Pages

ಕವನ: "ಕಾರಣಕ್ಷಾಮದಿ ನಿಂತಿಹನೇನೋ ಕಲ್ಲಾಗಿ ಬಾಹುಬಲಿ?"


ಮೂಲ ಚಿತ್ರ ಕೃಪೆ: www.pixelshooter.net


ಸರ್ವದಿಗ್ವಿಜಯಿ ಅಗ್ರಜ ಭರತ
ವಿಶ್ವಮಾನ್ಯನೂ, ಕೀರ್ತಿವಂತನೂ.
ಜಗವೆಲ್ಲ ಪಾದದಡಿ ತಲೆಬಾಗಲು
ಪಾದಕ್ಕೆರಗುವ ಔಚಿತ್ಯ ಪ್ರಶ್ನಿಸಿದ
ಕಾರಣಕರಣಿ ಬಾಹುಬಲಿ!

ಮಲ್ಲಯುದ್ಧ, ದೃಷ್ಟಿಯುದ್ಧ
ಹೆಸರಿಸಿದೆಲ್ಲ ಯುದ್ಧಗಳಲ್ಲೂ
ಪರಾಕ್ರಮಿ, ವಿಜಯ ವಿಕ್ರಮ
ವಿಜಯದ ಪರಿಭಾಷೆ ವಿಶ್ಲೇಷಿಸಿದ
ಸ್ವಾನುಭವಿ ಬಾಹುಬಲಿ!

ರಾಜಾಧಿರಾಜ ಮಹಾರಾಜರೊಳು
ವಿರಾಜಿಸದೆ ತನ್ನೆಡೆಗೆ ಸನ್ನದ್ದ
'ಭಟಖಡ್ಗಮಂಡಲೋತ್ಫಲ ಭ್ರಮರಿ
ರಾಜ್ಯಲಕ್ಷ್ಮಿ'ಯ ನಶ್ವರತೆ ವ್ಯಾಖ್ಯಾನಿಸಿದ
ಧೀಯೋಗಿ ಬಾಹುಬಲಿ!

ತನ್ನದೇ ಇಹುದೆಲ್ಲ ಎಂಬಂತಿರಲು
ಇಹುದೆಲ್ಲವನ್ನೂ ತನ್ನದಲ್ಲವೇ ಅಲ್ಲ
ಎಂದು ಅಚಲ ಸ್ಥಿತಪ್ರಜ್ಞೆಯಿಂದ
ನಿರಾಕರಿಸಿ ಹೊರಟ ಸರ್ವಪರಿತ್ಯಾಗಿ
ಬೈರಾಗಿ ಬಾಹುಬಲಿ!

ತ್ಯಾಗ-ವಿವೇಚನ-ವಿಶ್ಲೇಷಣ ದುರ್ಲಭ, 
ಅಂಧಾನುಕರಣ - ಭೋಗಧಿಕ ಆಚರಣ, 
ನಿತ್ಯ ಅಭ್ಯಂಜನ, ಸಹಿಸಿ ಮೂಕ ವೇದನ,
ಇಂದಿನ ಕಾರಣಕ್ಷಾಮದಿ ನಿಂತಿಹನೇನೋ
ಕಲ್ಲಾಗಿ ಬಾಹುಬಲಿ?


- ಮಂಜುನಾಥ್ ಎ ಎನ್

ಕಾಮೆಂಟ್‌ಗಳಿಲ್ಲ: