Pages

ವ್ಯಕ್ತಿ ಪರಿಚಯ - ಆಲೂರು ವೆಂಕಟರಾಯರು



ಆಲೂರು ವೆಂಕಟರಾಯರು
ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಒಗ್ಗೂಡಿಸಿ,ಕನ್ನಡಿಗರನ್ನು ಜಾಗೃತಗೊಳಿಸಿ ಭವ್ಯ ಕರ್ನಾಟಕದ ಕನಸ್ಸನ್ನು ಕಂಡು ಸಾಕಾರಗೊಳಿಸಿದ ಆಲೂರು ವೆಂಕಟರಾಯರು 1880 ಜುಲೈ 12 ರಂದು ಬಿಜಾಪುರದಲ್ಲಿ ಜನಿಸಿದರು.
ತಂದೆ ಭೀಮರಾವ್ ಮತ್ತು ತಾಯಿ ಭಾಗೀರಥಮ್ಮ. ಇವರ ವಂಶಜರಿಗೆ ಆಲೂರು ಜಹಗೀರಾಗಿ ಬಂದಿದ್ದರಿಂದ ಆಲೂರು ಎಂಬುದು ಇವರ ಮನೆತನದ ಹೆಸರಾಗಿದೆ. ಇವರ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣ ಧಾರವಾಡದಲ್ಲಿ ನಡೆಯಿತು. ಈ ಸಮಯದಲ್ಲಿ ಹಲವು ಚಳವಳಿಗಳಲ್ಲಿಯೂ ಭಾಗವಹಿಸಿದ್ದರು ಹಾಗೂ ಶಾಲಾ ಶಿಕ್ಷಕರುಗಳಿಂದ ಪ್ರಭಾವಿತಗೊಂಡಿದ್ದರು. ಇದೇ ಅವರ ಮುಂದಿನ ಹೋರಾಟಕ್ಕೆ ನಾಂದಿಯಾಯಿತು. ನಂತರ ಇವರು ಪುಣೆಯ ಫರ್ಗ್ಯೂಸನ್ ಕಾಲೇಜಿಗೆ ಸೇರಿದರು. ಸಹಪಾಠಿ ವಿನಾಯಕ ದಾಮೋದರ ಸಾವರಕರ ಮತ್ತು ಅವರ ಸ್ವಾತಂತ್ರ್ಯ ಹೋರಾಟಗಾರ ಸ್ನೇಹಿತರ ಒಡನಾಟದಿಂದ ಇವರಲ್ಲಿ ರಾಷ್ಟ್ರಾಭಿಮಾನ ಜಾಗೃತಗೊಂಡಿತು. ಅಲ್ಲದೆ ಗೋಖಲೆ,ರಾಜವಾಡ, ಮೊದಲಾದವರುಗಳಿಂದ ಸ್ಫೂರ್ತಿಗೊಂಡಿದ್ದರು. ತಿಲಕರ ಒಡನಾಟ ಮತ್ತು ಅವರ ಉಗ್ರಲೇಖನಗಳು ಇವರ ಮೇಲೆ ತುಂಬಾ ಪ್ರಭಾವ ಬೀರಿತು. ಆ ಸಮಯದಲ್ಲಿ ವೆಂಕಟರಾಯರಿಗೆ ಕರ್ನಾಟಕತ್ವದ ಕಲ್ಪನೆ ಇನ್ನೂ ಬಂದಿರಲಿಲ್ಲ. ಆದರೂ ಅವರಲ್ಲಿ ಕನ್ನಡಾಭಿಮಾನವಿತ್ತು. ಅಂದು ಕರ್ನಾಟಕವು ಮಹಾರಾಷ್ಟ್ರದ ಒಂದು ಅಂಗವಾಗಿತ್ತು. ಅವರು ಓದುತ್ತಿದ್ದ ಕಾಲೇಜಿನ ಗ್ರಂಥಾಲಯದಲ್ಲಿ ಕನ್ನಡ ಪುಸ್ತಕಗಳು ಇರಲಿಲ್ಲ. ಇದಕ್ಕಾಗಿ ಪ್ರತಿಭಟನೆ ನಡೆಸಿದರು. ಪರಿಣಾಮವಾಗಿ ಧಾರವಾಡದಿಂದ ಕನ್ನಡ ಪುಸ್ತಕಗಳನ್ನು ತರಿಸಲಾಯಿತು. 1903 ರಲ್ಲಿ  ಬಿ.ಎ ಪದವಿ ಮುಗಿಸಿದರು.
ಕಾಲೇಜು ಶಿಕ್ಷಣ ಮುಗಿಸಿದ ವೆಂಕಟರಾಯರು ಒಮ್ಮೆ ಹಂಪೆಗೆ ಹೋಗಿದ್ದರು. ಅಲ್ಲಿನ ಅವಶೇಷಗಳು ಅವರ ಮೇಲೆ ತುಂಬಾ ಪರಿಣಾಮ ಬೀರಿದವು. " ಆ ದಿವಸ ನನ್ನ ಮನದಲ್ಲಿ ವಿದ್ಯುತ್ ಸಂಚಾರ ಮೂಡಿಸಿತು ಚಲನಚಿತ್ರ ಪಟದಲ್ಲಿ ವಿದ್ಯುತ್ ದೀಪದ ಬಲದಿಂದ ಮೂರ್ತಿಗಳು ಮೂಡುವಂತೆ ನನ್ನ ಹೃದಯದಲ್ಲಿ ಕರ್ನಾಟಕ ದೇವಿಯ ಸುಂದರ ಮೂರ್ತಿಯು ಒಡಮೂಡ ಹತ್ತಿತು.ಆ ದರ್ಶನವು ನನ್ನ ತಲೆಯಲ್ಲಿ ನಾನಾ ವಿಧದ ತರಂಗಗಳಿಗೆ ಇಂಬುಕೊಟ್ಟಿತು.ಹೃದಯ ಸಮುದ್ರವು ಅಲ್ಲೋಲಕಲ್ಲೋಲವಾಯಿತು.ಆ ದಿವಸವು ನನ್ನ ಜೀವನಕ್ರಮದಲ್ಲಿ ಕ್ರಾಂತಿಯನ್ನು ಮಾಡಲಿಕ್ಕೆ ಕಾರಣವಾಯಿತು." ಎಂದು ತಮ್ಮ ಅಂದಿನ ಅನುಭವವನ್ನು ಸ್ವತಃ ಅವರೇ ಹೇಳಿದ್ದಾರೆ. ಅಂದಿನಿಂದ ಅವರ ಕನ್ನಡಾಭಿಮಾನ ಹೆಚ್ಚಾಗಿ, ಕರ್ನಾಟಕದ ಗತವೈಭವವನ್ನು ಕನ್ನಡಿಗರ ಮುಂದಿಟ್ಟು ಅವರನ್ನು ಎಚ್ಚರಗೊಳಿಸಬೇಕೆಂದು ದೃಢಸಂಕಲ್ಪ ಮಾಡಿದರು. ನಂತರ ಕಾನೂನು ವಿದ್ಯಾಭ್ಯಾಸವನ್ನು ಮುಂಬಯಿಯಲ್ಲಿ 1905 ರಲ್ಲಿ ಮುಗಿಸಿದರು. ನಂತರದಲ್ಲಿ ತಮ್ಮ ವಕೀಲಿ ವೃತ್ತಿಯನ್ನು ಧಾರವಾಡದಲ್ಲಿ ಪ್ರಾರಂಭಿಸಿದರು. ಇಟಲಿಯ ಮ್ಯಾಝಿನಿಯಿಂದ ಪ್ರಭಾವಿತರಾದ ಇವರು ಅವನ ಜೀವನಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸಿದರು. ಅದರಲ್ಲಿನ " ಇಟಲಿಯು ಪರದಾಸ್ಯದಲ್ಲಿ ತೊಳಲುತ್ತ ಸೂತಕಾವಸ್ಥೆಯಲ್ಲಿರುವಾಗ ತರುಣರು ನಗು ಮೊಗದಿಂದ ನಲಿದಾಡುವುದೆಂದರೇನು?"  ಎಂಬ ವಾಕ್ಯದಿಂದ ಪ್ರಚೋದನೆಗೊಂಡ ವೆಂಕಟರಾಯರು ತಮ್ಮ ವಕೀಲಿವೃತ್ತಿಯನ್ನು ಬಿಟ್ಟು ಸಾರ್ವಜನಿಕ ಸೇವೆಯನ್ನು ಪ್ರಾರಂಭಿಸಿದರು. 
ಅಂದು ಜನರಲ್ಲಿ ರಾಷ್ಟ್ರೀಯತೆ,ರಾಷ್ಟ್ರಾಭಿಮಾನಗಳನ್ನು ಮೂಡಿಸಲು ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತಿತ್ತು. ಅಂತಯೇ ವೆಂಕಟರಾಯರು ಸಹ ಧಾರವಾಡದಲ್ಲಿ ರಾಷ್ಟ್ರೀಯ ಶಾಲೆಯೊಂದನ್ನು ಆರಂಭಿಸಿದರು. ಇಲ್ಲಿ ರಾಷ್ಟ್ರಾಭಿಮಾನದ ಜೊತೆಗೆ ಇಂಗ್ಲಿಷ್ ರ ಗುಲಾಮಗಿರಿಯಿಂದ ಹೊರಬರಲು  ಸ್ವಾವಲಂಬನೆಯನ್ನು ಕಲಿಸಲಾಗುತ್ತಿತ್ತು. ಈ ಶಾಲೆಯಲ್ಲಿ ದೀಪದಕಡ್ಡಿ ತಯಾರಿಕೆ,ಗೇಣಿಗೆ,ಚಿತ್ರಕಲೆ,ಮರಗೆಲಸ, ಮುದ್ರಣಕಲೆ ಮೊದಲಾದ ಸ್ವಯಂ ಉದ್ಯೋಗ ತರಬೇತಿಯನ್ನು ಕೊಡಲಾಗುತ್ತಿತ್ತು. ಆದರೆ ಸರ್ಕಾರದ ನೀತಿ ಮತ್ತು ಹಣದ ಅಭಾವದಿಂದ ಈ ಶಾಲೆ ಹೆಚ್ಚು ದಿನ ನಡೆಯಲಿಲ್ಲ. ವೆಂಕಟರಾಯರು ರಾಷ್ಟ್ರೀಯ ಚಳವಳಿಯ ಜೊತೆಯಲ್ಲೇ ಕನ್ನಡಭಾಷೆ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟವನ್ನು ಮಾಡುತ್ತಿದ್ದರು. ವೆಂಕಟರಾಯರು ನೇತೃತ್ವದಲ್ಲಿ 1936 ಡಿಸೆಂಬರ್ ನಲ್ಲಿ ನಾಲ್ಕು ದಿನಗಳ ಕಾಲ ವಿಜಯನಗರ ಸ್ಥಾಪನೆ ಷಡಶತಮಾನೋತ್ಸವವು ಹಂಪೆಯಲ್ಲಿ ನಡೆಯಿತು. ಇದರಲ್ಲಿ ಐತಿಹಾಸಿಕ ಸಮ್ಮೇಳನ, ವಸ್ತು ಪ್ರದರ್ಶನ, ಸಂಗೀತಕಛೇರಿಗಳು,ನಾಟಕ ಪ್ರದರ್ಶನಗಳು ಮೊದಲಾದ ಕಾರ್ಯಕ್ರಮಗಳು ನಡೆದವು.
ಕರ್ನಾಟಕದಲ್ಲಿ ಒಂದೇ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಬೇಕೆಂಬುದು ವೆಂಕಟರಾಯರು ಕನಸ್ಸಾಗಿತ್ತು. ಆದರೆ ಅದು ನೆರವೇರದೆ 1914 ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಸ್ಥಾಪಿತವಾಯಿತು.
ಕರ್ನಾಟಕತ್ವದ ಪರಿಕಲ್ಪನೆ ಹೊಂದಿದ್ದ ವೆಂಕಟರಾಯರಿಗೆ  ಕರ್ನಾಟಕಕ್ಕೆ ತನ್ನದೇ ಆದ ರಾಜಕೀಯ ಪರಿಷತ್ತು ಇರಬೇಕೆಂದು ಅವರ ನಿಲುವಾಗಿತ್ತು. ಅದುವರೆವಿಗೂ ಕರ್ನಾಟಕದ ಉತ್ತರ ಭಾಗ ದಕ್ಷಿಣ ಮಹಾರಾಷ್ಟ್ರವಾಗಿತ್ತು ,ದಕ್ಷಿಣ ಭಾಗ ಮೈಸೂರಾಗಿತ್ತು. ಹೀಗಾಗಿ ಕರ್ನಾಟಕಕ್ಕೆ ಪ್ರತ್ಯೇಕ ಪರಿಷತ್ತು ಬೇಕೆಂದು ಇವರು ವಾದಿಸುತ್ತಿದ್ದರು. ಪರಿಣಾಮವಾಗಿ 1920 ರಲ್ಲಿ  ಧಾರವಾಡದಲ್ಲಿ ವಿ಼. ಪಿ. ಮಾಧವರಾಯರ ಅಧ್ಯಕ್ಷತೆಯಲ್ಲಿ ಪ್ರಥಮ ಕರ್ನಾಟಕ ಪರಿಷತ್ತಿನ ಅಧಿವೇಶನ ನಡೆಯಿತು. ಇದೇ ಇಂದಿನ ಕೆ.ಪಿ.ಸಿ.ಸಿ.
ಯಾವುದೇ ರಾಜ್ಯದ ಅಥವಾ ರಾಷ್ಟ್ರದ ಇತಿಹಾಸವನ್ನು ತಿಳಿಯಬೇಕಾದರೆ ಒಂದು ಪ್ರತ್ಯೇಕ ಸಂಶೋಧನ ಮಂಡಳಿಯ ಅವಶ್ಯಕತೆಯಿದೆ ಎಂದ ವೆಂಕಟರಾಯರು 1914 ರಲ್ಲಿ ಮಂಡಳಿಯೊಂದನ್ನು ಸ್ಥಾಪಿಸಿದರು. ಜೊತೆಗೆ ಎಲ್ಲೆಡೆ ಕಾಣ ಬರುತ್ತಿದ್ದ ಶಿಲಾಶಾಸನಗಳಲ್ಲಿನ ಲಿಪಿಗಳಿಂದಲೂ ಸಹ ಇತಿಹಾಸವನ್ನು ತಿಳಿಯಬಹುದೆಂದು ಮನಗಂಡ ವೆಂಕಟರಾಯರು ಅವುಗಳ ಅಧ್ಯಯನಕ್ಕಾಗಿ " ಸರ್ವೇಕ್ಷಣ ಯೋಜನೆ" ಯನ್ನು ಪ್ರಾರಂಭಿಸಿದರು.
ಕನ್ನಡದಲ್ಲಿ ಉತ್ತಮ ಗ್ರಂಥಗಳ ಕೊರತೆಯಿರುವುದನ್ನು ಅರಿತ ವೆಂಕಟರಾಯರು ಧಾರವಾಡದಲ್ಲಿ ಕನ್ನಡ ಗ್ರಂಥಕರ್ತರ ಸಮ್ಮೇಳನವನ್ನು ಆಯೋಜಿಸಿದರು. ಅದರಲ್ಲಿ  ಎಲ್ಲರೂ ' ಕರ್ನಾಟಕ ಗ್ರಂಥಮಾಲೆ ' ಎಂಬ ಹೆಸರಿನಿಂದ ಪ್ರಕಟಿಸಬೇಕೆಂದು ಅಂಗೀಕರಿಸಲಾಯಿತು. ಎರಡನೇ ಸಮ್ಮೇಳನವು ಧಾರವಾಡದಲ್ಲಿ ನಡೆಯಿತು. ಮೂರನೇ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಿತು. ಇದರ ಫಲವಾಗಿ 1915 ರಲ್ಲಿ " ಕರ್ನಾಟಕ ಸಾಹಿತ್ಯ ಪರಿಷತ್ತು " ಸ್ಥಾಪನೆಯಾಯಿತು.ಇದು ವೆಂಕಟರಾಯರ ಮಹತ್ಕಾರ್ಯಗಳಲ್ಲಿ ಒಂದಾಗಿದೆ. ಇದೇ ಈಗಿನ ಕನ್ನಡ ಸಾಹಿತ್ಯ ಪರಿಷತ್ತು.
1905 ರಲ್ಲಿ " ವಿದ್ಯಾವರ್ಧಕ ಸಂಘ" ಕ್ಕೆ ಸೇರಿ, ಮೂಲಕ ವೆಂಕಟರಾಯರು ಕನ್ನಡದ ಅಭ್ಯಾಸವನ್ನು  ಪ್ರಾರಂಭಿಸುವುದರ ಮೂಲಕ ಕನ್ನಡ ಸಾಹಿತ್ಯ ಕೃಷಿಯನ್ನು ಆರಂಭಿಸಿದರು.
" ವಾಗ್ಭೂಷಣ " ಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡು ಅದಕ್ಕೆ ಹೊಸ ರೂಪವನ್ನು ನೀಡಿದರು. ಇವರ ಮೊದಲ ಕೃತಿ " ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ ಶ್ರೀ ವಿದ್ಯಾರಣ್ಯರು" ಇದರಿಂದ ಪ್ರೇರಣೆಗೊಂಡ ಶಾಂತಕವಿ ವಿಜಯ ವಿದ್ಯರಣ್ಯ ಕೀರ್ತನೆಯನ್ನು ಬರೆದರು. 
1912 ರಲ್ಲಿ ವೆಂಕಟರಾಯರು " ಕರ್ನಾಟಕದ ಗತವೈಭವ " ಕೃತಿಯನ್ನು ಪ್ರಕಟಿಸಿದರು. ಇದರಲ್ಲಿ ಕನ್ನಡಿಗರ ಪ್ರಾಚೀನ ಇತಿಹಾಸವನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟಿದ್ದಾರೆ. " ನಿಮ್ಮ ನಿರಭಿಮಾನದ ಮುಸುಕನ್ನು ಹಾರ ಹಿಡೆಯಲಿಕ್ಕೆ ನೀವು ಇತಿಹಾಸದ ಶರಣು ಹೋಗಿರಿ " ಎಂದು ಕನ್ನಡಿಗರಿಗೆ ಇತಿಹಾಸವನ್ನು  ತಿಳಿಸುವ ಉದ್ದೇಶದಿಂದಲೇ ಈ ಕೃತಿಯನ್ನು ಬರೆದಿರುವುದಾಗಿ ಸ್ವತಃ ವೆಂಕಟರಾಯರೇ ಹೇಳಿದ್ದಾರೆ. ಇದಲ್ಲದೆ " ಕರ್ನಾಟಕದ ವೀರರತ್ನಗಳು" "ಕರ್ನಾಟಕದ ಸೂತ್ರಗಳು" ಮತ್ತು " ಕರ್ನಾಟಕತ್ವದ ವಿಕಾಸ" ಗ್ರಂಥಗಳನ್ನು ಬರೆದು ಕನ್ನಡಿಗರು ಸ್ಫೂರ್ತಿಗೊಳ್ಳುವಂತೆ ಮಾಡಿದರು.
ಇಂಗ್ಲಿಷ್ ನ ಸ್ಪೆನ್ಸರನ Education ಮತ್ತು ಅರಿಸ್ಟಾಟಲ್‌ನ Data of ethics, J.S. ಮಿಲ್ ನ Liberty ಮೊದಲಾದ ಕೃತಿಗಳನ್ನು  ಕನ್ನಡಕ್ಕೆ ಅನುವಾದಿಸಿದರು. 
ಗಾಂಧಿಚರಿತೆ,ಮ್ಯಾಝಿನಿ ಚರಿತೆ, ಅರವಿಂದರ ಪತ್ರ, ಅರವಿಂದರ ರಾಜಕಾರಣ, ಚಳವಳಿಗಳ ಆತ್ಮ ಇವುಗಳನ್ನು ಭಾಷಾಂತರಿಸಿದರು.ಹಾಗು ವಿವೇಕಾನಂದರ " ಪೂರ್ವ ಮತ್ತು ಪಶ್ಚಿಮ, ಭಕ್ತಿಯೋಗವನ್ನು ಭಾಷಾಂತರಿಸಿದರು.
ರಾಷ್ಟ್ರೀಯತ್ವದ ಅರಿವು ಮೂಡಿಸಲು " ರಾಷ್ಟ್ರೀಯತ್ವದ ಮೀಮಾಂಸೆ" ಯನ್ನು ಬರೆದರು.ಇದಲ್ಲದೆ ' ನವಜೀವನ ಗ್ರಂಥಮಾಲೆ' ಯನ್ನು ಆರಂಭಿಸಿದರು. ಕನ್ನಡಿಗರ ಪರಭಾಷಾ ವ್ಯಾಮೋಹವನ್ನು ಹೋಗಲಾಡಿಸಲು " ಕನ್ನಡಿಗರ ಭ್ರಮನಿರಸನ" ಎಂಬ ನಾಟಕವನ್ನು ಬರೆದರು. ತಿಲಕರ " ಗೀತಾರಹಸ್ಯ" ವನ್ನು ಕನ್ನಡಕ್ಕೆ  ಭಾಷಾಂತರಿಸಿದರು. ಅಲ್ಲದೆ ಗೀತಾಪ್ರಕಾಶ,ಗೀತಾಸಂದೇಶ,ಗೀತಾಪ್ರಭಾವ ಭಾಗ 1,2 ನ್ನು ಬರೆದರು. ದ.ರಾ.ಬೇಂದ್ರೆಯವರ " ಕೃಷ್ಣಕುಮಾರಿ" ಕವನ ಸಂಕಲನವನ್ನು ಪ್ರಕಟಿಸಿದರು.
ಕರ್ನಾಟಕದ ಏಕೀಕರಣವೇ ಇವರ ಗುರಿಯಾಗಿದ್ದು,1922 ರಲ್ಲಿ "ಜಯಕರ್ನಾಟಕವೇ ನಮ್ಮ ಮಂತ್ರಘೋಷ" ಎಂಬ ಘೋಷಣೆಯೊಂದಿಗೆ "ಜಯ ಕರ್ನಾಟಕ " ಪತ್ರಿಕೆಯನ್ನು ಪ್ರಾರಂಭಿಸಿದರು. ಇದರಲ್ಲಿ ಸಾಹಿತ್ಯ, ಕಲೆ,ವಿಮರ್ಶೆ, ಧರ್ಮ,ತತ್ವಜ್ಞಾನ,ವಿಜ್ಞಾನ, ರಾಜಕಾರಣ,ಸಣ್ಣಕತೆ, ಕವಿತೆ ಮತ್ತು ಆರ್ಥಿಕ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಲೇಖನಗಳು ಪ್ರಕಟವಾಗುತ್ತಿದ್ದವು. ಇದಲ್ಲದೆ ವೆಂಕಟರಾಯರು ಹಲವು ಪತ್ರಿಕೆಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಕರ್ನಾಟಕ ಪತ್ರ,ಕರ್ನಾಟಕ ವೃತ್ತ,ಕನ್ನಡ ಕೇಸರಿ ಪತ್ರಿಕೆಗಳಿಗೆ ಸಂಪಾದಕೀಯಗಳನ್ನು ಬರೆಯುತ್ತಿದ್ದರು. ಸ್ವಲ್ಪದಿನ ಕರ್ಮವೀರ ಪತ್ರಿಕೆಯನ್ನು ನಡೆಸಿದರು.
ವೆಂಕಟರಾಯರು ತಮ್ಮ ಜೀವನದ ಅನುಭವಗಳ ಬಗ್ಗೆ " ಜೀವನ ಸ್ಮೃತಿ ಗಳು " ಎಂಬ ಆತ್ಮಚರಿತೆಯನ್ನು ಬರೆದಿದ್ದಾರೆ.
ವೆಂಕಟರಾಯರು ಕರ್ನಾಟಕತ್ವದ ಪರಿಕಲ್ಪನೆಯೊಂದಿಗೆ ರಾಷ್ಟ್ರಾಭಿಮಾನವೂ ಮಿಳಿತವಾಗಿತ್ತು." ಕರ್ನಾಟಕ್ಕಾಗಿ ಕೆಲಸ ಮಾಡುವಾಗ ನಾನು ರಾಷ್ಟ್ರೀಯತ್ವವನ್ನೆಂದೂ ಕಣ್ಮರೆ ಮಾಡಿಲ್ಲ.ನನಗೆ ಅವೆರಡರಲ್ಲಿ ವಿರೋಧವೇ ಕಾಣುವುದಿಲ್ಲ. ನನಗೆ ಕರ್ನಾಟಕ ಎಂದರೆ ಅದೊಂದು ಕಿರಣ ಕಾಜು (focusing lens) ಅದರೊಳಗಿನಿಂದ ನನಗೆ ಭರತಭೂಮಿಯೇ ಏಕೆ ಇಡೀ ವಿಶ್ವವೇ ಕಾಣುತ್ತದೆ.ವಿಶ್ವದ ಕಿರಣಗಳು ನನ್ನ ಕರ್ನಾಟಕದಲ್ಲಿ ಕೇಂದ್ರೀಕೃತವಾಗಿವೆ,ಅಂತರ್ಯಾಮಿಯಾಗಿವೆ" ಎಂದು ಹೇಳಿರುವುದರಲ್ಲಿ ಅವರ ರಾಷ್ಟ್ರಾಭಿಮಾನವನ್ನು ಕಾಣಬಹುದು. ಕನ್ನಡಿಗರಲ್ಲಿ ಸ್ಫೂರ್ತಿ ತರಲು ಹಲವಾರು ಉತ್ಸವಗಳನ್ನು ನಡೆಸಿ ಕನ್ನಡ ಪ್ರಚಾರವನ್ನು ಮಾಡುತ್ತಿದ್ದರು.
ಹೀಗೆ ಕನ್ನಡ ನಾಡು ನುಡಿಗಾಗಿ ಇವರ ಆರು ದಶಕಗಳ ಹೋರಾಟದ ಫಲವಾಗಿ 1956 ನವೆಂಬರ್  1ರಂದು ಏಕೀಕೃತ ಕರ್ನಾಟಕ ಉದಯವಾಯಿತು. ವೆಂಕಟರಾಯರ ಕನಸು ನನಸಾಯಿತಾದರೂ ಕರ್ನಾಟಕ ಎಂದು ಕರೆಯಲಿಲ್ಲವೆಂದು ಬೇಸರವೂ ಆಯಿತು. ಆದರೂ " ಈಗ ಮೈಸೂರು ರಾಜ್ಯವೆಂದು ತಪ್ಪಾಗಿ ಹೆಸರಿಡಲ್ಪಟ್ಟ ಕರ್ನಾಟಕ ರಾಜ್ಯವು ಆಯುಷ್ಮಂತವಾಗಲಿ,ಆರೋಗ್ಯವಂತವಾಗಲಿ ಮತ್ತು ಭಾಗ್ಯವಂತವಾಗಲಿ ಎಂದು ಹರಸುತ್ತೇನೆ" ಎನ್ನುವುದನ್ನು  ನೋಡಿದರೆ ಅವರ ಕರ್ನಾಟಕದ ಮೇಲಿನ ಅಭಿಮಾನ ತಿಳಿಯುತ್ತದೆ.
ಕನ್ನಡ ನಾಡು ನುಡಿಗಾಗಿ ಅವಿರತವಾಗಿ ಸೇವೆ ಸಲ್ಲಿಸಿದ ವೆಂಕಟರಾಯರನ್ನು ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ,ಗೌರವಿಸಿದವು.
1921 ರಲ್ಲಿ ಅಲಸೂರು ಪೇಟೆಯಲ್ಲಿ ಮಾನಪತ್ರದೊಂದಿಗೆ " ದೇಶಸೇವಾ ಧುರೀಣ ಮತ್ತು ಸ್ವಭಾಷಾ ರಕ್ಷಕ " ಎಂಬ ಬಿರುದನ್ನು ನೀಡಲಾಯಿತು.
1930 ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರನ್ನಾಗಿ ಮಾಡುವುದರ ಮೂಲಕ ಅವರ ಹೋರಾಟಕ್ಕೆ ಗೌರವ ತೋರಿಸಿದರು.
1941 ರಲ್ಲಿ ಹೈದರಾಬಾದಿನ ಕನ್ನಡಿಗರು " ಕರ್ನಾಟಕ ಕುಲ ಪುರೋಹಿತರು " ಎಂಬ ಬಿರುದು ನೀಡಿ ಸನ್ಮಾನಿಸಿದರು.
1961 ರಲ್ಲಿ ಬೆಂಗಳೂರು ನಗರಸಭೆ ಮಾನಪತ್ರ ನೀಡಿ ಸನ್ಮಾನಿಸಿತು.
ಹೀಗೆ ನಾಡಸೇವೆಯೊಂದಿಗೆ ದೇಶಸೇವೆಯನ್ನು ಮಾಡುತ್ತಾ ತಮ್ಮ ಜೀವಮಾನವಿಡೀ ಹೋರಾಡಿ ತನು ಮನ ಧನವನ್ನು ಅರ್ಪಿಸಿದ. ವೆಂಕಟರಾಯರು 1964 ಫೆಬ್ರವರಿ 25 ರಂದು ನಿಧನರಾದರು. " ಕರ್ನಾಟಕ ದೇವಿಯ ಮಂದಿರದಲ್ಲಿ ಉರಿಯುತ್ತಿರುವ ಹೂ ಬತ್ತಿ" ಎಂದ ವೆಂಕಟರಾಯರು ತಮ್ಮ ಅವಿರತ ಹಾಗೂ ನಿಸ್ವಾರ್ಥ ಸೇವೆಯಿಂದ ಎಲ್ಲರ ಮನದಲ್ಲಿ ನಂದಾದೀಪವಾಗಿದ್ದಾರೆ. ಕರ್ನಾಟಕ ಏಕೀಕರಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವೆಂಕಟರಾಯರು " ಕನ್ನಡ ಕುಲದ ಪುರೋಹಿತ" ರೇ ಹೌದು.
- ವಿಜಯಲಕ್ಷ್ಮಿ  ಎಂ ಎಸ್

ಲಘುಬರಹ - 'ಗೊಮಟಗಿರಿಯೂ..... ಲವಿಂಗ್ ಹ್ಯಾಟೂ.....'



 ಬಂಧುಗಳ ಮನೆಯಿಂದ ಹೊರಡುವ ಹೊತ್ತಾಯ್ತು... ನಮ್ಮನ್ನು ಬೀಳ್ಗೊಡಲು ಎಲ್ಲರೂ ಮುಂಬಾಗಿಲೆಡೆಗೆ ಬಂದ್ರು... ಅಷ್ಟೇ! ಅಲ್ಲಿನ ದೃಶ್ಯ ನೋಡಿ ನನ್ನೆದೆ ಧಸಕ್ಕನೆ ಕುಸಿಯಿತು. ಅವ್ಯಕ್ತ ಬೇಸರ ಹಾಗೂ ಅದ ವ್ಯಕ್ತಪಡಿಸಲಾಗದ ಅನಿವಾರ್ಯತೆಯ ತೊಳಲಾಟದಿಂದ ಮುಖ ಕಪ್ಪಿಟ್ಟು ಹೋಯ್ತು....!???. ಒಂದು ಕ್ಷಣ ಹೇಗೆ ಪ್ರತಿಕ್ರಯಿಸಬೇಕು ಅಲ್ಲಲ್ಲಾ!... ಸ್ಪಂಧಿಸುವುದೆಂದು ತಿಳಿಯದೇ ಪತಿರಾಯನ ಮುಖ ನೋಡಿದೆ. ನನ್ನ ದುಗುಡ, ದುಮ್ಮಾನ ಮನದ ಹೋಯ್ದಾಟ, ಇನ್ನೂ ಏನೇನೋ...?ಗ್ರಹಿಸಿದ ಅವರು ಕೂಡ ' ಏನು ಮಾಡಲಿ ನಾನೂ... ಏನು ಹೇಳಲಿ...' ಎಂದು ವರನಟನಷ್ಠೇ ಭಾವುಕರಾಗಿ ಮೌನವಾಗಿ ಹಾಡುತ್ತಿರುವಂತೆ ಭಾಸವಾಗುತ್ತಿತ್ತು.

"ಪ್ರತಿಕ್ರಯಿಸುವುದಕ್ಕಿಂತ ಸ್ಪಂಧಿಸುವುದನ್ನು ಕಲಿಯಿರಿ" ಎಂದು ಆಗಾಗ್ಗೆ ಪುಕ್ಕಟೆಯಾಗಿ ಸಲಹೆ ಕೊಡುವ ನನಗೆ ಸ್ಪಂಧಿಸುವುದು ಭಾಷಣ ಬಿಗಿಯುವಷ್ಟು ಸುಲಭವಲ್ಲ ಎಂಬುದು ನಿಜ ಅರ್ಥದಲ್ಲಿ ವೇದ್ಯವಾಗಿ ಹೋಯ್ತು... ಮತ್ತೇನು ಮಾಡುವುದು ಕೂಡ ಸಾಧ್ಯವಿರದಂತಹ ಇಕ್ಕಟ್ಟಿನ ಸಂದರ್ಭವದು... ಮನ ಒಪ್ಪದ ನೋವಿನ ಸಂಗತಿಯಾದರೂ ಒಪ್ಪಲೇ ಬೇಕಾದ, ಒಪ್ಪಿ ಜೀರ್ಣಿಸಿಕೊಳ್ಳಲೇ ಬೇಕಾದ ಅನಿವಾರ್ಯ ಸಂಗತಿಯದು... ನಿಜಕ್ಕೂ ಹೇಳುವೆ ದೇಹಕ್ಕೆ ಆಗುವ ಪೆಟ್ಟು ಮನಕ್ಕೇನೂ ಘಾಸಿ ಮಾಡದು ಎಂಬ ಮಾತು ಅನುಭವಕ್ಕೆ ದಕ್ಕಿತು. ಜೊತೆಗೆ ನನ್ನ ಉಪದೇಶಗಳು ನನ್ನನ್ನೇ ಈಟಿ, ಭರ್ಜಿ...ಇನ್ನೂ ಯಾವ್ಯಾವುದರಲ್ಲಿ ಸಾಧ್ಯವೋ ಅದರಲ್ಲೆಲ್ಲಾ ಇರಿದಂತಾಗಲಾರಂಭಿಸಿತು....!?

ಮನ ಚೀರಿ ರಂಪಾಟ ಮಾಡುತ್ತಿತ್ತು. ಮನದ ಹೋಯ್ದಾಟ ನಿಯಂತ್ರಿಸಲು ಹೆಣಗಾಡುತ್ತಿದ್ದೆ. ಸತ್ಯವಾಗಿಯೂ ಆ ದೃಶ್ಯ ಅಷ್ಟು ತಟ್ಟಿತ್ತು ಮನವನ್ನು. ಇಷ್ಟವಾಗುವ ಮೊದಲ ನೋಟ, ಮೊದಲ ಪ್ರೀತಿ, ಮೊದಲ ವಸ್ತು ಯಾರಾದರೂ ಏಕಾಏಕಿ ಕಸಿದುಕೊಂಡರೆ/ ನಮ್ಮೆದುರೇ ಅಂಕೆಗೆ ನಿಲುಕುವ ಮೊದಲೇ ಬೇರೆಯವರ ಪಾಲಾದರೆ ಸಹಿಸಲಸಾಧ್ಯ...!!!
ನನಗಂತೂ ನೇರವಾಗಿ ಎದೆಗೆ ಮೊಂಡು ಭರ್ಜಿಯನ್ನು ಬಲವಂತವಾಗಿ, ಬಲವಾಗಿ ತೂರಿಸಿದರೆ ಹೇಗಾಗಬಹುದೋ ಅಷ್ಟು ನೋವಾಗುತ್ತಿತ್ತು ಮನಕ್ಕೆ. ರಕ್ತವಿಲ್ಲ, ಕಣ್ಣೀರಿಲ್ಲ ಆದರೂ ಮನದ ಹೋಯ್ದಾಟ, ಒತ್ತಡ, ಕಸಿವಿಸಿ... ಹೇಳತೀರದು. ಅಯ್ಯೋ...! 'ಮೂಕ ಹಕ್ಕಿಯು ಹಾಡುತಿದೆ... ಹಾಡುತಿದೆ... ಭಾಷೆಗು ನಿಲುಕದ... ಭಾವ ಗೀತೆಯ ಹಾಡುತಿದೆ.. ಹಾ....ಡಿ ಹಾ...ಡಿ...' ಮನದಲ್ಲಿ ಹಾಡುತ್ತಾ, ರೋಧಿಸುತ್ತಾ ಮೌನಕ್ಕೆ ಶರಣು ಹೊಡೆದು ಮೌನದರಸಿಯಾದೆ...ದುಗುಡದಿಂದಲೇ ಅದರೊಂದಿಗೆ ಬೆಸೆದ ಸವಿ ನೆನಪುಗಳಿಗೆ ಮನ ಜಾರಿತು...

ಅಂದು ಭಾನುವಾರ 22/10/17 ಬಂಧುವಿನ ಸೀಮಂತ ಕಾರ್ಯದಲ್ಲಿ ಪಾಲ್ಗೊಳ್ಳಲು ಹೊರಟಿದ್ದೆವು. ಹೇಗೂ ಹೋಗ್ತಾ ಇರೋದು ಶ್ರವಣಬೆಳಗೊಳಕ್ಕೆ ಹಾಗೆ ಗೊಮ್ಮಟ ಗಿರಿಯ   ಶ್ರವಣಪ್ಪನಿಗೊಂದು ನಮಸ್ಕಾರ ಹಾಕಿಯೇ ಬಿಡುವ ಎಂದು ಏಕಪಕ್ಷೀಯವಾಗಿ ನಿರ್ಧರಿಸಿ ಬಿಟ್ಟಿದ್ದೆ....!? ಇಂದು ಗೊಮ್ಮಟ ಗಿರಿ ಹತ್ತುವ, ದೇಹಕ್ಕೆ ವ್ಯಾಯಾಮ ಆಗುತ್ತೆ ಅನ್ನೋ ನಯವಾದ ವಿವರಣೆಯೊಂದಿಗೆ ಪೀಠಿಕೆ ಹಾಕಿದೆ. ಪಾಪ! ಪತಿರಾಯ ಇಲ್ಲವೆನ್ನಲಾದೀತೇ...!? 'ಸರಿ' ಎಂದರು. ಏನೋ ಒಂಥರಾ ಖುಷಿ ನನಗೆ. ಬಾಲ್ಯದಲ್ಲಿ , ಬಹುಷಃ ಎಂಟನೆಯ ತರಗತಿ ಇರಬಹುದು ಅಪ್ಪ, ಅಮ್ಮ , ತಂಗಿ ಹಾಗೂ ಸಹೋದರರೊಂದಿಗೆ ಹಾಸನದಲ್ಲಿದ್ದಾಗ ಮಹಾಮಸ್ತಕಾಭಿಷೇಕದ ಸಮಯದಲ್ಲಿ ಹೋದದ್ದು. ಇನ್ನೂ ನೆನಪು ಬಹಳ ತಾಜ ತಾಜ ಇದೆ. ಬೆಳಿಗ್ಗೆ 9 ರ ಸಮಯದಲ್ಲಿ ಕೋತಿಗಳಿಗಿಂತ ಒಂದು ಕೈ ಮುಂದಾಗಿ ಸರಸರನೆ ಚಂಗನೆ ಎರಡೆರಡು, ಕೆಲವೊಮ್ಮೆ ಮೂರ್ಮೂರು ಮೆಟ್ಟಿಲುಗಳನ್ನು ಹಾರುತ್ತಾ, ಆಗಾಗ್ಗೆ ಎಡುವುತ್ತಿದ್ದರೂ ನಾ ಮುಂದು ತಾ ಮುಂದು ಎಂದು ಓಡೋಡುತ್ತಾ ಮೆಟ್ಟಿಲುಗಳನ್ನು ಏರಿದ್ದು...., ತುದಿ ತಲುಪಿ ಹೋ...! ಎಂದು ಚೀರುತ್ತಾ ಹಿಂದೆ ತಿರುಗಿ ನೋಡಿ ತಲೆ ಗಿರ್ರೆಂದದ್ದು... ಆಮೇಲೆ ಎಲ್ಲಿ ಸೋದರರಿಗೆ ತಿಳಿದು ಅಣಕಿಸುವರೋ ಎಂದು ಕಂಬ ಹಿಡಿದು ತೀವ್ರ ವೇಗವಾಗಿ ಡವಗುಟ್ಟುವ ಹೃದಯ ಬಡಿತ ಮರೆ ಮಾಚುತ್ತಾ, ಥರಗುಟ್ಟುತ್ತಿದ್ದ ಕಾಲುಗಳನ್ನು ಗೊಮ್ಮಟ ಗಿರಿಯನ್ನೇ ಅದುಮಿ ಬಿಡುವಂತೆ ಮೆಟ್ಟಿ ನಿಂತದ್ದು.... ಎಲ್ಲವೂ ಕಾರಿನಲ್ಲಿ ಹೋಗುತ್ತಲೇ ಮೆಲುಕು ಹಾಕಿ ರಸಾಸ್ವಾಧನೆ ಮಾಡುತ್ತಿದ್ದಾಗಲೇ ಪತಿರಾಯನ ಮಾತಿನಿಂದ ಎದೆಯೊಡೆಯುವಂತಾಗಿ ಇಹಕ್ಕೆ ಎಳೆದು...ಇಲ್ಲ... ದೂಡಿಬಿಟ್ಟಿತು ನನ್ನ ಪ್ರಪಾತಕ್ಕೆ...

ಬಹುಷಃ ನಾವು ಶ್ರವಣಬೆಳಗೊಳ ತಲುಪುವ ವೇಳೆಗೆ ಬಿಸಿಲೇರಿರುತ್ತೆ! ಒಂದು ಕೆಲಸ ಮಾಡುವ ಮೇಲುಕೋಟೆ ನೋಡಿ ಹೋಗುವ ಎಂದು ಬಹಳ ಗಂಭೀರವಾದ ದೃಢ ಧ್ವನಿಯಲ್ಲಿ ಕಾರು ಚಾಲನೆ ಮಾಡುತ್ತಲೇ ಘೋಷಣೆ ಮಾಡಿಬಿಟ್ಟರು. ಆಗ ಕಾರು ಮೇಲುಕೋಟೆಯ ಬೆಟ್ಟದಡಿಯಲ್ಲಿ ಹಾವಿನಂತೆ ಸುರುಳಿ ಸುರುಳಿಯಂತೆ ಬಳಸುವ ಸೂಕ್ಷ್ಮ ತಿರುವುಗಳಲ್ಲಿ ನುಸುಳುತ್ತಿತ್ತು. 'ನಿನ್ನ ಇತ್ತೀಚೆಗೆ ನೋಡಿದ್ನಲ್ಲ ತಂದೆ ಇಷ್ಟು ಶೀಘ್ರವಾಗಿ ಯಾಕಯ್ಯ ಕರೆಸ್ಕೋತಿದ್ದೀಯಾ' ಅಂದ್ಕೋತಾ ಕಿಟಕಿಯಿಂದ ನೋಡಿದೆ....ಚೆಲುವ ನಾರಾಯಣ ಸ್ವಾಮಿ ಕೈ ಬೀಸಿ 'ಬಾ ಇಂದು ನನ್ನ ಸನ್ನಿಧಾನವೇ ಗತಿ' ಎಂದು ಅಣಕಿಸಿದಂತಾಯ್ತು...!

ಅವರ ಮಾತಿನಲ್ಲಿ ತರ್ಕವಿತ್ತು, ಅರ್ಥವೂ ಇತ್ತು... ಇವರು ಯಾವಾಗಲೂ ಹೀಗೆ ಏನೇ ಹೇಳಿದರೂ ಒಪ್ಪಿಕೊಳ್ಳಲೇ ಬೇಕು ಹಾಗೆ ಸಕಾರಣದೊಂದಿಗೆ ಹೇಳುತ್ತಾರೆ. ಆದರೀಗ ಮೆಚ್ಚಿಕೊಳ್ಳಲೋ ಗುದ್ದಾಡಲೋ ಗೊತ್ತಾಗಲಿಲ್ಲ... ಕ್ಷಣ ಮಾತ್ರದಲ್ಲಿ ಮನದಲ್ಲಿ ನೆಡೆಯುತ್ತಿದ್ದ ಯುದ್ಧ ನಿಗ್ರಹಿಸಿ 'ಸರಿ' ಎಂದುಸುರಿ ಬರುತ್ತಿದ್ದ ನಿರಾಸೆಯ ನಿಟ್ಟುಸಿರನ್ನು ನಿಧಾನವಾಗಿ ಹೊರಹಾಕಿದೆ... 'ಮಾನವನೊಂದು ಬಗೆದರೆ ದೈವವೊಂದು ಬಗೆವುದೆಂಬ' ಮಾತು ನೆನಪಾಗಿ ' ಇಂದು ಎನಗೆ ಗೋವಿಂದ... ನಿನ್ನಯ ಪಾದ...' ಎಂದು ಗುನುಗ ತೊಡಗಿದೆ...

ಅರೇ... ಏನಿದು? ಏನಚ್ಚರಿ!? ಕಾರು ಮೇಲುಕೋಟೆ ಹಾದಿಗೆ ತಿರುಗದೆ ಬಲ ಮಗ್ಗುಲಿಗೆ ತಿರುಗಿತು... ಆಹಹಾ...! ಎಂಥಾ ಮಜ... ಏಳನೇ ತರಗತಿಯಲ್ಲಿ ಕಾಲಿಗೆ ತೊಡರುತ್ತಿದ್ದ ಉದ್ದನ್ನ ಲಂಗ ಎತ್ತಿ ಹಿಡಿದು ಗೆಳೆಯನ ಕೈ ಹಿಡಿದು ನರ್ತನ ಮಾಡಿದಷ್ಟು ಖುಷಿಯಾಗಿ, ಮನಕ್ಕೆ ರಂಗೆರಚಿದಂತಾಯ್ತು...! ಗಂಡನಿಗಷ್ಟು ತಿಳಿಯದೇ 'ಸರಿ' ಎಂದುಸುರಿದ ರೀತಿಯಲ್ಲಿರುವ ಭಾವ ಯಾವುದೆಂದು...!? ಹಾಗೇ ಒಂದೆರಡು ಮುತ್ತುಗಳನ್ನು ಹಾರಿಸಿ ಬಿಟ್ಟೆ... ಹೊರಗೆ ಹೋಗುವ ಸಾಧ್ಯತೆ ಇರಲಿಲ್ಲ ಕಿಟಕಿ ಗಾಜುಗಳು ಮುಚ್ಚಿದ್ದು 'ಎಸಿ' ಚಾಲನೆಯಲ್ಲಿತ್ತು...!
ಅವರಿಗರಿವಿಲ್ಲದೇ ಅವು ಅವರ ಸ್ಪರ್ಶಿಸುವುದ ನೋಡುತ್ತಾ ಹವಾನಿಯಂತ್ರಿತ ವಾಹನದಲ್ಲೂ ಬೆಚ್ಚಗಿನ ಸುಖಾನುಭವದಿಂದ ಪುಳಕಿತಳಾದೆ... 'ಸ್ವರ್ಗಕ್ಕೆ ಮೂರೇ ಗೇಣು' ಎಂದಾಗ ಆಗುವ ಅನುಭವ ಇದೇ ಏನೋ...!...?

ಶ್ರವಣಪ್ಪನ ಪುರ ಕ್ಷಣ ಮಾತ್ರದಲ್ಲಿ ತಲುಪಿದಷ್ಟು ಸುಖವಾದ ಪ್ರಯಾಣ ಆಯ್ತೀಗ ಮನ ಹಗುರವಾಗಿದ್ದದ್ದಕ್ಕೆ...! ಗೋಮಟಗಿರಿ ಏರುವುದು, ಅದೂ ಮನದರಸನೊಡನೆ... ಯಾರ, ಯಾವ ಅಡೆತಡೆಯೂ ಇರದೇ...! ಓಹ್! ಎಂಥಾ ಮಧುರ ಅನುಭವ. ಎಲ್ಲವೂ ಹೊಸತರಂತೆ ಭಾಸವಾಗ ತೊಡಗಿತು. ಬೆಟ್ಟದ ತಪ್ಪಲಿನಲ್ಲಿ ಸುತ್ತಲೂ ನೂರಾರು ಜನರಿದ್ದರೂ ನಾವಿಬ್ಬರೇ ಇರುವ ಭಾವ ಬಹು ಸೊಗಸಾಗಿತ್ತು. 'ಮನ ಮಂಡಿಗೆ ಮೆಲ್ಲುತ್ತಿತ್ತು' ನಾವು ಹೇಗೆ ಹತ್ತಬಹುದು ಮೆಟ್ಟಿಲುಗಳನ್ನು ಎಂದು ಕಲ್ಪನೆ ಮಾಡಿಕೊಳ್ಳುತ್ತಾ... ಮದುವೆಯಾದ ಹೊಸತರಲ್ಲೂ ಹೀಗೆ ಅನಿಸಿರಲಿಲ್ಲವಲ್ಲಾ ಎಂದಚ್ಚರಿಯಾಯಿತು... ಅಥವಾ ಕಳೆದು ಹೋಗುತ್ತಿರುವ ವಯಸ್ಸಿನ ಪ್ರಭಾವವೇ ಎಂಬ ಭಾವ ಮನದಲ್ಲಿ ಸುಳಿ ಸುಳಿದು ಕಾಡತೊಡಗಿತು... ಛೇ...ಇಲ್ಲ ...ಇಲ್ಲ... ನಮಗೇನಂಥಾ ವಯಸ್ಸಾಗಿರುವುದು ಎಂದುಕೊಳ್ಳುತ್ತಾ ಸತ್ಯ ಮರೆ ಮಾಡುತ್ತಾ ಮನ ಹಗುರವಾಗಿಸುತಾ ಸಂತೈಸಿಕೊಳ್ಳುತ್ತಾ ಕಟು ಸತ್ಯಕ್ಕೆ ಮಿಂಚಿನಂತೆ ತೆರೆ ಎಳೆದು ಗೆಲುವಿನ ಹುಸಿ ನಗೆ ಸೂಸಿದೆ...

ಗೊಮ್ಮಟ ಗಿರಿ ಹತ್ತುವ ಮುನ್ನ ನೀ ತಲೆ ಎತ್ತುವುದಸಾಧ್ಯ ಎಂಬಂತೆ ಭಾಸ್ಕರ ಜವ್ವನಿಗನಾಗಿ ಮೆರೆಯುತ್ತಿದ್ದ! ನೇರವಾಗಿ ಕಿರಣಗಳನ್ನು ಪ್ರಕರವಾಗಿ ಹೊರ ಹೊಮ್ಮಿಸುತ್ತಾ ಗಹಗಹಿಸುತ್ತಿದ್ದ. ನಾ ಮೂತಿ ಊದಿಸುತ್ತಾ... ಓಹೋ!... ಇರು ತಡೆಯುವೆ ನಿನ್ನ! ನಾನೇನು ಕಡಿಮೆಯೇ? ಎಂದು ಅವನ ವಿರಾಟ ರೂಪಕ್ಕೆ ಸವಾಲು ಹಾಕಲು ಸಜ್ಜಾದೆ!. ಪತಿರಾಯನೆಡೆಗೆ ತಿರುಗಿ ' ಟೋಪಿ ಹಾಕಿಕೊಳ್ಳುವ ಎಂದೆ '. ಸರಿಯಾಗಿ ಕೇಳಿಸಿಕೊಳ್ಳದ ಇವರು ಮಖವನ್ನು ಏನು ಹೇಳಿದೆ ಎಂಬ ಭಾವದಲಿ ನಿರುಕಿಸಿದರು. ಅಯ್ಯೋ...! ನಮಗೆ ನಾವೇ ಟೋಪಿ ಹಾಕಿಕೊಳ್ಳುವುದೇ...!? ಎಂದುಕೊಳ್ಳುತ್ತಾ...ನನ್ನ ಮಾತಿಗೆ ನಾನೇ ನಗುತ್ತಾ 'ಹ್ಯಾಟು' ತೆಗೆದುಕೊಳ್ಳುವ ಎಂದೆ. ಏನನ್ನುವರು ಎಂದುಕೊಳ್ಳುವ ಮೊದಲೇ 'ಸರಿ' ಎಂದು ಅಂಗಡಿಯೆಡೆಗೆ ಮುಖ ಮಾಡಿದರು. ನಾ ಬಾಲಂಗೋಚಿಯಾದೆ!..
ಈ 'ಹ್ಯಾಟು' ಪದ ಬಲು ಪ್ರಿಯವಾಯ್ತು. ಟೋಪಿ ಕೂಡ ಸುಂದರವಾದ ಪದ. ಆದರೆ ಜನ ಅದನ್ನ ಹೇಗ್ಹೇಗೋ ಬಳಸಿ ಇಂದು ಟೋಪಿ ಹಾಕುವುದು, ಹಾಕಿಸಿಕೊಳ್ಳುವುದು, ಕೊಳ್ಳುವುದು ಪರಿಹಾಸ್ಯದ ಹಾಗೂ ಮುಜುಗರ ತರುವ ಸಂಗತಿಯಾಯ್ತಲ್ಲಾ ಎಂದು ಮುಲುಕಿದೆ....

ಅಂಗಡಿ ಮುಂದೆ ಬರ್ತಿದ್ದಂತೆ ಒಂದು ಪ್ರಕಾರದ 'ಟೋಪಿ' ಅಯ್ಯಯ್ಯೋ... ಅಲ್ಲ...! 'ಹ್ಯಾಟು' ಹೌದು ನನ್ನ ಪ್ರೀತಿಯ ಹ್ಯಾಟೊಂದು ಮನ ಸೆಳೆಯಿತು. 'ಹ್ಯಾಟು' ಎಂದು ಹೇಳುವುದೇ ಎಷ್ಟು ಸುಖವಾಗಿದೆ ಎಂದುಕೊಳ್ಳುತ್ತಲೇ ಮನ ಸೆಳೆದ ಹ್ಯಾಟನ್ನು ಕೈ ಚಾಚಿ ಎತ್ತಿಕೊಂಡೇಬಿಟ್ಟೆ! ಬೆಲೆ ಕೇಳುವ ವ್ಯವಧಾನವೂ ಇಲ್ಲ! ? ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರು ಕಿರೀಟಧಾರಣೆ ಆಗುವಾಗ ಜವಾಬ್ದಾರಿಯ ಒತ್ತಡಕ್ಕೆ ಎದೆ ಗಟ್ಟಿ ಮಾಡಿಕೊಂಡಿದ್ದಿರಬಹುದು ಆದರೆ ನಾನು ಮಾತ್ರ ಮಹದಾನಂದದಿಂದ ಕಿರೀಟ ಧರಿಸಿಯೇ ಬಿಟ್ಟಿದ್ದೆ...!

ಅಳ್ಳಕವಾದ ಬುರುಡೆ ಹಿಡಿಸುವ ಭಾಗ ಪುಟ್ಟದೊಂದು ಗುಂಡಿಯಂತೆ ಕಾಣ್ತು...! ನನ್ನ ಬುರುಡೆಯೇನು ಪುಟ್ಟದೇ...? ತಕ್ಕುದಾಗೆ ಇದೆ... ಏ... ಇಲ್ಲ... ನನಗಾಗೆ ಹೇಳಿ ಮಾಡಿಸಿದಂತೆ ಇದೆ...ಬೀಗಿದೆ...! ಖುಷಿಯಿಂದ ಉಬ್ಬಿದೆ!...ಅದರ ಸುತ್ತಲೂ ಇದ್ದ ಬುರುಡೆಯಂತಹ ವೃತ್ತಾಕಾರದ ಹರವು ಮತ್ತೂ ಚೆಂದವಾಗಿ ಹ್ಯಾಟಿಗೆ ಮೆರುಗು ನೀಡಿತ್ತು. ಕಮಲದ ಹೂವಿನ ಸುತ್ತಾ ಹಾಸಿ ನಿಂತಂತಿರುವ ಎಲೆಗಳರಡಿದ ಮೋಹಕ ದೃಶ್ಯ ನೆನಪಾಗಿ ಮನಕ್ಕೆ ಮುದ ನೀಡಿತು. ಮನ ಮೆಚ್ಚಿತ್ತು. ಅಳ್ಳಕವಾದ ಹ್ಯಾಟಿನ ಭಾಗ ಸುತ್ತಾ ಆವರಿಸಿರುವ ಭಾಗವೀಗ ಶನಿಗ್ರಹದ ಸುತ್ತಲಿನ ಗ್ರಹದ ಸುತ್ತಲಿನ ಉಂಗುರದಂತೆ ಕಂಡು ಒಮ್ಮೆಲೇ ನಭಕ್ಕೆ ಜಿಗಿದುಬಿಟ್ಟೆ. ಇದರ ನಯವಾದ ಸ್ಪರ್ಶ, ತೆಳು ಸಿಮೆಂಟ್ ಬಣ್ಣಕ್ಕೆ ತುಸು ಹೆಚ್ಚು ಬಿಳುಪೆನುವ ನೈಲಾನ್ ದಾರಗಳನ್ನು ಹೊಂದಿಸಿ ಹೆಣೆದ ಶೈಲಿ ಚಿತ್ತಾಕರ್ಷಕವಾಗಿತ್ತು. ತುಂಬಾ ಸುಂದರವಾದ ಹ್ಯಾಟೇ ಇದು ಅನಮಾನವೇ ಇಲ್ಲ! ಮನ ಸೋತು ಶರಣಾಯ್ತು... ಕೆನ್ನೆಗೆ ಮುತ್ತಿಡುವಂತೆ ಹಾಗೂ ಹ್ಯಾಟು ಶಿರದಿಂದ ಜಾರದಂತೆ ಬಂಧಿಸುವ ಚಪ್ಪಟೆಯಾಕಾರದ ರಬ್ಬರ್ ದಾರವನ್ನು ಪದೇ ಪದೇ ಮುಟ್ಟಿ ನೋಡಿದೆ!... ಚಿಕ್ಕ ವಯಸ್ಸಿನಲ್ಲಿ ರಬ್ಬರ ಎಷ್ಟು ಹಿಗ್ಗುವುದೆಂದು ಎಳೆದೆಳೆದು ಒಮ್ಮೆಲೆ ಬಿಟ್ಟು ಚುರ್ ಚುರ್ರೆನ್ನುವಂತ ಉರಿ ಅನುಭವಿಸಿದ ನೆನಪು ನುಗ್ಗಿ ಬಂತು... ಎಲ್ಲದರೂ ಉಂಟೇ!? ಈಗ ಹಾಗೆ ಮಾಡುವುದುಂಟೆ!? ಇನಿಯನ ಕರಗಳು ಕೆನ್ನೆ ಬಳಸಿ ಹಿಡಿದಂತೆ ಕಪೋಲಗಳನ್ನು ಅಪ್ಪಿಬಿಟ್ಟಿತ್ತು ರಬ್ಬರ್ ಪಟ್ಟಿ!...ಹಾಗೇ ಜಂಗಮವಾಣಿಯನ್ನೇ ದರ್ಪಣವಾಗಿಸಿ 'ದರ್ಪಣ  ಸುಂದರಿಯಾದೆ'...! 

ಅರೇ!...ಏನಿದು? ಶಿರದ ಬಲಭಾಗದಲ್ಲಿ ಅಳ್ಳಕವಾದ ಬುರುಡೆಯ ಪಾತ್ರೆಯ ಪಕ್ಕದಲ್ಲಿ ಹರಡಿದ ಭಾಗದಲ್ಲಿಯೇ ತುಸು ಕೆಳಗೆ ನೇತಾಡುವಂತೆ ಎರಡು ಬಲು ಚಂದದ ಟೇಪುಗಳು... ಚೆಲುವೆಯ ಮುಂಗುರುಳು ಅಂಕೆಯಿರದೆ ಹಾರಾಡುತ್ತ ಪಡ್ಡೆಗಳ ಚಿತ್ತ ಸ್ವಾಸ್ಥ್ಯ ಕೆಡಿಸುವಂತೆ ನನ್ನ ಮನ ಕೆಣಕಿದವು...!? ಏನು ಸೊಗಸು!? ಚಿಕ್ಕವಳಿದ್ದಾಗ ಅಮ್ಮ ಕಟ್ಟಿದ ಟೇಪು ಉದ್ದಕ್ಕೆ ಇದ್ದು ಹಾರಾಡುತ್ತಿದ್ದುದು ನೆನೆದು ಕಣ್ಣಾಲಿ ತುಂಬಿತು... ಮನದಲ್ಲೇಳುತ್ತಿದ್ದ ಭಾವಾಲಾವಕ್ಕೆ ತಂಪೆರೆಯುವಂತೆ ಟೇಪಿನ ಇನ್ನೊಂದು ತುದಿಗೆ ಮೆತ್ತಿಸಿದ್ದ ಗುಲಾಬಿ ಬಣ್ಣದ ಹತ್ತಿಯಂತೆ ಮೃದುವಾದ ' ಹೂ ' ನಿಂದ ಹ್ಯಾಟು ಮತ್ತಷ್ಟು ಆಕರ್ಷಕವಾಗಿ ಕಂಡು ಮನ ಮರುಳಾಗಿ ಮಂತ್ರಮುಗ್ದವಾಯ್ತು. ನಾನು ನನ್ನ ಹ್ಯಾಟಿನ ಮೋಹದಲ್ಲಿ ಪ್ರಮಪಾಶಕ್ಕೆ ಸಿಲುಕಿದ ಪ್ರೇಮಿಯಂತೆ ಪ್ರೇಮಾಯಣದಲ್ಲಿ ವಿಹರಿಸುತ್ತಿದ್ದಾಗ, ಪತಿರಾಯ 'ಏನು ಇದಕ್ಕೆ ನೂರು ರೂ ನಾ!? ಎಂದದ್ದು ಕರ್ಕಶವಾಗಿ ಕಿವಿ ತೂರಿ ಭೂಮಿಗಿಳಿದು ಹೋದೆ. ಹ್ಯಾಟು ಮಾತ್ರ ಶಿರವನ್ನಲಂಕರಿಸಿಯೇ ಇತ್ತು. ಕರಗಳು ಮೃದುವಾಗಿ ಸ್ಪರ್ಶಿಸುತ್ತಿದ್ದವು. ಒಮ್ಮೆಲೇ ತನಗಿಷ್ಟವಾದ ಗೊಂಬೆ ಕಳೆದುಕೊಳ್ಳುವ ಭೀತಿಯಿಂದ ನರಳುವ ಮಗುವಿನಂತಾದೆ!...

ಚೌಕಾಸಿ ನೆಡೆದಂತೆಲ್ಲಾ ನನ್ನ ಆತಂಕ ಹೆಚ್ಚಾಗ್ತಿತ್ತು. ನನ್ನ   'ಲವಿಂಗ್  ಹ್ಯಾಟು' ಅಂಗಡಿಯವನಿಗೆ ಕೊಡಬೇಕೆ ವಾಪಸ್ಸು!? ಊಹು...! ಸುತ್ರಾಮ್ ಸಾಧ್ಯವಿಲ್ಲ!... ಯಾವುದೇ ಕಾರಣಕ್ಕೂ ಇಲ್ಲ...! ನನಗಂತೂ  'ಲವ್ ಅಟ್ ಫಸ್ಟ್ ಸೈಟು ' ಅಂದ್ಹಾಗೆ ಆಗ್ಬಿಟ್ಟಿದೆ...! ನಿಜ ಹೇಳ್ತೀದ್ದೀನಿ ನನ್ನ ಪತಿರಾಯ ನನ್ನ ನೋಡೋಕೆ ಮೊದಲ ಸಲ ಬಂದಾಗಲೂ 'ಲವ್ ಅಟ್ ಫಸ್ಟ್ ಸೈಟ್' ಅಂತ ಏನೂ ಆಗಿರ್ಲಿಲ್ಲ...!? ಯಾಕೇಂದ್ರೆ ನೋಡೋಕೆ ಬಂದಾಕ್ಷಣ ಮದುವೆ ಆಗುತ್ತೆ ಅಂತ ಏನು ಗ್ಯಾರಂಟಿ ಇಲ್ವಲ್ಲಾ...!?...
ಅಂಗಡಿಯವ ಅಳೆದು ಸುರಿದು ಹತ್ತು ರೂ ಬಿಟ್ಟ ಅಬ್ಬಬ್ಬಾ ! ' ಫುಲ್ ನೈಂಟೀಗೆ ' ಹ್ಯಾಟು ನನ್ನ ಒಡೆತನಕ್ಕೆ ಬಂತು!. ಮದುವೆ ಆದಾಗ ನನ್ನ ಪತಿಯ ಮೇಲಾದ ಲವ್ವಿಗಿಂತ ದುಪ್ಪಟ್ಟು ಲವ್ವಾಗೋಯ್ತು ನಂಗೀಗ ಅವರ ಮೇಲೆ...! ಅಯ್ಯೋ ! ಇದೇನಿದು!? ಇವರು ತಮಗೆ ಹ್ಯಾಟು ಕೊಳ್ಳದೇ ಹಾಗೇ ಹೊರಟ್ರು?  ಪತಿ ಕಡೆ ನೋಡಿ ಯಾಕೆ ಅಂದೆ? 'ಏ ನಂಗ್ಯಾಕೆ ಬೇಡ ಅಂದ್ರು' ತಣ್ಣಗೆ... ಥೇಟ್ ಮಕ್ಕಳಿಗೆ ಕೇಳಿದ್ದು ಕೊಡಿಸಿ ತನಗಾಸೆ ಇದ್ದರೂ ತನ್ನವರ ಸುಖ ನೋಡಿ ತನ್ನಿರವ ಮರೆವ ಅಪ್ಪನಂತೆ ಕಂಡ್ರು ನಂಗೆ. ಮನ ತುಂಬಿ ಬಂದು ಗಂಟಲುಬ್ಬಿ ಹೋಯ್ತು... ಮನದಲ್ಲೇ ಅಪ್ಪಿ ಮುದ್ದಾಡಿದೆ. ಅಯ್ಯೋ... ನನ್ ಲವ್ವೇ...ಎಂಥಾ ತ್ಯಾಗ...

ಮೆಟ್ಟಿಲು ಹತ್ತಲು ಮೊದಲು ಮಾಡಿದಾಗ ತಲೆಯ ಮೇಲಿದ್ದ ಹ್ಯಾಟು ಕೇವಲ ಹ್ಯಾಟಾಗಿರಲಿಲ್ಲ...! ನನ್ನೊಲುಮೆಯ ಪತಿಯ ಪ್ರೀತಿಯ ಸಂಕೇತವಾಗಿತ್ತು!. ಈಗಂತೂ ಮೃದುವಾಗಿ ಎಚ್ಚರಿಕೆಯಿಂದ ಸವರುತ್ತಾ ಸರಿಯಿದ್ದರೂ ಮತ್ತೊಮ್ಮೆ ಮಗದೊಮ್ಮೆ ಸರಪಡಿಸಿಕೊಂಡೆ...!? ಗೊಮ್ಮಟ ಗಿರಿಯ ಮೆಟ್ಟಿ ನಿಲ್ಲುವ ತವಕದಿಂದ ಹತ್ತಲಾರಂಭಿಸಿದೆ. ಏಳೆಂಟು ಮೆಟ್ಟಿಲು ಹತ್ತಿದ್ದೆನೋ ಇಲ್ಲವೋ ಕಾಲಿನ ರಕ್ಷಾ ಕವಚವಾದ ಕಾಲು ಚೀಲದಿಂದಾಗಿ ಹಿಡಿತ ಸಿಗದೆ ಜಾರುವಂತೆ ಭಾಸವಾಯಿತು. ಅಯ್ಯೋ...! ಇದು ಬೇರೆ ಜಾರುತ್ತಲ್ಲಪ್ಪಾ ಎಂದು ಮೆಲುವಾಗಿ ಗೊಣಗಿದೆ. ' ಬಿಚ್ಚಿಬಿಡು' ಎಂದರವರು ಮಹದಾಜ್ಞೆ ಎಂದು ಬಿಚ್ಚಿದೆ!. ಎಲ್ಲಿರಿಸುವುದು ಎಂದು ನಾ ಯೋಚಿಸುವ ಮೊದಲೇ ಕೈ ಚಾಚಿ ತೆಗೆದುಕೊಂಡು ಪ್ಯಾಂಟಿನ ಜೇಬಿಗಿಳಿಸಿಯೇ ಬಿಟ್ಟರು!.?. ಲವ್ವಂತೂ ಪ್ರೇಮ ಗಂಗೆಯಂತೆ ಪ್ರವಹಿಸಿ ಉಕ್ಕುಕ್ಕಿ ಹರಿಯಿತು... ಸಾರ್ವಜನಿಕ ಸ್ಥಳವಾದ್ದರಿಂದ ಕತ್ತಿಗೆ ಜೋತು ಬೀಳಲಿಲ್ಲ ಅಷ್ಟೇ....

ಉತ್ಸಾಹದ ಚಿಲುಮೆಯಂತೆ ಮೆಟ್ಟಿಲೇರತೊಡಗಿದೆ ವಯಸ್ಸಿನ ಪ್ರಭಾವ ಚೆನ್ನಾಗಿಯೇ ಆಗ ಹತ್ತಿತು. ಆಧುನಿಕ ತಂತ್ರಗಳಿಂದ ಎಷ್ಟು ಮುಚ್ಚಿಟ್ಟರೇನಂತೆ ಅಸಲಿಯತ್ತು ಹಣಕಿ ಹಾಕಹತ್ತಿತೀಗ... ಒಪ್ಪದ ಮನ ಗಿಂಜಾಡುತ್ತಿತ್ತು...! ಪತಿರಾಯ ಅಭಯ ಹಸ್ತ ಚಾಚಿ ಕೈ ಹಿಡಿದಾಗ ಉರಿ ಬಿಸಿಲಿನಲ್ಲೂ ಕರ ಸ್ಪರ್ಶ ಎಲ್ಲವ ಮರೆಸಿತ್ತು!. ಸುಧಾರಿಸುತ್ತಾ, ಆಗಾಗ್ಗೆ ನಿಲ್ಲುತ್ತಾ, ಏದುಸಿರು ಬಿಡುತ್ತಲೇ ಏರ ತೊಡಗಿದೆ. ಧಾರಾಕಾರವಾಗಿ ಕಾವೇರಿ ತಲಕಾವೇರಿಯ ಪುಷ್ಕರಣಿಯಲ್ಲಿ ಬುಳುಬುಳನೆ ಮೇಲೆದ್ದು ಉಕ್ಕಿ ಹರಿವಂತೆ ದೇಹದಾದ್ಯಂತ ಬೆವರು ನಿಯಂತ್ರಣವಿಲ್ಲದೇ ಪ್ರವಹಿಸುತ್ತಾ, ಉಟ್ಟ ಬಟ್ಟೆ ಬಿಗಿದಪ್ಪತೊಡಗಿತು!. ಕೈ ಹಿಡಿದು ಬಹು ಎಚ್ಚರಿಕೆಯಿಂದ ಆರೋಹಣ ಮಾಡಿಸುತ್ತಿದ್ದ ಪತಿಯೆಡೆಗೆ ಅಬಿಮಾನದಿಂದ ನೋಡಿದೆ!. ಕ್ಷಣವಷ್ಟೇ ಆ ಭಾವ...! ಮರುಕ್ಷಣವೇ ಹೊಟ್ಟೆ ಕಿಚ್ಚಿನ ನಂಜು ತಾಗಿ ಬಿಟ್ಟಿತು...! ಮನದ ವಿಕೃತಿ ನೆನೆದು ಅಚ್ಚರಿ ಕೂಡ ಆಯ್ತು...!? 

ಸಪೂರ ದೇಹ, ಸೂರ್ಯ ಅಷ್ಟು ಪ್ರಖರವಾಗಿದ್ದರೂ ಹನಿ ಬೆವರೂ ಕೂಡ ಬಾರದೆ ಅತಿ ಸಹಜವಾಗಿ ಮೆಟ್ಟಿಲೇರುತ್ತಾ ಕೆಂಪಗೆ ಹೊಳೆಯುತ್ತಿದ್ದರವರು!!!!??... ನಾನೋ ಸುಟ್ಟ ಬದನೆ ಕಾಯಿಯಂತಾಗಿದ್ದೆ!  ಮೊದಲೇ ಎಣೆಗೆಂಪು ಮುಖ ಈಗ ಮತ್ತೂ ಕಪ್ಪಾಗತೊಡಗಿತು ಹಾಟಿನಿಂದ ತೂರಿ ಬರುತ್ತಿದ್ದ ಶಾಖಕ್ಕೆ....

ಏರಿದೆವು , ಏರಿದೆವು... ಏರಿಯೇ ಬಿಟ್ಟೆವು...! ಗೊಮ್ಮಟ ಗಿರಿ ಮೆಟ್ಟಿ ನಿಂತು ತಲೆ ನೋಡಿದರೂ ತುದಿ ತೋರದ ಆಜಾನುಬಾಹು, ಸುಂದರ ಪುರುಷ ಸಿಂಹ  ಸ್ಥಿರವಾಗಿ ನೆಲೆ ನಿಂತ ಭಂಗಿ ಕಂಡು 'ಮಗುವಿನ ಮೊಗ ಕಂಡೊಡನೆ ಎಲ್ಲ ಮರೆತು ಖುಷಿಯ ಪುತ್ಥಳಿಯಾಗುವ ತಾಯಂತಾದೆ' ಸಾರ್ಥಕವಾಯಿತು ಕೆಲ ಹೊತ್ತಿನ ಹಿಂದಿನ ಪ್ರಾಯಾಸದ  ಪಯಣದ ಆಯಾಸವೆಲ್ಲಾ ಕ್ಷಣದಲ್ಲಿ   ಮರೆಯಾಗಿ ಹೊಯ್ತು...!

ಕಣ್ತುಂಬಿಕೊಂಡು ಮನದಲ್ಲೇ ವಂದಿಸಿ, ಒಂದಿಷ್ಟು ವಿರಮಿಸಿ, ಅಭ್ಯಾಸ ಬಲದಿಂದಾಗಿ ಒಂದೆರಡು ನಿಮಿಷ ಧ್ಯಾನಿಸಿ ಅವರೋಹಣಕ್ಕೆ ಅಣಿಯಾದೆವು. ' ಬರೀ ಸಪ್ತಪದಿ ಏಕೆ ಶತಪದಿ ತುಳಿವ ಇಂದು' ಎಂದು ಕಿರು ನಗೆ ತುಳುಕಿಸುತ್ತಾ ಪತಿ ಬಿಟ್ಟ  ಬಾಣಕ್ಕೆ ಮಾರುತ್ತರವೆಂಬಂತೆ ನಸು ನಕ್ಕು ಕರ ಹಿಡಿದು  ಮತ್ತೊಮ್ಮೆ ಒಟ್ಟೊಟ್ಟಿಗೆ ಹೆಜ್ಜೆ ಹಾಕತೊಡಗಿದೆವು!. ಪೌರೋಹಿತ್ಯವಿಲ್ಲದ ಶತಪದಿ ಆರಂಭವಾಯ್ತು. ತಪ್ಹೆಜ್ಜೆ ಇರಿಸಿದ ನನಗೆ ಥಾರ್ನಡೈಕ್ನ 'ಪ್ರಯತ್ನ ದೋಷ ಕಲಿಕೆ' ನೆನಪಾಗಿ ತಪ್ಹೆಜ್ಜೆ ಸರಿಪಡಿಸಿ ಸಾಫಲ್ಯ ಕಲಿಕೆ ಕರಗತಮಾಡಿಕೊಂಡು ಅಡೆತಡೆಗಳ ನಿವಾರಿಸುತ್ತಾ ಮುಂದುವರೆದೆವು. ಪ್ರೌಢ ಪ್ರಣಯ ಸೊಗಸಾಗಿ ನೆಡೆಯಿತು. ಹತ್ತುವಾಗಿನ ಪ್ರಾಯಾಸ ಕಾಡಲೇ ಇಲ್ಲ!!!. ಧುಮ್ಮಕ್ಕಿ ಹರಿಯುವ ಜಲದಾರೆಯಂತೆ ದುಡುದುಡು ಓಡೋಡುತ್ತಲೇ ಇಳಿಯುತ್ತಿದ್ದೆವು. ನನ್ನ ಪ್ರಥಮ ಪ್ರೇಮ ಪುತ್ಥಳಿಯನ್ನು ಆಗಾಗ್ಗೆ ಸವರಿ ಸಂಭ್ರಮಿಸುವುದನ್ನು ಮಾತ್ರ ಮರೆಯಲಿಲ್ಲ. ಮನೋ ವಿಜ್ಞಾನಿ ಜೆರೂಮ್ ಎಸ್. ಬ್ರೂನರ್ ಮಾತು ಅಕ್ಷರಶಃ ನಿಜವಾಗಿತ್ತು!!!. ನನ್ನ ಹ್ಯಾಟು ಕ್ರಿಯಾತ್ಮಕ ಹಂತ ದಾಟಿ ಬಿಂಬವಾಗಿ ಪ್ರೇಮ ಸಂಕೇತವಾಗಿ ಶಿರವೇರಿ ಕುಳಿತಿತ್ತು...

ಬೆಟ್ಟವಿಳಿದು ಗೊಮ್ಮಟ ಗಿರಿಯ ಪಾದದಿಂದಲೇ ಮತ್ತೊಮ್ಮೆ ಕಾಣದ ಗೊಮ್ಮಟನನ್ನು ತಿರುತಿರುಗಿ ನೋಡುತ್ತಲೇ ಸೊಗಸಾದ,ರುಚಿಯಾದ ಒಣ ಹಣ್ಣುಗಳಿಂದ ಅಲಂಕೃತವಾದ ಕೋನ್ ಐಸ್ ಕ್ರೀಮ್ ಮೆಲ್ಲುತ್ತಾ ಗೊಮ್ಮಟ ಗಿರಿಗೆ ವಿದಾಯ ಹೇಳಿ ಕಾರೇರಿ, ಬಹು ಅಕ್ಕರೆಯಿಂದ ಮೂರು ಜನ ಆಸೀನರಾಗುವ ಹಿಂಬದಿ ಆಸನದಲ್ಲಿ ನನ್ನ ಹ್ಯಾಟನ್ನು ಬಹು ಕಕ್ಕುಲತೆಯಿಂದ ಇರಿಸಿದೆ. ನಂತರ ಬಂಧುಗಳ ಮನೆಗೆ ಹೋಗಿ ಅಲ್ಲಿನ ಕಾರ್ಯಕ್ರಮ ಮುಗಿಸಿ ಅವರ ಮನೆಯಿಂದ ಹೊರಡುವಾಗ ಈ ಅಚಾತುರ್ಯ ಕೈ ಮೀರಿ ನೆಡೆದು ಹೋಗಿತ್ತು....

ಏನೆಂದು ಬಣ್ಣಿಸಲಿ!?!... ನನ್ನ ಮನ ಸೆಳೆದು ಒಂದಷ್ಟು ಸಮಯ ನನ್ನನ್ನಗಲದಂತೆ ಒಡನಾಡಿಯಾಗಿ ಶಿರವೇರಿ ನಾ ನಲುಗದಂತೆ ಕಾಪಾಡಿದ್ದ ನನ್ನ ಪ್ರೇಮ ಪುತ್ಥಳಿ ಬಂಧುಗಳ ಮಗುವಿನ ಪಾಲಾಗಿತ್ತು...!!!...??? ಏನು ಮಾಡುವುದು? ಹೇಗೆ ಸಹಿಸಲಿ ವೇದನೆಯನ್ನು? ಏಕೆ ಹೀಗಾಯ್ತು?...ಒಂದು ಮಗುವಿನಿಂದ ಪ್ರೇಮ ಭಂಗ! ಅದೂ ಅದರ ಸಹಜ ಆಸೆಯಿಂದ ಆಗಬೇಕೆ? ಅಯ್ಯೋ...! ದುರ್ವಿಧಿಯೇ ನೀನೇಕೆ ಇಷ್ಟು ಕ್ರೂರಿಯಾದೆ? ನಿನಗದು ಕೇವಲ ಹ್ಯಾಟಿರಬಹುದು !!!? ನನಗೆ ಮೊದಲ ಪ್ರೇಮ, ಪತಿಯ ತ್ಯಾಗದ ಸಂಕೇತ...! ಈಗಂತೂ ನನ್ನಲ್ಲಿನ 'ಇದ್' ಸಿಗ್ಮಂಡ ಫ್ರಾಯ್ಡ್ ಹೇಳಿದ್ದಕ್ಕಿಂತ ಭಯಂಕರವಾಗಿ ರುದ್ರ ನರ್ತನ ಮಾಡತೊಡಗಿತು... ಆದರೂ ನಾನು 'ಪ್ರತಿಕ್ರಿಯಿಸಲಿಲ್ಲ ಸ್ಪಂಧಿಸಿದೆ'... ಮಗುವಿನ ಕೆನ್ನೆ ಸವರುವಂತೆ 'ಹ್ಯಾಟು' ಸವರಿದೆ... ದೂರ ಸರಿವ ಪ್ರೇಮಿಯನ್ನು ಕಣ್ತುಂಬಿಕೊಂಡೆ... ಮಗುವಿನ ಕೈ ಸೇರಿ ಅದಕಾಗುವ ಸ್ಥಿತಿ ನೆನೆದು ಪರಿತಪಿಸಿ, ನಿಟ್ಟುಸಿರಿಟ್ಟು ಕಾರಿನೊಳಗೆ ತೂರಿಕೊಂಡೆ... ಬಂಧುಗಳಿಗೆ ಕೈ ಬೀಸಿ ಭಾರವಾದ ಹೃದಯ ಹೊತ್ತು ನಮ್ಮೂರಿನೆಡೆಗೆ ಪಯಣಿಸುವಾಗ ಹೀಗಾಗುವುದೆಂದು ಗೊತ್ತಿದ್ದರೆ ಹಾಗೆ ಮಾಡಬಹುದಿತ್ತು, ಹೀಗೆ ಮಾಡಬಹುದಿತ್ತು... ಎಂದು ಗೊಣಗೊಣ ಶೋಕಾಚರಣೆ ಮಾಡುತ್ತಲೇ ಮನೆ ಸೇರಿ ಮನೆ ಮಂದಿಗೆಲ್ಲಾ ನನ್ನ ದುಗುಡ ಹಂಚಿ ಸುದ್ದಿ ಮಾಡುತ್ತಲೇ ಹಗುರಾಗಲು ಯತ್ನಿಸ ಹತ್ತಿದೆ....!....?....!.... 


  - ಡಾ. ಸುವರ್ಣ 

ಸರಣಿ ಲೇಖನ - 1 - ನಾನೇಕೆ ನಾಸ್ತಿಕ




[1930-31ರಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಬಾಬಾ ರಣಧೀರ್ ಸಿಂಗ್‍ರವರು ಲಾಹೋರ್ ಸೆಂಟ್ರಲ್ ಜೈಲಿನಲ್ಲಿದ್ದರು. ಅವರು ದೇವರಲ್ಲಿ ನಂಬಿಕೆಯಿದ್ದ ಧರ್ಮನಿಷ್ಠ ವ್ಯಕ್ತಿ. ಭಗತ್‍ಸಿಂಗ್ ನಾಸ್ತಿಕರು ಎಂದು ತಿಳಿದಾಗ ಅವರಿಗೆ ತುಂಬಾ ನೋವಾಯಿತು. ಅವರು ಮರಣದಂಡನೆಯ ಸೆಲ್ (condemned cell) ನಲ್ಲಿ ಹೇಗೋ ಭಗತ್‍ಸಿಂಗ್‍ರನ್ನು ಭೇಟಿ ಮಾಡುವುದರಲ್ಲಿ ಯಶಸ್ವಿಯಾದರು. ದೇವರ ಅಸ್ತಿತ್ವದ ಬಗ್ಗೆ ನಂಬಿಕೆ ತರಲು ಪ್ರಯತ್ನಿಸಿ ವಿಫಲರಾದರು. ಬಾಬಾ ರಣಧೀರ್ ಸಿಂಗ್ ಕೋಪವನ್ನು ತಡೆದುಕೊಳ್ಳಲಾಗದೆ ಮೂದಲಿಸುತ್ತಾ ಹೇಳಿದರು: “ನಿಮಗೆ ಖ್ಯಾತಿಯಿಂದ ತಲೆ ತಿರುಗಿದೆ, ಅಹಂಕಾರ ಬಂದಿದೆ; ಅದು ನಿಮ್ಮ ಮತ್ತು ದೇವರ ನಡುವೆ ಕಪ್ಪು ತೆರೆಯನ್ನು ಎಳೆದಿದೆ.” ಆ ಮಾತಿಗೆ ಉತ್ತರಿಸುತ್ತಾ ಭಗತ್‍ಸಿಂಗ್ ಈ ಉತ್ತರವನ್ನು ಬರೆದರು. ಅದನ್ನು ನಾವು ಇಲ್ಲಿ ಸರಣಿ ಲೇಖನವಾಗಿ ಪ್ರಕಟಿಸುತ್ತಿದ್ದೇವೆ]

ನಾನೇಕೆ ನಾಸ್ತಿಕ
ಹೊಸ ಪ್ರಶ್ನೆಯೊಂದು ಉದ್ಭವವಾಗಿದೆ. ಒಬ್ಬ ಸರ್ವಶಕ್ತ, ಸರ್ವಂತರ್ಯಾಮಿ ಮತ್ತು ಸರ್ವಜ್ಞನಾದ ದೇವರ ಅಸ್ತಿತ್ವದಲ್ಲಿ ನನಗೆ ನಂಬಿಕೆಯಿಲ್ಲದಿರುವುದಕ್ಕೆ ಜಂಭ ಕಾರಣವೇ? ಅಂತಹದೊಂದು ಪ್ರಶ್ನೆಯನ್ನು ಎಂದಾದರೂ ಎದುರಿಸಬಹುದೆಂಬ ಕಲ್ಪನೆಯೂ ನನಗಿರಲಿಲ್ಲ. ಆದರೆ ನನ್ನ ಕೆಲವು ಸ್ನೇಹಿತರು – ಅವರನ್ನು ಸ್ನೇಹಿತರೆಂದು ಕರೆಯುವುದು ಅತಿಯಾಗದಿದ್ದರೆ - ನನ್ನ ಜೊತೆಯಿದ್ದ ಸ್ವಲ್ಪಕಾಲದ ಸಂಪರ್ಕದಿಂದ, ನಾನು ದೇವರ ಅಸ್ತಿತ್ವವನ್ನು ನಿರಾಕರಿಸುವುದು ಅತಿಯಾಯಿತು ಮತ್ತು ನನ್ನ ಅಪನಂಬಿಕೆಯು ಸ್ವಲ್ಪಮಟ್ಟಿಗೆ ಒಣಜಂಭದಿಂದ ಬಂದಿದೆಯೆಂದು ನಿರ್ಧರಿಸುತ್ತಿದ್ದಾರೆ. 

ಹೌದು, ಇದೊಂದು ಗಂಭೀರವಾದ ಸಮಸ್ಯೆ. ನಾನು ಮಾನವ ಸಹಜ ಸ್ವಭಾವಗಳನ್ನು ಮೀರಿದವನೆಂದು ಬಡಾಯಿ ಕೊಚ್ಚುವುದಿಲ್ಲ. ಅದಕ್ಕಿಂತ ಹೆಚ್ಚೇನೂ ಅಲ್ಲ. ಅದಕ್ಕಿಂತ ಹೆಚ್ಚಿನವನೆಂದು ಯಾರೂ ಹೇಳಿಕೊಳ್ಳಲಾರರು. ಈ ದೌರ್ಬಲ್ಯ ನನ್ನಲ್ಲೂ ಇದೆ. ಜಂಭವು ನನ್ನ ಸ್ವಭಾವದ ಒಂದು ಭಾಗ. ನನ್ನ ಕಾಮ್ರೇಡರ ನಡುವೆ ನನ್ನನ್ನು ನಿರಂಕುಶಾಧಿಕಾರಿಯೆಂದೂ ದೂಷಿಸಿದ್ದಾರೆ. ನಾನು ನನಗೇ ತಿಳಿಯದಂತೆ ನನ್ನ ಅಭಿಪ್ರಾಯಗಳನ್ನು ಇತರರ ಮೇಲೆ ಬಲವಂತವಾಗಿ ಹೇರಿ, ನನ್ನ ಪ್ರಸ್ತಾವನೆಗಳಿಗೆ ಒಪ್ಪಿಗೆ ಪಡೆಯುತ್ತೇನೆಂದು ಕೆಲವು ಸ್ನೇಹಿತರು ಆರೋಪಿಸಿದ್ದಾರೆ; ಅದೂ ಬಹಳ ಗಂಭೀರವಾಗಿ. ಅದು ಸ್ವಲ್ಪಮಟ್ಟಿಗೆ ಸತ್ಯ. ಅದನ್ನು ನಿರಾಕರಿಸುವುದಿಲ್ಲ. ಇದು ಅಹಂಕಾರಕ್ಕೆ ಎಡೆಮಾಡಿಕೊಡಬಹುದು. 

ಇತರ ಜನಪ್ರಿಯ ಪಂಥಗಳಿಗೆ ವಿರುದ್ಧವಾಗಿರುವ ನಮ್ಮ ಪಂಥದ ಬಗ್ಗೆ ನನಗೆ ಅಷ್ಟರಮಟ್ಟಿಗೆ ಜಂಭವಿದೆ. ಆದರೆ ಅದು ವೈಯಕ್ತಿಕವಲ್ಲ. ಅದು ನಮ್ಮ ಪಂಥದ ಬಗ್ಗೆಯಿರುವ ನ್ಯಾಯಬದ್ಧ ಹೆಮ್ಮೆ ಮಾತ್ರ, ಅದು ಜಂಭ ಅಲ್ಲ. ಜಂಭ ಅಥವಾ ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ‘ಅಹಂಕಾರ’ವೆಂದರೆ ಯೋಗ್ಯತೆಯಿಲ್ಲದಿದ್ದರೂ ತನ್ನ ಬಗ್ಗೆ ತನಗೇ ಅತಿಯಾದ ಹೆಮ್ಮೆ. ಅಂತಹ ಯೋಗ್ಯತೆಯಿಲ್ಲದ ಹೆಮ್ಮೆ ನನ್ನನ್ನು ನಾಸ್ತಿಕತೆಗೆ ತಳ್ಳಿದೆಯೋ ಅಥವಾ ವಿಷಯವನ್ನು ಅತ್ಯಂತ ಸೂಕ್ಷ್ಮವಾಗಿ ಅಧ್ಯಯನ ನಡೆಸಿದ ನಂತರ ಹಾಗೂ ಸಾಕಷ್ಟು ಆಲೋಚನೆ ಮಾಡಿದ ಮೇಲೆ ದೇವರಲ್ಲಿ ಅಪನಂಬಿಕೆ ಬಂದಿತೋ, ಈ ಪ್ರಶ್ನೆಯನ್ನೇ ನಾನಿಲ್ಲಿ ಚರ್ಚಿಸಲು ಬಯಸುವುದು. ಮೊದಲಿಗೆ ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ; ಅಹಂಭಾವ ಮತ್ತು ಜಂಭ – ಇವೆರೆಡೂ ವಿಭಿನ್ನ ವಿಷಯಗಳು.

ಮೊದಲನೆಯದಾಗಿ, ಅನುಚಿತವಾದ ಹೆಮ್ಮೆ ಅಥವಾ ಒಣಜಂಭವು ಒಬ್ಬ ವ್ಯಕ್ತಿ ದೇವರಲ್ಲಿ ನಂಬಿಕೆಯಿಡುವುದಕ್ಕೆ ಹೇಗೆ ಅಡ್ಡಿಯಾಗುತ್ತದೆಯೆಂದು ಅರ್ಥಮಾಡಿಕೊಳ್ಳಲು ಸಂಪೂರ್ಣವಾಗಿ ವಿಫಲನಾಗಿದ್ದೇನೆ. ಮಹಾನ್ ವ್ಯಕ್ತಿಯಾಗುವುದಕ್ಕೆ ನಿಜಕ್ಕೂ ಅತ್ಯಗತ್ಯವಾದ ಅಥವಾ ಅನಿವಾರ್ಯವಾದ ಗುಣಗಳನ್ನು ಹೊಂದಿರದಿದ್ದರೂ ಅಥವಾ ಅರ್ಹತೆಯಿಲ್ಲದಿದ್ದರೂ ಸ್ವಲ್ಪಮಟ್ಟಿಗೆ ಜನಪ್ರಿಯತೆಯನ್ನು ಗಳಿಸಿದ್ದರೆ, ಆಗ ನಾನು ನಿಜವಾದ ಮಹಾನ್ ವ್ಯಕ್ತಿಯ ಮಹಾನತೆಯನ್ನು ಗುರುತಿಸುವುದಕ್ಕೆ ನಿರಾಕರಿಸಬಹುದು. ಅದಷ್ಟನ್ನು ಅರ್ಥಮಾಡಿಕೊಳ್ಳಬಹುದು. ಆದರೆ ದೇವರಲ್ಲಿ ನಂಬಿಕೆಯನ್ನು ಕಳೆದುಕೊಳ್ಳಲು ಹೇಗೆ ಸಾಧ್ಯ? ಅದು ಎರಡು ರೀತಿಯಲ್ಲಿ ಸಾಧ್ಯವಿದೆ. 

ಒಂದೋ ಆತ ತನ್ನನ್ನು ದೇವರ ಶತ್ರುವೆಂದು ಯೋಚಿಸಲು ಶುರುಮಾಡಿರಬೇಕು ಅಥವಾ ತಾನೇ ದೇವರೆಂದು ನಂಬಲಾರಂಭಿಸಿರಬೇಕು. ಅವೆರಡೂ ಸಂದರ್ಭಗಳಲ್ಲೂ ನಿಜವಾದ ನಾಸ್ತಿಕನಾಗಲು ಸಾಧ್ಯವಿಲ್ಲ. ಅವನು ಮೊದಲನೆಯ ಸಂದರ್ಭದಲ್ಲಿ ತನ್ನ ಶತ್ರುವಿನ ಅಸ್ತಿತ್ವವನ್ನು ನಿರಾಕರಿಸುವುದಿಲ್ಲ. ಎರಡನೆಯ ಸಂದರ್ಭದಲ್ಲೂ ಸಹ, ಪ್ರಕೃತಿಯ ಚಲನವಲನಗಳನ್ನು ‘ತೆರೆಯ ಹಿಂದೆ’ ನಿರ್ದೇಶಿಸುವ ಪ್ರಜ್ಞಾವಂತ ಶಕ್ತಿಯ (conscious being) ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಾನೆ. ಸ್ವತಃ ತನ್ನನ್ನೇ ಆ ಪರಮ ಪುರುಷ (supreme being) ಎಂದು ಭಾವಿಸುತ್ತಾನೋ ಅಥವಾ ಪ್ರಜ್ಞಾವಂತ ಪರಮ ಪುರುಷನು ತಾನಲ್ಲದೆ ಬೇರಾರೋ ಎಂದು ಆಲೋಚಿಸುತ್ತಾನೋ ಎನ್ನುವುದು ನಮಗೆ ಅಷ್ಟು ಮುಖ್ಯವಲ್ಲ. ಆದರೆ ಅದರ ಮೂಲವಿರುವುದೇ ಅಲ್ಲಿ. ಅದರಲ್ಲಿ ಆತನ ನಂಬಿಕೆಯಿದೆ. ಅವನು ಯಾವ ರೀತಿಯಲ್ಲೂ ನಾಸ್ತಿಕನಾಗಲು ಸಾಧ್ಯವಿಲ್ಲ. ಇದು ನನ್ನ ಅಭಿಪ್ರಾಯ. 

ನಾನು ಮೊದಲ ಗುಂಪಿಗಾಗಲಿ ಅಥವಾ ಎರಡನೆಯದಕ್ಕಾಗಲಿ ಸೇರಿದವನಲ್ಲ. ನಾನು ಆ ಸರ್ವಶಕ್ತ, ಪರಮ ಪುರುಷನ ಅಸ್ತಿತ್ವನ್ನೇ ನಿರಾಕರಿಸುತ್ತೇನೆ. ನಾನು ನಿರಾಕರಿಸುವುದೇಕೆ ಎಂಬುದನ್ನು ಆನಂತರ ಚರ್ಚಿಸುತ್ತೇನೆ. ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ - ನಾನು ನಾಸ್ತಿಕತೆಯ ಸಿದ್ಧಾಂತವನ್ನು ಅಳವಡಿಸಿಕೊಳ್ಳಲು ‘ಜಂಭ’ ಪ್ರಚೋದನೆ ನೀಡಲಿಲ್ಲ. ನಾನು ಅವನ ಶತ್ರುವೂ ಅಲ್ಲ, ಅವತಾರವೂ ಅಲ್ಲ ಅಥವಾ ಸ್ವತಃ ನಾನೇ ಪರಮ ಪುರುಷನೂ ಅಲ್ಲ. ನನ್ನ ಈ ರೀತಿಯ ಚಿಂತನೆಗೆ ಜಂಭವು ಕಾರಣವಲ್ಲ ಎಂಬುದಂತೂ ನಿರ್ಧಾರವಾಯಿತು. ಈ ಆಪಾದನೆಯನ್ನು ತಪ್ಪೆಂದು ತೋರಿಸಲು ಸತ್ಯ ಸಂಗತಿಗಳನ್ನು ಪರಿಶಿಲಿಸೋಣ. 

ಈ ಸ್ನೇಹಿತರ ಪ್ರಕಾರ, ದೆಹಲಿ ಬಾಂಬ್ ಮತ್ತು ಲಾಹೋರ್ ಪಿತೂರಿ – ಇವೆರೆಡೂ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ಬಹುಶಃ ಅರ್ಹವಲ್ಲದಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದರಿಂದ ನನ್ನಲ್ಲಿ ಒಣಜಂಭ ಬೆಳೆದುಬಿಟ್ಟಿದೆ. ಸರಿ, ಅವರ ಅಭಿಪ್ರಾಯಗಳು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಪರಿಶೀಲಿಸೋಣ. ನನ್ನ ನಾಸ್ತಿಕತೆ ಇತ್ತೀಚೆಗೆ ಹುಟ್ಟಿದ್ದಲ್ಲ. ನಾನು ಮೇಲೆ ತಿಳಿಸದ ಸ್ನೇಹಿತರಿಗೂ ಗೊತ್ತಿರದ, ಯಾರ ಗಮನಕ್ಕೂ ಬಾರದ ಯುವಕನಾಗಿದ್ದಾಗಲೇ ದೇವರಲ್ಲಿ ನಂಬಿಕೆಯಿಡುವುದನ್ನು ನಿಲ್ಲಿಸಿಬಿಟ್ಟಿದ್ದೆ. ನಾಸ್ತಿಕತೆಗೆ ಕೊಂಡೊಯ್ಯುವ ಯಾವುದೇ ರೀತಿಯ ಅರ್ಹವಲ್ಲದ ಹೆಮ್ಮೆಯನ್ನು, ಕಡೇ ಪಕ್ಷ ಒಬ್ಬ ಕಾಲೇಜು ವಿದ್ಯಾರ್ಥಿ ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ಕೆಲವು ಪ್ರೊಫೆಸರ್‍ಗಳಿಗೆ ಪ್ರಿಯನಾದ, ಇನ್ನು ಕೆಲವರು ಇಷ್ಟಪಡದ ವಿದ್ಯಾರ್ಥಿಯಾಗಿದ್ದರೂ ಸಹ, ನಾನು ಶ್ರಮಪಟ್ಟು ಓದುವ ಅಥವಾ ವ್ಯಾಸಂಗನಿಷ್ಠ ವಿದ್ಯಾರ್ಥಿಯಾಗಿರಲಿಲ್ಲ. ನನಗೆ ಜಂಭದಂತಹ ಭಾವನೆಗಳಲ್ಲಿ ತೊಡಗುವುದಕ್ಕೆ ಯಾವ ಅವಕಾಶಗಳೂ ಸಿಗಲಿಲ್ಲ. ನಿಜ ಹೇಳಬೇಕೆಂದರೆ, ಮುಂದಿನ ಕೆರಿಯರ್ (career) ಬಗ್ಗೆ ಕೆಲವು ನಿರಾಶೆಯ ಸ್ವಭಾವಗಳಿದ್ದ, ಬಹಳ ಸಂಕೋಚದ ವಿದ್ಯಾರ್ಥಿಯಾಗಿದ್ದೆ. 

ಆ ದಿನಗಳಲ್ಲಿ ನಾನು ಪಕ್ಕಾ ನಾಸ್ತಿಕನಾಗಿರಲಿಲ್ಲ. ನಾನು ಯಾರ ಪ್ರಭಾವದಲ್ಲಿ ಬೆಳೆದನೋ ಆ ನನ್ನಜ್ಜ, ಸಂಪ್ರದಾಯಸ್ಥ ಆರ್ಯಸಮಾಜಿಯಾಗಿದ್ದರು. ಆರ್ಯಸಮಾಜಿಯಾದವರು ಏನಾದರೂ ಆಗಬಹುದು, ಆದರೆ ನಾಸ್ತಿಕರಾಗುವುದಿಲ್ಲ. ನನ್ನ ಪ್ರಾಥಮಿಕ ಶಿಕ್ಷಣ ಮುಗಿದ ನಂತರ ಲಾಹೋರಿನ ಡಿಎವಿ ಶಾಲೆಗೆ ಸೇರಿದೆ ಮತ್ತು ಒಂದು ವರ್ಷ ಪೂರ್ತಿ ಅದರ ವಿದ್ಯಾರ್ಥಿ ನಿಲಯದಲ್ಲಿ ವಾಸ ಮಾಡಿದೆ. ಅಲ್ಲಿ ಬೆಳಗಿನ ಮತ್ತು ಸಂಜೆಯ ಪ್ರಾರ್ಥನೆಗಳ ಜೊತೆಗೆ ಗಂಟೆಗಟ್ಟಲೆ ಗಾಯತ್ರಿ ಮಂತ್ರ ಪಠಿಸುತ್ತಿದ್ದೆ. 

ಆ ದಿನಗಳಲ್ಲಿ ನಾನು ನನ್ನ ತಂದೆಯೊಡನೆ ವಾಸ ಮಾಡಿದೆ. ಧರ್ಮಗಳ ಸಂಪ್ರದಾಯ ಬದ್ಧತೆಗೆ ಹೋಲಿಸಿದರೆ ಅವರೊಬ್ಬ ಉದಾರವಾದಿ. ಅವರ ಬೋಧನೆಗಳಿಂದಲೇ ನಾನು ನನ್ನ ಜೀವನವನ್ನು ಸ್ವಾತಂತ್ರ್ಯಕ್ಕೋಸ್ಕರ ಮುಡಿಪಾಗಿಡಬೇಕೆಂದು ಬಯಸಿದ್ದು. ಆದರೆ ಅವರು ನಾಸ್ತಿಕರಲ್ಲ. ಅವರು ಅಚಲ ದೈವಭಕ್ತರು. ನಾನು ಪ್ರತಿದಿನವೂ ಪ್ರಾರ್ಥನೆ ಸಲ್ಲಿಸುವಂತೆ ನನ್ನನ್ನು ಉತ್ತೇಜಿಸುತ್ತಿದ್ದರು. ಇದು ನಾನು ಬೆಳೆದು ಬಂದ ರೀತಿ. ‘ಅಸಹಕಾರ ಚಳುವಳಿ’ಯ ದಿನಗಳಲ್ಲಿ ನ್ಯಾಷನಲ್ ಕಾಲೇಜಿಗೆ ಸೇರಿದೆ. ಅಲ್ಲಿಯೇ ನಾನು ಉದಾರವಾಗಿ ಆಲೋಚಿಸಲು ಮತ್ತು ಧರ್ಮಗಳ ಸಮಸ್ಯೆಗಳ ಬಗ್ಗೆ, ದೇವರ ಬಗ್ಗೆಯೂ ಸಹ ಚರ್ಚಿಸಲು, ಟೀಕಿಸಲು ಆರಂಭಿಸಿದೆ. ಆದರೂ ನಾನು ನಿಷ್ಠಾವಂತ ದೈವಭಕ್ತನಾಗಿದ್ದೆ. ಉದ್ದ ಕೂದಲನ್ನು ಕತ್ತರಿಸದೆ, ಗಂಟುಕಟ್ಟದೆ ಕಾಪಾಡಿಕೊಂಡಿರಲು ಆರಂಭಿಸಿದ್ದೆ; ಆದರೆ ಸಿಖ್ ಧರ್ಮದ ಅಥವಾ ಬೇರಾವುದೇ ಧರ್ಮದ ಪುರಾಣ ಮತ್ತು ಸಿದ್ಧಾಂತಗಳಲ್ಲಿ ಯಾವತ್ತೂ ನಂಬಿಕೆಯಿರಲಿಲ್ಲ. ಆದರೆ ದೇವರ ಅಸ್ತಿತ್ವದಲ್ಲಿ ಗಾಢವಾದ ನಂಬಿಕೆಯಿತ್ತು.
(ಮುಂದುವರೆಯುತ್ತದೆ)  

-  ಎಸ್.ಎನ್.ಸ್ವಾಮಿ


ಕವನ - ಹರಿವು

ಹರಿವು

ಹಳೆಯ ಹಳಸಿದ ರಕ್ತವನೆಲ್ಲ
ಹರಿಯ ಬಿಟ್ಟು ಚರಂಡಿಗೆ
ಕೀವು, ಹೆಪ್ಪುಗಟ್ಟಿದ ಗಡ್ಡೆಗಳ
ಬಿಸುಟಿ ಕಸದ ತೊಟ್ಟಿಗೆ
ನನ್ನೀ ದೇಹದಲಿ
ಹೊಸ ನೆತ್ತರ ಹರಿವು

ಕಷ್ಟದಲಿ ಮೊರೆ ಹೋಗುತ್ತಿದ್ದ
ಮೌನ-ಸ್ತಬ್ದತೆಗಳು ಸರಿದು ಹಿಂದೆ
ತರ್ಕಗಳ ಸಾಲು ಸಾಲು
ಕೆಚ್ಚೆದೆಯ ಹೊಳೆಯ ಹರಿವು

ದಿನವೂ ಹುಟ್ಟುವ ಸೂರ್ಯ
ಇಂದು ಮತ್ತೆ ಹೊಸತಾಗಿ
ಬೀರಿದ ಕಿರಣಗಳು
ಹೊಸ ಹೊಳಪು ಮೂಡಿ
ನನ್ನೊಳಗಿದೀಗ 
ಹೊಸ ತಿಳಿವಿನ ಹರಿವು....

- ಮಹಾಂತೇಶ ಬಿ ಬಿ

ಕವನ - ಕನ್ನಡ ನಾಡು

ಕನ್ನಡ ನಾಡು ನಮ್ಮಯ ನಾಡು
ಕನ್ನಡ ಕಂಪಿನ ನುಡಿ ನಾಡು
ಹಸಿರು ವನಗಳ ಸುಂದರನಾಡು
ಚೆಲುವಿನ ಒಲವಿನ ಸಿರಿನಾಡು.

ಬಸವ ಪಂಪರು ಹುಟ್ಟಿದ ನಾಡು
ಅಕ್ಕ ಷರೀಫರ  ನೆಲೆ ನಾಡು
ಅಬ್ಬಕ್ಕ ಟಿಪ್ಪು ಉಳಿಸಿದ ನಾಡು
ಸರ್ ಎಂವಿ ಕಟ್ಟಿದ ಕರುನಾಡು

ಕಲೆಯನು ಶಿಲೆಯಲಿ ಬೆಳೆಸಿದ ನಾಡು
ಸಾರಿದೆ ನಮ್ಮಯ ಸಂಸ್ಕೃತಿ ನೋಡು
ಕಾವೇರಿ ತುಂಗೆ ಹರಿಯುವ ನಾಡು
ಗಂಧದನಾಡಿದು ಚಂದದ ಬೀಡು.

ವೆಂಕಟರಾಯರು ಕನಸಿನ ನಾಡು
ನಾರಾಯಣರ ಚೆಲುವಿನ ನಾಡು
ಜಯದೇವಿ ತಾಯಿಯ ಕಂಡಂತ ನಾಡು
ಇದುವೆ ನಮ್ಮಯ ಕರುನಾಡು.
      - ವಿಜಯಲಕ್ಷ್ಮಿ  ಎಂ ಎಸ್ 

ವ್ಯಕ್ತಿ ಪರಿಚಯ - ಸರಸ್ವತಿಬಾಯಿ ರಾಜವಾಡೆ


 ತಮ್ಮದೇ ಆದ ವಿಶಿಷ್ಟ ರೀತಿಯಲಿ ಮಹಿಳೆಯರಿಗೆ ಸಂಬಂಧಿಸಿದಂತಹ ವಿಷಯಗಳನ್ನು 'ಗಿರಿಬಾಲೆ, ವೀಣಾಪಾಣಿ, ಯು.ಸರಸ್ವತಿ ಮತ್ತು ವಿಶಾಖಾ' ಎಂಬ ಹೆಸರುಗಳಿಂದ ಬರೆಯುತ್ತಿದ್ದ ಸರಸ್ವತಿಬಾಯಿಯವರು ಹುಟ್ಟಿದ್ದು ದಕ್ಷಿಣ ಕನ್ನಡದ ಉಡುಪಿ ಬಳಿಯ ಬಳಂಜಾಲದಲ್ಲಿ 1913 ಅಕ್ಟೋಬರ್  3 ರಂದು. 
ತಂದೆ ನಾರಾಯಣರಾವ್, ತಾಯಿ ಕಮಲಾಬಾಯಿ. ತಂದೆ ಹರಿಕಥೆಯನ್ನು ಹೇಳುತ್ತಿದ್ದುದಲ್ಲದೆ ಪದ್ಯಗಳನ್ನು ರಚಿಸಿ ಹಾಡುತ್ತಿದ್ದರು. ತಂದೆಯ ಈ ಗುಣ ಸರಸ್ವತಿಯಲ್ಲೂ ಬೆಳೆದು ಬಂದಿತು. ಅಪ್ಪನಿಗೆ ಬೇಡದ ಮಗುವಾಗಿ ಅಂದರೆ  ಪತ್ನಿ ಗರ್ಭಿಣಿ ಎಂದು ತಿಳಿಯುತ್ತಲೇ ಗರ್ಭಪಾತ ಮಾಡಿಸಲು ಒಪ್ಪದ ಮಡದಿಯನ್ನು ಬಿಟ್ಟು ಹೋದರು ನಾರಾಯಣರಾವ್. ಇಂತಹ ಪರಿಸ್ಥಿತಿಯಲ್ಲಿ ಸರಸ್ವತಿಗೆ ತಾಯಿಯ ಪ್ರೀತಿಯಿಂದ ಸಿಗಲಿಲ್ಲ. ಅಜ್ಜಿಯ ಆರೈಕೆಯಲ್ಲಿ ಬೆಳೆದಳು.

ಬಡತನದ ಕಾರಣ ಸರಸ್ವತಿ ಐದು ವರ್ಷದ ಬಾಲಕಿಯಾಗಿರುವಾಗಲೇ ಹೂ ಮಾರಲು ಹೋಗುತ್ತಿದ್ದರು. ಓದಲು ಇವರಿಗೆ ಮೊದಲಿನಿಂದಲೂ ಆಸಕ್ತಯಿತ್ತು.ಶಾಲೆಗೆ ಸೇರಿಸಿದರಾದರೂ ವಿದ್ಯೆ ಕಲಿಯುವಲ್ಲಿ ವಿಫಲರಾದರು. ನಂತರ ಇವರ ಊರಿಗೆ ನಾಟಕ ಮಂಡಳಿ ಬಂದಿತ್ತು ನಾಟಕವನ್ನು ನೋಡಲು ಹೋಗಿದ್ದ ಸರಸ್ವತಿಯನ್ನು ನೋಡಿದ ಪ್ರೊಪ್ರೈಟರ್ ನಾಟಕದಲ್ಲಿ ಅಭಿನಯಿಸಲು ಅವಕಾಶ ಕೊಟ್ಟರು.ಕೊಟ್ಟ ಅವಕಾಶವನ್ನು ಉಪಯೋಗಿಸಿಕೊಂಡು ಇವರು ಚೆನ್ನಾಗಿ ಅಭಿನಯಿಸಿದರು. ಇವರ ಅಭಿನಯವನ್ನು ಕಂಡ ಎಲ್ಲರೂ ಹೊಗಳಿದರು. ನಂತರ ಮುಂಬಯಿಗೆ ಹೋಗಿ ಸಂಗೀತವನ್ನು ಕಲಿತರು. ಕಾರ್ಯಕ್ರಮವನ್ನು ನೀಡುತ್ತಿದ್ದರು. ಆದರೆ ಮುಂಬಯಿಯ ವಾತಾವರಣ ಇವರಿಗೆ ಒಗ್ಗದ ಕಾರಣ ಮತ್ತೆ ತಮ್ಮೂರಿಗೆ ಹಿಂತಿರುಗಿದರು.

ಬಡತನದಿಂದ ಬಳಲುತ್ತಿದ್ದು ಸರಸ್ವತಿಯವರು ಚಿಕ್ಕ ವಯಸ್ಸಿನಲ್ಲಿ ದೇವರಿಗೆ "ನನಗೆ ಕಲೆಕ್ಟರ್ ಗಂಡನನ್ನು  ಕೊಡು" ಎಂದು ಪತ್ರ ಬರೆದಿದ್ದರಂತೆ. ಕಾಕತಾಳೀಯವಾಗಿ ಇವರ 15 ನೇ ವಯಸ್ಸಿನಲ್ಲಿ  51 ವಯಸ್ಸಿನ ರಾಯಶಾಸ್ತ್ರಿ ರಾಜವಾಡೆ ಎಂಬುವರೊಂದಿಗೆ ವಿವಾಹವಾಯಿತು. ರಾಯಶಾಸ್ತ್ರಿಯವರು ತಂಜಾವೂರಿನಲ್ಲಿ ಡೆಪ್ಯುಟಿ ಕಲೆಕ್ಟರ್ ಆಗಿದ್ದರು. ವಿವಾಹ ನಂತರ ತಂಜಾವೂರು ಆಮೇಲೆ ಸಿಂಗಪುರಕ್ಕೆ ಗಂಡನೊಂದಿಗೆ ಬಂದರು.ಚೆಲುವೆಯಾಗಿದ್ದ ಇವರನ್ನು ಪತಿ ಎಲ್ಲೂ ಹೊರಗೆ ಕರೆದುಕೊಂಡು ಹೋಗುತ್ತಿರಲಿಲ್ಲ. ಹೆಚ್ಚು ಕಡಿಮೆ ಗೃಹಬಂಧನದಲ್ಲಿಯೇ ಇದ್ದರು. ಆ ಸಮಯದಲ್ಲಿ ಸರಸ್ವತಿಯವರು ಮನೆಗೆ ಬರುತ್ತಿದ್ದ ಪತ್ರಿಕೆಗಳನ್ನು ಓದುತ್ತಿದ್ದರು. ಅಲ್ಲದೆ ಮನೆಗೆಲಸದವನಿಂದ ತಮಿಳು ಭಾಷೆಯನ್ನು ಕಲಿತರು. ಜೊತೆಗೆ ಮನೆಯಲ್ಲಿದ್ದ ಗ್ರಂಥಗಳನ್ನು ಓದುತ್ತಿದ್ದರು. ಹಾಗೆ ಓದುತ್ತಾ ತಾನೇಕೆ ಬರೆಯಲು ಪ್ರಯತ್ನಿಸಬಾರದೆಂದು ಮೊದಲ ಕತೆಯನ್ನು  ತಮಿಳು ಭಾಷೆಯಲ್ಲಿ ಬರೆದರು.ನಂತರ ಕನ್ನಡದಲ್ಲಿ " ನನ್ನ ಅಜ್ಞಾನ " ಎಂಬ ಕಥೆಯನ್ನು ಬರೆದರು.ಇದು ಕಂಠೀರವ ಪತ್ರಿಕೆಯಲ್ಲಿ ಪ್ರಕಟಗೊಂಡು ಬಹುಮಾನವನ್ನು ಪಡೆಯಿತು. ಇದರಿಂದ ಬರೆಯುವುದನ್ನು ಮುಂದುವರಿದರು. ಪತಿ ಬರೆಯುವುದನ್ನು ಪ್ರೋತ್ಸಾಹಿಸಿದರು. ನಂತರ ಸರಸ್ವತಿಯವರು S.S.L.C ಪರೀಕ್ಷೆಯನ್ನು ಬರೆದು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದರು. ನಂತರದಲ್ಲಿ ಹಿಂದಿ ರಾಷ್ಟ್ರಭಾಷಾ ವಿಶಾರದನಾದ ಪರೀಕ್ಷೆಗಳನ್ನು ಪಾಸು ಮಾಡಿದರು. ಒಟ್ಟಾರೆ ಸರಸ್ವತಿಯವರು ಹಿಂದಿ,ತಮಿಳು,ಸಂಸ್ಕೃತ,ಇಂಗ್ಲಿಷ್, ಮರಾಠಿ ಭಾಷೆಗಳನ್ನು ಕಲಿತರು.ಹೀಗಿರುವಾಗಲೇ ಇವರು 28 ವರ್ಷದಲ್ಲಿ ಪತಿಯನ್ನು  ಕಳೆದುಕೊಂಡು ವಿಧವೆಯಾದರು. ನಂತರ ಇವರು ಬೆಂಗಳೂರಿನಲ್ಲಿ ಸ್ವಲ್ಪ ಕಾಲವಿದ್ದು ಉಡುಪಿಯಲ್ಲಿ ನೆಲೆಸಿದರು.
  1929 ರಲ್ಲಿ ಬರೆಯಲು ಪ್ರಾರಂಭಿಸಿದ ಇವರು ಸುಮಾರು 65 ಕಥೆಗಳನ್ನು ಬರೆದಿದ್ದಾರೆ. ಇವರ ಕಥೆಗಳು  "ತಾಯಿನಾಡು,ಕಂಠೀರವ,ಅಂತರಂಗ,ಸುಬೋಧ,ಧರ್ಮಬೋಧ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಪ್ರಕಾಶ ಎಂಬ ಹಿಂದಿ ನಾಟಕವನ್ನು ಅನುವಾದಿಸಿದರು. 1938ರಲ್ಲಿ ಪ್ರಕಟಗೊಂಡ ಇವರ "ಆಹುತಿ ಇತ್ಯಾದಿ ಕಥೆಗಳು" ಪ್ರಥಮ ಕಥಾಸಂಕಲನವನ್ನು ದಿ ಹಿಂದೂ ಪತ್ರಿಕೆಯಲ್ಲಿ " ಸಣ್ಣ ಕಥೆಗಳ ಅವಭಿಷಕ್ತ ರಾಣಿ" ಎಂದು ವಿಮರ್ಶಕರು ಹೊಗಳಿ ಬರೆದಿದ್ದಾರೆ. " ಕದಂಬ ಮತ್ತು ಪ್ರೇಮವಿವಾಹ" ಇವರ ಇತರ ಕಥಾಸಂಕಲನಗಳು. " ವಿಮಲೆ" ಎಂಬ ಕಾದಂಬರಿಯನ್ನು ಬರೆದಿದ್ದಾರೆ.
1946 ರಲ್ಲಿ "ಕಥಾವಳಿ" ಎಂಬ ಪತ್ರಿಕೆಯ ವನಿತಾ ವಿಭಾಗದ ಇವರ ಸಂಪಾದಕೀಯದಲ್ಲಿ "ಅಕ್ಕನ ಓಲೆ ಎಂಬ ಅಂಕಣವನ್ನು ಪ್ರಾರಂಭಿಸಿದರು. ಇದರಲ್ಲಿ ಮಹಿಳೆಯರ ಸಮಸ್ಯೆಗಳಿಗೆ ಉತ್ತರಿಸುತ್ತಿದ್ದರು. " ಚಾರುಚಯನ" ಎಂಬ ಅಂಕಣದಲ್ಲಿ ಉದಯೋನ್ಮುಖ ಲೇಖಕಿಯೇ ಕಥೆ ಕವನಗಳನ್ನು ಪ್ರಕಟಿಸಿ,ಅವರಿಗೆ ಪ್ರೋತ್ಸಾಹ ನೀಡುತ್ತಿದ್ದರು.
1951ರಲ್ಲಿ" ನಿಸರ್ಗ" ಎಂಬ ಆರೋಗ್ಯ ಪತ್ರಿಕೆಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ನಿಸ್ಸಂಕೋಚವಾಗಿ ತಮ್ಮ ನಿಜವಾದ ಹೆಸರಿನಿಂದಲೇ ಬರೆಯುತ್ತಿದ್ದರು. 
ಇವರು ಹಲವಾರು ಕವಿತೆಗಳನ್ನು ಬರೆದಿದ್ದಾರೆ.ಇವರ " ಕಲಿಯೋಣ " ಮೊದಲ ಕವನವು 1948 ರಲ್ಲಿ ಕರಾವಳಿಯಲ್ಲಿ ಪ್ರಕಟವಾಯಿತು.  ಇದರಲ್ಲಿ " ಚೇತರಸಿ ಭಗಿನಿಯರೇ,ಸಾಕಿನ್ನು ತೂಕಡಿಸಿ ಕ್ರೀತದಾಸಿಯರಾಗಿ ಬಾಳಿದುದು ಸಾಕಾಯ್ತು" ಎಂದು ಮಹಿಳೆಯರನ್ನು  ಜಾಗೃತಿಗೊಳಿಸಲು ಬರೆದಿದ್ದರು. ಇದಲ್ಲದೆ ಇವರು ನಾಟಕಗಳನ್ನು ಬರೆದಿದ್ದಾರೆ. " ಪರಿಣಯ " ಎಂಬ ಮರಾಠಿ ಪ್ರಹಸನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
1951ರಲ್ಲಿ "ಸಾರ್ಥಕ ಜೀವನ" ಎಂಬ ನಾಟಕವನ್ನು ಬರೆದರು.1957 ರಲ್ಲಿ " ಬಿರುಗಾಳಿ " ಎಂಬ ಮತ್ತೊಂದು ಮರಾಠಿ ನಾಟಕವನ್ನು ಅನುವಾದಿಸಿದರು." ಸಹೋದರ,ಸಂತ ಮೀರ, ಸಂಸಾರ,ಡೆಪ್ಯುಟಿ ಕಲೆಕ್ಟರ್ ಮೊದಲಾದ ನಾಟಕಗಳನ್ನು ಬರೆದಿದ್ದಲ್ಲದೆ ಅಭಿನಯಿಸಿದ್ದಾರೆ.1953ರಲ್ಲಿ " ಸುಪ್ರಭಾತ" ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆಯಲ್ಲಿ ಮಹಿಳೆಯರಿಗೆ ಆಧ್ಯತೆ ನೀಡಿದ್ದರು. ಇವರು 50 ಕ್ಕೂ ಹೆಚ್ಚು ಪ್ರಬಂಧಗಳನ್ನು ಬರೆದಿದ್ದಾರೆ.
ಸರಸ್ವತಿಯವರು ಸಾಹಿತ್ಯ ಸೇವೆಯಲ್ಲದೆ ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಉಡುಪಿಯಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಹಣ ಸಹಾಯ ಮಾಡಿದರು. ನಂತರ ಇವರ ಒಲವು ಆಧ್ಯಾತ್ಮಿಕದತ್ತ ಹರಿಯಿತು. ಕೃಪಾಂತರಂಗ ಭಾಗ 1ಮತ್ತು ಭಾಗ 2 , ಸ್ತವನಾಂಜಲಿ, ಶ್ರೀಶಾರದಾಂಬೆ ಭಕ್ತಿ ಗೀತೆಗಳು, ಶ್ರೀಶಾರದಾದೇವಿ ಮಹಿಮೆಗಳು ಮೊದಲಾದ ಕೃತಿಗಳನ್ನು ಬರೆದರು. 1976 ರಲ್ಲಿ ಚಿಟ್ಪಾಡಿಯ ಶಾರದಾಂಬ ದೇವಾಲಯವನ್ನು  ಜೀರ್ಣೋದ್ಧಾರ ಮಾಡಿಸಿದರು.
ಹೀಗೆ ಸಮಾಜದಲ್ಲಿನ ಮಹಿಳೆಯರ ವಿಭಿನ್ನ ಕಥಾವಸ್ತುಗಳನ್ನು ವಿಶಿಷ್ಟ ರೀತಿಯಲ್ಲಿ ಬರೆದ ಸರಸ್ವತಿಯವರು 1994 ರ ಏಪ್ರಿಲ್ 23 ರಂದು ಚಿರನಿದ್ರೆಗೆ ಜಾರಿದರು.
ಇವರ ಸಾಹಿತ್ಯ ಕೃಷಿಗೆ 1988 ರಲ್ಲಿ ಅಖಿಲ ಕರ್ನಾಟಕ ಲೇಖಕಿಯರು ಸಂಘ ತಮ್ಮ 2 ನೇ ಸಮ್ಮೇಳನದಲ್ಲಿ ಗೌರವಿಸಿತು.1994 ರಲ್ಲಿ ಅನುಪಮ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು.
   -  ವಿಜಯಲಕ್ಷ್ಮಿ ಎಂ ಎಸ್  

ಪುಟ್ಕಥೆಗಳು


1.ರಜೆ ಕಳೆದು ಶಾಲೆಯ ಪುನರಾರಂಭವೆಂದು ಅವಳಿಗೆ ಖುಷಿಯೋ ಖುಷಿ- ಸಂಭ್ರಮ, ಸಡಗರ. ಅಂದಿನಿಂದ ಶಾಲೆಯ ಮುಂದೆ ಕಡಲೆಕಾಯಿ ಮಾರಿ ತನ್ನ ಮಕ್ಕಳಿಗೆ ಊಟ ಕೊಡಬಹುದೆಂಬ ಸಂತಸ.

2.ಆಕೆ ಒಬ್ಬ ಖ್ಯಾತ ಕಲಾವಿದೆ. ಕಟ್ಟುನಿಟ್ಟಿನ ಶಿಸ್ತುಗಾತಿ ತಾಯಿ. ತನ್ನ ಮಗ ಉದ್ದ ಗೆರೆಗಳನ್ನು ಸೊಟ್ಟಗೆ ಎಳೆದದ್ದಕ್ಕೆ ಸದಾ ಬಯ್ಯುತ್ತಿದ್ದವಳು ಇಂದು ಮಾತ್ರ ಅವನು ಸೊಟ್ಟಗಿನ ಗೆರೆ ಮಾತ್ರ ಬರೆಯಲಪ್ಪ ಎಂದು ಕಾಯುತ್ತಿದ್ದಳು, ಸಾಯುತ್ತಿದ್ದ ಮಗ ವೆಂಟಿಲೇಟರಿನಲ್ಲಿ ಉಸಿರಾಡುತ್ತಿದ್ದಂತೆ ಅವನ ಇಸಿಜಿಯ ಗೆರೆಯನ್ನೇ ನೋಡುತ್ತಿದ್ದಳಾಕೆ

3.ಅವರು ಅವನ ಅಪ್ಪನನ್ನು ಕರೆದುಕೊಂಡು ಹೋದರು, ಅವನಉ ಮರಳಿದಾಗ ಬರಿಯ ಒಂದು ಬಾವುಟವಾಗಿದ್ದ

4. “ನನ್ನೆಲ್ಲಾ ಆಟಿಕೆಗಳು ಇನ್ನು ನಿನ್ನವೇ” – ಅಣ್ಣ ಸಾಯುವಾಗ ಬರೆದ ಪತ್ರದಲ್ಲಿ ತಮ್ಮನಿಗೆ ಹೇಳಿದ್ದ

5.ಎಲ್ಲರೂ ಪ್ರವಾಹದ ಜೊತೆ ಈಜುತ್ತಾರೆ, ಆದರೆ ಅದರ ವಿರುದ್ಧ ಈಜಿದವರು ಗುರುತಿಸಲ್ಪಡುತ್ತಾರೆ.” ಇದನ್ನು ನಾನು ಪೋಲೀಸರಿಗೆ ವಿವರಿಸುವ ಮುನ್ನವೇ ಅವರು ನನಗೆ ಫೈನ್ ಕಟ್ಟಲು ಹೇಳಿದರು. 

6.ಅವರ ಪ್ರೀತಿ ಅನನ್ಯವಾದುದು. ಅವನು ಅವಳನ್ನು ಒದ್ದಾಗಲೆಲ್ಲಾ ಆಕೆಗೆ ಬಹಳ ಸಂತೋಷವಾಗುತ್ತಿತ್ತು. ಅವನು ಇನ್ನಷ್ಟು ಒದೆಯಲಿ ಎಂದು ಮನಸು ಹಂಬಲಿಸುತ್ತಿತ್ತು, ಅವನ ಮೇಲೆ ಅವಳಿಗೆ ಪ್ರೀತಿ ಹೆಚ್ಚುತ್ತಿತ್ತು. ಅವನು ಬಂದ ತಕ್ಷಣ ಅವನನ್ನು ಅಪ್ಪಿಕೊಳ್ಳಬೇಕೆಂದು ಅವಳ ಬಹಳ ಕಾತುರದಿಂದ ಅವನು ಬೇಗ ಹುಟ್ಟಲಿ ಎಂದು ಕಾಯುತ್ತಿದ್ದಳು. 

7. 25 ನೇ ವಯಸ್ಸಿಗೆ ನಾನು ಒಂದು ಮಗುವಿನ ತಾಯಿಯಾದೆ, 27 ಕ್ಕೆ ಇಬ್ಬರು ಮಕ್ಕಳ ತಾಯಿಯಾದೆ, ಈಗ 55 ಕ್ಕೆ ನಾನು ಮತ್ತೆ ತಾಯಾಗಿದ್ದೇನೆ. ನನ್ನ ಮಗ ಮದುವೆ ಮಾಡಿಕೊಂಡು ಹೆಂಡತಿಯನ್ನು ಮನಗೆ ಕರೆತಂದಿದ್ದಾನೆ. 

8. “ ಶ್ರೀಮಂತ ಮನೆತನದಲ್ಲಿ ಹುಟ್ಟಿದ ಈ ಹುಡುಗ ಅದೆಷ್ಟು ಅದೃಷ್ಟಶಾಲಿ” ಎಂದರು ನೆರೆಹೊರೆಯವರು. ಅಲ್ಲಿ ದೂರದಲ್ಲೆಲ್ಲೋ ಹುಟ್ಟುವ ಮೊದಲೇ  ಮಣ್ಣಿನಲ್ಲಿ ಹೂತುಹೋಗಿದ್ದ ಅವನ ಮೂರು ಅಕ್ಕಂದಿರ ಭ್ರೂಣಗಳು ಕಣ್ಣೀರಿಟ್ಟವು.

9. “ನಾನು ಉದ್ಯೋಗದಲ್ಲಿ ಏರದಂತೆ ನನಗಡ್ಡ ಬಂದೆ, ನಾನು ಮುಖ್ಯಸ್ಥೆಯಾಗಬೇಕಿತ್ತು” ಎಂದು ಮನಸ್ಸಿನಲ್ಲೇ ಶಪಿಸಿಕೊಂಡಳವಳು. ಆ ಪುಟ್ಟ ಕೈಗಳು ಅವಳ ಬೆರಳನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಎಲ್ಲಾ ಸಿಟ್ಟು ಅಸಮಾಧಾನಗಳನ್ನು ಮರೆತುಬಿಟ್ಟಳು. ಅವಳು ತಾಯಿಯಾಗಿದ್ದಳು. 

10. ಸಮುದ್ರದ ದಂಡೆಯ ಮೇಲೆ ಬರಿಗಾಲಿನಲ್ಲಿ ನಿಂತಿದ್ದ ಆ ಬಾಲಕ ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಲೇ ಇದ್ದ-“ನೀವು ಸಾವಿರ ಬಾರಿ ನನ್ನ ಕಾಲು ಮುಟ್ಟಿದರೂ ನಾನು ನಿಮ್ಮನ್ನು ಕ್ಷಮಿಸುವುದಿಲ್ಲ. ನೀವು ನನ್ನ ಅಪ್ಪ ಅಮ್ಮನನ್ನು ನನ್ನಿಂದ ದೂರಕ್ಕೆ ಕೊಂಡೊಯ್ದು ಬಿಟ್ಟಿದ್ದೀರಿ” 
- (ಅನಾಮಿಕ ಇಂಗ್ಲಿಷ್ ಬರಹಗಾರರ ಪುಟ್ಟ ಕಥೆಗಳ ಅನುವಾದ:  
ಡಾ.ಸುಚೇತಾ ಪೈ)

ಲೇಖನ - ದೈಹಿಕ ಶ್ರಮ ಮತ್ತು ಬೌದ್ಧಿಕ ಶ್ರಮ



       ಭೂಮಿ ಮೇಲೆ ಹುಟ್ಟಿದ ಪ್ರತಿ ಜೀವಿಯು ಎರಡು ಪ್ರಕಾರದ ಕ್ರಿಯೆ ಅಥವಾ ಕಾರ್ಯಗಳಲ್ಲಿ ತೊಡಗುತ್ತವೆ. ಒಂದು, ಸಹಜ, ಸ್ವಾಭಾವಿಕ ಅಥವಾ ಜೈವಿಕ ಕ್ರಿಯೆ. ಇನ್ನೊಂದು ಉದ್ದೇಶ ಮತ್ತು ಪ್ರಜ್ಞಾಪೂರ್ವಕವಾಗಿ ಮಾಡುವ ಕ್ರಿಯೆ. ಸಹಜ ಕ್ರಿಯೆಯ ಉಳಿವಿಗಾಗಿ ನಡೆಯುವಂತದ್ದು ಉಸಿರಾಟ, ಜೀವ ರಕ್ಷಣೆ, ಲೈಂಗಿಕ ಕ್ರಿಯೆ, ಸಂತಾನೊತ್ಪತ್ತಿ, ಆಹಾರ ಅರಸುವಿಕೆ ಮತ್ತು ಸೇವನೆ ಇವು ಬದುಕಲು ಅನಿವಾರ್ಯವಾಗಿ ಮಾಡಲೆ ಬೇಕಾದಂತಹ ಕಾರ್ಯಗಳು. ಅತ್ಯಂತ ಸಣ್ಣ ಕೀಟದಿಂದ ಹಿಡಿದು ಆನೆ, ತಿಮಿಂಗಿಲದಂತಹ ಬೃಹತ್ ಗಾತ್ರದ ಪ್ರಾಣಿಗಳು ಈ ಕ್ರಿಯೆಗಳನ್ನು ಮಾಡಲೇಬೇಕು. ಪ್ರಾಣಿ ಜೀವಿಯಾದ ಮಾನವರು ಈ ಸಹಜ ಕ್ರಿಯೆಗಳೊಂದಿಗೆ ಪ್ರಜ್ಞಾ ಪೂರ್ವಕವಾಗಿ, ಉದ್ದೇಶಪೂರ್ವಕವಾಗಿ ಕೆಲವು ಕಾರ್ಯಗಳನ್ನು ಮಾಡಬೇಕಾಗುತ್ತದೆ. ಮಾನವರ ಸಂಖ್ಯೆ, ಅಗತ್ಯಗಳು ಹೆಚ್ಚಾದಂತೆ, ವಿಚಾರ ಮಾಡುವ ಶಕ್ತಿ, ಭೌದ್ಧಿಕತೆ ಅಧಿಕವಾದಂತೆ ಎರಡನೆ ಪ್ರಕಾರದ ಕ್ರಿಯೆ ಹೆಚ್ಚು ಸಂಕೀರ್ಣವಾಗುತ್ತಾ ಹೋದವು. ಈ ಕ್ರಿಯೆಗಳಿಗೆ ಕೆಲಸ, ಕಾರ್ಯ, ಉದ್ಯೋಗ, ಶ್ರಮ, ಕೆಮೆ, ಬದುಕು, ದುಡಿಮೆ, ಕೂಲಿ, ಕಾಯಕ ಮುಂತಾದ ಪದಗಳನ್ನು ಬಳಸಲಾಗುತ್ತದೆ. ಭೌದ್ಧಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಇದನ್ನು ಪರಿಕಲ್ಪನೆಯಾಗಿ ಬಳಸಲಾಗುತ್ತದೆ.  ಜೀವದ ಉಳಿವಿಗಾಗಿ,ಜೀವನೋಪಯಕ್ಕಾಗಿ, ಉದ್ದೇಶಪೂರ್ವಕವಾಗಿ ಏನನ್ನಾದರು ಪಡೆಯಲು ದೇಹ ಮತ್ತು ಮನಸ್ಸನ್ನು ಬಳಸಿಕೊಂಡು ಮಾಡುವ ಯಾವುದೇ ಕ್ರಿಯೆ ‘ಕೆಲಸ’ ‘ದುಡಿಮೆ’ ‘ಶ್ರಮ’ ಅಂತ ಅನಿಸಿಕೊಳ್ಳುತ್ತದೆ. ಇದು ಅತ್ಯಂತ ಮಹತ್ವಪೂರ್ಣವಾದ ಪರಿಕಲ್ಪನೆಯಾಗಿದೆ. ಇಡಿ ಸಮಾಜ, ಆರ್ಥಿಕತೆ ನಿಂತಿರುವುದೇ ಜನರ ದುಡಿಮೆ ಮೇಲೆ. ಸಮಾಜದ ಚುಕ್ಕಾಣಿಯಾಗಿರುವ ಈ ‘ದುಡಿಮೆ’ ‘ಶ್ರಮ’ದ ಪರಿಕಲ್ಪನೆಗಳನ್ನು ಸರಳವಾಗಿ, ಆಳವಾಗಿ ವಿವಿಧ ಆಯಾಮಗಳಲ್ಲಿ ಅರ್ಥಮಾಡಿಕೊಳ್ಳುವುದು ತುಂಬ ಅವಶ್ಯಕ.
       ಇಡಿ ಜಗತ್ತೆ ದುಡಿಮೆ ಮೇಲೆ ನಿಂತಿದೆ.  ಅದು ಕಾಲದಿಮದ ಕಾಲಕ್ಕೆ, ಸಮಾಜದಿಂದ ಸಮಾಜಕ್ಕೆ, ಪ್ರದೇಶದಿಂದ ಪ್ರದೇಶ, ದೇಶದಿಂದ ದೇಶಕ್ಕೆ ಭಿನ್ನವಾಗಿರುವುದು ಕಂಡುಬರುತ್ತದೆ. ಆಯಾ ಪ್ರದೇಶ, ಭೌಗೋಳಿಕ ಪರಿಸ್ಥಿತಿ, ಸಂಪನ್ಮೂಲಗಳ ಲಭ್ಯತೆ, ಜನರ ಸಾಮಥ್ರ್ಯ, ನಂಬಿಕೆ, ಆಡಳಿತ ವ್ಯವಸ್ಥೆಗಳಿಗೆ ಅನುಗುಣವಾಗಿ ದುಡಿಮೆಯು ರೂಪುಗೊಳ್ಳುತ್ತದೆ.
       ವಿವಿಧ ಆಯಾಮಗಳಲ್ಲಿ ಈ ದುಡಿಮೆ/ಶ್ರಮದ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ಮಹಿಳಾ ಅಧ್ಯಯನವನ್ನು ‘ಮಹಿಳಾ ದುಡಿಮೆ’ಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ನನಗೆ ದುಡಿಮೆ ಪರಿಕಲ್ಪನೆ ಬೇರೆ ಬೇರೆ ಆಯಾಮಗಳಲ್ಲಿ ವಿಶೇಷವಾಗಿ ಜಂಡರ್, ಬಡತನ, ಸಾಮಥ್ರ್ಯ, ಸಂಭಾವನೆ, ಗುರುತಿಸುವಿಕೆ ಮನ್ನಣೆ, ಸ್ವರೂಪ, ಸ್ಥಾನ, ಕೊಡುಗೆಗಳ ಹಿನ್ನೆಲೆಯಲ್ಲಿ ತುಂಬಾ ಚಿಂತಿಸುವಂತೆ ಮಾಡುತ್ತದೆ. ಇವುಗಳಲ್ಲಿ ನನ್ನನ್ನು ವಿಶೇಷವಾಗಿ ಕಾಡಿಸುವುದು ಜಂಡರ್ ಮತ್ತು ದುಡಿಮೆಯ ಸ್ವರೂಪ.  ನನ್ನ ದಿನ ನಿತ್ಯ ಜೀವನದಲ್ಲಿ ಸುತ್ತಮುತ್ತಲಿನ ಜನರ ದುಡಿಮೆಯನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುವಂತೆ ಮಾಡುತ್ತದೆ.
       ಪ್ರಸ್ತುತ ಲೇಖನದಲ್ಲಿ ದುಡಿಮೆಯ ಸ್ವರೂಪ ಅದು ಜನರ ಮೇಲೆ ಸಮಾಜದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮ ಕುರಿತು ಚರ್ಚಿಸಲು ಪ್ರಯತ್ನಿಸುತ್ತೇನೆ. ಇದು ಸಂಪೂಣ್ವಾಗಿ ನನ್ನ ವೈಯಕ್ತಿಕ ಅಭಿಪ್ರಾಯ ಹಾಗೂ ವಿಚಾರಧಾರೆ. ದುಡಿಮೆ ಪರಿಕಲ್ಪನೆಯನ್ನು ಸರಳಗೊಳಿಸಿಕೊಳ್ಳಲು ಅದನ್ನು ಎರಡು ಪ್ರಕಾರವಾಗಿ ವಿಂಗಡಿಸಿಕೊಳ್ಳಬಹುದು.
1.   ದೈಹಿಕ ಶ್ರಮ ಮತ್ತು 2. ಭೌದ್ಧಿಕ ಶ್ರಮ/ಕೆಲಸ.
ದೈಹಿಕ ಶ್ರಮವು ದೇಹದ ಅಂಗಾಂಗಳನ್ನು (ಕೈಯಿ, ಬೆರಳು, ಕಾಲು, ಭುಜ, ಬೆನ್ನು, ತಲೆ) ಹೆಚ್ಚಾಗಿ ಬಳಸಿಕೊಂಡು ಮಾಡುವಂತಹ ಕೆಲಸ. ಇದು ಪ್ರಕೃತಿಗೆ ಹತ್ತಿರವಾಗಿ, ವಿವಿಧ ರೀತಿಯ ಸಲಕರಣೆ, ಉಪಕರಣಗಳನ್ನು ಬಳಸಿಕೊಂಡು ಮಾಡುವಂತಹ ಕೆಲಸಗಳಾಗಿರುತ್ತವೆ. ಈ ಕೆಲಸಗಳು ಕಣ್ಣಿಗೆ ಕಾಣುತ್ತವೆ. ಕೆಲಸದ ಪರಿಣಾಮವಾಗಿ ವಸ್ತುಗಳ ಉತ್ಪಾದನೆ ಅಥವಾ ಕಣ್ಣಿಗೆ ಗೊಚರವಾಗುವಂತಹ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಭೌದ್ಧಿಕ ಕೆಲಸಗಳಲ್ಲಿ ಶರೀರದ ಬಳಕೆಗಿಂತ ಮಾನಸಿಕ ಅಂದರೆ ಮೆದುಳನ್ನು ಹೆಚ್ಚಾಗಿ ಬಳಸಿಕೊಂಡು ಮಾಡುವಂತಹ ಕೆಲಸಗಳಾಗಿರುತ್ತವೆ. ಇಲ್ಲಿ ಗ್ರಹಿಕೆ, ಆಲೋಚನೆ ಕ್ರಮ ಮತ್ತು ಶಕ್ತಿ, ನೆನಪಿನ ಶಕ್ತ್ತಿ, ಯೋಚನಾ ಸಾಮಥ್ರ್ಯ, ದೂರದೃಷ್ಟಿ, ತರ್ಕ, ವಿಶ್ಲೇಷಣಾ ಗುಣಗಳು ಮೂಖ್ಯವಾಗುತ್ತವೆ. ದೇಹದ ಅಂಗಾಗಳು ಹೆಚ್ಚು ಕಡಿಮೆ ಸ್ಥಿರತೆಯಲ್ಲಿದ್ದು ಮೆದುಳು ಚುರುಕಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲಿಯೂ ಕೆಲವು ಕೆಲಸಗಳು ದೈಹಿಕ ಮತ್ತು ಭೌದ್ಧಿಕ ಶ್ರಮಗಳೆರಡನ್ನೂ ಬೇಡುತ್ತವೆ. ಉದಾಹರಣೆಗೆ ಶಾಲಾ ಶಿಕ್ಷಕರ ಕೆಲಸಕ್ಕೆ ದೈಹಿಕ ಮತ್ತು ಭೌದ್ಧಿಕ ಶ್ರಮಗಳೆರಡು ಬೇಕಾಗುತ್ತದೆ.
ಎರಡೂ ಪ್ರಕಾರದ ಕೆಲಸಗಳು ಸಮಾಜದ ಆರ್ಥಿಕತೆಯ ಉಳಿವಿಗೆ, ಮುನ್ನಡೆಗೆ ಅಗತ್ಯವಿದ್ದರೂ ಅತ್ಯಂತ ಮುಖ್ಯವಾದದು ದೈಹಿಕ ಶ್ರಮ ಎಂದು ನನ್ನ ಅನಿಸಿಕೆ. ನಮ್ಮ ಉಳಿವಿಗಾಗಿ ಮಾಡಬೇಕಾದಂತಹ ಕೆಲಸಗಳೆಲ್ಲದಕ್ಕೂ ದೈಹಿಕ ಅಂಗಾಂಗಳ ಬಳಕೆ ಅತ್ಯಗತ್ಯ. ಉದಾ: ಆಹಾರ ಬೆಳೆಯಲು, ಸಂಗ್ರಹಿಸಲು, ಆಹಾರವನ್ನು ಬೇಯಿಸಿ ತಿನ್ನಲು, ಇತರ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ದೇಹ ಮುಖ್ಯ. ದೈಹಿಕ ಕೆಲಸಗಳನ್ನು ಮಾಡದಿದ್ದರೆ ಬದುಕಲೇ ಸಾಧ್ಯವಿಲ್ಲ. ಇಷ್ಟು ಮಹತ್ವವುಳ್ಳ ಕೆಲಸಗಳನ್ನು ಹಾಗೂ ಮಾಡುವವರನ್ನು ಸಮಾಜ ಯಾವ ದೃಷ್ಟಿಕೋನದಿಂದ ನೋಡುತ್ತದೆ, ಹೇಗೆ ನಡೆಸಿಕೊಳ್ಳುತ್ತದೆ, ಅವುಗಳಿಗೆ ನೀಡುವ ಮೌಲ್ಯವೆಷ್ಟು ಅನ್ನುವುದನ್ನು ಚಾರಿತ್ರಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಮನೋವೈಜ್ಞಾನಿಕ ನೆಲೆಯಲ್ಲಿ ಅರ್ಥಮಾಡಿಕೊಳ್ಳೋಣ.
ಭಾರತೀಯ ಸಮಾಜದಲ್ಲಿ ದುಡಿಮೆಯನ್ನು ‘ವರ್ಣಾಶ್ರಮ ಧರ್ಮ’ದ ಪರಿಕಲ್ಪನೆಯೊಳಗೆ ವಿವರಿಸಿಕೊಳ್ಳಲಾಗುತ್ತದೆ.  ಸಮಾಜದ ಎಲ್ಲಾ ಕೆಲಸಗಳನ್ನು ಎಲ್ಲರು ಮಾಡಲಗುವುದಿಲ್ಲ. ಕೆಲಸದ ಹಂಚಿಕೆ ಅನಿವಾರ್ಯ. ಅದಕ್ಕೆ ಆಧಾರ ನೀಡುವ ವರ್ಣಾಶ್ರಮ ಧರ್ಮವು ಪ್ರಶ್ನಾರ್ಹವಾಗಿದೆ. ದೇವರ ಶರೀರದ ವಿವಿಧ ಭಾಗಗಳಿಂದ ಹುಟ್ಟಿ ಬಂದ ಜನರು ಎಂಬ ಗುಂಪುಗಳ ವಿಂಗಡಣೆಯ ಪೌರಾಣಿಕತೆಯು  ಅವೈಜ್ಞಾನಿಕವಾಗಿದ್ದು ವಾಸ್ತವಕ್ಕೆ ದೂರವೆನಿಸುತ್ತದೆ. ಯಾವುದೋ ಒಂದು ವರ್ಗ ತನ್ನ ಅನುಕೂಲ ಲಾಭಕ್ಕಾಗಿ ಮಾಡಿಕೊಂಡ ವ್ಯವಸ್ಥೆಯೆಂದು ಸೂಚಿತವಾಗುತ್ತದೆ. ಇದೇ ವರ್ಣಾಶ್ರಮ ವ್ಯವಸ್ಥೆ ಹೆಚ್ಚು ಸಂಕುಚಿತವಾಗಿ ಕಠಿಣವಾಗಿ ಜಾತಿ ಪದ್ದತಿಯಾಗಿ ಮಾರ್ಪಾಡಾಯಿತು. ಇವತ್ತು ಈ ಜಾತಿ ಪದ್ಧತಿ ನಮ್ಮ ದೇಶದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಅಭಿವೃದ್ಧಿಯ ಮೇಲೆ ಅಗಾಧ ಹಿಡತವನ್ನು ಹೊಂದಿ ಪರಿಣಾಮವನ್ನು ಬೀರುತ್ತ್ತಿದೆ. ವರ್ಣಾಶ್ರಮವು ಸಾಮಥ್ರ್ಯನುಸಾರವಾಗಿ ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿದರೂ ಯಾರು ವರ್ಣದಲ್ಲಿ ಹುಟ್ಟುತ್ತಾರೋ ಆ ವರ್ಣದ ವೃತ್ತಿಯನ್ನು ಅನುಸರಿಸಬೇಕೆಂದು ಹೇಳುತ್ತದೆ. ಬುದ್ದಿ ಪರಾಕ್ರಮ ಸಂಪತ್ತು ಮತ್ತು ಪರಿಶ್ರಮಗಳ ಆಧಾರದ ಮೇಲೆ ಗುಂಪು ಮಾಡಲಾಗಿದೆ ಯಾವ ಗುಂಪು ಮೇಲು ಕೀಳಲ್ಲ, ವ್ಯಕ್ತಿಯ ಗುಣ-ಕರ್ಮಗಳಿಗೆ ಅನುಸಾರವಾಗಿ ವಿಭಾಗ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ವರ್ಣಾಶ್ರಮ ವ್ಯವಸ್ಥೆಯೆ ಜಾತಿ ಪದ್ದತಿಯಾಗಿ ಪರಿರ್ವನೆಗೋಡಿರುವ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಆದರೆ ಜಾತಿ ಪದ್ದತಿಯಲ್ಲಿ ಒಮ್ಮೆ ಒಬ್ಬ ವ್ಯಕ್ತಿ ಒಂದು ಜಾತಿಯಲ್ಲಿ ಹುಟ್ಟಿದ ನಂತರ ಬೇರೆ ಜಾತಿಗೆ ಹೋಗಲು, ಸೇರಲು ಸಾಧ್ಯವಿಲ್ಲ ಎಂದು ಹೇಳಿದಾಗ ಅದು ಜಾತಿಯ ವೃತಿಗೂ ಅನ್ವಯಿಸಿ ಸಾಮಥ್ರ್ಯಕ್ಕನುಗುಣಕ್ಕಿಂತ ಹುಟ್ಟಿನ ಆಧಾರದ ಮೇಲೆಯೇ ಕೆಲಸಗಳು ಹಂಚಿಕೆಯಾಗುವಂತಾಯಿತು. ಜಾತಿ ಅಥವಾ ಹುಟ್ಟು ಅಥವಾ ಸಾಮಥ್ರ್ಯ ಅಥವಾ ಸಮಾಜದ ಅವಶ್ಯಕತೆಗೆ ತಕ್ಕಂತೆ ಕೆಲಸಗಳ ಹಂಚಿಕೆಯಾಗಲಿ, ಆದರೆ ಕೆಲಸಗಳಿಗೆ ನೀಡುವ ಮಾನ್ಯತೆ, ಸಂಭಾವನೆ, ನೋಡುವ ದೃಷ್ಟಿಕೋನ ವಿಭಿನ್ನವಾಗಿದ್ದು ಶ್ರೇಣಿಕೃತದಿಂದ ಕೂಡಿದೆ. ಬಹುಶಃ ಇದೇ ಮುಂದಿನ ಎಲ್ಲಾ ಸಮಸ್ಯೆಗಳಿಗೆ ಮೂಲವೆಂದು ನನ್ನ ಭಾವನೆ. ಕೆಲವು ಕೆಲಸಗಳನ್ನು ಶ್ರೇಷ್ಠವೆಂದು, ಮೌಲ್ಯವುಳ್ಳದೆಂದು ಪರಿಗಣಿಸಿ ಅವುಗಳಿಗೆ ಹೆಚ್ಚಿನ  ಮನ್ನಣೆ ಸಂಭಾವನೆ ನೀಡಲಾಗುತ್ತದೆ. ಸಹಜವಾಗಿ ಆಯಾ ಕೆಲಸ ಮಾಡುವ ವ್ಯಕ್ತಿಯ ಸ್ಥಾನ, ಘನತೆ, ಅನುಕೂಲ, ಲಾಭಗಳೂ ವ್ಯತ್ಯಾಸವಾಗಿ ಇಡೀ ಸಮಾಜವು ಅಸಮಾನತೆಯಿಂದೂ ರೂಪುಗೊಳ್ಳುವಂತೆ ಮಾಡುತ್ತದೆ.
ಈ ವರ್ಣಾಶ್ರಮ, ಜಾತಿ ಹಾಗೂ ಕೆಲಸಗಳ ಹಂಚಿಕೆ ವ್ಯವಸ್ಥೆಯು ಭಾರತದ ಇತಿಹಾದಲ್ಲಿ ರಾಜಾಡಳಿತ, ಉಳಿಗಮಾನ್ಯ, ಜಮೀನ್ದಾರಿ ಹಾಗೂ ಬ್ರಿಟೀಷರ ಆಡಳಿತದಲ್ಲಿ ಮುಂದುವರೆಯಿತು. ಕೈಗಾರಿಕರಣ, ನಗರೀಕರಣ, ತಂತ್ರಜ್ಞಾನ ಬೆಳವಣಿಗೆ ಹಾಗೂ ಆಧುನೀಕರಣದ ಸಂದರ್ಭಗಳಲ್ಲಿ ಕೆಲಸಗಳು ವಿವಿಧ ಸ್ವರೂಪಗಳನ್ನು ಪಡೆದವು. ಅದೆಷ್ಟೆ ಮುಂದುವರೆದರೂ ದೈಹಿಕ ಶ್ರಮದ ಸ್ವರೂಪದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಯಂತ್ರೋಪಕರಣಗಳು ಬಂದರೂ ಕೆಲವು ಕೆಲಸ ಮಾಡುವ ಜನರ ಗುಂಪಿನಲ್ಲಿ ವ್ಯತ್ಯಾಸಗಳಾಗಿಲ್ಲ. ಅದರಲ್ಲಿ ತೊಡುಗುವ ಜನರ ಸಂಖ್ಯೆ ಹೆಚ್ಚಾಗುತ್ತನೆ ಇದೆ. ಭೌದ್ಧಿಕ ಶ್ರಮಗಳು ಅತಿ ವೇಗವಾಗಿ ಬದಲಾವಣೆ ಹೊಂದುತ್ತಿದ್ದು, ಅದರಲ್ಲಿ ತೊಡಗುವ ಜನರ ಸಂಖ್ಯೆ ಅಧಿಕ ಪ್ರಮಾಣದಲ್ಲಿ ಹೆಚ್ಚಾಗುತ್ತಿಲ್ಲ. ಕೆಲವು ಗುಂಪಿನ ಜನರಿಗೆ ಸೀಮಿತವಾಗಿದೆ.
ವರ್ಣಾಶ್ರಮ ಧರ್ಮವನ್ನು ವಿರೋಧಿಸಿದ ಗೌತಮ ಬುದ್ದ ಸಾಮನ್ಯ ಜನರು ಬದುಕಿನ ಅವಶ್ಯಕವಾದ ಕೆಲಸಗಳನ್ನು ಮಾಡಬೇಕೆಂದು ಹೇಳುತ್ತಾ ತತ್ವಶಾಸ್ತ್ರ, ಮಾನವೀಯತೆ ಹಾಗೂ ಆಧ್ಯಾತ್ಮಿಕ ಅಂಶಗಳಿಗೆ ಹೆಚ್ಚು ಒತ್ತು ನೀಡಿದ ಬೌದ್ಧ ಭಿಕ್ಷುಗಳಿಗೂ ಅಗತ್ಯವಾದಷ್ಟು ಆಹಾರವನ್ನು ಭಿಕ್ಷೆ ಬೇಡಿ ಆಹಾರ ಸಂಗ್ರಹಿಸಿ ಸರಳಜೀವನ ನಡೆಸಬೇಕು. ಧರ್ಮ ಪ್ರಚಾರದಂತಹ ಕಾರ್ಯಗಳಲ್ಲಿ ತೊಡಗಬೇಕೆಂದು ಉಪದೇಶಿಸಿ ಪರೋಕ್ಷವಾಗಿ ದುಡಿಮೆಯನ್ನು ಸಮಾನತೆಯ ನೆಲೆಯಲ್ಲೆ ನೋಡಿದ, ಎಲ್ಲೂ ತಾರತಮ್ಯ ತೋರಲಿಲ್ಲ.
ಇತಿಹಾಸದಲ್ಲಿ ಮೊಟ್ಟ ಮೊದಲಿಗೆ ದೈಹಿಕ ದುಡಿಮೆಗೆ ಮನ್ನಣೆ, ಗುರುತಿಸುವಿಕೆ ತಂದು ಕೊಟ್ಟವನು ಬಸವಣ್ನ. ‘ಕಾಯಕವೇ ಕೈಲಾಸ’, ‘ಪ್ರತಿಯೊಬ್ಬರು ದುಡಿದು ಬದುಕಬೇಕು’, ‘ಬದುಕಲು ಅವಶ್ಯವಿರುವಷ್ಟು  ಮಾತ್ರ ಸಂಭಾವನೆ ಪಡೆಯಬೇಕು ಅದನ್ನು ಹಂಚಿಕೊಂಡು ತಿನ್ನಬೇಕೆಂಬ’ ತತ್ವಗಳನ್ನು ಪ್ರತಿಪಾದಿಸಿ ದೈಹಿಕ ಶ್ರಮದ ಮೌಲ್ಯವನ್ನು ಎತ್ತಿಹಿಡಿದ. ಆದರೆ ಮಧ್ಯ ಯುಗದಲ್ಲಿ ಮುಂದುವರೆದ ರಾಜಾಡಳಿತ, ಊಳಿಗಮಾನ್ಯ ಪದ್ಧತಿ ದುಡಿಮೆಯ ಶ್ರೇಣೀಕೃತ ಸ್ವರೂಪವನ್ನು ಮತ್ತೆ ಸ್ಥಾಪಿಸಿತು. ಭಕ್ತಿ ಪರಂಪರೆಯ ವಿಚಾರಧಾರೆಯು ಜನರ ನಡುವೆ, ದೇವರ ಭಕ್ತರ ನಡುವೆ, ದುಡಿಮೆ ಸ್ಥಾನ, ಅಂತಸ್ತುಗಳ ನಡುವೆ ಸಮಾನತೆಯ ತತ್ವನ್ನು ಸಾರುವುದರ ಮೂಲಕ ದೈಹಿಕ ಶ್ರಮದ ಮಹತ್ವವನ್ನು ಎತ್ತಿ ಹಿಡಿಯಿತು.
ಚಟುವಟಿಕೆಗಳು ನಮ್ಮ ಮಾನಸಿಕ ಸ್ಥಿತಿ ಹಾಗೂ ವ್ಯಕ್ತಿತ್ವವನ್ನು ರೂಪಿಸುತ್ತದೆ. ದುಡಿಮೆಯಿಲ್ಲದ ಆದಾಯ ಸಂಪತ್ತಿನ ಸಂಗ್ರಹ ಪಾಪ ಹಾಗು ಸ್ವಾವಲಂಬನೆ ತತ್ವ ಜೀವನದ ಗುರಿ ಎಂದು ಹೇಳುವುದರ ಮೂಲಕ ಗಾಂಧೀಜಿಯವರು ದೈಹಿಕ ಶ್ರಮದ ಮಹತ್ವವನ್ನು ಪ್ರತಿಪಾದಿಸಿದರು. ಬ್ರಿಟೀಷರು ಆಡಳಿತದಲ್ಲಿ ಆರ್ಥಿಕತೆಯ ಬೆಳವಣಿಗೆ, ಅದರ ಸ್ವರೂಪದಲ್ಲಿನ ಬದಲಾವಣೆ, ಪಾಶ್ಚಿಮಾತ್ಯಕರಣ, ಕೈಗಾರೀಕರಣ, ತಂತ್ರಜ್ಞಾನಗಳ ಆವಿಷ್ಕಾರ ದೈಹಿಕ ಮತ್ತು ಬೌದ್ಧಿಕ ಶ್ರಮ ವಿಭಜನೆಯನ್ನು ವಿಸ್ತಾರಗೊಳಿಸಿತು. ಈ ಅವಧಿಯಲ್ಲಿ ಸೇವಾ ವಲಯ ಹುಟ್ಟಿಕೊಂಡು ದೈಹಿಕ ಶ್ರಮ ಮತ್ತು ಬೌದ್ಧಿಕ ಶ್ರಮಗಳ ಅಂತರವನ್ನು ಹೆಚ್ಚಿಸಿತು. ಆದರೂ ಆಡಳಿತ ಮತ್ತು ಜನರ ಜೀವನ ಸುಧಾರಣೆಯ ದೃಷ್ಟಿಯಿಂದ ದುಡಿಮೆ ಪರಿಕಲ್ಪನೆಯನ್ನಾಗಿ ರೂಪಿಸಲು ವೈಜ್ಞಾನಿಕವಾಗಿ ಆರ್ಥಿಕ ಮತ್ತು ಅಬಿವೃದ್ಧಿ ದೃಷ್ಟಿಯಿಂದ ಅಳೆಯಲು ಪ್ರಂiÀತ್ನಿಸಿತು. ಹೀಗೆ ಮಾಪನ ಮಾಡುವ ಸಂದರ್ಭದಲ್ಲೆ ದೈಹಿಕ ಮತ್ತು ಬೌದ್ಧಿಕ ಶ್ರಮದ ವಿಭಜನೆ ಖಚಿತತೆಯನ್ನು ಪಡೆದುಕೊಂಡಿತು.
ಕೆಲಸದ ಸ್ವರೂಪಕ್ಕೆ ತಕ್ಕಂತೆ ವಿಭಜನೆ ಮಾಡುವುದರಲ್ಲಿ ತಪ್ಪಿಲ್ಲ. ವಿಭಜಿಸಿದ ನಂತರ ಅವುಗಳ್ನನು ಮೌಲ್ಯೀಕರಿಸುವುದರಲ್ಲಿ ತಾರತಮ್ಯ ತೋರುವುದು ತಪ್ಪು. ದೈಹಿಕ ಮತ್ತು ಬೌದ್ಧಿಕ ಶ್ರಮಗಳ ನಡುವಿನ ಭಿನ್ನತೆಗಳನ್ನು ಒಪ್ಪಿಕೊಂಡರೂ ಅವುಗಳ ಮಹತ್ವವನ್ನು ಪರಿಗಣಿಸಿ ಆದಷ್ಟು ತಾರತಮ್ಯವನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು.
ಯಾವ ಹಂತದಲ್ಲಿ, ಏಕೆ ದೈಹಿಕ ಶ್ರಮದ ಕೆಲಸಗಳು ಬೌದ್ಧಿಕ ಕೆಲಸಗಳಿಗಿಂತ ಕೀಳಾಗಿಸಲ್ಪಟ್ಟಿತು. ಬೌದ್ಧಿಕ ಕೆಲಸಗಳು ಏಕೆ ಶ್ರೇಷ್ಠವೆನಿಸಿಕೊಂಡು ಹೆಚ್ಚು ಮನ್ನಣೆ, ಸಂಭಾವನೆ ಪಡೆಯುವಂತಾಯಿತು? ಆರ್ಥಿಕ ಹಿನ್ನೆಲೆಯಲ್ಲಿ ನೋಡಿದರೆ ವಸ್ತು ವಿನಿಮಯ, ಸ್ವಾವಲಂಬಿ, ಸರಳ ಬದುಕು, ಕೃಷಿ ಸಮಾಜ, ಹಣದ ಬಳಕೆಗೂ ಮುನ್ನ ಬಹುಶಃ ಕೆಲಸಗಳ ನಡುವೆ ವ್ಯತ್ಯಾಸವಿರಲಿಕ್ಕಿಲ್ಲ. ಜನಸಂಖ್ಯೆ ಏರಿಕೆ,  ಅವಶ್ಯಕತೆ  ಗೆ ತಕ್ಕಂತೆ ಉತ್ಪಾದನೆ ಜಾಸ್ತಿಯಾಗಿ, ಹಣದ ಬಳಕೆ, ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆ, ಕೈಗಾರಿಕರಣಗಳು ಕೆಲಸದ ಪ್ರಕಾರ, ಸ್ವರೂಪವನ್ನು ಬದಲಾಯಿಸಿದವು. ದುಡಿಮೆಗಳ ಮೌಲ್ಯ ಮಾಪನ,    ಗುರುತಿಸುವಿಕೆ, ಸಂಭಾವನೆ ನಿಗದಿ ಮಾಡುವುದರಲ್ಲಿ, ಗೌರವ ಮನ್ನಣೆ ನೀಡುವುದರಲ್ಲಿ ತಾರತಮ್ಯ ಮೂಡಿಬಂದವು. ದೈಹಿಕ ಶ್ರ ಮತ್ತು ಭೌಧ್ದಿಕ ಶ್ರಮ ವೆಂಬ ಎರಡು ಪ್ರಕಾರದ ವಿಭಾಗಗಳು ಹುಟ್ಟಿಕೊಡವು.
 ದೈಹಿಕ ಶ್ರಮದ ಲಕ್ಷಣವೆಂದರೆ ಇದನ್ನು ಮಾಡುವವರ ಸಂಖ್ಯೆ ಹೆಚ್ಚು, ಅವಲಂಬಿಸುವವರ (ಗ್ರಾಹಕರು) ಪ್ರಮಾಣವು ಹೆಚ್ಚು. ಆದರೆ ಬೌದ್ಧಿಕ ಕೆಲಸಗಳನ್ನು ಮಾಡುವವರ ಸಂಖ್ಯೆ ತುಂಬ  ಕಡಿಮೆ, ಅದರ ಉಪಯೋಗ (ಗ್ರಾಹಕರು) ಪಡೆಯುವವರ ಸಂಖ್ಯೆಯೂ ಕಡಿಮೆ.                                                    

ದೈಹಿಕ ಶ್ರಮದಲ್ಲಿ ಕೆಲಸ ಮಾಡುವವರ ಸಂಖ್ಯೆ ಅತ್ಯಧಿಕವಾಗಿರುವುದನ್ನು ಅಗಲವಾದ ತಳಯಿರುವುದು ಸೂಚಿಸುತ್ತದೆ. ಇಲ್ಲಿ ಸ್ವ ಉದ್ಯೋಗದಲ್ಲಿ ತೊಡಗಿರುವವರು, ಕೂಲಿಕಾರ್ಮಿಕರು, ಮನೆಗೆಲಸ ಮಡುವವರು, ಗೃಹಕೃತ್ಯಗಳು ಸೇರಿದಂತೆ ಅಸಂಘಟಿತ ವಲಯದ ಎಲ್ಲಾ ದುಡಿಮೆಗಳು ಸೇರಿವೆ. ಕೆಲವು ಕೆಲಸಗಳಲ್ಲಿ ದೈಹಿಕ ಮತ್ತು ಬೌದ್ಧಿಕ ಕೆಲಸಗಳೆರಡೂ ಸೇರಿರುತ್ತವೆ. ಬೌದ್ಧಿಕ ಕೆಲಸಗಾರರ ಸಂಖ್ಯೆ ಕಡಿಮೆಯಿದ್ದು ಸಂಘಟಿತ ವಲಯದಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಸಾಮಾನ್ಯವಾಗಿ ಆರ್ಥಿಕತೆಯನ್ನು ವಿಂಗಡಿಸುವ ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳೆಲ್ಲದರಲ್ಲಿ ಎರಡು ಪ್ರಕಾರದ ಕೆಲಸಗಳು ನಡೆಯುತ್ತವೆ. ಕೃಷಿಯಲ್ಲಿ ದೈಹಿಕ ಶ್ರಮದ ಕೆಲಸ ಹೆಚ್ಚಾಗಿದ್ದರೂ, ಕೃಷಿಕಗೆ ಸಂಬಂಧಿಸಿದ ಸಂಶೋಧನೆ, ಬೋಧನೆ, ಜ್ಞಾನ, ಮಾಹಿತಿ ವರ್ಧನೆಯ ಕೇಂದ್ರವಾದ ವಿಶ್ವವಿದ್ಯಾಲಯ ಅಥವಾ ಸರ್ಕಾರ ಸಂಸ್ಥೆಗಳು ಬೌದ್ಧಿಕ ಶ್ರಮಾಧಾರಿತವಾಗಿರುತ್ತವೆ.
ಕೈಗಾರಿಕೆಯಲ್ಲಿ ಬಂಡವಾಳ ಹೂಡುವಿಕೆ, ಜಮೀನು ಹೊಂದುವಿಕೆ, ಸಂಘಟನಾ ಕಾರ್ಯಗಳು ಬೌದ್ಧಿಕ ಶ್ರಮವೆನಿಸಿದರೆ ವಸ್ತುಗಳ ಉತ್ಪಾದನೆಯು ದೈಹಿಕ ಶ್ರಮವಾಗಿರುತ್ತದೆ. ಸೇವಾ ವಲಯದಲ್ಲಿ ಹೆಚ್ಚಾಗಿ ಬೌದ್ಧಿಕ ಶ್ರಮವನ್ನು ಆಧರಿಸಿಯೇ ನಡೆಯುತ್ತಿರುತ್ತದೆ. ಇನ್ನು ವಿವಿಧ ಕೆಲಸಗಳಿಗೆ ಸಂಭಾವನೆ ಅಥವಾ ವೇತನ ನಿಗದಿಪಡಿಸುವ ಪ್ರಕ್ರಿಯೆಯನ್ನು ಗಮನಿಸಿದರೆ, ನಿಗದಿಪಡಿಸುವ ಅಧಿಕಾರ ಸರ್ಕಾರ, ಬಂಡವಾಳ ಹೂಡುವವರು ಮತ್ತು ಜಮೀನುದಾರರ ಕೈಯಲ್ಲಿ ಇರುತ್ತದೆ. ಸರ್ಕಾರ ಸಂವಿಧಾನದ ತತ್ವ ,ಸವಲತ್ತು ಆಶೋತ್ತರಗಳನ್ನು ಆಧರಿಸಿ ವೇತನವನ್ನು ನಿಗದಿಪಡಿಸಬೇಕು. ಅಸಮಾನತೆಯನ್ನು  ಹೋಗಲಾಡಿಸುವ, ಸಮಾನತೆಯನ್ನು ಎತ್ತಿ ಹಿಡಿಯುವ ತತ್ವಗಳು ಸಂವಿಧಾನದಲ್ಲಿವೆ. ಅದರ ಜೊತೆಯಲ್ಲೆ ಕೆಲಸಕ್ಕೆ ತಕ್ಕಂತೆ ವೇತನ, ಸಮಾನ ಕೆಲಸಕ್ಕೆ ಸಮಾನ ವೇತನದ ಸವಲತ್ತುಗಳೂ ಇವೆ. ಆದರೆ ಕೆಲಸಕ್ಕೆ ತಕ್ಕಂತೆ ಮತ್ತು ಸಮಾನ ಕೆಲಸವನ್ನು ಅಳೆಯುವವರು ಯಾರು ? ಹೇಗೆ ಅಳೆಯುತ್ತಾರೆ? ಸಹಜವೋ? ಉದ್ದೇಶ ಪೂರ್ವಕವೋ? ಈ ಸ್ಥಾನದಲ್ಲಿರುವವರು ಕೆಲವೇ ವರ್ಗದವರು. ಅವರೂ ಬೌದ್ಧಿಕ ಕೆಲಸಗಳಲ್ಲಿ ತೊಡಗಿರುವಂತವರು. ಸಂವಿಧಾವನ್ನು ಆಧರಿಸಿದ್ದರೂ ಬೇರೆ ಬೇರೆ ಕಾರಣ/ಸಕಾರಣ/ತರ್ಕಬದ್ಧ/ ತರ್ಕರಹಿವಾಗೋ ದೈಹಿಕ ಮತ್ತು ಭೌದ್ಧಿಕ ಕೆಲಸಗಳ ಸಂಭಾವನೆ ಅಥವಾ ವೇತನದ ವ್ಯತ್ಯಾಸವಿರುವುದು ಕಂಡುಬರುತ್ತದೆ. ವ್ಯತ್ಯಾಸವಿದ್ದರೂ ತರ್ಕಬದ್ದವಾಗಿದ್ದರೆ, ವೈಜ್ಞಾನಿಕವಾಗಿದ್ದರೆ ಒಪ್ಪಿಕೊಳ್ಳಬಹುದು. ಇಲ್ಲಿ ಬರುವ ಸಮಸ್ಯೆ ಎರಡರ ನಡುವಿನ ವ್ಯತ್ಯಾಸ ಅಂತರ ಎಷ್ಟಿದೆ ಅನ್ನುವುದು, ಯಾಕಿದೆ ಅನ್ನುವುದು, ಅಂತರವನ್ನು ಸೃಷ್ಟಿಸುವವರು ಯಾರು? ಅನ್ನುವುದು.
ನನ್ನ ಅನಿಸಿಕೆ ಏನೆಂದರೆ ನಮ್ಮಲ್ಲಿ ಆದಾಯ ಮತ್ತು ಸಂಪತ್ತಿನ ಹಂಚಿಕೆಯಲ್ಲಿ ಕಂಡುಬರುವ ಅಗಾಧವಾದ ಅಂತರಕ್ಕೆ ದೈಹಿಕ ಮತ್ತು ಭೌದ್ಧಿಕ ಶ್ರಮವನ್ನು ಅಳೆಯುವಲ್ಲಿ, ಮೌಲ್ಯೀಕರಿಸಿ ಸಂಭಾವನೆ ನಿಗದಿ ಮಾಡುವುದರಲ್ಲಿ ತೋರುವ ತಾರತಮ್ಯವೇ ಕಾರಣ. ಮಿದುಳಿನ ಶಕ್ತಿಯ ಬುದ್ದಿಯನ್ನು ಹೆಚ್ಚಾಗಿ ಬಳಸಿ ಮಾಡುವ ಕೆಲಸಗಳು ಶ್ರೇಷ್ಠ, ಇವುಗಳನ್ನು ಹೊಂದಿರುವವರ ಸಂಖ್ಯೆ ಕಡಿಮೆ. ಸಮಾಜಕ್ಕೆ ಇವರ ಕೊಡುಗೆ ತುಂಬಾ ಮುಖ್ಯ. ಇವರಿಂದಲೆ ಸಮಾಜ ನಡೆಯುವುದು ಎಂಬ ಸುಳ್ಳು ನಂಬಿಕೆಯನ್ನು ಬೆಳೆಸಲಾಗಿದೆ. ವಾಸ್ತವದಲ್ಲಿ ಸಮಾಜ, ಅದರ ಉಳಿವು ಅಳಿವು ನಿಂತಿರುವುದೇ ದೈಹಿಕ ಶ್ರಮದ ಮೇಲೆ ಮನೆಯ ಕೆಲಸಗಳಿಂದ ಹಿಡಿದು ಹೊರಗಿನ ಅಂದರೆ ಸಾರ್ವಜನಿಕ ಕೆಲಸಗಳಲ್ಲಿ ಬಹುಪಾಲು ಪಡೆಯುವುದು ದೈಹಿಕ ಕೆಲಸಗಳು. ಪುರಸಭೆ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಂದ ಹಿಡಿದು ಗ್ರಾಮದ ನಗರದ ಮೂಲಕಾರ್ಯ ಹಾಗೂ ಮೂಲಸೌಕರ್ಯಗಳ ಕೆಲಸಗಳೆಲ್ಲವು ದೈಹಿಕ ಶ್ರಮದಿಂದ ಮಾಡುವಂತವು. ಒಂದು ದಿನ ಮನೆಯ ಮತ್ತು ಹೊರಗಿನ ದೈಹಿಕ ಶ್ರಮದ ಕೆಲಸಗಳು ನಿಂತು ಹೋದರೆ ಕಲ್ಪನೆಯನ್ನು ಮಾಡಿಕೊಳ್ಳಲಾಗುವುದಿಲ್ಲ. ಮನೆಯಲ್ಲಿ ಅಡುಗೆ ಮಾಡದಿದ್ದರೆ, ಪಾತ್ರೆ ಬಟ್ಟೆ ತೊಳೆಯದಿದ್ದರೆ, ಕಸಗುಡಿಸದಿದ್ದರೆ ನಡೆಯುವುದಿಲ್ಲ. ಆಫೀಸಿನಲ್ಲಿ ಸ್ವಬಾಗಿಲು ತೆಗೆಯುವುದರಿಂದ ಹಿಡಿದು ಸ್ವಚ್ಛ ಮಾಡುವ, ಕಡತಗಳನ್ನು ಕೊಂಡೊಯ್ಯುವ, ಕಾಫಿ ತಿಂಡಿ ತಂದು ಕೊಡುವ ಕೆಲಸಗಳು ದಿನನಿತ್ಯ ನಡೆಯಲೆ ಬೇಕು. ಆದರೆ ಸಭೆ ನಡೆಸಯವ, ಫೈಲ್ ನಿರ್ವಹಣೆ, ಲೆಕ್ಕಚಾರಗಳು, ಆಡಳಿತ ನಿರ್ವಹಣೆ, ಆದೇಶ ನೀಡುವಂತಹ ಕೆಲಸಗಳನ್ನು ಮಾಡದೆ ಮುಂದೆ ಹಾಕಿದರೂ ವ್ಯತ್ಯಾಸ ಕಂಡುಬರುವುದಿಲ್ಲ. ಒಂದೆರಡು ದಿನ ಸೇವಾಧರಿತ ಅಥವಾ ಬೌದ್ಧಿಕ ಕೆಲಸಗಳು ನಡೆಯದಿದ್ದರೂ ಸಮಾಜ ಮುಳುಗಿಹೋಗುವುದಿಲ್ಲ. ಶಾಲಾ ಕಾಲೇಜುಗಳಿಗೆ, ಕಛೇರಿಗಳಿಗೆ ಸೇವಾ ಸಂಸ್ಥೆಗಳಿಗೆ ಏನೊ ಕಾರಣದಿಂದ ರಜೆ ಘೋಷಿಸಿದರೆ  ತುಂಬ ವ್ಯತ್ಯಾಸವಾಗುವುದಿಲ್ಲ. ಬೌದ್ಧಿಕ ಕೆಲಗಳನ್ನು ಮುಂದೂಡಬಹುದು. ಆದರೆ ದೈಹಿಕ ಶ್ರಮದ ಕೆಲಸಗಳನ್ನು ಮುಂದೂಡಲಾಗುವುದಿಲ್ಲ.
ನಾನು ಗಮನಿಸಿದಂತೆ ದೈಹಿಕ ಶ್ರಮದ ಕೆಲಸಗಳು ಸಮರ್ಪಕವಾಗಿ ನಡೆದುಕೊಂಡು ಹೋಗುತ್ತಿರುವವರೆಗೆ ಸಮಸ್ಯೆಯಿರುವುದಿಲ್ಲ. ದೈಹಿಕ ಶ್ರಮಿಕರು ಕೆಲಸ ನಿಲ್ಲಿಸಿದರೆ ಆರ್ಥಿಕತೆ ಅಲ್ಲೋಲಕಲ್ಲೋಲವಾಗುತ್ತದೆ. ಇಷ್ಟು ಮಹತ್ವದಿಂದ ಕೂಡಿದ್ದರೂ ಈ ಕೆಲಸಗಳನ್ನು ಕೀಳಾಗಿ ನೋಡುವುದು, ಕಡಿಮೆ ವೇತನ ನೀಡುವುದನ್ನು ನೋಡಿದರೆ ಆಶ್ಚರ್ಯ ಮತ್ತು ವಿಷಾದನೀಯವೆನಿಸುತ್ತದೆ.
ಒಟ್ಟಿನಲ್ಲಿ ನಾನಿಲ್ಲಿ ಹೇಳಲಿಕ್ಕೆ ಹೊರಟಿರುವುದು, ಯಾವುದೇ ಸಮಾಜ ಸುಲಲಿತವಾಗಿ ನಡೆದುಕೊಂಡು ಹೋಗಲು ದೈಹಿಕ ಶ್ರಮ ಮತ್ತು ಬೌದ್ಧಿಕ ಶ್ರಮ ಎರಡು ಅವಶ್ಯಕವಿದ್ದರೂ ದೈಹಿಕ ಶ್ರಮದ ಅಗತ್ಯ ಹೆಚ್ಚಿದೆ. ಆದುದರಿಂದ ಎರಡಕ್ಕೂ ಸಮಾನ ಗೌರವ ದೊರಕಬೇಕು. ಅವುಗಳಿಗೆ ನಿಗದಿ ಮಾಡುವ ವೇತನದಲ್ಲಿ ತುಂಬಾ ವ್ಯತ್ಯಾಸ ಅಥವಾ ಅಂತರವಿರಬಾರದು. ಅಭಿವೃದ್ಧಿ ದೇಶಗಳ ಅಭಿವೃದ್ಧಿಗೆ ಮುಖ್ಯವಾದ ಕಾರಣ ಅಲ್ಲಿ ಶ್ರಮದ ಘನತೆಯನ್ನು ಎತ್ತಿ ಹಿಡಿಯಲಾಗುತ್ತದೆ. ಅಂದರೆ ದೈಹಿಕ ಶ್ರಮದ ಕೆಲಸಗಳಿಗೂ ಉತ್ತಮ ಸಂಭಾವನೆ ನೀಡಲಾಗುತ್ತದೆ. ಇದರಿಂದ ಕೆಲಸಗಳಲ್ಲಿ ಉತ್ತಮ ಗುಣಮಟ್ಟವನ್ನು ಕಾಣಬಹುದು. ಉನ್ನತ ಹುದ್ದೆಗಳಿಗೆ ಅತಿಯಾದ ಮನ್ನಣೆ, ಅತಿ ಹೆಚ್ಚಿನ ವೇತನ ನಿಗದಿಪಡಿಸುವುದು, ಕೆಳಸ್ತರದ ಹುದ್ದೆಗಳಿಗೆ (ಇವು ಹೆಚ್ಚಾಗಿ ದೈಹಿಕ ಶ್ರಮದಿಂದ ಕೂಡಿರುತ್ತವೆ) ಅತಿ ಕಡಿಮೆ/ಹೆಚ್ಚು ಅಂತರದಲ್ಲಿ ವೇತನ ನಿಗದಿಪಡಿಸುವುದರಿಂದ ವರ್ಗಗಳ ನಡುವೆ ಅಂತರ ಹೆಚ್ಚಾಗುತ್ತದೆ. ನಮ್ಮ ಕಾರ್ಯನೀತಿ ಸಂವಿಧಾನದ ಸವಲತ್ತುಗಳೆ ಅಂತರವನ್ನು ಸೃಷ್ಠಿಮಾಡುವಂತಿದ್ದರೆ, ಸಂಪತ್ತು ಆದಾಯ ಸಂಗ್ರಹಣೆ, ಅಸಮಾನ ಹಂಚಿಕೆಯನ್ನು ತಡೆಯಲು ಹೇಗೆ ಸಾಧ್ಯ? (ಉದಾ: ಸರ್ಕಾರಿ ವಲಯದಲ್ಲೆ ಉನ್ನತ ಹುದ್ದೆಗಳ ವೇತನಕ್ಕೂ, ತಾತ್ಕಾಲಿಕ, ದಿನಗೂಲಿ ನೌಕರರ ವೇತನದಲ್ಲಿ ಅಗಾಧವಾದ ಅಂತವಿದೆ. ಅಲ್ಲದೆ ಕನಿಷ್ಟ ವೇತನ ನಿಗದಿಪಡಿಸಿರುವಲ್ಲಿಯೂ ಸಾಕಷ್ಟು ಅಂತರವನ್ನು ಕಾಪಾಡಿಕೊಂಡು ಬಂದಿರುವುದನ್ನು ಕಾಣುತ್ತೇವೆ).
ಇದಕ್ಕೊಂದೇ ದಾರಿ. ದೈಹಿಕ ಮತ್ತು ಬೌದ್ಧಿಕ ಶ್ರಮದ ಮೌಲೀಕರಣದಲ್ಲಿ ಸುಧಾರಣೆಯಾಗಿ ಅವುಗಳ ನಡುವಿನ ಘನತೆ, ಸಂಭಾವನೆ ನೀಡುವುದರಲ್ಲಿ ಸಂಪೂರ್ಣ ಸಮಾನತೆ ತರಲಾಗದಿದ್ದರೂ ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯನೀತಿಗಳು ರೂಪುಗೊಳ್ಳಬೇಕು. ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ವಿಶೇಷ ಗಮನ ನೀಡಿ ಸಂವಿಧಾನದ ಆಶೋತ್ತರಗಳಿಗೆ ಅನುಗುಣವಾಗಿ ಸಂಘಟಿತ ವಲಯದ ಸವಲತ್ತುಗಳು ಅವರಿಗೂ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ನಡೆಯುತ್ತಿದ್ದರೂ ರಾಜಕೀಯ, ಅಧಿಕಾರಶಾಹಿಯ ರಾಜಕಾರಣದಿಂದ ಎಲ್ಲವೂ ಅನುಷ್ಠಾನಗೊಳ್ಳುತ್ತಿಲ್ಲ. ಶ್ರಮಿಕ ವರ್ಗದವರ ಸಂಘಟನೆ, ಹೋರಾಟದಿಂದ ಈ ಸುಧಾರಣೆಯನ್ನು ನಿರೀಕ್ಷಿಸೋಣ ಎಂದರೆ ಖಾಸಗೀಕರಣದ ಕಾರ್ಯನೀತಿಯು ಜನರು ಸಂಘಟಿತರಾಗುವುದನ್ನು ತಡೆಯುತ್ತದೆ. ಜೊತೆಗೆ ಜನರ ಮನಸ್ಸನ್ನು ಧರ್ಮ, ಕೋಮುವಾದ, ಮೂಢನಂಬಿಕೆ, ಅಂತರ್‍ಜಾಲ, ಮೊಬೈಲ್, ಸಿನಿಮಾ, ಟಿ.ವಿ ಕಾರ್ಯಕ್ರಮಗಳು, ಜೀವನವನ್ನು ಎಂಜಾಯ್ ಮಾಡಬೇಕು ಎಂಬ ಮನೋಭಾವ, ಶ್ರೀಮಂತಿಕೆಯ ಪ್ರದರ್ಶನಗಳು ಜನರನ್ನು ದಿಕ್ಕುತಪ್ಪಿಸಿ ತಮ್ಮ ಬೇಡಿಕೆಗಳಿಗೆ ಹೋರಾಡದಂತೆ ಮಾಡುತ್ತಿವೆ. ಇದರ ನಡುವೆಯು ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತಾ ಜನರನ್ನು ಸಂಘಟಿಸಲು ಪ್ರಯತ್ನಿಸುವ ಜನರನ್ನು ಯಾವುದಾದರು ನೆಪದಲ್ಲಿ ಟಾರ್ಗೆಟ್ ಮಾಡಲಾಗುತ್ತದೆ. ರಾಜಕೀಯ ತಂತ್ರ, ಧಾರ್ಮಿಕ ನಂಬಿಕೆ ಹಾಗೂ ಅಧಿಕಾರಿಶಾಹಿಯ ಹಿಡಿತ ಬಲಗೊಳ್ಳುತ್ತಿರುವ  ಹೊತ್ತಿನಲ್ಲಿ  ಶ್ರಮಿಕರ  ಕೂಗು ಕೇಳಿಸದಂತಾಗುತ್ತಿದೆ. ಸಮವಿಧಾನದ ಸವಲತ್ತುಗಳನ್ನು  ಗಾಳಿಗೆ ತೂರುವ ಪ್ರಯತ್ನಗಳು ನಡೆಯುತ್ತಿವೆ. ಇಷ್ಟೆಲ್ಲ ನಡೆಯುತ್ತಿದ್ದರೂ, ಇತಿಹಾಸದಲ್ಲಿ ಜನರ ಸಂಘಟನಾ ಹೋರಾಟಕ್ಕೆ ಯಶಸ್ಸು ದೊರಕಿರುವುದರ ಹಿನ್ನೆಲೆಯನ್ನು ಆಧಾರವಾಗಿಟ್ಟುಕೊಂಡು ಶ್ರಮಿಕ ವರ್ಗದವರು ಹೋರಾಟವನ್ನು ಗಟ್ಟಿಕೊಳಿಸಿಕೊಂಡು ಮುಂದುವರೆಯುವುದಾದರೆ ಎಲ್ಲಾ ಬೇಡಿಕೆಗಳಲ್ಲದಿದ್ದರೂ ಕೆಲವು ಸುಧಾರಣೆಗಳನ್ನು ತರಲು ಸಾಧ್ಯವಾಗಬಹುದು. ರೈತರು, ಕಾರ್ಮಿಕರು, ಮಹಿಳೆಯರು, ಪರಿಸರವಾದಿಗಳು, ಪ್ರಗತಿಪರ ಚಿಂತಕರು, ದಲಿತರು ಹಾಗೂ ವಿದ್ಯಾರ್ಥಿಗಳು ಒಗ್ಗೂಡಿದರೆ ರಾಜಕೀಯ, ಧಾರ್ಮಿಕ ಹಿಡಿತ ಹಾಗೂ ಅಧಿಕಾರಿಶಾಹಿಯ ಪ್ರಾಬಲ್ಯವನ್ನು ನಿಯಂತ್ರಿಸಿ ಸಮಾನತೆ, ಹಕ್ಕು, ಸ್ವಾತಂತ್ರ್ಯ ಹಾಗೂ ಮಾನವೀಯತೆಯಿಂದ ಕೂಡಿದ ಸಮಾಜವನ್ನು ಕಟ್ಟಬಹುದು. ಈ ಗುಂಪುಗಳ ಒಗ್ಗೂಡುವಿಕೆಯು ಅತಿಯಾದ ಆದರ್ಶದ ಕಲ್ಪನೆ ಎನಿಸಬಹುದು. ಆದರೆ ಆದರ್ಶದ ಬೆನ್ನು ಹತ್ತಿದ್ದರೆ ಕೆಲವೊಂದು ಗುರಿಗಳನ್ನಾದರೂ ಸಾಧಿಸಬಹುದು. ಎಲ್ಲಿಯವರೆಗೆ ದೈಹಿಕ ಶ್ರಮಕ್ಕೆ ಮನ್ನಣೆ ಸೂಕ್ತ ಸಂಭಾವನೆ ದೊರಕುವುದಿಲ್ಲವೊ ಅಲ್ಲಿಯವರೆಗೆ ಕೆಲಸಗಳಲ್ಲಿ ಗುಣಮಟ್ಟ ಕಾಪಾಡುವುದಕ್ಕಾಗಲಿ, ವರ್ಗ ಅಂತರ, ಅದಾಯ ಸಂಪತ್ತುಗಳ ಸಂಗ್ರಹವನ್ನು ತಡಯಲಾಗುವುದಿಲ್ಲ. ವಿಷಾದಸ ಸಂಗತಿಯೆಂದರೆ ಬಹುಜನರು ಎರಡೂ ಶ್ರಮಗಳ ನಡುವೆ ಅಂತರವಿರುವುದನ್ನೆ ಸಮರ್ಥಿಸುತ್ತಾರೆ ಪ್ರೋತ್ಸಾಹಿಸುತ್ತಾರೆ. ಈ ಮನೋಭಾವವನ್ನು ಹೋಗಲಾಡಿಸುವ ಅಗತ್ಯವಿದೆ.
-  ಹೇಮಲತ ಎಚ್.ಎಮ್
ಮಹಿಳಾ ಅಧ್ಯಯನ ವಿಭಾಗ
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ
ಮಂಡ್ಯ ಹೊರಾವರಣ ಕೇಂದ್ರ. ಬಿ.ಹೊಸೂರು ಕಾಲೋನಿ, ಮಂಡ್ಯ

ಕವನ - ನವೆಂಬರ್ ಕ್ರಾಂತಿ



ಛಿದ್ರವಾಗಿದೆ ಇಂದು ಆ ಮಹಾನ್ ದೇಶ
ದುಷ್ಟಕೂಟದ ತಂತ್ರಕ್ಕೆ ಬಲಿಯಾಗಿ
ದುಡಿವ ಜನರ ಆಶೆ-ಆಕಾಂಕ್ಷೆಗಳೆಲ್ಲಾ
ಕುಸಿದುಹೋಗಿದೆ ಮಣ್ಣಲ್ಲಿ ಮಣ್ಣಾಗಿ.

ಅಸಂಖ್ಯಾತ ಕಾರ್ಮಿಕರ ತ್ಯಾಗ ಬಲಿದಾನಗಳ
ಲೆನಿನ್ - ಸ್ಟಾಲಿನ್ ರ ದಶಕಗಳ ಶ್ರಮವ
ಧೂಳೀಪಟಗೊಳಿಸಿ ಪಾತಾಳಕ್ಕಿಳಿದ ರಷ್ಯಾ
ಇಂದು ನಮದಲ್ಲ, ಶ್ರಮಜೀವಿಗಳದ್ದಲ್ಲ

ನವೆಂಬರ್ ಏಳು ಬಂದಿಹುದು ಮತ್ತೆ
ಸಂಘಟಿತರಾಗಬೇಕಿದೆ ದುಡಿವ ಜನತೆ
ಘೋಷಿಸಿದೆ – “ಏಳಿ, ಎದ್ದೇಳಿ 
ಸಂಕೋಲೆ ತೊಡೆಯಲು ಸನ್ನದ್ಢರಾಗಿ”

ಚಿಂತಿಲ್ಲ, ಆಗುವುದು ಇನ್ನೊಮ್ಮೆ ಕ್ರಾಂತಿ
ಭೋರ್ಗರೆಯುತ ಬರುವುದು ಶ್ರಮಿಕವರ್ಗ
ಸ್ಥಾಪಿಸುವುದು ಮತ್ತೊಮ್ಮೆ ಸಮಾನತೆಯ 
ಮೇಲಕೇರಿಸುವುದು ಕೆಂಪು ಪತಾಕೆಯ
  - ಸುಧಾ ಜಿ    

ಲೇಖನ - ರಷ್ಯಾ ಕ್ರಾಂತಿ

 ಜಗತ್ತಿನ ಪ್ರಗತಿಪರ ಹೋರಾಟಗಳಿಗೆ ಸ್ಫೂರ್ತಿ ನೀಡಿದ 
ರಷ್ಯಾ ಕ್ರಾಂತಿಗೆ ನೂರು ವರ್ಷ
1917ರ ನವೆಂಬರ್ 7ರಿಂದ 17ರ ವರೆಗೆ (ಝಾರನ ರಷ್ಯಾದಲ್ಲಿ ಚಾಲ್ತಿಯಲ್ಲಿದ್ದ ಹಳೆಯ ಜ್ಯೂಲಿಯನ್ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್ 25ರಿಂದ) ನಡೆದ ರಷ್ಯಾದ ಮಹಾನ್ ಕ್ರಾಂತಿ 20ನೇ ಶತಮಾನದ ಅತ್ಯಂತ ಮಹತ್ವದ ಘಟನೆಗಳಲ್ಲೊಂದು ಎಂಬುದು ಯಾರೂ ಅಲ್ಲಗಳೆಯಲಾಗದ ಸಂಗತಿ. 1917ರ ಫೆಬ್ರವರಿ ತಿಂಗಳಲ್ಲಿ ಝಾರ್ ದೊರೆಯ ಆಡಳಿತವನ್ನು ಅಂತ್ಯಗೊಳಿಸಿ, ಬಂಡವಾಳಶಾಹಿಗಳ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ನಂತರ ನವೆಂಬರ್ ತಿಂಗಳಲ್ಲಿ, ಅದನ್ನೂ ಕೊನೆಗೊಳಿಸಿ ಸಮಾಜವಾದಿ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. ಹೀಗೆ 1917ರಲ್ಲಿ ರಷ್ಯಾ ಎರಡು ಕ್ರಾಂತಿಗಳಿಗೆ ಸಾಕ್ಷಿಯಾಯಿತು.
ಕಾರ್ಲ್‍ಮಾಕ್ರ್ಸ್ ಅವರು “ತತ್ವಜ್ಞಾನಿಗಳು ಇದುವರೆಗೆ ಜಗತ್ತನ್ನು ವ್ಯಾಖ್ಯಾನಿಸಲು ಯತ್ನಿಸಿದರು, ಆದರೆ ಪ್ರಶ್ನೆಯಿರುವುದು ಜಗತ್ತನ್ನು ಬದಲಾಯಿಸುವ ಕುರಿತು” ಎಂದು ಹೇಳಿದ್ದರು. ಕಾರ್ಲ್‍ಮಾರ್ಕ್ಸ್ ಅವರ ಚಿಂತನೆಗಳನ್ನು ಆಧರಿಸಿ ರಷ್ಯಾದಲ್ಲಿ ಶೋಷಣೆರಹಿತ ಸಮಾಜ ಕಟ್ಟುವ ಪ್ರಯೋಗದಲ್ಲಿ ಯಶಸ್ವಿಯಾದವರು ವಿ.ಐ.ಲೆನಿನ್. ರಷ್ಯಾದಲ್ಲಿ ಕೈಗಾರಿಕಾ ಕಾರ್ಮಿಕರು ಮತ್ತು ಬಡ ರೈತರ ಮೈತ್ರಿಯನ್ನು ರೂಪಿಸಿ ಸಮಾಜವಾದಿ ರಾಜ್ಯವನ್ನು ಕಟ್ಟಿದ್ದು ಬೊಲ್ಷೆವಿಕ್ ಪಕ್ಷ.
ಝಾರನ ರಷ್ಯಾದಲ್ಲಿ ರೈತರ ಪರಿಸ್ಥಿತಿ ಹೇಗಿತ್ತು ಎಂಬ ಬಗ್ಗೆ 1877ರಿಂದ 1914ರವರೆಗೆ ರಷ್ಯಾದಲ್ಲಿ ವಾಸವಿದ್ದು, ಅಲ್ಲಿ ಪ್ರಾಧ್ಯಾಪಕರಾಗಿ, ಪತ್ರಕರ್ತರಾಗಿ ಕೆಲಸ ಮಾಡಿದ್ದ ಡಾ.ಇ.ಜೆ.ಡಿಲ್ಲೊನ್ ಅವರು 1918ರಲ್ಲಿ ಬರೆದ ‘ಎಕ್ಲಿಪ್ಸಸ್ ಆಫ್ ರಷ್ಯಾ’ ಕೃತಿಯನ್ನು ನೋಡಿದರೆ ತಿಳಿಯುತ್ತದೆ. ಅವರು ಹೀಗೆ ಬರೆಯುತ್ತಾರೆ “ರಷ್ಯನ್ ರೈತ ... ಚಳಿಗಾಲದಲ್ಲಿ ಆರು ಗಂಟೆಗೆ, ಕೆಲವೊಮ್ಮೆ ಐದು ಗಂಟೆಗೇ ಮಲಗುತ್ತಾನೆ. ಏಕೆಂದರೆ ಕೃತಕ ಬೆಳಕಿಗಾಗಿ ಇಂಧನವನ್ನು ಕೊಳ್ಳಲು ಆತನಲ್ಲಿ ಹಣವಿಲ್ಲ. ಆತನಿಗೆ ತಿನ್ನಲು ಮಾಂಸವಿಲ್ಲ, ಮೊಟ್ಟೆಯಿಲ್ಲ, ಬೆಣ್ಣೆಯಿಲ್ಲ, ಹಾಲಿಲ್ಲ, ಕೋಸೂ ಇಲ್ಲ, ಖಾಲಿ ಸುಟ್ಟ ಬ್ರೆಡ್ ಮತ್ತು ಆಲೂಗಡ್ಡೆಯಯಲ್ಲಿ ಆತ ದಿನದೂಡುತ್ತಾನೆ.... ಮಂಚೂರಿಯನ್ ಯುದ್ಧದಲ್ಲಿ ಜಪಾನೀಯರು ಕ್ರಿಮಿಗಳ ರೂಪ ತಳೆದು ರಷ್ಯನ್ ಸೈನಿಕರ ಬೂಟುಗಳೊಳಗೆ ಸೇರಿ ಅವರ ಕಾಲುಗಳನ್ನು ತಿಂದು ಸಾಯಿಸಿದ್ದೇ ಅವರ ಗೆಲುವಿಗೆ ಕಾರಣವೆಂದು ರಷ್ಯನ್ ರೈತರು ನಂಬುತ್ತಾರೆ... ಅವರು ಮಾಟಗಾತಿಯರನ್ನು ಖುಷಿಯಿಂದ ಸುಡುತ್ತಾರೆ.. ವಿಧೇಯರಲ್ಲದ ಹೆಂಡತಿಯನ್ನು ನಗ್ನಗೊಳಿಸಿ ಗಾಡಿಗೆ ಕಟ್ಟಿ ಹಳ್ಳಿಯಿಡೀ ಎಳೆದಾಡಿ ಚಾಟಿಯೇಟು ನೀಡುತ್ತಾರೆ”. ಇಂತಹ ಮಧ್ಯಕಾಲೀನ ಧೋರಣೆಯ ರೈತರನ್ನು ಕ್ರಾಂತಿಯ ಅಸ್ತ್ರವನ್ನಾಗಿ ರೂಪಿಸಿದ್ದು ಬೊಲ್ಷೆವಿಕ್ ಪಕ್ಷದ ಹೆಗ್ಗಳಿಕೆ.
ಅದೇ ಡಾ.ದಿಲ್ಲೊನ್ ಅವರು 1928ರಲ್ಲಿ ಸೋವಿಯತ್ ಒಕ್ಕೂಟಕ್ಕೆ ಭೇಟಿ ನೀಡಿ ಅಲ್ಲಿ ನಡೆದ ಬದಲಾವಣೆಗೆ ಬೆರಗಾಗುತ್ತಾರೆ. ಅಲ್ಲಿನ ರೈತ ಕಾರ್ಮಿಕರ ಬದುಕಿನ ಚಿತ್ರಣವನ್ನು ಅವರು “ರಷ್ಯಾ ಟುಡೇ ಆಂಡ್ ಟುಮಾರೋ” ಕೃತಿಯಲ್ಲಿ ದಾಖಲಿಸಿದ್ದಾರೆ. 1930ರಲ್ಲಿ ಸೋವಿಯತ್ ಒಕ್ಕೂಟಕ್ಕೆ ಭೇಟಿ ನೀಡಿದ್ದ ಕವಿ ರವೀಂದ್ರನಾಥ ಟಾಗೋರರು ತಮ್ಮ ‘ಲೆಟರ್ಸ್ ಫ್ರಮ್ ರಷ್ಯಾ’ ಕೃತಿಯಲ್ಲಿ “ಕೇವಲ 10 ವರ್ಷಗಳಲ್ಲಿ ಲಕ್ಷಾಂತರ ಜನರನ್ನು ಅಜ್ಞಾನ ಮತ್ತು ಅಧಃಪತನಗಳ ಕತ್ತಲೆಯಿಂದ ಘನತೆ-ಗೌರವಗಳ ಬೆಳಕಿನೆಡೆಗೆ ಸೋವಿಯತ್ ಒಕ್ಕೂಟ ಮುನ್ನಡೆಸಿದ್ದನ್ನು ನಾನು ಕಣ್ಣಾರೆ ನೋಡಿರದಿದ್ದರೆ, ನಂಬುವುದೇ ಅಸಾಧ್ಯವಾಗುತ್ತಿತ್ತು. ರಷ್ಯಾಗೆ ಭೇಟಿ ನೀಡಿರದಿದ್ದರೆ, ನನ್ನ ಜೀವನದ ತೀರ್ಥಯಾತ್ರೆ ಅಪೂರ್ಣವಾಗುತ್ತಿತ್ತು.” ಎಂದು ಬರೆದರು.
1917ರ ನವೆಂಬರ್‍ನಲ್ಲಿ ಅಧಿಕಾರ ಕೈವಶವಾಗುತ್ತಿದ್ದಂತೆ ಹೊಸ ಸರ್ಕಾರ ಹಲವಾರು ಡಿಕ್ರಿಗಳನ್ನು ಜಾರಿಗೊಳಿಸುತ್ತದೆ. ದೇಶದ ಎಲ್ಲ ಭೂಮಿ ಸರ್ಕಾರದ ಆಸ್ತಿ ಎಂದು ಘೋಷಿಸಲಾಯಿತು, ಶಿಕ್ಷಣ ಮೂಲಭೂತ ಹಕ್ಕು ಎಂದು ಘೋಷಿಸಲಾಯಿತು. ಗಣಿಗಳು, ದೊಡ್ಡ ಕೈಗಾರಿಕೆಗಳು ಸರ್ಕಾರದ ಆಸ್ತಿಯೆಂದು ಪರಿಗಣಿಸಲಾಯಿತು. ಗಂಡು-ಹೆಣ್ಣು ಸಮಾನವೆಂದು ಘೋಷಿಸಿದ್ದೇ ಅಲ್ಲದೆ 1918ರ ಕರಡು ಸಂವಿಧಾನದಲ್ಲಿ ಜಗತ್ತಿನಲ್ಲೇ ಮೊದಲ ಬಾರಿಗೆ ಮಹಿಳೆಯರಿಗೆ ಮತದಾನದ ಹಕ್ಕನ್ನೂ ನೀಡಲಾಯಿತು. ಅತಿ ಹಳೆಯ ಪ್ರಜಾತಂತ್ರ ಇಂಗ್ಲೆಂಡ್, ಅತಿ ದೊಡ್ಡ ಪ್ರಜಾತಂತ್ರ ಅಮೆರಿಕಾ ಅಥವಾ ಅತ್ಯಂತ ತೀವ್ರವಾದ ವೈಚಾರಿಕ ಸಂವಾದ ಹುಟ್ಟುಹಾಕಿದ ಫ್ರೆಂಚ್ ಜನತಂತ್ರಗಳು ಮಹಿಳೆಯರಿಗೆ ಆ ನಂತರ ಮತದಾನದ ಹಕ್ಕನ್ನು ನೀಡಿದವು ಎಂಬುದನ್ನು ಗಮನಿಸಬೇಕು. ವೇಶ್ಯಾವಾಟಿಕೆಯ ಪಿಡುಗನ್ನು ಸಂಪೂರ್ಣವಾಗಿ ತೊಡೆದು ಹಾಕಿ ಅವರಿಗೆ ಘನತೆಯ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ನೀಡಲಾಯಿತು. 1935ರ ಹೊತ್ತಿಗೆ ಶಿಕ್ಷಣ ಮತ್ತು ಆರೋಗ್ಯ ರಂಗಗಳಲ್ಲಿ ಮೂರನೇ ಎರಡರಷ್ಟು ಹುದ್ದೆಗಳಲ್ಲಿ ಮಹಿಳೆಯರು ಕೆಲಸಮಾಡುತ್ತಿದ್ದರು ಎಂಬುದು ಈ ಘೋಷಣೆಯ ಯತಾರ್ಥತೆಯನ್ನು ತೋರಿಸುತ್ತದೆ.
1929 ಮತ್ತು 1934ರ ಮೊದಲ ಎರಡು ಪಂಚವಾರ್ಷಿಕ ಯೋಜನೆಗಳ ಮುಕ್ತಾಯದ ಕಾಲಕ್ಕೆ ಸೋವಿಯತ್ ಒಕ್ಕೂಟ ಸಂಪೂರ್ಣವಾಗಿ ಅಧುನಿಕ ಕೈಗಾರಿಕಾ ರಾಷ್ಟ್ರವಾಗಿ ಹೊರಹೊಮ್ಮಿತ್ತು. 1938ರಲ್ಲಿ ಭಾರತೀಯ ಕೈಗಾರಿಕೆಗಳ ಸಮಸ್ಯೆಗಳ ಕುರಿತು ಮಾತನಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು “(ಪ್ರಥಮ) ಮಹಾಯುದ್ಧಕ್ಕೆ ಮುನ್ನ ರಷ್ಯಾವು ಭಾರತಕ್ಕಿಂತ ಉತ್ತಮವಾಗಿರಲಿಲ್ಲ. ಅದೊಂದು ಕೃಷಿ ಪ್ರಧಾನ ದೇಶವಾಗಿತ್ತು. ಜನಸಂಖ್ಯೆಯ ಸುಮಾರು ಶೇ.70ರಷ್ಟು ಮಂದಿ ರೈತರಾಗಿದ್ದು, ನಮ್ಮ ದೇಶದ ರೈತರಷ್ಟೇ ದಾರಿದ್ರ್ಯದ, ಶೋಚನೀಯ ಪರಿಸ್ಥಿತಿ ಅವರದ್ದಾಗಿತ್ತು. ಕೈಗಾರಿಕೆಗಳು ಹಿಂದುಳಿದಿದ್ದವು, ವಿದ್ಯುಚ್ಛಕ್ತಿ ಒಂದು ಐಷಾರಾಮವಾಗಿತ್ತು. ತನ್ನ ಶಕ್ತಿ ಸಂಪನ್ಮೂಲಗಳ ಬಗ್ಗೆ ತಿಳುವಳಿಕೆ ಇಲ್ಲದ, ತಜ್ಞರು-ತಂತ್ರಜ್ಞರು ಇಲ್ಲದ ಪರಿಸ್ಥಿತಿ ಇತ್ತು. ಆದರೆ ಕೇವರ ಹದಿನಾರು ವರ್ಷಗಳಲ್ಲಿ ಅರೆ ಹೊಟ್ಟೆಯ ರೈತ ಸಮುದಾಯದಿಂದ ಹೊಟ್ಟೆ-ಬಟ್ಟೆಗೆ ಸಾಕಷ್ಟಿರುವ ಕೈಗಾರಿಕಾ ಕಾರ್ಮಿಕ ಸಮುದಾಯವಾಗಿ ಅದು ಬೆಳೆದಿದೆ” ಎಂದು ಹೇಳಿದ್ದರು.
ಕೃಷಿಯನ್ನು ಸಾಮುದಾಯಿಕ ಒಡೆತನಕ್ಕೆ ತಂದು ಆಧುನಿಕರಣಗೊಳಿಸಲಾಯಿತು. ಇದರಿಂದ ಜೀವನದ ಗುಣಮಟ್ಟದಲ್ಲಿ ಕೃಷಿಕರಿಗೂ, ಕೈಗಾರಿಕಾ ಕಾರ್ಮಿಕರಿಗೂ ಹೆಚ್ಚಿನ ಅಂತರವಿರಲಿಲ್ಲ. ಇಂತಹ ಕೃಷಿ ಫಾರ್ಮ್‍ಗಳಲ್ಲಿ ಶಾಲೆ, ಆಸ್ಪತ್ರೆ, ರಂಗಮಂದಿರ, ತರಬೇತಿ ಕೇಂದ್ರ, ಪ್ರಯೋಗಾಲಯ, ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ರೈತರಿಗೆ ಆಧುನಿಕ ತಂತ್ರಜ್ಞಾನದಲ್ಲೂ ತರಬೇತಿ ನೀಡಲಾಗುತ್ತಿತ್ತು. ಯಂತ್ರೋಪಕರಣಗಳ ಬಳಕೆ ಮಾತ್ರವಲ್ಲದೆ ವಿಮಾನಗಳ ಚಾಲನೆಯನ್ನೂ ಈ ರೈತರು ಕಲಿಯಲು ಅವಕಾಶವಿತ್ತು ಎಂಬುದನ್ನು ಅಮೆರಿಕನ್ ಪತ್ರಕರ್ತೆ ಅನ್ನಾ ಲೂಯಿ ಸ್ಟ್ರಾಂಗ್ ದಾಖಲಿಸಿದ್ದಾರೆ.
ಹೀಗೆ ಅಜ್ಞಾನಿಗಳು, ಮದ್ಯವ್ಯಸನಿಗಳಾಗಿದ್ದ ಬಡ ರೈತ-ಕಾರ್ಮಿಕರು ಸುಶಿಕ್ಷಿತ ಆಧುನಿಕ ನಾಗರಿಕರಾಗಿ ಕೆಲವೇ ವರ್ಷಗಳಲ್ಲಿ ಪರಿವರ್ತನೆಯಾಗಿದ್ದಕ್ಕೆ ಸಮಾಜವಾದಿ ವ್ಯವಸ್ಥೆಯೇ ಕಾರಣ. ಇದರಿಂದ ಭಯಗ್ರಸ್ತರಾದ ಯುರೋಪು ಮತ್ತು ಅಮೆರಿಕಾದ ಬಂಡವಾಳಶಾಹಿ ಜನತಂತ್ರಗಳು ತಮ್ಮ ದೇಶದ ಕಾರ್ಮಿಕರಿಗೂ ಅನಿವಾರ್ಯವಾಗಿ ಕೆಲವೊಂದು ಸವಲತ್ತುಗಳನ್ನು ನೀಡಬೇಕಾಯಿತು. ಇಲ್ಲಿಂದ ಜನತಂತ್ರಗಳಲ್ಲಿ ‘ಕಲ್ಯಾಣ ರಾಜ್ಯ’ದ ಪರಿಕಲ್ಪನೆಯನ್ನು ಜಾರಿಗೆ ತರಲಾಯಿತು.
ಭಾರತವೂ ಸೇರಿದಂತೆ ಜಗತ್ತಿನ ಶೋಷಿತರು, ಮರ್ದಿತರಿಗೆ ರಷ್ಯಾದ ಕ್ರಾಂತಿ ಸ್ಫೂರ್ತಿಯನ್ನು ನೀಡಿತ್ತು. ಭಗತ್ ಸಿಂಗ್, ನೇತಾಜಿಯಂತಹ ಕ್ರಾಂತಿಕಾರಿಗಳು ಭಾರತದಲ್ಲಿ ಸಮಾಜವಾದ ತರಬೇಕೆಂದು ಬಯಸಿದ್ದರು. ಐನ್‍ಸ್ಟೈನ್, ಚಾರ್ಲಿ ಚಾಪ್ಲಿನ್, ರೋಮಾ ರೋಲಾ, ಬರ್ನಾರ್ಡ್ ಶಾ, ಪಾಲ್ ರೋಬ್‍ಸನ್, ನೆರುಡಾ, ಜೆ.ಡಿ.ಬರ್ನಾಲ್ ಮೊದಲಾದ ವಿವಿಧ ಕ್ಷೇತ್ರಗಳ ದಿಗ್ಗಜರು ಸಮಾಜವಾದವನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದರು. ಕುವೆಂಪು, ಕಯ್ಯಾರ ಕಿಞ್ಞಣ್ಣ ರೈಯಂತಹ ಕವಿಗಳು ಲೆನಿನ್ ಬಗ್ಗೆ ಪದ್ಯ ಬರೆದರು.
ಆದರೆ 1950ರ ದಶಕದ ನಂತರ ಜಗತ್ತಿನ ಕಮ್ಯುನಿಸ್ಟ್ ಚಳವಳಿಯಲ್ಲಿ ಕಾಣಿಸಿಕೊಂಡ ಗೊಂದಲಗಳು ಮತ್ತು ಸ್ಟಾಲಿನ್ ಅವರ ಮರಣಾನಂತರ ಸೋವಿಯತ್ ಒಕ್ಕೂಟ ಪಾಲಿಸಿದ ಮಾರ್ಕ್ಸ್ವಾದಕ್ಕೆ ವಿರುದ್ಧವಾದ ನೀತಿಗಳು ಅಂತಿಮವಾಗಿ ಅದರ ಪತನಕ್ಕೆ ಕಾರಣವಾಯಿತು. 1991ರಲ್ಲಿ ಸೋವಿಯತ್ ಒಕ್ಕೂಟದಲ್ಲಿ ಪ್ರತಿಕ್ರಾಂತಿಯಾದ ನಂತರ ರಷ್ಯಾದಲ್ಲಿ ಕಾರ್ಮಿಕರ ಪರಿಸ್ಥಿತಿ ಏನಾಗಿದೆ ಎಂಬುದು ಅಂಗೈ ಹುಣ್ಣಿನಂತೆ ನಿಚ್ಚಳವಾಗಿದೆ. 1990ರಲ್ಲಿದ್ದ ಕೈಗಾರಿಕಾ ಉತ್ಪಾದನೆಯ ಮಟ್ಟಕ್ಕೆ ರಷ್ಯಾ ಇನ್ನೂ ತಲಪಿಲ್ಲ. ಪ್ರತಿಕ್ರಾಂತಿಯ ನಂತರ ಸಂಘಟಿತ ವಲಯಗಳಲ್ಲಿ 70ಲಕ್ಷ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದರು. ಅವರ ಜೀವನಮಟ್ಟ ಕುಸಿಯಿತು. 1991ರಲ್ಲಿ ಸರಾಸರಿ ಜೀವಿತಾವಧಿ ಗಂಡಸರಲ್ಲಿ 74 ಮತ್ತು ಮಹಿಳೆಯರಲ್ಲಿ 64 ವರ್ಷವಿದ್ದರೆ, 1994ರಲ್ಲಿ ಅದು ಗಂಡಸರಲ್ಲಿ 71ವರ್ಷ ಮತ್ತು ಮಹಿಳೆಯರಲ್ಲಿ 57ವರ್ಷಕ್ಕೆ ಕುಸಿಯಿತು. ಇಡೀ ದೇಶದ ಆಡಳಿತದ ನಿಯಂತ್ರಕವಾಗಿದ್ದ ಕಾರ್ಮಿಕ ವರ್ಗ ಇಂದು ಸಮಯಕ್ಕೆ ಸರಿಯಾಗಿ ಸಂಬಳ ಸಿಗದೆ ಮುಷ್ಕರ ಹೂಡಬೇಕಾಗಿ ಬಂದಿದೆ. 2002ರಲ್ಲಿ ಕಾರ್ಮಿಕ ಮುಷ್ಕರಗಳನ್ನು ತಡೆಯಲು ಹೊಸ ಕಾಯಿದೆಯನ್ನೂ ಜಾರಿಗೆ ತರಲಾಯಿತು. ಸ್ವತಂತ್ರ ಕಾರ್ಮಿಕ ಸಂಘಗಳನ್ನು ಕಟ್ಟುವ ಹಕ್ಕನ್ನು, ಮುಷ್ಕರ ಮಾಡುವುದನ್ನು ಕಾನೂನುಬಾಹಿರಗೊಳಿಸಲಾಗಿದೆ. ಹಾಗಿದ್ದೂ ಜೀವನದ ಪರಿಸ್ಥಿತಿಗಳು ಕಾರ್ಮಿಕರನ್ನು ಮುಷ್ಕರದತ್ತ ತಳ್ಳುತ್ತವೆ. 2010ರಲ್ಲಿ ನಡೆದ ಮುಷ್ಕರಗಳಲ್ಲಿ ಶೇ.91ರಷ್ಟು ಕಾನೂನುಬಾಹಿರವಾಗಿದ್ದವು. ರಷ್ಯಾದ ಕಾರ್ಮಿಕರು ಮತ್ತೆ ಲೆನಿನ್-ಸ್ಟಾಲಿನರ ಭಾವಚಿತ್ರಗಳೊಂದಿಗೆ ಹೋರಾಟಗಳಿಗೆ ಧುಮುಕಿದ್ದಾರೆ.
ಜಾಗತಿಕವಾಗಿ ಕೂಡ ಬಂಡವಾಳಶಾಹಿ ದೇಶಗಳು ‘ಕಲ್ಯಾಣ ರಾಜ್ಯ’ ಪರಿಕಲ್ಪನೆಯನ್ನು ಕೈಬಿಟ್ಟಿವೆ. ಉದಾರೀಕರಣ-ಖಾಸಗೀಕರಣವೇ ಸರ್ಕಾರಗಳ ಮಂತ್ರವಾಗಿವೆ. ಎಂಟು ಗಂಟೆ ದುಡಿತದ ಅವಧಿ ಎಂಬುದು ಕೇವಲ ಕಾನೂನು ಪುಸ್ತಕದ ಬದನೆಕಾಯಿಯಾಗಿದೆ. ಗುತ್ತಿಗೆ ನೌಕರಿ ಮಾಮೂಲಾಗಿದೆ. ಶಿಕ್ಷಣ, ಆರೋಗ್ಯಗಳು ಕೊಳ್ಳುವ ಸರಕುಗಳಾಗಿ ಬಡವರಿಗೆ ಗಗನಕುಸುಮಗಳಾಗಿವೆ. ಆರ್ಥಿಕ ಕುಸಿತ ಮತ್ತು ಉದ್ಯೋಗನಾಶ ಸಾರ್ವತ್ರಿಕಗೊಂಡಿದೆ. ಕಾರ್ಮಿಕರ ಹಕ್ಕುಗಳ ಹನನ ನಡೆಯುತ್ತಿದೆ.
ಜಗತ್ತಿನ ಪ್ರಪ್ರಥಮ ಸಮಾಜವಾದಿ ವ್ಯವಸ್ಥೆಯ ಸಾಧನೆಗಳು ಮತ್ತು ಅದರ ಪತನದ ನಂತರ ಜಾಗತಿಕವಾಗಿ ಕಾರ್ಮಿಕರ ದುಸ್ಥಿತಿಗಳನ್ನು ಅವಲೋಕಿಸಿದರೆ ನಾವು ಸೂಕ್ತ ಪಾಠಗಳನ್ನು ಕಲಿಯಬಹುದು.
 - ಬಿ.ರವಿ
(ಕೃಪೆ - ಆಂದೋಲನ ಪತ್ರಿಕೆ, ಮೈಸೂರು)

ಅನುವಾದಿತ ಕವಿತೆ - ಹಿಡಿಯದ ದಾರಿ

(ರಾಬರ್ಟ್ ಫ್ರಾಸ್ಟ್ ರಚನೆಯ ‘ರೋಡ್ ನಾಟ್ ಟೇಕನ್’ ಕವನದ ಅನುವಾದ)
ಹಸಿರು ಕಾಡಿನ ದಾರಿ ಕವಲೊಡೆದಿತ್ತು 
ಎರಡನೂ ಹಿಡಿಯಲಾರೆನೆಂಬ ನೋವಿನಲಿ
ಒಂಟಿ ಪಯಣಿಗನಂತೆ ನಿಂತೆನಲ್ಲಿ,
ನೆಟ್ಟೆ ನೋಟವನು ಒಂದು ದಾರಿಯ ಕಡೆಗೆ
ದೃಷ್ಟಿ ಚಾಚುವವರೆಗೆ, ಪೊದೆಯೊಳಗೆ ಬಾಗಿ ಕರಗಿದವರೆಗೆ

ಈ ಇನ್ನೊಂದು ದಾರಿಗೂ ಕಣ್ಣ ನೆಡಬೇಕಲ್ಲ
ಇನ್ನೂ ಸವೆಯದ ಹುಲ್ಲುಹಾಸಿನ ಹಾದಿಯಿದು
ನೋಡಲೇ ಬೇಕಿದೆ ಇದರ ಕಡೆಗೆ, ಹಾಗೆಂದು
ಈ ದಾರಿಯತ್ತ ಹರಿಸಿದ ಚಿತ್ತ ಕಡಿಮೆಯಿಲ್ಲ

ಮುಂಜಾವಿನಲಿ ಎರಡೂ ದಾರಿಗಳ ಮೇಲೆ 
ಎಲೆಗಳ ಹಾಸು, ಹೆಜ್ಜೆ ಗುರುತೇ ಇಲ್ಲ 
ಮೊದಲ ದಾರಿ ಇನ್ನೊಂದು ಬಾರಿ ತುಳಿದೇನು
ಹಿಡಿದ ದಾರಿ ಎತ್ತ ಒಯ್ಯಲಿದೆಯೆಂದು ತಿಳಿದೇನು
ಮತ್ತೊಮ್ಮೆ ಮರಳಿ ಬರಲಾಗುವುದೇನು

ನಿಡಿದಾದ ಉಸಿರು ಇದನು ಹೇಳುವ ಮುನ್ನ 
ವರುಷ ವರುಷಗಳ ಹಿಂದೊಮ್ಮೆ
ಕವಲೊಡೆದು ನಿಂತಿತ್ತ್ತು ಕಾನನದ ದಾರಿ
ಹಿಡಿದೆ ನಾನಾಗ ಸವೆಯದ ಹಾದಿ
ಅದುವೇ ಇಂದಿನ ಎಲ್ಲ ಭಿನ್ನತೆಗೆ ದಾರಿ



(ಅದೇ ಕವಿತೆಯ ಭಾವಾನುವಾದ)
ಸವೆಯದ ಹಾದಿ

ಜೀ-
ವನದ ಹಾದಿಯಲ್ಲಿ
ಆಗಾಗ ಧುತ್ತೆಂದು ತೋರುವ
ಕವಲು
ಇಬ್ಬದಿಗೂ ಕಾಲು ಹಾಕ-
ಲಾಗದ ನೋವು.

ಒಂದು-
ಎಲ್ಲರೂ ನಡೆದ ಹಳೆಯ ಹಾದಿ
ಕಾಣುವ ದೂರದ ನೋಟ.
ಇನ್ನೊಂದು-
ಕಲ್ಲು ಹುಲ್ಲು ಮುಳ್ಳುಗಳ
ಸವೆಯದ ದಾರಿ 
ಗಮ್ಯ ಅಗೋಚರ.

ಯಾವುದ ಹಿಡಿಯಲಿ
ಎಲ್ಲಿ ನಡೆಯಲಿ
ಮುನ್ನಡೆದ ಮೇಲೆ ಮರಳಿ
ಅದೇ ಕವಲು ಎಲ್ಲಿ?

ಸವಕಲು ದಾರಿ ಇರಲಿ
ಸವಾಲು ಬಯಸದ ಬಾಳಿಗೆ
ನಮಗಿರಲಿ ತುಳಿಯದ 
ಹೊಸ ಹಾದಿಯೊಂದೆ 
ಇದೇ ತರಲಿದೆ 
ಬದಲಾವಣೆಯ ಮುಂದೆ.

- ಬಿ.ರವಿ