಂದು ಪುನರುಚ್ಛರಿಸುತ್ತಿದ್ದೇವೆ. ಇತರರಿಗೆ ಹಾನಿ ಮಾಡುವ ಬದಲು ಮನುಕುಲದ ಸೇವೆಯಲ್ಲಿ ನಮ್ಮ ಜೀವವನ್ನು ಬಲಿ ಕೊಡಲು ಇಚ್ಛಿಸುತ್ತೇವೆ. ನಾವು ಒಂದು ಇತಿಹಾಸದ ಪಾಠವನ್ನು ಒತ್ತಿ ಹೇಳಬೇಕೆಂದು ಇಚ್ಛಿಸಿದೆವು. ಕರಾಳ ಶಾಸನಗಳಿಂದ ದುರ್ಗಮವಾದ ಜೈಲುಗಳಿಂದ ಫ್ರಾನ್ಸಿನ ಕ್ರಾಂತಿಕಾರಿ ಚಳುವಳಿಯನ್ನು ತುಳಿಯಲು ಸಾಧ್ಯವಾಗಲಿಲ್ಲ. ನೇಣುಗಂಬಗಳು ಮತ್ತು ಸೈಬೀರಿಯಾದ ಗಣಿಗಳಲ್ಲಿನ ಕಠಿಣ ಸಜೆಗಳಿಂದ ರಷ್ಯಾದ ಕ್ರಾಂತಿಯನ್ನು ಅಡಗಿಸಲಾಗಲಿಲ್ಲ. ಸುಗ್ರೀವಾಜ್ಞೆಗಳು, ರಕ್ಷಣಾ ಮಸೂದೆಗಳು ಭಾರತದ ಸ್ವಾತಂತ್ರ್ಯದ ಜ್ವಾಲೆಯನ್ನು ಆರಿಸಿಯಾವೆ? ಪಿತೂರಿ ಮೊಕದ್ದಮೆಗಳನ್ನು ಹುಡುಕಿ ತೆಗೆಯುವುದರಿಂದ, ಹುಟ್ಟುಹಾಕುವುದರಿಂದ ಅಥವಾ ಮಹೋನ್ನತ ಆದರ್ಶವನ್ನು ಆಕಾಂಕ್ಷಿಸುತ್ತಿರುವ ಎಲ್ಲ ಯುವಕರನ್ನು ಸೆರೆಮನೆಗೆ ತಳ್ಳುವುದರಿಂದ ಕ್ರಾಂತಿಯ ಮುನ್ನಡೆಯನ್ನು ತಡೆಯಲಾಗುವುದಿಲ್ಲ.”  

ಈ ಹೇಳಿಕೆ ಭಗತ್‍ಸಿಂಗ್‍ರ ಕ್ರಾಂತಿಕಾರಿ ಪರಿಪಕ್ವತೆಯನ್ನು, ಅಗಾಧವಾದ ದೇಶಪ್ರೇಮವನ್ನು, ಜನತೆಯ ಬಗೆಗಿನ ಅಪಾರವಾದ ಕಾಳಜಿಯನ್ನು, ಮಾನವ ಜೀವನದ ಬಗೆಗಿನ ಗಾಢವಾದ ಪ್ರೀತಿಯನ್ನು, ಎಲ್ಲಕ್ಕೂ ಮಿಗಿಲಾಗಿ ಸ್ವಾತಂತ್ರ್ಯಕ್ಕಾಗಿ ಜೀವನವನ್ನರ್ಪಿಸಲು ಅವರ ಬಲಿದಾನದ ಉತ್ಸಾಹವನ್ನು ಎತ್ತಿ ತೋರಿಸುತ್ತದೆ.

(ಮುಂದುವರೆಯುತ್ತದೆ)
--ಸುಧಾ ಜಿ

ಸಾಹಿತ್ಯ ಸಂವಾದ - 1



ತಾಯ ಅಳಲು - ಕೆ ಎಸ್ ಗಿರಿಜಾ
                                                                        
ನಿನ್ನ ನಾ ಹಡೆದ ಮೇಲೆ
ನಿನ್ನ ಎಲ್ಲಾ ಬೇಕು ಬೇಡಗಳು
ನನ್ನದಾದವು
ನಿನ್ನ ನೋವು ನಲಿವಿನಲಿ
ಕಂಡೆ ನಾ ಸಂತೋಷವ
ನಿನ್ನ ಆಟ ಪಾಟಗಳಲಿ
ನನ್ನನ್ನೇ ನಾ ಮರೆತೆ
ನಿನ್ನ ತುಂಟಾಟದಲ್ಲಿ
ನನ್ನ ನಾ ಕಂಡುಕಂಡೆ
ನಿನ್ನ ಸೋಲು ಗೆಲುವಿನಲಿ
ನಿನ್ನ ಬೆನ್ನೆಲುಬಾದೆ ನಾ

ನೀ ಬೆಳೆದಂತೆ ಸ್ನೇಹಿತರು ಹತ್ತಿರವಾದರು
ನನ್ನ ಮಾತುಗಳು ಬೈಗುಳವಾದವು
ನನ್ನ ಹಿತನುಡಿಗಳು ಹಿಡಿಸದಾದವು
ನನ್ನ ಕೈ ಅಡುಗೆ ರುಚಿಸದಾಯಿತು
ನನ್ನ ಪ್ರೀತಿ ಸ್ನೇಹ ಬೇಡವಾಯಿತು

ನಾವಿಂದು ಇದ್ದರೂ  ಒಂದೇ ಸೂರಿನಡಿ ನಿರಂತರ
ಮನದಲಿ ಅದೆಷ್ಟು ಅಂತರ
ಹತ್ತಿರವಿದ್ದು ದೂರ ನಿಲ್ಲುವ ಪರಿಯ
ಏನೆಂದು ಹೇಳಲಿ?
ನಾ ಏನೆಂದು ಹೇಳಲಿ?
  
ಮೇಲ್ಕಂಡ ಪದ್ಯಕ್ಕೆ ಉತ್ತರವಾಗಿ  


ನಾ ನಿನ್ನ ಕಂದನೇ - ಸುಧಾ ಜಿ

ಬದಲಾಗಿದ್ದೇನೆ ನಾನೆಂದು
ಅನಿಸುತ್ತಿರುವುದು ನಿನಗೆ ಸಹಜವಮ್ಮ
ನಾ ನಿಜಕ್ಕೂ ಬದಲಾಗಿರುವೆನು.

ಆದರೆ, ಇಂದೂ ನಿನ್ನ
ಪ್ರೀತಿಯ ಕೈತುತ್ತು ಬೇಕು
ಅತ್ತಾಗ ಹೆಗಲು ಬೇಕು
ನಿದ್ರಿಸಲು ಮಡಿಲು ಬೇಕು
ಹೆಪ್ಪಿಟ್ಟ ನೋವುಗಳ ಹೊರಗಿಟ್ಟು
ಹಗುರಾಗಲು ನೀನೇ ಬೇಕು
ಖುಷಿಯಾದಾಗ ಹೇಳಿ ನಿನ್ನೊಟ್ಟು
ಆ ಮುಗ್ಧ ನಗುವ ನಾ ಕಾಣಬೇಕು.

ಕಾಲ ಬದಲಾಗಿರಬಹುದು ಅಮ್ಮ
ಗೆಳೆಯ ಗೆಳತಿಯರು ಇದ್ದಾರಮ್ಮ
ನನ್ನ ಜಗತ್ತೂ ವಿಸ್ತಾರವಾಗಿದೆ
ಹಲಕಾಲ ಕಳೆದಿದೆ ನಿನ್ನೊಂದಿಗಿರದೆ
ಆಗಾಗ ಸಿಡಿಮಿಡಿಗೊಳ್ಳುತ್ತೇನೆ
ಮಾತನಾಡದೆ ಮೌನವಾಗಿರುತ್ತೇನೆ
ನಮ್ಮ ಹುಡುಗಾಟದ ಮಾತುಗಳು
ನಿನಗೆ ಹಿಡಿಸದಿರಬಹುದೆಂದು
ನಮ್ಮ ಬೇಸರ ನೋವುಗಳು
ನಿನ್ನಲ್ಲಿ ಕಂಬನಿಯ ತರಿಸಬಹುದೆಂದು

ನಾನು ಬದಲಾಗಿದ್ದೇನೆ ನಿಜ!
ಅಮ್ಮನ ಸೆರಗನ್ನೇ ಬಿಡದ ಆ ಕಂದನೆಲ್ಲಿ
ಸ್ವತಂತ್ರವಾಗಿ ಓಡಾಡುತಿಹ ಈ ಮಗನೆಲ್ಲಿ?
ಆದರೂ ಅಮ್ಮ ಒಂದಂತೂ ಖಚಿತ
ಅಂದು, ಇಂದು, ಎಂದೆಂದೂ
ನಾ ನಿನ್ನ ಪುಟ್ಟ ಕಂದನೇ!!!