Pages

ಅನುವಾದ: "ದುಡ್ಡು"



[ಚಲಂ ಎಂದೇ ಪ್ರಖ್ಯಾತರಾಗಿರುವ ಗುಡಿಪಾಟಿ ವೆಂಕಟಾಚಲಂರವರು ಜನಿಸಿದ್ದು ಮೇ 19, 1894ರಲ್ಲಿ. 
ತೆಲುಗಿನ ಪ್ರಖ್ಯಾತ ಬರಹಗಾರರು ಮತ್ತು ತತ್ವಜ್ಞಾನಿಗಳಾದ ಚಲಂರವರು ಆಧುನಿಕ ತೆಲುಗು ಸಾಹಿತ್ಯದ ಅತ್ಯಂತ ಪ್ರಭಾವಶಾಲಿ ಬರಹಗಾರರಲ್ಲೊಬ್ಬರು. ಅವರ ಬಹಳ ಕೃತಿಗಳು ಮಹಿಳೆಯರ ಸಮಸ್ಯೆಗಳ ಬಗ್ಗೆ, ಅವರನ್ನು ಎದುರಿಸುವ ಬಗ್ಗೆ ಚರ್ಚಿಸುತ್ತವೆ. ಚಿಕ್ಕಂದಿನಲ್ಲಿ ಅವರ ತಂದೆಯ ಹೊಡೆತಕ್ಕೆ ಸಿಲುಕಿದ್ದ ಚಲಂರವರು ಆ ರೀತಿಯ ಶಿಕ್ಷಣವನ್ನು ತಿರಸ್ಕರಿಸಿ, ಮಕ್ಕಳ ಶಿಕ್ಷಣದ ಬಗ್ಗೆ, ಮಕ್ಕಳನ್ನು ಬೆಳೆಸುವುದು ಹೇಗೆ ಎಂಬುದರ ಬಗ್ಗೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಮಕ್ಕಳ ಪ್ರಶ್ನಿಸುವ ಮನಸ್ಸು ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ಚಿತ್ರಿಸಿದ್ದಾರೆ. ಈ ಲೇಖನವನ್ನು ಅವರ “ಬಿಡ್ಡಲ ಶಿಕ್ಷಣ” ಎಂಬ ಪುಸ್ತಕದಿಂದ ಆರಿಸಲಾಗಿದೆ]

ಮಗ: ಅಪ್ಪ ನಾವು ಕಾರು ಕೊಂಡುಕೊಳ್ಳಬಾರದಾ?
ಅಪ್ಪ: ಕಾರು ಎಷ್ಟು ಬೆಲೆ ಗೊತ್ತಾ? ಹತ್ತು ಸಾವಿರ ರೂಪಾಯಿ.
ಮಗ: ನಮ್ಮ ಹತ್ತಿರ ಹತ್ತು ಸಾವಿರ ರೂಪಾಯಿಗಳು ಇಲ್ಲವಾ?
ಅಪ್ಪ: ಇಲ್ಲ, ಎಲ್ಲಿಂದ ಬರುತ್ತೆ?
ಮಗ: ಕಾರು ಕೊಂಡುಕೊಳ್ಳುವವರಿಗೆ ಎಲ್ಲಿಂದ ಬರುತ್ತೆ?
ಅಪ್ಪ: ಅವರು ಸಂಪಾದಿಸಿಕೊಳ್ಳುತ್ತಾರೆ.
ಮಗ: ನೀನೇಕೆ ಸಂಪಾದಿಸಬಾರದು?
ಅಪ್ಪ: ನನಗೆ ಆಗೋಲ್ಲ.
ಮಗ: ಆಗದಿದ್ದರೆ ಕಲಿತುಕೊಳ್ಳಬಾರದಾ?
ಅಪ್ಪ: ಹೇಗೆ?
ಮಗ: ಮತ್ತೆ ಆಗದಿದ್ದನ್ನೆಲ್ಲಾ ನನಗೆ ಕಲಿತುಕೊ ಅಂತೀಯಾ?
ಅಪ್ಪ: ಇದು ಕಲಿತುಕೊಂಡರೆ ಬರುವುದಲ್ಲ.
ಮಗ: ಅವರಿಗೆ ಹೇಗೆ ಬಂತು?
ಅಪ್ಪ: ಅವರಿಗೆ ಬುದ್ಧಿ ಇದೆ.
ಮಗ: ನಿನಗೇಕೆ ಇಲ್ಲ?
ಅಪ್ಪ: ದೇವರು ಕೊಡಲಿಲ್ಲ.
ಮಗ: ಯಾಕೆ ಕೊಡಲಿಲ್ಲ?
ಅಪ್ಪ: ಏನೋ!
ಮಗ: ನನಗೆ ದೇವರು ಲೆಕ್ಕದಲ್ಲಿ ಬುದ್ಧಿ ಕೊಡಲಿಲ್ಲ. ಮಾರ್ಕು ಕಡಿಮೆ ಬಂದರೆ ಹೊಡೆಯುತ್ತೀಯಲ್ಲಾ?
ಅಪ್ಪ: ಬರಲಿ ಅಂತಾ.
ಅಪ್ಪ: ನಿನ್ನನ್ನು ಹೊಡೆಯುವವರಿದ್ದರೆ ನಿನಗೂ ದುಡ್ಡು ಮಾಡಿಕೊಳ್ಳೋ ಬುದ್ಧಿ ಬರುತ್ತೇನೋ? ನಿನಗೆಷ್ಟು ಸಂಬಳ?
ಅಪ್ಪ: 320 ರೂಪಾಯಿಗಳು.
ಮಗ: ಯಾರು ಕೊಡ್ತಾರೆ?
ಅಪ್ಪ: ಕಂಪನಿಯವರು.
ಮಗ: ಅಷ್ಟೆ ಯಾಕೆ ಕೊಡ್ತಾರೆ. ಜಾಸ್ತಿ ಕೊಡಲ್ವಾ?
ಅಪ್ಪ: ನಾನು ಮಾಡುವ ಕೆಲಸ ಅಷ್ಟೆ.
ಮಗ: ಜಾಸ್ತಿ ಸಂಬಳ ಬರುವ ಕೆಲಸ ಇಲ್ಲವಾ?
ಅಪ್ಪ: ಇದ್ದಾವೆ.
ಮಗ: ಅದನ್ನು ನಿನಗೆ ಯಾಕೆ ಕೊಡುವುದಿಲ್ಲ. ನಿನಗೆ ಕೈಲಾಗುವುದಿಲ್ಲವಾ?
ಅಪ್ಪ: ಆಗುತ್ತೆ, ಆದರೆ ಕೊಡೋಲ್ಲ.
ಮಗ: ಅವರಿಗೆ ಯಾಕೆ ಕೊಟ್ಟರು?
ಅಪ್ಪ: ಅವರಿಗೆ ಅನುಭವ, ಬುದ್ಧಿ ಜಾಸ್ತಿ ಅಂದುಕೊಳ್ತಾರೆ.
ಮಗ: ಯಾಕಂದುಕೊಳ್ತಾರೆ?
ಅಪ್ಪ: ನನಗೇನು ಗೊತ್ತು?
ಮಗ: ಅವರನ್ನು ಕೇಳಬಾರದಾ?
ಅಪ್ಪ: ಕೇಳಿದರೂ ಲಾಭವಿಲ್ಲ.
ಮಗ: ಯಾರು ಯಾವಾಗ ಮಾತನಾಡಿದರೂ ದುಡ್ಡಿಲ್ಲ, ದುಡ್ಡಿಲ್ಲ ಅಂತಾರೆ. ಎಲ್ಲಿಂದ ಬರುತ್ತೆ ದುಡ್ಡು?
ಅಪ್ಪ: ಕಷ್ಟಪಟ್ಟು ಕೆಲಸ ಮಾಡಿದರೆ ಬರುತ್ತೆ.
ಮಗ: ನೀನು ಕಷ್ಟಪಟ್ಟು ಕೆಲಸ ಮಾಡುವುದಿಲ್ಲವಾ?
ಅಪ್ಪ: ಮಾಡ್ತೀನಿ.
ಮಗ: ಮತ್ತೆ ನಿನಗೆ ಬರುವುದಿಲ್ಲವಲ್ಲ? ಇನ್ನೂ ಕಷ್ಟಪಡು ಬರುತ್ತೆ.
ಅಪ್ಪ: ಇನ್ನು ನನ್ನ ಕೈಲಾಗೋಲ್ಲ, ಲಾಭವೂ ಇಲ್ಲ.
ಮಗ: ದೊಡ್ಡವರಿಗೆ ಉಪಯೋಗವಿಲ್ಲ, ಆದರೆ ಚಿಕ್ಕವರಿಗೆ ಮಾತ್ರ ಇನ್ನು ಕಷ್ಟಪಡು, ಇನ್ನು ಕಷ್ಟಪಡು ಅಂತಾ ಹೊಡೀತೀರಾ.
ಅಪ್ಪ: ಹೌದು, ಚಿಕ್ಕವರಿಗೆ ತಾಳ್ಮೆ ಜಾಸ್ತಿ.
ಮಗ: ಎಲ್ಲಿಂದ ಬರುತ್ತೆ ದುಡ್ಡು.
ಅಪ್ಪ: ಸರ್ಕಾರ ತಯಾರು ಮಾಡುತ್ತೆ.
ಮಗ: ಎಲ್ಲರಿಗೆ ಸರಿ ಹೋಗುವಷ್ಟು ಹೆಚ್ಚಾಗಿ ತಯಾರು ಮಾಡಲು ಸಾಧ್ಯವಿಲ್ಲವಾ?
ಅಪ್ಪ: ಎಲ್ಲರಿಗೂ ಸಾಕಾಗುವುದಿಲ್ಲ.
ಮಗ: ಹೇಗೆ ತಯಾರು ಮಾಡ್ತಾರೆ? ದುಡ್ಡು ಅಂದ್ರೆ ರೂಪಾಯಿ ತಾನೆ?
ಅಪ್ಪ: ನೋಟುಗಳನ್ನು ಅಚ್ಚು ಹಾಕುತ್ತಾರೆ.
ಮಗ: ಇನ್ನೂ ಹೆಚ್ಚು ನೋಟುಗಳನ್ನು ಅಚ್ಚು ಹಾಕಬಾರದು?
ಅಪ್ಪ: ಎಷ್ಟು ಬೇಕೋ ಅಷ್ಟು ಅಚ್ಚು ಹಾಕ್ತಾನೆ ಇದ್ದಾರೆ. 
ಮಗ: ಯಾರಿಗೆ ಬೇಕು?
ಅಪ್ಪ: ಸರ್ಕಾರಕ್ಕೆ.
ಮಗ: ಅವರಿಗೆ ಅವರು ಅಚ್ಚು ಹೊಡೆಸಿಕೊಂಡ್ರೆ ನಮಗೇ ಹೇಗೆ ಬರುತ್ತೆ?
ಅಪ್ಪ: ಸರ್ಕಾರಕ್ಕೆ ಕೆಲಸ ಮಾಡುವವರಿಗೆ ಕೊಡ್ತಾರೆ. ಅವರು ಅವರ ಕೆಳಗಿನ ಕೆಲಸದವರಿಗೆ ಕೊಡ್ತಾರೆ.
ಮಗ: ಎಲ್ಲರಿಗೂ ಬೇಕಾಗುವಷ್ಟು ಕೊಡಬಾರದಾ? ನಮಗೆ ಕಾರು ಕೊಳ್ಳಲು ಹತ್ತು ಸಾವಿರ ಅಚ್ಚು ಹಾಕಿಸಿ ಕೊಡಬಾರದಾ? ಕೆಲವರು ಅವರನ್ನು ಕೇಳಿ ತೆಗೆದುಕೊಂಡು ಕಾರು ಕೊಂಡುಕೊಳ್ಳುತ್ತಾರೆ. ನಿನಗೆ ಅವರನ್ನು ಕೇಳಲು ಆಗದು. ನಿನ್ನ ಮುಖ ನೋಡಿದ್ರೆ ಅವರು ಕೊಡುವುದಿಲ್ಲ.
ಅಪ್ಪ: ಅದೇನು?
ಮಗ: ಅಮ್ಮ ಹೇಳಿದ್ಳಲ್ಲಾ, ಅಪ್ಪನ ಮುಖ ನೋಡಿದ್ರೆ ಯಾರಿಗೂ ಏನೂ ಕೊಡುವ ಮನಸ್ಸಾಗುವುದಿಲ್ಲ. ಹೋಗಲಿ, ಸರ್ಕಾರ ಅಂದ್ರೆ ಯಾರು?
ಅಪ್ಪ: ಕೆಲವರು ಶ್ರೀಮಂತರು.
ಮಗ: ಅವರು ಹೇಗೆ ಶ್ರೀಮಂತರಾದರು?
ಅಪ್ಪ: ಜನರ ವಿಶ್ವಾಸದ ಮೂಲಕ.
ಮಗ: ನಿನ್ನ ಮೇಲೆ ಬರಬಾರದಾ ವಿಶ್ವಾಸ? ನೀನು ವಿಶ್ವಾಸ ತರೆಸಿಕೊ. ಆಗ ನೀನು ಜಾಸ್ತಿ ನೋಟುಗಳನ್ನು ಅಚ್ಚು ಹಾಕಿಸಿಕೊಂಡು, ನಿನಗೊಂದು ಕಾರು, ನನಗೊಂದು ಕಾರು, ಅಮ್ಮನಿಗೊಂದು ಕಾರು ಕೊಂಡುಕೊಳ್ಳಬಹುದು. ಹೌದು. ಎಲ್ಲಾ ಅವರೆ ತೆಗೆದುಕೊಂಡು ಬಿಟ್ರೆ ಬಡವರಿಗೆ ಏನು ಮಿಗುತ್ತೆ? ಜನ ಅವರನ್ನು ನಂಬಿದ್ದಕ್ಕಾಗಿ ಅವರಿಗೆ ಕಾರು, ಬಂಗಲೆ. ಅವರನ್ನು ನಂಬಿ ಅವರನ್ನು ಮೇಲೆ ತಂದ ಬೀದಿಯವರಿಗೆ ಮಾತ್ರ ತಿಂಡಿ ಕೂಡಾ ಇಲ್ಲ.
ಅಪ್ಪ: ಅದಕ್ಕಿಂತ ಇನ್ನೇನು ಮಾಡ್ತಾರೆ?
ಮಗ: ಯಾಕೆ ಸುಮ್ಮನಿರ್ತಾರೆ? ಒದೆಯುವುದಿಲ್ಲವೆ?
ಅಪ್ಪ: ಒದ್ದರೆ ಸರ್ಕಾರ ಸುಮ್ಮನಿರುವುದಿಲ್ಲ.
ಮಗ: ಇರದಿದ್ದರೆ?
ಅಪ್ಪ: ಈ ಆಡಳಿತ ಎಲ್ಲಾ ಯಾರು ನೋಡಿಕೊಳ್ತಾರೆ?
ಮಗ: ದುಡ್ಡೆಲ್ಲಾ ತಮಗೆ ತೆಗೆದುಕೊಳ್ಳದೆ ಆಳುವವರಿರುವುದಿಲ್ಲವಾ?
ಅಪ್ಪ: ಇರುವುದಿಲ್ಲ.
ಮಗ: ನೀನೂ ಅಷ್ಟೇನಾ?
ಅಪ್ಪ: ಈಗಲೇ ಅಲ್ವಾ ನಾಲ್ಕು ಕಾರು ಕೊಂಡುಕೊ ಅಂದೆ?
ಮಗ: ಹೌದು, ನಮ್ಮ ಸರ್ಕಾರ ಬಂದ್ರೆ. ಆದ್ರೂ ದುಡ್ಡು ಅನವಶ್ಯವಾಗಿ. . . .
ಅಪ್ಪ: ಅವರು ಒಪ್ಪಿಕೊಳ್ಳುವುದಿಲ್ಲ. ಅವರು ಒಪ್ಪಿಕೊಂಡರೂ ಅವರ ಕೈಯಲ್ಲಿ ಆಗುವುದಿಲ್ಲ.
ಮಗ: ಅವರಿಗೆ ಹೇಗೆ ಆಗುತ್ತೆ? ಇವರಿಗೂ ಕಲಿಸಬಾರದಾ?
ಅಪ್ಪ: ಜನರಿಗೆ ಅವರ ಮೇಲೆ ವಿಶ್ವಾಸ ಬರುವುದಿಲ್ಲ.
ಮಗ: ದುಡ್ಡೆಲ್ಲಾ ಬಚ್ಚಿಟ್ಟುಕೊಳ್ಳುವವರನ್ನು ಬಿಟ್ಟರೆ ಜನರಿಗೆ ಬೇರೆಯವರ ಮೇಲೆ ವಿಶ್ವಾಸ ಬರುವುದಿಲ್ಲವಾ? ಒಂದು ವೇಳೆ ದುಡ್ಡು ಬಚ್ಚಿಟ್ಟುಕೊಳ್ಳುವವರಿಗೆ, ಸರ್ಕಾರದ ಕೆಲಸ ಮಾಡುವುದು ಸಾಧ್ಯವಿಲ್ಲವೇನೋ? ಹೋಗಲಿ ಅವರು ತೆಗೆದುಕೊಳ್ಳುವಷ್ಟು ತೆಗೆದುಕೊಂಡು ಇನ್ನಷ್ಟು ನೋಟುಗಳನ್ನು ಅಚ್ಚು ಹಾಕಿ ಎಲ್ಲರಿಗೂ ಕೊಡಬಾರದಾ? ಆಗ ಎಲ್ಲರಿಗೂ ತಿಂಡಿ, ಕಾರು ಇರುತ್ತಲ್ವಾ?
ಅಪ್ಪ: ಎಲ್ಲರಿಗೂನಾ? ಹಾಗೆ ಒಪ್ಪಿಕೊಳ್ಳುವುದಿಲ್ಲ.
ಮಗ: ಯಾಕೆ?
ಅಪ್ಪ: ಹಾಗೆ ಒಪ್ಪಿಕೊಂಡರೆ ಎಲ್ಲರಿಗೂ ಇರುತ್ತೆ. ಇನ್ನು ಶ್ರೀಮಂತರ ಹೆಚ್ಚುಗಾರಿಕೆ ಏನು?
ಮಗ: ಅದಕ್ಕೆ ಅಂತಾ ಹೆಚ್ಚು ಜನರನ್ನು ಬಡವರನ್ನಾಗಿ ಇಡ್ತಾರ?
ಅಪ್ಪ: ಅಂದ್ರೆ ನಿನ್ನ ಬಟ್ಟೆ, ನಿನ್ನ ಗೊಂಬೆಗಳೂ, ಪುಸ್ತಕಗಳು ನಮ್ಮ ಕೆಲಸದ ಮಗನ ಜೊತೆ ಹಂಚಿಕೊಳ್ತೀಯಾ? 
ಮಗ: ಊ…… ಹಂಚಿಕೊಳ್ಳುವುದಿಲ್ಲ. ಆದರೆ ಎಲ್ಲರಿಗೂ ಮೊದಲಿನಿಂದಲೇ ಸಮಾನವಾಗಿ ಇದ್ರೆ ನನಗೇ ಬೇಕು ಅಂತಾ, ನನಗೆ ಇರ್ಬೇಕು ಅಂತ ಬಚ್ಚಿಟ್ಟುಕೊಳ್ಳೋಲ್ಲ.
ಅಪ್ಪ: ಅವರೂ ಅಷ್ಟೆ. ಸಾಧ್ಯವಾದ್ರೆ ಬಚ್ಚಿಟ್ಟುಕೊಳ್ತಾರೆ, ಇಲ್ಲದಿದ್ದರೆ ವಿಧಿ ಇಲ್ಲದೆ ಹಂಚಿಕೊಳ್ತಾರೆ.
ಮಗ: ಹೋಗಲಿ, ಎಲ್ಲಾ ಕಡಿಮೆ ಬೆಲೆಗೆ ಮಾಡಬಾರದಾ? ಎಲ್ಲದಕ್ಕೂ ಬೆಲೆ ಹೆಚ್ಚಿಸುವುದು ಯಾಕೆ? ಯಾರು ಆ ಕೆಲಸ ಮಾಡುವುದು, ಸರ್ಕಾರಾನಾ?
ಅಪ್ಪ: ಸರ್ಕಾರ ಅಲ್ಲ. ಅದೇ ಜಾಸ್ತಿ ಆಗುತ್ತೆ. ಆ ವಸ್ತು ಕಡಿಮೆಯಾಗಿ, ಕೇಳುವವರು ಜಾಸ್ತಿಯಾದ್ರೆ. . . .
ಮಗ: ಮೊನ್ನೆ ನಮ್ಮ ಕ್ಲಾಸಿನಲ್ಲಿ ರಾಮರಾಜು ಇಲ್ವಾ, ರಾಜಯ್ಯನ ಮಗ, ಅವನು ಪುಸ್ತಕ ಕೊಂಡುಕೊಳ್ಳಲಿಲ್ಲ. ಟೀಚರ್ ಕೇಳಿದ್ರೆ ದುಡ್ಡಿಲ್ಲ ಅಂದ್ರೆ ಟೀಚರ್ ಅವನನ್ನು ಹೊಡೆದರು. ಅವನು ಹೇಗೆ ಅತ್ತಾ ಗೊತ್ತಾ? ರಾತ್ರಿ ಊಟ ಮಾಡುವುದಿಲ್ಲವಂತೆ. ಹೋಗಲಿ ಅವರಿಗಾದ್ರೂ ದುಡ್ಡು ಕೊಡಬಾರದೆ?
ಅಪ್ಪ: ಅಂತವರಿಗೆ ನಾವು ದುಡ್ಡು ಹಂಚಿದರೆ ನಿನಗೆಲ್ಲಿ ಇರುತ್ತದೆ? ನಿನಗೆ ತುಪ್ಪ, ಮೊಸರು ಇರುವುದಿಲ್ಲ . . . .
ಮಗ: ಅವರಿಗೇನು? ಅವರು ಎಷ್ಟು ಬೇಕಾದರೂ ನೋಟುಗಳನ್ನು ಅಚ್ಚು ಹಾಕಬಹುದಲ್ಲವೇ?
ಅಪ್ಪ: ಸುಮ್ಮನೆ ನಿನಗೆ ಅರ್ಥವಾಗಲಿ ಎಂದು ಆ ರೀತಿ ಹೇಳಿದೆ. ಅವರು ಆ ರೀತಿ ಮಾಡಲು ಅವಕಾಶವಿಲ್ಲ. ಅವರಿಗೂ ಸಂಬಳವೇ.
ಮಗ: ಯಾರು ಕೊಡುತ್ತಾರೆ?
ಅಪ್ಪ: ಅವರಿಗೆ ಅವರೇ ನೋಟುಗಳನ್ನು ಹೆಚ್ಚು ಹೆಚ್ಚು ಅಚ್ಚು ಹಾಕಿದರೆ ಹಣ ಅಗ್ಗವಾಗಿ ವಸ್ತುಗಳ ಬೆಲೆ ಈಗ ಇರುವುದಕ್ಕಿಂತ ಹೆಚ್ಚಾಗುತ್ತದೆ. 
ಮಗ: ಈ ಹಣ ಎನ್ನುವುದೇ ಇಲ್ಲದಿದ್ದರೆ ಚೆನ್ನಾಗಿರುತ್ತಲಾ?
ಅಪ್ಪ: ವಸ್ತುಗಳನ್ನು ಹೇಗೆ ಕೊಂಡುಕೊಳ್ಳುತ್ತೀಯಾ? ಯಾವುದರಿಂದ?
ಮಗ: ಯಾಕೆ ಕೊಂಡುಕೊಳ್ಳಬೇಕು? ಯಾರಿಗೆ ಏನು ಬೇಕೊ ಅದನ್ನು ಸರ್ಕಾರ ಕೊಟ್ಟರಾಯಿತು.
ಅಪ್ಪ: ನಿನಗೆ ತುಪ್ಪ ಅಗತ್ಯವಿಲ್ಲ, ಕಾಫಿ ಬ್ರೆಡ್, ಮಾಂಸ ಕೂಡ ಬೇಡವೆಂದರೆ ಒಪ್ಪಿಕೊಳ್ಳುತ್ತೀಯ?
ಮಗ: ಓ, ಎಲ್ಲರಿಗೂ ಸುಖವಾಗಿ ಇರಲು ಕೊಟ್ಟರೆ ನಾನು ಒಪ್ಪಿಕೊಳ್ಳುತ್ತೇನೆ.
ಅಪ್ಪ: ಆದರೆ, ಕೆಲವರು ಆ ರೀತಿ ಒಪ್ಪಿಕೊಳ್ಳುವುದಿಲ್ಲ.
ಮಗ: ಒಪ್ಪಿಕೊಳ್ಳದಿದ್ದವರಿಗೆ ಒದ್ದರೆ ಸರಿ.
ಅಪ್ಪ: ಕಮ್ಯುನಿಸ್ಟ್ ಆಗಿ ಹೋಗುತ್ತಿದ್ದೀಯಲ್ಲ.
ಮಗ: ಅಂದರೆ?
ಅಪ್ಪ: ನಿನ್ನ ರೀತಿ ಮಾತನಾಡುವವನು ಎಂದರ್ಥ.
ಮಗ: ಅದೇ ಒಳ್ಳೆಯದು. ಈಗ ಬಹಳಷ್ಟು ಅನ್ಯಾಯವಾಗುತ್ತಿದೆ. ನೀನು ಕಮ್ಯುನಿಸ್ಟ್ ಆಗಿ ಬಿಡು. 
ಅಪ್ಪ: ಅವರು ದೇವರಿಲ್ಲ ಎನ್ನುತ್ತಾರೆ.
ಮಗ: ಅಂದರೆ ಏನು? ದೇವರಿಗೇನಾದರೂ ತೊಂದರೇನಾ? ಏನು ಇಲ್ಲ. ಅಷ್ಟು ಬೇಕೆಂದರೆ ದೇವರು ಎಲ್ಲರಿಗೂ ಬೇಕಾಗುವುದನ್ನು ಏರ್ಪಾಡು ಮಾಡಬಹುದಲ್ಲವೇ?
ಅಪ್ಪ: ಏನೋ, ನನಗದೆಲ್ಲ ಗೊತ್ತಿಲ್ಲ, ಹೋಗೋ!!!
-  ಡಾ।। ಸುಧಾ.ಜಿ

ಕಾಮೆಂಟ್‌ಗಳಿಲ್ಲ: