Pages

ಲೇಖನ - ರೂಪಶ್ರೀ ಸಾವು ಸಮರ್ಥನೀಯವೇ?


ರೂಪಶ್ರೀ ಅವರ ಸಾವನ್ನು ತಪ್ಪಿಸಬಹುದಾಗಿತ್ತು. ಉಮಾಪತಿ ಎಂಬುವವರ ಪತ್ನಿ ರೂಪಶ್ರೀ. 6 ವರ್ಷದ ಪುತ್ರ ಹಾಗೂ ಒಂದೂವರೆ ವರ್ಷದ ಪುತ್ರಿಯೊಡನೆ ಗೃಹಿಣಿಯಾಗಿ ಸಂತೋಷದ ಜೀವನ ನಡೆಸಿದ್ದರು. ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗಾಗಿ ಒಂದು ವಾರದ ಹಿಂದೆ ಮೈಸೂರಿನ ಚೆಲುವಾಂಬಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಉದರದರ್ಶಕ (ಲ್ಯಾಪ್ರೊಸ್ಕೋಪ್) ದ ಮೂಲಕ ಟ್ಯುಬೆಕ್ಟಮಿ ಮಾಡಲಾಗಿತ್ತು. ಆದರೆ ಆಕೆ ಚೇತರಿಸಿಕೊಳ್ಳಲಿಲ್ಲ. ರಕ್ತಸ್ರಾವ ನಿಲ್ಲದ ಕಾರಣ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಿಜಿಎಸ್ ಅಪೊಲೊ ಆಸ್ಪತ್ರೆಗೆ ಕರೆದೊಯ್ಯುವಂತೆ ಚೆಲುವಾಂಬ ಆಸ್ಪತ್ರೆಯ ವೈದ್ಯರು ಸೂಚಿಸಿದ್ದಾರೆ. 
ಬಿಜಿಎಸ್ ಆಸ್ಪತ್ರೆಯಲ್ಲಿ ವೈದ್ಯರು ರೂಪಶ್ರೀಯವರ ಯಕೃತ್ (ಲಿವರ್) ಮತ್ತು ಕರುಳಿಗೆ ಘಾಸಿಯಾಗಿರುವುದನ್ನು ಪತ್ತೆಮಾಡಿದ್ದು ರಕ್ತಸ್ರಾವವನ್ನು ಚಿಕಿತ್ಸೆ ಮೂಲಕ ನಿಲ್ಲಿಸಿದ್ದರು. ಆದರೂ ಆಕೆ ಬದುಕುಳಿಯಲಿಲ್ಲ. ವೈದ್ಯಕೀಯ ಕ್ಷೇತ್ರದ ನಿರ್ಲಕ್ಷ್ಯವೇ ಈ ಆರೋಗ್ಯವಂತ ಮಹಿಳೆಯನ್ನು ಬಲಿ ತೆಗೆದುಕೊಂಡಿತು. ಇಬ್ಬರು ಮಕ್ಕಳನ್ನು ತಾಯಿವಾತ್ಸಲ್ಯದಿಂದ ವಂಚಿತರನ್ನಾಗಿಸಿತು. 
ಇಲ್ಲಿ ವೈದ್ಯರ ಬೇಜವಾಬ್ದಾರಿ ಎಂಬ ಅಂಶದ ಜೊತೆಗೆ ಅನೂಚಾನವಾಗಿ ನಡೆದುಬಂದಿರುವ ಪಿತೃಪ್ರಧಾನ ವ್ಯವಸ್ಥೆಯ ಕೊಡುಗೆಯೂ ಇದೆ. ಈ ವ್ಯವಸ್ಥೆಯಡಿ ಕುಟುಂಬಕಲ್ಯಾಣ (ಸಂತಾನಶಕ್ತಿಹರಣ) ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ನಿರ್ದೇಶಿಸಲಾಗುತ್ತಿದೆ. ವಾಸ್ತವವಾಗಿ ಈ ಕುಟುಂಬಕಲ್ಯಾಣ ಯೋಜನೆಯ ಉದ್ದೇಶ ಮಿತಿಮೀರಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದಾಗಿದೆ. 
1970ರಲ್ಲಿ ದೇಶದಲ್ಲಿ ಕುಟುಂಬಕಲ್ಯಾಣ ಯೋಜನೆಯಡಿ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆ ಪ್ರಮುಖವಾಗಿ ಕಂಡುಬಂದಿತು. 1975-77ರಲ್ಲಿ ಅಂದರೆ ರಾಜಕೀಯ ತುರ್ತುಪರಿಸ್ಥಿತಿಯ ಕಾಲದಲ್ಲಿ ಸಂಜಯ್ ಗಾಂಧಿ ಅತಿ ಉತ್ಸಾಹ ಮತ್ತು ಪೂರ್ವಗ್ರಹದಿಂದ ವ್ಯಾಸೆಕ್ಟಮಿಯನ್ನು ಅತಿ ಹೆಚ್ಚಾಗಿ ನಡೆಸಿದ್ದರು. ಅದು ಜನರು ಕಾಂಗ್ರೆಸ್ ವಿರುದ್ಧ ತಿರುಗಿಬೀಳುವಂತೆ ಮಾಡಿತು. ಅದು ಜನರ ಮೇಲೆ ಬಲವಂತವಾಗಿ ಹೇರಲ್ಪಟ್ಟಿದ್ದು ರಾಜಕೀಕರಣಗೊಂಡಿತ್ತು. ಆ ಸಂದರ್ಭದಲ್ಲಿ ಹಲವಾರು ಯುವಜನರು (ವಿವಾಹಿತರು/ಅವಿವಾಹಿತರು) ನಗದು ಬಹುಮಾನದ ಆಸೆಗಾಗಿ ವ್ಯಾಸೆಕ್ಟಮಿಗೆ ಒಳಗಾಗಿದ್ದರು.
ಹಿಂದೆ ಮಹಿಳೆಯರು ಹೆರಿಗೆ ಆದ ಸಂದರ್ಭದಲ್ಲಿ ಮಾತ್ರ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದಿತ್ತು. ಅದು ಗಂಭೀರ ಸ್ವರೂಪದ ಶಸ್ತ್ರಚಿಕಿತ್ಸೆಯಾಗಿದ್ದು ಹಲವು ದಿನ ಆಸ್ಪತ್ರೆಯಲ್ಲಿ ಇರಬೇಕಿತ್ತು. ನಂತರದಲ್ಲಿ ಲ್ಯಾಪ್ರೊಸ್ಕೋಪ್ ತಂತ್ರಜ್ಞಾನ ಪರಿಚಯವಾಗಿದ್ದು, ಟ್ಯುಬೆಕ್ಟಮಿ (ಮಹಿಳಾ ಸಂತಾನಹರಣ ಶಸ್ತ್ರಚಿಕಿತ್ಸೆ) ಯನ್ನು ಪ್ರಚುರಪಡಿಸಿತು. 1980ರ ಆಸುಪಾಸಿನಲ್ಲಿ ಟ್ಯುಬೆಕ್ಟಮಿಯ ವಿಧಾನ ವ್ಯಾಸೆಕ್ಟಮಿಯನ್ನು ಹಿಂದಿಕ್ಕಿತು. ಅದರ ಫಲವಾಗಿ ಮಹಿಳೆಯರಿಗೆ ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸಾ ಶಿಬಿರಗಳನ್ನೇ ಏರ್ಪಡಿಸಲಾಗುತ್ತಿತ್ತು. 


ಇದರಿಂದಾಗಿ ಈಗ ಕುಟುಂಬಕಲ್ಯಾಣ ಶಸ್ತ್ರಚಿಕಿತ್ಸೆಯ ಹೊರೆ ಕೇವಲ ಮಹಿಳೆಯರಿಗೆ ಸೀಮಿತವಾಗಿದೆ. ಶಾಲೆಗಳು ಜನನನಿಯಂತ್ರಣದ ಶಿಬಿರಗಳ ತಾಣವಾಗುತ್ತಿತ್ತು. ಬೆಂಚುಗಳು ಶಸ್ತ್ರಚಿಕಿತ್ಸೆ ನಡೆಯುವ ಟೇಬಲ್ ಗಳಾಗಿ ಪರಿವರ್ತನೆಗೊಂಡಿದ್ದವು. ನೈರ್ಮಲ್ಯತೆ, ರಕ್ಷಣೆ, ಗೌಪ್ಯತೆ ಸೇರಿದಂತೆ ಈ ಶಸ್ತ್ರಚಿಕಿತ್ಸೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಉದಾಹರಣೆಗೆ, ಪ್ರತಿ ಲ್ಯಾಪ್ರೊಸ್ಕೋಪ್ ಶಸ್ತ್ರಚಿಕಿತ್ಸೆಗೆ ಅಗತ್ಯ ಉಪಕರಣಗಳನ್ನು 10-20ನಿಮಿಷಗಳ ಸ್ಟರ್ಲೈಸೇಷನ್ ಅಗತ್ಯ. ಇದು ಎಷ್ಟರಮಟ್ಟಿಗೆ ಪಾಲಿಸಲಾಗುತ್ತಿದೆ ಎಂಬುವುದು ಪ್ರಶ್ನೆ. ಶಿಬಿರಗಳಲ್ಲಿ ಮಹಿಳೆಯರನ್ನು ಬೆಂಚುಗಳ ಮೇಲೆ ಮಲಗಿಸಿ ವೈದ್ಯರು ಒಂದು ಪ್ರಕರಣ ಮುಗಿಸಿ ಇನ್ನೊಂದರತ್ತ ದಡಬಡ ನಡೆಯುತ್ತಾರೆ. ಒಂದೇ ದಿನದಲ್ಲಿ ಅತಿ ಹೆಚ್ಚು ಆಪರೇಷನ್ ಗಳನ್ನು ಮಾಡಿ ಮುಗಿಸುವ ಪ್ರಚಂಡತೆ ಅವರದ್ದು. ಅಧಿಕ ಮಹಿಳೆಯರ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಪ್ರಕರಣಗಳನ್ನು ನಡೆಸುವ ವೈದ್ಯರು ಹೀರೋಗಳೆನಿಸಿಕೊಳ್ಳುವ ಜೊತೆಗೆ ಪ್ರಶಸ್ತಿಗೂ ಭಾಜನರಾಗುವ ಅವಕಾಶ ಇರುತ್ತದೆ. ಆರೋಗ್ಯ ಇಲಾಖೆಯ ಗುರಿ ಸಾಧಿಸುವ ಆತುರ ಎಲ್ಲರದ್ದು. 
ಈಗ ಮಹಿಳೆಯರ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಯೇ ಜನಪ್ರಿಯವಾಗಿದೆ. ಶೇಕಡ 95ಕ್ಕೂ ಹೆಚ್ಚು ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಈ ಪ್ರಕರಣಗಳಲ್ಲಿ ಫಲಾನುಭವಿಯ ಸಾವು ಸಂಭವಿಸಿದರೂ ಅವು ವರದಿಯೂ ಆಗದೆ ಬಹಿರಂಗವಾಗದೆ, ಬೆಳಕಿಗೆ ಬಾರದೆ ಉದ್ದೇಶಪೂರ್ವಕವಾಗಿ ಹಿಂದಡಿಗೆ ತಳ್ಳಲ್ಪಟ್ಟಿವೆ. ಇಂತಹ ಸಂದರ್ಭಗಳಲ್ಲಿ ಮಾಧ್ಯಮಗಳೂ ಸಹ ದುರ್ಬಲವಾಗಿವೆ. ಟ್ಯುಬೆಕ್ಟಮಿ ನಂತರ ಫಲಾನುಭವಿ ಮಹಿಳೆಯು ಆರೋಗ್ಯದ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೂ ಅದರ ಅಂಕಿ-ಸಂಖ್ಯೆಗಳು ಉಲ್ಲೇಖವಾಗುವುದಿಲ್ಲ. 
ಈ ಶಸ್ತ್ರಚಿಕಿತ್ಸೆಗೊಳಗಾದ ಬಹಳ ಮಹಿಳೆಯರು ಜನನ ಮಾರ್ಗದ ಸೋಂಕುಗಳಿಗೆ ಒಳಗಾಗುತ್ತಾರೆ. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಗರ್ಭಕೋಶವು ಸ್ಪಷ್ಟವಾಗಿ ಗೋಚರಿಸಲು ಯೋನಿಯ ಮೂಲಕ ರಾಡ್ ಅಳವಡಿಸಲಾಗುತ್ತಿತ್ತು. ಅದನ್ನು ನಂತರ ತೆಗೆದರೂ ಅದರಿಂದ ಉಂಟಾಗುವ ಯಾತನೆ ಫಲಾನುಭವಿಗಳನ್ನು ಕಾಡುತ್ತದೆ. ಆಘಾತಕಾರಿಯೂ ಆಗಿರುತ್ತದೆ. ಹಲವರು ಮೈಕೈನೋವಿನಿಂದ ಬಳಲುವುದು ಉಂಟು. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಅವರ ಉದರಕ್ಕೆ ಗಾಳಿಯನ್ನು ತುಂಬಿಸಬೇಕಾಗುತ್ತದೆ. ಎಷ್ಟೋ ಸಂದರ್ಭದಲ್ಲಿ ಅದಕ್ಕಾಗಿ ಸೈಕಲ್ ಪಂಪ್ ಬಳಸಿ ಗಾಳಿಯನ್ನು ತುಂಬಲಾಗುತ್ತಿತ್ತು ಎಂದು ವರದಿಯಾಗಿದೆ. ಅದರಿಂದ ಕೂಡ ತೊಂದರೆ ಉಂಟಾಗುತ್ತದೆ. ಅದನ್ನು ತದೆಯುವ ನಿಟ್ಟಿನಲ್ಲಿ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಸಾರಜನಕ ಅನಿಲ (ನೈಟ್ರೋಜನ್ ಗ್ಯಾಸ್) ಬಳಸುವುದು ಸೂಕ್ತ. ಆದರೆ ಸಾರಜನಕ ಅನಿಲವನ್ನು ಗ್ರಾಮಾಂತರ ಪ್ರದೇಶದಲ್ಲಿ ಪೂರೈಕೆ ಮಾಡುವುದು ಕಷ್ಟವಾಗಿದೆ. ಮಹಿಳೆಯರನ್ನು ಈ ರೀತಿಯಲ್ಲಿ ಕಡೆಗಣಿಸಿದ ಹಿನ್ನೆಲೆಯಲ್ಲಿ ಮಹಿಳೆಯರು ರಾಷ್ಟ್ರ ಕಟ್ಟುವ ವಿಚಾರದಲ್ಲಿ ಮಹಿಳೆಯರು ಶಸ್ತ್ರಚಿಕಿತ್ಸೆಗೆ ಒಳಗಾಗಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ, ಅವರಿಂದ ನಿರೀಕ್ಷಿತ ಮಟ್ಟದಲ್ಲಿ ಸಹಕಾರ ಸಿಗುತ್ತಿಲ್ಲ ಎಂಬ ವಾದವೂ ಇದೆ. 
ಕುಟುಂಬ ಕಲ್ಯಾಣ ಕಾರ್ಯಕ್ರಮವು ದೇಶದ ಹಿತಾಸಕ್ತಿಯ ವಿಚಾರ ಆರಂಭಿಕ ಹಂತದಲ್ಲಿ ಕುಟುಂಬ ಕಲ್ಯಾಣವು ಪುರುಷರನ್ನೇ ದೃಷ್ಟಿಯಲ್ಲಿಟ್ತುಕೊಂಡಿತ್ತು. ಶೇಕಡ 75 ಮಂದಿ ಪುರುಷರು ವ್ಯಾಸೆಕ್ಟಮಿಗೆ ಒಳಗಾಗಿದ್ದರು. ಅದು ಸರಳ ಮತ್ತು ಸುರಕ್ಷಿತವಾಗಿತ್ತು. ಆದರೆ ನಮ್ಮ ಪಿತೃಪ್ರಧಾನ ವ್ಯವಸ್ಥೆಗೆ ಪ್ರಿಯವಾಗಿರಲಿಲ್ಲ. ಹಾಗಾಗಿ ಮಕ್ಕಳನ್ನು ಹೆರುವ ಮಹಿಳೆಯರೇ ಈ ಶಸ್ತ್ರಚಿಕಿತ್ಸೆಯ ನೋವು ಅನುಭವಿಸುವಂತೆ ಅದನ್ನು ಜನಪ್ರಿಯಗೊಳಿಸಲಾಯಿತು. 
ನಂತರ ಆಯೋಜಿತವಾದ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸಾ ಶಿಬಿರಗಳಲ್ಲಿ ಲ್ಯಾಪ್ರೊಸ್ಕೋಪ್ ತಂತ್ರಜ್ಞಾನದ ಟ್ಯುಬೆಕ್ಟಮಿಯನ್ನೇ ಉತ್ತೇಜಿಸಲಾಗುತ್ತಿದೆ. ಈ ದಿನಗಳಲ್ಲಿ ಪುರುಷರ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಯ ಬಗ್ಗೆ ಎಲ್ಲಿಯೂ ಮಾತೇ ಇಲ್ಲ. 
ಇಂತಹ ಮಹಿಳಾ ವಿರೋಧಿ ಪರಿಸ್ಥಿತಿಯಲ್ಲಿ ರೂಪಶ್ರೀಯವರು ದೇಶಕ್ಕಾಗಿ ಪ್ರಾಣ ಕಳೆದುಕೊಂಡಿದ್ದಾರೆ! ಟ್ಯುಬೆಕ್ಟಮಿಯು ಶಾಶ್ವತವಾಗಿ ಜನನ ನಿಯಂತ್ರಣ ಮಾಡುವುದು ಸಾಮಾನ್ಯ ಜ್ಞಾನ. ಅಲ್ಲದೆ ಈ ಆಧುನಿಕ ಕಾಲದಲ್ಲಿ ಗರ್ಭ ಧರಿಸುವುದನ್ನು ತಡೆಯಲು ಅತ್ಯುತ್ತಮವಾದ ಕಾಂಡೋಮ್ ಗಳಿವೆ. ಕಾಂಡೋಮ್ ವೈಫಲ್ಯ ಅಥವಾ ಅಸುರಕ್ಷಿತ ಲೈಂಗಿಕ ಚಟುವಟಿಕೆ ನಿಯಂತ್ರಣಕ್ಕಾಗಿ “ಬೆಳಗಿನ ಮಾತ್ರೆ” ಇದೆ. ಇವೆಲ್ಲದರ ಜೊತೆಗೆ ಅನಗತ್ಯ ಗರ್ಭಧಾರಣೆ ತಡೆಯುವುದಕ್ಕೆ ನೈಸರ್ಗಿಕ ವಿಧಾನಗಳೂ ಇವೆ.
ಹೀಗಾಗಿ ಮಹಿಳೆಯರ ದೇಹದ ಮೇಲೆ ಆಕ್ರಮಣಕಾರಿ ಹಸ್ತಕ್ಷೇಪವಾಗುವ ಬಗ್ಗೆ ಜಾಗೃತಿ ಮೂಡಿಸಬೇಕಲ್ಲವೇ ಎಂಬುದು ಈಗಿನ ಪ್ರಶ್ನೆಯಾಗಿದೆ. ಜನನ ಪ್ರಮಾಣ ನಿಯಂತ್ರಣಕ್ಕೆ ಉನ್ನತ ಮಟ್ಟದ ತಂತ್ರಜ್ಞಾನ ಇರುವಾಗ ಕುಟುಂಬಗಳು, ವೈದ್ಯರು ಹಾಗೂ ಸಮಾಜ ಹೆಂಗಸರನ್ನೇ ಏಕೆ ಜನಸಂಖ್ಯೆಯ ನಿಯಂತ್ರಣಕ್ಕೆ ಗುರಿಯಾಗಿಸುತ್ತಿವೆ? ಹಾಗೆ ನೊಡಿದರೆ ಪುರುಷರ ವ್ಯಾಸೆಕ್ಟಮಿಯೇ ಸುರಕ್ಶಿತವಾದದ್ದು. ವ್ಯಾಸೆಕ್ಟಮಿಗೆ ಒಳಗಾದ ಸಂದರ್ಭದಲ್ಲಿ ಯಾವುದೇ ಪುರುಷ ಸಾವಿಗೀಡಾದ ಉದಾಹರಣೆ ಇಲ್ಲ. ಯಾವುದೇ ಕನಿಷ್ಟ ಆಕ್ರಮಣಶೀಲವಾದ ತಂತ್ರಜ್ಞಾನವೂ ಸಹ ಶೇಕಡ 100ರಷ್ಟು ಸುರಕ್ಷಿತವಲ್ಲ. ಇದೇ ನಿಯಮ ಲ್ಯಾಪ್ರೊಸ್ಕೋಪ್ ಗೂ ಅನ್ವಯಿಸುತ್ತದೆ. 
ಇಲ್ಲಿ ನಿಜವಾದ ಅಪರಾಧಿ ಪಿತೃಪ್ರಧಾನ ಮೌಲ್ಯದ ವ್ಯವಸ್ಥೆಯಾಗಿದೆ. ಈ ಸೈಲೆಂಟ್ ಕಿಲ್ಲರ್ (ಮೌನ ಕೊಲೆಗಾರ) ಹಾಗೂ ಮಹಿಳೆಯರನ್ನು ಬಲಿಪಶುಮಾಡಿರುವ ಈ ಪಿತೃಪ್ರಧಾನ ವ್ಯವಸ್ಥೆಯನ್ನು ಶಿಕ್ಶಿಸುವವರು ಯಾರು? ಅದೇನು ಕಣ್ಣಿಗೆ ಗೋಚರವಾಗಬಲ್ಲ ಅಪರಾಧಿಯೇ? ನಮ್ಮದು ಆರೋಗ್ಯವಂತ ತಾಯಂದಿರ ಮುಕ್ತ ಸಮಾಜವಾಗವೇಕೆ ಎಂಬುದರ ಬಗ್ಗೆ ವೈದ್ಯರು ಹಾಗೂ ಆರೋಗ್ಯರಕ್ಷಕರು ಮತ್ತು ಸಮಾಜ ಈಗ ಚಿಂತಿಸಬೇಕಾಗಿದೆ. ಯಾವಾಗ ಎಲ್ಲ ತಾತ್ಕಾಲಿಕ ವಿಧಾನಗಳು ವಿಫಲವಾಗುತ್ತವೋ ಆಗ ವೈದ್ಯರು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಮುಂದಾಗಬೇಕು ಅಲ್ಲದೆ ಅದು ಪುರುಷರ ಮೇಲೆ ನಡೆಯಬೇಕು. ಮಹಿಳೆಯರ ದೇಹದೊಂದಿಗೆ ಇಂತಹ ಆಟ ಸಲ್ಲದು. ಇದೇ ದಿಕ್ಕಿನಲ್ಲಿ ಮಹಿಳೆಯರು ಕೂಡ ತಮ್ಮ ಧ್ವನಿಯನ್ನು ಏರಿಸಬೇಕು. 
                                                      - ಡಾ. ರತಿ ಈ ಆರ್

ಕಾಮೆಂಟ್‌ಗಳಿಲ್ಲ: