Pages

ವಿನೋದ - ದುಡ್ಡು


(ಚಲಂರವರ ಡಬ್ಬು ಕಥೆಯ ಅನುವಾದ)


ಹುಡುಗ: ಅಪ್ಪ ನಾವು ಕಾರು ಕೊಂಡುಕೊಳ್ಳಬಾರದಾ?
ಅಪ್ಪ: ಕಾರು ಎಷ್ಟು ಬೆಲೆ ಗೊತ್ತಾ? ಹತ್ತು ಸಾವಿರ ರೂಪಾಯಿ.
ಹುಡುಗ: ನಮ್ಮ ಹತ್ತಿರ ಹತ್ತು ಸಾವಿರ ರೂಪಾಯಿಗಳು ಇಲ್ಲವಾ?
ಅಪ್ಪ: ಇಲ್ಲ, ಎಲ್ಲಿಂದ ಬರುತ್ತೆ?
ಹುಡುಗ: ಕಾರು ಕೊಂಡುಕೊಳ್ಳುವವರಿಗೆ ಎಲ್ಲಿಂದ ಬರುತ್ತೆ?
ಅಪ್ಪ: ಅವರು ಸಂಪಾದಿಸಿಕೊಳ್ಳುತ್ತಾರೆ.
ಹುಡುಗ: ನೀನೇಕೆ ಸಂಪಾದಿಸಬಾರದು?
ಅಪ್ಪ: ನನಗೆ ಆಗೋಲ್ಲ.
ಹುಡುಗ: ಆಗದಿದ್ದರೆ ಕಲಿತುಕೊಳ್ಳಬಾರದಾ?
ಅಪ್ಪ: ಹೇಗೆ?
ಹುಡುಗ: ಮತ್ತೆ ಆಗದಿದ್ದನ್ನೆಲ್ಲಾ ನನಗೆ ಕಲಿತುಕೊ ಅಂತೀಯಾ?
ಅಪ್ಪ: ಇದು ಕಲಿತುಕೊಂಡರೆ ಬರುವುದಲ್ಲ.
ಹುಡುಗ: ಅವರಿಗೆ ಹೇಗೆ ಬಂತು?
ಅಪ್ಪ: ಅವರಿಗೆ ಬುದ್ಧಿ ಇದೆ.
ಹುಡುಗ: ನಿನಗೇಕೆ ಇಲ್ಲ?
ಅಪ್ಪ: ದೇವರು ಕೊಡಲಿಲ್ಲ.
ಹುಡುಗ: ಯಾಕೆ ಕೊಡಲಿಲ್ಲ?
ಅಪ್ಪ: ಏನೋ.
ಹುಡುಗ: ನನಗೆ ದೇವರು ಲೆಕ್ಕದಲ್ಲಿ ಬುದ್ಧಿ ಕೊಡಲಿಲ್ಲ. ಮಾರ್ಕು ಕಡಿಮೆ ಬಂದರೆ ಹೊಡೆಯುತ್ತೀಯಲ್ಲಾ?
ಅಪ್ಪ: ಬರಲಿ ಅಂತಾ.
ಹುಡುಗ: ನಿನ್ನನ್ನು ಹೊಡೆಯುವವರಿದ್ದರೆ ನಿನಗೂ ದುಡ್ಡು ಮಾಡಿಕೊಳ್ಳೋ ಬುದ್ಧಿ ಬರುತ್ತೇನೋ? ನಿನಗೆಷ್ಟು ಸಂಬಳ?
ಅಪ್ಪ: 320 ರೂಪಾಯಿಗಳು.
ಹುಡುಗ: ಯಾರು ಕೊಡ್ತಾರೆ.
ಅಪ್ಪ: ಕಂಪನಿಯವರು.
ಹುಡುಗ: ಅಷ್ಟೆ ಯಾಕೆ ಕೊಡ್ತಾರೆ. ಜಾಸ್ತಿ ಕೊಡಲ್ವಾ?
ಅಪ್ಪ: ನಾನು ಮಾಡುವ ಕೆಲಸ ಅಷ್ಟೆ.
ಹುಡುಗ: ಜಾಸ್ತಿ ಸಂಬಳ ಬರುವ ಕೆಲಸ ಇಲ್ಲವಾ?
ಅಪ್ಪ: ಇದ್ದಾವೆ.
ಹುಡುಗ: ಅದನ್ನು ನಿನಗೆ ಯಾಕೆ ಕೊಡುವುದಿಲ್ಲ. ನಿನಗೆ ಕೈಲಾಗುವುದಿಲ್ಲವಾ?
ಅಪ್ಪ: ಆಗುತ್ತೆ, ಆದರೆ ಕೊಡೋಲ್ಲ.
ಹುಡುಗ: ಅವರಿಗೆ ಯಾಕೆ ಕೊಟ್ಟರು?
ಅಪ್ಪ: ಅವರಿಗೆ ಅನುಭವ ಬುದ್ಧಿ ಜಾಸ್ತಿ ಅಂದುಕೊಳ್ತಾರೆ.
ಹುಡುಗ: ಯಾಕಂದುಕೊಳ್ತಾರೆ?
ಅಪ್ಪ: ನನಗೇನು ಗೊತ್ತು?
ಹುಡುಗ: ಅವರನ್ನು ಕೇಳಬಾರದಾ?
ಅಪ್ಪ: ಕೇಳಿದರೂ ಲಾಭವಿಲ್ಲ.
ಹುಡುಗ: ಯಾರು ಯಾವಾಗ ಮಾತನಾಡಿದರೂ ದುಡ್ಡಿಲ್ಲ, ದುಡ್ಡಿಲ್ಲ ಅಂತಾರೆ. ಎಲ್ಲಿಂದ ಬರುತ್ತೆ ದುಡ್ಡು?
ಅಪ್ಪ: ಕಷ್ಟಪಟ್ಟು ಕೆಲಸ ಮಾಡಿದರೆ ಬರುತ್ತೆ.
ಹುಡುಗ: ನೀನು ಕಷ್ಟಪಟ್ಟು ಕೆಲಸ ಮಾಡುವುದಿಲ್ಲವಾ?
ಅಪ್ಪ: ಮಾಡ್ತೀನಿ.
ಹುಡುಗ: ಮತ್ತೆ ನಿನಗೆ ಬರುವುದಿಲ್ಲವಲ್ಲ? ಇನ್ನೂ ಕಷ್ಟಪಡು ಬರುತ್ತೆ.
ಅಪ್ಪ: ಇನ್ನು ನನ್ನ ಕೈಲಾಗೋಲ್ಲ, ಲಾಭವೂ ಇಲ್ಲ.
ಹುಡುಗ: ದೊಡ್ಡವರಿಗೆ ಉಪಯೋಗವಿಲ್ಲ, ಆದರೆ ಚಿಕ್ಕವರಿಗೆ ಮಾತ್ರ ಕಷ್ಟಪಡು ಅಂತಾ ಹೊಡೀತೀರಾ?
ಅಪ್ಪ: ಹೌದು, ಚಿಕ್ಕವರಿಗೆ ತಾಳ್ಮೆ ಜಾಸ್ತಿ.
ಹುಡುಗ: ಎಲ್ಲಿಂದ ಬರುತ್ತೆ ದುಡ್ಡು?
ಅಪ್ಪ: ಸರ್ಕಾರ ತಯಾರು ಮಾಡುತ್ತೆ.
ಹುಡುಗ: ಎಲ್ಲರಿಗೆ ಸರಿ ಹೋಗುವಷ್ಟು ಹೆಚ್ಚಾಗಿ ತಯಾರು ಮಾಡಲು ಸಾಧ್ಯವಿಲ್ಲವಾ?
ಅಪ್ಪ: ಎಲ್ಲರಿಗೂ ಸಾಕಾಗುವುದಿಲ್ಲ.
ಹುಡುಗ: ಹೇಗೆ ತಯಾರು ಮಾಡ್ತಾರೆ? ದುಡ್ಡು ಅಂದ್ರೆ ರೂಪಾಯಿ ತಾನೆ?
ಅಪ್ಪ: ನೋಟುಗಳನ್ನು ಅಚ್ಚು ಹಾಕುತ್ತಾರೆ.
ಹುಡುಗ: ಇನ್ನೂ ನೋಟುಗಳನ್ನು ಅಚ್ಚು ಹಾಕಬಾರದಾ?
ಅಪ್ಪ: ಬೇಕಾದಷ್ಟು ಹೋಡೀತಾನೆ ಇದ್ದಾರೆ. 
ಹುಡುಗ: ಯಾರಿಗೆ ಬೇಕು?
ಅಪ್ಪ: ಸರ್ಕಾರಕ್ಕೆ.
ಹುಡುಗ: ಅವರಿಗೆ ಅವರು ಅಚ್ಚು ಹೊಡೆಸಿಕೊಂಡ್ರೆ ನಮಗೇ ಹೇಗೆ ಬರುತ್ತೆ?
ಅಪ್ಪ: ಸರ್ಕಾರ ಕೆಲಸ ಮಾಡುವವರಿಗೆ ಕೊಡ್ತಾರೆ. ಅವರು ಅವರ ಕೆಳಗಿನ ಕೆಲಸದವರಿಗೆ ಕೊಡ್ತಾರೆ.
ಹುಡುಗ: ಎಲ್ಲರಿಗೂ ಬೇಕಾಗುವಷ್ಟು ಕೊಡಬಾರದಾ? ನಮಗೆ ಕಾರು ಕೊಳ್ಳಲು ಹತ್ತು ಸಾವಿರ ಅಚ್ಚು ಹಾಕಿಸಿ ಕೊಡಬಾರದಾ? ಕೆಲವರ ಅವರನ್ನು ಕೇಳಿ ತೆಗೆದುಕೊಂಡು ಕಾರು ಕೊಂಡುಕೊಳ್ಳುತ್ತಾರೆ. ನಿನಗೆ ಅವರನ್ನು ಕೇಳಲು ಆಗದು. ನಿನ್ನ ಮುಖ ನೋಡಿದ್ರೆ ಅವರು ಕೊಡುವುದಿಲ್ಲ.
ಅಪ್ಪ: ಅದೇನು?
ಹುಡುಗ: ಅಮ್ಮ ಹೇಳಿದ್ಳಲ್ಲಾ, ಅಪ್ಪನ ಮುಖ ನೋಡಿದ್ರೆ ಯಾರಿಗೂ ಏನೂ ಕೊಡುವ ಮನಸ್ಸಾಗುವುದಿಲ್ಲ. ಸರ್ಕಾರ ಅಂದ್ರೆ ಯಾರು?
ಅಪ್ಪ: ಕೆಲವರು ಶ್ರೀಮಂತರು.
ಹುಡುಗ: ಅವರು ಹೇಗೆ ಶ್ರೀಮಂತರಾದರು.
ಅಪ್ಪ: ಜನರ ವಿಶ್ವಾಸದ ಮೂಲಕ.
ಹುಡುಗ: ನಿನ್ನ ಮೇಲೆ ಬರಬಾರದಾ ವಿಶ್ವಾಸ? ನೀನು ತರೆಸಿಕೊ. ಆಗ ನೀನು ಜಾಸ್ತಿ ನೋಟುಗಳನ್ನು ಅಚ್ಚು ಹಾಕಿಸಿಕೊಂಡು ನಿನಗೊಂದು ಕಾರು, ನನಗೊಂದು ಕಾರು, ಅಮ್ಮನಿಗೊಂದು ಕಾರು ಕೊಂಡುಕೊಳ್ಳಬಹುದು. ಹೌದು. ಎಲ್ಲಾ ಅವರೆ ತೆಗೆದುಕೊಂಡು ಬಿಟ್ರೆ ಬಡವರಿಗೆ ಏನು ಮಿಗುತ್ತೆ? ಜನ ಅವರನ್ನು ನಂಬಿದ್ದಕ್ಕಾಗಿ ಅವರಿಗೆ ಕಾರು, ಬಂಗಲೆ. ಅವರನ್ನು ನಂಬಿ ಅವರನ್ನು ಮೇಲೆ ತಂದ ಬೀದಿಯವರಿಗೆ ಮಾತ್ರ ತಿಂಡಿ ಕೂಡಾ ಇಲ್ಲ.
ಅಪ್ಪ: ಅದಕ್ಕಿಂತ ಇನ್ನೇನು ಮಾಡ್ತಾರೆ?
ಹುಡುಗ: ಯಾಕೆ ಸುಮ್ಮನಿರ್ತಾರೆ? ಹೊಡೆಯುವುದಿಲ್ಲವೆ?
ಅಪ್ಪ: ಹೊಡೆದರೆ ಸರ್ಕಾರ ಸುಮ್ಮನಿರುವುದಿಲ್ಲ.
ಹುಡುಗ: ಇರದಿದ್ದರೆ…
ಅಪ್ಪ: ಈ ಆಡಳಿತ ಎಲ್ಲಾ ಯಾರು ನೋಡಿಕೊಳ್ತಾರೆ?
ಹುಡುಗ: ದುಡ್ಡೆಲ್ಲಾ ತಮಗೆ ತೆಗೆದುಕೊಳ್ಳದೆ ಆಳುವವರಿರುವುದಿಲ್ಲವಾ?
ಅಪ್ಪ:  ಇರುವುದಿಲ್ಲ.
ಹುಡುಗ:  ನೀನೂ ಅಷ್ಟೇನಾ?
ಅಪ್ಪ: ಈಗಲೇ ಅಲ್ವಾ ನಾಲ್ಕು ಕಾರು ಕೊಂಡುಕೊ ಅಂದೆ?
ಹುಡುಗ: ಹೌದು, ನಮ್ಮ ಸರ್ಕಾರ ಬಂದ್ರೆ. ಆದ್ರೂ ದುಡ್ಡು ಅನವಶ್ಯವಾಗಿ. . . . 
ಅಪ್ಪ: ಅವರು ಒಪ್ಪಿಕೊಳ್ಳುವುದಿಲ್ಲ. ಅವರು ಒಪ್ಪಿಕೊಂಡರೂ ಅವರ ಕೈಯಲ್ಲಿ ಆಗುವುದಿಲ್ಲ.
ಹುಡುಗ: ಅವರಿಗೆ ಹೇಗೆ ಆಗುತ್ತೆ? ಇವರಿಗೂ ಕಲಿಸಬಾರದಾ?
ಅಪ್ಪ: ಜನರಿಗೆ ಅವರ ಮೇಲೆ ವಿಶ್ವಾಸ ಬರುವುದಿಲ್ಲ.
ಹುಡುಗ: ದುಡ್ಡೆಲ್ಲಾ ಬಚ್ಚಿಟ್ಟುಕೊಳ್ಳುವವರನ್ನು ಬಿಟ್ಟರೆ ಜನರಿಗೆ ಬೇರೆಯವರ ಮೇಲೆ ವಿಶ್ವಾಸ ಬರುವುದಿಲ್ಲವಾ? ಒಂದು ವೇಳೆ ದುಡ್ಡು ಬಚ್ಚಿಟ್ಟುಕೊಂಡು ಅವರಿಗೆ ಸರ್ಕಾರದ ಕೆಲಸ ಮಾಡುವುದು ಸಾಧ್ಯವಿಲ್ಲವೇನೋ? ಹೋಗಲಿ ಅವರು ತೆಗೆದುಕೊಳ್ಳುವಷ್ಟು ತೆಗೆದುಕೊಂಡು ಇನ್ನಷ್ಟು ನೋಟುಗಳನ್ನು ಅಚ್ಚು ಹಾಕಿ ಎಲ್ಲರಿಗೂ ಕೊಡಬಾರದಾ? ಆಗ ಎಲ್ಲರಿಗೂ ತಿಂಡಿ, ಕಾರು ಇರುತ್ತಲ್ವಾ?
ಅಪ್ಪ: ಎಲ್ಲರಿಗೂನೂ? ಹಾಗೆ ಒಪ್ಪಿಕೊಳ್ಳುವುದಿಲ್ಲ.
ಹುಡುಗ: ಯಾಕೆ?
ಅಪ್ಪ: ಹಾಗೆ ಒಪ್ಪಿಕೊಂಡರೆ ಎಲ್ಲರಿಗೂ ಇರುತ್ತೆ. ಇನ್ನು ಶ್ರೀಮಂತರ ಹೆಚ್ಚುಗಾರಿಕೆ ಏನು?
ಹುಡುಗ: ಅದಕ್ಕೆ ಅಂತಾ ಹೆಚ್ಚು ಜನರನ್ನು ಬಡವರನ್ನಾಗಿ ಇಡ್ತಾರ?
ಅಪ್ಪ: ಅಂದ್ರೆ ನಿನ್ನ ಬಟ್ಟೆ, ನಿನ್ನ ಗೊಂಬೆಗಳೂ, ಪುಸ್ತಕಗಳು ನಮ್ಮ ಕೆಲಸದ ಹುಡುಗನ ಜೊತೆ ಹಂಚಿಕೊಳ್ತೀಯಾ? ಏನು ಗೊತ್ತಗುತ್ತಾ?
ಹುಡುಗ: ಊ…… ಹಂಚಿಕೊಳ್ಳುವುದಿಲ್ಲ. ಆದರೆ ಎಲ್ಲರಿಗೂ ಮೊದಲಿನಿಂದಲೇ ಸಮಾನವಾಗಿ ಇದ್ರೆ ನನ್ಗೆ ಬೇಕು ಅಂತಾ, ನನಗೆ ಇರ್ಬೇಕು ಅಂತ ಬಚ್ಚಿಟ್ಟುಕೊಳ್ಳೋಲ್ಲ.
ಅಪ್ಪ: ಅವರೂ ಅಷ್ಟೆ. ಸಾಧ್ಯವಾದ್ರೆ ಬಚ್ಚಿಟ್ಟುಕೊಳ್ತಾರೆ, ಇಲ್ಲದಿದ್ದರೆ ವಿಧಿ ಇಲ್ಲದೆ ಹಂಚಿಕೊಳ್ತಾರೆ.
ಹುಡುಗ: ಹೋಗಲಿ, ಎಲ್ಲಾ ಕಡಿಮೆ ಬೆಲೆಗೆ ಮಾಡಬಾರದಾ? ಎಲ್ಲದಕ್ಕೂ ಬೆಲೆ ಹೆಚ್ಚಿಸುವುದು ಯಾಕೆ? ಯಾರು ಆ ಕೆಲಸ ಮಾಡುವುದು, ಸರ್ಕಾರಾನಾ? 
ಅಪ್ಪ: ಸರ್ಕಾರ ಅಲ್ಲ. ಅದೇ ಜಾಸ್ತಿ ಆಗುತ್ತೆ. ಆ ವಸ್ತು ಕಡಿಮೆಯಾಗಿ, ಕೇಳುವವರು ಜಾಸ್ತಿಯಾದೆ. . . .
ಹುಡುಗ: ಮೊನ್ನೆ ನಮ್ಮ ಕ್ಲಾಸಿನಲ್ಲಿ ರಾಮರಾಜು ಇಲ್ವಾ, ರಾಜಯ್ಯನ ಮಗ, ಅವನು ಪುಸ್ತಕ ಕೊಂಡುಕೊಳ್ಳಲಿಲ್ಲ. ಟೀಚರ್ ಕೇಳಿದ್ರೆ ದುಡ್ಡಿಲ್ಲ ಅಂದ. ಟೀಚರ್ ಅವನನ್ನು ಹೊಡೆದರು. ಅವನು ಹೇಗೆ ಅತ್ತಾ ಗೊತ್ತಾ? ರಾತ್ರಿ ಊಟ ಮಾಡುವುದಿಲ್ಲವಂತೆ. ಹೋಗಲಿ ಅವರಿಗಾದ್ರೂ ದುಡ್ಡು ಕೊಡಬಾರದೆ?
ಅಪ್ಪ: ಅಂತವರಿಗೆ ನಾವು ದುಡ್ಡು ಹಂಚಿದರೆ ನಿನಗೆಲ್ಲಿ ಇರುತ್ತದೆ? ನಿನಗೆ ತುಪ್ಪ, ಮೊಸರು ಇರುವುದಿಲ್ಲ . . . . 
ಹುಡುಗ: ಅವರಿಗೇನು? ಅವರು ಎಷ್ಟು ಬೇಕಾದರೂ ನೋಟುಗಳನ್ನು ಅಚ್ಚು ಹಾಕಬಹುದಲ್ಲವೇ.
ಅಪ್ಪ: ಸುಮ್ಮನೆ ನಿನಗೆ ಅರ್ಥವಾಗಲಿ ಎಂದು ಆ ರೀತಿ ಹೇಳಿದೆ. ಅವರು ಆ ರೀತಿ ಮಾಡಲು ಅವಕಾಶವಿಲ್ಲ. ಅವರಿಗೂ ಸಂಬಳವೇ.
ಹುಡುಗ: ಯಾರು ಕೊಡುತ್ತಾರೆ?
ಅಪ್ಪ: ಅವರಿಗೆ ಅವರೇ ನೋಟುಗಳನ್ನು ಹೆಚ್ಚು ಹೆಚ್ಚು ಅಚ್ಚು ಹಾಕಿದರೆ ಹಣ ಅಗ್ಗವಾಗಿ ವಸ್ತುಗಳ ಬೆಲೆ ಈಗಲಿಗಿಂತ ಹೆಚ್ಚಾಗುತ್ತದೆ. 
ಹುಡುಗ: ಈ ಹಣ ಎನ್ನುವುದೇ ಇಲ್ಲದಿದ್ದರೆ ಚೆನ್ನಾಗಿರುತ್ತಲ್ಲಾ?
ಅಪ್ಪ: ಹೇಗೆ ಕೊಂಡುಕೊಳ್ಳುತ್ತೀಯಾ? ಯಾವುದರಿಂದ?
ಹುಡುಗ: ಯಾಕೆ ಕೊಂಡುಕೊಳ್ಳಬೇಕು? ಯಾರಿಗೆ ಏನು ಬೇಕೊ ಅದನ್ನು ಸರ್ಕಾರ ಕೊಟ್ಟರಾಯಿತು.
ಅಪ್ಪ: ನಿನಗೆ ತುಪ್ಪ ಅಗತ್ಯವಿಲ್ಲವಾ? ಕಾಫಿ ಬ್ರೆಡ್, ಮಾಂಸ ಕೂಡ ಬೇಡವೆಂದರೆ ಒಪ್ಪಿಕೊಳ್ಳುತ್ತೀಯ?
ಹುಡುಗ: ಓ, ಎಲ್ಲರಿಗೂ ಸುಖವಾಗಿ ಇರಲು ಕೊಟ್ಟರೆ ನಾನು ಒಪ್ಪಿಕೊಳ್ಳುತ್ತೇನೆ.
ಅಪ್ಪ: ಆದರೆ, ಕೆಲವರು ಆ ರೀತಿ ಒಪ್ಪಿಕೊಳ್ಳುವುದಿಲ್ಲ.
ಹುಡುಗ: ಒಪ್ಪಿಕೊಳ್ಳದಿದ್ದವರಿಗೆ ಒದ್ದರೆ ಸರಿ.
ಅಪ್ಪ: ಕಮ್ಯುನಿಸ್ಟ್ ಆಗಿ ಹೋಗುತ್ತಿದ್ದೀಯಲ್ಲ.
ಹುಡುಗ: ಅಂದರೆ?
ಅಪ್ಪ: ನಿನ್ನ ರೀತಿ ಮಾತನಾಡುವವನು ಎಂದರ್ಥ
ಹುಡುಗ: ಅದೇ ಒಳ್ಳೆಯದು. ಈಗ ಬಹಳಷ್ಟು ಅನ್ಯಾಯ ವಾಗುತ್ತಿದೆ. ನೀನು ಕಮ್ಯುನಿಸ್ಟ್ ಆಗಿ ಬಿಡು. 
ಅಪ್ಪ: ಅವರು ದೇವರಿಲ್ಲ ಎನ್ನುತ್ತಾರೆ.
ಹುಡುಗ: ಅಂದರೆ ಏನು? ದೇವರಿಗೇನಾದರೂ ತೊಂದರೆನಾ? ಏನು ಇಲ್ಲ. ಅಷ್ಟು ಬೇಕೆಂದರೆ ದೇವರು ಎಲ್ಲರಿಗೂ ಬೇಕಾಗುವುದನ್ನು ಏರ್ಪಾಡು ಮಾಡಬಹುದಲ್ಲವೇ?
ಅಪ್ಪ: ಏನೋ, ನನಗದೆಲ್ಲ ಗೊತ್ತಿಲ್ಲ, ಹೋಗೋ!!!!!


-   ಸುಧಾ ಜಿ      

1 ಕಾಮೆಂಟ್‌:

Rajiv Magal ಹೇಳಿದರು...

ದೆವರನ್ನು ನ೦ಬದವರು ಬರೆಯುವುದು ಒ೦ದು ರೀತಿಯಾದರೆ, ನ೦ಬುವವರ ರೀತಿಯೇ ವಿಭಿನ್ನ.
ಒಟ್ಟಿನಲ್ಲಿ "ದೇವರು" ಎ೦ಬ ಪದದ ಬಳಕೆಯೇ ಒ೦ದು ವಿಶೇಷ!