Pages

ಪುಸ್ತಕಪ್ರೀತಿ: "ರೂಪದರ್ಶಿ – ಕೆ ವಿ ಅಯ್ಯರ್"




ಅಮೇರಿಕಾದ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ  'The face of iscariot' (ಜುದಾಸ್ ಇಸ್ಕ್ಯಾರಿಯೆಟ್ - ಕ್ರಿಸ್ತನನ್ನು ಮೋಸಮಾಡಿದ ಜುದಾಸನ ಪೂರ್ತಿ ಹೆಸರು) ಎಂಬ ಕಥೆಯ ಎಳೆಯೊಂದನ್ನು ತೆಗೆದುಕೊಂಡು ಕೆ ವಿ ಅಯ್ಯರ್‍ರವರು ರೂಪದರ್ಶಿ ಕಾದಂಬರಿಯನ್ನು ಬರೆದಿದ್ದಾರೆ.

ಫ್ಲೋರೆನ್ಸ್ ನಗರದಲ್ಲಿ ಕಟ್ಟಿಸಿದ್ದ ಚರ್ಚ್‍ನಲ್ಲಿ ಕ್ರಿಸ್ತನ ಜೀವನಚರಿತ್ರೆಯನ್ನು ಚಿತ್ರಿಸಬೇಕೆಂದು ಧರ್ಮದರ್ಶಿಗಳು ಮತ್ತಿತರರು ನಿರ್ಧರಿಸಿದರು. ಅದಕ್ಕಾಗಿ ಚಿತ್ರಕಲೆಯಲ್ಲಿ ಸಾರ್ವಭೌಮನಾಗಿದ್ದ ಮೈಕೆಲ್‍ನನ್ನು ಕೇಳಿದರು. ಅವನು ಒಪ್ಪಿ ಚಿತ್ರ ಬಿಡಿಸಲು ಪ್ರಾರಂಭಿಸಿದನು. ತುಂಬು ಗರ್ಭಿಣೆ ಮರಿಯಾಳ ಚಿತ್ರ, ಅವಳು ಕ್ರಿಸ್ತನನ್ನು ಹೆತ್ತದ್ದು, ಹೀಗೆ ಚಿತ್ರಗಳನ್ನು ಬಿಡಿಸಿದನು. ಆದರೆ, ಅವನಿಗೆ ಕ್ರಿಸ್ತನ ಬಾಲ್ಯದ ರೂಪವನ್ನು ಬಿಡಿಸಲಾಗಲಿಲ್ಲ. 
ಆ ರೀತಿಯಾದ ರೂಪದರ್ಶಿಯನ್ನು ವರ್ಷಗಳ ಕಾಲ ಎಲ್ಲಾ ಊರುಗಳಲ್ಲಿ ಹುಡುಕುತ್ತಾಪೀಸಾ ನಗರಕ್ಕೆ ಬಂದನು.  ಅವನ ಸ್ನೇಹಿತನ ಜೊತೆ ಒಂದು ಸಂಜೆ ಹೊರಗೆ ಹೋಗಿದ್ದಾಗ, ಅಲ್ಲಿ ಆಟವಾಡುತ್ತಿದ್ದ ಮಕ್ಕಳ ಗುಂಪಿನಲ್ಲಿ ಒಬ್ಬನನ್ನು ನೋಡಿದಾಕ್ಷಣ ಇವನೇ ನನಗೆ ರೂಪದರ್ಶಿಯಾಗಲು ಸೂಕ್ತವಾದ ಹುಡುಗಎಂದೆನಿಸಿ, ಅವನ ಅಜ್ಜಿಯ ಜೊತೆ ಮಾತನಾಡಿ, ಆ ಹುಡುಗನನ್ನು ಮತ್ತು ಅಜ್ಜಿಯನ್ನು ಫ್ಲೋರೆನ್ಸ್ ನಗರಕ್ಕೆ ಕರೆದುಕೊಂಡು ಹೋದನು. ಆ ಹುಡುಗನ ಹೆಸರು ಅರ್ನೆಸ್ಟೊ. ಅರ್ನೆಷ್ಟೊ ಮೈಕೆಲ್‍ನನ್ನು ಚಿಕ್ಕಪ್ಪ ಎಂದು ಕರೆಯಲಾರಂಭಿಸಿದನು. ಮೈಕೆಲ್ ಅರ್ನೆಸ್ಟೊನನ್ನು ರೂಪದರ್ಶಿಯನ್ನಾಗಿ ಮಾಡಿಕೊಂಡು ಬಾಲಯೇಸುವಿನ ಚಿತ್ರಗಳನ್ನು ಅದ್ಭುತವಾಗಿ ಬಿಡಿಸಿದನು.
ಎಲ್ಲಾ ಚಿತ್ರಗಳನ್ನು ಬಿಡಿಸಿಯಾದ ಮೇಲೆ ಬೇಕಾದಷ್ಟು ಹಣವನ್ನು ಅವನ ಅಜ್ಜಿಗೆ ನೀಡಿ, ಅರ್ನೆಸ್ಟೊ ಶಿಕ್ಷಣಕ್ಕೆ ಮತ್ತು ಅವರ ಜೀವನಕ್ಕೆ ಬೇಕಾದ ಅನುಕೂಲಗಳನ್ನು ಮಾಡಿಕೊಟ್ಟನು. ಇಬ್ಬರೂ ಪೀಸಾ ನಗರಕ್ಕೆ ಹಿಂದಿರುಗಿದರು.
ನಂತರ ಮೈಕೆಲ್ ಯೇಸುವಿನ ಒಂದೊಂದು ಹಂತದ ಚಿತ್ರಗಳನ್ನು ಬಿಡಿಸುತ್ತಾ ಹೋದನು. ಒಂದು ಹಂತದಲ್ಲಿ, ಅವನಿಗೆ ಮತ್ತೆ ಮೊದಲಿನ ಸಮಸ್ಯೆ ಕಾಣಿಸಿಕೊಂಡಿತು. ಕ್ರಿಸ್ತನ ಆಪ್ತ ಶಿಷ್ಯನಾಗಿದ್ದು, ಆದರೆ ಹಣದಾಸೆಗೆ ಯೇಸುವನ್ನು ಶತ್ರುವಿಗೆ ಹಿಡಿದುಕೊಟ್ಟ ಜುದಾಸನ ಕ್ರೂರ ರೂಪವನ್ನು ಚಿತ್ರಿಸಲು ಆಗಲಿಲ್ಲ. ಪುನಃ ಒಬ್ಬ ರೂಪದರ್ಶಿಯ ಹುಡುಕಾಟ ಪ್ರಾರಂಭಿಸಿದನು. ಹೀಗೆ ಹುಡುಕುತ್ತಾ ವ್ಯಾಟಿಕನ್ ನಗರಕ್ಕೆ ಬಂದಾಗ ಅಲ್ಲಿನ ಪೋಪರು ಬ್ರಹ್ಮಾಂಡ ಸೃಷ್ಟಿ ಮತ್ತು ಇತರ ಚಿತ್ರಗಳನ್ನು ಬಿಡಿಸಿಕೊಡಬೇಕೆಂದು ಕೇಳಿದರು. ವಿಧಿಯಿಲ್ಲದೆ ಮೈಕೆಲ್ ಅದಕ್ಕೆ ಒಪ್ಪಿ, ಚಿತ್ರಗಳನ್ನೆಲ್ಲ ಮುಗಿಸುವಷ್ಟರಲ್ಲಿ ಅವನ ವಯಸ್ಸು 60 ದಾಟಿತ್ತು.
ಪುನಃ ಅವನು ಜುದಾಸನನ್ನು ಹುಡುಕುತ್ತಾ ಕರಾರ ನಗರಕ್ಕೆ ಬಂದನು. ಅಲ್ಲಿ ಅವನು ತನ್ನ ಗೆಳೆಯನ ಮಗಳಾದ ಲೀನಾಳ ಮನೆಗೆ ಬಂದನು. ಅವಳ ಗಂಡ ಟಾಯೆಟ್ ಕುಡುಕ ಮತ್ತು ದುರಾಚಾರಿಯಾಗಿದ್ದನು. ಅಲ್ಲಿ ಸ್ವಲ್ಪ ದಿನವಿದ್ದ ಮೈಕೆಲ್ ಎಂಪೆÇಲಿ ಎಂಬ ಗ್ರಾಮಕ್ಕೆ ತೆರಳಿದನು. ಅಲ್ಲಿ ಒಂದು ಹೆಂಡದ ಅಂಗಡಿಯ ಮುಂದೆ ಇದ್ದ ಆರೇಳು ಜನರಲ್ಲಿ ಒಬ್ಬ ವಿಕಾರ ರೂಪದವನಿದ್ದನು. ಅವನನ್ನು ನೋಡಿದ ಕ್ಷಣ ಇವನು ಜುದಾಸನ ರೂಪಕ್ಕೆ ಸರಿಹೊಂದುವನು ಎಂದೆನಿಸಿ, ಅವನನ್ನು ಹಣದ ಆಸೆ ತೋರಿಸಿಫ್ಲೋರೆನ್ಸ್ ಗೆ ಕರೆದುಕೊಂಡು ಬಂದನು. 
ಅವನನ್ನು ಎಲ್ಲರೂ ಗರಿಬಾಲ್ಡಿಯೆಂದು ಕರೆಯುತ್ತಿದ್ದರು. ಮೊದಲಿಗೆ ಗರಿಬಾಲ್ಡಿ ದೇವಾಲಯದೊಳಗೆ ಬರಲು ನಿರಾಕರಿಸಿದನು. ಅವನನ್ನು ದೇವಾಲಯಕ್ಕೆ ಕರೆತರಲು ಹೆಚ್ಚು ಹಣದ ಆಮಿಷವೊಡ್ಡಿದನು. ನಂತರ ಗರಿಬಾಲ್ಡಿಯನ್ನು ರೂಪದರ್ಶಿಯನ್ನಾಗಿಸಿ ಜುದಾಸನ ಚಿತ್ರ ಬರೆಯಲು ಪ್ರಾರಂಭಿಸಿದನು. 

ಗರಿಬಾಲ್ಡಿಯು ತನ್ನ ಎಡಭಾಗದಲ್ಲಿ ಬಿಡಿಸಿದ್ದ ಬಾಲಯೇಸುವಿನ ಚಿತ್ರಗಳನ್ನು ನೆಟ್ಟ ದೃಷ್ಟಿಯಿಂದ ನೋಡುತ್ತಿದ್ದವನು, ಇದ್ದಕ್ಕಿದ್ದ ಹಾಗೆ ವಿಚಿತ್ರ ದನಿಯಿಂದ ಕೂಗುತ್ತಾ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದನು. ಮೈಕೆಲನು ಅವನನ್ನು ಎಚ್ಚರಗೊಳಿಸಿ ದ್ರಾಕ್ಷಾರಸ ನೀಡಿದನು. ನಂತರ ಗರಿಬಾಲ್ಡಿ ಚಿಕ್ಕಪ್ಪ, ಚಿಕ್ಕಪ್ಪ ಎಂದು ಕೂಗಿದ. ಮೈಕೆಲನು ಚಕಿತನಾಗಿ ಯಾರು ನೀನು? ಎಂದಾಗ ಚಿಕ್ಕಪ್ಪ, ನಾನು ನಿನ್ನ ಅರ್ನೆಸ್ಟೊ ಎಂದನು. ಮುದ್ದಾಗಿದ್ದ ಅವನೆಲ್ಲಿ, ಕ್ರೂರರೂಪ ಹೊಂದಿರುವ ನೀನೆಲ್ಲಿ ಎಂದು ಮೈಕೆಲನು ಪ್ರಶ್ನಿಸಿದಾಗ ಅರ್ನೆಸ್ಟೊ ತನ್ನ ಹಿಂದಿನ ಕಥೆಯನ್ನು ಹೇಳತೊಡಗಿದನು.
ನೀನು ನಮಗೆ ಕೊಟ್ಟಿದ್ದ ಹಣವನ್ನು ನನ್ನ ಅಜ್ಜಿಯು ಸಾಹುಕಾರ ಜಿಯೋವನಿಯ ಬಳಿ ಕೊಟ್ಟಿದ್ದಳು. ಅಜ್ಜಿ ಇರುವಷ್ಟು ದಿನ ನನ್ನನ್ನು ಚೆನ್ನಾಗಿ ನೋಡಿಕೊಂಡಳು. ಅವಳು ತೀರಿಕೊಂಡ ನಂತರ ಜಿಯೋವನಿಯು ಅರ್ನೆಸ್ಟೊವಿನ ಜವಾಬ್ದಾರಿ ನನ್ನದೆಂದು ನನ್ನನ್ನು ಅವನ ಮನೆಗೆ ಕರೆದುಕೊಂಡು ಹೋದನು. ಆದರೆ ಅವನ ಹೆಂಡತಿ ಮತ್ತು ಮಕ್ಕಳಿಗೆ ನನ್ನನ್ನು ಕಂಡರೆ ಆಗುತ್ತಿರಲಿಲ್ಲ. ಹೊಟ್ಟೆ ತುಂಬ ಊಟವಿರಲಿಲ್ಲ ಆದರೆ ಕೈತುಂಬ ಕೆಲಸ ಮಾಡಿಸುತ್ತಿದ್ದರು. ಎಷ್ಟೋ ಬಾರಿ ನನ್ನನ್ನು ಸಾಕಿದ ಲೀನಾ ತಾಯಿ ಮನೆಗೆ ಹೋಗೋಣವೆಂದುಕೊಂಡೆ. ಆದರೆ ಜಿಯೋವನಿ, ಅವರಿಗೆ ತೊಂದರೆ ಕೊಡುತ್ತಾನೆ ಎಂದು ಹೋಗಲಿಲ್ಲ. ಹೀಗಿರುವಾಗ ಒಂದು ದಿನ ಕಳ್ಳತನದ ಆಪಾದನೆ ಹೊರಿಸಿ, ಚೆನ್ನಾಗಿ ಹೊಡೆದು ಹೊರಹಾಕಿದರು. 
ನಾನು ಇನ್ನೊಂದು ತೋಟಕ್ಕೆ ಹೋಗಿ ಕೆಲಸಕ್ಕೆ ಸೇರಿಕೊಂಡೆ. ಬಹಳ ಅಚ್ಚುಕಟ್ಟಾಗಿ ಕೆಲಸ ಮಾಡಿ ಯಜಮಾನನಿಗೆ ಮೆಚ್ಚುಗೆಯಾಗಿದ್ದೆ. ವರ್ಷಗಳು ಕಳೆದಂತೆ ನಷ್ಟವಾಗಿ ಯಜಮಾನ ತೋಟ ಮಾರಿದ. ಮತ್ತೊಂದು ಊರಿಗೆ ಹೋದೆ. ಅಲ್ಲಿ 6 ವರ್ಷಗಳ ಕಾಲ ತೋಟದಲ್ಲಿ ಕೆಲಸ ಮಾಡಿಕೊಂಡು ಸುಖವಾಗಿದ್ದೆ. ಅಲ್ಲಿಯೂ ಮಾಲೀಕನ ತಮ್ಮನ ಮೋಸಕ್ಕೆ ಬಲಿಯಾಗಿ ಕೆಲಸ ಕಳೆದುಕೊಂಡು ಕರಾರ ನಗರಕ್ಕೆ ಹೋದೆ. ಆಗ ನನಗೆ 21 ವರ್ಷ. ಅಲ್ಲಿ ನಾನು ಟಾಯೆಟ್ ನಿಗೆ ಸೇರಿದ ಅಮೃತಶಿಲೆಯ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದೆ. ನಾನಿದ್ದ ಮನೆಯ ಮಾಲೀಕರು ನನ್ನ ನಡವಳಿಕೆ, ರೂಪವನ್ನು ಮೆಚ್ಚಿ ಅವರ ಮಗಳನ್ನು ಮದುವೆ ಮಾಡಬೇಕೆಂದುಕೊಂಡಿದ್ದರು. ಯುವೋನಾಳನ್ನು ನಾನು ಮೆಚ್ಚಿಕೊಂಡಿದ್ದೆ. ಇಬ್ಬರೂ ಪ್ರೀತಿಸಲಾರಂಭಿಸಿದೆವು.
ಅಂಗಡಿಗೆ ಬಂದ ಗಿರಾಕಿಯೊಬ್ಬ ನನ್ನನ್ನು ನೋಡಿ ನನ್ನ ತೈಲಚಿತ್ರ ಬಿಡಿಸಿ, ಅದಕ್ಕೆ ನಿದ್ರಿಸುತ್ತಿರುವ ಮನ್ಮಥ ಎಂದು ಹೆಸರಿಸಿದ. ನನ್ನ ರೂಪವೇ ನನಗೆ ಶತ್ರುವಾಯಿತು. ಒಂದು ದಿನ ಅಂಗಡಿಗೆ ಬಂದ ಟಾಯೆಟ್ ನ ಪತ್ನಿ ಲೀನಾತಾಯಿ ನನ್ನನ್ನು ಊಟಕ್ಕೆ ಕರೆದಳು. ಸಂಶಯಗೊಂಡ ಟಾಯೆಟ್ ನಾನು ಊಟ ಮುಗಿಸಿ ಅಂಗಡಿಗೆ ಬಂದ ಮೇಲೆ ಕೋಪಗೊಂಡು ಅಮೃತಶಿಲೆಯಿಂದ ನನ್ನ ಎಡಪಾರ್ಶ್ವಕ್ಕೆ ಹೊಡೆದನು. ನಾನು ಪ್ರಜ್ಞ್ಕೆ ತಪ್ಪಿದೆ. ತಿಂಗಳುಗಟ್ಟಲೆ ಹಾಸಿಗೆ ಹಿಡಿದೆ. ನನ್ನ ಮುಖ ಮಾಂಸದ ಮುದ್ದೆಯಾಗಿ ವಿಕೃತರೂಪವನ್ನು ಪಡೆದಿತ್ತು. ಹುಡುಕಿ ಬಂದ ಯುವೋನಾಳಿಗೆ ಮುಖ ತೋರಿಸದೆ ರಾತ್ರೋರಾತ್ರಿ ಊರನ್ನು ಬಿಟ್ಟು ಬೆಟ್ಟದ ಮೇಲೆ ಬಂದೆ. ಟಾಯೆಟ್ ನನ್ನು ಹೇಗೆ ಸಾಯಿಸಬೇಕೆಂದು ಯೋಚಿಸತೊಡಗಿದೆ. 
ಒಂದು ದಿನ ಕರಾರ ನಗರಕ್ಕೆ ಹೋದಾಗ, ಎಲ್ಲರೂ ಭಿಕ್ಷುಕನೆಂದುಕೊಂಡು ಕಾಸನ್ನು ಹಾಕಿದರು. ಸ್ವಲ್ಪ ದಿನಗಳಾದ ನಂತರ, ಒಂದು ದಿನ ಟಾಯೆಟ್ ನದಿಯ ಬಳಿ ಬರುತ್ತಿದ್ದಾಗ ಕತ್ತಿಯನ್ನು ಅವನ ಕುತ್ತಿಗೆಗೆ ಬೀಸಿದೆ. ಅವನು ನನ್ನನ್ನು ಒದ್ದ. ನಾನು ನದಿಯಲ್ಲಿ ಬಿದ್ದೆ. ಯಾರೋ ರಕ್ಷಿಸಿದರು. ಜ್ಞಾನ ಬಂದಾಗ ನಾನು ಯಾರು ಎಂಬುದು ಮರೆತುಹೋಗಿತ್ತು. ಕ್ರಮೇಣ ಅಲ್ಲಿದ್ದವರ ಜೊತೆ ಸೇರಿಕೊಂಡು ಭಿಕ್ಷೆ ಬೇಡುವುದು, ಕುಡಿಯುವುದು, ಕನ್ನ ಹಾಕುವುದು ಎಲ್ಲವನ್ನೂ ಕಲಿತೆ. ಎಲ್ಲರೂ ನನ್ನನ್ನು ಗರಿಬಾಲ್ಡಿ ಎಂದು ಕೂಗಲಾರಂಭಿಸಿದರು.
"ಚಿಕ್ಕಪ್ಪ ನನ್ನ ಈ ಸ್ಥಿತಿಗೆ ನೀನೇ ಕಾರಣ. ನಾವು ಬಡವರಾಗಿದ್ದೆವು, ಆದರೆ ಸಂತೋಷವಾಗಿದ್ದೆವು. ನೀನು ಬಂದ ಹಣದ ಆಮಿಷ ತೋರಿಸಿ ಬಾಲರೂಪದರ್ಶಿಯನ್ನಾಗಿಸಿದೆ. ಅಲ್ಲಿಂದಾಚೆ ನಡೆದದ್ದೆಲ್ಲ ಅನಾಹುತಗಳೇ. ಅಜ್ಜಿ ಹಣವನ್ನು ಸಾಹುಕಾರನಿಗೆ ಕೊಡದಿದ್ದರೆ, ಆ ಸಾಹುಕಾರ ಆ ಹಣದ ಆಸೆಗೆ ನನ್ನನ್ನು ವಂಚಿಸದಿದ್ದರೆ, ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಈಗ ಗರಿಬಾಲ್ಡಿಯಾಗಿ ಸುಖವಾಗಿದ್ದೆ. ಮತ್ತೆ ರೂಪದರ್ಶಿ ಬೇಕೆಂದು ನೀನು  ನನ್ನನ್ನು ಕರೆದುಕೊಂಡು ಬಂದೆ. ಈಗ ನನ್ನ ನೆನಪಿನಶಕ್ತಿ ಮರಳುವಂತೆ ಮಾಡಿದ್ದೀಯ. ನಾನು ಹೇಗೆ ಬದುಕಲಿ. ಅಜ್ಜಿ ಹೇಳುತ್ತಿದ್ದಳು ನೀನು ದೇವದೂತನಾಗಿ ಬಂದೆ ಎಂದು ಆದರೆ ನೀನು ನಮ್ಮ ಪಾಲಿನ ದುರ್ದೈವವಾಗಿ ಬಂದೆ." ದುಃಖತಪ್ತನಾಗಿ ಆವೇಶದಿಂದ ಮಾತನಾಡುತ್ತಿದ್ದ ಅರ್ನೆಸ್ಟೊ ಬಗ್ಗೆ ಮೈಕೆಲನಿಗೆ ಬಹಳ ವೇದನೆಯಾಯಿತು. ಅವನನ್ನು ಹೇಗೆ ಸಮಾಧಾನಿಸಿ, ಇವನ ಜೀವನವನ್ನು ಹೇಗೆ ಸರಿಪಡಿಸಲಿ ಎಂದು ಯೋಚಿಸಿದನು. 
ಅಲ್ಲದೆ ಲೀನಾಳ ಗಂಡ ಟಾಯೆಟ್ ನಿಗೆ ಆಗಿರುವ ಊನಕ್ಕೆ ಮೈಕೆಲ್ ಗೆ ಕಾರಣ ಗೊತ್ತಾಯಿತು. ಲೀನಾಳನ್ನು ಕಾಪಾಡಬೇಕು. ಲಿಸ್ಸಾ ತಾಯಿ ಮತ್ತು ನನ್ನೆಟ್ಟಿಯವರ ದರ್ಶನ ಮಾಡುವುದರಿಂದ ಬೆತ್ಲೆಹೇಮಿಗೆ ಹೋದಷ್ಟೇ ಪುಣ್ಯ ಎಂಬೆಲ್ಲ ಯೋಚನೆಗಳು ಮೈಕೆಲನ ಮನದಲ್ಲಿ ಮೂಡಿತು. ಅಷ್ಟರಲ್ಲಿ ಸಂಜೆಯಾಗಿ ಪ್ರಾರ್ಥನಾ ಸಮಯವಾದ್ದರಿಂದ ದೇವಾಲಯದ ಎಲ್ಲ ಘಂಟೆಗಳ ನಾದವು ಪ್ರತಿಧ್ವನಿಸತೊಡಗಿತು. ಈ ನಾದವು ಅರ್ನೆಸ್ಟೊವಿನ ಮೈಯಲ್ಲಿ ನಡುಕವನ್ನುಂಟುಮಾಡಿತು. ಅರ್ನೆಸ್ಟೊಗೆ ಕಥೆ ಮುಂದುವರೆಸಲಾಗಲಿಲ್ಲ. ಅವನ ಮುಖದಲ್ಲಿ ಕೋಪ, ಅಸಹನೆ ಕ್ಷಣಕ್ಷಣಕ್ಕೂ ಏರುತ್ತಿದ್ದುದ್ದನ್ನು ಮೈಕೆಲ್ ಗಮನಿಸಿದ.
ಅರ್ನೆಸ್ಟೊವಿನ ತಲೆಯಲ್ಲಿ ರಕ್ತ ಕುದಿಯತೊಡಗಿತು. ಕಣ್ಣು ಕೆಂಪಾಗಿ, ಚಕ್ರದಂತೆ ತಿರುಗಲಾರಂಭಿಸಿತು. ಅರ್ನೆಸ್ಟೊ ಪುನಃ ಗರಿಬಾಲ್ಡಿಯಾದನು. "ಅಯ್ಯಯ್ಯೊ, ಅಯ್ಯಯ್ಯೊ" ಎನ್ನುತ್ತಾ ಉಗುರುಗಳಿಂದ ಮುಖ ಪರಚಿಕೊಂಡು ಕೂದಲನ್ನು ಹಿಡಿಹಿಡಿಯಾಗಿ ಕಿತ್ತುಕೊಂಡ. ಕಣ್ಣುಗುಡ್ಡೆ ಕಳಚಿಬೀಳುವಂತೆ ಕಾಣಿಸುತ್ತಿತ್ತು. ಹೀಗೆ ಗರಿಬಾಲ್ಡಿಯು ವಿಕಾರವಾಗಿ ಆದನು ಮತ್ತು ಭಯಂಕರವಾಗಿ ಗರ್ಜಿಸಿದನು. ಮೈಕೆಲ್ ಗೆ ಇವನ ಅಟ್ಟಹಾಸ ಮತ್ತು ಭಯಂಕರ ರೂಪವನ್ನು ನೋಡಿ ನಡುಕ ಉಂಟಾಯಿತು. ಗರಿಬಾಲ್ಡಿಯು ತನ್ನ ನಾಲಿಗೆಯನ್ನು ಕಚ್ಚಿಕೊಂಡಿದ್ದರಿಂದ, ನಾಲಿಗೆ ಜೋತುಬಿದ್ದು ರಕ್ತ ಸೋರತೊಡಗಿತು. ಗರಿಬಾಲ್ಡಿಯು ಅಲ್ಲೇ ಇದ್ದ ದಪ್ಪ ಮರದ ಹಲಗೆಯಿಂದ ಮೈಕೆಲ್ ನನ್ನು ಕೊಲ್ಲಲ್ಲು ಬಂದ. ತಕ್ಷಣ ಮೈಕೆಲ್ ಪಕ್ಕಕ್ಕೆ ಸರಿದು, ನೀನು ಆರ್ನೆಸ್ಟೂ ಅಲ್ಲ, ಗರಿಬಾಲ್ಡಿಯೂ ಅಲ್ಲ, ನೀನು ಸೈತಾನ, ದೇವಾಲಯದಲ್ಲಿ ನಿನಗೆ ಪ್ರವೇಶವಿಲ್ಲ, ತೊಲಗು ಎಂದ. ಆಗ ಸೈತಾನರೂಪಿಯು ಅಟ್ಟಣೆಯನ್ನು ಪಾದದಿಂದ  ಅಪ್ಪಳಿಸಿದ, ಅದು ಮುರಿದುಬಿತ್ತು. ಜೊತೆಗೆ ಗರಿಬಾಲ್ಡಿಯು ನೆಲಕ್ಕೆ ಬಿದ್ದ. ತಲೆ ಒಡೆದು, ಮೆದುಳು ಹೊರಬಂದಿತು, ಮೈಕೆಲನು ಮೂಲೆಯ ಗೋಡೆಯನು ತಬ್ಬಿ ಹಿಡಿದಿದ್ದರಿಂದ ಉಳಿದುಕೊಂಡ. 
ಶಬ್ದ ಕೇಳಿ ದೇವಾಲಯದ ಪಾದ್ರಿಗಳು, ಪ್ರಾರ್ಥನೆಗೆ ಸೇರಿದ್ದ ಜನರೂ ಬಂದರು. ಗರಿಬಾಲ್ಡಿಯ ಶವವನ್ನು ನೋಡಿದರು. ಗರಿಬಾಲ್ಡಿ ಈಗ ಮತ್ತೆ ಅರ್ನೆಸ್ಟೊ ಆಗಿದ್ದನು. ಮುಖದಲ್ಲಿ ಕ್ರೌರ್ಯವಿರಲಿಲ್ಲ, ಶಾಂತಿಯಿತ್ತು. ಮೈಕೆಲ್ ಅಳತೊಡಗಿದನು. ತಂದೆಯೇ, ಬಹುನೊಂದ ಆತ್ಮವಿದು. ನಿನ್ನ ಬಳಿಗೆ ಬರುತ್ತಿದೆ. ಇದನ್ನು ಕರೆದುಕೊ, ನೀನೇ ಸಮಾಧಾನ ಪಡಿಸು ಎಂದು ಅತೀ ದೀನವಾಣಿಯಿಂದ ಪ್ರಾರ್ಥಿಸಿದ. ಮೈಕೆಲನು ಬಾಲಕ್ರಿಸ್ತನ ಚಿತ್ರದ ಕಡೆಗೆ ತೋರಿಸಿ, ಅವನೇ ಇವನು. ಇದರ ಕಥೆಯನ್ನು ಇನ್ನೊಂದು ದಿನ ತಿಳಿಸುತ್ತೇನೆ. ಈಗ ಕೇಳಬೇಡಿ ಎಂದ. ಅರ್ನೆಸ್ಟೊವನ್ನು ಸಮಾಧಿ ಮಾಡಲಾಯಿತು. ವೃದ್ಧ ಮೈಕೆಲ್ ದುಃಖದಲ್ಲಿಯೇ ದೇವಾಲಯದ ಉಳಿದ ಚಿತ್ರಗಳನ್ನು ಬರೆದು ಪೂರೈಸಿದ. ನಂತರ ತನ್ನ ಮಗ ಅರ್ನೆಸ್ಟೊನ ನೆನಪಿಗಾಗಿ ಅವನ ಸಮಾಧಿಯ ಮೇಲೆ ಸ್ವಚ್ಛವಾದ ಅಮೃತಶಿಲೆಯಿಂದ ಅಮೋಘವಾದ ಸ್ಮಾರಕವನ್ನು ನಿರ್ಮಿಸಿದ. ಆಗ ಅವನ ಮನಸ್ಸಿಗೆ ಶಾಂತಿಸಮಾಧಾನ ದೊರೆತವು.

ರೂಪದರ್ಶಿಯಾದ ಅರ್ನೆಸ್ಟೊ ಪಾತ್ರವನ್ನು ನಾವು ಗಮನಿಸಿದಾಗ ಪರಿಸ್ಥಿತಿ ಮತ್ತು ಸಂದರ್ಭಗಳು ಮನುಷ್ಯನನ್ನು ಉನ್ನತ ಸ್ಥಿತಿಗೆ ಕರೆದೊಯ್ಯಬಲ್ಲದು, ಹಾಗೆಯೇ ಅಧೋಗತಿಗೂ ನೂಕಬಲ್ಲದು ಎಂಬುದು ತಿಳಿಯುತ್ತದೆ. ಮನುಷ್ಯ ಪರಿಸ್ಥಿತಿಗೆ ಗೊಂಬೆಯಾಗಿ ಸಿಲುಕಿದರೆ, ವಿವೇಕವನ್ನು ಬಳಸದಿದ್ದರೆ, ಸೇಡಿನ ಕಿಚ್ಚನ್ನು ಮನದಲ್ಲಿಟ್ಟುಕೊಂಡರೆ ಅವನ ಬಾಳು ಏನಾಗಬಹುದೆಂಬುದನ್ನು ಅಯ್ಯರ್ ರವರು ಬಹಳ ಹೃದಯಸ್ಪರ್ಶಿಯಾಗಿ ಚಿತ್ರಿಸಿದ್ದಾರೆ. ಅರ್ನೆಸ್ಟೊ ಎಷ್ಟು ಸುಂದರವಾಗಿದ್ದನೋ, ಅವನ ಗುಣವೂ ಅಷ್ಟೇ ಒಳ್ಳೆಯದಾಗಿತ್ತು. ಸಹೃದಯತೆಯನ್ನು ಹೊಂದಿದ್ದ ಅರ್ನೆಸ್ಟೊ ಸಂದರ್ಭಕ್ಕೆ ಸಿಲುಕಿ ಗರಿಬಾಲ್ಡಿಯಾದನು. ಒಂದು ಕಡೆ ಅವನು ಹೇಳುವ ಮಾತು ಎಂತಹವರನ್ನೂ ದುಃಖಕ್ಕೀಡು ಮಾಡುತ್ತದೆ. "ನನ್ನಲ್ಲಿರುವ ಆತ್ಮವು ಸತ್ತು ನಾಶವಾಗಿದೆ, ಈಗ ದೇಹ ಮಾತ್ರ ಇರುವುದು. ಅದರಲ್ಲಿ ಸೈತಾನನಿದ್ದಾನೆ. ನನ್ನ ಮನಸ್ಸು ಮತ್ತು ಶರೀರ ಅಸಹ್ಯಗೊಂಡಿದೆ. ನಾನು ಈ ರೀತಿ ಬದುಕಲಾರೆ" ಎಂದು ಗೋಳಾಡುವಾಗ ಅರ್ನೆಸ್ಟೊವಿನ ವ್ಯಕ್ತಿತ್ವವು ನಮ್ಮ ಕಣ್ಣು ಮುಂದೆ ಬಂದು ನಿಲ್ಲುತ್ತದೆ. ಅಯ್ಯರ್ ರವರ ಇಡೀ ಕಾದಂಬರಿಯ ರಚನೆ ತುಂಬಾ ಸೊಗಸಾಗಿದ್ದು ಓದಿಸಿಕೊಂಡು ಹೋಗುತ್ತದೆ, ನಮ್ಮನ್ನು ನೋವಿಗೀಡುಮಾಡುತ್ತದೆ, ಬೇಸರ ತರಿಸುತ್ತದೆ, ಕಣ್ಣು ತುಂಬಿ ಬರುತ್ತದೆ, ಆದರೆ ನಮ್ಮನ್ನು ಚಿಂತನೆಗೆ ಒಳಪಡಿಸುತ್ತದೆ.
-        ಗೀತಾ  ವಿ            


ಕಾಮೆಂಟ್‌ಗಳಿಲ್ಲ: