Pages

ಸಿನಿಮಾ ವಿಮರ್ಶೆ: "ಟೂ ಬ್ರದರ್ಸ್"


ಇದುವರೆಗೂ ನಮ್ಮ ಸಿನಿಮಾ ವಿಮರ್ಶೆಯಲ್ಲಿ ನೀವು ಕೇವಲ ಮನುಷ್ಯರಿಗೆ ಸಂಬಂಧಿಸಿದ ಸಿನಿಮಾಗಳ ಬಗ್ಗೆ ಓದಿದ್ದೀರಿ. ಆದರೆ ಈ ಬಾರಿಯ ಸಂಚಿಕೆಯ ವಿಶೇಷತೆ ಎಂದರೆ ಈ ಬಾರಿ ನಾವು ಪ್ರಾಣಿಗಳಿಗೆ ಸಂಬಂಧಿಸಿದ ಅದರಲ್ಲೂ ಒಂದು ಹುಲಿ ಕುಟುಂಬದ ಭಾವನಾತ್ಮಕ ಸ್ವರೂಪದ ಕಥೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ.]


ಹಚ್ಚಹಸುರಿನ ಒಂದು ದಟ್ಟ ಅರಣ್ಯ, ಅದರ ನಡುವೆ ಸಮುದ್ರದ ನಡುವಿನ ದ್ವೀಪದಂತೆ ಒಂದು ಪಾಳು ಬಿದ್ದ ಪ್ರಾಚೀನ ಕಟ್ಟಡ. (ಇದನ್ನು ಅಪರ್ಣಿಕ ರೀಜನ್ ಎಂದು ಕರೆಯುತ್ತಾರೆ) ಇದೇ ಕಟ್ಟಡವೇ ಈ ಕಥೆಯ ಹುಲಿ ಕುಟುಂಬದ ವಾಸಸ್ಥಾನ.

ಆರಂಭದಲ್ಲಿ ನಾವು ಒಂದು ಗಂಡು ಮತ್ತು ಒಂದು ಹೆಣ್ಣು ಹುಲಿ ಪ್ರೇಮಾನುರಾಗದಿಂದ ಜೀವನ ನಡೆಸುತ್ತಿರುವುದನ್ನು ಕಂಡರೆ ಮತ್ತೊಂದೆಡೆ ಇಂತಹ ಪ್ರಾಣಿಗಳ ವಿವಿಧ ಭಾಗಗಳನ್ನು (ದಂತ, ಚರ್ಮ) ಮಾರಿ ಬದುಕುವ ಮಾನವನ ಅನೀತಿ ಜೀವನವನ್ನು ಕಾಣುತ್ತೇವೆ. ಈ ಹುಲಿ ದಂಪತಿಗಳ ಪ್ರೇಮದ ಪ್ರತಿರೂಪಗಳಾಗಿ ಎರಡು ಮರಿ ಹುಲಿಗಳು ಜನಿಸುತ್ತವೆ. ಅವು ಮುದ್ದುಮುದ್ದಾಗಿ ಪುಟ್ಟಪುಟ್ಟ ಹೆಜ್ಜೆ ಇಡುತ್ತಾ ತಮ್ಮ ತಾಯಿ, ತಂದೆಯೊಂದಿಗೆ ಕಾಡಿನಲ್ಲಿ ಆನಂದವಾಗಿರುತ್ತದೆ. ಇವು ಒಮ್ಮೆ ಆಡುತ್ತಾ ಮುಂಗುಸಿಯ ಬಿಲದ ಬಳಿ ಬರುತ್ತವೆ. ಮುಂದೆ ಬಂದ ಸಣ್ಣ ಮರಿಯನ್ನು ಕಂಡು ಮುಂಗುಸಿ ಅದರ ಮೇಲೆರಗುತ್ತದೆ. ಹೆದರಿದ ಮರಿ ಮರವೇರಿಬಿಡುತ್ತದೆ. ನಂತರ ಹಿಂದೆ ಬಂದ ಮತ್ತೊಂದು ಮರಿ ತನ್ನ ತಮ್ಮನ ಸ್ಥಿತಿಯನ್ನು ಕಂಡು ಮುಂಗುಸಿಯನ್ನು ಓಡಿಸಿ, ತನ್ನ ತಮ್ಮನನ್ನು ಕೆಳಗಿಳಿಸಿಕೊಳ್ಳುತ್ತದೆ. ಆಗ ಅವು ಒಂದನ್ನೊಂದು ಮುದ್ದಾಡಿಕೊಳ್ಳುವ ದೃಶ್ಯ ನಯನಮನೋಹರವಾಗಿದೆ. ಈ ಸನ್ನಿವೇಶ  ಅಣ್ಣ,ತಮ್ಮ , ಅಕ್ಕ ತಂಗಿ ಎಂಬ ಪ್ರೀತಿ, ವಾತ್ಸಲ್ಯ ಕೇವಲ ಮನುಷ್ಯರಲ್ಲಿ ಮಾತ್ರವಿರದೆ ಪ್ರಾಣಿಗಳಲ್ಲೂ ಇರುತ್ತದೆ ಎಂಬುದನ್ನು ನಮಗೆ ತಿಳಿಸುತ್ತದೆ.
ಇಂತಹ ಆನಂದಕರ ಕುಟುಂಬದಲ್ಲಿ ಬೇಟೆಗಾರ ವ್ಯಾಪರಸ್ಥರು ಬಿರುಗಾಳಿ ಎಬ್ಬಿಸುತ್ತಾರೆ. ಆ ಹುಲಿ ಕುಟುಂಬವಿದ್ದ ಹಳೇ ಕಟ್ಟಡದಲ್ಲಿನ ಬೆಲೆ ಬಾಳುವ ಪ್ರಾಚೀನ ಸ್ಮಾರಕಗಳಿಗಾಗಿ ಇವರು ಕಾಡಿಗೆ ಬರುತ್ತಾರೆ. ಇದನ್ನು ದೂರದಿಂದಲೇ ತಂದೆ ಹುಲಿ ನೋಡುತ್ತದೆ.
ಮಾರನೇ ದಿನ ಈ ವ್ಯಾಪಾರಸ್ಥರು ಸ್ಮಾರಕಗಳಿಗಾಗಿ ಕಟ್ಟಡ ಉರುಳಿಸಲು ಸಿಡಿಮದ್ದುಗಳನ್ನು ಸಿಡಿಸುತ್ತಾರೆ. ಇದರಿಂದುಂಟಾದ ಭಾರಿ ಶಬ್ದದಿಂದ ಮರಿಗಳು ಬೆಚ್ಚಿಬೀಳುತ್ತವೆ. ತಂದೆ ಹುಲಿ ಏನಾಗುತ್ತಿದೆ ಎಂದು ನೋಡಲು ಹೊರಬರುತ್ತದೆ. ಆದರೆ ಇದನ್ನು ಆ ವ್ಯಾಪಾರಿಗಳು ನೋಡಿಬಿಡುತ್ತಾರೆ. ತಕ್ಷಣ ಅದನ್ನು ಕೊಲ್ಲಲು ಓಡುತ್ತಾರೆ. ಇದನ್ನು ಕಂಡು ತಾಯಿ ಹುಲಿ ತನ್ನ ಮರಿಗಳನ್ನು ರಕ್ಷಿಸಲು ಒಂದು ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಓಡುತ್ತದೆ. ಇತ್ತ ಈ ವ್ಯಾಪಾರಸ್ಥ ಬೇಟೆಗಾರರ ನಾಯಕ ಬೇಟೆಯಲ್ಲಿ ನಿಪುಣನಾಗಿದ್ದು ಇವನು ಕಟ್ಟಡದಲ್ಲಿದ್ದ ತಂದೆ ಹುಲಿಯನ್ನು ಕೊಂದು ಮತ್ತೊಂದು ಮರಿಯನ್ನು ತನ್ನೊಂದಿಗೆ ತೆಗೆದುಕೊಂಡು ಬರುತ್ತಾನೆ.
ಮುದ್ದಾದ ಮರಿಯನ್ನು ಕೊಲ್ಲದೆ ಮುದ್ದಿಸುತ್ತಾನೆ. ಹಾಲು ಕುಡಿಯುವ ಮರಿಯಾದ್ದರಿಂದ ಅದು ಅವನ ಬೆರಳನ್ನೆ ತನ್ನ ತಾಯಿಯ ಮೊಲೆ ಎಂದು ಚೀಪುತ್ತದೆ. ಆಗ ಆ ವ್ಯಾಪಾರಿ ತನ್ನ ಜೇಬಿನಿಂದ ಮಿಠಾಯಿ ಡಬ್ಬಿ ತೆಗೆದು ಅದರ ಬಾಯಿಗಿಡುತ್ತಾನೆ.
ಮಾರನೇ ದಿನ ಆ ವ್ಯಾಪಾರಿ ಅದನ್ನು ಒಂದು ಬುಡಕಟ್ಟು ಜನರ ಪ್ರದೇಶಕ್ಕೆ ತೆಗೆದುಕೊಂಡು ಬಂದು ಅಲ್ಲಿ ಕಟ್ಟಿಹಾಕುತ್ತಾನೆ. ಆಗ ಅಷ್ಟರಲ್ಲಿ ಅಲ್ಲಿಗೆ ಆ ಪ್ರದೇಶದ ಪೊಲಿಸರು ಪ್ರಾಚೀನ ಶಿಲೆಯನ್ನು ಕದ್ದ ಆರೋಪದ ಮೇಲೆ ಅವನನ್ನು ಬಂಧಿಸುತ್ತಾರೆ. ಮರಿ ಪುನಃ ಅನಾಥವಾಗುತ್ತದೆ. ಅಂದು ರಾತ್ರಿ ಅದು ತನ್ನ ತಾಯಿಗಾಗಿ ಗೋಳಿಡುತ್ತಿರುತ್ತದೆ. ಅದರ ಕೂಗನ್ನು ಆಲಿಸಿ ಅದನ್ನು ಕರೆದೊಯ್ಯಲು ತಾಯಿ ಹುಲಿ ಬರುತ್ತದೆ  ಹುಲಿಯ ಗರ್ಜನೆ ಕೇಳಿದ ಆ ಬುಡಕಟ್ಟು ಜನ ತಕ್ಷಣ ಪಂಜು ಹಿಡಿದು ಆದನ್ನು ಕೊಲ್ಲಲು ಸಿದ್ಧರಾಗುತ್ತಾರೆ. ಹೆದರಿದ ತಾಯಿಹುಲಿ ತನ್ನೊಂದಿಗಿದ್ದ ಮರಿಯನ್ನು ಕಚ್ಚಿಕೊಂಡು ಹಿಂದೆ ಹೊರಟುಬಿಡುತ್ತದೆ.
ಮರುದಿನವೇ ಆ ಬುಡಕಟ್ಟು ಜನಾಂಗದವರು ತಮ್ಮ ಬಳಿಯಿದ್ದ ಮರಿಯನ್ನು ಒಂದು ಸರ್ಕಸ್ ಕಂಪನಿಗೆ ಮಾರಿಬಿಡುತ್ತಾರೆ. ಅದನ್ನು ಗಾಡಿಯಲ್ಲಿ ಸಾಗಿಸುತ್ತಿರುವಾಗ ಪುನಃ ತಾಯಿ ಹುಲಿ ತನ್ನ ಮರಿಯನ್ನು ರಕ್ಷಿಸಿಕೊಳ್ಳಲು ಓಡಿ ಬರುತ್ತದೆ. ಇದನ್ನು ಕಂಡ ಮರಿಯ ಕೂಗು ಮುಗಿಲು ಮುಟ್ಟುತ್ತದೆ. ಆದರೆ ಗಾಡಿಯ ಚಾಲಕ ವೇಗವಾಗಿ ಗಾಡಿ ಚಲಾಯಿಸಿದ್ದರಿಂದ ತಾಯಿಯ ಈ  ಪ್ರಯತ್ನವೂ ವಿಫಲವಾಗುತ್ತದೆ. ಆಗ ತನ್ನ ಮರಿಯನ್ನು ರಕ್ಷಿಸಿಕೊಳ್ಳಲಾಗದ ಆ ತಾಯಿಯ ಅಸಹಾಯಕ ದುಃಖತಪ್ತ ಮುಖ ಕರಳನ್ನು ಹಿಂಡುವಂತೆ ಮಾಡುತ್ತದೆ. ಸರ್ಕಸ್ ಕಂಪನಿಗೆ ಬಂದ ಆ ಮರಿಗೆ ರಿಂಗ್ ಮಾಸ್ಟರ್ ‘ಕುಮಾಲ್’ ಎಂದು ಹೆಸರಿಡುತ್ತಾನೆ. ಅದನ್ನು ಚೆನ್ನಾಗಿ ಹೊಡೆದು ಒಂದು ಬೋನಿನೊಳಗೆ ಬಿಸಾಡುತ್ತಾನೆ. ಆಗ ಹೆದರಿದ ಕುಮಾಲ್‍ನ ಮುಖವನ್ನು ಕಂಡರೆ ಕಣ್ಣು ತುಂಬಿ ಬರುತ್ತದೆ . 
ಇತ್ತ ಬಂಧನದಲ್ಲಿದ್ದ ಆ ವ್ಯಾಪಾರಿ ಬೇಟೆಗಾರನನ್ನು ರಾಜನ ಕಡೆಯ ಒಬ್ಬ ಅಧಿಕಾರಿ ಬಂದು ಬಿಡಿಸುತ್ತಾನೆ. ಕಾರಣ ರಾಜನಿಗೆ ಬೇಟೆಯಾಡುವ ಬಯಕೆಯಾಗಿರುತ್ತದೆ. ಅದಕ್ಕೆ ಬೇಟೆಯಲ್ಲಿ ನಿಪುಣನಾದ ಇವನ ಸಹಾಯ ಪಡೆಯಲು.
ಈ ಕಡೆ ಕಾಡಿನಲ್ಲೇ ಉಳಿದಿದ್ದ ತಾಯಿ ಮತ್ತು ಸಣ್ಣ ಮರಿ ಕಾಡಿನಲ್ಲಿ ಬರುತ್ತಿರುವಾಗ ಬುಡಕಟ್ಟು ಜನರು ಅವನ್ನು ರಾಜನ ಬೇಟೆಗಾಗಿ ಖೆಡ್ಡಾದಲ್ಲಿ ಬೀಳಿಸುತ್ತಾರೆ. ಮಾರನೇ ದಿನ ರಾಜಪರಿವಾರ  ಹುಲಿಗಳ ಬೇಟೆಗಾಗಿ ಕಾಡಿಗೆ ಆನೆಗಳ ಮೇಲೇರಿ ಬರುತ್ತಾರೆ. ಆಗ ಖೆಡ್ದಾದಲ್ಲಿದ್ದ ತಾಯಿ, ಮರಿಯನ್ನು ರಾಜನ ಬೇಟೆಗಾಗಿ ಹೊರಬಿಡುತ್ತಾರೆ. ತಕ್ಷಣ ತಾಯಿಹುಲಿ ಮರಿಯನ್ನು ಬೇಟೆಯಿಂದ ರಕ್ಷಿಸಲು ಅದನ್ನು ಒಂದು ಬಂಡೆಯ ಕೆಳಗೆ ಅವಿತಿಟ್ಟು ತಾನೊಂದೆ ಓಡತೊಡಗುತ್ತದೆ. ರಾಜ ಗುರಿಯಿಟ್ಟು ತಾಯಿಹುಲಿಯನ್ನು ಗುಂಡಿನಿಂದ ಹೊಡೆದು ಬೀಳಿಸುತ್ತಾನೆ. ಇದನ್ನು ಕಂಡ ರಾಜಪರಿವಾರ ಹರ್ಷದಿಂದ ಹಿಗ್ಗುತ್ತದೆ. ಆದರೆ ವಾಸ್ತವವಾಗಿ ತಾಯಿ ಹುಲಿಯ ಕಿವಿಗೆ ಗುಂಡೇಟು ತಗುಲಿರುತ್ತದೆಯಷ್ಟೇ. ರಾಜ ಹುಲಿ ಕೊಂದ ಗರ್ವದಿಂದ ಅದರ ಬಳಿ ಫೋಟೊ ತೆಗೆಸಿಕೊಳ್ಳಲು ಅದರ ಮೇಲೆ ಕಾಲಿಡುತ್ತಾನೆ.  ತಕ್ಷಣ ಹುಲಿ ಚಂಗನೆ ಹಾರಿ ರಾಜನನ್ನು ನೆಲಕ್ಕುರುಲಿಸಿ ಕಾಡಿನೊಳಕ್ಕೆ ಓಡಿ ಹೋಗುತ್ತದೆ. ಒಂದು ಹೆಜ್ಜೆಯೂ ನೆಲದ ಮೇಲಿಡದ ರಾಜ ನೆಲಕ್ಕುರುಳುವ ಸನ್ನಿವೇಶ ನೋಡಲು ತುಂಬಾ ಹಾಸ್ಯಮಯವಾಗಿದೆ.
ಅಷ್ಟರಲ್ಲಿ ರಾಜಪರಿವಾರದೊಂದಿಗೆ ಬಂದಿದ್ದ ಅಧಿಕಾರಿಯ ನಾಯಿ ಇದ್ದಕ್ಕಿದ್ದಂತೆ ಒಂದು ಬಂಡೆಯ ಕೆಳಗೆ ನೋಡಿ, ಬೊಗಳಿ ಅಲ್ಲಿ ಮರಿ ಇರುವುದನ್ನು ತೋರಿಸಿಬಿಡುತ್ತದೆ. ಆಗ ಆ ಅಧಿಕಾರಿಯ 8 ವರ್ಷದ ಮಗ ಅದನ್ನು ಕಂಡು “ಹೆದರಬೇಡ, ನಾನು ರೌಲ್, ನಾನು ನಿನ್ನನ್ನು ಏನೂ ಮಾಡುವುದಿಲ್ಲ" ಎಂದು ಅದನ್ನು ಮೃದುವಾಗಿ ಎತ್ತಿಕೊಂಡು ತನ್ನೊಂದಿಗೆ ಮನೆಗೆ ಕರೆದೊಯ್ಯುತ್ತಾನೆ. ರೌಲ್ ಅದಕ್ಕೆ ‘ಸುಂಗ’ ಎಂದು ಹೆಸರಿಡುತ್ತಾನೆ. ರೌಲ್ ಅದನ್ನು ತನ್ನ ಗೆಳೆಯನಂತೆ ಮುದ್ದಾಗಿ ನೋಡಿಕೊಳ್ಳುತ್ತಾನೆ. ಈ ದೃಶ್ಯ ಒಂದು ಮಗುವಿಗೆ ಇರುವ ಪ್ರಾಣಿ ದಯೆ, ಅನುಕಂಪ, ಪ್ರೀತಿ, ದೊಡ್ಡವರಿಗೆ ಇಲ್ಲವಲ್ಲ ಎನಿಸುತ್ತದೆ. 
ಇತ್ತ ಸರ್ಕಸ್‍ನಲ್ಲಿ ಕುಮಾಲ್ ಕಾಡಿನ ವಾತಾವರಣದಿಂದ ಸರ್ಕಸ್‍ನ ಕ್ರೂರ ಬದುಕಿಗೆ ಹೊಂದಿಕೊಳ್ಳಲಾಗದೆ ತನ್ನ ಪರಿವಾರದ ನೆನಪಿನಲ್ಲಿ ಆಹಾರವೂ ಸೇವಿಸದೆ ಕೃಶವಾಗಿಬಿಟ್ಟಿರುತ್ತದೆ. ಆಗ ಅದರ ಪಕ್ಕದಲ್ಲೇ ಇದ್ದ ಒಂದು ಮುದಿ ಹುಲಿ ಅದರ ಸ್ಥಿತಿಯನ್ನು ನೋಡಲಾರದೆ ತನ್ನ ಬಾಲದ ಮೂಲಕ ಅದನ್ನು ಎಬ್ಬಿಸಿ, ಅದಕ್ಕೆ ಆಡುವ ಅವಕಾಶ ಮಾಡಿಕೊಡುತ್ತದೆ. ಕುಮಾಲ್ ಅದನ್ನು ತನ್ನ ಅಪ್ಪನ ಬಾಲವೆಂದು ತಿಳಿದು ಆಡುತ್ತದೆ. ಆದರೆ ದುರಂತವೆಂದರೆ ಕುಮಾಲ್‍ನಗಿದ್ದ ಈ ಮುದಿ ಆಸರೆಯೂ ಕೆಲಸಕ್ಕೆ ಬಾರದು ಎಂಬ ಒಂದೇ ಕಾರಣಕ್ಕೆ ಬಲಿಯಾಗಿ (ಚರ್ಮಕ್ಕಾಗಿ) ಹೋಗುತ್ತದೆ .
ಈ ಕಡೆ ಸುಂಗ ರೌಲ್ ಬಳಿ ಆನಂದವಾಗಿದ್ದಾನೆ ಎನ್ನುವಷ್ಟರಲ್ಲಿ ಒಂದು ಘಟನೆ ನಡೆಯುತ್ತದೆ. ಏನೆಂದರೆ ರೌಲ್ ಇಲ್ಲದೇ ಇದ್ದಾಗ ರೌಲ್‍ನ ನಾಯಿಗೂ ಸುಂಗನಿಗೂ ಜಗಳವಾಗಿ  ಸುಂಗ ಆಕಸ್ಮಿಕವಾಗಿ ಆ ನಾಯಿಯನ್ನು ಕೊಂದುಬಿಡುತ್ತದೆ. ಇದರಿಂದ ಹೆದರಿದ ರೌಲ್‍ನ ತಾಯಿ ಮುಂದೆ ತನ್ನ ಮಗನಿಗೂ ಇದೇ ಗತಿ ಬಂದರೆ ಎಂದುಕೊಂಡು ಸುಂಗನನ್ನು ರಾಜನ ಮನೆಗೆ ಕಳುಹಿಸಿಬಿಡುತ್ತಾಳೆ. ಸುಂಗನನ್ನು ಕಳುಹಿಸಬಾರದೆಂದು ರೌಲ್ ತುಂಬಾ ಅಳುತ್ತಾನೆ . 
ಇತ್ತ ಒಮ್ಮೆ ಆ ಬೇಟೆಗಾರ ವ್ಯಾಪಾರಿ ಸರ್ಕಸ್ ಕಂಪನಿಗೆ ಹುಲಿ ಚರ್ಮಕ್ಕಾಗಿ ಬರುತ್ತಾನೆ. ತಕ್ಷಣ ಕುಮಾಲ್ ಅವನನ್ನು ಗುರುತಿಸಿ ಬೋನಿನಿಂದ ತನ್ನ ಕೈಯನ್ನು ಹೊರಹಾಕಿ ಕೂಗುತ್ತದೆ. “ನನ್ನನ್ನೇಕೆ ಬಿಟ್ಟುಹೋದೆ? ಈ ಬೋನಿನಿಂದ ನನ್ನನ್ನು ಬಿಡಿಸು” ಎನ್ನುವಂತೆ ಮುಖಭಾವದಲ್ಲಿ ತೋರಿಸುತ್ತದೆ. ಆಶ್ಚರ್ಯದಿಂದ ಅದರ ಬಳಿಗೆ ಬಂದ ಆ ವ್ಯಾಪಾರಿ ಅದನ್ನು ಸವರಿ ತನ್ನ ಜೇಬಿನಿಂದ ಮಿಠಾಯಿ ಡಬ್ಬಿ ತೆಗೆದು ಅದರ ಬಾಯಿಗಿಟ್ಟು, ಅಲ್ಲಿಂದ ಹೊರಟು ಹೋಗುತ್ತಾನೆ.
ಈಗ ‘ಸುಂಗ’ ರಾಜನ ಮನೆಯಲ್ಲಿ, ‘ಕುಮಾಲ್’  ಸರ್ಕಸ್ ನಲ್ಲಿದ್ದಾರೆ. ಒಂದು ವರ್ಷದ ನಂತರ ಸುಂಗ ಮತ್ತು ಕುಮಾಲ್ ಇಬ್ಬರೂ ದೊಡ್ದವರಾಗಿರುತ್ತಾರೆ. ಸರ್ಕಸ್‍ನಲ್ಲಿ ಕುಮಾಲ್‍ನಿಗೆ ಬೆಂಕಿ ಹಚ್ಚಿದ ರಿಂಗ್‍ನೊಳಗೆ ಹಾರಲು ತರಬೇತಿ ನೀಡಲು ತುಂಬಾ ಹಿಂಸಿಸುತ್ತಿರುತ್ತಾರೆ. ಹೆದರಿ ಹಿಂದೆ ಸರಿಯುತ್ತಿದ್ದ ಕುಮಾಲ್‍ನನ್ನು ರಿಂಗ್ ಮಾಸ್ಟರ್ ಚೆನ್ನಾಗಿ ಹೊಡೆಯುತ್ತಾನೆ. ಅವನ ಹೊಡೆತಕ್ಕೆ ಹೆದರಿದ ಕುಮಾಲ್ ಕೊನೆಗೂ ಆ ಬೆಂಕಿಯ ರಿಂಗ್‍ನೊಳಗೆ ಹಾರುತ್ತಾನೆ. ಈ ದೃಶ್ಯ ಇವರಲ್ಲಿ  ನಿಜವಾದ ಕ್ರೂರ ಪ್ರಾಣಿ ಯಾರು? ಎಂಬ ದ್ವಂದ್ವತೆ ಉಂಟಾಗುವಂತೆ ಮಾಡುತ್ತದೆ.
ಇತ್ತ ಒಮ್ಮೆ ರಾಜ ಮನೋರಂಜನೆಗಾಗಿ ಹುಲಿ ಕಾಳಗ ಏರ್ಪಡಿಸುತ್ತಾನೆ. ಕಾಳಗಕ್ಕೆ ಆಕಸ್ಮಿಕವಾಗಿ ಕುಮಾಲ್, ಸುಂಗ ಆಯ್ಕೆಯಾಗಿರುತ್ತಾರೆ. ರಾಜನ ಬಳಿಯಿದ್ದ ಸುಂಗ ಬಲಿಷ್ಟನಾಗಿ, ವ್ಯಾಘ್ರನಾಗಿ ಬೆಳೆದಿರುತ್ತಾನೆ. ಇದಕ್ಕೆ ವ್ಯತಿರಿಕ್ತವಾಗಿ ಕುಮಾಲ್, ಹೊಡೆತಗಳಿಂದ ಕೃಶನಾಗಿ, ಭಯಗ್ರಸ್ತನಾಗಿ ಬೆಳೆದಿರುತ್ತಾನೆ. 
ಕಾಳಗದ ದಿನ ಬರುತ್ತದೆ. ಸುಂಗ  ಘರ್ಜಿಸುತ್ತಾ ತನ್ನ ಎದುರಾಳಿಗಾಗಿ ಕಾಯುತ್ತಿರುತ್ತಾನೆ. ಸುಂಗನನ್ನು ಕಂಡ ಕೂಡಲೇ ರೌಲ್ “ಸುಂಗ" ಎಂದು ಕೂಗಿ ಅಮ್ಮ ಅವನು "ಸುಂಗ” ಎನ್ನುತ್ತಾನೆ. ಇತ್ತ ಕಾಳಗಕ್ಕೆ ಹೋಗಲು ಸಿದ್ಧನಿರದೆ ಹೆದರುತ್ತಿದ್ದ ಕುಮಾಲ್‍ನನ್ನು ಹೊಡೆಯುತ್ತಿರುವುದನ್ನು ಕಂಡ ಆ ಬೇಟೆಗಾರ ವ್ಯಾಪಾರಿ ಕುಮಾಲ್‍ನನ್ನು ಕಾಳಗಕ್ಕೆ ಕಳುಹಿಸಬೇಡಿ ಎಂದು ಮಾಲೀಕನಿಗೆ ಹೇಳುತ್ತಾನೆ. ಆದರೆ ಮಾಲೀಕ ಅವನ ಮಾತಿಗೆ ಬೆಲೆ ಕೊಡದೆ ಗದರಿಸಿ ಸುಂಗನನ್ನು ಕಾಳಗಕ್ಕೆ ತಳ್ಳುತ್ತಾನೆ. ಕಾಳಗ ಆರಂಭವಾಗಿ ಎರಡೂ ಸೆಣೆಸಾಡಲಾರಂಭಿಸುತ್ತವೆ. ಹೀಗೆ ಒಂದನ್ನೊಂದು ಬಡಿದುಕೊಳ್ಳುವಾಗ ಕುಮಾಲ್ ಕೆಳಗೆ ಬಿದ್ದು ಅದರ ಮೇಲೆ ಸುಂಗ ನಿಲ್ಲುತ್ತಾನೆ. ತಕ್ಷಣ ಎರಡೂ ಒಂದನ್ನೊಂದು ಒಂದು ನಿಮಿಷ ಹಾಗೆ ನೋಡಿಕೊಳ್ಳುತ್ತವೆ. ಆಗ ಕುಮಾಲ್‍ನ ಮನದಾಳದಿಂದ ಏನೋ ಒಂದು ನೆನಪು ಮಿಂಚುತ್ತದೆ. ಮುಂಗುಸಿಯ ಭಯಕ್ಕೆ ಮರವೇರಿ ಚೀರುತ್ತಿದ್ದ ತಮ್ಮನ ಮುಖ ಕಣ್ಣೆದುರಿಗೆ ಬರುತ್ತದೆ. ಎರಡೂ ಒಂದನ್ನೊಂದು ಗುರುತಿಸಿಕೊಳ್ಳುತ್ತವೆ. ಬಡಿದುಕೊಳ್ಳುತ್ತಿದ್ದ ಎರಡೂ ಈಗ ಒಂದನನ್ನು ಮುದ್ದಡಿಕೊಳ್ಳಲು ಆರಂಭಿಸುತ್ತವೆ. ಇದನ್ನು ಕಂಡ ಜನ ಆಶ್ಚರ್ಯಚಕಿತರಾಗಿ, ಅವು ಮುದ್ದಾಡಿಕೊಡರೆ ತಮಗೆ ಮನೋರಂಜನೆ ಸಿಗುವುದಿಲ್ಲವೆಂದು ಅವನ್ನು ಉದ್ರೇಕಿಸಲು ಕಲ್ಲುಗಳನ್ನು ಎಸೆಯುತ್ತಾರೆ. ಇದು ಮನುಷ್ಯನ ಕ್ರೂರತೆಯ ಪರಾಕಾಷ್ಟತೆ ಎಂದೇ ಹೇಳಬಹುದು. ಆಗ ಕೋಪಗೊಂಡ ಸರ್ಕಸ್ ಮಾಲೀಕ ಕೋಲಿನಿಂದ ಕುಮಾಲ್‍ನನ್ನು ತಿವಿಯುತ್ತಾನೆ. ತಮ್ಮನನ್ನು ಹೊಡೆಯುತ್ತಿದ್ದ ಮಾಲೀಕನ ಕೈಯನ್ನು ಸುಂಗ ಹಿಡಿದು ಕಚ್ಚುತ್ತಾನೆ. ಇದರಿಂದ ಅವನ್ನು ನಿಯಂತ್ರಿಸಲು ರಿಂಗ್ ಮಾಸ್ಟರ್ ಕಾಳಗದ ಬೋನಿನೊಳಗೆ ಬಾಗಿಲು ಹಾಕದೇ ಬರುತ್ತಾನೆ. ಆಗ ಕುಮಾಲ್ ಮನಸ್ಸು ಮಾಡಿದ್ದರೆ ಅವನನ್ನು ಕ್ಷಣಮಾತ್ರದಲ್ಲಿ ಕೊಂದುಬಿಡಬಹುದಿತ್ತು. ಆದರೆ ಅದು ಅವನನ್ನು ಗಾಯಗೊಳಿಸುತ್ತದೆಯಷ್ಟೇ. ಬಾಗಿಲು ತೆರೆದಿದ್ದನ್ನು ಕಂಡ ಎರಡೂ ತಮಗೆ ಮುಕ್ತಿ ದೊರೆತಿದೆ ಎಂಬಂತೆ ಹೊರ ಓಡುತ್ತವೆ. ಆಗಲೂ ಅವು ಅಲ್ಲಿದ್ದ ಜನರಿಗೆ ಏನೂ ಹಾನಿ ಮಾಡದೆ ತಮ್ಮ ಪಾಡಿಗೆ ಕಾಡಿನ ಕಡೆ ಓಡುತ್ತವೆ.
ತಮ್ಮ ಸ್ಥಳವನ್ನು ಕಂಡು ಆನಂದಗೊಳ್ಳುತ್ತವೆ. ಆದರೆ ಅಲ್ಲಿಗೂ ರಾಜನ ಕಡೆಯವರು ಅವನ್ನು ಕೊಲ್ಲಲು ಅದೇ ಬೇಟೆಗಾರ ವ್ಯಾಪಾರಿಯೊಂದಿಗೆ ಬರುತ್ತಾರೆ. ಈ ಬಾರಿ ಬೇಟೆಯಾಡುವ ಇಚ್ಛೆ ಇಲ್ಲದಿದ್ದರೂ ರಾಜನ ಭಯಕ್ಕೆ ವ್ಯಾಪಾರಿ ಬಂದಿರುತ್ತಾನೆ. ದೂರದಲ್ಲಿ ಸುಂಗ, ಕುಮಾಲ್‍ರನ್ನು ಕಂಡು ಅವುಗಳ ಸುತ್ತ ಬೆಂಕಿ ಹಚ್ಚುತ್ತಾರೆ. ಎರಡೂ ಬೆಂಕಿಯನ್ನು ಕಂಡು ಹೆದರುತ್ತವೆ. ಕುಮಾಲ್ ಸ್ವಲ್ಪ ಹೊತ್ತು ಬೆಂಕಿಯನ್ನೇ ನೋಡುತ್ತಾನೆ. ತಕ್ಷಣ ತಾನು ಸರ್ಕಸ್‍ನಲ್ಲಿ ಕಲಿತ ಬೆಂಕಿಯ ರಿಂಗ್‍ನಲ್ಲಿ ಹಾರುವ ವಿದ್ಯೆ ನೆನಪಿಗೆ ಬಂದು ಕುಮಾಲ್ ಚಂಗನೆ ಬೆಂಕಿಯನ್ನು ಹಾರಿಬಿಡುತ್ತಾನೆ. ಹಲವಾರು ಬಾರಿ ಹಾರಿ ತೋರಿಸಿ, ಹುರಿದುಂಬಿಸುತ್ತದೆ. ಸುಂಗ ಹಾರಲಾರದೇ ಅಸಹಾಯಕವಾಗಿ ಕೂಗುತ್ತದೆ. ಆಗ ಕುಮಾಲ್ ಸುಂಗನಿಗೆ ಧೈರ್ಯ ಹೇಳುತ್ತದೆ. ಸುಂಗ ತಾನೂ ಹಾರಿ ಹೋಗುತ್ತದೆ. ಇದನ್ನು ರಾಜನ ಕಡೆಯವರೆಲ್ಲಾ ಮೂಕ ಪ್ರೇಕ್ಷಕರಂತೆ ಬಾಯಿ ತೆರೆದು ನೋಡುತ್ತಿರುತ್ತಾರೆ. ಇದನ್ನು ಕಂಡು ವ್ಯಾಪಾರಿಗೆ ತುಂಬಾ ಆನಂದವಾಗುತ್ತದೆ. 
ಅಂದು ರಾತ್ರಿ ರಾಜನ ಕಡೆಯವರೆಲ್ಲಾ ಮಲಗಿರುವಾಗ, ತಂದೆಯ ಜೊತೆಗೆ ಬಂದಿದ್ದ ರೌಲ್ ಮತ್ತು ಆ ವ್ಯಾಪಾರಿ ಬೇಟೆಗಾರ ಇಬ್ಬರೂ ಮಾತನಾಡುತ್ತಿರುತ್ತಾರೆ. ಆಗ ರೌಲ್ ಅವನನ್ನು ಕುರಿತು “ನೀವೇಕೆ ಹುಲಿಗಳನ್ನು ಬೇಟೆಯಾಡುತ್ತೀರಿ? ಪಾಪ ಅವು ಮೂಕ ಪ್ರಾಣಿಗಳು, ಇದು ತಪ್ಪಲ್ಲವೇ?" ಎಂದು ಕೇಳುತ್ತಾನೆ. ಅದಕ್ಕೆ ಆ ಬೇಟೆಗಾರ ವ್ಯಾಪಾರಿ "ನೀನು ಹೇಳುವುದು ನಿಜ. ಆದರೆ ಅವನ್ನು ನಾನಲ್ಲದಿದ್ದರೆ ಇನ್ನಾರಾದರೂ ಕೊಲ್ಲುತ್ತಾರೆ. ಇದಾದ ನಂತರ ನಾನು ಬೇಟೆಯಾಡುವುದಿಲ್ಲ. ಇದೇ ಕೊನೆ” ಎನ್ನುತ್ತಾನೆ. 
ಮಾರನೆಯ ದಿನ ರೌಲ್ ಎದ್ದವನೇ ಸುಂಗನನ್ನು ನೋಡಲು ಕಾಡಿನ ಒಳಗೆ ಹೋಗುತ್ತಾನೆ. ಗಾಬರಿಗೊಂಡ ವ್ಯಾಪಾರಿ ಅವನನ್ನು ಹುಡುಕಲು ಬಂದೂಕು ಹಿಡಿದು ಹೋಗುತ್ತಾನೆ. ಕೊನೆಗೂ ಸುಂಗ ರೌಲ್‍ನ ಎದುರಿಗೆ ಬರುತ್ತಾನೆ. ಸುಂಗನನ್ನು ಕಂಡ ರೌಲ್ ಸಂತಸದಿಂದ ಅದರ ಬಳಿಗೆ ಸ್ವಲ್ಪವೂ ಭಯವಿಲ್ಲದೇ  ಹೋಗಿ ಅದಕ್ಕೆ ಮುತ್ತು ಕೊಟ್ಟು “ಸುಂಗ ನೀನು ಇಲ್ಲೇ ಇರು. ಇದೇ ನಿನಗೆ ಸುರಕ್ಷಿತವಾದ ಸ್ಥಳ” ಎನ್ನುತ್ತಾನೆ ಸುಂಗ ತಲೆ ಅಲ್ಲಾಡಿಸುತ್ತಾನೆ. ಇದನ್ನೇ ದೂರದಿಂದ ನೋಡುತ್ತಿದ್ದ ಬೇಟೆಗಾರ ವ್ಯಾಪಾರಿ ಬಂದೂಕು ಹಿಡಿದು ಮರೆಯಲ್ಲಿ ನಿಂತಿರುತ್ತಾನೆ. ಆಗ ಅವನ ಪಕ್ಕ ಕುಮಾಲ್ ಬಂದು ನಿಲ್ಲುತ್ತಾನೆ. ಗಾಬರಿಗೊಂಡು ಎದ್ದು ನಿಂತ ವ್ಯಾಪಾರಿ ಅದರ ಕಣ್ಣಿನಲ್ಲಿನ ಪ್ರೀತಿಯನ್ನು ಕಂಡು ಕೈಯಲ್ಲಿದ್ದ ಬಂದೂಕನ್ನು ಎಸೆಯುತ್ತಾನೆ. ಇದು ಸಾಂಕೇತಿಕವಾಗಿ ಆತ ಬೇಟೆಯಾಡುವುದನ್ನು ತ್ಯಜಿಸಿದ ಎಂದು ತೋರಿಸುತ್ತದೆ. ಆಗ ಕುಮಾಲ್ ಅವನ ಜೇಬನ್ನು ಮೂಸುತ್ತದೆ. ವ್ಯಾಪಾರಿಯು ಜೇಬಿನಿಂದ ಮಿಠಾಯಿ ಡಬ್ಬಿಯನ್ನು ತೆಗೆದು ಖಾಲಿ ಇರುವುದನ್ನು ನೋಡಿ, ಸುಂಗನ ಮುಖವನ್ನು ದುಖದಿಂದ ನೋಡಿ ಎರಡು ಬಾರಿ “ಸಾರಿ, ಸಾರಿ” ಎನ್ನುತ್ತಾನೆ. ಇಲ್ಲಿ ಒಂದು ಕುಮಾಲ್‍ನ ತಂದೆಯನ್ನು ಕೊಂದಿದ್ದಕ್ಕೆ, ಮತ್ತೊಂದು ಸಾರಿ ಮಿಠಾಯಿ ಇಲ್ಲದಿದ್ದಕ್ಕಾಗಿ" ಎಂದು ಹೇಳುತ್ತಾನೆ .
ರೌಲ್ ಮತ್ತು ವ್ಯಾಪಾರಿ ತಮ್ಮ ಗೆಳೆಯರಾದ, ಸುಂಗ, ಕುಮಾಲ್‍ರಿಗೆ ಕೊನೆಯ ವಿದಾಯ ಹೇಳಿ ಅಲ್ಲಿಂದ ಹೊರಡುತ್ತಾರೆ . ಸುಂಗ, ಕುಮಾಲ್ ತಮ್ಮ ಸ್ಥಳವಾದ ಹಳೇ ಕಟ್ಟಡದ ಬಳಿ ಬರುತ್ತಾರೆ. ಆಗ ಅವರ ಎದುರಿಗೆ ರಾಜನಿಂದ ತಪ್ಪಿಸಿಕೊಂಡು ಕಾಡಿನಲ್ಲೇ ಇದ್ದ ಅವರ ತಾಯಿ ಎದುರಾಗುತ್ತಾಳೆ. ಇದನ್ನು ಕಂಡ ಇಬ್ಬರೂ ಸಹೋದರರೂ ಆನಂದದಿಂದ ಅಮ್ಮನ ಬಳಿಗೆ ಓಡಿಹೋಗುತ್ತಾರೆ
ಈ ಕಥೆಯಿಂದ ನಮಗೆ ತಿಳಿಯುವುದೇನೆಂದರೆ ‘ಪ್ರಕೃತಿಯ ಶಿಶು’ ಎನ್ನಲಾಗುವ ಮಾನವ ಎಷ್ಟರ ಮಟ್ಟಿಗೆ ಅದನ್ನು ರಕ್ಷಿಸುತ್ತಿದ್ದಾನೆ ಎಂದು. ಹೆಸರಿಗೆ ಮಾತ್ರ ಕ್ರೂರ ಪ್ರಾಣಿಗಳು ಎನಿಸಿಕೊಳ್ಳುವ ಹುಲಿಗಳು ತಮ್ಮ ಪ್ರಾಣ ರಕ್ಷಣೆಗಾಗಿ ಮಾತ್ರ ಹೋರಾಡಿರುವುದನ್ನು ನಾವು ಗಮನಿಸಬಹುದು. ಆದರೆ ಶ್ರೇಷ್ಠ ಪ್ರಾಣಿ ಎನಿಸಿಕೊಂಡಿರುವ ಮಾನವ ತನ್ನ ಸ್ವಾರ್ಥಕ್ಕಾಗಿ ಏನೂ ಅರಿಯದ ಆ ಹುಲಿಗಳ ಮುಗ್ಧ ಜೀವನಕ್ಕೆ ಮಣ್ಣು ಹಾಕಿ ಅವುಗಳಿಗೆ ನಾನಾ ಹಿಂಸೆ ನೀಡುತ್ತಾನೆ. ಅವುಗಳನ್ನು ಕೊಂದು ಅವುಗಳ ಚರ್ಮವನ್ನು ಸಹ ತನ್ನ ಐಷಾರಾಮಿ ಜೀವನಕ್ಕೆ  ಬಳಸುತ್ತಾನೆ. ಈ ಕಥೆಯಲ್ಲಿ ಎಲ್ಲೂ ಹುಲಿಗಳು ಮನುಷ್ಯರಿಗೆ ಹಾನಿ ಮಾಡುವುದಿಲ್ಲ. ಇದಕ್ಕೆ ಸಾಕ್ಷಿ ಕಾಳಗದ ಸಂದರ್ಭ. ಹಾಗಾಗಿ ಆಲೋಚನಾ ಶಕ್ತಿ ಇಲ್ಲದ ಪ್ರಾಣಿಗಳಿಗೇ ಅಷ್ಟು ದಯೆ ಇರಬೇಕಾದರೆ, ವಿವೇಚನಾ ಶಕ್ತಿ ಇರುವ ಮನುಷ್ಯ ಹೇಗೆ ವರ್ತಿಸಬೇಕು ಅಲ್ಲವೇ? ಇದರ ಬಗ್ಗೆ ಆಲೋಚಿಸುವ ಮನಸ್ಸು ನಿಜವಾಗಿಯೂ ನಿಮಗಿದ್ದರೆ ಇಂದೇ ‘ಟು ಬ್ರದರ್ಸ್’ ಸಿನಿಮಾದ ಸಿಡಿ ತಂದು ನೋಡಿ. ಇದರ ವಿವೇಚನೆ ನಿಮಗೇ ಬಿಟ್ಟಿದ್ದು.
- ರೂಪಶ್ರೀ ವಿ ಬಿ 

ಕಾಮೆಂಟ್‌ಗಳಿಲ್ಲ: