Pages

ಪ್ರಚಲಿತ: "ಕನಸುಗಳ ಶಿಲೆ ಬಲಿಯಾದಾಗ"


'ರಾಹುಲ್ ವೆಮುಲಾ'ನ ಆತ್ಮಹತ್ಯೆಗೆ ತಾಯಿ ಹೃದಯವೊಂದು ಸ್ಪಂದಿಸಿದ್ದು ಹೀಗೆ -

ಎಲ್ಲಾ ತಂದೆ ತಾಯಿ ಥರಾನೆ 
ನಾನೂ ಕನಸುಗಳ ಶಿಲೆಯನ್ನು ಕೆತ್ತಿದೆ. 

ಓದುವ ಮಕ್ಕಳ ಶ್ರೇಣಿಯಲ್ಲಿ 
ನಿನ್ನ ಹೆಸರು ಇತ್ತು. 
ಬಾಲ್ಯ, ಹದಿಹರೆಯ, ಯೌವನ 
ನಿನ್ನಲ್ಲಿ ಬಂದು ಹೋಗುವಾಗ 
ನೀ ಬುದ್ಧಿವಂತಿಕೆಯಿಂದ ಮಾತ್ರವಲ್ಲ,
ನಿನ್ನ ವ್ಯಕ್ತಿತ್ವದಿಂದ ಮಿಂಚುತ್ತಿದ್ದೆ. 

ನಿನ್ನಿಂದ ಈ ಸಮಾಜಕ್ಕೆ 
ಒಂದು ಬದಲಾವಣೆ ಬರಬೇಕೆಂದು 
ನಾನು ಆಸೆ ಪಟ್ಟೆ. 

ಮುಂದೆ ನೀ ಸಂಶೋಧನಾ ವಿದ್ಯಾಭ್ಯಾಸಕ್ಕೆ 
ಹೋಗಿ ಒಂದೊಂದು ಸಲ ಮನೆಗೆ
 ಬರುವಾಗಲೂ ಧೈರ್ಯದ 
ನಗುವಿಂದ ನಿನ್ನನ್ನು ಸ್ವೀಕರಿಸಿದೆ......
ಗಟ್ಟಿತನದಲ್ಲಿ ಕಳಿಸಿಕೊಟ್ಟೆ ನಿನ್ನನ್ನು. 

ಅಮ್ಮನ ಪ್ರೀತಿ ಅಂದ್ರೆ ಅದು 
ಮನೋಧೈರ್ಯ ಎಂದು ನಾನು 
ನಿನಗೆ ತೋರಿಸಿಕೊಟ್ಟೆ...
ಆ ಒಂದು ಪ್ರೀತಿ ನಿನ್ನ ಕಣ್ಣಲ್ಲಿ ಕಂಡೆ. 

ಆದ್ರೂ ಕಂದ.....
ಯಾವ ಬಿರುಗಾಳಿಗೂ 
ಯಾವ ಅಲೆಗಳಿಗೂ 
ನಿನ್ನನ್ನು ನಾಶ ಮಾಡೋಕೆ ಆಗೋಲ್ಲ 
ಎಂಬ ನನ್ನ ನಂಬಿಕೆಯನ್ನು ನೀ 
ಎಷ್ಟು ಸುಲಭವಾಗಿ ಅಳಿಸಿಬಿಟ್ಟೆ.

ಯಾರಿಗೋಸ್ಕರ ನೀ ಬಲಿಯಾದೆ? 
ಯಾತಕೋಸ್ಕರ ನೀ ಹೀಗೆ ಮಾಡಿದೆ? 
ನಿನ್ನದಲ್ಲದೆ ಇರುವ ವಿಷಯಕ್ಕೆ ಯಾಕೆ, 
ನೀ ಯಾಕೆ ಬಲಿಯಾದೆ ಕಂದ? 

ಜಾತಿ, ಅದು ನಮ್ಮ ಹಣೆಬರಹ ...
ಅದು ಕಾಲಕಾಲದಿಂದಲೂ 
ನಮ್ಮ ವಂಶದ ಹಳೆಯ ಸಂಸ್ಕಾರ. 

ಕೊಲ್ಲುತ್ತಿರುವ ಈ ಪಂಗಡಗಳಿಗೆ....
ದಲಿತ... ಬ್ರಾಹ್ಮಣ....
ಮುಸ್ಲಿಮ.... ಕ್ರಿಶ್ಚಿಯನ್ ...
ಎನ್ನುವ ಎಲ್ಲಾ ಗೆರೆಗಳನ್ನು 
ನಾವು ತಾನೆ ನಿಮಗೆ ಕೊಟ್ಟಿದ್ದು? 
ಹಾಗಾದರೆ 
ನಮ್ಮನ್ನಲ್ಲವಾ ನೀವು ಬಲಿ ಕೊಡಬೇಕಾದದ್ದು? 
ಬದಲು ನೀ ಯಾಕೋ ಬಲಿಯಾದೆ? 

ಪ್ರಪಂಚದ ಎಲ್ಲಾ ಮೂಲೆಗಳನ್ನೂ 
ನೀ ನೋಡು ಎಂದು ನಾ ಆಗ್ರಹಿಸಿದೆ....
ಆದ್ರೆ, ಈ ಕೊಳೆತಿರುವ ಸಮಾಜವನ್ನು 
ನಿನಗೆ ಮೀರಿಸೋಕೆ ಆಗದೆ ಹೋಯಿತೇ?  

ನಾನು ತಿನ್ನಿಸಿದ ಒಂದೊಂದು ತುತ್ತಿನಲ್ಲೂ, 
ಮನೋಬಲವ ಬೆರೆಸಿ ಉಂಡೆ ಮಾಡಿ ತಿನಿಸಿದೆ 
ಆದ್ರೆ ನೀ ಬರೀ ಹೇಡಿ ಥರ ಹಿಂದೆಯೇ ಹೋದೆ. 
ನನ್ನ ಎದೆಯಿಂದ ಕೊನೆ ತೊಟ್ಟು ಕುಡಿದಿದ್ದು 
ಬರೀ ನೀರು ಎಂದು ನನಗನಿಸುತ್ತೆ. 

ಮಗನೇ...
ಅದರಿಂದ, ಹಾಗೇ ನೆನೆಸಿಕೊಳ್ಳುವಾಗ 
ನನಗೆ ನನ್ನ ಮೇಲೆಯೇ ನಾಚಿಕೆ ಆಗುತ್ತೆ!!!!

                                                     - ಶೀಬಾ 

ಕಾಮೆಂಟ್‌ಗಳಿಲ್ಲ: