Pages

ಬೆಳಕಿನೆಡೆಗೆ – 1




ಪ್ರಮೀಳಾ ಒಂದು ದಿನ ಇದ್ದಕ್ಕಿದ್ದ ಹಾಗೆ ಹೊಟ್ಟೆನೋವಿನಿಂದ ಅಳುವುದಕ್ಕೆ ಶುರುಮಾಡಿದಳು. ಏನು, ಎತ್ತ ಎಂದ ಗಂಡ ಶಿವಪ್ಪ ಕೇಳಲು, ಅವನ ಕಡೆಗೆ ಪ್ರಮೀಳಾ ಗಮನವೇ ಕೊಡಲಿಲ್ಲ. ಕಣ್ಣಲ್ಲಿ ಧಾರಾಕಾರವಾಗಿ ನೀರು ಸುರಿಯುವುದಕ್ಕೆ ಶುರುವಾಯಿತು. ಕೈಗಳಿಂದ ಹೊಟ್ಟೆ ಹಿಸುಕಿಕೊಳ್ಳುತ್ತಾ, ನೀರು ಕೇಳಿದಳು. ಜೋರಾಗಿ ಉಸಿರಾಡೋಕೆ ಶುರುಮಾಡಿದಳು. ನೀರು ಕೊಟ್ಟಾಗ ಗಟಗಟ ಕುಡಿದು, ನಂತರ ಪ್ರಜ್ಞೆ ಬಂದು, ‘ನನಗೆ ಏನಾಯ್ತು?’, ಎಂದು ಕೇಳ್ತಾಳೆ. ಪ್ರಮೀಳಾಳ ಈ ರೀತಿಯ ವರ್ತನೆ ನಂತರದ ದಿನಗಳಲ್ಲಿ ಹೆಚ್ಚಾಯಿತು. ಅಕ್ಕಪಕ್ಕದ ಮನೆಯವರು ಶಿವಪ್ಪನಿಗೆ ‘ಇದು ದೆವ್ವದ ಕಾಟವೆಂದು, ಯಾವುದಾದರು ಮಂತ್ರವಾದಿಯ ಬಳಿಗೆ ಕರೆದುಕೊಂಡು ಹೋಗು’ ಎಂದು ಹೇಳಿದರು. ಪಕ್ಕದ ಮನೆಯ ಅಜ್ಜ ನಾರಾಯಣಪ್ಪ ‘ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ, ಈ ರೀತಿ ಆಗುತ್ತಿದೆಯಾ?’ ಎಂದು ಕೇಳಿದರು. ಕಾಕತಾಳೀಯವೆಂಬಂತೆ ಪ್ರಮೀಳಾ ಅದೇ ದಿನಗಳಲ್ಲಿ ಈ ರೀತಿ ವರ್ತಿಸುತ್ತಿದ್ದಳು. ಆಗ ಜನರ ಅನುಮಾನ ಗಟ್ಟಿಯಾಗಿ ‘ಇದು ಖಂಡಿತವಾಗಿಯೂ ಭೂತಚೇಷ್ಟೆನೇ’ ಅಂದರು. 
ಅದಕ್ಕೆ ಶಿವಪ್ಪ ಹೆದರಿ ಮಂತ್ರವಾದಿಗಳ ಬಳಿ ಕರೆದುಕೊಂಡು ಹೋದ. ಆ ಮಂತ್ರವಾದಿ ಪ್ರಮೀಳಾಗೆ ಬೇವಿನಸೊಪ್ಪು, ಬೂದಿ ಎಲ್ಲಾ ಹಾಕಿ ‘ನೀನು ಯಾರು? ಇವಳ ಮೈಮೇಲೆ ಏಕೆ ಬಂದಿರುವೆ? ಏನು ಬೇಕು?’ ಎಂದು ಪ್ರಶ್ನಿಸಿ ಹೊಡೆದರು. ಆದರೆ ಪ್ರಮೀಳಾ ವರ್ತನೆ ಹೆಚ್ಚಾಯಿತೇ ವಿನಃ ಯಾವ ಸುಧಾರಣೆಯೂ ಕಾಣಲಿಲ್ಲ. ಇದರಿಂದ ಕಂಗೆಟ್ಟ ಶಿವಪ್ಪ ತನ್ನ ಸ್ನೇಹಿತ ವೆಂಕಟೇಶ್‍ನ ಬಳಿ ತನ್ನ ಸಮಸ್ಯೆ ಹೇಳಿಕೊಂಡ. 
ವೆಂಕಟೇಶ್ “ಶಿವಪ್ಪ, ಇದು ದೆವ್ವದ ಕಾಟವಲ್ಲ, ನರಗಳ ದೌರ್ಬಲ್ಯದಿಂದಲೂ ಈ ರೀತಿ ಆಗುತ್ತದೆ.  ನೀನು ಒಂದು ಬಾರಿ ನಿನ್ನ ಹೆಂಡತೀನ ಮನೋವೈದ್ಯರ ಬಳಿ ಕರೆದುಕೊಂಡು ಹೋಗು”, ಎಂದರು. ಯಾವ ದಾರಿಯೂ ಕಾಣದೆ ಕಂಗಾಲಾಗಿದ್ದ ಶಿವಪ್ಪನಿಗೆ ದಾರಿ ಸಿಕ್ಕಿದಂತಾಗಿ ಪ್ರಮೀಳಾಳನ್ನು ಮನೋವೈದ್ಯರ ಬಳಿ ಕರೆದೊಯ್ದು. ಅಲ್ಲಿ ಮನೋವೈದ್ಯರ ಎಲ್ಲಾ ರೀತಿ ಚಿಕಿತ್ಸೆ ನೀಡಿದಾಗ ಪ್ರಮೀಳಾಳ ವಿಚಿತ್ರ ರೀತಿಯ ವರ್ತನೆಗೆ ಕಾರಣ ತಿಳಿಯಿತು. ಪ್ರಮೀಳಾಳ ಅಸ್ವಸ್ಥತೆಗೆ ಕಾರಣ ಅವಳ ಅತ್ತೆಯ ಕಾಟ ಎಂಬುದು ಮನೋವೈದ್ಯರು ಅವಳನ್ನು ಪ್ರಶ್ನಿಸಿದಾಗ ತಿಳಿಯಿತು. “ನಾನು ಈ ರೀತಿ ಮಾಡಿದರೆ ಅತ್ತೆ ನನ್ನ ತಂಟೆಗೆ ಬರೋಲ್ಲ ಎಂದು ಈ ರೀತಿ ಮಾಡಿದೆ” ದೈನ್ಯದಿಂದ ನುಡಿದಳು. ಚಿಕಿತ್ಸೆಯ ನಂತರ ಅವಳು ಈಗ ಆರೋಗ್ಯವಾಗಿದ್ದಾಳೆ. ಡಾಕ್ಟರ್ ಗಂಡನಿಗೆ ಬುದ್ಧಿ ಹೇಳಿದ ಮೇಲೆ ಅತ್ತೆಯ ಕಾಟ ಕಡಿಮೆಯಾಗಿದೆ.
ಈ ಮೇಲಿನ ಘಟನೆಯಿಂದ ತಿಳಿದು ಬರುವುದೇನೆಂದರೆ, ಪ್ರತಿಯೊಬ್ಬ ವ್ಯಕ್ತಿಯ ಬಾಹ್ಯ ವರ್ತನೆಗೆ ಕಾರಣ ಆಂತರಿಕ ಅತೃಪ್ತಿಗಳು. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ನಾವು ಹೋಗಬೇಕಾದದ್ದು ಮನೋವೈದ್ಯರ ಬಳಿಗೆ ಹೊರತು ಮಂತ್ರವಾದಿಗಳ ಬಳಿಗಲ್ಲ. ದೇಹಕ್ಕೆ ಖಾಯಿಲೆಯಾದಂತೆ ಮನಸ್ಸಿಗೂ ಖಾಯಿಲೆಯಾಗಬಹುದು. ಆದರೆ ಅದು ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದರೆ ಖಂಡಿತವಾಗಿಯೂ ಗುಣವಾಗುತ್ತದೆ. 
ಅಶ್ವಿನಿ ವಿ
[ಕೃಪೆ : ಅಪೂರ್ವ ಕಣ್ಮಣಿ ಮಾಸಪತ್ರಿಕೆ ]

ಕಾಮೆಂಟ್‌ಗಳಿಲ್ಲ: