Pages

ಕವನ: "ಅದಮ್ಯ ಚೇತನಕ್ಕೆ ನಮನ"



ನೀನೆಂದರೆ
ಬಿಸಿ ನೆತ್ತರ ಧಗೆಯು
ನೀನಲ್ಲವೆ
ಬಿರುಗಾಳಿಯ ವೇಗವು
ನೀನಾದೆ
ಬ್ರಿಟಿಷರಿಗೆ ಸಿಂಹಸ್ವಪ್ನವು
ನೀನೇ
ಯುವಬಲದ ಮೂಲಾರ್ಥವು.

ಕಡೆಗಣಿಸಿ ನಿನ್ನವರ
ಧುಮುಕಿದೆ ಸ್ವಾತಂತ್ರ್ಯವನ್ನರಸಿ
ಕ್ಷಣಕ್ಷಣವು ಪರಿತಪಿಸಿದೆ
ದೌರ್ಜನ್ಯವ ನೆನೆಸಿ
ದಬ್ಬಾಳಿಕೆಯೆದುರು ಅಬ್ಬರಿಸಿ
ಹೆಬ್ಬುಲಿಯಾದೆ
ಯುವಶಕ್ತಿಯನೆಚ್ಚರಿಸಿ
ನೀ ಅಮರನಾದೆ.

ಅರ್ಥಪೂರ್ಣ
ನೀನು ಬದುಕಿದ ರೀತಿ,
ಅಮೂಲ್ಯ
ನಿನ್ನ ದೇಶಪ್ರೀತಿ,
ಅಮೋಘ
ನಿನ್ನ ಸಾಹಸವೃತ್ತಿ,
ಅಪರೂಪ
ನಿನ್ನ ಮಾನವಪ್ರೀತಿ.

ಆದರೆ,
ಮರೆತೇಹೋಗಿದೆ
ಮರೆಯಾಗಿಯೇ ಹೋಗಿದೆ
ಆ ಬಲಿದಾನ,
ಅಳಿಸಿ ಹೋಗಿದೆ
ಅರಿವಿನಲ್ಲಿರದಾಗಿದೆ
ಆ ರಕ್ತದಾನ,
ಮತ್ತಿನಲ್ಲಿದೆ
ಮಾದಕತೆಯಲ್ಲಿ ಮುಳುಗಿದೆ
ಈ ಯುವಜನ.

ಜಡವ ತೊಲಗಿಸಲಿ
ಜನರಲ್ಲಿ ನಿನ್ನ ನೆನಪು
ಭಯವೇ ಬೆದರೋಡಲಿ
ನೆನೆದಾಗ ನಿನ್ನ ಬದುಕು
ಉತ್ಸಾಹವನುಕ್ಕಿಸಲಿ
ನಿನ್ನ ಉಕ್ಕಿನೋಕ್ತಿಗಳು
ಆವೇಶವನ್ನೆಬ್ಬಿಸಲಿ
ನಿನ್ನ ಘೋಷಗಳು.
      -              ಉಷಾಗಂಗೆ

ಮರೆಯಲಾದೀತೆ ಆ ಮಹಾನ್ ಚೇತನವನ್ನು
ಸ್ವಾತಂತ್ರ್ಯಕ್ಕಾಗಿ ಮಡಿದ ಸಿಂಹವನ್ನು
ನೆನೆಯಬೇಕು ಸ್ಫೂರ್ತಿಯ ಚಿಲುಮೆಯನ್ನು
ಸಾಕಾರಗೊಳಿಸಬೇಕು ಅವರ ಕಂಡ ಕನಸನ್ನು
ಆ ಕ್ರಾಂತಿ ಶಿಶುವಿಗೆ ನಮ್ಮಯ ನಮನ
                                         -         ವಿಜಯಲಕ್ಷ್ಮಿ ಎಂ ಎಸ್ 

ಅವರ ನೋಡಿ ದೇಶಭಕ್ತಿಯ ಕಲಿಯಬೇಕು
ಆ ಕೆಚ್ಚೆದೆಯ ಬೆಳೆಸಿಕೊಳ್ಳಬೇಕು
ಕ್ರಾಂತಿಯ ಅರಿವ ಮನದಿ ತುಂಬಿಕೊಳ್ಳಬೇಕು
ಸ್ವಾತಂತ್ರ್ಯದ ಮೌಲ್ಯವ ತಿಳಿಯಬೇಕು
ಅವರ ಕನಸನ್ನು ಸಾಕಾರಗೊಳಿಸಬೇಕು
ಎಲ್ಲರೂ ಅವರಂತೆ ಬಾಳಬೇಕು
ಇದು ನಮ್ಮ ಧ್ಯೇಯವಾಗಬೇಕು.

                                                           - ಗೀತಾ

ಕಾಮೆಂಟ್‌ಗಳಿಲ್ಲ: