Pages

ಬೆಳಕಿನೆಡೆಗೆ – 1




ಪ್ರಮೀಳಾ ಒಂದು ದಿನ ಇದ್ದಕ್ಕಿದ್ದ ಹಾಗೆ ಹೊಟ್ಟೆನೋವಿನಿಂದ ಅಳುವುದಕ್ಕೆ ಶುರುಮಾಡಿದಳು. ಏನು, ಎತ್ತ ಎಂದ ಗಂಡ ಶಿವಪ್ಪ ಕೇಳಲು, ಅವನ ಕಡೆಗೆ ಪ್ರಮೀಳಾ ಗಮನವೇ ಕೊಡಲಿಲ್ಲ. ಕಣ್ಣಲ್ಲಿ ಧಾರಾಕಾರವಾಗಿ ನೀರು ಸುರಿಯುವುದಕ್ಕೆ ಶುರುವಾಯಿತು. ಕೈಗಳಿಂದ ಹೊಟ್ಟೆ ಹಿಸುಕಿಕೊಳ್ಳುತ್ತಾ, ನೀರು ಕೇಳಿದಳು. ಜೋರಾಗಿ ಉಸಿರಾಡೋಕೆ ಶುರುಮಾಡಿದಳು. ನೀರು ಕೊಟ್ಟಾಗ ಗಟಗಟ ಕುಡಿದು, ನಂತರ ಪ್ರಜ್ಞೆ ಬಂದು, ‘ನನಗೆ ಏನಾಯ್ತು?’, ಎಂದು ಕೇಳ್ತಾಳೆ. ಪ್ರಮೀಳಾಳ ಈ ರೀತಿಯ ವರ್ತನೆ ನಂತರದ ದಿನಗಳಲ್ಲಿ ಹೆಚ್ಚಾಯಿತು. ಅಕ್ಕಪಕ್ಕದ ಮನೆಯವರು ಶಿವಪ್ಪನಿಗೆ ‘ಇದು ದೆವ್ವದ ಕಾಟವೆಂದು, ಯಾವುದಾದರು ಮಂತ್ರವಾದಿಯ ಬಳಿಗೆ ಕರೆದುಕೊಂಡು ಹೋಗು’ ಎಂದು ಹೇಳಿದರು. ಪಕ್ಕದ ಮನೆಯ ಅಜ್ಜ ನಾರಾಯಣಪ್ಪ ‘ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ, ಈ ರೀತಿ ಆಗುತ್ತಿದೆಯಾ?’ ಎಂದು ಕೇಳಿದರು. ಕಾಕತಾಳೀಯವೆಂಬಂತೆ ಪ್ರಮೀಳಾ ಅದೇ ದಿನಗಳಲ್ಲಿ ಈ ರೀತಿ ವರ್ತಿಸುತ್ತಿದ್ದಳು. ಆಗ ಜನರ ಅನುಮಾನ ಗಟ್ಟಿಯಾಗಿ ‘ಇದು ಖಂಡಿತವಾಗಿಯೂ ಭೂತಚೇಷ್ಟೆನೇ’ ಅಂದರು. 
ಅದಕ್ಕೆ ಶಿವಪ್ಪ ಹೆದರಿ ಮಂತ್ರವಾದಿಗಳ ಬಳಿ ಕರೆದುಕೊಂಡು ಹೋದ. ಆ ಮಂತ್ರವಾದಿ ಪ್ರಮೀಳಾಗೆ ಬೇವಿನಸೊಪ್ಪು, ಬೂದಿ ಎಲ್ಲಾ ಹಾಕಿ ‘ನೀನು ಯಾರು? ಇವಳ ಮೈಮೇಲೆ ಏಕೆ ಬಂದಿರುವೆ? ಏನು ಬೇಕು?’ ಎಂದು ಪ್ರಶ್ನಿಸಿ ಹೊಡೆದರು. ಆದರೆ ಪ್ರಮೀಳಾ ವರ್ತನೆ ಹೆಚ್ಚಾಯಿತೇ ವಿನಃ ಯಾವ ಸುಧಾರಣೆಯೂ ಕಾಣಲಿಲ್ಲ. ಇದರಿಂದ ಕಂಗೆಟ್ಟ ಶಿವಪ್ಪ ತನ್ನ ಸ್ನೇಹಿತ ವೆಂಕಟೇಶ್‍ನ ಬಳಿ ತನ್ನ ಸಮಸ್ಯೆ ಹೇಳಿಕೊಂಡ. 
ವೆಂಕಟೇಶ್ “ಶಿವಪ್ಪ, ಇದು ದೆವ್ವದ ಕಾಟವಲ್ಲ, ನರಗಳ ದೌರ್ಬಲ್ಯದಿಂದಲೂ ಈ ರೀತಿ ಆಗುತ್ತದೆ.  ನೀನು ಒಂದು ಬಾರಿ ನಿನ್ನ ಹೆಂಡತೀನ ಮನೋವೈದ್ಯರ ಬಳಿ ಕರೆದುಕೊಂಡು ಹೋಗು”, ಎಂದರು. ಯಾವ ದಾರಿಯೂ ಕಾಣದೆ ಕಂಗಾಲಾಗಿದ್ದ ಶಿವಪ್ಪನಿಗೆ ದಾರಿ ಸಿಕ್ಕಿದಂತಾಗಿ ಪ್ರಮೀಳಾಳನ್ನು ಮನೋವೈದ್ಯರ ಬಳಿ ಕರೆದೊಯ್ದು. ಅಲ್ಲಿ ಮನೋವೈದ್ಯರ ಎಲ್ಲಾ ರೀತಿ ಚಿಕಿತ್ಸೆ ನೀಡಿದಾಗ ಪ್ರಮೀಳಾಳ ವಿಚಿತ್ರ ರೀತಿಯ ವರ್ತನೆಗೆ ಕಾರಣ ತಿಳಿಯಿತು. ಪ್ರಮೀಳಾಳ ಅಸ್ವಸ್ಥತೆಗೆ ಕಾರಣ ಅವಳ ಅತ್ತೆಯ ಕಾಟ ಎಂಬುದು ಮನೋವೈದ್ಯರು ಅವಳನ್ನು ಪ್ರಶ್ನಿಸಿದಾಗ ತಿಳಿಯಿತು. “ನಾನು ಈ ರೀತಿ ಮಾಡಿದರೆ ಅತ್ತೆ ನನ್ನ ತಂಟೆಗೆ ಬರೋಲ್ಲ ಎಂದು ಈ ರೀತಿ ಮಾಡಿದೆ” ದೈನ್ಯದಿಂದ ನುಡಿದಳು. ಚಿಕಿತ್ಸೆಯ ನಂತರ ಅವಳು ಈಗ ಆರೋಗ್ಯವಾಗಿದ್ದಾಳೆ. ಡಾಕ್ಟರ್ ಗಂಡನಿಗೆ ಬುದ್ಧಿ ಹೇಳಿದ ಮೇಲೆ ಅತ್ತೆಯ ಕಾಟ ಕಡಿಮೆಯಾಗಿದೆ.
ಈ ಮೇಲಿನ ಘಟನೆಯಿಂದ ತಿಳಿದು ಬರುವುದೇನೆಂದರೆ, ಪ್ರತಿಯೊಬ್ಬ ವ್ಯಕ್ತಿಯ ಬಾಹ್ಯ ವರ್ತನೆಗೆ ಕಾರಣ ಆಂತರಿಕ ಅತೃಪ್ತಿಗಳು. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ನಾವು ಹೋಗಬೇಕಾದದ್ದು ಮನೋವೈದ್ಯರ ಬಳಿಗೆ ಹೊರತು ಮಂತ್ರವಾದಿಗಳ ಬಳಿಗಲ್ಲ. ದೇಹಕ್ಕೆ ಖಾಯಿಲೆಯಾದಂತೆ ಮನಸ್ಸಿಗೂ ಖಾಯಿಲೆಯಾಗಬಹುದು. ಆದರೆ ಅದು ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದರೆ ಖಂಡಿತವಾಗಿಯೂ ಗುಣವಾಗುತ್ತದೆ. 
ಅಶ್ವಿನಿ ವಿ
[ಕೃಪೆ : ಅಪೂರ್ವ ಕಣ್ಮಣಿ ಮಾಸಪತ್ರಿಕೆ ]

ಕವನಾಮೃತ : ಬಿರುಗಾಳಿ - ದಿನಕರ ದೇಸಾಯಿ


[ಕನ್ನಡದ ಹೆಮ್ಮೆಯ ಕವಿ-ಕವಯತ್ರಿಯರ ಕವನಗಳು 
ಓದುಗರ ಆಸ್ವಾದಕ್ಕಾಗಿ]

ಬಿರುಗಾಳಿಯೇ ಬೇಕು ನಮ್ಮ ಉದ್ಧಾರಕ್ಕೆ
ಪೊಳ್ಳು ಮರಗಳನೆಲ್ಲ ಭೂಮಿಗುರುಳಿಸಲಿಕ್ಕೆ

ಬೊಡ್ಡೆಯೊಂದಿಗೆ ಅಡ್ಡ ಟೊಂಗೆಗಳನೂ ಸೀಳಿ
ಹುಳಿಕಾಯಿಗಳನೆಲ್ಲ ಉರುಳಿಸಲಿ ಬಿರುಗಾಳಿ

ಚಂಡಮಾರುತದಲ್ಲಿ ಹಾರಿ ಹೋಗಲಿ ಬೆಂಡು
ಸಪ್ತ ಸಾಗರದಾಚೆ ಹರಕುಚಿಂದಿಯ ಮುಂಡು

ಸೋರುವಾ ಮಾಡಗಳು ಮುರಿದು ಬಿದ್ದರೆ ಶಾಂತಿ
ನಾರುವಾ ಗೂಡುಗಳು ಕಳಚಿ ಬಿದ್ದರೆ ಕ್ರಾಂತಿ

ದರಗೆಲ್ಲ ದೂರಾಗಿ ಚೊಕ್ಕವಾಗಲಿ ನೆಲವು
ಬಿರುಗಾಳಿಯಲ್ಲಿಯೇ ಬರಲಿ ನರನಿಗೆ ಗೆಲವು
 ದಿನಕರ ದೇಸಾಯಿ


ಕಡಲಿಂದೊಂದು ಮುತ್ತು - ತಿಂಗಳುಗಳಿಗೆ ಹೆಸರು ಬಂದದ್ದು ಹೇಗೆ



ಜನವರಿ -  ಮೊದಲ ತಿಂಗಳು. ರೋಮನ್ ದೇವ ‘ಜನಸ್’ನ ಹೆಸರು.
ಫೆಬ್ರವರಿ – ರೋಮನ್ ಹಬ್ಬ ‘ಫೆಬ್ರವಾ’
ಮಾರ್ಚ್ – ‘ಮಾರ್ಸ್’, ರೋಮನ್ನರ ಯುದ್ಧ ದೇವ
ಏಪ್ರಿಲ್ - ಲ್ಯಾಟಿನ್ ಪದ ‘ಎಪಿರರ್’ ಎಂದರೆ ತೆರೆಯುವುದು ಎಂದರ್ಥ. ವಸಂತಕಾಲ ಈ ತಿಂಗಳಲ್ಲಿ ಬರುತ್ತದೆ ಮತ್ತು ಗಿಡಮರಗಳು ಅರಳುತ್ತವೆ. 
ಮೇ – ರೋಮನ್ ದೇವತೆ ‘ಮೈಮಾ’ ಹೆಸರು.
ಜೂನ್ – ‘ಜುನೋ’ - ಸ್ವರ್ಗದ ದೇವತೆ
ಜುಲೈ – ‘ಜೂಲಿಯಸ್ ಸೀಸರ್’ ಹುಟ್ಟಿದ್ದು ಈ ತಿಂಗಳಲ್ಲಿ. ಆಧುನಿಕ ಕ್ಯಾಲೆಂಡರ್‍ನ ಬೆಳವಣಿಗೆಯಲ್ಲಿ ಈತನ ಕೊಡುಗೆ ದೊಡ್ಡದು.
ಆಗಸ್ಟ್ – ರೋಮ್‍ನ ರಾಜ ‘ಅಗಸ್ಟಸ್’ ಈ ತಿಂಗಳಲ್ಲಿ ಬಹಳ ವಿಜಯಗಳನ್ನು ಸಾಧಿಸಿದ.
ಸೆಪ್ಟೆಂಬರ್ - ಲ್ಯಾಟಿನ ಪದ ‘ಸೆಪ್ಟಂ’ ಎಂದರೆ ಏಳು. (ಹಳೆಯ ರೋಮನ್ ಕ್ಯಾಲೆಂಡರ್‍ನಲ್ಲಿ ಇದು ಏಳನೇ ತಿಂಗಳಾಗಿತ್ತು.
ಅಕ್ಟೋಬರ್- ರೋಮನ್ ಪದ ‘ಅಕ್ಟೋ’ ಎಂದರೆ ಎಂಟು. (ಹಳೆಯ ರೋಮನ್ ಕ್ಯಾಲೆಂಡರ್‍ನಲ್ಲಿ ಇದು ಎಂಟನೇ ತಿಂಗಳಾಗಿತ್ತು.
ನವೆಂಬರ್- ಲ್ಯಾಟಿನ ಪದ ‘ನವೆಂ’ ಎಂದರೆ ಒಂಬತ್ತು. (ಹಳೆಯ ರೋಮನ್ ಕ್ಯಾಲೆಂಡರ್‍ನಲ್ಲಿ ಇದು ಒಂಬತ್ತನೇ ತಿಂಗಳಾಗಿತ್ತು.
ಡಿಸೆಂಬರ್ - ಲ್ಯಾಟಿನ ಪದ ‘ಡಿಸೆಂ’ ಎಂದರೆ ಹತ್ತು. (ಹಳೆಯ ರೋಮನ್ ಕ್ಯಾಲೆಂಡರ್‍ನಲ್ಲಿ ಇದು ಹತ್ತನೇ ತಿಂಗಳಾಗಿತ್ತು.
- ಸುಧಾ ಜಿ
ಕೃಪೆ : ಅಪೂರ್ವ ಕಣ್ಮಣಿ ಮಾಸಪತ್ರಿಕೆ  

ಅನುಭವ - ದಸರಾ ಗೊಂಬೆ ಆರತಿಗೆ.......



ಹಬ್ಬಕ್ಕ್ಕೆ ಕುಂಕುಮಕ್ಕೆ  ಮನೆಗೆ, ಗೊಂಬೆ ಆರತಿಗೆ,  ಇವತ್ತು ನಮ್ಮನೆ ಅತಿಥಿ ನೀವು, ಮಗಳೊಂದಿಗೆ ಬನ್ನಿ ಎಂದಾಗ, ವಿಜಯಲಕ್ಷ್ಮಿಯವರ ಶ್ರೀಯುತ ಗುರುರಾಜ್ ರವರು ಕರೆದಾಗ ಮೊದಲು ಅವಕ್ಕಾದವಳು ನಾನು. ಹೆಂಗಸರಷ್ಟೆ ಕರೆಯುವವರು ಎಂದುಕೊಂಡಿದ್ದ ನನಗೆ ನಗು ಖುಷಿ. ನನ್ನ ಶ್ರೀಯುತರ ಆಫೀಸಿನಲ್ಲಿ ಸಹದ್ಯೋಗಿಯಾದ ಇವರ ನುಡಿ, ನಡೆ ಸೌಜನ್ಯ, ಮಮಕಾರದ ಎಲ್ಲೆಯನ್ನೆಂದು ದಾಟಿದ್ದೇ ಇಲ್ಲ.........
"ದೂರ ಬೆಟ್ಟದಲ್ಲೊಂದು ಮನೆ ಇರಬೇಕು ಮನೆಯ ಸುತ್ತ ಹೂವ ರಾಶಿ ಹಾಕಿರಬೇಕು" ತಾರುಣ್ಯದ ಕನಸು. ಗೊಂಬೆಯಂತ ಮಕ್ಕಳು ರಾಮನ  ಗುಣಗಳಿರುವ ಗಂಡ ನನ್ನವನಾದಾಗ ಮನೆಯಲ್ಲಿ ದಸರಾ ಹಬ್ಬ ಇದ್ದು ಮನೆ ತುಂಬ ಗೊಂಬೆಗಳಿರಬೇಕು ಎಂಬ ಭಾವ ವಿಜಯಕ್ಕನ ಮನೆಗೆ ಬಂದಾಗ ಅನಿಸಿದ್ದು ಸತ್ಯ. ಅವರ ಮೊದಲ ಭೇಟಿಯ ಉಪಚಾರ ಅಕ್ಕ ಭಾವ ಇದ್ದಿದ್ದರೆ ಹೀಗೆ ಇರುತ್ತಿತ್ತೇನೋ ಎಂಬಂತೆ ಎನಿಸಿತು.
‌ಹಬ್ಬಗಳೆಂದರೆ ನನಗಂತು ದೂರ ದೂರ. ಗದ್ದಲ, ಗೌಜುಗಳನೆಂದೂ ಪ್ರೀತಿಸಿದ ನನಗೆ ಇವುಗಳನ್ನು ಕರ್ತವ್ಯದಂತೆ ಪಾಲಿಸಿದ್ದೇ ಹೆಚ್ಚು. ಆಡಂಬರ, ಬರಿ ಪ್ರತಿಷ್ಟೆಯ ಸಂಕೇತವಾಗಿರುವ ಇವುಗಳನ್ನು ತಿರಸ್ಕಾರದಿಂದ ಕಂಡಿದ್ದೇ ಹೆಚ್ಚು. 
ಯಾರ ಮನೆಗೆ  ಕುಂಕುಮಕ್ಕೂ ಹೋಗದ ನಾನು ಗುರು ದಂಪತಿಗಳ ಒತ್ತಾಯಗಳಿಲ್ಲದ ನಿರ್ಮಲ ನೇರನುಡಿ ಅವರ ಮನೆಗೆ ನಡೆಸಿತು.
ಮನೆ ಕಟ್ಟಿದ ರೀತಿ, ಒಳಾಂಗಣ, ಮನೆಯ ಶೈಲಿ, ಮನೆ ಜನರ ಸರಳತೆ ವಿಚಿತ್ರವಾದ ಆಪ್ಯತೆಯನ್ನು, ಎಷ್ಟು ಸಹಜವಾಗಿ ಇದ್ದಾರಲ್ಲ ಎಂಬ ಗೌರವ ಮೂಡಿಸಿತು. ಹಬ್ಬದ ಸಖ್ಯತೆ ಮೊದಲಬಾರಿ ಎಂಬಂತೆ ಅನುಭವಿಸಿದೆ. 
ಹೊಳಿಗೆ , ಬಾಳೆಕಾಯಿ ಚಿಪ್ಸ್ ಸವಿಯುತ್ತ ಒಂದೊಂದೆ ಗೊಂಬೆಗಳ ಸಾಲುಗಳನ್ನ ಅವಲೋಕಿಸತೊಡಗಿದೆ. ಗೊಂಬೆ ಜೋಡಿಸುವುದು ಕಲೆ ಎಂದಿತು ಮನಸ್ಸು. ಅಪರಿಮಿತ ತಾಳ್ಮೆ, ಮನಸ್ಸಿನ ಸಂಭ್ರಮಗಳಿಲ್ಲದಿದ್ದರೆ ಇದು ಅಸಾಧ್ಯ ಎನಿಸಿದ್ದಂತು ಸುಳ್ಳಲ್ಲ.....
ಮಾರುಕಟ್ಟೆ ಸಾಲು, ಶೆಟ್ಟರ ದಂಪತಿಗಳ ಅಂಗಡಿ, ಹಣ್ಣಿನ ಬುಟ್ಟಿ ಅಂಗಡಿಯ ಅಜ್ಜಿ, ಸರಕು ಸಾಮಾಗ್ರಿಗಳುಳ್ಳ ಏಕಾಂಗಿ ವ್ಯಾಪಾರಸ್ಥರು ನೋಡುತ್ತ ಪುಟ್ಟ ಮಕ್ಕಳಂತೆ ಸಂಭ್ರಮಿಸಿದೆ. ಎರಡನೆಯ ಸಾಲು ಮದುವೆಮನೆ ವಿವಿಧ ನಮೂನೆಯ ದಂಪತಿಗಳ ನಡುವೆ ನವದಂಪತಿಗಳ ಮದುವೆ ಅಕ್ಕ ಪಕ್ಕ ಗದ್ದಲ ತೋರುವ ಗೊಂಬೆಗಳು.

ಮತ್ತೊಂದು ಸಾಲು ಸೈನಿಕರ ದಳ, ನೃತ್ಯಗಾರರ ಗುಂಪುಗಳು ಕೊನೆಸಾಲಿನಲ್ಲಿ ರಾಮ, ರಾವಣರ ದರ್ಬಾರುಗಳು, ಕುಂಬಕರ್ಣನ ಅಂಥಃಪುರ, ಕೃಷ್ಣನಬಾಲ್ಯದ ವಿವಿಧ ಪವಾಡಗಳ ಸಾಲು. ದಶಾವತಾರ ಓ ಕಣ್ಮನಗಳಿಗೆ ಬಣ್ಣದ ಓಕುಳಿ ತಂಪು ನಮ್ಮಮನಗಳಲ್ಲಿ ಹರಿದಿತ್ತು. ಬೆಟ್ಟಗುಡ್ಡ , ಅರಣ್ಯ, ಜಲಪಾತ, ತೋಟ, ಕಾಡು, ಹಸಿರೇ ಹಸಿರು ನವಧಾನ್ಯಗಳಲ್ಲಿ ತುಂಬಿದ ಗದ್ದೆ ಮನುಜನ ಎಲ್ಲ ಸಂಸ್ಕೃತಿಯ ಮಜಲುಗಳು ಇಲ್ಲಿ ತಾಯಿ ಮಗಳ ಕೈಜೋಡಣೆಯಲ್ಲಿ ಅರಳಿದ್ದವು. ಬಾಲ್ಯದ ಹೊಂಬಳದ ಕೆಳಗಿನ ಮೆಟ್ಟಲು ಮನೆಯಲ್ಲಿ ಅಜ್ಜಿ ಕರಿಗೊಂಬಿ ಜೋಡಿಸುತ್ತಿದ್ದದ್ದು ಮಸಕುಮಸಕು ನೆನಪುಗಳು ಅಕ್ಕದಿರೊಂದಿಗೆ ಆಡಿದ್ದು, ನಲಿದದ್ದು ಮಸಕು ಮಸಕು ನೆನಪು....
ಒರಗಿತ್ತಿ ರತ್ನ ಹಾಗು ನನ್ನ ಮಗಳು ಅದಿತಿ "ಚಂದನದ ಗೊಂಬಕ್ಕ...ಗಂಧವ ತೇಯೋವಳೆ..ಗುಂಡುಗುಲಗಂಜಿ ಮುಡಿಯೋಳೆ ಬೊಂಬಕ್ಕ....ರಂಬೆ ಬಾ ಹಸೆಗೆ, ಜಗುಲಿಗೆ ಅಡ್ಡರ ಮುಡಿಸುವ ದೊಡ್ಡರಮನೆಗೆ ಅಡ್ಡಗಂಗಳದಿ ಚಲುವ ಬೊಂಬಕ್ಕನ ಅಡ್ಡ ಮುಡಿ ಹೂವ ಮೂಡಿಸಿದರು." ಅಂತ ಆರತಿ ಹಾಡುತ ನಿಂತಾಗ ಎಷ್ಟೆ ವಯಸ್ಸಾದರು ಬಾಲ್ಯ‌ ಮೀರಲೆ ಇಲ್ಲ ಇವರು ಅಂತ ಗೊಣಗುಡುತ, ಚಕ್ಕಲಿ, ಕೊಡಬೋಳೆ, ಆಂಬೊಡೆ ಬಾಯಾಡಿಸುತ ಬರಿ ಇಷ್ಟೇ ಆಯಿತು ಜೀವನ ಅಂತ ಗೊಣಗುಡುತ ನಡೆಯುತ ಬದುಕಲಿ ಇಂಥವೆಲ್ಲ ಇದ್ದರೇನೆ ಚಂದ ಅಂತಾನು ಹೇಳ್ತಾ ನಡೆಯುವ ಅವಳ ಕಂಡಾಗ ನಗುತ ಎಷ್ಟೋ ಸಲ ಅರ್ಥವಿಲ್ಲದ ಧಾವಂತ ಮನಸಲ್ಲಿ ಅಂದುಕೊಂಡದ್ದು ಉಂಟು. ಯಾರದೋ ಮನೆಯಲಿ, ಯಾರದಾರದೊ ಅನಿಸಿಕೆಗಳೊಡನೆ, ಆಸೆ, ಕನಸುಗಳೊಡನೆ ಬದುಕುವ ಪರಿಯೇ ಬದುಕಾದಾಗ ಈ ಸಂಭ್ರಮಗಳು ಹೇಗೆ ಎಲ್ಲಿ ಬದುಕಿನ ಚಿಲುಮೆಗಳಾಗಿ ಹೇಗೆ ಬದಲಾಗಬಲ್ಲವು ಎಂದು ಯೋಚಿಸುವುದರೊಳಗೆ ಎರಡನೆ ಶನಿವಾರ ಸಂಪನ್ನವಾಗಿ ಸಂಜೆ ಅವಳೊಡನೆ ಅವಳ ತಂಗಿ ಮನೆಗೆ ಹೋಗದಿದ್ದರೆ ಮನದಲ್ಲಿ ನೊಂದುಕೊಳ್ಳುವಳಲ್ಲ ಎನ್ನುತ್ತಲೇ ದೇವಿ ಇಂದು ಗ್ರೇ ಕಲರ್ ನಲ್ಲಿ ರಾರಾಜಿಸುತ್ತಾಳೆ ಎಂದು color ದಸರಾ ಯು ಟ್ಯೂಬ್ ವಿಡಿಯೋ ಹೇಳಿದ್ದು ನೆನಪಾಗಿ ಆ ಬಣ್ಣದ ಸೀರೆಯುಟ್ಟು ಜುಮುಕಿಯೊಡನೆ ರೆಡಿಯಾದೆ...ಮಗಳು ಚಂದನದ ಬೊಂಬಕ್ಕ ಅಂತ ನೋಡಿದಾಗ ನಗುತ್ತ ಹಾಡತೊಡಗಿದಳು......
- ಸವಿತಾ

ವ್ಯಕ್ತಿ ಪರಿಚಯ - ಮೇಧಾ ಪಾಟ್ಕರ್




ನರ್ಮದಾ ನದಿ ಹೆಸರಿನೊಂದಿಗೆ ಕೇಳಿ ಬರುವ ಮತ್ತೊಂದು ಹೆಸರು ಪರಿಸರವಾದಿ, ಬುಡಕಟ್ಟು ಸಮುದಾಯದ ಪರ ನಿಂತು ಹೋರಾಟ ಮಾಡುತ್ತಿರುವ ಮಹಿಳೆ ಮೇಧಾ ಪಾಟ್ಕರ್.
ಮೇಧಾರವರು 1954 ಡಿಸೆಂಬರ್ 1 ರಂದು ಮುಂಬಯಿಯ ಚೆಂಬೂರಿನಲಿ ಜನಿಸಿದರು. ತಂದೆ ವಸಂತ ಖಾನೋಲ್ಕರ್, ಇವರು ಕೂಡ ಸ್ವಾತಂತ್ರ್ಯ ಹೋರಾಟಗಾರರು,ಕಾರ್ಮಿಕ ಚಳುವಳಿಯಲ್ಲಿ ಭಾಗವಹಿಸಿದವರು. ತಾಯಿ ಇಂದೂ ಖಾನೋಲ್ಕರ್ ಮಹಿಳಾ ಸಂಘಟನೆಯಲ್ಲಿ ಭಾಗವಹಿಸುತ್ತಿದ್ದರು. ಸ್ವಧಾರ್ ಎಂಬ ಸಂಘಟನೆಯಲ್ಲಿದ್ದವರು. ಇಂತಹ ಕುಟುಂಬದಲ್ಲಿ ಜನಿಸಿದ ಮೇಧಾರವರಲ್ಲಿ ಹೋರಾಟ ರಕ್ತಗತವಾಗಿಯೇ ಹರಿದು ಬಂದಿತು. ಬಾಲ್ಯದಿಂದಲೂ ಸಮಾಜಸೇವೆ ಎಂದರೆ ಮುನ್ನುಗ್ಗುತ್ತಿದ್ದರು. ತಮ್ಮ ಶಿಕ್ಷಣದಲ್ಲೂ ಸಮಾಜ ಸೇವೆಯನ್ನೇ ಆಯ್ದುಕೊಂಡರು. ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ನಲ್ಲಿ ಸಾಮಾಜಿಕ ಸೇವಾಕಾರ್ಯಗಳ ಬಗ್ಗೆ ಸ್ನಾತಕೋತ್ತರ ಪದವಿಯನ್ನು ಪಡೆದರು.  
ಶಿಕ್ಷಣ ಮುಗಿಸಿದ ನಂತರ ಇವರು ಮುಂಬೈನಲ್ಲಿ ಕೆಲವು ಸ್ವಯಂ ಸೇವಾ ಸಂಘದೊಡನೆ ಕೆಲಸ ಮಾಡಿದರು. ಮಕ್ಕಳಿಗೆ ಶಿಕ್ಷಣಮಹಿಳೆಯರಿಗೆ ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು ಹಾಗೂ  ಮೂಲಭೂತ ಸೌಕರ್ಯಗಳ ಬಗ್ಗೆ ಅವರಿಗೆ ವಿವರಿಸಿ ಅವರು ತಮ್ಮ ಹಕ್ಕುಗಳಿಗಾಗಿ ಹೋರಾಡುವಂತೆ ಉತ್ತೇಜಿಸಿದರು. ನಂತರ ಇವರು ಟಾಟಾ ಇನ್ಸಿಟ್ಯೂಟ್ನಲ್ಲಿ ಪಿಎಚ್‌ಡಿ  ಮಾಡುತ್ತಾ ಬೋಧನೆ ಕಾರ್ಯವನ್ನು ಮಾಡುತ್ತಿದ್ದರು. ಜೊತೆಯಲ್ಲಿಯೇ ಸಮಾಜ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು.
ಆ ಸಮಯದಲ್ಲಿ ಈಶಾನ್ಯ ಗುಜರಾತಿನಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದ ಬುಡಕಟ್ಟು ಸಮುದಾಯದವರ ಶೋಚನೀಯ ಸ್ಥಿತಿಯನ್ನು ನೋಡಿ ಮೇಧಾರವರು ತಮ್ಮ ವೈಯಕ್ತಿಕ ಸಾಧನೆಯನ್ನು ಬಿಟ್ಟು ಬುಡಕಟ್ಟು ಸಮುದಾಯದವರ ಸುಧಾರಣೆಗಾಗಿ ತಮ್ಮ  ಜೀವನವನ್ನು ಮುಡಿಪಾಗಿಟ್ಟರು.
ಸ್ವಾತಂತ್ರ್ಯಾ ನಂತರ ದೇಶದ ಅಭಿವೃದ್ಧಿ ಸರ್ಕಾರದ ಗುರಿಯಾಯಿತು. ಈ ನಿಟ್ಟಿನಲ್ಲಿ ಸರ್ಕಾರವು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಾರಂಭಿಸಿತು. ಪಂಚವಾರ್ಷಿಕ ಯೋಜನೆಗಳ ಮೂಲಕ ಹಲವಾರು ಬೃಹತ್‌ ಅಣೆಕಟ್ಟು  ಯೋಜನೆಗಳನ್ನು ಜಾರಿಗೆ ತಂದಿತು. ಇವುಗಳು ಬಹುಪಯೋಗಿ ಯೋಜನೆಗಳೆಂದು ಅಂದಿನ ಪ್ರಧಾನಿ ನೆಹರೂ ಅವರು "ಅಣೆಕಟ್ಟುಗಳು ಆಧುನಿಕ ಭಾರತದ ದೇವಾಲಯಗಳು" ಎಂದು ಅಭಿಪ್ರಾಯಪಟ್ಟಿದ್ದರು.
ಈ ಯೋಜನೆಗಳಿಂದ ಎಲ್ಲರಿಗೂ ಕುಡಿಯುವ ನೀರು ಕೃಷಿಕರಿಗೆ ನೀರಾವರಿ ಕೈಗಾರಿಕೆಗಳು ಮೊದಲಾದವುಗಳಿಗೆ ವಿದ್ಯುತ್ ಪೂರೈಕೆ ನಿರುದ್ಯೋಗ ಮೊದಲಾದ ಉಪಯೋಗಗಳು ಮೇಲ್ನೋಟಕ್ಕೆ ಕಾಣುತ್ತಿತ್ತು. ಆದರೆ ಒಳಹೊಕ್ಕು ನೋಡಿದರೆ ಇದರಲ್ಲಿ ಹಲವಾರು ಸಮಸ್ಯೆಗಳು ಇದ್ದವು. ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿ ದೊಡ್ಡ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಿದಾಗ ಅದು ಹಲವಾರು ಹಳ್ಳಿಗಳನ್ನು ಮುಳುಗಿಸುತ್ತಿತ್ತು. ಅಲ್ಲಿನ ಜನರೆಲ್ಲರೂ ತಮ್ಮ ಮನೆ ಜಮೀನು ಎಲ್ಲವನ್ನೂ ಬಿಟ್ಟು ಬೇರೆಡೆಗೆ ಹೋಗಬೇಕಾಗಿತ್ತು . ಇದರಿಂದ ಅವರ ಜೀವನ ರೀತಿ, ಸಂಸ್ಕೃತಿ ಎಲ್ಲವೂ ಬದಲಾಗುತ್ತಿತ್ತು. ಆರಂಭದಲ್ಲೇ ಇದಕ್ಕೆ ಪ್ರತಿರೋಧ ಕಂಡು ಬಂದರೂ ಯಾರೂ ಅಷ್ಟಾಗಿ ಚಿಂತಿಸಲಿಲ್ಲ ಸ್ವಾವಲಂಬಿ ರಾಷ್ಟ್ರದ ಚಿಂತನೆಯಲ್ಲಿದ್ದ ಸರ್ಕಾರ ಇದನ್ನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳಲಿಲ್ಲ. ಸಂತ್ರಸ್ತರು ತಮ್ಮ ಕಳೆದುಕೊಂಡ ಭೂಮಿಯಷ್ಟೇ ಮೌಲ್ಯದ ಭೂಮಿಯನ್ನು ಅಥವಾ ಜೀವನೋಪಾಯವನ್ನು ಕಲ್ಪಿಸಿಕೊಡಿ ಎಂದು ಹೋರಾಡಲು ಪ್ರಾರಂಭಿಸಿದರು. ಆದರೆ ಸಂತ್ರಸ್ತರಿಗೆ ಕನಿಷ್ಠ ಪರಿಹಾರ ನೀಡಿ ಅವರನ್ನು ಆ ಪ್ರದೇಶದಿಂದ ಬೇರೆ ಕಡೆಗೆ ಕಳುಹಿಸಲಾಗುತ್ತಿತ್ತು ವಿನಃ ಅವರ ಸಂಸ್ಕೃತಿ, ಜೀವನಪದ್ಧತಿಗಳ ಬಗ್ಗೆ ಸರ್ಕಾರ ಗಮನಿಸಲಿಲ್ಲ.
ಇಂತಹ ಅಣೆಕಟ್ಟು ಯೋಜನೆಗಳಲ್ಲಿ ನರ್ಮದಾ ಯೋಜನೆಯೂ ಒಂದು.  ನರ್ಮದಾ ನದಿಯ ಮಧ್ಯಪ್ರದೇಶದ ಅಮರಕಂಟಕ ಎಂಬಲ್ಲಿ  ಹುಟ್ಟುತ್ತದೆ. ಇದು ಮಧ್ಯಪ್ರದೇಶ ಮಹಾರಾಷ್ಟ್ರಗಳಲ್ಲಿ ಹರಿದು ಗುಜರಾತಿನಲ್ಲಿ ಬಂದು ಸಮುದ್ರಕ್ಕೆ ಸೇರುತ್ತದೆ. ನರ್ಮದಾ ನದಿ ಹರಿಯುವ ಪ್ರದೇಶಗಳು ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶಗಳಾಗಿವೆ. ಇಲ್ಲಿ ಬುಡಕಟ್ಟು ಸಮುದಾಯಗಳು ಆದಿವಾಸಿಗಳು ವಾಸಿಸುತ್ತಿದ್ದಾರೆ. ಇವರ ಕಸುಬು ಕೃಷಿ ಚಟುವಟಿಕೆ ಪಶುಸಂಗೋಪನೆ. ಈ ನಿತ್ಯದ ಚಟುವಟಿಕೆಗಳಿಗೆಲ್ಲ ನರ್ಮದೆಯ ಆಧಾರ. ಇಂತಹ ಪರಿಸ್ಥಿತಿಯಲ್ಲಿ ನರ್ಮದೆಗೆ ಅಣೆಕಟ್ಟು ಕಟ್ಟಿದರೆ ಇವರ ಬದುಕು ಬಹುತೇಕ ನಾಶವಾದಂತೆಯೇ ಸರಿ.
1921 ರಲ್ಲಿ ಬ್ರಿಟಿಷ್ ಸರಕಾರವೇ ನರ್ಮದೆಗೆ ಅಣೆಕಟ್ಟು ಕಟ್ಟುವ ಯೋಜನೆಯನ್ನು ಹೊಂದಿತ್ತು. 1961 ರಲ್ಲಿ ಗುಜರಾತ್ ಸರ್ಕಾರ ಮೊದಲ ಹಂತಕ್ಕೆ ಅನುಮತಿ ಕೊಟ್ಟಿತು. 1968ರಲ್ಲಿ ಸರ್ಕಾರ ಸಮಿತಿಯೊಂದನ್ನು ನೇಮಿಸಿತು. ಅದು 1971 ರಲ್ಲಿ ಸಮಿತಿ ತನ್ನ ವರದಿಯನ್ನು ನೀಡಿತು. ಇದರ ಪ್ರಕಾರ ಅಣೆಕಟ್ಟು ನಿರ್ಮಾಣದಿಂದ ಗುಜರಾತ್ ರಾಜಸ್ತಾನ ಮತ್ತು ಮಹಾರಾಷ್ಟ್ರಗಳ 5 ಕೋಟಿ ಜನರಿಗೆ ಕುಡಿಯುವ ನೀರು ಕೃಷಿಗೆ ನೀರಾವರಿ ಮತ್ತು ಕೈಗಾರಿಕೆಗಳಿಗೆ  ಬೇಕಾದ ವಿದ್ಯುತ್ ನೀಡುತ್ತೇವೆ, ಜೊತೆಗೆ ಅರಣ್ಯ ಪ್ರದೇಶಗಳ ನಾಶ ಹಲವು ಹೆಕ್ಟೇರ್ ಕೃಷಿ ಭೂಮಿ ಮತ್ತು ಮನೆಗಳ ಮುಳುಗಡೆ ಕೆಲವು ಸಾವಿರ ಜನರು ತಮ್ಮ ನೆಲೆ ಬಿಟ್ಟು ಬೇರೆಡೆಗೆ ಹೋಗಬೇಕು ಎಂದು ತಿಳಿಸಿತು ಹಾಗೂ ಸಂತ್ರಸ್ತರಿಗೆ ಪುನರ್ವಸತಿ ವ್ಯವಸ್ಥೆಯಾಗುವವರೆಗೆ ಗ್ರಾಮಗಳ ಮುಳುಗಡೆ ಆಗಬಾರದು ಎಂಬ ಷರತ್ತನ್ನು ಹಾಕಿತ್ತು.

ಯೋಜನೆ ಆರಂಭವಾಗುತ್ತಿದ್ದ೦ತೆಯೇ ಅಪಾಯದ ಅರಿವನ್ನರಿತ ಕೆಲವು ಸ್ಥಳೀಯರು ಹೋರಾಟ ಪ್ರಾರಂಭಿಸಿದರು. ಇಂತಹ ಸಂದರ್ಭದಲ್ಲಿ 1985 ರಲ್ಲಿ ಮೇಧಾರವರು ಟಾಟಾ ಇನ್ಸ್ಟಿಟ್ಯೂಟ್ ನ ಹಲವು ಸಹೋದ್ಯೋಗಿಗಳೊಂದಿಗೆ ಇಲ್ಲಿನ ವಿಷಯಗಳನ್ನು ತಿಳಿಯಲು ನರ್ಮದಾ ಕಣಿವೆಗೆ ಬಂದರು. ಅಲ್ಲಿನ ಜನರ ದಾರುಣ ಸ್ಥಿತಿಯನ್ನು ಕಂಡು ಮೇಧಾರವರು ಅವರಿಗೆ ಪರಿಸ್ಥಿತಿಯನ್ನು ವಿವರಿಸಿ ಅವರಲ್ಲಿ ಅರಿವು ಮೂಡಿಸುವಲ್ಲಿ ಯಶಸ್ವಿಯಾದರು. ಇದಕ್ಕಾಗಿ ಅವರು ತಮ್ಮ ಭಾಷೆ ಎಲ್ಲವನ್ನು ಬದಲಾವಣೆ ಮಾಡಿಕೊಂಡು ಸ್ಥಳೀಯರ ಭಾಷೆಯನ್ನು ಕಲಿತು ಆದಿವಾಸಿಗಳಲ್ಲಿ ಒಬ್ಬರಾಗಿದ್ದರು. ಮೇಧಾರವರು ಸರ್ಕಾರ ಮತ್ತು ಸ್ಥಳೀಯರ ನಡುವಿನ  ಸೇತುವೆಯಾಗಿದ್ದರು.
ಈ ಎಲ್ಲಾ ಓಡಾಟದ ನಡುವೆ ಅವರು ತಮ್ಮ ಪಿಎಚ್‌ಡಿ ಅಧ್ಯಯನವನ್ನು  ಮಧ್ಯದಲ್ಲಿಯೇ ನಿಲ್ಲಿಸಿ ಹೋರಾಟದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಈ ನಡುವೆ ವಿಶ್ವಬ್ಯಾಂಕ್ ಭಾರತಕ್ಕೆ ಆರ್ಥಿಕ ನೆರವು ನೀಡಲು ಮುಂದೆ ಬಂದಿತ್ತು. ಇದರಿಂದ ದೇಶದಲ್ಲಿ ಬಹುರಾಷ್ಟ್ರೀಯ ಕಾರ್ಪೋರೇಟ್ ಸಂಸ್ಥೆಗಳು ತಲೆ ಎತ್ತಬಹುದು ಎಂದರಿತ ಮೇಧಾರವರು ಇದನ್ನು ತಡೆಯಲು ಮುಂದಾದರು. ಇದಕ್ಕಾಗಿ ಮಧ್ಯಪ್ರದೇಶದಿಂದ ಸರ್ದಾರ್ ಸರೋವರದವರೆಗೆ 36 ದಿನಗಳ ಸುದೀರ್ಘ ಪ್ರತಿಭಟನಾ ಪಾದಯಾತ್ರೆ ಕೈಗೊಂಡರು. ಅಹಿಂಸಾತ್ಮಕ ಪ್ರತಿಭಟನೆ ಮಾಡುತ್ತಿದ್ದರೂ ಪೋಲಿಸರು ಸತ್ಯಾಗ್ರಹಿಗಳ ಮೇಲೆ ಕೈ ಮಾಡಿದರು. ಮೇಧಾರವರ ಮೇಲೂ ಕೈ ಮಾಡಿದರು. ಇದರಿಂದ ಅವರ ಹೋರಾಟಕ್ಕೆ ಮತ್ತಷ್ಟು ಬೆಂಬಲ ದೊರೆಯಿತು. ಸ್ಥಳೀಯವಾಗಿ ಹೋರಾಟ ನಡೆಸುತ್ತಿದ್ದ ಎಲ್ಲರೂ ಒಂದೆಡೆ ಸೇರಿದರು.

ಪರಿಣಾಮವಾಗಿ 1989 ರಲ್ಲಿ ಮೇಧಾರವರ ನೇತೃತ್ವದಲ್ಲಿ 'ನರ್ಮದಾ ಬಚಾವೊ ಆಂದೋಲನ' ರಚನೆಯಾಯಿತು. ಜನ ಜೀವನ ಮತ್ತು ಪರಿಸರಕ್ಕೆ ಮಾರಕವಾಗಿದ್ದ ಯೋಜನೆಯನ್ನು ನಿಲ್ಲಿಸುವುದು ವಿಶ್ವ ಬ್ಯಾಂಕನ್ನು ಇದರಿಂದ ಹೊರಗಿರಿಸುವುದು ಮತ್ತು ನರ್ಮದಾ ಕಣಿವೆಯ ಜನಕ್ಕೆ ಸರಿಯಾದ ಮಾಹಿತಿ ನೀಡಿ ಅವರ ಪುನರ್ವಸತಿ ಮತ್ತು ಪರಿಹಾರ ನೀಡಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಈ ಆಂದೋಲನಕ್ಕೆ ಯುವಕರು ಸಾಮಾಜಿಕ ಕಾರ್ಯಕರ್ತರು ಎಲ್ಲರೂ ಸೇರಿದರು. ಪ್ರಖ್ಯಾತ ಪರಿಸರವಾದಿ ಗಾಂಧಿವಾದಿ ಸಾಮಾಜಿಕ ಕಾರ್ಯಕರ್ತ ಬಾಬಾ ಆಮ್ಟೆ ಅವರು ಇವರ ಜೊತೆ ಕೈಜೋಡಿಸಿದರು. 1990 ರಲ್ಲಿ 5000 ಕ್ಕೂ ಹೆಚ್ಚು ಸಂತ್ರಸ್ತರು ಧರಣಿ ಸತ್ಯಾಗ್ರಹ ಮಾಡಿದರು.

1991ರ ಜನವರಿಯಲ್ಲಿ ಮೇಧಾರವರು ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಇವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಇಪ್ಪತ್ತೊಂದು ದಿನಗಳವರೆಗೆ ಮುಂದುವರಿಸಿದರು. ಆದರೆ ದೇಹಸ್ಥಿತಿ ವಿಷಮಿಸಿದ್ದರಿಂದ ಉಪವಾಸವನ್ನು ನಿಲ್ಲಿಸಿದರು. ಇದನ್ನೆಲ್ಲ ನೋಡಿದ ವಿಶ್ವ ಬ್ಯಾಂಕ್ ಯೋಜನೆಯ ಬಗ್ಗೆ ತಿಳಿಯಲು ಸಮಿತಿಯೊಂದನ್ನು ನೇಮಿಸಿತು. 1993 ರಲ್ಲಿ ಈ ಸಮಿತಿ ಪುನರ್ವಸತಿ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುವುದು ಸತ್ಯ ಎಂಬ ವರದಿಯನ್ನು ನೀಡಿತು. ಇದರಿಂದ ವಿಶ್ವ ಬ್ಯಾಂಕ್ ಹಣ ನೀಡುವುದಿಲ್ಲ ಎಂದು ತಿಳಿಸಿತು. ಇದು ಮೇಧಾರವರಿಗೆ ದೊರೆತ ಮೊದಲ ಗೆಲುವು. ವಿಶ್ವ ಬ್ಯಾಂಕ್ ನಿರಾಕರಣೆಯಿಂದ ಸರ್ಕಾರ ತಾನೇ ಮುಂದೆ ಬಂದು ಈ ಯೋಜನೆಗೆ ನೆರವು ನೀಡುವುದಾಗಿ ಘೋಷಿಸಿತು. ಮೇಧಾ ಮತ್ತು ಅವರ ಸಂಗಡಿಗರು ಪುನಃ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದರು. ಕೋರ್ಟ್ ಇವರ ವಾದವನ್ನು ಎತ್ತಿ ಹಿಡಿದು ಸರ್ಕಾರಕ್ಕೆ ಮುಂದುವರಿಯದಂತೆ ಹೇಳಿತು. ಇದು ಇವರಿಗೆ ದೊರೆತ ಎರಡನೇ ಗೆಲುವು. 1999ರಲ್ಲಿ ಸರ್ಕಾರ ಮತ್ತೆ ಮೇಲ್ಮನವಿ ಸಲ್ಲಿಸಿತು. ಆಗ ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ತೀರ್ಪನ್ನು  ಸರ್ಕಾರಕ್ಕೆ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಬಹುದು ಎಂದು ತಿಳಿಸಿತು. ಇದರಿಂದ ಸರ್ಕಾರ ಮತ್ತೆ ತನ್ನ ಕಾರ್ಯವನ್ನು ಆರಂಭಿಸಿತು.
ಮೇಧಾರವರು
 ಪುನರ್ವಸತಿ ವ್ಯವಸ್ಥೆಯನ್ನು ಮಾಡಿ ಮುಂದುವರಿಯಿರಿ ಅಂತ ಎಷ್ಟು ಹೇಳಿದರೂ ಕೇಳದೆ ಸರ್ಕಾರ ತನ್ನ ಕಾರ್ಯವನ್ನು ಮುಂದುವರಿಸಿತು. ಇದರಿಂದ 
ಮೇಧಾರವರು
 ತಮ್ಮ ಹೋರಾಟವನ್ನು ಇನ್ನೂ ಒಂದು ಹೆಜ್ಜೆ ಮುಂದಿಟ್ಟರು ಅದೇ ಸಮರ್ಪಣಾ ಸತ್ಯಾಗ್ರಹ. ಸರ್ದಾರ್ ಸರೋವರ ಅಣೆಕಟ್ಟಿನಲ್ಲಿ ನೀರನ್ನು ಸಂಗ್ರಹಿಸಿದಾಗ ಮೊದಲು ಮುಳುಗಡೆಯಾಗುವ ಹಳ್ಳಿ ಎಂದರೆ ಮಣಿಬೇಲಿ. 
ಮೇಧಾರವರು
 ಮಣಿಬೇಲಿಯಲ್ಲಿ ಆತ್ಮಸಮರ್ಪಣೆ ಸತ್ಯಾಗ್ರಹವನ್ನು ಪ್ರಾರಂಭಿಸಿದರು. 2002 ರಲ್ಲಿ  ನಡೆದ ಈ ಸಮರ್ಪಣಾ ಸತ್ಯಾಗ್ರಹದಲ್ಲಿ ಇವರ ಪ್ರಾಣಕ್ಕೆ ಅಪಾಯ ಉಂಟಾಗಿತ್ತು. ಅವರ ಬೆಂಬಲಿಗರು ಅವರನ್ನು ಉಳಿಸಿಕೊಂಡರು.


ನರ್ಮದಾ ಯೋಜನೆಯ ವಿರುದ್ಧ ಹೋರಾಟವಿಲ್ಲದೆ ಮೇಧಾರವರು ಇತರ ಅನೇಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಇದಕ್ಕಾಗಿ ಇವರು ಸ್ವಯಂಸೇವಾ ಸಂಘಟನೆಗಳ ಒಕ್ಕೂಟವನ್ನು ಕಟ್ಟಿದರು ಇದೇ ನ್ಯಾಷನಲ್ ಅಲಯನ್ಸ್ ಆಫ್ ಪೀಪಲ್ಸ್ ಮೂವ್ಮೆಂಟ್ (ಜನತಾ ಚಳವಳಿಗಳ ರಾಷ್ಟ್ರೀಯ ಒಕ್ಕೂಟ) ಸರ್ವರಿಗೂ ಸಮಾನ ಮತ್ತು ಸುಸ್ಥಿರ ಅಭಿವೃದ್ಧಿಯ ಒತ್ತಾಯ ಇದರ ಮೂಲ ಉದ್ದೇಶವಾಗಿತ್ತು. 
ಮೇಧಾರವರು 
ಹೋರಾಟಗಾರರು ಹಾಗೂ  ಉತ್ತಮ ವಾಗ್ಮಿ ಮತ್ತು  ಭಾಷಣಕಾರರು. ಮೂರು ಗಂಟೆಗಳ ಕಾಲ ಸುದೀರ್ಘವಾಗಿ ಭಾಷಣ ಮಾಡುತ್ತಿದ್ದರು. ಇವರು ಜನರೊಡನೆ ಸಂಪರ್ಕ ಬೆಳೆಸಲು ಸ್ಥಳೀಯ ಭಾಷೆಗಳನ್ನು  ಕಲಿತಿರುವರು. ಇವರು ಕರ್ನಾಟಕದಲ್ಲೂ ಸಹ ತಮ್ಮ ಹೋರಾಟವನ್ನು  ನಡೆಸಿರುವರು. ಕೆಜಿಎಫ್ ನಲ್ಲಿ ಚಿನ್ನದ ಗಣಿಯ ಕೆಲಸ ನಿಂತು ಹೋದ ನಂತರ ನಿರುದ್ಯೋಗಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ನಡೆದ ಹೋರಾಟದಲ್ಲಿ ಭಾಗವಹಿಸಿದ್ದರು. ಹಾಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಹೋರಾಟದಲ್ಲೂ ಸಹ ಪಾಲ್ಗೊಂಡಿದ್ದರು. ಮೇದಾರ ಅವರು ಸ್ಪೆಷಲ್ ಎಕನಾಮಿಕ್ ಝೋನ್ ಎಂಬ ಅಭಿವೃದ್ಧಿ ವಿಧಾನವನ್ನು ಸಹ ವಿರೋಧಿಸುತ್ತಿದ್ದರು ಹಾಗೂ ನದಿಗಳ ಜೋಡಣೆಯ ಬಗ್ಗೆ ಸಹಾಯ ಇವರ ವಿರೋಧವನ್ನು ತ್ತಿದ್ದರು.ಮೇದಾರವರು 2003 ರಲ್ಲಿ ಕೇರಳದ ಪಾಚಿಮಾಡ ಗ್ರಾಮದಲ್ಲಿ ನಡೆದ ಹೋರಾಟದಲ್ಲೂ ಸಹ ಕೈಜೋಡಿಸಿದರು. 1984ರಲ್ಲಿ ನಡೆದ ಭೋಪಾಲ್ ಅನಿಲ ದುರಂತದಲ್ಲಿ ಸಂತ್ರಸ್ತರ ಜೊತೆ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಛತ್ತೀಸ್ಗಢ ಆದಿವಾಸಿಗಳು, ಬುಡಕಟ್ಟು ಜನಾಂಗದವರು ತಮ್ಮ ಮೂಲಭೂತ ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟದಲ್ಲಿ ಭಾಗವಹಿಸಿದ್ದರು1997 ರಲ್ಲಿ ಪೋಕ್ರಾನ್ ನಲ್ಲಿ ಗುಪ್ತವಾಗಿ ಪರಮಾಣು ಬಾಂಬ್ ಗಳನ್ನು ಸ್ಪೋಟಿಸಲಾಯಿತು. "ನಮ್ಮ ದಲಿತರ ಆದಿವಾಸಿಗಳ ಬಡವರ ಹಸಿವು ಹಿಂಗದೆ ಯಾವ ರಾಷ್ಟ್ರವೂ ಸ್ವಾಭಿಮಾನಿ ಎನಿಸಲು ಸಾಧ್ಯವಿಲ್ಲ" ಎಂದು ಜನತೆಯ ಜೊತೆ ಪ್ರತಿಭಟಿಸಿದರು.
ಇಷ್ಟೆಲ್ಲಾ ಹೋರಾಟ ನಡೆಸಿದ ಇವರಿಗೆ 1990 ರಲ್ಲಿ ಗೋಲ್ಡ್ ಮ್ಯಾನ್ ಪ್ರಶಸ್ತಿಯನ್ನು ನೀಡಲಾಯಿತು. 1991ರಲ್ಲಿ ರೈಟ್ ಲೈವ್ಲಿ ಹುಡ್‌ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಹೀಗೆ ಹಲವಾರು ಹೋರಾಟಗಳಲ್ಲಿ ಭಾಗವಹಿಸಿದ ಇವರು ನೊಂದವರ ದನಿಯಾಗಿದ್ದಾರೆ. ಧರಣಿ ಮತ್ತು ಉಪವಾಸ ಸತ್ಯಾಗ್ರಹ ಇವರ ಆಯುಧಳಾಗಿದ್ದವು. ಇವರು ಸಮಾಜಸೇವೆಗಾಗಿ ತಮ್ಮ ವೈವಾಹಿಕ ಜೀವನವನ್ನು ತೊರೆದರು. ಗಂಡ ಪ್ರವೀಣ್ ಪಾಟ್ಕರ್ ಮತ್ತು ಮೇಧಾರವರು ಪರಸ್ಪರ ಒಪ್ಪಿ ವಿಚ್ಛೇದನ ಪಡೆದುಕೊಂಡರು. ಹೆಸರಿನಲ್ಲಿರುವಂತೆಯೇ ಮೇಧಾವಿಯಾಗಿದ್ದ ಇವರು ಬಾಲ್ಯದಿಂದಲೂ ಶೋಷಿತರ ಮತ್ತು ದುರ್ಬಲರ ಪರ ನಿಂತಿದ್ದರು. ವಿಶಾಲ ಮನಸ್ಸಿವರಾಗಿದ್ದ ಇವರದು ಬರೀ ಪ್ರತಿಭಟನಾ ಹೋರಾಟವಲ್ಲ‌ ಜೊತೆಯಲ್ಲೇ ಶೋಷಿತರ ಉದ್ಧಾರಕ್ಕಾಗಿಯೂ ಬಹಳ ಶ್ರಮಿಸಿ ಆದರ್ಶ ಮಹಿಳೆಯಾಗಿದ್ದಾರೆ.
- ವಿಜಯಲಕ್ಷ್ಮಿ ಎಂ ಎಸ್

ಅನುವಾದಿತ ಕವಿತೆ - ಕೋರಿಕೊಳ್ಳುವೆ ಪುನರ್ಜನ್ಮವನ್ನೇ

[ಹುತಾತ್ಮ ಅಶ್ಫಾಕುಲ್ಲಾ ಖಾನ್, ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ ಕವಿಯ ಕವನದ ಅನುವಾದ]
ಅಶ್ಫಾಕುಲ್ಲಾ ಖಾನ್ ಮತ್ತು ರಾಮ್ ಪ್ರಸಾದ್ ಬಿಸ್ಮಿಲ್ 

ಹೋಗುತ್ತಿದ್ದೇನೆ ಬರಿಗೈಯೊಂದಿಗೆ
ಆದರೆ ನೋವಿನೊಂದಿಗೆ,
ಹಿಂದೂಸ್ತಾನವನೆಂದು
ಸ್ವತಂತ್ರ ದೇಶವೆಂದು  
ಕರೆಯಲಾಗುತ್ತದೆಂಬುದ ತಿಳಿಯದ  
ನೋವಿನೊಂದಿಗೆ ಹೋಗುತ್ತಿದ್ದೇನೆ

ಬಿಸ್ಮಿಲ್ ಹಿಂದೂ,
ಹೇಳುತ್ತಾನದರಿಂದ - 
ಬರುವೆ ಮರಳಿ, ಬರುವೆ ಮತ್ತೆ
ಬಂದು ಮರಳಿ ಭಾರತ ಮಾತೆ
ನಿನ್ನನ್ನು ಸ್ವತಂತ್ರಗೊಳಿಸುತ್ತೇನೆಂದು.

ಹೇಳಬೇಕೆನಿಸುತ್ತದೆ 
ನನಗೂ ಹಾಗೆಯೇ
ಆದರೆ ನಂಬಿಕೆಗೆ ಬದ್ಧ ನಾನು
ನಾನು ಮುಸಲ್ಮಾನ, 
ಆಡಲಾರೆ ಪುನರ್ಜನ್ಮದ ಮಾತನ್ನ

ಹಾ, ಒಂದು ವೇಳೆ 
ಸಿಕ್ಕರೆ ದೇವರು
ಅವನೆದುರು 
ನನ್ನ ಜೋಳಿಗೆಯೊಡ್ಡುವೆ
ಸ್ವರ್ಗದ ಬದಲಿಗೆ
ಕೋರಿಕೊಳ್ಳುವೆ
ಪುನರ್ಜನ್ಮವನ್ನೇ!!


(ಅನುವಾದ - ಸುಧಾ ಜಿ)

ಅನುವಾದಿತ ಕಥೆ - ಎಳೇ ಮನಸುಗಳು – ರಂಗನಾಯಕಮ್ಮ



ಮರಗಳು, ಟೆಲಿಗ್ರಾಫ್ ಕಂಬಗಳು ಹಿಂದಕ್ಕೆ ಓಡುತ್ತಿದ್ದವು. ರೈಲುಗಾಡಿ ಶೂನ್ಯವನ್ನು ಭೇದಿಸುತ್ತ, ಗಾಳಿಯೊಡನೆ ಯುದ್ಧಮಾಡುತ್ತ ಹುಷಾರಾಗಿ ಮುಂದಕ್ಕೆ ಸಾಗುತ್ತಿತ್ತು. ಕಿಟಕಿ ಪಕ್ಕದಲ್ಲಿ ಕುಳಿತು, ತಲೆಯನ್ನು ಕಿಟಕಿಗೆ ವಾಲಿಸಿ ಹೊರಗೆ ನೋಡುತ್ತಾ ಕುಳಿತಿದ್ದೆ. ಗಿಡಗಳು ಓಟವನ್ನು ನೋಡುತ್ತಿದ್ದೆ. ರೈಲಿನ ಚಕ್ರಗಳ ಶಬ್ಧವನ್ನು ಕೇಳುತ್ತಾ ಕುಳಿತ್ತಿದ್ದೆ. ಬೇಜಾರಾಯಿತು. ಬ್ಯಾಗಿನಿಂದ ಪುಸ್ತಕವನ್ನು ಹೊರತೆಗೆಯುವ ಪ್ರಯತ್ನದಲ್ಲಿದ್ದೆ.
“ನಿಮ್ಮ ಹೆಸರೇನು?” ಕೇಳಿದಳು ನಾಲ್ಕೈದು ವರ್ಷದ ಹುಡುಗಿಯೊಬ್ಬಳು. ಇನ್ನೊಬ್ಬ ಚಿಕ್ಕ ಹುಡುಗ ನನ್ನ ಉತ್ತರಕ್ಕಾಗಿಯೆ ಕುತೂಹಲದಿಂದ ನೋಡುತ್ತಾ ನಿಂತಿದ್ದ. 
ಆ ಮಕ್ಕಳೂ, ಅವರ ತಾಯಿ ಹಿಂದಿನ ಸ್ಟೇಷನ್‍ನಲ್ಲಿ ಹತ್ತಿರುವಂತಿತ್ತು. ನಾನು ಸರಿಯಾಗಿ ಗಮನಿಸಿರಲಿಲ್ಲ. ಆ ಮಕ್ಕಳು ಮಾಡುತ್ತಿದ್ದ ಚೇಷ್ಟೆ, ಹಾಕುತ್ತಿದ್ದ ಪ್ರಶ್ನೆಗಳು, ಆಕೆ ಕೊಡುತಿದ್ದ ಉತ್ತರಗಳು, ನಾನು ಅಷ್ಟಾಗಿ ಗಮನಿಸದಿದ್ದರೂ ಎಲ್ಲವೂ ಕೇಳಿಸುತ್ತಿತ್ತು.
ಮಕ್ಕಳಿಬ್ಬರೂ ಮುದ್ದಾಗಿ, ಆರೋಗ್ಯವಾಗಿದ್ದರು. ದೊಡ್ಡ ದೊಡ್ಡ ಹೂಗಳ ಸಿಲ್ಕ್ ಗೌನ್ ಹಾಕಿಕೊಂಡಿದ್ದಳು ಆ ಹುಡುಗಿ. ಹುಡುಗ ಸಹ ಇನ್‍ಶರ್ಟ್ ಮಾಡಿ, ಬಿಳಿಯ ಬುಷ್ ಕೋಟ್ ಧರಿಸಿ, ಅದರ ಮೇಲೆ ಟೈ ಹಾಕಿಕೊಂಡಿದ್ದ. ಇಬ್ಬರು ಬೆಲೆಬಾಳುವ ಬೂಟುಗಳನ್ನು ಧರಿಸಿದ್ದರು. ತಾಯಿ ಸಹ ಒಡವೆಗಳನ್ನು ಧರಿಸಿ ಸ್ವಲ್ಪ ತಯಾರಾಗಿಯೆ ಬಂದಿದ್ದು, ಆ ಮಕ್ಕಳ ತಾಯಿ ಅನಿಸಿಕೊಳ್ಳುವಂತೆಯೇ ಇದ್ದಳು. ಸಣ್ಣ ಅಂಚಿನ ಕೆಂಪು ರೇಶಿಮೆ ಸೀರೆ, ರಿಸ್ಟ್ ವಾಚ್ ಹಾಕಿಕೊಂಡು ಬಹಳ ಆಧುನಿಕವಾಗಿದ್ದಳು. 
ಆ ಮಕ್ಕಳು ಕೇಳಿದ ಪ್ರಶ್ನೆಯನ್ನು ಮನಸ್ಸಿನಲ್ಲಿಯೆ ಅರ್ಥ ಮಾಡಿಕೊಂಡು ನಗುತ್ತಾ ಕೇಳಿದೆ, “ನಿನಗೇಕೆ ನನ್ನ ಹೆಸರು?” ಸ್ವಲ್ಪ ನಾಚಿಕೆಯಿಂದ ಆ ಹುಡುಗಿ “ಸುಮ್ಮನೆ” ಎಂದಳು.
“ಮೊದಲು ನಿನ್ನ ಹೆಸರೇನು ಹೇಳು?.” “ಮಂಜುಲತಾ”- ಉತ್ಸಾಹದಿಂದ ಹೇಳಿದಳು.
“ಮಂಜುಲತಾ? ಬಹಳ ಚೆನ್ನಾಗಿದೆ” ಎಂದೆ.
“ಏನದು ಮಂಜುಲತಾ? ಮಂಜುಳಾ ಅಂತ ಹೇಳು. ಅವಳ ಹೆಸರು ಮಂಜುಳಾ ಅಂತಾನೆ!” ಎಂದಳು ಆ ಮಕ್ಕಳ ತಾಯಿ ನನ್ನ ಕಡೆ ನೋಡುತ್ತಾ.
ಮಗು ಅಳು ಮುಖವನ್ನು ಮಾಡಿಕೊಂಡು, “ಉಹೂ ಅಲ್ಲ, ನನಗೆ ಆ ರೀತಿ ಬೇಡ. ನನ್ನ ಹೆಸರು ಮಂಜುಲತಾನೆ” ಎಂದಳು ಬಿಂಕವಾಗಿ.
“ಏನದು ಅಷ್ಟುದ್ದ ಹೆಸರು? ಈ ದಿನಗಳಲ್ಲಿ ಅದೇನು ಫ್ಯಾಶನ್ನೆ?” ಅಂದಳು ಅವರಮ್ಮ. 
ಆ ಮಗುವಿಗೆ ಉತ್ತರಿಸಲಾಗಲಿಲ್ಲ. ಆಕೆ ನನ್ನನ್ನೆ ಮದ್ಯವರ್ತಿಯಾಗಿಟ್ಟುಕೊಂಡು, “ನೀವೆ ಹೇಳಿ ಮಂಜುಳಾ ಚೆನ್ನಾಗಿದೆಯೋ, ಮಂಜುಲತಾ ಚೆನ್ನಾಗಿದೆಯೋ?” ಕೇಳಿದಳು.
ನಾನು ನಕ್ಕೆ. ಆ ಮಗುವನ್ನು ನೋಡಿದರೆ ‘ಅಯ್ಯೊ ಪಾಪ’ ಎನ್ನಿಸಿತು. 
“ಅವಳಿಗೆ ಯಾವ ಹೆಸರು ಇಷ್ಟವಿದ್ದರೆ ಅದನ್ನೆ ಇಟ್ಟುಕೊಳ್ಳಲಿ ಬಿಡಿ. ಸರೀನಾ ಮಗು?” ಎಂದೆ ಮಗುವಿನ ಕೆನ್ನೆಯನ್ನು ಮುಟ್ಟುತ್ತಾ.
ಆಕೆ ಒಂದು ರೀತಿಯಾಗಿ ನಕ್ಕಳು. ಮಗುವಿನ ಮುಖ ಮತ್ತೆ ಕಳೆಗೂಡಿತು. 
“ನಿನ್ನ ತಮ್ಮನ ಹೆಸರೇನು ಮಂಜುಲತಾ?” ಎಂದೆ.
“ನನ್ನ ಹೆಸರು ಶರತ್ ಕುಮಾರ್. ನನ್ನ ತಾಯಿ ವೆಂಕಟೇಶ್ವರ್ ರಾವ್ ಅಂತಾನೂ ಕರೀತಾಳೆ” ಅಂದ ಆ ಹುಡುಗ. 
“ಅದೇನು ಎರಡು ಹೆಸರಾ ನಿನಗೆ?” ಕೇಳಿದೆ.
ಆಕೆ ತಕ್ಷಣವೇ “ಅವನು ಹೊಟ್ಟೆಯಲ್ಲಿದ್ದಾಗ, ನನ್ನ ತಾಯಿ, ಈ ಸಾರಿ ಗಂಡು ಮಗು ಬೇಕೆಂದು ಹರಕೆ ಹೊತ್ತಳು ಅದಕ್ಕೆ ನಮ್ಮವರೆಲ್ಲಾ ಆ ಹೆಸರನ್ನೆ ಕರೆಯುತ್ತಾರೆ” ಎಂದಳು.
‘ಆದರೆ ನಿನಗೇನು ಇಷ್ಟವೋ’ ಎಂದು ಕೇಳಲು ಹೋಗಿ ಸುಮ್ಮನಾದೆ. ಮತ್ತೆ ಆ ಹುಡುಗನಿಗೆ ತಾಯಿಯ ಜೊತೆ ಜಗಳವೇಕೆಂದು.
“ಊಂ, ನಿನ್ನ ಹೆಸರೂ ಕೂಡ ಚೆನ್ನಗಿದೆ, ಶರತ್ ಕುಮಾರ್” ಎಂದೆ.
“ನಿಮ್ಮ ಹೆಸರೇನು ಹೇಳಲೇ ಇಲ್ಲಾ” ಎಂದರು ಆಕೆ.
ನಾನು ನಕ್ಕೆ. “ನನ್ನ ಹೆಸರು ನಿಮಗೆ ಇಷ್ಟವಾಗುವುದಿಲ್ಲ ಬಿಡಿ, ಬಹಳ ಹಳೆಯ ಹೆಸರು. ಈ ದಿನಗಳ ಫ್ಯಾಶನ್ ಏನೂ ಅಲ್ಲ.” ಪ್ರತಿಯೊಂದು ಪದವನ್ನು ಒತ್ತಿಒತ್ತಿ ಹೇಳಿದೆ. 
“ಮ್ಯಾಡಮ್, ಟಿಕೆಟ್ ಪ್ಲೀಸ್.” ಪರ್ಸ್ ತೆಗೆದು ಟಿಕೆಟ್ ಅನ್ನು ಟಿಸಿಗೆ ತೋರಿಸಿ ಮತ್ತೆ ಒಳಗಿಟ್ಟೆ. ಆಕೆ....... ಆಕೆಯ ಹೆಸರೇನು ನನಗೆ ತಿಳಿಯದು, ರೈಲು ಇಳಿಯುವವರೆಗೂ ನನಗೆ ಆಕೆಯ ಹೆಸರು ಗೊತ್ತಾಗಲೇ ಇಲ್ಲ. ಆದ್ದರಿಂದ ದುರ್ಗಾಂಬ ಎನ್ನುತ್ತೇನೆ. ಪಾಪ ಆ ಹೆಸರು ಆಕೆಗೆ ಹಿಡಿಸುವುದಿಲ್ಲ. ದುರ್ಗಾಂಬ ಸಹ ನನ್ನಂತೆಯೆ ಒಂದು ಟಿಕೆಟ್ ತೆಗೆದು ಕೊಟ್ಟಳು. ಅದನ್ನು ತೆಗೆದುಕೊಂಡ ಟಿಸಿ “ಮಕ್ಕಳಿಬ್ಬರಿಗೂ ಟಿಕೆಟ್ ಇರಬೇಕಮ್ಮ” ಎಂದರು.
“ಅರೇ ಅವರಿಬ್ಬರೂ ಇನ್ನೂ ಚಿಕ್ಕವರು. ಹುಡುಗನಿಗೆ ಇನ್ನೂ ಮೂರೂ ಸಹ ತುಂಬಿಲ್ಲ.”
ನನಗೆ ನಾಚಿಕೆಯಿಂದ ತಲೆತಗ್ಗಿಸುವಂತಾಯಿತು. ಆ ಟಿಸಿ ಕೂಡಾ ಆಕೆಯನ್ನು ಬಿಟ್ಟು, ‘ನಿಮ್ಮ ಹೆಣ್ಣು ಜಾತಿಯ ಸುಳ್ಳಿಗೆ ನೀನೇ ಸಾಕ್ಷ್ಯ' ಎನ್ನುವಂತೆ ನನ್ನತ್ತ ನೋಡಿದ.
ಟಿಸಿ ಮತ್ತೆ ಆಕೆಗೆ ಮತ್ತೆ ಹೇಳಿದ, “ಇಲ್ಲಮ್ಮ. ಈ ಮಕ್ಕಳಿಬ್ಬರಿಗೂ ಟಿಕೆಟ್ ಇರಬೇಕು.”
ಆಕೆ..... ದುರ್ಗಾಂಬ.....ದಬಾಯಿಸುವ ಧೋರಣೆಯಲ್ಲಿ ಮಾತನಾಡಿದಳು. “ರಾಜಮಂಡ್ರಿ ಸ್ಟೇಷನ್ ಮಾಸ್ಟರ್‍ಅನ್ನು ಕೇಳಿಯೇ ಹತ್ತಿದೆ. ಟಿಕೆಟ್ ಬೇಕಾಗಿಲ್ಲ ಎಂದರು.”
ಟಿಸಿ ಒಂದು ನಿಮಿಷ ಮೌನವಾಗಿದ್ದು, “ಅವರು ಏನಾದರೂ ಬರೆದುಕೊಟ್ಟರೆ?”
“ಇಲ್ಲ. ಆ ರೀತಿ ಏನಾದರೂ ಬರೆಸಿಕೊಳ್ಳಬೇಕೆಂದು ನನಗೆ ತೋಚಲಿಲ್ಲ. ಇಲ್ಲದಿದ್ದರೆ ರಾಜಮಂಡ್ರಿಯಲ್ಲೇ.....”
“ಅಮ್ಮ, ನಾವು ಹತ್ತಿದ್ದು ರಾಜಮಂಡ್ರಿಯಲ್ಲಾ?” ಆಶ್ಚರ್ಯದಿಂದ ತನ್ನ ಕಣ್ಣುಗಳನ್ನು ಅಗಲಿಸುತ್ತಾ ಕೇಳಿದ ಹುಡುಗ.
ದುರ್ಗಾಂಬ ಮಗನ ಕಡೆ ಕಣ್ಣು ಕೆಂಪಗೆ ಮಾಡಿ ನೋಡುತ್ತಿದ್ದರೆ, ಟಿಸಿ ಎರಡು ಹೆಜ್ಜೆ ಮುಂದೆ ಹಾಕಿ ಹೇಳಿದ, “ಹಣ ತೆಗೆದಿಡಿ. ಉಳಿದ ಟಿಕೆಟ್‍ಗಳನ್ನು ಪರಿಶೀಲಿಸಿ ಬರುತ್ತೇನೆ.”
ಆಕೆ ಎರಡು ನಿಮಿಷ ಹಾಗೆಯೇ ಕುಳಿತಳು. ನಿಧಾನವಾಗಿ ಹ್ಯಾಂಡ್ ಬ್ಯಾಗಿನಿಂದ ನೋಟುಗಳನ್ನು ಹೊರತೆಗೆದು ಲೆಕ್ಕ ಮಾಡುತ್ತಾ ಕುಳಿತಳು. ಮತ್ತೆ ಟಿಸಿ ಬಂದು ಮಾರ್ವಾಡಿಯಂತೆ ನಿಂತನು. “ಹೋಗಲಿ ಚಿಕ್ಕವನನ್ನಾದರೂ ಬಿಡುವುದಿಲ್ಲವೇ” ಮತ್ತೆ ಆಶೆಯಿಂದ ಕೇಳಿದಳಾಕೆ. ಎಷ್ಟೋ ಪರಿಚಯವಿದೆ ಎನ್ನುವಂತೆ ಆತನನ್ನು ನೋಡಿದಳು.
ಟಿಸಿ ಮಾತನಾಡಲಿಲ್ಲ. ಚಕಚಕನೆ ಬರೆದು, ಪುರ್ರೆಂದು ಎರಡು ಹಾಳೆ ಹರಿದು ನೋಟುಗಳನ್ನು ತೆಗೆದುಕೊಂಡ. ತಾಯಿಯನ್ನು ದಂಗುಬಡಿಸಿದ ಆ ದೊಡ್ಡ ಮನುಷ್ಯನನ್ನು ವಿಸ್ಮಯದಿಂದ ನೋಡಿದರು ಆ ಮಕ್ಕಳು. ಅವನನ್ನು ದಬಾಯಿಸಲಾಗದ ತಾಯಿಯತ್ತ ಸಹಾನುಭೂತಿಯಿಂದ ನೋಡಿದರು. ಟಿಸಿ ಹೋಗುತ್ತಲೇ ಆ ಹುಡುಗ ಅಮ್ಮನ ಬಳಿ ಬಂದ. “ಅಮ್ಮಾ, ಯಾರೇ ಅವರು? ಪೋಲಿಸಾ?”
ಆಕೆ ಮುಖವನ್ನು ಬಿಗಿ ಮಾಡುತ್ತಾ ಅಂದಳು, “ಯಾರೋ ದರಿದ್ರದವ. ಉದ್ಯೋಗ ಹೋಗುವವರೆಗೂ ಈ ರೀತಿಯಾಗಿಯೇ ದೋಚಿಕೊಂಡು ತಿನ್ನುತ್ತಾನೆ.”
ಕೈಗೆ ಬಿಲ್ಲು ಕೊಟ್ಟಮೇಲೆ ದೋಚಿಕೊಳ್ಳುವುದು ಎಂದರೆ ಏನರ್ಥ ಎಂದು ಕೇಳೋಣ ಎಂದುಕೊಂಡೆ.
“ಅಮ್ಮಾ, ನಾವು ಕವ್ವೂರಿನಲ್ಲಿ ಅಲ್ಲವಾ ಹತ್ತಿದ್ದು?” ಅವಳ ಕೋಪವೆಲ್ಲಾ ಮಗನ ಮೇಲೆ ಹೋಯಿತು. 
“ಎಲ್ಲೊ ಹತ್ತಿದೆವು. ಅವನ ಎದುರಲ್ಲಾ ನೀನು ಕೇಳೋದು?”
“ಏನು ಕೇಳಿದರೆ?” 
“ಹಾಳಾದವನೇ, ಎದುರು ಪ್ರಶ್ನೆ ಹಾಕಬೇಡ.”
ತಾಯಿಯ ಕೋಪವನ್ನು ನೋಡಿದರೆ ನಿಜಕ್ಕೂ ಭಯವಾಯಿತು ಶರತ್‍ಗೆ. ನಿಧಾನವಾಗಿ ಅಕ್ಕನ ಬಳಿ ಸೇರಿಕೊಂಡ. 
“ಅಕ್ಕಾ, ಅವನು ಪೋಲಿಸ್ ತರಹ ಚೆನ್ನಾಗಿದ್ದಾನಲ್ಲವೇ?”
ಹೌದೆನ್ನುವಂತೆ ಬೇಗ ತಲೆಯಾಡಿಸಿದಳು ಅಕ್ಕ.
“ನಾವು ಪೋಲಿಸ್ ಆಟ ಆಡಿಕೊಳ್ಳೋಣವೇ. ನಾನು ಟಿಕೆಟ್ ಕೇಳುತ್ತೀನಿ. ನೀನು ಕೊಡಬೇಕು.” 
“ನನ್ನ ಹತ್ತಿರ ಇಲ್ಲವಲ್ಲ.”
ಮಕ್ಕಳು ಸ್ವಲ್ಪ ಹೊತ್ತು ಯೋಚಿಸಿದರು. ತಾಯಿಯನ್ನು ನೋಡುತ್ತಾ ಮುದ್ದಾಗಿ ಕೇಳಿದರು, “ಅಮ್ಮಾ, ಟಿಕೆಟ್ ಕೊಡ್ತೀಯಾ, ಆಡಿಕೊಳ್ಳುತ್ತೇವೆ.” ನಗು ಬಂತು ನನಗೆ.
ಅವರಮ್ಮ ಕೋಪಗೊಂಡಳು. “ಹಾಳಾದ ಆಟ.” 
“ಟಿಕೆಟ್ಟಾಟ ಚೆನ್ನಾಗಿರುತ್ತಮ್ಮ.”
“ಛಿ. ಹಾಳಾದ್ದು. ಟಿಕೆಟ್ ಕಲೆಕ್ಟರ್ ಆಟ ಯಾಕೆ? ಡಾಕ್ಟರ್ ಆಟ ಆಡಿಕೊಳ್ಳಿ.”
“ಛಿ, ಡಾಕ್ಟರ್ ಆಟ ನನಗೆ ಬೇಡ.  ಇಂಡಿಷನ್ . . . . ನೋವು.”
ನಾನು ಸುಮ್ಮನಿರಲಾರದೆ ದುರ್ಗಾಂಬಳತ್ತ ತಿರುಗಿ, “ನಿಮ್ಮ ಮಗನ ಮನಸ್ಸು ಮೆತ್ತನೆಯದ್ದು” ಅಂದೆ.
“ಆಂ, ಅವನ ಮಾತಿಗೇನು ಬಿಡಿ. ಯಾವಾಗಲೂ ಹಾಗೆಯೇ ಮಾತನಾಡುತ್ತಾನೆ. ಡಾಕ್ಟರ್ ಅಂದ್ರೆ ಮುಖ ಗಂಟುಹಾಕಿಕೊಳ್ಳುತ್ತಾನೆ.”
“ಡಾಕ್ಟರ್ ಆಗಬೇಕೆಂದರೆ ಮಗುವಿಗೆ ಅದರ ಬಗ್ಗೆ ಆಸಕ್ತಿ ಇರಬೇಕಲ್ಲವೇ?”
“ಅವನ ಮುಖ! ಅವನಿಗೇನು ಗೊತ್ತಾಗುತ್ತೆ? ಡಾಕ್ಟರ್ ಅಂದ್ರೆ ಹೆಸರಿಗೆ ಹೆಸರು, ದುಡ್ಡಿಗೆ ದುಡ್ಡು. ಮಕ್ಕಳಿಗೆ ಅವೆಲ್ಲಾ ಗೊತ್ತಾಗುತ್ತಾ?”
“ಮತ್ತೆ ಹುಡುಗಿಯನ್ನೇನೂ ಓದಿಸುತ್ತೀರಿ?”
“ಅವಳಿಗೇಕೆ ಓದು? ಹೆಣ್ಣು ಮಗು. ಅಷ್ಟು ಓದಲೇ ಬೇಕು ಎಂದರೆ ಹತ್ತನೇ ತರಗತಿಯವರೆಗೆ ಓದಿಸುತ್ತೇನೆ. ನಾನೂ ಅಷ್ಟೇ.”
ತನಗೆ ತಾಯಿಯೇನೋ ಕೊರತೆ ಉಂಟುಮಾಡುತ್ತಿದ್ದಾಳೆ ಎನ್ನುವಂತೆ ಮಂಜುಲತ ನನ್ನತ್ತ ದೈನ್ಯತೆಯಿಂದ ನೋಡಿದಳು. ನಾನು ನಗುತ್ತಾ ಆಕೆಯೊಡನೆ, “ಮಂಜುಲತಾ ಡಾಕ್ಟರ್ ಆಗಬೇಕು. ನೋಡಿ, ಇಷ್ಟು ಮೆತ್ತನೆ ಕೈಗಳಿಂದ ರೋಗಿಯನ್ನು ಮುಟ್ಟಿದರೆ, ಇನ್ನು ಔಷಧಿಯೇಕೆ ಬೇಕು ಹೇಳಿ” ಅಂದೆ. ಆಕೆ ಸ್ವಲ್ಪ ನಕ್ಕರು.
ನಿಧಾನವಾಗಿ ಮಕ್ಕಳಿಬ್ಬರೂ ನನ್ನ ಹತ್ತಿರ ಬಂದರು.
“ಏನ್ರಿ, ನಿಮ್ಮ ಹೆಸರು ಮಂಜುಲತಾನೇನಾ?” ಹಠಾತ್ತಾಗಿ ಕೇಳಿದಳು ಮಂಜುಲತಾ. ಹೌದೆನ್ನುತ್ತೇನೋ ಎನ್ನುವಂತೆ ಆಶೆಯಿಂದ ನೋಡಿದಳು. ನನ್ನ ಹೆಸರು ತಿಳಿದುಕೊಳ್ಳಬೇಕೆನ್ನುವ ಆಶೆ ಆ ಮಕ್ಕಳಿಬ್ಬರಿಗೂ. 
“ನನಗೆ ಹೆಸರಿಲ್ಲವಮ್ಮ” ಎಂದೆ ನಗುತ್ತಾ.
ಆಶ್ಚರ್ಯದಿಂದ ನೋಡುತ್ತಾ ಮಂಜುಲತಾ, “ನಿಜವಾಗಿಯೂ ನಿಮಗೆ ಹೆಸರಿಲ್ಲವೇ. ನಿಮ್ಮನ್ನು ಎಲ್ಲರೂ ಏನೆಂದು ಕರೆಯುತ್ತಾರೆ.”
“ನೀವು ಮಾತ್ರ ಅತ್ತೆ ಎಂದು ಕರೆಯಿರಿ, ಚೆನ್ನಾಗಿದೆಯಾ?” 
ರೈಲತ್ತೆ, ರೈಲತ್ತೆ.... ಕಿರುಚಿದರು ಮಕ್ಕಳು.
ಹಾಡುತ್ತಾ ಬಂದ ಭಿಕ್ಷುಕಿಯನ್ನು ಕಂಡ ಮಕ್ಕಳ ಹಠಾತ್ತಾಗಿ ಚೇಷ್ಟೆ ನಿಲ್ಲಿಸಿ ಅವಳತ್ತ ನೋಡುತ್ತಾ ನಿಂತರು. ದುರ್ಗಾಂಬ ಚಿಲ್ಲರೆಗೋಸ್ಕರ ಬ್ಯಾಗ್ ತೆರೆದಳು.
“ಅಮ್ಮಾ, ನಾನು ಕೊಡುತ್ತೇನೆ, ನಾನು ಕೊಡುತ್ತೇನೆ” ಎಂದು ಕೂಗತೊಡಗಿದರು ಮಕ್ಕಳು.
“ದೊಡ್ಡವಳು ನಾನಿರುವಾಗ ನಿಮಗೇಕೆ ದೊಡ್ಡಸ್ತಿಕೆ” ಎಂದು ದುರ್ಗಾಂಬ ಭಿಕ್ಷುಕಿಯ ಕೈಯ್ಯಲ್ಲಿ ದುಡ್ಡು ಹಾಕಿದಳು. ಮಕ್ಕಳು ಸುಮ್ಮನಾದರು.
ನಾನು ಎರಡು ಆಣೆಗಳನ್ನು ತೆಗೆದು ಮಕ್ಕಳ ಕೈಯ್ಯಲ್ಲಿ ಕೊಟ್ಟೆ. ಅವರಿಬ್ಬರೂ ಸಂತೋಷದಿಂದ ಆ ಭಿಕ್ಷುಕಿಯ ಕೈಯ್ಯಲ್ಲಿ ಹಾಕಿದರು. ಮಂಜುಲತ ಅವರಮ್ಮನ ಹತ್ತಿರ ಹೋಗಿ ಕುಳಿತುಕೊಂಡಳು. ಕೇಳಿದಳು, “ಅಮ್ಮಾ, ಅವಳ ಕಣ್ಣೇಕೆ ಹಾಗೆ ಮುಚ್ಚಿ ಹೋಗಿದೆ?” “ಅವಳು ಕುರುಡಿ, ಕಣ್ಣು ಕಾಣಿಸುವುದಿಲ್ಲ.”
“ಯಾಕೆ ಕಾಣಿಸುವುದಿಲ್ಲ?” ಹುಡುಗ ಕೂಡ ಅಲ್ಲಿ ಸೇರಿಕೊಂಡ.
“ಅವಳು ಏನೋ ಪಾಪ ಮಾಡಿದ್ದಾಳೆ.” “ಏನು ಮಾಡಿದ್ದಾಳಮ್ಮ?”
“ಏನೋ, ನಮಗೇನು ಗೊತ್ತಾಗುತ್ತೆ, ದೇವರಿಗೆ ಗೊತ್ತಾಗುತ್ತೆ.”
“ದೇವರು ಗುಡಿಯಲ್ಲಿಯೇ ಇರ್ತಾನಲ್ಲಾ? ಅವನಿಗೆ ಹೇಗೆ ಗೊತ್ತಾಗುತ್ತೆ?”
“ತಪ್ಪು. ದೇವರನ್ನು ಅವನು ಎನ್ನಬಹುದಾ?” “ಅಕ್ಕ. ದೇವರನ್ನು ಅವರು ಅನ್ನಬೇಕೆ.”
“ಅಮ್ಮಾ, ದೇವರಿಗೆ ಹೇಗೆ ಗೊತ್ತಾಗುತ್ತೆ?” “ಅಬ್ಬಾ, ಏನ್ರೊ ನಿಮ್ಮ ಪ್ರಶ್ನೆಗಳು. ದೇವರಿಗೆ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂದು ಗೊತ್ತಾಗುತ್ತೆ.”
ಆ ಭಿಕ್ಷುಕಿ ಮತ್ತೆ ಹಾಡು ಹೇಳುತ್ತಾ ವಾಪಸ್ ಬಂದಳು. 
“ಅಮ್ಮಿ, ಒಂದು ಸಾರಿ ಹಾಡುವುದನ್ನು ನಿಲ್ಲಿಸು” ಎಂದೆ ಗಟ್ಟಿಯಾಗಿ. ಹಾಡು ನಿಂತಿತು.
“ನಿನ್ನ ಕಣ್ಣುಗಳು ಹೇಗೆ ಹೋದವು, ಹುಟ್ಟಿನಿಂದಲೇನಾ, ಅಥವಾ ಮಧ್ಯದಲ್ಲಿ ಏನಾದರೂ ಖಾಯಿಲೆಯಾಗಿ ಹೋಯಿತಾ?” ಕೇಳಿದೆ. ಮಕ್ಕಳಿಬ್ಬರೂ ನನ್ನ ಹತ್ತಿರ ಬಂದರು.
“ಯಾರಮ್ಮ ನೀನು ತಾಯಿ? ಇಷ್ಟು ಕರುಣೆಯಿಂದ ಕೇಳುತ್ತಿದ್ದೀಯ? ಎಷ್ಟು ಬಾರಿ ಹೇಳಿಕೊಂಡ್ರೆ ಅಷ್ಟು ಬಾರಿ ನನ್ನ ಹೊಟ್ಟೆ ತಣ್ಣಗಾಗುತ್ತಮ್ಮ.” ಒಂದು ಗಂಟಿನಿಂದ ಸಣ್ಣ ಚೀಲವನ್ನು ತೆಗೆದು ಅದರಲ್ಲಿ ದುಡ್ಡನ್ನು ಹಾಕಿಕೊಳ್ಳುತ್ತ, “ಒಂದು ವರ್ಷವಾಯಿತಮ್ಮ, ಯಾರೋ ಮಹಾತಾಯಿ ಶೋಕಿಯಿಂದ ಕಾರಿನಲ್ಲಿ ತಿರುಗುತ್ತಾ ನನ್ನ ಮೇಲೆ ಹತ್ತಿಸಿದಳು. ಧರ್ಮಾಸ್ಪತ್ರೆಯಲ್ಲಿ ನಾಲ್ಕು ತಿಂಗಳಿದ್ದೆ. ಕಣ್ಣುಗಳು ಹೋದವು. ಅದಕ್ಕೆ ಮುಂಚೆ ತರಕಾರಿ ಮಾರುತ್ತಾ ಬದುಕುತ್ತಿದ್ದೆ. ಈ ತಿರುಪೆ ಎತ್ತುವ ಬದುಕು ಕರ್ಮಾನೆ ತಾಯಿ,” ಎಂದು ಉತ್ತರಿಸಿ, ಮತ್ತೆ ಹಾಡಿಕೊಳ್ಳುತ್ತಾ ಹೊರಟುಹೋದಳು.
ನಾನು ದುರ್ಗಾಂಬಳತ್ತ ನೋಡಿದೆ, ‘ಆ ವ್ಯಕ್ತಿ ಮಾಡಿದ ಪಾಪವೇನು ಈಗ ಹೇಳು ಎನ್ನುವಂತೆ.’
“ಇಷ್ಟು ಸುಳ್ಳು ಹೇಳದಿದ್ದರೆ ಆಕೆಯ ಹೊಟ್ಟೆ ತುಂಬುತ್ತದಾ? ಬಿಡಿ,” ಎಂದಳು. ವಿನಾಕಾರಣದ ದ್ವೇಷವೇಕೊ ಆ ವ್ಯಕ್ತಿಯ ಮೇಲೆ.
“ಅಮ್ಮಾ, ಅವಳು ಏನು ಹೇಳಿದ್ದು? ಕಾರ್ ಕೆಳಗೆ ಬಿದ್ದು ಹೋದೆ ಎಂದಳಲ್ಲವೇ?”
“ಬಿದ್ದರೆ ಮಾತ್ರ. ಕೈಗೋ ಕಾಲಿಗೋ ಏಟು ತಗಲಬೇಕೆ ಹೊರತು ಕಣ್ಣೇ ಹೋಗಬೇಕೆ?” ಎಂದಳು. ಮಕ್ಕಳು ಕಕ್ಕಾಬಿಕ್ಕಿಯಾದರು.
“ಒಳ್ಳೆಯವರನ್ನು ಕರೆದುಕೊಂಡು ಹೋಗಿ ರೈಲು ಕೆಳಗೆ ಹಾಕಿದರೂ ಅವರು ಸಾಯುವುದಿಲ್ಲವೇ?” ಕೇಳಿದೆ. 
ದುರ್ಗಾಂಬ ಕೇಳಿದರೂ ಕೇಳಿಸಲಿಲ್ಲವೇನೋ ಎಂಬಂತೆ ಸುಮ್ಮನಾದಳು.
“ಅಮ್ಮ, ಅವಳು ಯಾವತ್ತೂ ದೇವರಿಗೆ ತೆಂಗಿನಕಾಯಿ ಹೊಡೆಯಲಿಲ್ಲವೇ?” ಕೇಳಿದರು ಮಕ್ಕಳು ತಾಯಿಯನ್ನು. 
“ಏನು, ನೀವು ಹೊಡೆಯುತ್ತೀರಾ?” ನಾನು ಮಕ್ಕಳನ್ನು ಕೇಳಿದೆ.
ಕುಮಾರ್ ಉತ್ಸಾಹದಿಂದ ಹೇಳಿದ – “ನಾನೂ, ನಮ್ಮಕ್ಕ ಸಹ ದೇವರಿಗೆ ತೆಂಗಿನಕಾಯಿ ಇಟ್ಟು ಪೂಜೆ ಮಾಡುತ್ತೇವೆ, ನಮ್ಮ ಅಮ್ಮ ಮಾಡಿಸುತ್ತಾಳೆ.” 
"ಯಾಕೆ?”
“ಪುಣ್ಯ ಬರುತ್ತದೆ.” 
“ಪುಣ್ಯ ಅಂದ್ರೆ.....?” 
“ಪುಣ್ಯ ಅಂದ್ರೆ.....” ಸ್ವಲ್ಪ ಹೊತ್ತು ಆ ಕಡೆ ಈ ಕಡೆ ನೋಡಿ, “ಅಮ್ಮಾ, ಪುಣ್ಯ ಅಂದ್ರೆ ಏನು?” ತಾಯಿಯನ್ನು ಕೇಳಿದ.
ನಾನು ತಕ್ಷಣವೇ ಮಧ್ಯಪ್ರವೇಶಿಸಿ, “ಸರಿ ಪುಣ್ಯ ಬಂದ್ರೆ..?”
“ದೊಡ್ಡ ಉದ್ಯೋಗ ಸಿಗುತ್ತದೆ. ತುಂಬಾ ಹಣ ಬರುತ್ತೆ. ದೊಡ್ಡ ಮನೆ ಕಟ್ಟಿಕೊಳ್ಳಬಹುದು.”
ಮಗನ ಮಾತುಗಳನ್ನು ಕೇಳಿ ಮುಸಿಮುಸಿ ನಕ್ಕಳು ದುರ್ಗಾಂಬ.
ಆ ಮಕ್ಕಳಿಬ್ಬರನ್ನು ನೋಡಿದರೆ ನನಗೆ ಏನೋ ವೇದನೆಯಾಯಿತು. ಹೇಗೆ ಹೇಳಿದರೆ ಹಾಗೆ ಕೇಳುವ ವಿನಯವಂತಿಕೆ ಇರುವ ಮಕ್ಕಳವರು. ಏನು ನೋಡಿದರೂ ಕೇಳಿ ಕೇಳಿ ತಿಳಿದುಕೊಳ್ಳಬೇಕೆನ್ನುವ ಉತ್ಸಾಹ ಇರುವ ಮಕ್ಕಳು. ಆದರೆ ಎಷ್ಟು ಕಾಲ ಇರುತ್ತದೆ ಈ ಉತ್ಸಾಹ. ಅವರಿಗೆ ಎಲ್ಲಾ ತಪ್ಪು ಮಾತುಗಳನ್ನೇ ಕಲಿಸುತ್ತಿದ್ದರೆ, ಅವರು ಕಲಿಯುವಂತಹುದು ಏನಿರುತ್ತದೆ?
ಹಸುಗಂದಮ್ಮಗಳ ಹೃದಯಗಳು ಒಳ್ಳೆಯ ಭೂಮಿಯಂತೆ. ಅವುಗಳಲ್ಲಿ ಯಾವ ರೀತಿಯ ಬೀಜಗಳನ್ನು ಬಿತ್ತಿದರೆ ಅದೇ ರೀತಿಯ ಗಿಡಗಳೇ ಬೆಳೆಯುತ್ತವೆಯಲ್ಲವೇ?
“ಏಯ್, ಗಾಡಿ ನಿಲ್ಲುತ್ತಿದೆ, ಮತ್ತೆ ಸ್ಟೇಷನ್ ಬರುತ್ತದೆ. ಸುಮ್ಮನೆ ಕುಳಿತುಕೊಳ್ಳಿ. ಜನ ಬಂದು ಮೇಲೆ ಬೀಳುತ್ತಾರೆ. ಖಾಲಿ ಇಲ್ಲ ಹೋಗಿ ಎನ್ನಿ. ಅವರೇ ಹೋಗುತ್ತಾರೆ” ದುರ್ಗಾಂಬಳ ಬೋಧನೆ.
ಆ ಸ್ಟೇಷನ್ ಮುಂಚಿನ ಸ್ಟೇಷನ್‍ನಲ್ಲಿಯೂ ಆಕೆ ಹಾಗೆಯೇ ಹೇಳಿದ್ದಂತೆ ನೆನಪು.
“ಯಾಕಮ್ಮಾ ಹೋಗು ಎನ್ನುವುದು? ಖಾಲಿಯೇ ಇದೆಯಲ್ಲಾ?”
“ಮೂರ್ಖರೇ, ಮಾತನಾಡದೆ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಿ. ಇಲ್ಲಿ ನೋಡಿ, ಈ ಬ್ಯಾಗ್ ನಿಮ್ಮ ಪಕ್ಕದಲ್ಲಿ ಇಟ್ಟುಕೊಳ್ಳಿ. ಕಾಲುಗಳನ್ನು ಚಾಚಿಕೊಂಡು ಕುಳಿತುಕೊಳ್ಳಿ.”
ಮಕ್ಕಳಿಬ್ಬರೂ ಕಾಲುಗಳನ್ನು ಅಗಲವಾಗಿ ಚಾಚಿಕೊಂಡು ಬೆಂಚನ್ನು ಪೂರ್ತಿಯಾಗಿ ಆಕ್ರಮಿಸಿಕೊಂಡು ಕುಳಿತರು. ರೈಲು ನಿಂತಿತು. ಬ್ಯಾಗ್ ಹಿಡಿದು ಎದ್ದೆ.
“ನೀವು ಇಲ್ಲಿಯೇ ಇಳಿಯುತ್ತೀರಾ?” ಕೇಳಿದರಾಕೆ. “ಹೌದು” ಎಂದೆ.
ಮಕ್ಕಳತ್ತ ನೋಡಿದೆ, ‘ತಪ್ಪು, ಆ ರೀತಿ ಕುಳಿತುಕೊಳ್ಳಬಾರದು’ ಅನ್ನುವಂತೆ ಮುಖದ ಮೇಲೆ ಕೈಹಾಕಿ ನಗುತ್ತಾ ತೋರಿಸಿದೆ. ಅವರೂ ನಕ್ಕರು. ನನ್ನಂತೆ ಮುಖದ ಮೇಲೆ ಬೆರಳನ್ನಿಟ್ಟುಕೊಂಡರು. 
ಆ ಮುಖಗಳಲ್ಲಿ ನಗು ಮಿಂಚುತ್ತಿತ್ತು. ಅವರ ಎಳೆ ಮನಸ್ಸುಗಳಲ್ಲಿ ಅಂಟಿದ ಕಲ್ಮಶಗಳ ಒಳಗಿನಿಂದ ಕಾಂತಿಯಿಂದ ಪ್ರಕಾಶಿಸುತ್ತಿರುವಂತೆ ಊಹಿಸಿದೆ. ಇನ್ನೊಂದು ಇಪ್ಪತ್ತು ವರ್ಷಗಳಾದ ನಂತರ ಈ ಮಕ್ಕಳನ್ನು ಭೇಟಿಯಾದರೆ, ಆಗ ಹೇಗಿರುತ್ತಾರೋ? ನೋಡಲು ಸಾಧ್ಯವಾದರೆ?
“ಹೋಗುತ್ತಿದ್ದೀರಾ ರೈಲತ್ತೆ” ಎನ್ನುತ್ತಾ ಮಂಜುಲತಾ ಬೆಂಚಿನಿಂದ ಕೆಳಗಿಳಿದಳು.
“ಹೌದಮ್ಮ, ನನ್ನ ಊರು ಇದೇ. ನಾನು ಇಲ್ಲಿಯೇ ಇಳಿಯುತ್ತಿದ್ದೀನಿ.” 
ದೀನವಾಗಿ ನೋಡಿದರು ಮಕ್ಕಳು.
ನಗುತ್ತಾ ನಾನೆಂದೆ, “ನನ್ನ ಹೆಸರೂ ಮಂಜುಲತಾನೆ. ರೈಲತ್ತೆ ಅಲ್ಲ.”
“ಭಲೇ ಚೆನ್ನಾಗಿದೆ, ರೈಲತ್ತೆ ಹೆಸರೂ ಕೂಡ ನನ್ನ ಹೆಸರೇ. ಮಂಜುಲತಾನೇ.”
ರೈಲು ಇಳಿದು, ಮಕ್ಕಳನ್ನು ನೋಡುತ್ತಾ ಪ್ಲಾಟ್‍ಫಾರ್ಮ್ ಮೇಲೆ ನಿಂತುಕೊಂಡೆ.
“ಅಮ್ಮ, ರೈಲತ್ತೆ ಒಳ್ಳೆಯವರಲ್ಲವೇ?” ಮಕ್ಕಳು ಅವರಮ್ಮನನ್ನು ಕೇಳುವುದು ಕೇಳಿಸಿತು.
“ಆ, ಎಲ್ಲರೂ ಒಳ್ಳೆಯವರೇ, ----“ ಅಂದಳಾಕೆ.
ರೈಲು ಚಲಿಸಿತು. ಮಕ್ಕಳಿಬ್ಬರೂ ಕಿಟಕಿ ಹತ್ತಿರಕ್ಕೆ ಬಂದು ಕೈ ಬೀಸಿದರು.
ಅವರು ಬಹಳ ದುರಾದೃಷ್ಟವಂತರೇನೋ ಎನಿಸಿತು ಆ ಘಳಿಗೆ. ಆ ಹುಡುಗ ಡಾಕ್ಟರ್ ಆಗುತ್ತಾನಾ? ಆ ಹುಡುಗಿ? ಹತ್ತನೇ ತರಗತಿಗೇ ಶಾಲೆ ಬಿಟ್ಟುಬಿಡುತ್ತಾಳಾ? 
ಅವರ ಮಕ್ಕಳಿಗೆ ಮತ್ತೆ ಇವರೂ ಕೂಡ ಹೀಗೆಯೇ ಹೇಳಿಕೊಡುತ್ತಾರಾ???? 
   ಅನುವಾದ - ಸುಧಾ ಜಿ

ಕವನ - ಮೀ ಟೂ ಅಭಿಯಾನ.

[ಮೀ ಟೂ ಚಳುವಳಿಯ ಬಗ್ಗೆ ಹಲವರ ಕವನಗಳು]
ಮೀ ಟೂ ಚಳುವಳಿ
ನನ್ನಂತರಂಗದಿ ಪುಟಿದೆದ್ದ ಮನಸೊಂದು 
ಕೆದುಕಿತು ಹಿಂದಿನ ಕಹಿ ನೆನಪೂಂದನ

ಬರಿಸಲಾಗದೆ ಹುದಿಗಿತ್ತದು
ಸುಪ್ತ ಮನಸ್ಸಿನಾಳದಲ್ಲಿ
ಹೊರ ಹಾಕಲಾರದೆ 
ನಲುಗಿತ್ತು ಪ್ರತಿನಿತ್ಯವೂ

ಏನೂ ತಿಳಿಯದ ಸಮಯದಲ್ಲಿ
ಎರಗಿತ್ತೂಂದು ಮೃಗವು ನನ್ನೆದೆಯ ಮೇಲೆ
 ಕಸಿವಿಸಿಯಿಂದ, ಗಾಬರಿಯಿಂದ ಬಿಡಿಸಿಕೊಳ್ಳಲು 
ತ್ನಿಸಿದರೂ ಆಗದೆ, ಬದುಕಲೂ ಆಗದೆ ಉಸಿರುಗಟ್ಟಿತ್ತು 

ವರುಷಗಳುರುಳಿದರೂ ಮಾಸದ ನೆನಪು
ಮತ್ತೆ ಮತ್ತೆ ಬಂದು ಕಾಡುತ್ತದೆ
ಕುಕ್ಕುತ್ತದೆ
ನಾ ಅಪರಾಧಿ ಎಂದು
ತಪ್ಪು ಮಾಡಿದವ ಏನೂ ಅರಿಯದಂತೆ 
ನನ್ನ ಕಣ್ಣಮುಂದೆ ಹಾದುಹೋದಾಗ 
ಅಸಹಾಯಕತೆಯ ಕಣ್ಣೀರು ಹರಿಯಿತು

ಆದರೆ, ನಾನಿಂದು ಎದ್ದು ನಿಂತಿರುವೆ
ನನ್ನಂತಿರುವವರು ಎತ್ತಿದ ದನಿಯಿಂದ
ನನ್ನ ಮನದಾಳದ ತುಡಿತ ಹೊರಹಾಕಲು
ನಾ ಅಪರಾಧಿ ಅಲ್ಲ ಎಂದು
ನಾ ತಪ್ಪು ಎಸಗಿಲ್ಲವೆಂದು 
ತಪ್ಪು ಮಾಡಿದಾತನಿಗೆ ಆಗಲಿ ಶಿಕ್ಷೆ ಎಂದು 
ದನಿ ಎತ್ತಿರುವೆ
ದನಿ ಎತ್ತಿರುವೆ

- ಗಿರಿಜಾ ಕೆ ಎಸ್ 


#Me Too ಅಭಿಯಾನ

#Me Too ಎಂಬ ರಹಸ್ಯ ಗ್ರಂಥವು
ಸಾವಿರಾರು ನೋವಿನ ಕಥೆಗಳ ಸಂಕಲನ,
ಯಾವ ಪುಟದಲಿ ಯಾರ ಕಥೆಗಳು
ತಿಳಿಯುತಲಿದೆ ಈಗ ದಿನೇ ದಿನ,

ಮನದಲ್ಲೇ ಬಚ್ಚಿಟ್ಟ ಸತ್ಯ 
ಎಳೆಎಳೆಯಾಗಿ ಬಿಚ್ಚಿಡುತ ಈ ದಿನ,
ಆದ ಅನ್ಯಾಯದ ವಿರುದ್ಧ ಸಿಡಿದೆದ್ದು
ನಿಂತಿಹರು ಬನ್ನಿ ಎಲ್ಲಾ ಒಟ್ಟುಗೂಡೋಣ,

ಧ್ವನಿಗೆ ಧ್ವನಿಗೂಡಿ ಹೋರಾಟದ ಕಾವೇರಿರಲು
ತಪ್ಮಾಡಿ ಮೆರದವರ ಎದೆಯಲ್ಲಿ ತಲ್ಲಣ,
ನೋವುಂಡ ಹೆಣ್ಮಕ್ಕಳ ಮೌನ ಮಾತಾಗಲು
ಬರಲೆಬೇಕಾಯಿತು ಈ #Me Too ಅಭಿಯಾನ....

-  ಹರ್ಷಿತ.
ಒಂದು ಹೆಣ್ಣಿನ ವ್ಯಥೆ

ಮುಚ್ಚುಮರೆಯಿಲ್ಲದೆ
ಎಲ್ಲವನು ಬಿಚ್ಚಿಟ್ಟ ಮೇಲೆಯೂ 
ನನ್ನ ಮೇಲೆಯೇ ಸಂದೇಹವೇಕೆ?
ಈ ಅನುಮಾನಗಳೇಕೆ?
ಹೃದಯ ಹಿಂಡುವಂತಹ
ನೋವುಗಳು ಮಿಥ್ಯವೇ?
ಅನುಭವಿಸಿದಂತಹ
ವೇದನೆ ಅಸತ್ಯವೇ?
ಮನಕೆ ಕೊಳ್ಳಿಯಿಟ್ಟಂತಹ 
ಸಂಕಟಗಳು ಅಸಹಜವೇ?
ಪ್ರಶ್ನೆಗಳು ಮೂಡಿದ್ದಾದರೂ
ಹೇಗೆ? ಏಕೆ?

ಚಿಕ್ಕಂದಿನಲಿ ಓದಿದ
ಅಜ್ಜಿ ವೇಷ ಧರಿಸಿ ಬಂದ
ತೋಳದ ಕಥೆ ನೆನಪಿಲ್ಲವೇ?
ಪದೇಪದೇ ಕಿವಿಗೆ ಬಿದ್ದ
ಸನ್ಯಾಸಿಯ ವೇಷ ತೊಟ್ಟು ಬಂದ
ರಾವಣನ ಕತೆ ಮರೆತುಬಿಟ್ಟಿರೆ?
ಪತ್ರಿಕೆಗಳಲ್ಲಿ ದಿನವೂ ಓದಿದ
ತಂದೆ, ಅಣ್ಣನ ರೂಪ ಧರಿಸಿದ
ಗೋಮುಖವ್ಯಾಘ್ರರ ಕತೆ ಕೇಳಿಲ್ಲವೇ?

ಮುಖವಾಡ ಹೊತ್ತಂತವರ ಮುಂದೆ
ಮುಖವಾಡ ಕಳಚಿದವರ ನೋವು
ಕಾಣುವುದು ಕಡಿಮೆಯೇ?
ಈ ಕಾರಣಕ್ಕೆ ಇರಬಹುದು
ನಾವೆಲ್ಲರೂ ಮುಖವಾಡ ತೊಟ್ಟೇ
ಬದುಕುವುದು! !
ನೋವ ಹುದುಗಿಸಿ
ನಗುವ ಚೆಲ್ಲುತಾ
ಬದುಕಬಯಸುವುದು!!
       - ಸುಧಾ ಜಿ

#ಮೀ ಟೂ
ದಿನದ ಬೆಳಗದು
ಮತ್ತೆ ಮೂಡಲು
ಮಬ್ಬು ಕವಿದಿದೆ ಅವಳಲೂ!
ಮನೆಯ ಮಂದಿಯ
ಬೇಕು,ಬೇಡ
ಗಿರಿಕಿ ಅವಳ ಸುತ್ತಲು!!
ಬಂಧಿಯಲ್ಲ
ಎನುವ ಮನಕೆ
ಕೊಡವಿ ನಿಲುವ ಹಂಬಲ
ಒಳಗೆ ,ಹೊರಗೆ 
ದುಡಿತದಲ್ಲಿ
ಅವಳ ಸುತ್ತ ತಳಮಳ!!
ಮನದ ಕದವ ತೆರೆದ
#ಮೀ ಟೂ
ಅವಳ ಕತ್ತಲ ನೀಗಿತು
ಮನೆ-ಜಗತ್ತು ದುಡಿವ ಜೀವ
ಹೊಸದು ಬೆಳಕು ನೋಡಿತು

- ಸಂಧ್ಯಾ ಪಿ ಯಸ್

ಶುರುವಾಗಿದೆ 
ಮೀ ಟೂ ಅಭಿಯಾನ.... 
ಅನ್ಯಾಯಕ್ಕೊಳಗಾದ ಮಹಿಳೆಯರಿಗೆ ನೀಡಲು 
ನ್ಯಾಯದ ದರುಶನ.... 
ಎಷ್ಟೋ ಮಹಿಳೆಯರು ಹೇಳಲಾಗದೆ ಎದುರಿಸಿದ 
ನೋವಿನ ಅವಮಾನ....  
ಮೀ ಟೂ ಇಂದ ತೀರಿತು
ನೊಂದ ಮಹಿಳೆ ಒಬ್ಬಂಟಿಯಾಗಿ ಹೋರಾಡುವ ದಿನ.... 
ಈಗ ನಾವು ನಿಮ್ಮ ಜೊತೆ ಇರುವೆವು ಎಂದು 
ಹೇಳುತಿದೆ ಸಾಂತ್ವನ..... 
ಇದರಿಂದ ಇನ್ನಷ್ಟು ಗಟ್ಟಿಗೂಂಡಿದೆ 
ನೊಂದ ಮಹಿಳೆಯರ ಮನ..... 
ನ್ಯಾಯದ ಪರವಾಗಿ ಒಗ್ಗೂಡಿ 
ಕೈ ಜೋಡಿಸುತ್ತಿರುವ ಮಹಿಳೆಯರ ಸಂಖ್ಯೆ 
ಶರವೇಗದಲ್ಲೇರುತ್ತಿದೆ ದಿನೇ ದಿನಾ..... 
ಇದಕ್ಕೆ ಬೆಂಬಲಿಸಿ ಮಾನವೀಯ ದೃಷ್ಟಿಯಿಂದ ಪುರುಷರು ಮಾಡಿದರೆ ಅನುರಣನ..... 
ನಡೆಯುತ್ತಿರುವ ಅತ್ಯಾಚಾರಗಳು ಆದಷ್ಟು 
ಕ್ಷೀಣಿಸುವುದು ಕ್ರಮೇಣ...... 

- ಮೇನಕಾ ಎಂ