Pages

ಕಥೆ - ಒಂದು ಹನಿ ಪ್ರೀತಿ



ಪ್ರೀತಿಯನ್ನು ಹೇಗೆ ಸಂಭಾಳಿಸುವುದು? ಈ ಪ್ರಶ್ನೆ ಕವಿತಾಳ ಮುಂದೆ ಬೃಹದಾಕಾರವಾಗಿ ನಿಂತುಬಿಟ್ಟಿತು.

ಅಷ್ಟು ಮುದ್ದಾದ ಮಗು, ಅಮ್ಮನ ಬಗ್ಗೆ ಅತೀವ ಪ್ರೀತಿಯಿದ್ದ ಮಗು ಏಕಾಏಕಿ ರೆಬೆಲ್ ಆಗಿ ನಿಂತುಬಿಟ್ಟಿದ್ದಳು. ಅಮ್ಮನ ಯಾವ ಮಾತನ್ನೂ ಕೇಳದಂತಾಗಿದ್ದಳು. ಇವಳು ನನ್ನ ಮಗಳೇನಾ ಎಂದು ಕವಿತಾ ಅಂದುಕೊಳ್ಳುವಷ್ಟು ಪ್ರೀತಿ ಬದಲಾಗಿಬಿಟ್ಟಿದ್ದಳು.

ಕವಿತ ಒಚಿಟಿ ತಾಯಿ. ಕುಡುಕ ಗಂಡನ ಜೊತೆ ಏಗಲಾಗದೆ, ದಿನನಿತ್ಯ ಅವನ ಕೆಟ್ಟ ಮಾತುಗಳು, ಏಟುಗಳನ್ನು ಸಹಿಸಕೊಳ್ಳಲಾಗದೆ, ಅಪ್ಪ ಅಮ್ಮ ಏನು ಹೇಳಿದರೂ ಕೇಳಿಸಿಕೊಳ್ಳದೆ 10 ವರ್ಷದ ಮಗಳೊಂದಿಗೆ ಹೊರಬಂದಿದ್ದಳು. ಕುಟುಂಬದವರ ನೆರವಿಲ್ಲದೆ ಕೆಲವು ಗೆಳತಿಯರ ನೆರವಿನೊಂದಿಗೆ ಟೈಲರಿಂಗ್ ಕಲಿತು ಕೇವಲ ಐದು ವರ್ಷಗಳ ಅವಧಿಯಲ್ಲಿಯೇ 15 ಜನರನ್ನು ಕೆಲಸಕ್ಕಿಟ್ಟುಕೊಂಡು ಒಂದು ಸಣ್ಣ ಗಾರ್ಮೆಂಟ್ಸ್ ಆರಂಭಿಸಿದ್ದಳು. ಒಳ್ಳೆಯ ಆದಾಯವಿತ್ತು.

ಮಗಳಿಗೆ ತಂದೆಯ ಕೊರತೆ ಗೊತ್ತಾಗಬಾರದೆಂದು ಕೇಳಿದ್ದನ್ನೆಲ್ಲವನ್ನೂ ತೆಗೆದುಕೊಟ್ಟಳು. ಒಳ್ಳೆಯ ಶಾಲೆಗೆ ಸೇರಿಸಿದಳು. ಸ್ಕೇಟಿಂಗ್, ಡ್ಯಾನ್ಸ್ ಹೀಗೆ ಏನು ಕೇಳಿದರೂ ಇಲ್ಲವೆನ್ನಲಿಲ್ಲ. ಪ್ರೀತಿ ಕೂಡ ತಾಯಿಯ ಪ್ರೀತಿಯನ್ನೇನೂ ದುರುಪಯೋಗಪಡಿಸಿಕೊಂಡಿರಲಿಲ್ಲ. ಚೆನ್ನಾಗಿ ಓದುತ್ತಿದ್ದಳು, ಸ್ನೇಹಿತೆಯರೊಂದಿಗೆ ಚೆನ್ನಾಗಿದ್ದಳು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಂಡಿದ್ದಳು, ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಂಡಿದ್ದಳು. ಹಾಗಾಗಿ ಕವಿತಾಳಿಗೆ ಯಾವುದೇ ಟೆನ್ಷನ್ ಇರಲಿಲ್ಲ.

ಪ್ರೀತಿಯ ಸಹಾಯ ಮಾಡುವ ಗುಣದಿಂದಾಗಿಯೇ ಕವಿತಾಳ ತಂದೆ- ತಾಯಿ ಮತ್ತೆ ಹತ್ತಿರವಾಗಿದ್ದರು. ಒಮ್ಮೆ ಕವಿತಾಳ ಅಮ್ಮನಿಗೆ ತುಂಬಾ ಹುಷಾರಿಲ್ಲದೆ ಆಸ್ಪತ್ರೆಯಲ್ಲಿದ್ದಾಗ 3 ದಿನ ಇವಳೇ ಅಲ್ಲಿದ್ದು ನೋಡಿಕೊಂಡಿದ್ದಳು. ಹತ್ತನೆಯ ತರಗತಿಯ ಪರೀಕ್ಷೆಗಳು ಹತ್ತಿರವಿದ್ದರೂ ಅವರ ಮನೆಗೆ ಹೋಗಿ ಒಂದು ವಾರ ನೋಡಿಕೊಂಡಿದ್ದಳು. ಅಪ್ಪ ಅಮ್ಮನಿಗೆ ಅವಳ ಬಗ್ಗೆ ಸಾಕಷ್ಟು ಪ್ರೀತಿ ಬೆಳೆದಿತ್ತು. ಆಗಾಗ ಅವಳನ್ನು ನೋಡುವ ನೆಪದಲ್ಲಿ ಮಗಳ ಮನೆಗೆ ಹೋಗಲಾರಂಭಿಸಿದ್ದರು. ಮೊಮ್ಮಗಳ ಹಠಕ್ಕೆ ಮಣಿದು ಉಳಿದುಕೊಳ್ಳುತ್ತಿದ್ದರು.

ಒಂದು ವರ್ಷದಿಂದೀಚೆಗೆ ಕವಿತಾ ಗಾರ್ಮೆಂಟ್ಸ್ ನಲ್ಲಿ ಹೆಚ್ಚು ತೊಡಗಿಸಿಕೊಂಡುಬಿಟ್ಟಿದ್ದಳು. ಅಮ್ಮ, ಅಪ್ಪ ಮನೆಯಲ್ಲಿಯೇ ಇದ್ದುದ್ದರಿಂದ ಪ್ರೀತಿಯ ಬಗ್ಗೆ ಹೆಚ್ಚು ಗಮನ ನೀಡಿರಲಿಲ್ಲ.

ಅಮ್ಮ ಒಮ್ಮೆ “ಕವಿತಾ, ಇತ್ತೀಚೆಗೆ ಪ್ರೀತಿ ಬಹಳ ಬದಲಾಗುತ್ತಿದ್ದಾಳೆ ಅನಿಸುತ್ತಿದೆ” ಎಂದಾಗ “ಅಯ್ಯೊ, ಬಿಡಮ್ಮ, ಕಾಲೇಜಿಗೆ ಸೇರಿದ್ದಾಳಲ್ಲ, ನಮಗೆ ಹಾಗನಿಸುತ್ತದೆ” ಎಂದು ತೇಲಿಸಿಬಿಟ್ಟಿದ್ದಳು. ಹಾಗೆಯೇ ಆರು ತಿಂಗಳು ಕಳೆದುಹೋದವು. ಮಗಳು ಮೊದಲಿನಂತಿಲ್ಲ ಅನಿಸಿದರೂ ಬಿಸಿನೆಸ್ ನಲ್ಲಿ ಮುಳುಗಿಹೋದ್ದರಿಂದ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ.

ಆದರೆ ತಾಯಿ “ನೀನು ಅವಳನ್ನು ಕೇಳು. ಸರಿಯಾಗಿ ಊಟ ಮಾಡುತ್ತಿಲ್ಲ, ಯಾವಾಗಲೂ ಒಬ್ಬಳೇ ಇರುತ್ತಾಳೆ. ಅವಳ ರೂಮಿಗೆ ಯಾರನ್ನೂ ಸೇರಿಸುತ್ತಿಲ್ಲ. ಆದರೆ ಇತ್ತೀಚೆಗೆ ಬಟ್ಟೆ ಒಗೆಯಲು ಹಾಕಬೇಕೆಂದುಕೊಂಡು ಅವಳ ರೂಮಿಗೆ ಹೋದಾಗ ಕೆಟ್ಟ ವಾಸನೆ ಬರುತ್ತಿತ್ತು” ಎಂದರು.

“ಅಯ್ಯೊ, ಅಷ್ಟು ತಲೆ ಕೆಡಿಸಿಕೊಳ್ಳಬೇಡಮ್ಮ. ಸ್ವಲ್ಪ ಸೋಮಾರಿಯಾಗಿದ್ದಾಳೆ ಅನಿಸುತ್ತೆ. ಎರಡು ಮೂರು ದಿನ ಸ್ನಾನ ಮಾಡಿರೋಲ್ಲ, ಸೆಂಟ್ ಹಾಕ್ಕೊಂಡಿರ್ತಾಳೆ. ಜೊತೆಗೆ ಎಲ್ಲಾ ಗಲೀಜು ಬಟ್ಟೆ, ಶೂಸ್ ಅಲ್ಲೇ ಇಟ್ಟಿದ್ದಾಳೆ ಅನಿಸುತ್ತೆ” ಎಂದುಬಿಟ್ಟಳು.

ಅದಾದ ಮೂರು ತಿಂಗಳಿಗೆ ಅಮ್ಮ ಒಂದು ಬಾಟಲ್ ತಂದುಕೊಟ್ಟು “ಇದೇನು ನೋಡು, ಇದೇ ವಾಸನೆ ಬರ್ತಾ ಇರೋದು” ಎಂದರು.

ಸ್ಥಂಭೀಭೂತಳಾದಳು ಕವಿತಾ. ಹೆಂಡದ ಬಾಟಲ್ ಆಗಿತ್ತದು. ಒಂದು ಘಳಿಗೆ ತನ್ನ ಕಣ್ಣನ್ನೇ ತಾನು ನಂಬದಾದಳು. ಹಾಗೆಯೇ ಸೋಫಾದ ಮೇಲೆ ಕುಸಿದು ಕುಳಿತಳು. ತನ್ನನ್ನು ತಾನು ಸಂಭಾಳಿಸಿಕೊಂಡು ಸಂಜೆ ಮಗಳೊಂದಿಗೆ ಮಾತನಾಡಲು ನಿರ್ಧರಿಸಿದಳು.

ಪ್ರೀತಿ ರಾತ್ರಿ 9ಕ್ಕೆ ಮನೆಗೆ ಬಂದಳು. “ಎಲ್ಲಿಗೆ ಹೋಗಿದ್ದೆ ಇಷ್ಟೊತ್ತಿನವರೆಗೆ?”

“ಎಲ್ಲಾ ಫ್ರೆಂಡ್ಸ್ ಸೇರಿದ್ದರು, ಪಾರ್ಟಿ ಇತ್ತು, ಹೋಗಿದ್ದೆ.”

ಅವಳು ಉತ್ತರಿಸುತ್ತಿದ್ದ ರೀತಿ, ನಿಂತಿದ್ದ ರೀತಿ ನೋಡಿದ ತಕ್ಷಣವೇ ಕವಿತಾಳಿಗೆ ಮಗಳ ಸ್ಥಿತಿ ಅರ್ಥವಾಯಿತು. “ನಾಳೆ ಮಾತಾಡೋಣ, ಈಗ ಹೋಗಿ ಮಲಗಿಕೊ” ಎಂದಳು. ಪ್ರೀತಿ ಮತ್ತೇನೂ ಮಾತನಾಡದೆ ಒಳಹೋದಳು.

ಅಳುತ್ತಿದ್ದ ಅಮ್ಮನಿಗೆ ಧೈರ್ಯ ತುಂಬಿದರೂ ಮನಸ್ಸಿನಲ್ಲಿ ‘ಇದೇನಾಗಿ ಹೋಯಿತು’ ಎಂಬ ಪ್ರಶ್ನೆ ಮೂಡಿತು.

ಬೆಳಿಗ್ಗೆ ಮಾತನಾಡಬೇಕಾದರೆ ಅವಳಿಗೆ ಅರ್ಥವಾದದ್ದಿಷ್ಟು. ಪ್ರೀತಿಗೆ ಅಮ್ಮ ತನ್ನನ್ನು ಪ್ರೀತಿಸುವುದಿಲ್ಲ, ಅದಕ್ಕೆ ಸಮಯ ಕೊಡುತ್ತಿಲ್ಲ ಎಂಬ ಭಾವನೆ ಬೆಳೆದುಬಿಟ್ಟಿತ್ತು. ಜೊತೆಗೆ ಅಮ್ಮ ಗಾರ್ಮೆಂಟ್ಸ್ ನ ಮ್ಯಾನೇಜರ್ ಜೊತೆ ಓಡಾಡುತ್ತಿದ್ದುದ್ದನ್ನು ತಪ್ಪಾಗಿ ತಿಳಿದಿದ್ದಳು. ಇದೆಲ್ಲವನ್ನೂ ಅವಳ ತಲೆಯಲ್ಲಿ ತುಂಬಿದ್ದು ಮಾಜಿ ಗಂಡ ಎಂದು ತಿಳಿಯಿತು. ಇದರೊಂದಿಗೆ ಅಜ್ಜಿ ತಾತನ ಜೊತೆಗೆ ಸಹ ತುಂಬಾ ಬಾಂಧವ್ಯ ಇರದಿದ್ದರಿಂದ ಪ್ರೀತಿ ಯಾರೊಂದಿಗೂ ತನ್ನ ಸಮಸ್ಯೆಯನ್ನು ಹೇಳಿಕೊಂಡಿರಲಿಲ್ಲ.

ಕೋಪ ತಡೆಯಲಾಗದೆ ಮಗಳ ಮೇಲೆ ಕೈಮಾಡಿಬಿಟ್ಟಳು. “ನಾನು ನಿನಗೆ ಏನು ಕಡಿಮೆ ಮಾಡಿದ್ದೆ? ನಿನಗೆ ಎಲ್ಲವನ್ನೂ ಕೊಡಲೋಸ್ಕರ ನಾನು ಹಗಳಿರುಳೂ ಕೆಲಸ ಮಾಡುತ್ತಿದ್ದರೆ, ಮ್ಯಾನೇಜರ್ ಜೊತೆ ಸಂಬಂಧ ಕಟ್ಟುತ್ತೀಯಾ? ಏನಾಗಿದೆ ನಿನಗೆ?” ಪ್ರಶ್ನಿಸಿದಳು.

“ನೀನೆಲ್ಲವನ್ನೂ ಕೊಟ್ಟಿದ್ದೀಯ, ಆದರೆ ಅಷ್ಟು ಮಾತ್ರ ಸಾಕಾ? ನೀನು ನನ್ನ ಜೊತೆ ಮಾತನಾಡಿ ಎಷ್ಟು ದಿನವಾಯಿತು? ಊಟ ತಿನಿಸಿ ಎಷ್ಟು ದಿನವಾಯಿತು? ನನ್ನ ಜೊತೆ ಮಲಗಿ ಎಷ್ಟು ದಿನವಾಯಿತು? . . . . . ಹೀಗೆ ಪ್ರಶ್ನಿಸುತ್ತಾ ಪ್ರೀತಿಯ ಕೋಪ ತಾರಕಕ್ಕೇರಿ ಅಳಲಾರಂಭಿಸಿದಳು. ಸ್ವಲ್ಪ ಹೊತ್ತು ಅತ್ತಾದ ಮೇಲೆ “ನನಗೆ ನೀನು ಬೇಡ. ನನಗೆ ಹೇಗೆ ಬೇಕೊ ಹಾಗಿರ್ತೀನಿ. ನೀನು ಬೇಡ ಎಂದರೆ ನಿನ್ನನ್ನು ಬಿಟ್ಟು ನಮ್ಮಪ್ಪನ ಮನೆಗೆ ಹೋಗ್ತೀನಿ. ಅವರೂ ಬೇಡ ಎಂದರೆ ಎಲ್ಲಾದರೂ ಹಾಳಾಗ್ ಹೋಗ್ತೀನಿ” ಎಂದವಳೇ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡುಬಿಟ್ಟಳು.

ಗರಬಡಿದಂತೆ ಕುಳಿತುಬಿಟ್ಟಳು ಕವಿತಾ. ತನ್ನ ಕಿವಿಯನ್ನು ತಾನೇ ನಂಬಲಾರದಾದಳು. ‘ನನ್ನ ಪ್ರೀತಿಯ ಹುಡುಗಿ ಈ ರೀತಿ ಮಾತನಾಡಲು ಸಾಧ್ಯವೇ?’ ಅನಿಸಿತು. ಏನೂ ತೋಚದೆ ಆತ್ಮೀಯ ಗೆಳತಿಗೆ ಫೋನ್ ಮಾಡಿದಳು. ಅವಳು ಎಲ್ಲವನ್ನೂ ಕೇಳಿಕೊಂಡ ಮೇಲೆ “ತಕ್ಷಣವೇ ಡಿ ಅಡಿಕ್ಷನ್ ಸೆಂಟರ್ ಗೆ ಸೇರಿಸೋಣ, ಮಧ್ಯಾಹ್ನ ಬರುತ್ತೇನೆ. ಗೊತ್ತಿರುವ ಜಾಗದಲ್ಲಿ ವಿಚಾರಿಸೋಣ” ಎಂದಳು.

ಇಬ್ಬರೂ ಬಹಳಷ್ಟು ಕಡೆಗಳಲ್ಲಿ ವಿಚಾರಿಸಿದರು. ಎಲ್ಲೂ ಅವರಿಗೆ ಸಮಾಧಾನವಾಗಲಿಲ್ಲ. ಕೆಲವೆಡೆ ಬಹಳ ಕ್ರೂರವಾದ ಚಿಕಿತ್ಸೆ ಎನಿಸಿದರೆ ಇನ್ನೂ ಕೆಲವೆಡೆ ಬಹಳ ಗಲೀಜಾಗಿತ್ತು. ಎಲ್ಲಾ ನೋಡಿ ಕೊನೆಗೆ ಒಂದು ಸೆಂಟರ್ ಗೆ ಹೋಗಿ ಮಾತನಾಡುತ್ತಿದ್ದಾಗ, ಅಲ್ಲಿ ಪರವಾಗಿಲ್ಲ ಎನಿಸಿ, ಅಲ್ಲಿಂದ ಹೊರಟರು. ಆಗಲೇ ಕವಿತಾಳ ಕಿವಿಗೆ ಒಂದು ಹುಡುಗಿಯ

ಆರ್ತನಾದ ಕಿವಿಗೆ ಬಿದ್ದಿತು “ನನಗೊಂದು ಹನಿ ಪ್ರೀತಿ ಕೊಡಿ, ನನಗೊಂದು ಹನಿ ಪ್ರೀತಿ ಕೊಡಿ.” ಗಕ್ಕನೆ ನಿಂತುಬಿಟ್ಟಳು ಕವಿತಾ.

ಪ್ರೀತಿ ಸಹ “ನನಗೆ ನಿನ್ನ ಪ್ರೀತಿ ಸಿಗುತ್ತಿಲ್ಲ” ಎಂದಿದ್ದಳು. ಅಂದರೆ ಪ್ರೀತಿಗೆ ಸಮಸ್ಯೆ ಬಂದಿರುವುದು ಪ್ರೀತಿಯ ಕೊರತೆಯಿಂದಾಗಿ. ಮನೆಯಲ್ಲಿ ಸಿಗದ ಪ್ರೀತಿಯನ್ನು ಹೊರಗಡೆ ಅರಸಿದ್ದಳು. ಸಿಕ್ಕ ಸ್ನೇಹಿತರು ಇಂತಹವರೇ ಆಗಿದ್ದರಿಂದ ಕುಡಿತದ ಅಭ್ಯಾಸವಾಗಿಬಿಟ್ಟಿತ್ತು, ಕುಡಿಯುತ್ತಾ ತನ್ನ ನೋವನ್ನು ಮರೆಯಲೆತ್ನಿಸಿದ್ದಳು.

ಹಾಗಿದ್ದರೆ ಈ ಅಂಶ ಸರಿಯೆನಿಸಿತು. ಮಗಳು ಬದಲಾಗುವುದಾದರೆ ಒಂದು ಹನಿ ಏಕೆ, ತಾಯಿಯೆದೆಯಲ್ಲಿರುವ ಸಾಗರದಷ್ಟು ಪ್ರೀತಿಯನ್ನೂ ಅರ್ಪಿಸಲು ಸಿದ್ಧಳಿದ್ದಳಾಕೆ. ಯಾಕೆ ಪ್ರಯತ್ನಿಸಬಾರದೆನಿಸಿತು.

ರಾತ್ರಿ ಪ್ರೀತಿಯ ರೂಮಿಗೆ ಊಟವನ್ನು ತೆಗೆದುಕೊಂಡು ಹೋದಳು. ಮಲಗಿದ್ದ ಮಗಳ, ಕೆನ್ನೆ ನೇವರಿಸಿದಳು. ಬೆಚ್ಚಿ ಬಿದ್ದು ಎದ್ದ ಪ್ರೀತಿ ಆಶ್ಚರ್ಯದಿಂದ ತಾಯಿಯನ್ನೇ ನೋಡಿದಳು. “ಪುಟ್ಟಾ, ನೇರವಾಗಿ ವಿಷಯಕ್ಕೆ ಬರುತ್ತಿದ್ದೇನೆ. ನನ್ನಿಂದ ತಪ್ಪಾಗಿದೆ, ನಾನು ಸರಿಪಡಿಸಿಕೊಳ್ಳಲು ಸಿದ್ಧಳಿದ್ದೇನೆ, ಇದು ನಮ್ಮಿಬ್ಬರಿಗೂ ಪರೀಕ್ಷೆ, ಇಬ್ಬರೂ ಒಟ್ಟಿಗೆ ಪರೀಕ್ಷೆ ಎದುರಿಸಿ ಪಾಸಾಗೋಣ. ನಿನ್ನ ಜೊತೆ ನಾನಿರ್ತೀನಿ, ನನ್ನ ಜೊತೆ ನೀನಿರ್ತೀಯಾ?” ಕೇಳಿದಳು.

ಪ್ರೀತಿ ಉತ್ತರವನ್ನೇನೂ ಕೊಡದೆ ಮೌನವಾಗಿ ಅಮ್ಮನ್ನನ್ನೇ ದಿಟ್ಟಿಸಿದಳು. ‘ಬಾ’ ಎನ್ನುವಂತೆ ಕರೆದ ತಾಯಿ ತೋಳಿಗೆ ಬರಲು ಮುಂದೆ ಬಂದವಳು ಹಾಗೆಯೇ ನಿಂತುಬಿಟ್ಟಳು. ಕವಿತಾಳೇ ಮುಂದೆ ಹೋಗಿ ಪ್ರೀತಿಯನ್ನು ತಬ್ಬಿಕೊಂಡುಬಿಟ್ಟಳು. ತಕ್ಷಣವೇ ಪ್ರೀತಿ ಗಟ್ಟಿಯಾಗಿ ಅಮ್ಮನನ್ನು ಅಪ್ಪಿಕೊಂಡು ಜೋರಾಗಿ ಅಳಲಾರಂಭಿಸಿದಳು. ಕವಿತಾಳ ಕಣ್ಣುಗಳಿಂದಲೂ ಕಣ್ಣೀರು ಹರಿಯುತ್ತಿತ್ತು. ತಾಯಿ – ಮಗಳು ಹಾಗೆಯೇ ಅಪ್ಪಿಕೊಂಡು ಇಡೀ ರಾತ್ರಿಯನ್ನು ಕಳೆದರು.

6 ತಿಂಗಳಾದ ನಂತರ ಪ್ರೀತಿ ಕಾಲೇಜಿಗೆ ಹೋಗುತ್ತಾ “ಅಮ್ಮ, ಇಂದು ತಡವಾಗಿ ಬರ್ತೀನಿ. ಸುಜಾತಳ ಮನೆಗೆ ಹೋಗುತ್ತಿದ್ದೇನೆ” ಎಂದಳು.

“ಏನು ವಿಶೇಷ?”

“ಅವಳಿಗೂ ಒಂದು ಹನಿ ಪ್ರೀತಿ ಬೇಕಂತೆ” ಕಣ್ಣುಮಿಟುಕಿಸುತ್ತಾ ನುಡಿದಳು ಪ್ರೀತಿ. ಕವಿತಾಳ ಮೊಗದಲ್ಲಿ ನಗು ಅರಳಿತು!!

-  ಸುಧಾ ಜಿ


ಚಕಮಕಿ - ಮೊದಲ ಕ್ರಷ್

 
ಮೊದಲ ಕರು ಪ್ರೀತಿಯಂತೆ. ಮೊದಲ ಕ್ರಷ್. 
ಅಯ್ಯೊ ಯಾವುದನ್ನ ಅಂತ ಹೇಳೋದು? ಕ್ರಷ್ ಆಗದೆ ಯಾವುದು ಇಷ್ಟವಾದದ್ದೇ ಇಲ್ಲ. ಇಷ್ಟವಾದದ್ದು ಇಂದಿಗು ನನ್ನಿಂದ ಯಾವುದು ದೂರವಾಗಿಯೇ ಇಲ್ಲ.
ಅದು ವ್ಯಕ್ತಿ, ವಸ್ತು, ಭಾವ, ಪ್ರದೇಶ, ಚಿಂತನೆ, ಘಟನೆ, ಓದಿದ ಕಲ್ಪನೆ, ಯಾಕೋ ಕಾರಣವೇ ಇಲ್ಲದೆ ಇಷ್ಟವಾಗುವ ಅಪರಿಚಿತರು, ಅರ್ಥವೇ ಇಲ್ಲದೆ ಇಷ್ಟವಾಗುವ ನನ್ನೂರಿನ ಭಾಷಾ ಶೈಲಿ ಮಾತಾಡೋ ಜನ ಒಂದೇ ಎರಡೆ ಅಬ್ಬಬ್ಬ ಕಣ್ಣಾಡಿಸಿದರೆ ಕ್ರಷ್ ಹೊಳೆಯೋ, ಅಲೆ ಎಬ್ಬಿಸಲು ಕಾರಣವಾಗುವ ಸಾಗರವೋ, ತುಂಬಿ ತುಳುಕುವಂತೆ ಮಾಡುವ ಮಳೆಯೋ ಈ ಕ್ರಷ್ ಏನಿದು ಇದರ ವ್ಯಾಪ್ತಿ ಒಬ್ಬ ವ್ಯಕ್ತಿ, ನಿಲುವು ಅಂತ ಒಪ್ಪಿಬಿಟ್ಟರೆ ಅದೊಂದು ಕಾಲದ ಅದ್ಬುತ ರಮ್ಯಕಲ್ಪನೆಯಷ್ಟೇ. 
'ಅಕ್ಕ ಭಾವ ಅಮೀರ್ ಖಾನ್ ನಂತೆ ಸ್ಮಾರ್ಟ್ ಇದ್ದಾರೆ ಕಣೆ, ಹೂ ಅಂದು ಬಿಡು , ನನಗಂತು ಅವರೇ ಭಾವನಾಗಬೇಕು ಬೇರೆ ಯಾರಾದರು ನಾ ಒಪ್ಪೋಲ್ಲ ನೋಡು' ಎಂದಾಗ ತಮ್ಮನ ಮಾತಿನಲ್ಲಿ ಇಣುಕಲಿಲ್ಲವೆ ಈ ಕ್ರಷ್. 
'ಜಾಣ, ದುಡಿಯುವ ಹುಮ್ಮಸ್ಸು ಇದೆ ಕಣೆ, ಯೋಚಿಸಬೇಡ ಅವನಿಗೇನು ಆಸ್ತಿ ಇಲ್ಲ ಅಂತ, ಗಂಡಿಗೆ ದುಡಿಯುವ ಹಂಬಲ ಇರಬೇಕು ಹೂ ಅಂದುಬಿಡು' ಎಂದ ಅಪ್ಪನ ಮಾತಿನಲ್ಲಿ ಇರಲಿಲ್ಲವೇ ಈ ಕ್ರಷ್?
ನಾ ಬಯಸಿ ಉಟ್ಟ, ಬಟ್ಟೆ, ಬಣ್ಣಗಳಲ್ಲಿ, ಆದರಿಸಿ ಉಪಚರಿಸಿ ಹಿಂದೆ ಮುಂದೆ ಸುತ್ತುವ ಪುಣ್ಯಾತ್ಮರೊಂದಿಗೆ ಓಡಾಡುವುದಿಲ್ಲವೇ ಈ ಕ್ರಷ್?
ಕೇಡಿಗಳನ್ನು ಒದ್ದು ಹೆಂಗಸನ್ನು ಕಾಪಾಡುವ ರಾಜ್ ಮಾತಿನ ವರಸೆ ಅಭಿನಯಗಳ ನಡುವೆ ಮನ ತುಂಬಿಕೊಂಡು ಬೆಳೆದ ಚಿತ್ರಗಳಲ್ಲಿ ತುಂಬಿಲ್ಲವೇ ಈ ಕ್ರಷ್? 
ಹಣ್ಣೆಂದರೆ ಮಾವು. ಕೈ ಮೈ ಆದರು ಸೀಸನ್ ಮುಗಿಯುವವರೆಗು ಕಾರ್ ಹುಣ್ಣಮಿ ಬಂದಾತು ಇನ್ನು ತಿನ್ನಬೇಡ ಮಾವು ಅಂತ ಅಮ್ಮ ಬೈದರು ಜೂಸ್ ಅಂಗಡಿಯಲಿ ಮಾವು ಕಂಡಾಕ್ಷಣ ಅದರ ಜೂಸನ್ನೆ ಬಯಸುವ ಮನಸಿಗೆ ಆಗಲಿಲ್ಲವೆ ಅದರೊಂದಿಗೆ ಕ್ರಷ್. 
ತೋಟದಲಿ ಅರಳಿ ನಿಂತ ಹೂಗಳು ಉಟ್ಟಸೀರೆಗೆ ಮ್ಯಾಚಿಂಗ್ ಎಂದೆನಿಸಿ ಗಾಡಿ ಹತ್ತುವೆ ಬಂದೆ ಇರು ರವಿ ಎಂದು ಓಡುವ ನನಗೆ ಹೂಗಳೊಂದಿಗೆ ತುಂಬ ತುಂಬ ಕ್ರಷ್. ಅಯ್ಯೊ ಇನ್ನು ಗೆಳೆಯರ ಬಳಗ ಅವರು ಯಾಕೆ ನನಗೆ ಕ್ರಷ್ ಅಂತ ಹೇಳಹೊರಟರೆ ಯಾರನ್ನ ಯಾಕೆ ಅಂತ ಲಿಸ್ಟ್ ಮಾಡಲಿ? ಅಕ್ಷರದಲಿ ಬಾರದೆ ದೂರ ಉಳಿದು ಅದನ್ನು ಉಳಿದವರು ಓದಿ ಕೋಪಿಸಿಕೊಂಡು ಪೋನಾಯಿಸಿದರೆ ಏನೆಂದು ಉತ್ತರಿಸಲಿ. ಯಾವುದಪ್ಪ ಈ ಹುಚ್ಚು ಕ್ರಷ್? 
ನಾ ಓದಿದ, ಭೇಟಿಯಾದ, ನನ್ನವರಂತೆ ಬದಲಾದ ಬರಹಗಾರರು, ಚಿಂತಕರು, ಸಾಮಾಜಿಕ ಕಳಕಳಿಯ ಜೀವಗಳು ಎಲ್ಲಿ ತೂಗಲಿ. 
ಏ ಕ್ರಷ್ ಬೇಕಿಲ್ಲ ನನಗೆ ನಿನ್ನ ಹೊದಿಕೆ. ನನಗೆ ಈ ಬದುಕು ಇದರ ಎಳೆಗಳು ಜೀವಂತಿಕೆಯೇ ನನ್ನ ಕ್ರಷ್.

ಪುಟ್ಕಥೆಗಳು


ಪುಟ್ಕಥೆ - ೧

"ಬರೀ ಓದುವುದಷ್ಟೇ ಬುದ್ಧಿವಂತಿಕೆಯಲ್ಲ. ಬೇರೆ ಬೇರೆ ರೀತಿಯ ಬುದ್ಧಿವಂತಿಕೆಗಳಿವೆ. ಈಗ ನೋಡಿ ನಾನು ಹತ್ತನೆ ತರಗತಿಯಲ್ಲಿ ಎರಡು ಬಾರಿ ಫೇಲಾಗಿ, ಹೇಗೋ ಕಷ್ಟ ಪಟ್ಟು ಪಾಸಾಗಿ, ಚಿತ್ರಕಲಾ ಶಾಲೆಯನ್ನು ಸೇರಿದೆ, ಚಿನ್ನದ ಪದಕ ಗಳಿಸಿದೆ."
ಐದು ವರ್ಷಗಳ ಶಾಲಾಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಆ ಬಾಲಕ ಉತ್ಸುಕತೆಯಿಂದ ಶಿಕ್ಷಕಿಯ ಮಾತು ಕೇಳಲಾರಂಭಿಸಿದ!!

ಪುಟ್ಕಥೆ - ೨
"ಸ್ನೇಹಕ್ಕಾಗಿ ನೀನೇ ಸ್ವಲ್ಪ ತಗ್ಗಿದರೆ ಅದು ಅವಮಾನ ಹೇಗಾಗುತ್ತದೆ? ನಿನಗೆ ಹಾಗನಿಸಿದರೆ ಅದು ಸ್ನೇಹವೇ ಅಲ್ಲ" ಅಮ್ಮ ಹೇಳಿದಳು. 
ಫೋನ್ ಎತ್ತಿಕೊಂಡು ಸ್ನೇಹಿತನಿಗೆ ಕರೆ ಮಾಡುವಷ್ಟರಲ್ಲಿ ಆ ಕಡೆಯಿಂದ ಕರೆ ಬಂತು. ಎಲ್ಲಾ ಅಮ್ಮಂದಿರೂ ಒಂದೇ ರೀತಿ ಇರ್ತಾರೆಯೆ? ಪ್ರಶ್ನೆ ಇವನಿಗೆ!!

ಪುಟ್ಕಥೆ - ೩
ತಗ್ಗಿಬಗ್ಗಿ ನಡೆದರೇನೇ ಬದುಕು ಚೆನ್ನಾಗಿರುತ್ತದೆ ಎಂದಿದ್ದರು ಹಿರಿಯರು. ಅದನ್ನೇ ನಂಬಿಕೊಂಡು ಬಂದಿದ್ದವಳಿಗೆ ಬದುಕು ಘೋರವೆನಿಸಲಾರಂಭಿಸಿತ್ತು ದೌರ್ಜನ್ಯ ಸಹಿಸುವಾಗಲೆಲ್ಲಾ.
ಸಿಡಿದೆದ್ದು ನಿಂತಳು, ಬದುಕು ಸುಂದರವೆನಿಸತೊಡಗಿತು!!

ಪುಟ್ಕಥೆ - ೪
"ಮರ್ಯಾದೆ ಮೌನದಲ್ಲಿದೆ ಎಂದು ಹೇಳುವವರ ಮಾತಿನ ಅರ್ಥ ಅವರ ಮರ್ಯಾದೆ ನಿಮ್ಮ ಮೌನದಲ್ಲಿದೆ ಎಂದು. ಆದರೆ ನಿಮ್ಮ ಮರ್ಯಾದೆ ಇರುವುದು ನಿಮ್ಮ ಪ್ರತಿಭಟನೆಯಲ್ಲಿ!" ಹೇಳಿದರು ವೈದ್ಯರು ಕಾರ್ಯಾಗಾರದಲ್ಲಿ. ಮರುದಿನ ವಿದ್ಯಾರ್ಥಿನಿಯರು ತಾವು ಮರ್ಯಾದೆಯುಳ್ಳವರು ಎಂಬುದನ್ನು ಸಾಬೀತುಪಡಿಸಿದರು!!

ಪುಟ್ಕಥೆ - ೫

"ನಿನ್ನನ್ನು ತಿರಸ್ಕರಿಸಿ ನಾ ತಪ್ಪುಮಾಡಿದೆ. ನಮ್ಮ ಸಂಬಂಧವನ್ನು ಮತ್ತೆ ಕಟ್ಟಿಕೊಳ್ಳುವುದು ಹೇಗೆ, ನೀನಿಲ್ಲದೆ ನಾನು ಬದುಕಲಾರೆ" ಹೇಳಿದನಾತ.
"ಅಪನಂಬಿಕೆಯಲಿ ಕಡಿದುಹೋದ ಸಂಬಂಧ ಮತ್ತೆ ಸುಧಾರಿಸಲು ಸಾಧ್ಯವಿಲ್ಲ, ಅದಕ್ಕೆ ಅವಕಾಶ, ಸಮಯ ಎರಡೂ ನೀಡಬಾರದು. ನಿನಗೂ ಅದು ಚುಚ್ಚುತ್ತಿರುತ್ತದೆ!" ಹೇಳಿದಳಾಕೆ!!

ಪುಟ್ಕಥೆ - ೬
"ಅಮ್ಮ ಮೊದಲ ಬಾರಿ ನೋಡಿದ ತಕ್ಷಣವೇ ಯಾರನ್ನಾದರೂ ಯಾಕೆ ಪೂರ್ತಿ ನಂಬಬಾರದು?" ಕೇಳಿದರು ಮಕ್ಕಳು.
"ಈ ಭತ್ತವನ್ನು ನೋಡಿದ ತಕ್ಷಣ ಕಾಳಾವುದು, ಜೊಳ್ಳಾವುದು ತಿಳಿಯುತ್ತಾ?" ಕೇಳಿದಳಮ್ಮ!!

ಪುಟ್ಕಥೆ - ೭
ಮಕ್ಕಳ್ಯಾರೂ ಮಾತು ಕೇಳುತ್ತಿಲ್ಲ, ಯಾರನ್ನೂ ನಾನು ಬದಲಾಯಿಸಲಾಗುತ್ತಿಲ್ಲ ಎಂದು ಭಾವಿಸಿ, ಬೇಸತ್ತು ರಾಜಿನಾಮೆ ಪತ್ರವನ್ನು ಮುಖ್ಯೋಪಾಧ್ಯಾಯರಿಗೆ ನೀಡಲು ಹೋಗುತ್ತಿದ್ದಾಗ ಹುಡುಗಿಯೊಬ್ಬಳು ಟೀಚರ್ ಗೆ ಚೀಟಿಯೊಂದನ್ನು ಕೊಟ್ಟು ಹೊರಟೇಬಿಟ್ಟಳು. ಅದರಲ್ಲಿದ್ದದ್ದು ಒಂದೇ ವಾಕ್ಯ 'ಟೀಚರ್, ನಿಮ್ಮಿಂದಾಗಿ ನಾ ಮತ್ತೆ ಬದುಕನ್ನು ಪ್ರೀತಿಸಲಾರಂಭಿಸಿರುವೆ!' 

ಪುಟ್ಕಥೆ - ೮
"ಅಪ್ಪ ನೀವೇಕೆ ಸಿಗರೇಟ್, ಮದ್ಯಸೇವನೆಯಂತಹ ಚಟಕ್ಕೆ ಬಲಿಯಾಗಲಿಲ್ಲ?" ಪ್ರಶ್ನಿಸಿದ ಕಾಲೇಜು ಓದುತ್ತಿದ್ದ ಮಗ.
"ನಿನ್ನಿಂದ, ನಿಮ್ಮ ಅಮ್ಮನಿಂದ  ದೂರವಾಗಿಬಿಡುತ್ತೇನೆ ಎಂಬ ಭಯದಿಂದ. ಭವಿಷ್ಯದಲ್ಲಿ ನಿಮಗೆ ಭಾರವಾಗಿರಬಾರದೆಂಬ ಜವಾಬ್ದಾರಿಯಿಂದ!!" ಉತ್ತರಿಸಿದರು ಅಪ್ಪ.

ಪುಟ್ಕಥೆ - ೯
"ತುಟಿ ಕಚ್ಚಿ ನೋವನ್ನು ಸಹಿಸುತ್ತಿರುವುದು ಏಕೆ? ಯಾರೊಂದಿಗಾದರೂ ಹೇಳಿಕೊಳ್ಳಬಾರದೇ?" ಕೇಳಿದಳು ಗೆಳತಿ.
"ಹೇಳಿಕೊಂಡರೆ ಹೋಗುವ ನೋವಲ್ಲವಿದು. ಹೇಳಿಕೊಂಡ ನಂತರ ಆ ಇನ್ನೊಬ್ಬರು ನಮ್ಮ ಈ ನೋವನ್ನು ಹರಾಜು ಹಾಕುವುದಿಲ್ಲ ಎನ್ನುವ ಗ್ಯಾರಂಟಿ ಏನು? ಜೊತೆಗೆ ಆತ್ಮೀಯ ಸ್ನೇಹಿತರಿಗೆ ಹಂಚುವುದಾದರೆ ಖುಷಿಯನ್ನೇ ಹಂಚಬೇಕಲ್ಲವೇ!!" ಮರುಪ್ರಶ್ನಿಸಿದಳಾಕೆ.

ಪುಟ್ಕಥೆ - ೧೦
ಹೆನ್ರಿಕ್ ಇಬ್ಸೆನ್ ನ ಗೊಂಬೆ ಮನೆ ಓದುತ್ತಿದ್ದವಳಿಗೆ ಪುಸ್ತಕ ಓದಿ ಮುಗಿಸುವಷ್ಟರಲ್ಲಿ ತಾನೂ ಸಹ  ಇಷ್ಟು ವರ್ಷಗಳ ಕಾಲ, ಆ ನಾಟಕದ ನಾಯಕಿ ನೋರಾಳಂತೆ ಗೊಂಬೆಯಾಗಿ ಬದುಕ್ಕಿದ್ದೆಂದು ಅರ್ಥವಾಯಿತು. ಜೈಲಿನಂತಹ ಮನೆಯಿಂದ ಹೊರಬಿದ್ದ ನಾಯಕಿ ಇಡೀ ಯೂರೋಪಿನ ಜನಮಾನಸವನ್ನು ಅಲುಗಾಡಿಸಿದಂತೆ ಇವಳ ಮನವನ್ನೂ  ಕಲಕಿಬಿಟ್ಟಳು!!

ಪುಟ್ಕಥೆ - ೧೧
"ಈ ಮುಷ್ಕರವೆಲ್ಲಾ ಬೇಕೇನಪ್ಪ?" ಮೂಲಸೌಕರ್ಯಗಳಿಗಾಗಿ ಮುಷ್ಕರ ಹೂಡಿದ್ದ ವಿದ್ಯಾರ್ಥಿಗಳನ್ನು ಕೇಳಿದರು ಶಿಕ್ಷಕರು.
"ಸರ್ ಮರ್ತೋಯ್ತಾ? ಮೇಷ್ಟ್ರುಗಳು ಬೇಕೆಂದು ನಾವು ಮುಷ್ಕರ ಹೂಡಿದ್ದರಿಂದಲೇ ಅಲ್ವೇ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಂಡಿದ್ದು!"

ಪುಟ್ಕಥೆ - ೧೨
ಬಹಳ ಆಸೆಪಟ್ಟು ಹಣ ಕೂಡಿಸಿಟ್ಟು ವಿದೇಶ ಪ್ರವಾಸ ಮಾಡಬೇಕೆಂದುಕೊಂಡ ಅಮ್ಮ ಕೊನೆ ಘಳಿಗೆಯಲ್ಲಿ ಬೇಡವೆಂದು ನಿರ್ಧರಿಸಿದ್ದು ಯಾಕೆಂಬುದು ನಮಗೆ ಗೊತ್ತಾದದ್ದು ಒಂದು ವರ್ಷದ ನಂತರ; ನಮ್ಮ ಅಜ್ಜಿತಾತನ ಹೆಸರನ್ನು ನಮ್ಮೂರಿನ ಹೊಸ ಹೈಸ್ಕೂಲಿನ ಕಟ್ಟಡದ ಮೇಲೆ ನೋಡಿದಾಗಲೇ!!

ಪುಟ್ಕಥೆ - ೧೩
ಅಮ್ಮ ಮಹಿಳಾ ಸಂಘ ಸೇರಿಕೊಂಡು ಹೋರಾಟಕ್ಕಿಳಿದಾಗ ಮಕ್ಕಳಿಗೆ ಶಾಕ್.
"ಬಂಗಾಳದ ಮಾತಂಗಿನಿ ಹಜ್ರಾ ಸ್ವಾತಂತ್ರ್ಯ ಚಳುವಳಿಗೆ  ಸೇರಿಕೊಂಡಾಗ ಆಕೆಗೆ ೬೦ ವರ್ಷ, ನನಗೆ ಇನ್ನೂ ೫೮ ವರ್ಷಗಳಷ್ಟೇ" ಅಂದರಾಕೆ!! 

ಪುಟ್ಕಥೆ - ೧೪
"ಅಮ್ಮ ನೋಡು ನಾವು ಬಂದುಬಿಟ್ಟೆವು, ನಿನ್ನನ್ನು ಬಿಟ್ಟು ಇನ್ನೆಲ್ಲೂ ಹೋಗುವುದಿಲ್ಲ, ಮನೆಗೆ ಹೋಗೋಣ ಬಾ" ಕರೆದರು ಮಕ್ಕಳು.
"ಇಲ್ಲ ಮಕ್ಕಳೆ, ನನ್ನ ವೃದ್ಧಾಪ್ಯದ ಸಂಗಾತಿಗಳನ್ನು ಬಿಟ್ಟು ನಾನು ಬರಲಾರೆ. ನನಗೆ ಅವಶ್ಯಕತೆ ಇದ್ದಾಗ ನೀವ್ಯಾರು ಇರಲಿಲ್ಲ, ಅವರಿದ್ದರು!!" ವೃದ್ಧಾಶ್ರಮದಲ್ಲಿದ್ದ ತಾಯಿ ಹೇಳಿದರು.

ಪುಟ್ಕಥೆ - ೧೫
ನಗರದಲ್ಲಿ ಐಟಿ ಕಂಪನಿಯಲ್ಲಿ ದುಡಿಯುತ್ತಿದ್ದ ಮಗಳ ಮನೆಗೆ ಬಂದಳಮ್ಮ. ಸಂಜೆ ೫ಕ್ಕೆ ಬರುತ್ತೇನೆಂದ ಮಗಳು ಒಂಬತ್ತಾದರೂ ಮನೆಗೆ ಬಾರದಿದ್ದಾಗ 'ಒಂದು ವರ್ಷದಲ್ಲಿ ಇಷ್ಟು ಬದಲಾವಣೆಯೇ' ಎಂದು ನೊಂದುಕೊಂಡಳು.
೯ಕ್ಕೆ  ಅವಳೊಂದಿಗೆ ಬಂದ ಗೆಳತಿ "ಆಂಟಿ, ನಿಮಗಿಷ್ಟ ಅಂತ ಈ ಬೆಂಗಾಲಿ ಸ್ವೀಟ್ ತರಲು ಸಂಜೆ ೫ ಘಂಟೆಯಿಂದ ನನ್ನನ್ನು ಅಲೆಸಿದಳು" ಸ್ವೀಟ್ ಡಬ್ಬ ಟೀಪಾಯಿ ಮೇಲಿಟ್ಟು ಸುಸ್ತಾಗಿ ಕುಳಿತಾಗಲೇ ತಾಯಿಗೆ ತನ್ನ ತಪ್ಪಿನರಿವಾಗಿದ್ದು!!

ಪುಟ್ಕಥೆ - ೧೬
ಆಕೆಗದು ಸಂಕಟಮಯ ಪರಿಸ್ಥಿತಿ. ಸಾವುಬದುಕಿನ ಮಧ್ಯದಲ್ಲಿ ಹೋರಾಟ  ನಡೆಸುತ್ತಿರುವ ತಂದೆಯ ಜೊತೆ ಇರಬೇಕೇ ಇಲ್ಲವೇ ವಿದೇಶದಲ್ಲಿ ಹೆರಿಗೆಯಾಗಲಿರುವ ಮಗಳ ಬಳಿ ಹೋಗಬೇಕೆ?
ಆಗ ತಾಯಿ ಹೇಳಿದ್ದು - "ಈಗ ನಿನ್ನ ಮಗಳಿಗೆ ನಿನ್ನ ಅವಶ್ಯಕತೆ ಹೆಚ್ಚು, ಹಿಂದಿನದನ್ನು ಕೈಬಿಡುತ್ತಿರಬೇಕು, ಮುನ್ನುಗ್ಗುತ್ತಿರಬೇಕು. ನೀನು ಹೋಗು!!"

ಪುಟ್ಕಥೆ - ೧೭
"ಅಪ್ಪ ಅಮ್ಮನ ಹತ್ತಿರ ಬಸ್ ಪಾಸ್ ಗಾಗಿ ಕಾಸು ತೆಗೆದುಕೊಳ್ಳುವ ನಿಮಗೆ ನಮ್ಮ ಕಷ್ಟ ಹೇಗೆ ಅರ್ಥವಾಗಬೇಕು?  ಬೆಳಿಗ್ಗೆ ೮ ಕ್ಕೆ ಮುಂಚೆ ಎದ್ದೇಳದ ನೀವುಗಳು ಉಚಿತ ಬಸ್ ಪಾಸ್ ಕೊಟ್ಟರೆ ನಾವು ಸೋಮಾರಿಗಳಾಗ್ತೀವಿ ಅಂತೀರಲ್ಲ, ಯಾವತ್ತಾದರೂ ನಮ್ಮಂತೆ ೪ ಘಂಟೆಗೆ ಎದ್ದು ಪೇಪರ್, ಹಾಲು ಹಾಕಲು ಹೋಗಿದ್ದೀರಾ? ಕಬ್ಬನ್ನು ತರಿಯಲು ಹೋಗಿ ಈ ರೀತಿ ತರಚಿಸಿಕೊಂಡಿದ್ದೀರಾ?" ವಿದ್ಯಾರ್ಥಿಗಳು ಪ್ರಶ್ನಿಸಿದಾಗ ಉತ್ತರಿಸಲಾಗದೆ ತಲೆತಗ್ಗಿಸಿದರು ಉಚಿತ ಬಸ್ ಪಾಸ್ ವಿರುದ್ಧ ಮಾತನಾಡಿದ್ದ ಅವರ ಕೆಲವು ಸಹಪಾಠಿಗಳು!!

ಪುಟ್ಕಥೆ - ೧೮
ತನ್ನ ತಾಯಿ ಸತ್ತಾಗಲೂ ಬದಲಾಗದ ವ್ಯಕ್ತಿ ಪತ್ನಿ ಸತ್ತ ತಕ್ಷಣ ಬದಲಾಗಿದ್ದನ್ನು ಕಂಡು ಪ್ರಶ್ನಿಸಿದಳು ಮಗಳು. ಅದಕ್ಕವನು ಹೇಳಿದ್ದು - "ಒಳ್ಳೆಯ ಮಗನಾಗಲಿಲ್ಲ, ಒಳ್ಳೆಯ ಪತಿಯಾಗಲಿಲ್ಲ, ಈಗೊಂದು ಕಡೇ ಅವಕಾಶವಿದೆ, ಒಳ್ಳೆಯ ಅಪ್ಪನಾಗಲು, ಇದನ್ನು ಕಳೆದುಕೊಳ್ಳಲು ಇಷ್ಟವಿಲ್ಲ!!"

ಪುಟ್ಕಥೆ - ೧೯
ಸ್ಚಚ್ಛ ಭಾರತದ ಬಗ್ಗೆ ಹೇಳತೊಡಗಿದ ಜನಪ್ರತಿನಿಧಿ. ತಕ್ಷಣವೇ ಮಹಿಳೆಯರೆಲ್ಲಾ "ಸರ್, ನಮ್ಮ ಹಳ್ಳಿಯಲ್ಲಿ ನೀರು ಸಿಗುವಂತೆ ಮಾಡಿ, ಆಗ ನೋಡಿ ಇಡೀ ಹಳ್ಳಿ ಹೇಗಿರುತ್ತೆ" ಎಂದರು.
'ಆಯ್ತು ಮಾಡಿಸೋಣ' ಎಂದು ಹೇಳಿ ಹೋದ ಜನಪ್ರತಿನಿಧಿ ಇನ್ನೂ ಕಾಣಿಸಿಕೊಂಡಿಲ್ಲವಂತೆ!!

ಪುಟ್ಕಥೆ - ೨೦
"ಅಯ್ಯೋ, ಏನೂ ಕೆಲಸವನ್ನೇ ಮಾಡಲಾಗದಷ್ಟು ಸುಸ್ತು, ಅಮ್ಮನ ಜೊತೆಯಾದರೂ ಹರಟೆ ಹೊಡೆಯೋಣ' ಎಂದುಕೊಂಡು ಮಗಳು ಫೋನ್ ಮಾಡಿದ ತಕ್ಷಣ ೯೦ ವರ್ಷದ ಅಮ್ಮ "ನಾನು ಈಗಷ್ಟೇ ಯೂಟ್ಯೂಬ್ ನಲ್ಲಿ ನೋಡಿಕೊಂಡು, ಮೆಕ್ಸಿಕನ್ ರೈಸ್ ಮಾಡಿದೆ" ಎನ್ನಬೇಕೇ!!
  
- ಸುಧಾ ಜಿ 

ಅನುವಾದಿತ ಅನಾಮಿಕ ಕೃತಿ

ಅನಾಮಿಕ (ವಾಟ್ಸಾಪ್ ನಲ್ಲಿ ಬಂದ ಒಂದು ಬರವಣಿಗೆಯ ಅನುವಾದ)                      

ನಿಲ್ಲಿಸಿನ್ನ ಊದುವುದ 
ಅದೇ ಕಿಲುಬು ಕಹಳೆಯ
'ಯಶಸ್ವಿಗನ ಹಿಂದೆ ಓರ್ವ ಸ್ತ್ರೀ' ಎಂಬ ಬೊಗಳೆಯ
ಇನ್ನಾದರೂ ಪ್ರಶಂಸಿಸಿ 
ಅವಳದೇ ಪ್ರಗತಿಯ

ಹೆಣ್ಣು ಪುಣ್ಯತಾಯಿ ...
..ಮಹಾ ತ್ಯಾಗಮಯಿ
ಎಂದು ಕಸಿದಿದ್ದು ಸಾಕಿನ್ನು
ಇಳಿಸೆಲ್ಲವ ಭಾರವನ್ನು
ಹಗುರಾಗಿಸಿ ಅವಳನ್ನು 

ಅಂಗನೆ ನೀ ಅಂದಗಾತಿ 
ಎಂಬ ಪದವ ಪಾಡದಿರಿ 
ಅಂದವೆ ಪ್ರಧಾನವಲ್ಲ
ವೆಂಬ ತತ್ವ ಸಾರಿರಿ

ಅವ್ವ ಅಕ್ಕ ಮಡದಿ ಮಗಳ 
ಪಾತ್ರವಿನ್ನು ಸಾಕು ಮಾಡಿ
ಯಾರಿಗೂ ಅಧೀನಳಲ್ಲ 
ಬಂಧಮುಕ್ತ ಪಟ್ಟ ನೀಡಿ

ಹೆಣ್ಣಿಗಿದೆ,
ಎಲ್ಲ ತೂಗಬಲ್ಲ ಶಕ್ತಿ
ಈ ಹೊರೆಯಿಂದ 
ಇನ್ನಾದರೂ ಕೊಡಿ ಮುಕ್ತಿ
ದುಡಿಮೆ ಸಾಕು ವಿರಮಿಸಲಿ
ನೀಡಿ ಅವಳ ಬಡ್ತಿ

ನಿಮ್ಮ ಫಾಯದೆಗಾಗಿ
'ಪದ್ದತಿ' ಯ ಹೆಸರಲ್ಲಿ
ಉಸಿರುಗಟ್ಟಿಸಿದ್ದು ಸಾಕು
ಏತಕಾಗಿ ಇರಬೇಕು
ಅವಳಲ್ಲೆ ಪರಿಪೂರ್ಣತೆ
ಅವಳಿಗೇನೆ ನೀತಿ ಕಥೆ
ಇರಲಿ ಬಿಡಿ ಕಠಿಣತೆ
ಬಿಟ್ಟುಬಿಡಲಿ ಸಹಿಷ್ಣುತೆ
ಇನ್ನಾದರು ಕೊನೆಯಾಗಲಿ
ಅನ್ಯರ ಆಶ್ರಯಿಸೊ ವ್ಯಥೆ

ಕಳೆಯಲಿ ಕಾಲ 
ಸೋಮಾರಿಯಾಗಿ
ತಿರುಗಲಿ ಬಿಡಿ ಸ್ವೇಚ್ಛೆಯಾಗಿ
ನಕ್ಕರೇನು ಗಟ್ಟಿಯಾಗಿ 
ಮಾತಾಡಲಿ ಜೋರಾಗಿ
ಇದ್ದರೇನು ಮುಖವು ಸುಕ್ಕಾಗಿ
ಕಣ್ಣ ಸುತ್ತ ಕಪ್ಪಾಗಿ
ಇರಲಿ ಬಿಡಿ ಅವಳಾಗಿ
ಆಕಾಶದಿ ಹಕ್ಕಿಯಾಗಿ
..,...ಆಕಾಶದಿ ಹಕ್ಕಿಯಾಗಿ

                   - ಉಷಾಗಂಗೆ


If we must celebrate a day for women, let us celebrate freedom from stereotypes, from expectations, from idolisation, from sacrifice...

Stop congratulating women for being the secret behind a successful man...  Start saluting them for being successful.  😊

Stop saying the mother is sacred for all the sacrifices she makes...  Try to reduce those sacrifices! 😊

Stop telling women they are beautiful... Try telling them it's not important to be beautiful! 😊

Stop praising her roles as mother, wife, daughter, sister...  Celebrate her as an individual, a person, independent of relationships. 😊

Stop justifying her necessity to multi task....  Give her a chance not to! 😊

Stop these constructs which are aimed at making her strive for an impossible balance... Let her be inadequate... And happy! 😊

Stop making her look at herself through a conveniently male viewpoint. 

Let her be imperfect, whimsical, irresponsible, boorish, lazy, fierce, opinionated, loud, flabby, ungroomed, adventurous, unpredictable, unprepared, impractical....      

ಅನುವಾದಿತ ಕವಿತೆ - ಸಮತೆ ಇರದೆ ಪ್ರಗತಿ ಬರುವುದೆ



ತನ್ನಲ್ಲಿ ಕಸುವಿದ್ದರೂ ಸ್ತ್ರೀ
ಕೋಮಲೆಯಂತೆ ನಟಿಸಿ 
ಬಸವಳಿದಿರುವಂತೆ
ಬೇನೆಯಲ್ಲೂ ಬಲಾಢ್ಯನೆಂಬ 
ವೇಷ ಧರಿಸಿ 
ಪುರುಷನೂ ದಣಿದಿದ್ದಾನೆ

ತಿಳಿದವಳಾದರೂ ಹೆಣ್ಣು 
ಮೌನ ವಹಿಸಿ ವಹಿಸಿ 
ಮರುಗಿದಂತೆ
ಎಲ್ಲ ಬಲ್ಲವನೆಂಬ
ನಿರೀಕ್ಷಾಭಾರಕ್ಕೆ
ಗಂಡೂ ಸಹ ಬಳಲಿ ಬೆಂಡಾಗಿದ್ದಾನೆ

ಅಳುಮುಂಜಿಗಳೆಂಬ
ಆರೋಪಕೆ ಅವಳು ಅಂಜಿರುವಂತೆ
ಅತ್ತು ಹಗುರಾಗಲು ಅವಕಾಶವೀಯದ ಸಮಾಜಕೆ
ಅವನೂ ಸಹ ಹಿಡಿಶಾಪವಿತ್ತಿದ್ದಾನೆ

ಇಲ್ಲಿ ವನಿತೆ 
ವೃತ್ತಿ, ವೇತನವೆರಡರಲ್ಲು
ತಾರತಮ್ಯದಿ ತಲ್ಲಣಿಸಿರೆ
ಅಲ್ಲಿ ಒಬ್ಬನೇ
ಸಂಸಾರವನ್ನಿಡೀ ಸಲಹಲು 
ಹಲವು ರೀತಿ ಹೆಣಗುತ್ತಿದ್ದಾನೆ

ಒಂದೆಡೆ
ತಂತ್ರಜ್ಞಾನದಿ
ಹೆಂಗಸು ತಾತ್ಸಾರವ ಕಂಡಂತೆ
ಇನ್ನಂದೆಡೆ
ತುತ್ತು ತಿನಿಸೊ ತೃಪ್ತಿಯನೆ 
ಹೊಂದಲಿಲ್ಲ ಗಂಡಸು

ಹೆಣ್ಣಿನದು
ಸ್ವತಂತ್ರಕಾಗಿ 
ಕಠಿಣ ನಡಿಗೆಯಾದರೆ
ಗಂಡಸಿಗದು ಸುಲಭ ದೊರೆತು 
ಅಮೂಲ್ಯ ಮೌಲ್ಯ
ಕಳಕೊಂಡಿರೆ

ಈ ಪಿತೃರಾಜ್ಯ ಈರ್ವರಿಗೂ
ಪೀಡೆಯಾಗಿ ಪರಿಣಮಿಸಿರೆ
ಸಮತೆ ಎಲ್ಲಿ ಬಂದೀತು
ಪ್ರಗತಿ ಎಲ್ಲಿ ಕಂಡೀತು
                           - ಉಷಾಗಂಗೆ                                                                 

ಸ್ವಾತಂತ್ರ್ಯ ಯೋಧರು - ಚಂದ್ರಶೇಖರ್ ಆಜಾದ್


ನಿನ್ನ ಹೆಸರಿನಲ್ಲೇ ಆಜಾದಿ ಇದೆ
ಸಮಾಜವಾದವೇ ಆಜಾದಿಯೆಂದು ಸಂಘ ಕಟ್ಟಿದೆ
ಅದಕ್ಕಾಗಿ ದುಡಿದೆ ಮಡಿದೆ

ಇಂದು ದಮನಿತರಿಗೆ ಸಾವೇ ವಿಮೋಚನೆಯಾಗಿದೆ
ಸಮಾಜವಾದ ಸವಕಲು ನಾಣ್ಯವಾಗಿದೆ
ಆಜಾದಿ ದೇಶದ್ರೋಹಿಯಾಗಿದೆ

ಓ ಆಜಾದ ನಿನ್ನ ಮಾರುವೇಷದ ಜನಿವಾರ 
ನಕಲಿ ದೇಶಭಕ್ತರ ಮಾರುವೇಶದ ಅಸ್ತ್ರವಾಗಿದೆ
ಅದನ್ನು ಹರಿಯದ ಹೊರತು ನಮಗೂ ನಿನಗೂ ಆಜಾದಿಯಿಲ್ಲ

ನಿನ್ನ ಕೈಯ ಕೋವಿ, ಭಗತನ ಲೇಖನಿಯ ಹರಿತ 
ನಮ್ಮ‌ ತಲೆ‌ ತುಂಬಲಿ
ಅದೇ ನಮ್ಮ ಹಂಬಲ.

- ರವಿ. ಬಿ

ಕವನ - ಗ್ರಹಣ

ಕವನ - ೧

ಕಡು 
ಕಗ್ಗತ್ತಲ
ಮಧ್ಯರಾತ್ರಿಯಲ್ಲಿ
ಬೆಳ್ಳ
ಬೆಳ್ಳನೆಯ
ಚಂದಿರ
ಕೆಂಪು 
ಹೊದಿಕೆ
ಹೊದ್ದು
ಕಡು
ಕೆಂಪಾಗುವ
ಹೊತ್ತಿಗೆ
ಶಾಂತಿಯ 
ಜಪದ 
ಜೊತೆ
ಕ್ರಾಂತಿಯ
ಮಂತ್ರ 
ನೆನಪಾದೀತು
- ರಾಹುಲ ಬೆಳಗಲಿ


ಕವನ - ೨
ಗಗನದಲ್ಲಿಂದು  ನಡೆಯುವುದು ಅಪರೂಪದ ವಿಸ್ಮಯ
ವೀಕ್ಷಿಸಿರೆಲ್ಲರೂ ಅದ ಮರೆಯದೆ ಆ ಸಮಯ
ಸಂಭವಿಸುವುದಿಂದು ರಕ್ತಚಂದ್ರಗ್ರಹಣ
ಗ್ರಹಗಳ ಚಲನೆಯೇ ಇದಕೆ ಕಾರಣ
ಅರಿತು ನಾವು ಖಗೋಳವಿಜ್ಞಾನದ ‌ವಿಚಾರಗಳ
 ತೊರೆಯೋಣ ನಮ್ಮ ಅಜ್ಞಾನದ ಆಚಾರಗಳ
  - ವಿಜಯಲಕ್ಷ್ಮಿ ಎಂ ಎಸ್

ಶಾಲಾ ಡೈರಿ - ಹೃದಯಸ್ಪರ್ಶಿ ಶಿಕ್ಷಕಿ



ಬಿರುಗಾಳಿಯ ಮಾತಿದೆ 
ನಿತ್ಯ ಕರ್ಣಗಳಿಗೆ ಸಿಹಿಯ ಹೂರಣ,
ಮನಸಿರದ ಮನಸಿಗೆ ಮನಸೋತು ಕುಳಿತೆವು
ಮಾತಿಗೆ ಚಂಚಲ ಮನಸುಗಳು.

ಇದು ನಿಮದೊಂದು ಲೋಕ
ಮಧುರ ಭಾವಗಳ ಬಂಧಿನಾಕ,
ಕೂಡಿಬಿಡಲು ಕ್ಷಣಕ್ಷಣಕೂ ಕಾತುರತೆ ಮನದ ತವಕ
ಇಲ್ಲಿ ಆಸೆಗಳೇ ಹಾಜರಾತಿ.

ಪ್ರತಿಯೊಂದು ದಿನಕೂ ಸೂಟಿಯೇ ಬೇಡ
ಬೇಟಿಗೆ ಮನಸು ಕಾಯುವ ಸಂಗತಿ
ಜೀವನ ವಚನಗಳ ತರಗತಿ 
ಬೆರವ ಸಮಯಕೆ ಖುಷಿಯೇ ಎಲ್ಲ. 

ನೆನಪಿನ ಸಂಗಡಗಳು 
ಹುದುಗಿಯಾವು ಅಂತರಂಗದಲ್ಲಿ, 
ಮರು ಚಿಗುರೊಡೆಯಲಿ ಚಿಗುರು
ಮನಸ್ಸಿನಲ್ಲುಳಿದ ನಿಮ್ಮ ಮಾತುಗಳ ನವಿರು....
             
                               - ಹರ್ಷಿತ

ಪುಸ್ತಕ ಪ್ರೀತಿ - ಉಷೋದಯ



"ಮನಸಿದ್ದರೆ ಮಾರ್ಗ" ಎಂಬುವುದಕ್ಕೆ ದುರ್ಗಾಪುರದ ಮಹಿಳೆಯರು ಮಾಡಿದ ಕೆಲಸವೇ ಸಾಕ್ಷಿ. ಇದಕ್ಕೆಲ್ಲಾ ಕಾರಣ ಜಸಿಂತ. ಮಾಲಪಲ್ಲಿಯ ದಿಬ್ಬಾಯಿ‌ ಮತ್ತು ರತ್ನಮ್ಮನ ಎಂಟನೆಯ ಮಗಳಾಗಿ‌ ಜನಿಸಿದಳು ಜಸಿಂತ‌. ಸಂಬಂಧಿ ತೇರೇಸಮ್ಮಳ ಸಹಾಯದಿಂದ ಶಾಲೆಗೆ ಸೇರಿದಳು. ರಜಾದಿನಗಳಲ್ಲಿ ಹೊಲಿಗೆ ಮೊದಲಾದವುಗಳನ್ನು ಕಲಿತಳು. ಓದುವುದೆಂದರೆ ಬಲು ಪ್ರೀತಿ. ಸ್ನೇಹಿತರಿಂದ ಪುಸ್ತಕಗಳನ್ನು ಪಡೆದು ಓದಿ ಹೊರ ಜಗತ್ತಿನ ವಿದ್ಯಮಾನಗಳನ್ನು ತಿಳಿಯುತ್ತಿದ್ದಳು. ಇಂಟರ್‌ನಲ್ಲಿ ಪಾಸಾದ ನಂತರ ಆರ್ಥಿಕ ತೊಂದರೆಯಿಂದ ಮುಂದೆ ಓದದೆ ತನ್ನ ಊರಿಗೆ ಮರಳಿ ಬಂದಳು. 
ಊರಿನಲ್ಲಿ ಮಹಿಳೆಯರು ಮನೆಗಳಲ್ಲಿ ಪಾಯಿಖಾನೆಗಳಿಲ್ಲದೆ ಹೊರಹೋಗುತ್ತಿರುವ ವಿಷಯ ಜಸಿಂತಾಳಿಗೆ ಮುಜುಗರ ತರುತ್ತಿತ್ತು. ಎರಡು ಪಕ್ಷಗಳ ನಡುವಿನ ರಾಜಕೀಯ ವೈಷಮ್ಯ, ಮೇಲ್ಜಾತಿಯವರ ತುಳಿತ, ಕೌಟುಂಬಿಕ ದೌರ್ಜನ್ಯಗಳು ಮಹಿಳೆಯರಿಗೆ ಸಹಿಸಲಸಾಧ್ಯವಾಗಿತ್ತು. "ಊಟ ಬಟ್ಟೆಗೆ ಇಲ್ಲದ ರಾಜಕೀಯ ಊರು ನಾಶ ಆಗೋಕೆ ಬಂದಿರೋದು" ಎನ್ನುವ ಜನರ‌ ಮಾತಿನಿಂದ ‌ಜಸಿಂತಾಳಿಗೆ ಅರ್ಥವಾಯಿತು ಅಲ್ಲಿನ ಜನರ ಪರಿಸ್ಥಿತಿ.
ಜಸಿಂತಾಳಿಗೆ ಗೆಳತಿ ಭಾರತಿಯು ಊರಿನ ಮತ್ತಷ್ಟು ವಿಷಯಗಳನ್ನು ತಿಳಿಸಿದಳು. ಮಹಿಳೆಯರು ಹೊರಗೋಗಿ ಕಷ್ಟಪಟ್ಟು ದುಡಿದು ಹಣ ಸಂಪಾದಿಸುತ್ತಿದ್ದರು. ಆದರೆ ಪುರುಷರು ತಾವು ಕೆಲಸಕ್ಕೆ ಹೋಗದೆ ಅವರಿಂದ ಹಣವನ್ನು ಪಡೆದು ತಮ್ಮ ಖರ್ಚಿಗೆ ಉಪಯೋಗಿಸಿಕೊಳ್ಳುತ್ತಿದ್ದರು. ದಿನವೆಲ್ಲಾ ಕಾಡುಹರಟೆ ಹೊಡೆಯುತ್ತಾ, ಇಸ್ಪೀಟಾಟ ಆಡುತ್ತಾ ವ್ಯರ್ಥವಾಗಿ ಸಮಯ ಕಳೆಯುತ್ತಿದ್ದರು. ಪಂಚಾಯತಿ ಆಫೀಸನ್ನು ಕಟ್ಟುವ ವಿಷಯವಾಗಿ ಊರಿನಲ್ಲಿ ರಾಜಕೀಯ ವೈಷಮ್ಯ ಹೆಚ್ಚಾಗುತ್ತಿತ್ತು. ಇದನ್ನೆಲ್ಲಾ ನೋಡಿದ ಜಸಿಂತಾ ಹೇಗಾದರೂ ಇದನ್ನು ತಡೆಯಬೇಕು ಎಂದು ನಿರ್ಧರಿಸಿದಳು.


ಜಸಿಂತಾ ಗೆಳತಿ ಪ್ರಮೀಳಳೊಂದಿಗೆ ಮಾತನಾಡುತ್ತಾ "ಆ ಪಂಚಾಯತಿ ಆಫೀಸ್ ಕಟ್ಟಡ ಕಟ್ಟೋದೆಲ್ಲಾದರೂ ಇರಲಿ, ಊರು ಸ್ಮಶಾನವಾಗಿ ಹೋಯ್ತು. ಇಷ್ಟಕ್ಕೂ ಆ ಆಫೀಸ್ ಯಾಕೆ? ಅಧಿಕಾರಕ್ಕಾಗಿ, ದೊಡ್ಡಸ್ತಿಕೆಗಾಗಿ ಒದ್ದಾಡೋವರೆಲ್ಲಾ ಕುಳಿತು ಹೊಡೆದಾಡೋದಕ್ಕೆ ತಾನೇ. ನಮ್ಮೂರಲ್ಲಿ ಮೂರು ಸಾವಿರ ಜನ ಹೆಂಗಸರಿದ್ದಾರೆ. ಪಾಯಿಖಾನೆಗಳಿಲ್ಲ ಹೆಂಗಸರೆಲ್ಲಾ ಎಷ್ಟು ಅವಸ್ಥೆ ಪಡ್ತೇವೋ, ಎಷ್ಟು ತೊಂದರೆಯೋ ಹೇಳೋದಕ್ಕಾಗೋದಿಲ್ಲ. ಈ ಪಂಚಾಯತಿ ಆಫೀಸನ್ನು ಪಾಯಿಖಾನೆ ಮನೆಗಳಾಗಿ ಬದಲಾಯಿಸಿದರೆ ಪೀಡೆ ತೊಲಗಿ‌ಹೋಗುತ್ತೆ. ನನಗೇನಾದರೂ ಅಧಿಕಾರ ಇದ್ದಿದ್ರೆ ಆ‌ ಸ್ಥಳದಲ್ಲಿ ಪಾಯಿಖಾನೆಗಳ ಮನೆಗಳನ್ನೇ ಕಟ್ಟಿಸ್ತೇನೆ. ಆ‌ ಸರಪಂಚ್  ತಮ್ಮ ಪ್ರಾಣ ಹೋದರೂ ಆ ಕೆಲಸ ಮಾಡೋದಿಲ್ಲ" ಎಂದಳು.
ಇದನ್ನೆಲ್ಲಾ ಕೇಳಿದ ಪ್ರಮೀಳಾ  "ನಮ್ಮಿಂದ ಈ‌ ಕೆಲಸ ಸಾಧ್ಯವಾಗುವುದಾ ಯೋಚಿಸು" ಎಂದಳು. 

"ಊರಿನ ಮಹಿಳೆಯರೆಲ್ಲರ ಬೆಂಬಲ ಸಿಗುತ್ತದೆ" ಎಂಬ ಜಸಿಂತಾಳ ಮಾತಿನಿಂದ ಪ್ರಮೀಳ ಮತ್ತು ಅವಳ ಅಣ್ಣಂದಿರು ಸಹಾಯ ಹಸ್ತ ನೀಡಿದರು. ಪ್ರಮೀಳ ಜಸಿಂತಾಳನ್ನು ಸಿವಿಲ್ ಇಂಜನಿಯರ್  ವೀಣಾರವರ ಬಳಿ ಕರೆದುಕೊಂಡು ಹೋದಳು. ವೀಣಾ ಕೆಲಸ ಮಾಡಲು ಒಪ್ಪಿಕೊಂಡರು. ಹಾಗೆಯೇ ಮಹಿಳಾ ಮೇಸ್ತ್ರಿ ಗೌರಮ್ಮನ ಪರಿಚಯ ಮಾಡಿಸಿಕೊಟ್ಟರು.

ಎಲ್ಲರೂ ದುರ್ಗಾಪುರಕ್ಕೆ ಬಂದರು‌. ರಹಸ್ಯವಾಗಿ ತಮ್ಮ ಕಾರ್ಯವನ್ನು ಪ್ರಾರಂಭಿಸಲು ನಿರ್ಧರಿಸಿದರು. ಆ ನಿಟ್ಟಿನಲ್ಲಿ‌ ಮೊದಲಿಗೆ ಮಹಿಳೆಯರನ್ನು ಭೇಟಿ ಮಾಡಿದರು ಹಾಗೂ ವಿಷಯವನ್ನು ತಿಳಿಸಿದರು. ಮೊದಲಿಗೆ "ದೊರೆಗಳ‌ ಮೇಲೆ ತಿರುಗಿ ಬೀಳೋದು‌ ನಮ್ಮ ಕೈಲಾಗುವುದಾ? ಸಂದೇಹದಿಂದ ಕೇಳಿದರು. ಸಮಸ್ಯೆಯನ್ನು ವಿವ‌ರವಾಗಿ ತಿಳಿಸಿದಾಗ ಎಲ್ಲರೂ ಕೈ ಜೋಡಿಸಲು ಸಿದ್ಧರಾದರು. ಎಲ್ಲರಿಗೂ  ಆದಷ್ಟು ಈ ವಿಷಯ ಗೋಪ್ಯವಾಗಿಡಬೇಕೆಂದು‌ ತಿಳಿಸಲಾಯಿತು. 
"ಒಗ್ಗಟ್ಟಿನಲ್ಲಿ ಬಲವಿದೆ" ಎಂಬಂತೆ ಎಲ್ಲರೂ ಸಹಾಯ ಮಾಡಿದರು. ಒಬ್ಬರು ‌ಕಟ್ಟಲು ಸ್ಥಳ ಕೊಟ್ಟರು. ಇನ್ನೊಬ್ಬರು ಹಣದ ಬದಲಾಗಿ ಚಿನ್ನದ ಸರವನ್ನು ಕೊಟ್ಟರು. ಊರಿನ ಪ್ರಮುಖರು ತಮ್ಮ ವ್ಯಾಜ್ಯದ ಪ್ರಯುಕ್ತ ಗುಂಟೂರಿಗೆ ಹೋಗಿದ್ದರು. ಅವರು ಹಿಂತಿರುಗಿ ಬರುವಷ್ಟರಲ್ಲಿ ತಮ್ಮ ಕೆಲಸವನ್ನು ಮುಗಿಸಬೇಕೆಂದು ಪ್ರಾರಂಭಿಸಿದರು.
ಕೇವಲ ಹನ್ನೆರಡು ದಿನಗಳಲ್ಲಿ ‌ಪಾಯಿಖಾನೆ ಕೊಠಡಿಗಳನ್ನು ಕಟ್ಟಿ ಮುಗಿಸಿದರು. ಊರಿನ ಪ್ರಮುಖರೆಲ್ಲರೂ ಬಂದು ನೋಡುವುದರೊಳಗಾಗಿ ಕೆಲಸ ಮುಗಿಸಿ ಬೋರ್ಡ್‌ ಗಳನ್ನು ಹಾಕಿದರು‌.
ಊರಿಗೆ ಹಿಂತಿರುಗಿದವರು ತಮ್ಮ ಊರಿನಲ್ಲಾದ ಬದಲಾವಣೆಗಳನ್ನು ಕಂಡು ಕೋಪಗೊಂಡರು. ಒಬ್ಬರ ಮೇಲೊಬ್ಬರ ದ್ವೇಷ ಮತ್ತಷ್ಟು ಹೆಚ್ಚಾಯಿತು. ಆದರೆ ಮನೆಯಲ್ಲೂ ಸಹ ಹೆಂಗಸರು ಬದಲಾಗಿದ್ದರಿಂದ  ತಕ್ಷಣ ಏನೂ ಮಾಡಲಾಗಲಿಲ್ಲ.
ಇದಕ್ಕೆಲ್ಲಾ ಕಾರಣ ಜಸಿಂತಾ ಎಂದು ತಿಳಿದಾಗ ಎಲ್ಲರ ಕೋಪಕ್ಕೆ ಗುರಿಯಾದಳು.  ಅವಳೊಬ್ಬಳೇ ಮನೆಯಲ್ಲಿದ್ದಾಗ  ಕೆಲ ಜನರು ಮನೆಗೆ ನುಗ್ಗಿ ಅವಳ ಮೇಲೆ ಅತ್ಯಾಚಾರ ಮಾಡಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು. ನೋವಿನಿಂದ"ಅಮ್ಮಾ" ಎಂದು ಕಿರುಚುತ್ತಾ ಹೊರಗೋಡಿದಳು ಜಸಿಂತಾ.  
ಅಪ್ಪ ದಿಬ್ಬಾಯಿ ಬಂದವನೆ ಸುಟ್ಟು ಹೋಗುತ್ತಿದ್ದ ಮಗಳನ್ನು ನೋಡುತ್ತಾ "ನನ್ತಾಯಿ ಊರು ನಿನ್ನನ್ನು ಬಲಿ ತಗಂಡುಬಿಡ್ತಲ್ಲಾ" ಎಂದು ರೋಧಿಸಲಾರಂಭಿಸಿದನು. ಊರಿಗೆಲ್ಲಾ ಸುದ್ದಿ ಹರಡಿ ಎಲ್ಲರೂ ಬಂದು ಜಸಿಂತಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ  ಜಸಿಂತಾ ಕಣ್ಣ್ಮುಚ್ಚಿ ಮಲಗಿದ್ದಳು.
ಗೆಳತಿಯರೆಲ್ಲರೂ ನೋಡಲು ಬಂದರು. ಅವರ ಬರುವನ್ನೇ ಕಾಯುತ್ತಿದ್ದವಳಂತೆ ಕಣ್ತೆರೆದಳು. "ಇಷ್ಟೇನಾ, ಮನುಷ್ಯರು‌ ಯಾವಾಗಲೂ ಕ್ರೂರಿಗಳಾಗಿರುತ್ತಾರಾ? ನಾವು ಯಾರೂ ಏನೂ ಮಾಡಲಾರೆವಾ, ಪ್ರಪಂಚವನ್ನು ಬದಲಾಯಿಸುವುದು ಸಾಧ್ಯವಿಲ್ಲವಾ?" ಎಂದು ಪ್ರಶ್ನಿಸುತ್ತಿದ್ದವು ಅವಳ ಕಂಗಳು. ನಂತರ ಮುಚ್ಚಿಕೊಂಡವು. ರಾಜಕೀಯ ವೈಷಮ್ಯಕ್ಕೆ ಬಲಿಯಾದ ಜಸಿಂತಾಳ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಕೊಡಿಸಲು ಮಹಿಳೆಯರೆಲ್ಲರೂ ಪ್ರತಿಭಟನೆ ಪ್ರಾರಂಭಿಸಿದರು. ಹೀಗೆ ಒಂದಾದ ಸ್ತ್ರೀ ಶಕ್ತಿಯನ್ನು ಯಾರಿಂದಲೂ ತಡೆಯಲಾಗಲಿಲ್ಲ.
  ತೆಲುಗು ಲೇಖಕಿ ಓಲ್ಗರವರು "ಆಕಾಶಂಲೋ ಸಗಂ" ಕಾದಂಬರಿಯಲ್ಲಿ ಮಹಿಳೆ ಹೇಗೆ ಮನೆಯವರಿಂದ ಹಾಗೂ ಹೊರಗೂ ಶೋಷಿತಳಾಗುತ್ತಾಳೆ ಎಂಬುದನ್ನು ತಿಳಿಸಿದ್ದಾರೆ. "ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ" ಎಂಬಂತೆ ವಿದ್ಯೆ ಕಲಿತ ಜಸಿಂತಾಳನ್ನು ಎಲ್ಲರ ದನಿಯಾಗಿ ಬಿಂಬಿಸಿದ್ದಾರೆ. ತಮ್ಮ ದಿನನಿತ್ಯದ ಕೆಲಸಕ್ಕಾಗಿ ಮುಜುಗರ ಪಡುತ್ತಿದ್ದದ್ದನ್ನು ತಪ್ಪಿಸಿದರೂ ಅದಕ್ಕಾಗಿ ಬಲಿಯಾದ ಜಸಿಂತಾ ಎಲ್ಲರಿಗೂ ಮಾದರಿಯಾಗುತ್ತಾಳೆ.
ಇದನ್ನು ತೆಲುಗು ಭಾಷೆಯಿಂದ ಅಷ್ಟೇ ಅಚ್ಚುಕಟ್ಟಾಗಿ  ಮಿಸ್ ಸಂಪತ್ (ಟಿ ಎಸ್ ರುಕ್ಮಾಯಿ) ರವರು ಕನ್ನಡಕ್ಕೆ ಅನುವಾದಿಸಿದ್ದಾರೆ.

- ವಿಜಯಲಕ್ಷ್ಮಿ ಎಂ ಎಸ್