Pages

ಪುಸ್ತಕ ಪ್ರೀತಿ: "ಪ್ರವಾದಿ"


       ಖಲೀಲ್ ಗಿಬ್ರಾನ್ ಒಬ್ಬ ಶಬ್ದ ಗಾರುಡಿಗ. ಸರಳ ಪದ-ಪುಂಜಗಳ ಸೂಕ್ತ ಬಳಕೆಯಿಂದ ಸೂಕ್ಷ್ಮಾರ್ಥವ ಸೃಜಿಸಿದ ಮಾಂತ್ರಿಕ. ಇಂಗ್ಲೀಷ್ ಸಾಹಿತ್ಯದಲ್ಲಿ ತನ್ನ ಗದ್ಯಕಾವ್ಯಗಳಿಂದ ಓದುಗರ ಆತ್ಮವನ್ನು ಸಾಂತ್ವನಗೊಳಿಸಿ, ನಮ್ಮ ಅನುಭವ ಹಾಗು ಗ್ರಹಿಕೆಯ ಸಂಕುಚಿತತೆಯನ್ನು ತನ್ನದೇ ಆದ ಶೈಲಿಯಲ್ಲಿ ಮನ ಕಲುಕಿ ಮನದಟ್ಟು ಮಾಡಿಸಿದ ಮಾಂತ್ರಿಕ. ಶೇಕ್ಸ್ ಪಿಯರ್  ಹಾಗು ಲಾವುತ್ಸೇ ಅವರುಗಳ ನಂತರ ಅತಿ ಹೆಚ್ಚು ಮಾರಾಟವಾಗಿರುವುದು ಈತನ ಕವಿತೆಗಳೇ.  

      ೬ ಜನವರಿ ೧೮೮೩, ಲೆಬೆನಾನಿನ ಬ್ರಾಷೆರಿ ಗ್ರಾಮದ ಮ್ಯಾರೋನೈಟ್(ಸಿರಿಯಾ ಕ್ರೈಸ್ತ) ಕುಟುಂಬದಲ್ಲಿ ಜನಸಿದ ಗಿಬ್ರಾನ್ ೧೮೯೫ ರಲ್ಲಿ ಅಮೆರಿಕಾದ ಬೋಸ್ಟನ್‌ಗೆ ವಲಸೆ ಬಂದು ದರ್ಜಿವೃತ್ತಿ ಕಟ್ಟಿಕೊಂಡ ಅಮ್ಮನ ನೆರಳಿನಲ್ಲಿ ಬೆಳೆಯುತ್ತಾನೆ. ಚಿತ್ರಕಲೆಯ ಪರಿಣಿತಿಯ ಜೊತೆಗೆ ಸಾಹಿತ್ಯ, ಅರಬ್ ಸಂಸ್ಕೃತಿ, ಸೂಫಿ ಚಿಂತನೆಗಳ ಕುರಿತು ಆಸಕ್ತಿ ಬೆಳೆಸಿಕೊಂಡ ಗಿಬ್ರಾನ್ ಅಮೆರಿಕಾದಲ್ಲಿ ಇದ್ದೇ ಟರ್ಕಿಯ ಆಕ್ರಮಣದ ವಿರುದ್ಧ ಲೆಬೆನಾನಿಗರ ಬಂಡಾಯವನ್ನು ಬೆಂಬಲಿಸಿ ಬರೆಯುತ್ತಾನೆ. ಆದರೆ ಆತನ ಕೃತಿಗಳು ಜೀವನ ಸತ್ಯದ ನವಿರಾದ ನಿರೂಪಣೆಗೇ ಪ್ರಸಿದ್ಧ.  ೧೯೨೩ರಲ್ಲಿ ಪ್ರಕಟವಾಗುವ 'ಪ್ರವಾದಿ' (The Prophet) ಗಿಬ್ರಾನ್ ನ ಅತ್ಯಂತ ಪ್ರಮುಖ ಕೃತಿ. ೪೦ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡ ಕೃತಿಯಿದು. 

        ಹನ್ನೆರಡು ವರುಷಗಳನ್ನು ಓರ್ಫಲೀಸ್ ನಲ್ಲಿ ಕಳೆದ ಅಲ್-ಮುಸ್ತಫಾ ತನ್ನನ್ನು ತವರಿಗೆ ಕೊಂಡೊಯ್ಯುವ ಹಡುಗು ಬರುವುದನ್ನು ಬೆಟ್ಟದ ಮೇಲಿನಿಂದ ಕಂಡು ಪುಳಕಿತನಾಗುತ್ತನೆ. ಹುಟ್ಟೂರಿಗೆ ತೆರಳುವ ಉತ್ಸಾಹ ಅವನಲ್ಲಿ ಆಹ್ಲಾದ ಉಂಟುಮಾಡುತ್ತದೆ. ಆದರೆ ಬೆಟ್ಟ ಇಳಿಯುತ್ತಾ ಈ ಊರನ್ನು ಬಿಟ್ಟು ಹೋಗಬೇಕಲ್ಲವೇ ಎಂಬ ಸತ್ಯ ಗ್ರಹಿಕೆಗೆ ಬರಲು ಒಂದು ಬಗೆಯ ದುಮ್ಮಾನ ಎದೆಯಲ್ಲಿ! "ಈ ಊರಿನ ಗೋಡೆಗಳ ನಡುವೆ ಕಳೆದ ನೋವಿನ ದಿನಗಳು ದೀರ್ಘ, ಒಂಟಿತನದ ಇರುಳುಗಳು ದೀರ್ಘ; ತನ್ನ ನೋವು ಮತ್ತು ತನ್ನ ಒಂಟಿತನದಿಂದ ಯಾರು ತಾನೇ ಮರುಗಿಲ್ಲದೆ ತೆರಳಲು ಸಾಧ್ಯ?" ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುವ ಮೂಲಕ ರಂಗೇರುವ ಗದ್ಯಕಾವ್ಯವು ಪ್ರಶ್ನೋತ್ತರಗಳ ಸರಪಳಿ, ಜೀವನ ಪರಾಮರ್ಶೆಯ ಸ್ಫಟಿಕ ಮಾಲೆ! 


       ಊರಿನ ಜನ ಬಂದು ಸೇರಿ ಅಲ್-ಮುಸ್ತಫಾ ಹೊರಡುವ ಗಳಿಗೆಗೆ ಜನಸ್ತೋಮ ಬೀಳ್ಕೊಡುಗೆಗೆ ಬಂದಂತಾಗಲು "ಮೌನಗಳ ಅನ್ವೇಷಿ ನಾನು, ಮೌನಗಳೊಳು ಅದ್ಯಾವ ನಿಧಿ-ಕಣಜ ಕಂಡಿಹೆನು ಉಮೇದಿನಿಂದ ಇವರೊಳು ಹಂಚಲು?" ಎಂದುಕೊಂಡೇ ಜನರು ಕೇಳಿದ ವಿಷಯಗಳ ಕುರಿತು ಹೇಳಲಾರಂಭಿಸುತ್ತಾನೆ. ಮುಂದಿನದ್ದು  ಸೂಕ್ಷ್ಮವಿಶ್ವದೃಷ್ಟಿಯುಳ್ಳ ವಿಶಾಲ ವಿಚಾರವಂತಿಕೆಯ ಅನುಭವದ ಅಮೃತ ಸಿಂಚನ. 



ತರ್ಕ ಹಾಗು ಉತ್ಸಾಹ ಕುರಿತು - 

"ಅನೇಕವೇಳೆ ನಿನ್ನಾತ್ಮವೊಂದು ಕದನ ಭೂಮಿ, ನಿನ್ನ ತರ್ಕ ಹಾಗು ತೀರ್ಪುಗಳು ನಿನ್ನ ಉತ್ಸಾಹ ಹಾಗು ಹಸಿವುಗಳೊಡನೆ ಹೋರಾಡುವ ಕಲಹ ಕ್ಷೇತ್ರ" 


ಪ್ರೀತಿಯ ಕುರಿತು -

"ನಿನಗೆ ಕಿರೀಟ ತೊಡಿಸುತ್ತಲೇ ಪ್ರೀತಿಯು ನಿನ್ನನ್ನು ಶಿಲುಬೆಗೇರಿಸುತ್ತದೆ. ನಿನ್ನ ಬೆಳವಣಿಗೆಗೆ ಕಾರಣವಾದಂತೆ ನಿನ್ನ ಸಮರುವಿಕೆಗೂ ಕಾರಣವಾಗುತ್ತದೆ....... 
ನೀನು ಪ್ರೀತಿಸಿದಲ್ಲಿ, ಆಸೆ ಪಡಲೇಬೇಕಾದರೆ, ನಿನ್ನಾಸೆ ಇಂತಿರಲಿ -
ಪ್ರೀತಿಯ ಕುರಿತಾದಾ ನಿನ್ನ ಗ್ರಹಿಕೆಯಿಂದಲೇ ಗಾಯಗೊಳ್ಳುವ ಬಯಕೆ."


ವಿವಾಹದ ಕುರಿತು -

"ನಿಮ್ಮ ಒಗ್ಗೂಡಿರುವಿಕೆಯಲ್ಲಿ ವೈಯಕ್ತಿಕ ಎಡೆಯಿರಲಿ,
ಸ್ವರ್ಗದ ತಂಗಾಳಿ ನಿಮ್ಮ ನಡುವೆ ನರ್ತಿಸುವಂತಿರಲಿ. 
ಒಬ್ಬರನ್ನೊಬ್ಬರು ಪ್ರೀತಿಸಿ, ಆದರೆ ಪ್ರೀತಿ ಸಂಕೋಲೆಯಾಗದಿರಲಿ. 
ನಿಮ್ಮಾತ್ಮಗಳ ತೀರಗಳ ನಡುವೆ ಪ್ರೀತಿ ಹರಿವ ಸಾಗರವಾಗಲಿ."


ಮಕ್ಕಳ ಕುರಿತು -

"ನಿನ್ನ ಮಕ್ಕಳು ನಿನ್ನ ಮಕ್ಕಳಲ್ಲ,
ಜೀವನಕ್ಕೆ ಜೀವನದ್ದೇ ಕುರಿತಾದ ಬಯಕೆಯ ಸಂತಾನ ಸ್ವರೂಪಗಳು. 
ನಿನ್ನ ಮೂಲಕ ಬರುವವೇ ಹೊರತು ನಿನ್ನಂದ ಬಂದವಲ್ಲ,
ನಿನ್ನೊಡನಿದ್ದರೂ ನಿನಗೆ ಸೇರಿದವಲ್ಲ. .... 
ಜೀವಂತ ಶರಧಿಯಂತೆ ಅವರು ಮುಂದೊಡಲು ಬಿಲ್ಮಾತ್ರ ನೀನು."


ಕೆಲಸ ಹಾಗು ದುಡಿಮೆಯ ಕುರಿತು - 

"ಕೆಲಸವು ಪ್ರೀತಿಯ ಸ್ಫುರದ್ರೂಪ. .......  
ದುಡಿಮೆಯ ಮೂಲಕ ಜೀವನವ ಪ್ರೀತಿಸುದೆಂದರೆ ಜೀವನದ ಅತ್ಯಂತ ಆಂತರಿಕ ರಹಸ್ಯದೊಂದಿಗೆ ಆತ್ಮೀಯವಾಗಿರುವುದು."


ಅಪರಾಧ ಹಾಗು ಶಿಕ್ಷೆಯ ಕುರಿತು  -

"ಮರದ ಮೌನ ಅರಿವಿಗೆ ಬಾರದೆ ಎಲೆಯೊಂದು ಹೇಗೆ ಹಳದಿಯಾಗದೊ
ಹಾಗೆ ನಿಮ್ಮಿಲ್ಲರ ಅಗೋಚರ ಸಮ್ಮತಿಯಿಲ್ಲದೆ ಅಪರಾಧಿ ಅಪರಾಧಗೈಯೆಲ್ಲಾರ."


ಸುಖ-ದುಃಖದ ಕುರಿತು - 

"ನಿನ್ನ ಖುಷಿಯು ನಿನ್ನ ಬೇಸರಗಳ ಮುಖವಾಡ ಕಳಚಿದ ರೂಪ,
ನಗು ಉದ್ಭವಿಸುವ ಅದೇ ಬಾವಿ ಒಮ್ಮೆ ಅಳುವಿನಿಂದ ತುಂಬಿತ್ತು."



        ಹೀಗೆ ಪ್ರೀತಿ, ವಿವಾಹ, ಮಕ್ಕಳು, ಸಂಸಾರ, ದುಡಿಮೆ, ವ್ಯಾಪಾರ, ಸ್ವಾತಂತ್ರ್ಯ, ಕಾನೂನು, ಸುಖ-ದುಃಖ, ಸಾವು -  ಹಲವು ವಿಷಯಗಳ ಕುರಿತು ಮುಸ್ತಫಾ ತನ್ನ ಅರಿವು-ಗ್ರಹಿಕೆ ವಿವರಿಸಲು ನಿಜ ಅರ್ಥದಲ್ಲಿ ಅತ ಸರ್ವಕಾಲಕ್ಕೂ ಪ್ರಸ್ತುತ ಒಬ್ಬ ಜಾತ್ಯತೀತ ಮಾನವೀಯ ಪ್ರವಾದಿಯಾಗಿ ಕಾಣುತ್ತಾನೆ. 






(ಉಲ್ಲೇಖಿತ ಗದ್ಯಕಾವ್ಯ ಭಾಗಗಳು ಇಂಗ್ಲೀಷ್ ಮೂಲದಿಂದ ಮಾಡಿರುವ ಸ್ವತಂತ್ರ ಅನುವಾದಗಳು. 

"The Prophet"ನ ಸಂಪೂರ್ಣ ಗದ್ಯ -  http://www-personal.umich.edu/~jrcole/gibran/prophet/prophet.htm)

2 ಕಾಮೆಂಟ್‌ಗಳು:

Sudha Neela ಹೇಳಿದರು...

good. but I feel some more additions are discussed. I felt, it came to an abrupt end when I was enjoying his writings.

Sudha Neela ಹೇಳಿದರು...

There is a typing error. It should be - some more additions are to be made.