Pages

ಅನುಭವ



ಸಹಜ ಅನುಕಂಪಗಳಿಲ್ಲದ ಸಾಮಾಜಿಕ ವಲಯ ಸೃಷ್ಟಿಯಾಗುತ್ತಿರುವುದು ಮುಂದಿನ ಬದುಕಿಗೆ ಎಚ್ಚರದ ಗಂಟೆ ಆತಂಕದ ಸೂಚನೆ ಎನಿಸುತ್ತಿದೆ. ನಮ್ಮ ಮೆಟ್ರೋ ಪ್ರಯಾಣಿಕಳಾದ ನನಗೆ ಮನೆಕೆಲಸ ಮುಗಿಸಿ ಓಲೋ ಆಟೋದಲ್ಲಿ ಹಾರುತ್ತ, ಅಂತರಿಕ್ಷದಲ್ಲಿ ಸಾಗುವ ಅವಕಾಶ.  ಧೂಳು, ಶಬ್ದಮಾಲಿನ್ಯಗಳಿಲ್ಲದೆ ಕಾಲೇಜು ಸೇರುವ ಧಾವಂತ. 
ನೂರಾರು ಪ್ರಯಾಣಿಕರು ನೂರಾರು ವಯೋಮಾನದವರು. ಸಿಕ್ಕೋರಿಗೆ ಸೀರುಂಡೆ ಅಲ್ಲಿನ ಸೀಟುಗಳು. ನನಗೋ ವಾರದಲ್ಲಿ ೯, ೧೦ ಬಾರಿಯಾದರು ನಿಲ್ಲುವ ಅನಿವಾರ್ಯದ ಅವಕಾಶ. ತರುಣ ತರುಣಿಯರಿಗೆ, ಪ್ರೌಢಾವಸ್ಥೆಯ ನಾಗರೀಕರಿಗೆ ಕನಿಷ್ಟ ವ್ಯವಧಾನ, ವಿವೇಕ ಕಾಣದ ಸ್ಥಿತಿ ಕಾಣುತ್ತಿದೆ. ಮೆಟ್ರೋಗೆ ಮಕ್ಕಳೊಂದಿಗಿನ ಪೋಷಕರು ಹಾಗು ವಯಸ್ಸಾದವರು ಕಡಿಮೆಪ್ರಮಾಣದಲ್ಲಿ ಬರುತ್ತಾರೆ.  ಬಂದಾಗ ಕೂರಲು ಅವಕಾಶ ನೀಡಬೇಕೆಂಬ ಅಲ್ಪಪ್ರಜ್ಞೆ ಇಂದಿನ ತಲೆಮಾರಿನಲ್ಲಿ ಕ್ಷೀಣಿಸುತ್ತಿರುವುದು ಕಾಣುತ್ತಿದೆ.  ಸಹಜ ಜೀವನದ ಲಯ ಬದಲಾಗುತ್ತಿದೆ ಎನಿಸುತ್ತಿದೆ. ಸಮರ್ಥನಿಗೆ ಮಾತ್ರ ಬದುಕಲು ಭೂಮಿ ಎಂಬ ತತ್ವ ಹೆಚ್ಚು ಸಾಕ್ಷಾತ್ಕಾರವಾಗುತ್ತಿದೆ. ೩೦ ರಿಂದ ೫೦ ನಿಮಿಷದ ಹಾದಿಯ  ಮೆಟ್ರೊವನ್ನ ಹಂಚಿಕೊಳ್ಳಲಾಗದ ಯುವಜನ ಯಾವುದನ್ನ ಮುಪ್ಪಲ್ಲಿ ಇರುವವರೊಂದಿಗೆ, ಮಕ್ಕಳೊಂದಿಗೆ ಹಂಚಿಕೊಂಡಾರು ಎಂಬ ಭಾವ ಬೇಸರ ಮೂಡಿಸುತ್ತಿದೆ. ಮೌಲ್ಯಗಳನ್ನ ಬದುಕಿನಲ್ಲಿ ಸಾಧಿಸಿ, ಉಳಿಸಿ, ಬೆಳಸಿಕೊಳ್ಳಬೇಕೇ ಹೊರತು ಸಹಜವಾಗಿ  ಬರುವಂಥದ್ದಲ್ಲ ಎನಿಸಿದ್ದು ನಿಜ. ಕೈ ನಡುಗುವ ಅಜ್ಜ, ಅಸಹಾಯಕ ಅಮ್ಮಂದಿರು ನಿಮ್ಮತ್ತ ದೃಷ್ಟಿ ಹರಿಸಿದರೆ ಅವರ ಕೂಗಿಗೆ ದನಿಯಾಗಿ, ಆಸರೆಯಾಗಿ ಕೆಲವು ಕ್ಷಣಗಳಿಗೆ. ಎಂಥ ಸುಖ ಮನಸಿಗೆ ಸಿಗುವುದು ಅನುಭವಿಸಿ ನೋಡಿ. ದೇಹಕ್ಕೆ ಕೆಲವು ನಿಮಿಷ ಕಿರಿಕಿರಿ ಎನಿಸಬಹುದು ಆದರೆ ಅವರ ಸಮಾಧಾನ ನಮ್ಮಲ್ಲಿ ಒಂದು ನಿರಾಳತೆ ತರುತ್ತದೆ ಅಲ್ಲವೆ?
- ಸವಿತಾ 

ಕಾಮೆಂಟ್‌ಗಳಿಲ್ಲ: