Pages

ಸಿನಿಮಾ ವಿಮರ್ಶೆ - ದಿ ಬೇರ್ (ಕರಡಿ)

[ಇಂಗ್ಲಿಷ್ ಸಿನಿಮಾ ದಿ ಬೇರ್ (ಕರಡಿ) - ಇದರ ವಿಮರ್ಶೆ]


ಕಥೆಯ ಜಾಗ - ಬ್ರಿಟಿಷ್ ಕೊಲಂಬಿಯಾ, ಕೆನಡಾ  – 1885
ಈ ಕಥೆ ಅನಾಥವಾದ ಕರಡಿ ಮರಿ ದೊಡ್ಡ ಕರಡಿಯೊಂದಿಗೆ ಬೆಳೆಸಿದ ಸ್ನೇಹ ಸಂಬಂಧದ ಬಗ್ಗೆ ಹೇಳುತ್ತದೆ. ಜೊತೆಗೆ ಕೊಲ್ಲುವುದಕ್ಕಿಂತ ಬದುಕುವುದು, ಬದುಕಲು ಅವಕಾಶ ನೀಡುವುದು ದೊಡ್ಡದು ಎಂದು ಸಾರುತ್ತದೆ. 
ಕಥೆ 
ತಾಯಿ ಕರಡಿ ಜೇನನ್ನು ಕೀಳುತ್ತಿರುತ್ತದೆ. ಮರದ ಬುಡದಿಂದ ಮಣ್ಣನ್ನು ತೆಗೆಯುತ್ತಾ. ಮರಿ ಕರಡಿ ಅದರ ಸುತಮುತ್ತಲೂ ಓಡಾಡಿಕೊಂಡಿರುತ್ತದೆ. ಮರಿಗೂ ಜೇನನ್ನು ಕೊಡುತ್ತಾ ತಾನು ತಿನ್ನುತ್ತಿರುತ್ತದೆ. ಇನ್ನಷ್ಟು ಆಳಕ್ಕೆ ಹೋದಾಗ, ಮರ ಅಲುಗಾಡಿ, ಮರಕ್ಕೆ ಅಂಟಿಕೊಂಡಂತಿದ್ದ ಕಲ್ಲುಗಳು ಉದುರುತ್ತವೆ. ದೊಡ್ಡ ಬಂಡೆಯೊಂದು ತಾಯಿಯ ಮೇಲೆ ಬಿದ್ದು ತಾಯಿ ಸತ್ತುಹೋಗುತ್ತದೆ. ಮರಿ ಕರಡಿ ಅದನ್ನು ಎಬ್ಬಿಸಲು ಕಲ್ಲುಗಳನ್ನು ತೆಗೆಯುವ ಪ್ರಯತ್ನ ಮಾಡುತ್ತದೆ. ಆದರೆ ಸಾಧ್ಯವಾಗುವುದಿಲ್ಲ. ಮರುದಿನ ಅದು ಬೇರೆ ಕಡೆಗೆ ಹೊರಡುತ್ತದೆ.
ಈ ಮಧ್ಯೆ ಬೇಟೆಗಾರರು ಕರಡಿಯನ್ನು ಬೇಟೆಯಾಡಲು ಬಂದಿದ್ದಾರೆ.  ಇನ್ನೊಂದು ಗಂಡು ಕರಡಿ ಸಿಗುತ್ತದೆ, ಹೊಡೆಯುತ್ತಾರೆ, ಆದರೆ ಅದು ಸಾಯುವುದಿಲ್ಲ, ತಪ್ಪಿಸಿಕೊಳ್ಳುತ್ತದೆ, ಜೊತೆಗೆ ಬೇಟೆಗಾರರು ತಂದಿದ್ದ ಕುದುರೆಗಳ ಮೇಲೆ ದಾಲೀ ಮಾಡಿ ಗಾಯಗೊಳಿಸಿರುತ್ತದೆ. ಇದರಿಂದ ಅಪ್ಪ ಹೇಗಾದರೂ ಮಾಡಿ ಅದನ್ನು ಕೊಲ್ಲಲೇಬೇಕೆಂದು ತೀರ್ಮಾನಿಸಿದ್ದಾನೆ.
ಇತ್ತ ಕರಡಿಗೆ ತಗುಲಿದ ಗುಂಡು ಭುಜದ ಮೇಲಿರುತ್ತದೆ. ಅದರ ಕೂಗನ್ನು ಕೇಳಿಸಿಕೊಂಡು ಮರಿ ಕರಡಿ ತನ್ನಮ್ಮ ಎಂದುಕೊಂಡೇ ಅದರ ಹತ್ತಿರ ಹೋಗಲೆತ್ನಿಸುತ್ತದೆ. ಆದರೆ ಅದು ಇದನ್ನು ಓಡಿಸಿ, ಕೊನೆಗೆ ಹೊಂಡದಲ್ಲಿ ಹೋಗಿ ತಂಪಾಗಲೆಂದು ಮಲಗಿರುತ್ತದೆ, ಆದರೆ ನೋವಿನ್ನು ಹೋಗಿರುವುದಿಲ್ಲ. 
ಮರಿ ಕರಡಿ ನಿಧಾನವಾಗಿ ಹೋಗಿ ಆ ಗಾಯವನ್ನು ನೆಕ್ಕಲಾರಂಭಿಸುತ್ತದೆ. ಆ ದೊಡ್ಡ ಕರಡಿಗೆ ಹಾಯೆನಿಸುತ್ತದೆ. ಈ ಮರಿಯನ್ನು ತನ್ನದೆಂದು ಒಪ್ಪಿಕೊಂಡುಬಿಡುತ್ತದೆ. ನೀರಿನಲ್ಲಿ ಮೀನನ್ನು ಹಿಡಿದು ತನ್ನ ಮರಿಗೆ ಕೊಡುತ್ತದೆ. 
ಬೇಟೆಗಾರ ಕಾಯುತ್ತಿದ್ದಾನೆ, ಅಪ್ಪ ನಾಯಿಗಳನ್ನು ಕರೆತರಲು ಹೋಗಿದ್ದಾನೆ. 
ತಾಯಿ ಕರಡಿ ಮರ ಕೀಳುವುದನ್ನು ಗಮನಿಸಿ ತಾನೂ ಕೀಳಲೆತ್ನಿಸುತ್ತದೆ. ನಾಯಿಕೊಡೆ ತಿಂದಾಗ ತಲೆ ತಿರುಗುವುದು; ಕಪ್ಪೆಯನ್ನು ಹಿಡಿಯಲೆತ್ನಿಸುವುದು,; ಚಿಟ್ಟೆಯನ್ನು, ಆಮೆಯನ್ನು ಹಿಡಿಯಲೆತ್ನಿಸುವುದು; ಅಳಿಲನ್ನು, ನೀರಲ್ಲಿರುವ ಚಂದ್ರನನ್ನು ಹಿಡಿಯಲೆತ್ನಿಸುವ ದೃಶ್ಯಗಳನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ಹುಲಿಯೊಂದಿಗಿನ ಹೋರಾಟದ ಸಮಯದಲ್ಲಿ, ನಾಯಿಗಳು ಅಟ್ಟಿಸಿಕೊಂಡು ಬಂದಾಗ ಅದರ ಮುಖದಲ್ಲಿನ ಭಯ ಸುಂದರವಾಗಿ ಚಿತ್ರಿತವಾಗಿದೆ. ಏಕೆಂದರೆ ಮರಿ ಕರಡಿ ಅಷ್ಟು ಅದ್ಭುತವಾಗಿ ನಟಿಸಿದೆ. ಅಥವಾ ನಿರ್ದೇಶಕರು ಅಷ್ಟು ಚೆನ್ನಾಗಿ ಸೂಕ್ತ ಸಮಯದಲ್ಲಿ ಕ್ಯಾಮರಾದಲ್ಲಿ ಅದಷ್ಟನ್ನು ಸೆರೆಹಿಡಿದಿದ್ದಾರೆ. ಪೋಟೊಗ್ರಫಿ ಅದ್ಭುತ. ಮರಿ ಕರಡಿಯೇ ಈ ಚಿತ್ರದ ಹೀರೋ ಎಂದರೆ ತಪ್ಪಿಲ್ಲ. 
ಬೇಟೆಗಾರರು ಕರಡಿಯನ್ನು ಹುಡುಕಿ ಹೊರಟಿದ್ದಾರೆ, ಕರಡಿ ಅವರನ್ನು ನೋಡುತ್ತದೆ. ಬೆಟ್ಟ ಹತ್ತಲಾರಂಭಿಸುತ್ತದೆ. ಮರಿ ಬಹಳ ಕಷ್ಟ ಪಟ್ಟು ಹತ್ತುತ್ತದೆ, ಒಂದು ಹಂತದಲ್ಲಿ ಅಸಹಾಯವಾಗಿ ಕೂಗುತ್ತದೆ. ತಂದೆ ಕರಡಿ ಮತ್ತೆ ಹಿಂದೆ ಬರುತ್ತದೆ. ಮರಿಯನ್ನು ಗುಹೆಯೊಂದರಲ್ಲಿ ಕಳಿಸಿ ಹೊರಗೆ ನಿಲ್ಲುತ್ತದೆ. ಹತ್ತಾರು ನಾಯಿಗಳು ಒಟ್ಟಾಗಿ ಆಕ್ರಮಣ ಮಾಡುತ್ತವೆ. ಕರಡಿ ಬಹಳಷ್ಟು ನಾಯಿಗಳನ್ನು ಗಾಯಗೊಳಿಸಿ ತಪ್ಪಿಸಿಕೊಳ್ಳುತ್ತದೆ. ಮರಿ ಗುಹೆಯಿಂದ ಹೊರಬಂದು ತಂದೆಯ ಹೆಜ್ಜೆ ಗುರುತಿನ ಆಧಾರದ ಮೇಲೆ ಅದನ್ನು ಹುಡುಕಲು ಹೊರಡುತ್ತದೆ. ಬೇಟೆಗಾರರು ಮರಿಯನ್ನು ನೋಡಿ ಅದನ್ನು ಹಿಡಿದುಕೊಂಡು ಬರುತ್ತಾರೆ. 
ಮಗ ಕರಡಿ ಮರಿಯ ಬಗ್ಗೆ ಕಾಳಜಿ ವಹಿಸುತ್ತಾನೆ. ರಾತ್ರಿ ಅಪ್ಪ ಕರಡಿ ಆ ಟೆಂಟ್ ನ ಸುತ್ತ ಸುತ್ತುತ್ತದೆ. ಮರುದಿನ ಮತ್ತೆ ಬೇಟೇಗಾರರು ಕರಡಿಯನ್ನು ಹುಡುಕಿ ಹೊರಟಿದ್ದಾರೆ. ಅಪ್ಪ, ಮಗ ಬೇರೆ ಬೇರೆ ಕಡೆ ಹೋಗುತ್ತಾರೆ. ಕರಡಿ ಅವರನ್ನು ನೋಡುತ್ತದೆ. ಮಗ ಕುಳಿತು ಕರಡಿಗಾಗಿ ಕಾಯುತ್ತಿದ್ದಾನೆ. ನೀರು ಖಾಲಿಯಾಗಿದೆ ಎಂದುಕೊಂಡು ನೀರು ತರಲು ಬರುತ್ತಾನೆ. ಆಗ ಅಪ್ಪ ಕರಡಿ ಬರುತ್ತದೆ. ಅವನ ಕೈಯಲ್ಲಿ ಗನ್ ಇರುವುದಿಲ್ಲ. ಅದು ಎಷ್ಟು ಜೋರಾಗಿ ಕೂಗಿಕೊಳ್ಳುತ್ತದೆಂದರೆ ಅವನ ಕಿವಿ ತಮಟೆ ಒಡೆದುಹೋಗುವಷ್ಟು, ಅದನ್ನು ಕೇಳಿಸಿಕೊಳ್ಳಲಾಗದೆ ಅವನು ದಯವಿಟ್ಟು ನಿಲ್ಲಿಸು ಎಅಂದು ಕೇಳಿಕೊಳ್ಳುತ್ತಾನೆ. ಕರಡಿ ದಯೆಯನ್ನು ತೋರಿಸಿ ಹಿಂದೆ ಹೊರಟುಹೋಗುತ್ತದೆ.  ತಕ್ಷಣವೇ ಇವನು ಗನ್ ತೆಗೆದುಕೊಂಡು ಗುರಿ ಇಡುತ್ತಾನೆ, ಆದರೆ ನಂತರ ಮನಸ್ಸನ್ನು ಬದಲಿಸಿಕೊಳ್ಳುತ್ತಾನೆ. ಅವನ ಮುಖಚಹರೆಯಲ್ಲಿ, “ಪ್ರ್ರಾಣಿಯೇ ನನ್ನ ಮೇಲೆ ದಯೆ ತೋರಿಸಿರುವಾಗ, ಮನುಷ್ಯನಾದ ನಾನು ಕಟುಕನಾಗಿ ವರ್ತಿಸುವುದು ಸರಿಯಲ್ಲ, ಎಂಬುದು ಕಾಣಿಸುತ್ತದೆ. ಅಪ್ಪ ಅಲ್ಲಿಗೆ ಬಂದು ಗುರಿ ಇಡುತ್ತಾನೆ. ಮಗ ಬೇಡವೆನ್ನುತ್ತಾನೆ.
ನಂತರ ಅವರು ಹಿಂದಿರುಗಲು ನಿರ್ಧರಿಸಿ ಮರಿಯನ್ನು ಬಿಟ್ಟುಬಿಡುತ್ತಾರೆ. ಅದು ಇವರನ್ನು ಹಿಂಬಾಲಿಸಿದಾಗ, ಇವರು ಅದನ್ನು ಪುನಃ ಕಾಡಿನತ್ತ ಓಡಿಸುತ್ತಾರೆ. ಬೇಟೆಯಾಡುವ ತಮ್ಮ ಹವ್ಯಾಸವನ್ನು ಬಿಟ್ಟುಬಿಡಲು ನಿರ್ಧರಿಸುತ್ತಾರೆ.
ಇತ್ತ ಮರಿ ತನ್ನ ತಾಯಿಯನ್ನು ಹುಡುಕಿಕೊಂಡು ಹೊರಟಿದೆ. ಅಷ್ಟರಲ್ಲಿ ಹುಲಿಯೊಂದು ಅದನ್ನು ಅಟ್ಟಿಸಿಕೊಂಡು ಬರುತ್ತದೆ. ಅದು ಓಡುತ್ತಾ ನದಿ ಅಡ್ಡಬಂದಾಗ, ಅದರ ಮೇಲೆ ಬಾಗಿದ್ದ ಮರದ ಕೊಂಬೆಯನ್ನು ಏರುತ್ತದೆ, ಕೊಂಬೆ ಮುರಿದು ಅದು ನೀರಿಗೆ ಬೀಳುತ್ತದೆ, ಅದೇ ಕೊಂಬೆಯ ಮೇಲೆ ಕುಳಿತು ಸಾಗುತ್ತಿರುವಾಗ ಹುಲಿ ಬಂಡೆಯ ಹತ್ತಿರ ಕಾಯುತ್ತಿರುತ್ತದೆ. ನೀರಿಗೆ ಧುಮುಕಿದ ಮರಿ ಅಲ್ಲಿಂದ ಈಜುತ್ತಾ ಬಂಡೆಯ ಮೇಲೆ ಬರುತ್ತದೆ. ಹುಲಿ ಕರಡಿ ಮರಿಯ ಮೇಲೆ ಆಕ್ರಮಣ ಮಾಡುತ್ತದೆ. ಮರಿ ಹೆದರಿದ್ದರೂ ತಾನು ಸಹ ಆಕ್ತ್ರಮಣ ಮಾಡಲೆತ್ನಿಸುತ್ತದೆ. ಕೊನೆಗೆ ಮರಿ ಜೋರಾಗಿ ಕೂಗುತ್ತದೆ. ಹುಲಿ ಹಿಮ್ಮೆಟ್ಟುತ್ತದೆ. ಅದನ್ನು ಕಂಡು ಮರಿ ಇನ್ನಷ್ಟು ಜೋರಾಗಿ ಕೂಗುತ್ತದೆ. ಆದರೆ ಅದರ ಹಿಂದೆ ಅಪ್ಪ ಕರಡಿಯ ಕೂಗಿಗೆ ಹುಲಿ ಹೆದರಿರುವುದು. ಹುಲಿ ಹೋದ ನಂತರ ಶಬ್ದ ಕೇಳಿಸಿದ ಕಡೆಗೆ ತಿರುಗಿ ನೋಡುತ್ತದೆ ಆಗ ಅಪ್ಪ ಕರಡಿ ಕಾಣಿಸುತ್ತದೆ, ತಕ್ಷಣವೇ ಅದರ ಬಳಿ ಓಡುತ್ತದೆ. ಕರಡಿ ತನ್ನ ಮರಿಯ ಮೇಲೆ ಅದ ಗಾಯವನ್ನು ನೆಕ್ಕುತ್ತದೆ. ನಂತರ ಅವೆರಡೂ ಒಟ್ಟಿಗೆ ಹೋಗುತ್ತವೆ.
ಮಂಜುಗಾಲ ಬರುತ್ತಿದೆ. ಅಪ್ಪ ಕರಡಿ ಮರಿಯನ್ನು ಕರೆದುಕೊಂಡು ಗುಹೆಯೊಂದನ್ನು ಹೊಕ್ಕುತ್ತದೆ. ಎರಡೂ ಒಂದನ್ನೊಂದು ಅಪ್ಪಿಕೊಂಡು ಮಲಗುತ್ತವೆ. ಈ ಚಿತ್ರಣದೊಂದಿಗೆ ಮತ್ತೆ ನಿಸರ್ಗವನ್ನು ತೋರಿಸುತ್ತಾ ಚಿತ್ರ ಮುಗಿಯುತ್ತದೆ. 
ಪ್ರಾಣಿಗಳನ್ನು ಇಟ್ಟುಕೊಂಡು ಚಿತ್ರ ಮಾಡುವುದು ಅತ್ಯಂತ ಕಷ್ಟಕರವಾದದ್ದು. ಪ್ರತಿಯೊಂದು ಸನ್ನಿವೇಶದಲ್ಲೂ ಆ ಅದ್ಭುತ ನಟನೆಯನ್ನು ಚಿತ್ರೀಕರಿಸುವುದು ಕಷ್ಟ. 
ಪ್ರಾಣಿಯಲ್ಲಿರುವ ಮಮತೆಯನ್ನು, ತಮ್ಮ ಮರಿಗಳ ಬಗ್ಗೆ ಅವು ವಹಿಸುವ ಕಾಳಜಿಯನ್ನು, ಬದುಕುವುದನ್ನು ಕಲಿಸಿಕೊಡುವುದನ್ನು, ನಿಸರ್ಗದತ್ತವಾಗಿ ಪ್ರತಿಯೊಂದು ಪ್ರಾಣಿ ತನ್ನ ಜೀವದ ಬಗ್ಗೆ ಎಚ್ಚರಿಕೆ ವಹಿಸುವುದನ್ನು ನಾವಿಲ್ಲಿ ನೋಡಬಹುದು. ಪ್ರಾಣಿಯಿಂದ ಬದಲಾದ ಮೇಲ್ಮಟ್ಟದ ಪ್ರಾಣಿಯೆಂದೆನಿಸಿಕೊಳ್ಳುವ ಮನುಷ್ಯನನ್ನೂ ನೋಡಬಹುದು.
ಈ ಚಿತ್ರವನ್ನು ಚಿತ್ರೀಕರಿಸಲು ನಿರ್ದೇಶಕರು ೬ ತಿಂಗಳು ತೆಗೆದುಕೊಂಡರೆನ್ನಲಾಗಿದೆ. ಚಿತ್ರದ ನಿರ್ದೇಶಕ - ಜೀನ್ ಜಾಕ್ವೆಸ್ ಅನ್ನಾಡ್ 
ಇದು ಅಮೇರಿಕನ್ ಲೇಖಕ ಜೇಮ್ಸ್ ಆಲಿವರ್ ಕರ್ವುಡ್ ರವರ "ದಿ ಗ್ರಿಸ್ಲೆ ಕಿಂಗ್"  The Grizzly King (1916)  ಕಾದಂಬರಿಯಾಧಾರಿತ.  
ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. 
- ಸುಧಾ ಜಿ   

ಕಾಮೆಂಟ್‌ಗಳಿಲ್ಲ: