Pages

ಸಂಪಾದಕೀಯ


ಈ ಬಾರಿಯಿಂದ ನಾವು ಹೊಸ ಬರಹಗಳ ಜೊತೆಗೆ ಹಿಂದೆ ನಮ್ಮ "ಅಪೂರ್ವ ಕಣ್ಮಣಿ" ಮಾಸಪತ್ರಿಕೆಯಲ್ಲಿ ಬಂದಿದ್ದ ಲೇಖನ, ಕಥೆ, ಕವನಗಳನ್ನು ಇಲ್ಲಿ ಹಾಕಲು ನಿರ್ಧರಿಸಿದ್ದೇವೆ. ಈ ಬ್ಲಾಗ್ ಆರಂಭವಾಗುವ ಮುನ್ನ ಇದರಲ್ಲಿರುವ ಬಹಳಷ್ಟು ಬರಹಗಾರರು 'ಅಭಯ ಮಹಿಳಾ ವೇದಿಕೆ'ಯ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿದ್ದು ಲೇಖನ, ಕಥೆ, ಕವನಗಳನ್ನು ಬರೆದಿದ್ದರು. ಅಪೂರ್ವ ಕಣ್ಮಣಿ ಸುಮಾರು ಐದು ವರ್ಷಗಳ ಕಾಲ ಬಂದಿತು. ಕಾರಣಾಂತರಗಳಿಂದ ಈಗ ಆ ಪತ್ರಿಕೆ ಸಧ್ಯಕ್ಕೆ ಬರುತ್ತಿಲ್ಲ. ಆದರೆ ಅದರಲ್ಲಿರುವ ಎಲ್ಲಾ ಬರಹಗಳನ್ನು ಈ ಮೂಲಕ ಇನ್ನಷ್ಟು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ 
- ಸಂಪಾದಕ ಮಂಡಳಿ, ಬಳಪ ಬ್ಲಾಗ್

ಮಹಾನತೆಯತ್ತ - ರಿಯಾನ್ ಹ್ರೆಲ್‍ಜಾಕ್



[ಈ ಅಂಕಣದಲ್ಲಿ ನಾವು ಸಾಮಾನ್ಯತೆಯಿಂದ ಮಹಾನತ್ತೆಯತ್ತ ಸಾಗುತ್ತಿರುವ ಕಿರಿಯರು - ಹಿರಿಯರ ಬಗ್ಗೆ ವರದಿ ನೀಡಲಿಚ್ಛಿಸುತ್ತೇವೆ. ಹುಟ್ಟಿದಾಗಲೇ ಯಾರೂ ಮಹಾನರಾಗಿ ಹುಟ್ಟುವುದಿಲ್ಲ, ಮಹಾನತೆ ನಮ್ಮ ಕ್ರಿಯೆಗಳಿಂದಾಗುತ್ತದೆ. ಮಹಾನರಾದವರ ಸಾಧನೆಯ ಹಿಂದೆ ಶ್ರಮವಿದೆ, ದೃಢಸಂಕಲ್ಪವಿದೆ. ಪ್ರತಿಯೊಬ್ಬರು ಮನಸ್ಸು ಮಾಡಿದಲ್ಲಿ ಮಹಾನತೆಯತ್ತ ಸಾಗಬಹುದೆಂಬುದೇ ನಮ್ಮ ಅಭಿಪ್ರಾಯ.]

ಈ ಬಾರಿಯ ನಮ್ಮ ಕಥಾನಾಯಕ ರಿಯಾನ್ ಹ್ರೆಲ್‍ಜಾಕ್, ಕೆನಡಾದವನು. ಹುಟ್ಟಿದ್ದು ಮೇ 31, 1991. ಸೂಸನ್ ಮತ್ತು ಮಾರ್ಕ್ ಅವನ ತಾಯ್ತಂದೆಯರು ಈಗವನಿಗೆ 27 ವರ್ಷ. ಆದರೆ ಅವನು ಮಹಾನತೆಯತ್ತ ಸಾಗಲು ಆರಂಭಿಸಿದ್ದು ಕೇವಲ 6 ವರ್ಷದವನಿದ್ದಾಗ. 

ಒಂದು ದಿನ ರಿಯಾನ್‍ನ ತರಗತಿಯ ಟೀಚರ್ ಆಫ್ರಿಕಾದಲ್ಲಿ ಬಹಳ ಕಷ್ಟವಿದೆ, ಕುಡಿಯಲು ಶುದ್ಧ ನೀರು ಸಿಗುವುದಿಲ್ಲ, ನೀರಿಗಾಗಿ ಮೈಲಿಗಟ್ಟಲೆ ನಡೆಯಬೇಕು, ಶುದ್ಧ ನೀರು ಸಿಗದೆ ಪ್ರತಿ ವರ್ಷ ಎಷ್ಟೊ ಸಾವಿರ ಮಕ್ಕಳು ಸಾಯುತ್ತಿದ್ದಾರೆ ಎಂದು ಹೇಳಿ, ಅಲ್ಲಿನ ಮಕ್ಕಳಿಗೆ ನೀರು ಒದಗಿಸಲು ಬಾವಿ ತೋಡಲು 70 ಡಾಲರ್‍ಗಳು ಬೇಕೆಂದರು. ಮನೆಗೆ ಬಂದ ಒಂದನೇ ತರಗತಿಯ ಪೋರ ತಾಯಿಯ ಬಳಿ 70 ಡಾಲರ್ ಬೇಕೆಂದ. ತಾಯಿಗೆ ಅದರ ಕಾರಣವನ್ನೂ ವಿವರಿಸಿದ. ಆದರೆ ತಾಯಿ ಅದು ದೊಡ್ಡ ಮೊತ್ತವೆಂದು, ಕೊಡಲು ಸಾಧ್ಯವಿಲ್ಲವೆಂದಳು. ಆದರೆ ರಿಯಾನ್ ಬಿಡಬೇಕಲ್ಲ. ಅವನ ತಾಯಿ ಅವನ ಮನಸ್ಸನ್ನು ಬೇರೆಡೆಗೆ ತಿರುಗಿಸಲು, “ನೀನು ಮಾಡುವ ಕೆಲಸಗಳನ್ನಲ್ಲದೆ ಇತರ ಮನೆಯ ಕೆಲಸಗಳನ್ನು ಮಾಡಿಕೊಟ್ಟರೆ, ನಿನಗೆ ಹಣವನ್ನು ಕೊಡುತ್ತೇನೆ” ಎಂದರು. ರಿಯಾನ್ ತಕ್ಷಣವೇ ‘ಮಾಡುತ್ತೇನೆ’  ಎಂದ. ಅಂದಿನಿಂದ ಅವನು ಶಾಲೆಯಿಂದ ಬಂದ ಮೇಲೆ ಹೊರಗಡೆ ತೋಟವನ್ನು ನೋಡಿಕೊಳ್ಳುವುದು, ಕಾರನ್ನು, ಕಿಟಕಿ-ಬಾಗಿಲುಗಳನ್ನು ಸ್ವಚ್ಛಗೊಳಿಸುವುದು ಇತ್ಯಾದಿ ಸಣ್ಣಪುಟ್ಟ ಕೆಲಸಗಳನ್ನು ಮಾಡಲಾರಂಭಿಸಿದ, ಅದೂ ಅವನ ಸೋದರರು ಆಟವಾಡುತ್ತಿದ್ದಾಗ ಅಥವಾ ಟಿವಿ ನೋಡುತ್ತಿದ್ದಾಗ. ಪ್ರತಿ ಬಾರಿಯೂ ತಾಯಿ ಕೊಟ್ಟ 2 ಡಾಲರ್‍ಗಳನ್ನು ಅವನು ಹಳೆಯ ಬಿಸ್ಕತ್ ಡಬ್ಬಿಯಲ್ಲಿ ಹಾಕಿಡುತ್ತಿದ್ದ.
ನಾಲ್ಕು ತಿಂಗಳುಗಳ ನಂತರ 75 ಡಾಲರ್‍ಗಳನ್ನು ಒಟ್ಟುಗೂಡಿಸಿದ. ಅದನ್ನು ತೆಗೆದುಕೊಂಡು ಶಾಲೆಗೆ ಹೋಗಿ, ಆಫ್ರಿಕಾದ ಜನರಿಗೆ ನೀರು ಒದಗಿಸಲೆಂದೇ ಅಸ್ತಿತ್ವಕ್ಕೆ ಬಂದಿದ್ದ ಕೆನಡಾದ ‘ವಾಟರ್ ಕ್ಯಾನ್’ ಎಂಬ ಸರ್ಕಾರಿಯೇತರ ಸಂಸ್ಥೆಯ ಸದಸ್ಯರಿಗೆ ನೀಡಿದ. ಅವರು 75 ಡಾಲರ್‍ಗಳಿಂದ ಹ್ಯಾಂಡ್ ಪಂಪ್ ಹಾಕಬಹುದಷ್ಟೇ, ಬಾವಿ ತೋಡಲು ಬೇಕಿರುವುದು 2500 ಡಾಲರ್‍ಗಳು ಎಂದು ಹೇಳಿದರು. ಒಂದೇ ಮನಸ್ಸಿನಿಂದ ರಿಯಾನ್ ‘ಸಂಗ್ರಹಿಸುತ್ತೇನೆ’ ಎಂದ. ಅವನ ಈ ದೃಢಸಂಕಲ್ಪವನ್ನು ನೋಡಿದ, ಕೇಳಿದ, ಕುಟುಂಬದ ಸ್ನೇಹಿತರು, ಬಂಧುಬಳಗದವರು ಮತ್ತಿತರ ಜನರು, ಮಕ್ಕಳು ಸಹ ಈ ಯೋಜನೆಗೆ ಹಣ ಕಳಿಸಲಾರಂಭಿಸಿದರು. ಆ ಹಣದಲ್ಲಿ ಉಗಾಂಡಾದ ಅಂಗೋಲಾದಲ್ಲಿ ಶಾಲೆಯೊಂದರ ಪಕ್ಕದಲ್ಲಿ ಬಾವಿಯನ್ನು ತೋಡಲಾಯಿತು.
ಆದರೆ ಇದರೊಂದಿಗೆ ರಿಯಾನ್ ತನ್ನ ಸೇವೆಗೆ ಇತಿಶ್ರೀ ಹಾಡಲಿಲ್ಲ. ಬದಲಿಗೆ ಇನ್ನಷ್ಟು ಉತ್ಸುಕನಾಗಿ ಹಣ ಸಂಗ್ರಹಿಸಲಾರಂಭಿಸಿದ. ‘ರಿಯಾನ್ ವೆಲ್ ಫೌಂಡೇಶನ್’ ಸ್ಥಾಪಿಸಿದ. 2015ರಷ್ಟರಲ್ಲಿ ಅವನು ಮಿಲಿಯಾಂತರ ಡಾಲರ್‍ಗಳನ್ನು ಸಂಗ್ರಹಿಸಿ, ಅದರಿಂದ 1000 ಬಾವಿಗಳನ್ನು 15 ದೇಶಗಳಲ್ಲಿ ತೋಡಿಸಿ, 824,038  ಜನರಿಗೆ ಶುದ್ಧವಾದ ಕುಡಿಯುವ ನೀರು ದೊರಕುವಂತೆ ಮಾಡಿದ್ದಾನೆ. ತನ್ನ ಕೆಲಸದಲ್ಲಿ ಮುಂದುವರೆಯುತ್ತಿದ್ದಾನೆ. 
 - ಸುಧಾ ಜಿ
[ಕೃಪೆ : "ಅಪೂರ್ವ ಕಣ್ಮಣಿ" ಮಾಸಪತ್ರಿಕೆ] 

ಆರೋಗ್ಯಧಾಮ - ಅರಳುವ ಹೂಗಳು 1


[ಇಪ್ಪತೊಂದನೆ ಶತಮಾನಕ್ಕೆ  ನಾವು  ಕಾಲಿಟ್ಟರೂ, ನಮ್ಮ ಸಮಾಜದಲ್ಲಿನ್ನೂ ಹೆಣ್ಣಿನ ಬಗೆಗಿನ ಪುರುಷಪ್ರಧಾನ ಧೋರಣೆ ಬದಲಾಗಿಲ್ಲ. ಸ್ತ್ರೀಯರು ಪುರುಷರ ಭೋಗದ ವಸ್ತುಗಳು, ಸಂತಾನೋತ್ಪತ್ತಿಯ ಸಾಧನಗಳು ಎಂದೇ ಪರಿಗಣಿಸಲಾಗುತ್ತಿದೆ. ನಾಗರೀಕತೆಯ ಬೆಳವಣಿಗೆಯೊಂದಿಗೆ ಸ್ತ್ರಿ ಸಮಾನತೆ, ಮಹಿಳಾ ವಿಮೋಚನೆಯ ವಿಚಾರಗಳು ಬೆಳೆಯುತ್ತಿದ್ದು, ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾಳೆ. ಆದರೆ ಸ್ತ್ರೀಯರ ಬಗೆಗಿನ ಕೀಳು ಧೋರಣೆ ಹಲವಾರು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ.
ನಮ್ಮ ಸಮಾಜದಲ್ಲಿ ಸ್ತ್ರೀಯರನ್ನು ಅಜ್ಞಾನದಲ್ಲಿಯೆ ಇಡಲಾಗಿದೆ. ಹೆಣ್ಣು ಮಕ್ಕಳ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳ ಬಗ್ಗೆ ಸಹ ಅವರಿಗೆ ಅರಿವಿರುವುದಿಲ್ಲ. ವಿದ್ಯಾವಂತ ಹೆಣ್ಣುಮಕ್ಕಳಲ್ಲಿಯೂ ಸಹ ಈ ಸಮಸ್ಯೆಯನ್ನು ಕಾಣಬಹುದು. ಹೆಣ್ಣು ಮಕ್ಕಳಿಗೆ ತಮ್ಮ ದೇಹದ ಬಗ್ಗೆ, ಅಂಗಾಂಗಗಳ ಬಗ್ಗೆ, ಅವುಗಳ ಕಾರ್ಯವೈಖರಿಯ ಬಗ್ಗೆ ತಿಳಿದುಕೊಳ್ಳುವ ಅವಕಾಶವನ್ನು ನೀಡಿಲ್ಲ. ಜೊತೆಗೆ, ಆ ಬಗ್ಗೆ ಪ್ರಶ್ನೆ ಕೇಳುವುದೇ ತಪ್ಪು ಎಂಬ ಧೋರಣೆಯನ್ನು ಸಮಾಜ ಸೃಷ್ಟಿಸಿದೆ.
ಈ ಕಾರಣದಿಂದಲೇ ಹೆಣ್ಣುಮಕ್ಕಳು ಸುಲಭವಾಗಿಯೇ ಟಿ.ವಿ, ಸಿನೆಮಾ ಮತ್ತು ಇತರ ಮಾಧ್ಯಮಗಳಿಂದ, ಸ್ನೇಹಿತರಿಂದ ಕೇಳುವುದನ್ನೆಲ್ಲಾ, ನೋಡುವುದನ್ನೆಲ್ಲಾ ನಂಬುತ್ತಾ ಹೋಗುತ್ತಾರೆ. ಇದರಿಂದ ಹಲವಾರು ಸಂಕಷ್ಟಗಳಿಗೆ ಗುರಿಯಾಗುತ್ತಾರೆ. ತಮ್ಮ ದೈಹಿಕ ಬೆಳವಣಿಗೆಯ ಬಗ್ಗೆ ಸರಿಯಾಗಿ ಅರಿವಿರದಂತಹ ಮಕ್ಕಳು ಅನವಶ್ಯಕ ಸಂಕೋಚ, ನಾಚಿಕೆ, ಕೀಳರಿಮೆ ಬೆಳೆಸಿಕೊಳ್ಳುತ್ತಾರೆ; ವಿವಿಧ ಕ್ಷೇತ್ರಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸುತ್ತಾರೆ.
ಅದರಿಂದ ಆಗುವಂತಹ ಅನಾಹುತಗಳೆಷ್ಟೋ. ಈ ಅಜ್ಣಾನದ ಕಾರಣದಿಂದಲೇ ಹೆಣ್ಣು ಮಕ್ಕಳು ಹಲವಾರು ಅನಾರೋಗ್ಯಗಳಿಗೆ, ಸಾಮಾಜಿಕ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ.
ಹೆಣ್ಣುಮಕ್ಕಳಲ್ಲಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಪ್ರಕೃತಿಸಹಜವಾದದ್ದು. ಈ ಸಹಜ ಬದಲಾವಣೆಗಳು ಸರಿಯಾಗಿ ಅರಿತುಕೊಂಡರೆ, ಹೆಣ್ಣುಮಕ್ಕಳು ಸಹಜ ರೀತಿಯ ಜೀವನವನ್ನು ನಡೆಸಬಹುದು. ಬದಲಾವಣೆಗಳಿಗೆ ತಮ್ಮನ್ನೇ ಅಳವಡಿಸಿಕೊಂಡು ಬೆಳೆಯಬಹುದು ಮತ್ತು ಬದುಕಬಹುದು. ಈ ಬಗ್ಗೆ ಹೆಣ್ಣುಮಕ್ಕಳಿಗೆ ಅವಶ್ಯವಿರುವ ಮಾಹಿತಿಯನ್ನು ನೀಡಿ, ಅದು ಅವರ ಬೆಳವಣಿಗೆಗೆ ಪೂರಕವಾಗಲಿ ಎಂಬುದೇ ನಮ್ಮ ಆಶಯ.

ಹದಿಹರೆಯದಲ್ಲಿ ಹೆಣ್ಣುಮಕ್ಕಳಲ್ಲಾಗುವ ಬದಲಾವಣೆ

ಹುಡುಗಿಯರು ಬಾಲ್ಯಾವಸ್ಥೆಯನ್ನು ದಾಟಿದ ನಂತರದ ಘಟ್ಟವನ್ನು ಕಿಶೋರಾವಸ್ಥೆ ಅಥವಾ ಹದಿಹರೆಯ ಎನ್ನುತ್ತೇವೆ. ಈ ಹಂತದಲ್ಲಿ ಹೆಣ್ಣುಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗುವುದು ಸಹಜ.
ಹುಡುಗಿಯರು ದೈಹಿಕವಾಗಿ ಬೆಳೆಯಲಾರಂಭಿಸುತ್ತಾರೆ. ಅವರ ಕೈ ಮತ್ತು ಕಾಲುಗಳು ಬೆಳೆಯಲಾರಂಭಿಸುತ್ತವೆ. ಹೃದಯ, ಶ್ವಾಸಕೋಶಗಳು, ಜಠರ, ಮೂತ್ರಪಿಂಡಗಳು ಮತ್ತು ಮಾಂಸಖಂಡಗಳು ಬೆಳೆಯತೊಡಗುತ್ತವೆ; ವಯಸ್ಕರ ಗಾತ್ರವನ್ನು ತಲುಪುತ್ತವೆ. ತಲೆಯ ಗಾತ್ರ ಶೇಕಡ 90 ರಷ್ಟು 5 ವರ್ಷದೊಳಗೆ ಬೆಳೆದಿರುತ್ತದೆ. ಉಳಿದ ಶೇಕಡ 10ರಷ್ಟು ಹದಿಹರೆಯದಲ್ಲಿ ಬೆಳೆಯುತ್ತದೆ. ಪಚನಕ್ರಿಯೆ, ಉಸಿರಾಟದ ಕ್ರಿಯೆ ಮತ್ತು ರಕ್ತ ಪರಿಚಲನಾಕ್ರಿಯೆ ತೀವ್ರವಾಗುತ್ತದೆ; ಬೆಳೆಯುತ್ತಿರುವ ಮಕ್ಕಳ ಅವಶ್ಯಕತೆಗೆ ಅನುಸಾರವಾಗಿ ಶಕ್ತಿಯನ್ನು ನೀಡುತ್ತದೆ. ಮುಖದ ಚಹರೆ ಬದಲಾಗುತ್ತದೆ - ಮೂಗು ದೊಡ್ಡದಾಗುತ್ತದೆ, ಬಾಯಿ ಅಗಲವಾಗುತ್ತದೆ, ಗದ್ದ ಪ್ರಮುಖವಾಗಿ ಕಾಣಿಸತೊಡಗುತ್ತದೆ. ಮಾಂಸಖಂಡಗಳ ಬೆಳವಣಿಗೆಯಿಂದ ಎತ್ತರವಾಗುತ್ತಾಳೆ, ದೇಹದ ಕೊಬ್ಬು ಕರಗುತ್ತದೆ.
ಈ ಹಂತದಲ್ಲಿ ಸಂತನೋತ್ಪತ್ತಿಯ ಅಂಗಾಂಗಗಳಲ್ಲಿ ಬದಲಾವಣೆ ಕಾಣಿಸಿಕೊಳ್ಳಲು ಶುರುವಾಗುತ್ತದೆ. ಸಂತನೋತ್ಪತ್ತಿಗೆ ಅವಶ್ಯವಿರುವ ಆಂತರಿಕ ಮತ್ತು ಬಾಹ್ಯ ಅಂಗಾಂಗಗಳನ್ನು ಸೇರಿಸಿ ಸಂತಾನೋತ್ಪತ್ತಿಯ ರಚನೆ ಎನ್ನಲಾಗಿದೆ. ಮಗುವಿನ ಹುಟ್ಟಿನ ಜೊತೆಗೆ ಬರುವ ಅಂಗಾಂಗಗಳು ಗಾತ್ರದಲ್ಲಿ ಚಿಕ್ಕದಾಗಿದ್ದು ಋತುಸ್ರಾವದ ಹಂತದವರೆಗೂ ನಿಷ್ಕ್ರಿಯವಾಗಿರುತ್ತದೆ.
ಹದಿಹರೆಯದ ಹಂತದಲ್ಲಿ ಕೇಂದ್ರ ನರಮಂಡಲ ವ್ಯವಸ್ಥೆ ಕೆಲವು ಹಾರ್ಮೋನುಗಳ ಚಟುವಟಿಕೆಗಳನ್ನು ಆರಂಭಿಸುತ್ತದೆ.  ಈ ಹಾರ್ಮೋನುಗಳ ಸ್ರವಿಕೆ ದೈಹಿಕ ಮತ್ತು ಲೈಂಗಿಕ  ಬದಲಾವಣೆಗಳನ್ನು ತಂದು ಸಂತಾನೋತ್ಪತ್ತಿಗೆ ಅಂಗಾಂಗಗಳನ್ನು ಸಿದ್ಧಗೊಳಿಸುತ್ತದೆ.
ಈ ಸಮಯದಲ್ಲಿಯೇ ಹುಡುಗಿಯರಲ್ಲಿ ಸ್ತನಗಳು ಮತ್ತು ಅದರ ಕಪ್ಪು ಭಾಗ (ಮೊಲೆ ತೊಟ್ಟು) ಬೆಳೆಯಲಾರಂಭಿಸುತ್ತವೆ. ಗುಪ್ತಾಂಗಗಳ ಮೇಲೆ, ಕಂಕುಳಲ್ಲಿ ಕೂದಲು ಬೆಳೆಯುತ್ತದೆ. ಬಿಳಿಮುಟ್ಟು ಆಗಲಾರಂಭಿಸುತ್ತದೆ. ಇದರೊಂದಿಗೆ ಅಂಡನಾಳ, ಅಂಡಕೋಶ ಇತ್ಯಾದಿಗಳೂ ಬೆಳೆಯಲಾರಂಭಿಸುತ್ತವೆ.
ಹುಡುಗಿಯರು ಮಾನಸಿಕವಾಗಿಯೂ ಸಹ ಬೆಳೆಯಲಾರಂಭಿಸುತ್ತಾರೆ. ತಿಳುವಳಿಕೆ, ವ್ಯವಹಾರ ಜ್ಞಾನ ಬುದ್ಧಿಶಕ್ತಿ ಹೆಚ್ಚಾಗುತ್ತದೆ. ಹುಡುಗಾಟ ಕಡಿಮೆಯಾಗಿ ಗಾಂಭೀರ್ಯ ಮೂಡುತ್ತದೆ. ಪ್ರಪಂಚವನ್ನು ಅರಿಯಬೇಕೆನ್ನುವ ಕುತೂಹಲ, ಹುಮ್ಮಸ್ಸು ಮೂಡುತ್ತದೆ; ದೊಡ್ಡವಳಾಗುತ್ತಿದ್ದೇನೆ ಧೈರ್ಯ ಬರುತ್ತದೆ; ಅತ್ಯಂತ ಕ್ರಿಯಾಶೀಲರಾಗುತ್ತಾರೆ.
ಆದರೆ, ತನ್ನ ದೈಹಿಕ ಬೆಳವಣಿಗೆಯ ಬಗ್ಗೆ ಸರಿಯಾಗಿ ಅರಿವಿರದಿದ್ದರೆ ನಾಚಿಕೆ, ಸಂಕೋಚ ಬೆಳೆಯುತ್ತದೆ. ಯಾರೊಂದಿಗೂ ಸೇರದೆ ಒಂಟಿಯಾಗಿರುವ ಸ್ವಭಾವ ಬೆಳೆಯುತ್ತದೆ. ಕುಟುಂಬದವರು ಈ ಬಗ್ಗೆ ಸರಿಯಾಗಿ ವಿವರಿಸದೆ ಇತಿಮಿತಿಗಳನ್ನು ಹಾಕುವುದರಿಂದ ಸ್ವಾತಂತ್ರ್ಯವನ್ನು ಕಳೆದುಕೊಂಡೆನೆಂಬ ಭಾವದಿಂದ ತಂದೆ-ತಾಯಿಯರಲ್ಲಿ ಸಿಟ್ಟು, ಸಿಡುಕು ಮೂಡುತ್ತದೆ. ಸ್ನೇಹಿತೆಯರಲ್ಲಿ, ಉಪಾಧ್ಯಾಯರಲ್ಲಿ ಸಂಬಂಧ ತೀವ್ರವಾಗುತ್ತದೆ. ಹುಡುಗರ ಬಗ್ಗೆ ಆಕರ್ಷಣೆಯೂ ಬೆಳೆಯುತ್ತದೆ. ಆದರೆ ಈ ಮಾನಸಿಕ ಬೆಳವಣಿಗೆಗಳು ಎಲ್ಲ ಹೆಣ್ಣುಮಕ್ಕಳಲ್ಲಿಯೂ ಒಂದೇ ರೀತಿ ಇರುತ್ತವೆ ಎಂದರೆ ತಪ್ಪಾಗುತ್ತದೆ. ಈ ಬೆಳವಣಿಗೆಗಳಲ್ಲಿ ಆ ಹೆಣ್ಣುಮಗಳ ಕುಟುಂಬ, ಶಾಲೆ, ಗೆಳತಿಯರು, ಬಂಧುಗಳು, ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ.  ಈ ವಿಷಯಗಳ ಬಗ್ಗೆ ವಿವರಿಸಿ ಹೇಳುವುದರಿಂದ ಅವರಲ್ಲಾಗುವ ಅಸಹಜ ಬದಲಾವಣೆಗಳನ್ನು, ಹಾನಿಕಾರಕ ಬೆಳವಣಿಗೆಗಳನ್ನು ತಡೆಗಟ್ಟಬಹುದು.
(ಮುಂದಿನ ಸಂಚಿಕೆಯಲ್ಲಿ – ಋತುಸ್ರಾವ ಎಂದರೇನು?)
- ಡಾ. ಪೂರ್ಣಿಮಾ ಮತ್ತು ಡಾ. ಸುಧಾ ಜಿ 

ಕವನ - ಅಕ್ಕ



ಎಂಥ ಎದೆಗಾರಿಕೆಯೇ
ಅಕ್ಕ ನಿನ್ನದು
ನಡೆದುಬಿಟ್ಟೆ
ಹುಟ್ಟುಡುಗೆಯಲಿ
ನಾನು ನನದೆಂಬ
ಲವಲೇಶ ನಿನಗಿಲ್ಲ
ಮೊಲೆ ಮುಡಿಗಳ
ಕಾಣ್ವರೆಂಬ ಅಂಜಿಕೆಯಿಲ್ಲ...

ಕಟ್ಟೆಳೆಯ ಧಿಕ್ಕರಿಸಿ ಹೊರಟೆ
ಇಹದ ಗಂಡ ಸಾವ ಕೆಡುವನೆಂದು
ಪರದ ಗಂಡನ ಸಂಗ ಬಯಸಿ
ಅನಭಾವದ ಪತಿಗೆ ಚಿತ್ತವಿತ್ತೆ
ಅದೇನು ಗುಂಡಿಗೆಯೇ ನಿನ್ನದು...

ಆಡುವ ಬಾಯಿಗೆ
ದೇವರಿಗೆ ಬಿಟ್ಟವಳಾದೆ
ಹೆಣ್ಣ ಜರಿವ ಜಗಕೆ
ದಿಟ್ಟ ಬೆಟ್ಟವಾದೆ
ಕಾಪಿಡುವ ಹೆಣ್ತನವ
ಎದೆಸೆಟೆಸಿ ತೆರೆದು ಮುಕ್ತವಾಗಿದೆ...

ಹೆಣ್ಣಿನಾತ್ಮಕೆ ಪ್ರತ್ಯಯದ ಮೂಲ
ಕುದಿಸದೇ ಕಾಯ ತಪಸ್ವಿಯಾದೆ
ಮಾಯದಾ ಬದುಕು ಕಳಚಿ
ಲೌಕಿಕಕೆ ಪರದೆ ಹಾಕಿ ವಿಮುಖವಾಗಿ
ಒಳಗಿನಂದಕೆ ಒಲಿದ ಪ್ರಭೆ...

ವಿರೂಪವನೊಲಿದ ಭವದ ಬಾಲೆ
ಛಲಕೆ ಹೆಸರಾದೆ
ಬಯಕೆಯ ಕತ್ತಲೆಯಾವರಿಸಿ
ಕೆಣಕಿದ ನಯನಗಳಾಟವ
ವಚನಾಮೃತದಿ ತೋಯಿಸಿ
ಮಣಿಸಿದ ಧೀರ ವನಿತೆ...

ಪ್ರಶ್ನೆಯಾಗಿ ಕಾಡುತಿರುವೆ
ಅಕ್ಕ ನಿನದೆಂಥ ಪರಿತ್ಯಾಗ
ಜಗದರಿವೆ ಹರಿದು
ಹೆರಳನೇಕೆ ಹರಡಿದೆ
ಇಹದ ಗಂಡಿನಾಟಕೆ
ಪರದ ಪತಿಯ ನಂಟೋ
ಜೀವಕಂಟಿದೊಡವೆ 
ಕಾಯ್ದೆ ಜತನದಿ...

ಉಡುತಡಿಯ ಕಿಡಿ
ಉರಿದುರಿದು ಬೆಳಗಿದೆ
ಸ್ತ್ರೀ ಕುಲದ ಹಣತೆ
ಜೀವ ಜಗದ ಪರಂಜ್ಯೋತಿ...
 - ಡಾ. ಸುವರ್ಣ