Pages

ಅನುವಾದ: "ಸುಲ್ತಾನಾಳ ಕನಸು"

 ಮೂಲ: ರೊಕೆಯಾ ಶೆಕಾವತ್ ಹೊಸೆನ್
(ಈ ಕಥೆ ಮೊದಲು ೧೯೦೫ರಲ್ಲಿ ಮದ್ರಾಸ್ನ “ದಿ ಇಂಡಿಯನ್ ಲೇಡಿಸ್ ಮ್ಯಾಗಜೈನ್”ನಲ್ಲಿ ಇಂಗ್ಲಿಷ್ ನಲ್ಲಿ ಪ್ರಕಟವಾಯಿತು. ಶಾಲೆಗೆ ಹೋಗದ ರೊಕೆಯಾರವರು ತಮ್ಮ ಅಣ್ಣನಿಂದ ಬಂಗಾಳಿ ಹಾಗೂ ಇಂಗ್ಲಿಷ್ ಭಾಷೆಯನ್ನು ಕಲಿತರು. ನಂತರ ಪತಿ ಶೆಕಾವತ್ ಹೊಸೆನ್ ಸಹ ಅವರ ಚಟುವಟಿಕೆಗಳಿಗೆ ನೆರವಾದರು. ಸಮಾಜ ಸುಧಾರಣೆಯಲ್ಲಿ, ಸ್ತ್ರೀ ಶಿಕ್ಷಣದಲ್ಲಿ, ಸ್ತ್ರೀ ಹಕ್ಕುಗಳ ವಿಷಯದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದರು. ಹೆಣ್ಣುಮಕ್ಕಳಿಗಾಗಿ ಶಾಲೆಯನ್ನು ತೆರೆದರು. ಅದು ಇಂದಿಗೂ ಸಹ ಕಲ್ಕತ್ತಾದಲ್ಲಿ ನಡೆಯುತ್ತಿದೆ. ಶಾಲೆಗೆ ಹೋಗದ ರೊಕೆಯಾರವರು ಈ ಕಥೆಯಲ್ಲಿ ವಿಜ್ಞಾನದ ಬಹಳ ಅಂಶಗಳನ್ನು ತಮ್ಮ ಕಲ್ಪನೆಯೊಂದಿಗೆ ಬೆರೆಸಿದ್ದಾರೆ.. ಸ್ತ್ರೀವಾದಿ ಧೋರಣೆಯಿಂದ ಈ ಕಥೆಯನ್ನು ಬರೆದಿರುವ ರೊಕೆಯಾರವರು ಜೆನಾನಾದಲ್ಲಿ ಹೆಣ್ಣುಮಕ್ಕಳನ್ನು ಇಟ್ಟಿರುವುದನ್ನು ವಿರೋಧಿಸಿ ಈ ಕಥೆಯನ್ನು ಬರೆದಿದ್ದಾರೆ. ಈ ಕಥೆ ವಿಶ್ವದ ಬಹಳಷ್ಟು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯವಸ್ತುವಾಗಿದೆ, ಚರ್ಚೆಗೆ ಒಳಗಾಗಿದೆ.)



ಒಂದು ದಿನ ಸಂಜೆ, ನಾನು ನನ್ನ ಮಲಗುವ ಕೋಣೆಯಲ್ಲಿ ಆರಾಮಕುರ್ಚಿಯಲ್ಲಿ ಕುಳಿತು ಭಾರತದ ಸ್ತ್ರೀಯರ ಪರಿಸ್ಥಿತಿಯ ಬಗ್ಗೆ ಆಲೋಚಿಸುತ್ತಿದ್ದೆ. ನಾನು ಹಾಗೆಯೇ ನಿದ್ರೆ ಹೋದೆನಾ ಅಥವಾ ಏನೆಂದು ನನಗೆ ಗೊತ್ತಿಲ್ಲ. ಆದರೆ ನನಗೆ ನೆನಪಿರುವಷ್ಟರ ಮಟ್ಟಿಗೆ, ನಾನು ಎಚ್ಚರವಾಗಿಯೇ ಇದ್ದೆ. ಆಕಾಶದಲ್ಲಿ ಹುಣ್ಣಿಮೆ ಚಂದ್ರನೊಂದಿಗೆ, ಸಾವಿರಾರು ವಜ್ರದಂತಹ ನಕ್ಷತ್ರಗಳು ಸ್ಪಷ್ಟವಾಗಿ ಹೊಳೆಯುತ್ತಿದ್ದುದ್ದನ್ನು ನಾನು ಕಂಡೆ.
ಇದ್ದಕ್ಕಿದ್ದಂತೆ ಓರ್ವ ಮಹಿಳೆ ನನ್ನೆದುರಿಗೆ ನಿಂತರು; ಅವರು ಹೇಗೆ ಅಲ್ಲಿಗೆ ಬಂದರೋ ನನಗೆ ಗೊತ್ತಿಲ್ಲ. ಅವರನ್ನು ನಾನು ನನ್ನ ಗೆಳತಿ ಸಿಸ್ಟರ್ ಸಾರಾ ಎಂದುಕೊಂಡೆ.
“ಶುಭೋದಯ” ಹೇಳಿದರು ಸಿಸ್ಟರ ಸಾರಾ. ನಾನು ನನ್ನೊಳಗೇ ನಕ್ಕೆ, ಏಕೆಂದರೆ ಅದು ಬೆಳಿಗ್ಗೆಯಲ್ಲವೆಂದು ಆದರೆ ನಕ್ಷತ್ರಭರಿತ ರಾತ್ರಿಯೆಂದು ನನಗೆ ಗೊತ್ತಿತ್ತು. “ಹೇಗಿದ್ದೀರಿ”? ಪ್ರಶ್ನಿಸಿದೆ.
“ನಾನು ಚೆನ್ನಾಗಿದ್ದೇನೆ. ವಂದನೆಗಳು. ನನ್ನೊಂದಿಗೆ ಹೊರಗೆ ಬಂದು ನಮ್ಮ ತೋಟವನ್ನು ನೋಡುತ್ತೀಯಾ?”
ನಾನು ಮತ್ತೆ ತೆರೆದ ಕಿಟಕಿಯ ಮೂಲಕ ಚಂದ್ರನನ್ನು ನೋಡಿದೆ. ಆ ವೇಳೆಯಲ್ಲಿ ಹೊರಗೆ ಹೋಗುವುದರಲ್ಲಿ ಏನೂ ತೊಂದರೆಯಿಲ್ಲ ಎಂದು ಭಾವಿಸಿದೆ. ಆಗಷ್ಟೇ ಮನೆಯಲ್ಲಿದ್ದ ಪುರುಷ ಸೇವಕರು ಮಲಗಲು ತೆರಳಿದ್ದರು, ಸಿಸ್ಟರ್ ಸಾರಾ ಜೊತೆ ಆರಾಮವಾಗಿ ವಾಕ್ ಮಾಡಬಹುದು ಎಂದುಕೊಂಡೆ.
ನಾವು ಡಾರ್ಜಲಿಂಗ್ ನಲ್ಲಿದ್ದಾಗ ಆಗಾಗ ಸಿಸ್ಟರ್ ಸಾರಾರವರೊಂದಿಗೆ ಹಲವಾರು ಬಾರಿ ನಡೆದಾಡಿದ್ದೇನೆ. ಹಲವಾರು ಬಾರಿ ನಾವು ಕೈಕೈ ಹಿಡಿದು, ಅಲ್ಲಿದ್ದ ಸಸ್ಯವನಗಳಲ್ಲಿ ಮಾತನಾಡುತ್ತಾ ನಡೆದಾಡಿದ್ದೇವೆ. ನನಗನಿಸಿತು, ಸಿಸ್ಟರ್ ಸಾರಾ ಬಹುಶಃ ನನ್ನನ್ನು ಅಂತಹುದೇ ಯಾವುದೋ ವನಕ್ಕೆ ಕರೆದುಕೊಂಡು ಹೋಗಲು ಬಂದಿದ್ದಾರೆ ಎಂದು ಊಹಿಸಿದೆ. ನಾನು ಖುಷಿಯಿಂದಲೇ ಅವರ ಆಹ್ವಾನವನ್ನು ಒಪ್ಪಿ, ಅವರೊಂದಿಗೆ ಹೊರಹೋದೆ.
ಹೊರಗೆ ನಡೆಯುತ್ತಿದ್ದಾಗ, ಅದು ಬೆಳಿಗ್ಗೆಯೆಂಬುದನ್ನು ಕಂಡು ನನಗೆ ಆಶ್ಚರ್ಯವಾಯಿತು. ನಗರವು ಸಂಪೂರ್ಣವಾಗಿ ಎದ್ದಿತ್ತು ಮತ್ತು ರಸ್ತೆಗಳಲ್ಲಿ ಜನರು ತಮ್ಮ ಚಟುವಟಿಕೆಗಳಲ್ಲಿ ಮಗ್ನರಾಗಿದ್ದದ್ದು ಕಂಡುಬಂದಿತು. ನಾನು ಬೆಳಗಿನ ಸಮಯದಲ್ಲಿ ರಸ್ತೆಯಲ್ಲಿ ನಡೆಯುತ್ತಿದ್ದೇನೆ ಎಂದು ನನಗೆ ಸಂಕೋಚವೆನಿಸುತಿತ್ತು,.  ಆದರೆ ದಾರಿಯಲ್ಲಿ ಒಬ್ಬ ಪುರುಷನೂ ಕಂಡುಬರಲಿಲ್ಲ.
ಕೆಲವು ದಾರಿಹೋಕರು ನನ್ನನ್ನು ನೋಡಿ ತಮಾಷೆ ಮಾಡಿದರು. ನನಗೆ ಅವರ ಭಾಷೆ ಅರ್ಥವಾಗದಿದ್ದರೂ ಅವರು ತಮಾಷೆ ಮಾಡುತ್ತಿದ್ದಾರೆ ಎಂದು ಖಚಿತವಾಗಿತ್ತು. ನಾನು ನನ್ನ ಗೆಳತಿಯನ್ನು ಕೇಳಿದೆ, “ಅವರು ಏನು ಹೇಳಿದರು?”
“ಆ ಮಹಿಳೆಯರು ಹೇಳುತ್ತಿದ್ದಾರೆ ನೀನು ಪುರುಷನಂತೆ ಇದ್ದೀಯಾ ಎಂದು.”
“ಪುರುಷನಂತೆ?” ನಾನು ಕೇಳಿದೆ “ಏನು ಹಾಗೆಂದರೆ?”
“ನೀನು ಪುರುಷರಂತೆ ಸಂಕೋಚ ಸ್ವಭಾವದವಳು ಮತ್ತು ಭಯಸ್ಥಳು ಎಂದು.”
“ಪುರುಷರಂತೆ ಸಂಕೋಚ ಸ್ವಭಾವದವಳು ಮತ್ತು ಭಯಸ್ಥಳು?” ಅದು ನಿಜವಾಗಲೂ ಒಂದು ಜೋಕ್ ಎನಿಸಿತು. ನನಗೆ ನನ್ನ ಜೊತೆಗಾತಿ ಸಿಸ್ಟರ್ ಸಾರಾ ಅಲ್ಲ ಯಾರೋ ಅಪರಿಚಿತೆ ಎಂದು ತಿಳಿದು ಅಳುಕುಂಟಾಯಿತು. “ಓಹ್, ಈ ವ್ಯಕ್ತಿಯನ್ನು ನಾನು ನನ್ನ ಹಳೆಯ ಪ್ರೀತಿಯ ಗೆಳತಿ ಸಿಸ್ಟರ್ ಸಾರಾ ಎಂದು ಭಾವಿಸುವ ತಪ್ಪನ್ನು ಮಾಡಿದೆನಲ್ಲ ಮೂರ್ಖಳಂತೆ.”
ಆಕೆಗೆ ನನ್ನ ಕೈ ಬೆರಳುಗಳು ನಡುಗುತ್ತಿದ್ದದ್ದು ತಿಳಿಯಿತು, ಏಕೆಂದರೆ ನಾವು ಕೈಹಿಡಿದು ನಡೆಯುತ್ತಿದ್ದೆವು.
“ಏನಾಯಿತು ಗೆಳತಿ?” ಪ್ರೀತಿಯಿಂದ ಕೇಳಿದಳಾಕೆ.
“ನನಗೆ ವಿಚಿತ್ರವೆನಿಸುತ್ತಿದೆ, ಏಕೆಂದರೆ ನಾನು ಪರ್ದಾ ಹಾಕಿಕೊಳ್ಳುವ ಮಹಿಳೆ, ಈ ರೀತಿ ಪರ್ದಾ ಇಲ್ಲದೆ ಹೊರಗಡೆ ನಡೆಯುವುದು ನನಗೆ ಅಭ್ಯಾಸವಿಲ್ಲ,” ಕ್ಷಮಾಪಣೆ ಕೋರಿದೆ.
“ಪುರುಷ ಅಡ್ಡಬರುತ್ತನೆಂದು ನೀನೇನೂ ಗಾಬರಿಯಾಗಬೇಕಿಲ್ಲ. ಇದು ಸ್ತ್ರೀನಾಡು. ಪಾಪ ಮತ್ತು ಹಾನಿಯಿಂದ ಮುಕ್ತವಾದ ನಾಡು. ಸದ್ಗುಣವೇ ಆಳ್ವಿಕೆ ನಡೆಸುತ್ತಿರುವ ನಾಡು.”
ಮಾತಿನ ನಡುವೆ ನಾನು ಸುತ್ತಮುತ್ತಲಿನ ನೋಟಗಳನ್ನು ಆಸ್ವಾದಿಸುತ್ತಿದ್ದೆ. ಬಹಳ ಅದ್ಭುತವಾಗಿತ್ತು. ಅಲ್ಲಿದ್ದ ಹಸಿರು ಹುಲ್ಲಿನ ಹಾಸನ್ನು ನಾನು ವೆಲ್ವೆಟ್ ಕುಷನ್ ಎಂದುಕೊಂಡೆ. ನಾನೇನೋ ಮೃದುವಾದ ಕಾರ್ಪೆಟ್ ಮೇಲೆ ನಡೆಯುವಂತೆ ಕೆಳಗೆ ನೋಡಿದೆ ಮತ್ತು ಹಾದಿಯುದ್ದಕ್ಕೂ ಅದು ಹೂಗಳಿಂದ ಆವೃತವಾಗಿದ್ದದ್ದನ್ನು ಕಂಡೆ.
“ಎಷ್ಟೊಂದು ಸುಂದರವಾಗಿದೆ” ಎಂದೆ ನಾನು.
“ನಿನಗಿಷ್ಟವಾಯಿತೆ?” ಕೇಳಿದರು ಸಿಸ್ಟರ್ ಸಾರಾ (ನಾನು ಅವರನ್ನು ಅದೇ ರೀತಿಯೇ ಕರೆಯಲು ಮುಂದುವರೆಸಿದೆ, ಆಕೆ ನನ್ನನ್ನು ನನ್ನ ಹೆಸರಿಟ್ಟು ಕರೆಯುತ್ತಿದ್ದರು)
“ಹೌದು, ಬಹಳ. ಆದರೆ ನನಗೆ ಈ ಸೂಕ್ಷ್ಮ, ಸುಂದರ ಹೂಗಳ ಮೇಲೆ ನಡೆಯಲು ಮನಸ್ಸಿಲ್ಲ.”
“ಪರವಾಗಿಲ್ಲ, ಪ್ರೀತಿಯ ಸುಲ್ತಾನಾ. ನಿನ್ನ ನಡಿಗೆ ಅವುಗಳಿಗೆ ಹಾನಿ ಮಾಡುವುದಿಲ್ಲ, ಅವು ಬೀದಿ ಹೂಗಳು.”
“ಈ ಇಡೀ ಜಾಗ ತೋಟದಂತೆ ಕಾಣಿಸುತ್ತದೆ” ಹೇಳಿದೆ ನಾನು ಹೊಗಳುತ್ತಾ, “ನೀವು ಪ್ರತಿಯೊಂದು ಗಿಡವನ್ನೂ ಬಹಳ ಕೌಶಲ್ಯದಿಂದ ಜೋಡಿಸಿದ್ದೀರಿ.”
“ನಿಮ್ಮ ದೇಶವಾಸಿಗಳು ಇಚ್ಛಿಸಿದಲ್ಲಿ, ನಿಮ್ಮ ಕಲ್ಕತ್ತಾ ಸಹ ಇದಕ್ಕಿಂತ ಸುಂದರವಾದ ತೋಟವಾಗುತ್ತದೆ.”
“ಅವರಿಗೆ ಮಾಡಲು ಬೇರೆಯ ಕೆಲಸಗಳೂ ಬೇಕಾದಷ್ಟಿರುವಾಗ, ತೋಟಗಾರಿಕೆಯ ಬಗ್ಗೆ ಇಷ್ಟು ಗಮನ ಕೊಡುವುದು ಅನುಪಯುಕ್ತ ಎಂದು ಅವರು ಭಾವಿಸುತ್ತಾರೆ,.”
“ಅವರಿಗೆ ಅದಕ್ಕಿಂತ ಉತ್ತಮವಾದ ನೆಪ ಕೊಡಲು ಸಾಧ್ಯವಿರಲಿಲ್ಲ” ನಗುತ್ತಾ ಹೇಳಿದರಾಕೆ.
ನನಗೆ ಪುರುಷರು ಎಲ್ಲಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ತೀವ್ರವಾಯಿತು. ನಾನು ನಡೆಯುವಾಗ ನೂರಕ್ಕೂ ಹೆಚ್ಚು ಮಹಿಳೆಯರನ್ನು ಭೇಟಿ ಮಾಡಿದೆ. ಆದರೆ ಒಬ್ಬನೇ ಒಬ್ಬ ಪುರುಷನೂ ಕಾಣಿಸಲಿಲ್ಲ.
“ಪುರುಷರೆಲ್ಲಿ?” ನಾನು ಆಕೆಯನ್ನು ಕೇಳಿದೆ.
“ಅವರ ಸರಿಯಾದ ಜಾಗದಲ್ಲಿ, ಎಲ್ಲಿರಬೇಕೋ ಅಲ್ಲಿ.”
“ಅವರ ಸೂಕ್ತ ಸ್ಥಳಗಳಲ್ಲಿ, ಅಂದರೇನು?”
“ಓ, ನನಗೆ ನನ್ನ ತಪ್ಪಿನ ಅರಿವಾಯಿತು. ನಿನಗೆ ನಮ್ಮ ರೀತಿನೀತಿಗಳು ಗೊತ್ತಿಲ್ಲ, ಏಕೆಂದರೆ ಮೊದಲೆಂದೂ ನೀನು ಇಲ್ಲಿಗೆ ಬಂದಿರಲಿಲ್ಲ. ನಾವು ನಮ್ಮ ಪುರುಷರನ್ನು ಮನೆಯ ಒಳಗಡೆ ಇಟ್ಟಿದ್ದೇವೆ.”
“ನಮ್ಮನ್ನು ಜೆನಾನಾದಲ್ಲಿಟ್ಟಂತೆ?”
“ಹೌದು, ಅದೇ ರೀತಿ.”
“ಎಷ್ಟು ಹಾಸ್ಯಾಸ್ಪದ!” ನಾನು ನಗಲಾರಂಭಿಸಿದೆ. ಸಿಸ್ಟರ್ ಲಾರಾ ಸಹ ನಗಲಾರಂಭಿಸಿದರು.
“ನನ್ನ ಪ್ರೀತಿಯ ಸುಲ್ತಾನಾ, ಹಾನಿರಹಿತ ಮಹಿಳೆಯರನ್ನು ಮನೆಯ ಒಳಗಿಟ್ಟು, ಪುರುಷರನ್ನು ಹೊರಗಡೆ ಬಿಡುವುದು ಎಷ್ಟು ಅನ್ಯಾಯ?”
“ಏಕೆ? ನಾವು ಜೆನಾನಾದಿಂದ ಹೊರಗೆ ಬರುವುದು ನಮಗೆ ಒಳ್ಳೆಯದಲ್ಲ, ಏಕೆಂದರೆ ನಾವು ಸಹಜವಾಗಿಯೇ ಬಲಹೀನರು.”
“ಹೌದು, ಪುರುಷರು ಬೀದಿಯಲ್ಲಿರುವವರೆಗೆ ನಾವು ಹೊರಗಿರುವುದು ಸುರಕ್ಷತೆಯಲ್ಲ, ಅಥವಾ ಮಾರುಕಟ್ಟೆಗೆ ಕಾಡುಮೃಗ ಬಂದರೂ ಅಷ್ಟೇ.”
“ಹೌದು ಖಂಡಿತವಾಗಿಯೂ.”
“ಒಂದುವೇಳೆ, ಕೆಲವು ಹುಚ್ಚರು ಹುಚ್ಚಾಸ್ಪತ್ರೆಯಿಂದ ಹೊರಗೆ ಬಂದು ಪುರುಷರಿಗೆ, ಕುದುರೆಗಳಿಗೆ ಮತ್ತು ಇತರ ಜೀವಿಗಳಿಗೆ ಹಾನಿ ಮಾಡಲು ಯತ್ನಿಸಿದರೆ, ಆಗ ನಿಮ್ಮ ದೇಶವಾಸಿಗಳು ಏನು ಮಾಡುತ್ತಾರೆ?”
“ಅವರನ್ನು ಬಂಧಿಸಲು ಪ್ರಯತ್ನಿಸಿ, ಅವರನ್ನು ಮತ್ತೆ ಹುಚ್ಚಾಸ್ಪತ್ರೆಯಲ್ಲಿ ಬಿಡುತ್ತಾರೆ.”
“ಧನ್ಯವಾದಗಳು. ಬುದ್ಧಿ ಸರಿಯಿರುವವರನ್ನು ಒಳಗಿಟ್ಟು, ಹುಚ್ಚರನ್ನು ಹೊರಗೆ ಬಿಡಬೇಕೆಂದು ನೀನು ಭಾವಿಸುವುದಿಲ್ಲ ಅಲ್ಲವೇ?”
“ಖಂಡಿತವಾಗಿಯೂ ಇಲ್ಲ” ನಗುತ್ತಾ ಹೇಳಿದೆ.
“ವಾಸ್ತವವಾಗಿ, ನಿಮ್ಮ ದೇಶದಲ್ಲಿ ಇದೇ ನಡೆಯುತ್ತಿರುವುದು. ಎಲ್ಲ ರೀತಿಯ ತಪ್ಪುಗಳನ್ನು, ಹಾನಿಯನ್ನು ಮಾಡುವ ಅಥವಾ ಮಾಡಲು ಸಮರ್ಥರಾಗಿರುವ ಪುರುಷರನ್ನು ಹೊರಗಡೆ ಬಿಟ್ಟು, ಮುಗ್ಧ ಹೆಣ್ಣುಮಕ್ಕಳನ್ನು ಜೆನಾನದಲ್ಲಿಡಲಾಗಿದೆ. ತರಬೇತಿಯಿಲ್ಲದ ಆ ಪುರುಷರನ್ನು ಹೊರಗಡೆ ಹೇಗೆ ನಂಬುವುದು?”
“ನಮ್ಮ ಸಾಮಾಜಿಕ ವಿಷಯಗಳ ನಿರ್ವಹಣೆಯಲ್ಲಿ ನಮಗೆ ದನಿಯೆತ್ತುವ, ಮಧ್ಯಪ್ರವೇಶಿಸುವ ಅಧಿಕಾರವಿಲ್ಲ. ಭಾರತದಲ್ಲಿ ಪುರುಷ ಒಡೆಯ, ದೇವರು. ಅವನು ಎಲ್ಲಾ ಅಧಿಕಾರಗಳನ್ನು, ಸವಲತ್ತುಗಳನ್ನು ತನ್ನದಾಗಿಸಿಕೊಂಡಿದ್ದಾನೆ ಮತ್ತು ಮಹಿಳೆಯರನ್ನು ಜೆನಾನದಲ್ಲಿ ಕೂಡಿಹಾಕಿದ್ದಾನೆ. ನೀವು ಏಕೆ ಒಳಗೆ ಬಂಧಿತರಾಗಲು ಅವಕಾಶ ಕೊಟ್ಟಿದ್ದೀರಿ?”
“ಏಕೆಂದರೆ, ಇನ್ನೇನೂ ಮಾಡಲು ಸಾಧ್ಯವಿಲ್ಲ, ಅವರು ಮಹಿಳೆಯರಿಗಿಂತ ಬಲಿಷ್ಟರು.”
“ಸಿಂಹ ಮನುಷ್ಯನಿಗಿಂತ ಶಕ್ತಿಶಾಲಿ. ಆದರೆ ಹಾಗಂದ ಮಾತ್ರಕ್ಕೆ ಅದು ಮಾನವ ಕುಲವನ್ನು ದಬ್ಬಾಳಿಕೆ ಮಾಡುವ ಅಧಿಕಾರ ಹೊಂದಿಲ್ಲ. ನಿಮಗೆ ನೀವು ಮಾಡಿಕೊಳ್ಳಬೇಕಾದ ಕರ್ತವ್ಯಗಳನ್ನು ನಿರ್ಲಕ್ಷಿಸಿದ್ದೀರಿ ಮತ್ತು ನಿಮ್ಮ ಸ್ವಂತ ಹಿತಾಸಕ್ತಿಗಳ ಬಗ್ಗೆ ಕುರುಡರಾಗಿ ನಿಮ್ಮ ಸಹಜ ಹಕ್ಕುಗಳನ್ನು ಕಳೆದುಕೊಂಡಿದ್ದೀರಿ.”
“ಆದರೆ ಪ್ರೀತಿಯ ಸಿಸ್ಟರ್ ಸಾರಾ, ನಾವೇ ಎಲ್ಲವನ್ನೂ ಮಾಡಿದರೆ, ಪುರುಷರೇನು ಮಾಡುವರು?”
“ಅವರು ಏನೂ ಮಾಡಬೇಕಿಲ್ಲ, ಕ್ಷಮಿಸು, ಆದರೆ ಅವರು ಏನೂ ಮಾಡಲು ಲಾಯಕ್ಕಿಲ್ಲ. ಆದ್ದರಿಂದ ಅವರನ್ನು ಹಿಡಿದು ಜೆನಾನದಲ್ಲಿ ಹಾಕಬೇಕು.”
“ಆದರೆ ಅವರನ್ನು ಹಿಡಿದು ನಾಲ್ಕು ಗೋಡೆಗಳ ಮಧ್ಯದಲ್ಲಿ ಹಾಕುವುದು ಅಷ್ಟು ಸುಲಭವೇ?” ಕೇಳಿದೆ ನಾನು. “ಅದನ್ನು ಮಾಡಿದರೂ ಸಹ ಅವರ ಎಲ್ಲಾ ರಾಜಕೀಯ ಮತ್ತು ವ್ಯಾವಹಾರಿಕ ವ್ಯವಹಾರಗಳು ಅವರೊಂದಿಗೆ ಜೆನಾನಾಗೆ ಹೊಗುವುದಿಲ್ಲವೇ?”
ಸಿಸ್ಟರ್ ಸಾರಾ ಏನೂ ಉತ್ತರ ನೀಡಲಿಲ್ಲ. ಅವರು ಕೇವಲ ಮುಗುಳ್ನಕ್ಕರು. ಬಹುಶಃ ಆಕೆಗೆ ಕೂಪಮಂಡೂಕದೊಂದಿಗೆ ವಾದ ಮಾಡುವುದು ಅನುಪಯುಕ್ತ ಎನಿಸಿತೇನೋ.
ಅಷ್ಟರಲ್ಲಿ ನಾವು ಸಿಸ್ಟರ್ ಸಾರಾರವರ ಮನೆ ತಲುಪಿದೆವು. ಅದು ಹೃದಯಾಕಾರದಲ್ಲಿದ್ದ ತೋಟದ ಮಧ್ಯದಲ್ಲಿತ್ತು. ಅದೊಂದು ಬಂಗ್ಲೆ, ಅದಕ್ಕೆ ಕಬ್ಬಿಣದ ಸೂರಿತ್ತು. ನಮ್ಮ ಯಾವುದೇ ಶ್ರೀಮಂತ ಕಟ್ಟಡಗಳಿಗಿಂತ ಅದು ಹೆಚ್ಚು ತಂಪಾಗಿತ್ತು ಮತ್ತು ಚೆನ್ನಾಗಿತ್ತು. ಅದೆಷ್ಟು ವ್ಯವಸ್ಥಿತವಾಗಿತ್ತು, ಎಷ್ಟು ಚೆನ್ನಾಗಿ ವಸ್ತುಗಳನ್ನು ಜೋಡಿಸಲಾಗಿತ್ತು ಮತ್ತು ಸುಂದರವಾಗಿ ಅಲಂಕರಿಸಲಾಗಿತ್ತು ಎನ್ನುವುದನ್ನು ನಾನು ವಿವರಿಸಲಾರೆ.
ನಾವು ಪಕ್ಕಪಕ್ಕದಲ್ಲಿ ಕೂತೆವು. ಅವರು ತಮ್ಮ ಕೊಠಡಿಯಿಂದ ಕಸೂತಿಯೊಂದನ್ನು ಹೊರತೆಗೆದು ಹೊಸ ವಿನ್ಯಾಸ ಮೂಡಿಸಲಾರಂಭಿಸಿದರು.
“ನಿಮಗೆ ನಿಟ್ಟಿಂಗ್ ಮತ್ತು ಹೊಲಿಗೆ ಕೆಲಸ ಗೊತ್ತೆ?” ಕೇಳಿದರು.
“ಹೌದು, ನಮಗೆ ಜೆನಾನದಲ್ಲಿ ಇನ್ನೇನೂ ಮಾಡಲು ಕೆಲಸವಿಲ್ಲವಲ್ಲ.”
“ಆದರೆ ನಾವು ನಮ್ಮ ಜೆನಾನಾ ಸದಸ್ಯರನ್ನು ಕಸೂತಿ ಕೆಲಸದಲ್ಲಿ ಸಹ ನಂಬುವುದಿಲ್ಲ,” ನಗುತ್ತಾ ಹೇಳಿದರಾಕೆ, “ಯಾವ ಪುರುಷನಿಗೂ ಸೂಜಿಯ ತೂತಿನಲ್ಲಿ ದಾರವನ್ನು ಹಾಕುವ ತಾಳ್ಮೆಯಿಲ್ಲ.”
“ಇದೆಲ್ಲ ಕೆಲಸವನ್ನು ನೀವೇ ಮಾಡಿದಿರಾ?” ಕೇಳಿದೆ ನಾನಾಕೆಯನ್ನು ಟೀಪಾಯ್ ಗಳ ಮೇಲಿದ್ದ ಹಾಸುಗಳ ಮೇಲಿನ ವಿವಿಧ ವಿನ್ಯಾಸಗಳನ್ನು ತೋರಿಸಿ.
“ಹೌದು.”
“ನಿಮಗೆ ಇದೆಲ್ಲದಕ್ಕೂ ಸಮಯವೆಲ್ಲಿ ಸಿಗುತ್ತದೆ? ನೀವು ಕಛೇರಿ ಕೆಲಸವನ್ನೂ ಮಾಡಬೇಕು? ಅಲ್ಲವೇ?”
“ನಾನು ನನ್ನ ಪ್ರಯೋಗಾಲಯದಲ್ಲಿ ಇಡೀ ದಿನ ಇರುವುದಿಲ್ಲ. ನನ್ನ ಕೆಲಸವನ್ನು ೨ ಘಂಟೆಗಳಲ್ಲಿ ಮುಗಿಸುತ್ತೇನೆ.”
“೨ ಘಂಟೆಗಳಲ್ಲಿ? ಹೇಗೆ ನಿರ್ವಹಿಸುತ್ತೀರಿ? ನಮ್ಮ ನಾಡಿನಲ್ಲಿ ಅಧಿಕಾರಿಗಳು, ಮ್ಯಾಜಿಸ್ಟ್ರೇಟರು – ಎಲ್ಲರೂ ೭ ಘಂಟೆಗಳ ಕಾಲ ಕೆಲಸ ಮಾಡುತ್ತಾರೆ.
“ನಾನು ಕೆಲವರು ಕೆಲಸ ಮಾಡುವುದನ್ನು ನೋಡಿದ್ದೇನೆ. ಅವರು ಆ ಎಲ್ಲಾ ೭ ಘಂಟೆಗಳ ಕಾಲ ಕೆಲಸ ಮಾಡುತ್ತೀರೆಂದು ನೀನು ಭಾವಿಸುತ್ತೀಯಾ?
“ಖಂಡಿತವಾಗಿಯೂ ಮಾಡುತ್ತಾರೆ.”
“ಖಚಿತವಾಗಿಯೂ ಇಲ್ಲ, ಸುಲ್ತಾನ, ಮಾಡುವುದಿಲ್ಲ. ಅವರು ತಮ್ಮ ಸಮಯವನ್ನು ಸಿಗರೇಟು ಸೇದುವುದರಲ್ಲಿ ಕಳೆಯುತ್ತಾರೆ. ಕೆಲವರು ಆಫೀಸ್ ವೇಳೆಯಲ್ಲಿ ೨-೩ ಚುಟ್ಟಾಗಳನ್ನು ಸೇದುತ್ತಾರೆ. ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಆದರೆ ಬಹಳ ಕಡಿಮೆ ಕೆಲಸ ಮಾಡುತ್ತಾರೆ. ಒಂದು ವೇಳೆ ಒಂದು ಚುಟ್ಟಾ ಸುಡಲು ೧/೨ ಘಂಟೆ ಬೇಕಾದರೆ, ಒಬ್ಬ ವ್ಯಕ್ತಿ ೧೨ ಚುಟ್ಟಾಗಳನ್ನು ಸೇದಿದರೆ, ಆಗ ೬ ಘಂಟೇಗಳು ಅವನಿಗೆ ಅದಕ್ಕೆ ಬೇಕಾಗುತ್ತದೆ.”
ನಾವು ವಿಭಿನ್ನ ವಿಷಯಗಳ ಬಗ್ಗೆ ಮಾತನಾಡಿದೆವು. ಅವರು ಯಾವುದೇ ಸಾಂಕ್ರಾಮಿಕ ರೋಗಕ್ಕೆ ಒಳಗಾಗಿಲ್ಲ, ಅಥವಾ ನಮ್ಮಂತೆ ಸೊಳ್ಳೆ ಕಡಿತಕ್ಕೆ ಒಳಗಾಗಿಲ್ಲ ಎಂದು ತಿಳಿಯಿತು. ಆ ಸ್ತ್ರೀನಾಡಿನಲ್ಲಿ ಅಪರೂಪದ ಅಪಘಾತ ಬಿಟ್ಟರೆ ಯಾರೂ ಸಹ ತಮ್ಮ ಯೌವನದಲ್ಲಿ ಮರಣಹೊಂದುವುದಿಲ್ಲ ಎಂದು ತಿಳಿದು ಆಶ್ಚರ್ಯವಾಯಿತು.
“ನಮ್ಮ ಅಡಿಗೆ ಮನೆ ನೊಡುತ್ತೀಯಾ?” ಕೇಳಿದರಾಕೆ.
“ಹೌದು, ಖುಷಿಯಿಂದ” ಎಂದೇ ನಾನು. ಅಲ್ಲಿ ನೋಡಲು ಹೋದೆವು. ನಾನು ಹೋಗುವಷ್ಟರಲ್ಲಿ ಅಲ್ಲಿದ್ದ ಪುರುಷರಿಗೆ ಅಲ್ಲಿಂದ ತೆರಳಲು ಹೇಳಲಾಗಿತ್ತು. ಅಡಿಗೆ ಮನೆಯೂ ಸಹ ಸುಂದರವಾದ ತರಕಾರಿ ತೋಟದಲ್ಲಿತ್ತು. ಪ್ರತಿಯೊಂದು ಬಳ್ಳಿ, ಪ್ರತಿಯೊಂದು ಟೊಮೆಟೊ ಗಿಡವೂ ಸಹ ಅಲಂಕಾರಿಕವಾಗಿತ್ತು. ಅಲ್ಲಿ ನನಗೆ ಹೊಗೆಯಾಗಲಿ, ಚಿಮಣಿಯಾಗಲಿ ಕಾಣಿಸಲಿಲ್ಲ. ಅದು ಸ್ವಚ್ಛವಾಗಿತ್ತು ಮತ್ತು ಹೊಳೆಯುತ್ತಿತ್ತು. ಕಿಟಕಿಗಳನ್ನು ಹೂತೋಟಗಳಿಂದ ಅಲಂಕರಿಸಲಾಗಿತ್ತು. ಅಲ್ಲೆಲ್ಲೂ ಕಲ್ಲಿದ್ದಲಾಗಲಿ ಅಥವಾ ಬೆಂಕಿಯಾಗಲಿ ಕಾಣಿಸಲಿಲ್ಲ.
“ನೀವು ಅಡಿಗೆ ಹೇಗೆ ಮಾಡುವಿರಿ, ಕೇಳಿದೆ ನಾನು.
“ಸೌರಶಕ್ತಿಯಿಂದ” ನನಗೊಂದು ಪೈಪ್ ತೋರಿಸುತ್ತಾ, “ಅದರಿಂದ ಕೇಂದ್ರೀಕೃತ ಸೂರ್ಯಕಿರಣ ಮತ್ತು ಶಾಖ ಬರುತ್ತದೆ” ಎಂದು ಅದನ್ನು ತೋರಿಸಿದರು.
“ನೀವು ಸೂರ್ಯನ ಶಾಖವನ್ನು ಹಿಡಿದಿಡಲು ಹೇಗೆ ಸಾಧ್ಯವಾಯಿತು?” ಆಶ್ಚರ್ಯದಿಂದ ಕೇಳಿದೆ ನಾನು.
“ಹಾಗಿದ್ದರೆ, ನಾನು ನಿನಗೆ ಸ್ವಲ್ಪ ಇತಿಹಾಸವನ್ನು ಹೇಳಬೇಕು. ೩೦ ವರ್ಷಗಳ ಹಿಂದೆ ನಮ್ಮ ಇಂದಿನ ರಾಣಿ ೧೩ ವರ್ಷದವರಿದ್ದಾಗ ಸಿಂಹಾಸನ ಅವರಿಗೆ ದೊರೆಯಿತು. ಆದರೆ ಅದು ಹೆಸರಿಗೆ ಮಾತ್ರ. ಪ್ರಧಾನಮಂತ್ರಿ ನಿಜಾವಾಗಲೂ ದೇಶವನ್ನು ಆಳುತ್ತಿದ್ದನು.”
“ನಮ್ಮ ರಾಣಿಗೆ ವಿಜ್ಞಾನ ಬಹಳ ಇಷ್ಟವಿತ್ತು. ತನ್ನ ದೇಶದಲ್ಲಿ ಎಲ್ಲ ಹೆಣ್ಣುಮಕ್ಕಳು ಓದಬೇಕೆಂದು ಸುತ್ತೋಲೆ ಕಳಿಸಿದರು. ಅದರಂತೆಯೇ ಸಾಕಷ್ಟು ಹೆಣ್ಣುಮಕ್ಕಳ ಶಾಲೆಗಳನ್ನು ತೆರೆಯಲಾಯಿತು ಮತ್ತು ಅವೆಲ್ಲವೂ ಸರ್ಕಾರದಿಂದ ಬೆಂಬಲಿಸಲ್ಪಟ್ಟವು. ಎಲ್ಲರಿಗೂ ಶಿಕ್ಷಣವನ್ನು ನೀಡಲಾಯಿತು. ಬಾಲ್ಯ ವಿವಾಹವನ್ನು ನಿಲ್ಲಿಸಲಾಯಿತು. ೨೧ ವರ್ಷದವರೆಗೆ ಯಾವ ಹೆಣ್ಣು ಮಗಳೂ ಮದುವೆ ಮಾಡಿಕೊಳ್ಳುವಂತಿರಲಿಲ್ಲ. ಅದಕ್ಕೂ ಮೊದಲು ನಮ್ಮನ್ನು ಬಿಗಿ ಪರ್ದಾ ವ್ಯವಸ್ಥೆಯಲ್ಲಿಡಲಾಗಿತ್ತು.”
“ಹೇಗೆ ವ್ಯವಸ್ಥೆ ಬದಲಾಗಿಬಿಟ್ಟಿದೆ” ನಾನು ಮಧ್ಯಪ್ರವೇಶಿಸಿದೆ ನಗುತ್ತಾ.
“ಆದರೆ ಬೇರೆ ಬೇರೆ ಎನ್ನುವುದು ಮಾತ್ರ ಹಾಗೆಯೇ ಉಳಿದುಕೊಂಡಿದೆ. ಕೆಲವೇ ವರ್ಷಗಳಲ್ಲಿ ನಮಗೇ ಬೇರೆಯ ವಿಶ್ವವಿದ್ಯಾನಿಲಯಗಳಿದ್ದವು, ಪುರುಷರಿಗೆ ಅಲ್ಲಿ ಅವಕಾಶವಿರಲಿಲ್ಲ.”
“ರಾಣೀ ವಾಸಿಸುವ ರಾಜಧಾನಿಯಲ್ಲಿ ಎರಡು ವಿಶ್ವವಿದ್ಯಾನಿಲಯಗಳಿವೆ. ಅದರಲ್ಲೊಂದು ಅದ್ಭುತವಾದ ಬಲೂನ್ ಕಂಡುಹಿಡಿಯಿತು, ಅದಕ್ಕೆ ಹಲವಾರು ಪೈಪ್ ಗಳನ್ನು ಜೋಡಿಸಬಹುದಿತ್ತು. ಈ ಬಲೂನ್ ಮೂಲಕ ಅವರು ಮೋಡಗಳ ಮಧ್ಯೆ ಚಲಿಸಿ, ತಮಗೆ ಇಷ್ಟ ಬಂದಷ್ಟು ನೀರನ್ನು ಸಂಗ್ರಹಿಸಬಹುದಿತ್ತು. ಇದನ್ನು ನಿರಂತರವಾಗಿ ಅವರು ಮಾಡುತ್ತಿದ್ದುದ್ದರಿಂದ ಅಲ್ಲಿ ಮೋಡಗಳೇ ಇರುತ್ತಿರಲಿಲ್ಲ, ಮಳೆ ಪ್ರವಾಹವೂ ನಿಂತುಹೋಯಿತು. ಅಲ್ಲಿನ ಮಹಿಳಾ ಪ್ರಾಂಶುಪಾಲೆಯಿಂದ.”
“ನಿಜವಾಗಿಯೂ? ಈಗ ನನಗೆ ಅರ್ಥವಾಯಿತು, ಇಲ್ಲಿ ಮಣ್ಣು ಏಕಿಲ್ಲ ಎಂದು” ಎಂದೆ ನಾನು. “ಆದರೆ ಪೈಪ್ ಗಳ ಮೂಲಕ ನೀರನ್ನು ಹೇಗೆ ಸಂಗ್ರಹಿಸಬಹುದು ಎಂಬುದು ನನಗೆ ಅರ್ಥವಾಗಿಲ್ಲ?” ಅವರು ನನಗೆ ವಿವರಿಸಿದರು. ಆದರೆ ನನಗೆ ಅರ್ಥವಾಗಲಿಲ್ಲ ಏಕೆಂದರೆ ನನ್ನ ವೈಜ್ಞಾನಿಕ ಜ್ಞಾನ ಮಿತವಾಗಿತ್ತು. ಆದರೆ ಅವರು ಮುಂದುವರೆಸಿದರು. “ಇದರ ಬಗ್ಗೆ ಇನ್ನೊಂದು ವಿಶ್ವವಿದ್ಯಾನಿಲಯಕ್ಕೆ ಗೊತ್ತಾದಾಗ, ಅವರು ಇದಕ್ಕಿಂತ ಅದ್ಭುತವಾದದ್ದನ್ನು ಮಾಡಲು ಹೊರಟರು. ಅವರೊಂದು ಸಾಧನವನ್ನು ಕಂಡುಹಿಡಿದರು. ಅದರಲ್ಲಿ ತಮಗಿಷ್ಟ ಬಂದಷ್ಟು ಸೂರ್ಯಶಾಖವನ್ನು ಹಿಡಿದಿಟ್ಟುಕೊಳ್ಳಬಹುದಿತ್ತು. ಯಾರಿಗೆ ಯಾವಾಗ ಬೇಕಾದರೂ ಅದನ್ನು ಹಂಚುತ್ತಿದ್ದರು.”
“ಸ್ತ್ರೀಯರು ಹೀಗೆ ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿರುವಾಗ, ಈ ದೇಶದ ಪುರುಷರು ತಮ್ಮ ಮಿಲಿಟರಿ ಶಕ್ತಿ ಹೆಚ್ಚಿಸಿಕೊಳ್ಳಲು ಶ್ರಮಿಸುತ್ತಿದ್ದರು. ಅವರಿಗೆ ಮಹಿಳಾ ವಿವಿಗಳು ಈ ರೀತಿ ಮಾಡುತ್ತಿದ್ದಾರೆ ಎಂದಾಗ, ನಕ್ಕುಬಿಟ್ಟು ಇಡೀ ವಿಷಯವನ್ನು ಭಾವನಾತ್ಮಕವಾದ ಭಯಾನಕ ಕನಸುಗಳು ಎಂದರು.
“ನಿಮ್ಮ ಸಾಧನೆಗಳು ನಿಜಕ್ಕೂ ಅದ್ಭುತವಾಗಿವೆ. ಆದರೆ ನಿಮ್ಮ ದೇಶದ ಪುರುಷರನ್ನು ಜೆನಾನಾದಲ್ಲಿ ಹಾಕಲು ಹೇಗೆ ಸಾಧ್ಯವಾಯಿತು, ಅದನ್ನು ಹೇಳಿ, ಮೊದಲು ಅವರನ್ನು ಬಂಧಿಸಿದಿರೇ?”
“ಇಲ್ಲ.”
“ಅವರು ತಮ್ಮಷ್ಟಕ್ಕೆ ಶರಣಾಗತರಾಗಿ, ತಮ್ಮ ಮುಕ್ತ ಜೀವನವನ್ನು ಬಿಟ್ಟುಕೊಟ್ಟು ಬಂಧಿತರಾಗಲು, ಜೆನಾನದ ನಾಲ್ಕುಗೋಡೆಗಳ ಮಧ್ಯೆಯಲ್ಲಿ ಇರಲು ಸಾಧ್ಯವಿಲ್ಲ. ಅವರನ್ನು ನೀವು ಬಲದಿಂದ ಬಂಧಿಸಿರಬೇಕು.”
“ಹೌದು, ಹಾಗೆಯೇ ನಡೆದದ್ದು.”
“ಹೌದೇ ಯಾರಿಂದ, ಸ್ತ್ರೀ ಯೋಧರಿಂದ?”
“ಇಲ್ಲ, ಶಸ್ತ್ರಾಸ್ತ್ರಗಳಿಂದಲ್ಲ.”
 “ಹೌದು, ಏಕೆಂದರೆ ಅವರ ಶಸ್ತ್ರಾಸ್ತ್ರಗಳು ಮಹಿಳೆಯರದ್ದಕ್ಕಿಂತ ಬಲಿಷ್ಟವಾಗಿವೆ, ಮತ್ತೆ?”
“ಬುದ್ಧಿಶಕ್ತಿಯಿಂದ.”
“ಆದರೆ ಅವರ ಮೆದುಳು ಮಹಿಳೆಯರದ್ದಕ್ಕಿಂತ ಹೆಚ್ಚು ದೊಡ್ಡದಾಗಿ, ತೂಕದ್ದಾಗಿದೆ. ಅಲ್ಲವೇ?”
“ಹೌದು. ಆದರೆ ಅದರಿಂದೇನು? ಆನೆಗೂ ಸಹ ಮನುಷ್ಯನದ್ದಕ್ಕಿಂತ ತೂಕವಾದ ಮೆದುಳಿದೆ. ಆದರೆ ಪುರುಷ ಆ ಆನೆಗಳನ್ನು ಸಂಕೋಲೆಗಳಿಂದ ಬಂಧಿಸಿ, ತನ್ನಿಚ್ಛೆಯ ಪ್ರಕಾರ ಉಪಯೋಗಿಸಬಲ್ಲ.”
“ಸರಿಯಾಗಿ ಹೇಳಿದಿರಿ, ಆದರೆ ದಯಮಾಡಿ ಇದನ್ನು ಹೇಳಿ. ಇದೆಲ್ಲ ಹೇಗೆ ಸಾಧ್ಯವಾಯಿತು. ನನಗೆ ಕುತೂಹಲವನ್ನು ತಡೆಯಲಾಗುತ್ತಿಲ್ಲ.”
“ಸ್ತ್ರೀಯರ ಮೆದುಳು ಪುರುಷರಿಗಿಂತ ಚುರುಕಾಗಿದೆ. ಹತ್ತು ವರ್ಷಗಳ ಹಿಂದೆ ಮಿಲಿಟರಿ ಅಧಿಕಾರಿಗಳೂ ನಮ್ಮ ಆವಿಷ್ಕಾರಗಳನ್ನು ಭಾವನಾತ್ಮಕವಾದ ಭಯಾನಕ ಕನಸುಗಳು ಎಂದು ಕರೆದಾಗ, ನಮ್ಮ ಕೆಲವು ಯುವತಿಯರು ಅದಕ್ಕೆ ಪ್ರತಿಯಾಗಿ ಮಾತನಾಡಬೇಕೆಂದಿದ್ದರು. ಆದರೆ ಇಬ್ಬರೂ ಮಹಿಳಾ ಪ್ರಾಂಶುಪಾಲರು ಅವರನ್ನು ತಡೆದು ಹೇಳಿದರು, ‘ನಿಮಗೆ ಅವಕಾಶ ಸಿಕ್ಕಿದಾಗ ಮಾತಿನಿಂದಲ್ಲದೆ ಕೃತಿಯಿಂದ ಉತ್ತರ ಹೇಳಿ’ ಎಂದಿದ್ದರು.”
“ಅದ್ಭುತ” ನಾನು ನನ್ನ ಎರಡು ಕೈಗಳಿಂದ ಚಪ್ಪಾಳೆ ಹೊಡೆದೆ. “ಈಗ ಆ ಅಹಂಕಾರಿ ಪುರುಷರು ತಾವೇ ಭಾವನಾತ್ಮಕವಾದ ಭಯಾನಕ ಕನಸುಗಳನ್ನು ಕಾಣುತ್ತಿದ್ದಾರೆ.”
“ಇದಾದ ನಂತರ ನೆರೆ ರಾಷ್ಟ್ರದಿಂದ ಕೆಲವು ವ್ಯಕ್ತಿಗಳು ಬಂದು ನಮ್ಮಲ್ಲಿ ಆಶ್ರಯ ಪಡೆದರು. ಏನೋ ರಾಜಕೀಯ ಅಪರಾಧ ಮಾಡಿ ಸಂಕಷ್ಟದಲ್ಲಿದ್ದರು. ಉತ್ತಮ ಸರ್ಕಾರಕ್ಕಿಂತ ಅಧಿಕಾರಕ್ಕೆ ಹೆಚ್ಚು ಒತ್ತು ಕೊಟ್ಟ ಆ ರಾಜ, , ನಮ್ಮ ಕರುಣಾಳು ರಾಣಿಯನ್ನು ಅವನ ಅಧಿಕಾರಿಗಳನ್ನು ಒಪ್ಪಿಸುವಂತೆ ಕೇಳಿದ. ಆದರೆ ಆಕೆ ತಿರಸ್ಕರಿಸಿದರು. ಏಕೆಂದರೆ ಆಶ್ರಯ ಕೇಳಿಕೊಂಡು ಬಂದವರನ್ನು ಹಿಂದಿರುಗಿಸುವುದು ಆಕೆಯ ತತ್ವಕ್ಕೆ ವಿರುದ್ಧವಾಗಿತ್ತು. ಈ ತಿರಸ್ಕಾರದಿಂದ ಆ ರಾಜ ನಮ್ಮ ದೇಶದ ಮೇಲೆ ಯುದ್ಧ ಸಾರಿದ.”
“ನಮ್ಮ ಮಿಲಿಟರಿ ಅಧಿಕಾರಿಗಳು ತಕ್ಷಣ ಕಾರ್ಯಾಚರಣೆಗೆ ಇಳಿದು, ಶತ್ರುವಿನ ವಿರುದ್ಧ ದಂಡೆತ್ತಿ ಹೋದರು. ಆದರೆ ಶತ್ರು ತುಂಬ ಬಲಿಷ್ಟವಾಗಿದ್ದ. ನಮ್ಮ ಸೈನಿಕರು ದಿಟ್ಟತನದಿಂದ ಹೋರಾಡಿದರು, ನಿಜ. ಆದರೆ ಅದೆಲ್ಲ ಸಾಹಸದ ನಡುವೆಯೂ ವಿದೇಶಿ ಸೈನ್ಯ ನಮ್ಮ ದೇಶವನ್ನು ಆಕ್ರಮಿಸುತ್ತಾ ಸಾಗಿತು.”
“ಬಹುತೇಕ ಎಲ್ಲ ಪುರುಷರು ಹೋರಾಡಲು ಹೋಗಿದ್ದರು. 16 ವರ್ಷದ ಹುಡುಗನನ್ನೂ ಸಹ ಮನೆಯಲ್ಲಿ ಬಿಟ್ಟಿರಲಿಲ್ಲ. ನಮ್ಮ ಬಹುತೇಕ ಯೋಧರನ್ನು ಕೊಲ್ಲಲಾಯಿತು, ಉಳಿದವರನ್ನು ಹಿಂದಕ್ಕೆ ಓಡಿಸಲಾಯಿತು. ಶತ್ರು ನಮ್ಮ ರಾಜಧಾನಿಗೆ 25 ಕಿ.ಮೀ ಹತ್ತಿರ ಬಂದುಬಿಟ್ಟ.”
“ದೇಶವನ್ನು ಉಳಿಸಲು ಏನು ಮಾಡಬಹುದೆಂಬುದರ ಬಗ್ಗೆ ಸಲಹೆ ನೀಡಲು, ರಾಣಿಯ ಅರಮನೆಯಲ್ಲಿ ಸಾಕಷ್ಟು ವಿವೇಕಿ ಮಹಿಳೆಯರ ಸಭೆ ನಡೆಯಿತು. ಕೆಲವರು ತಾವೂ ಯೋಧರಂತೆ ಹೋರಾಡುತ್ತೇವೆ ಎಂದರು. ಆದರೆ ಉಳಿದವರು ಅದನ್ನು ವಿರೋಧಿಸಿದರು. ಏಕೆಂದರೆ ಹೆಣ್ಣುಮಕ್ಕಳಿಗೆ ಯುದ್ಧದಲ್ಲಿ ಹೋರಾಡುವ ಅಭ್ಯಾಸವಿರಲಿಲ್ಲ, ಅಥವಾ ಕತ್ತಿ, ಬಂದೂಕುಗಳನ್ನು ಬಳಸುವ ತರಬೇತಿ ನೀಡಿರಲಿಲ್ಲ. ಇನ್ನೊಂದು ಗುಂಪು ತಾವು ಬಲಹೀನ ಗುಂಪೆಂದು ಅಂಗೀಕರಿಸಿತು.” “ದೈಹಿಕ ಶಕ್ತಿಯ ಕಾರಣದಿಂದ ನಾವು ನಮ್ಮ ದೇಶವನ್ನು ಉಳಿಸಲಾಗದಿದ್ದರೆ, ಮೆದುಳಿನ ಶಕ್ತಿಯಿಂದಲಾದರೂ ಪ್ರಯತ್ನಿಸಿ ಎಂದರು ಮಹಾರಾಣಿ.
“ಕೆಲವು ನಿಮಿಷಗಳ ಕಾಲ ಮೌನ ಆವರಿಸಿತು. ಮತ್ತೆ ಮಹಾರಾಣಿ ಹೇಳಿದರು, “ನನ್ನ ನೆಲ ಮತ್ತು ಗೌರವ ಕಳೆದುಹೋದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಷ್ಟೇ” ಎಂದರು.
“ಅಲ್ಲಿಯವರೆಗೆ ಮೌನವಾಗಿ ಆಲೋಚಿಸುತ್ತಿದ್ದ ಎರಡನೆಯ ವಿವಿಯ ಪ್ರಾಂಶುಪಾಲೆ ಎದ್ದುನಿಂತು (ಸೂರ್ಯಶಾಖ ಸಂಗ್ರಹಿಸಿದ್ದವರು) ಹೇಳಿದರು, ‘ಹೌದು ಎಲ್ಲವೂ ಕಳೆದುಹೋಗಿದೆ, ಆದರೆ ಇನ್ನೂ ಸ್ವಲ್ಪ ಆಶಾಕಿರಣವಿದೆ. ಒಂದು ಯೋಜನೆಯನ್ನು ಪ್ರಯತ್ನಿಸುತ್ತೇನೆ. ಅದು ನನ್ನ ಮೊದಲ ಮತ್ತು ಕಡೆಯ ಪ್ರಯತ್ನವಾಗಿರುತ್ತದೆ. ಅದರಲ್ಲಿ ವಿಫಲವಾದರೆ ಆತ್ಮಹತ್ಯೆಯನ್ನುಳಿದು ಇನ್ನೇನೂ ದಾರಿಯಿರುವುದಿಲ್ಲ’ ಎಂದರು. ಏನೇ ಆದರೂ ತಾವುಗಳ್ಯಾರೂ ಗುಲಾಮರಾಗುವುದಿಲ್ಲವೆಂದು ಪ್ರತಿಜ್ಞೆ ಕೈಗೊಂಡರು.”
“ರಾಣಿ ಎಲ್ಲರಿಗೂ ಮನಃಪೂರ್ವಕವಾಗಿ ವಂದನೆಗಳನ್ನು ತಿಳಿಸಿ, ಪ್ರಾಂಶುಪಾಲೆಗೆ ತಮ್ಮ ಯೋಜನೆಯನ್ನು ಜಾರಿಗೊಳಿಸಲು ಹೇಳಿದರು. ಪ್ರಾಂಶುಪಾಲೆ ಎದ್ದು ನಿಂತು ಹೇಳಿದರು: ‘ನಾವು ಹೊರಹೋಗುವ ಮುನ್ನ ಪುರುಷರು ಜೆನಾನಗಳನ್ನು ಪ್ರವೇಶಿಸಬೇಕು. ಪರ್ದಾ ವ್ಯವಸ್ಥೆಯ ಕಾರಣದಿಂದ ನಾನು ಇದನ್ನು ಕೋರುತ್ತಿದ್ದೇನೆ’ ಎಂದರು. “ಹೌದು ಖಂಡಿತವಾಗಿ” ಎಂದರು ಮಹಾರಾಣಿಯವರು.”
“ಮರುದಿನ ರಾಣಿ ಎಲ್ಲಾ ಪುರುಷರನ್ನು ಕರೆದು, ದೇಶದ ಗೌರವ ಮತ್ತು ಸ್ವಾತಂತ್ರ್ಯಕ್ಕಾಗಿ ಅವರೆಲ್ಲ ಜೆನಾನಗಳಿಗೆ ಹೋಗಬೇಕೆಂದು ಹೇಳಿದರು. ಗಾಯಗೊಂಡು, ಸುಸ್ತಾದ ಅವರೆಲ್ಲ ಈ ಆದೇಶವನ್ನು ವರವೆಂಬಂತೆ ಪರಿಗಣಿಸಿದರು. ತಲೆಬಾಗಿಸಿ, ಏನೂ ಪ್ರತಿಭಟನೆಯಿಲ್ಲದೆ ಜೆನಾನಾಗಳನ್ನು ಪ್ರವೇಶಿಸಿದರು. ಈ ದೇಶಕ್ಕೆ ಇನ್ನೇನೂ ಭರವಸೆ ಇಲ್ಲವೆಂಬುದು ಅವರೆಲ್ಲರ ನಂಬಿಕೆಯಾಗಿತ್ತು.”
“ನಂತರ ಆ ಪ್ರಾಂಶುಪಾಲೆ ತಮ್ಮ 2000 ವಿದ್ಯಾರ್ಥಿನಿಯರೊಂದಿಗೆ ರಣರಂಗಕ್ಕೆ ತೆರಳಿದರು ಮತ್ತು ಅಲ್ಲಿ ಹೋದ ಮೇಲೆ ಎಲ್ಲಾ ಸೂರ್ಯಕಿರಣಗಳನ್ನು ಒಂದೆಡೆ ಕ್ರೋಢಿಕರಿಸಿ, ಆ ಸೂರ್ಯಕಿರಣದ ಶಾಖ ಶತ್ರುಗಳ ಮೇಲೆ ಬೀಳುವಂತೆ ಮಾಡಿದರು. ಬಿಸಿ ಮತ್ತು ಬೆಳಕು ತೀಕ್ಷ್ಣವಾಗಿತ್ತು, ಶತ್ರುಗಳಿಗೆ ತಡೆಯಲು ಸಾಧ್ಯವಾಗದಷ್ಟು. ಅವರಿಗೆ ಇದನ್ನು ಹೇಗೆ ಎದುರಿಸಬೇಕೆಂದು ಅರ್ಥವೇ ಆಗಲಿಲ್ಲ. ಭಯಭೀತರಾಗಿ ತಮ್ಮ ಶಸ್ತ್ರಾಸ್ತ್ರಗಳನ್ನು ಅಲ್ಲೆ ಬಿಟ್ಟು ಎಲ್ಲರೂ ದಿಕ್ಕಾಪಾಲಾಗಿ ಓಡಿದರು. ಆ ಶಸ್ತ್ರಾಸ್ತ್ರಗಳನ್ನು ಅದೇ ಶಾಖದಿಂದಲೇ ಸುಡಲಾಯಿತು. ಅದಾದ ನಂತರ ಬೇರೆ ಯಾರೂ ನಮ್ಮ ದೇಶದ ಮೇಲೆ ದಾಳಿ ನಡೆಸಲು ಪ್ರಯತ್ನಿಸಿಲ್ಲ.”
“ಅದಾದ ನಂತರ ನಿಮ್ಮ ದೇಶದ ಪುರುಷರು ಜೆನಾನಾದಿಂದ ಹೊರಬರಲು ಪ್ರಯತ್ನಿಸಿಲ್ಲವೇ?”
“ಹೌದು, ಅವರಿಗೆ ಸ್ವತಂತ್ರರಾಗಬೇಕಿತ್ತು. ಕೆಲವು 
ಪೊಲೀಸ್ ಕಮಿಷನರ್‍ಗಳು, ಜಿಲ್ಲಾ ಮ್ಯಾಜಿಸ್ಟ್ರೇಟ್‍ಗಳು ರಾಣಿಗೆ ಹೇಳಿಕಳಿಸಿದರು. ಮಿಲಿಟರಿ ಅಧಿಕಾರಿಗಳನ್ನು ಅವರ ವಿಫಲತೆಗೆ ಖಂಡಿತವಾಗಿ ಬಂಧಿಸಬೇಕು, ಆದರೆ ಅವರು ತಮ್ಮ ಕರ್ತವ್ಯವನ್ನು ನಿರ್ಲಕ್ಷಿಸಿಲ್ಲ, ಆದ್ದರಿಂದ ಅವರನ್ನು ಶಿಕ್ಷಿಸಬಾರದು ಮತ್ತು ಅವರ ಅಧಿಕಾರಗಳನ್ನು ಪುನಃ ನೀಡಬೇಕೆಂದು.”
“ಮಹಾರಾಣಿಯವರು, ಒಂದು ಸುತ್ತೋಲೆಯನ್ನು ಕಳಿಸಿದರು. ಅವರ ಸೇವೆಗಳು ಬೇಕಾದಾಗ ಪುನಃ ಅವರನ್ನು ಕರೆಸಿಕೊಳ್ಳುತ್ತೇವೆ, ಅಲ್ಲಿಯವರೆಗೆ ಅವರು ಎಲ್ಲಿದ್ದಾರೋ ಅಲ್ಲಿಯೇ ಇರಬೇಕೆಂದು. ಈಗ ಅವರು ಪರ್ದಾ ವ್ಯವಸ್ಥೆಗೆ ಒಗ್ಗಿಹೋಗಿದ್ದಾರೆ ಮತ್ತು ಬೇರ್ಪಡಿಸಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸುವುದನ್ನು ಬಿಟ್ಟಿದ್ದಾರೆ. ನಾವು ಈ ವ್ಯವಸ್ಥೆಯನ್ನು ಜೆನಾನಾ ಎನ್ನುವ ಬದಲು ಮರ್ದಾನಾ ಎನ್ನುತ್ತೇವೆ.”
“ಆದರೆ ಕಳ್ಳತನ ಮತ್ತು ಕೊಲೆಯಂತಹ ಸಮಯದಲ್ಲಿ 
ಪೊಲೀಸ್ ಮತ್ತು ಮ್ಯಾಜಿಸ್ಟ್ರೇಟ್ ಇಲ್ಲದೆ ನೀವು ಹೇಗೆ ನಿಭಾಯಿಸುವಿರಿ?” ಕೇಳಿದೆ ಸಿಸ್ಟರ್ ಸಾರಾರವರನ್ನು. “ಮರ್ದಾನಾ ವ್ಯವಸ್ಥೆ ಸ್ಥಾಪಿಸಿದ ನಂತರ ಇಲ್ಲಿ ಅಪರಾಧಗಳಿಲ್ಲ. ಆದ್ದರಿಂದ ನಮಗೆ ಅಪರಾಧಿ ಯಾರೆಂದು ಹುಡುಕಲು ಪೊಲೀಸ್ ಬೇಕಿಲ್ಲ, ಅದರ ವಿಚಾರಣೆ ನಡೆಸಲು ಮ್ಯಾಜಿಸ್ಟ್ರೇಟ್ ಬೇಕಿಲ್ಲ.”
“ಅದು ನಿಜಕ್ಕೂ ಒಳ್ಳೆಯದು. ಯಾರಾದರೂ ಅಪ್ರಮಾಣಿಕ ವ್ಯಕ್ತಿಯಿದ್ದರೆ, ನೀವು ಆಕೆಯನ್ನು ಸುಲಭವಾಗಿ ಶಿಕ್ಷಿಸಬಹುದು. ನೀವು ಒಂದು ಬಿಂದು ರಕ್ತವನ್ನೂ ಹರಿಸದೆ ನಿರ್ಣಾಯಕ ಜಯ ಗಳಿಸಿರುವುದರಿಂದ, ನೀವು ಅಪರಾಧ ಮತ್ತು ಅಪರಾಧಿಗಳನ್ನೂ ಸಹ ಹೆಚ್ಚು ಶ್ರಮವಿಲ್ಲದೆ ಓಡಿಸಲು ಸಾಧ್ಯವಾಗಿದೆ.”
“ಈಗ ಪ್ರೀತಿಯ ಸುಲ್ತಾನಾ, ಇಲ್ಲೇ ಕುಳಿತಿರುವಿರೋ ಅಥವಾ ನನ್ನ ಪಾರ್ಲರ್ ಗೆ ಬರುವಿರೋ?” ನನ್ನನ್ನು ಕೇಳಿದರು.
“ನಿಮ್ಮ ಅಡಿಗೆ ಮನೆ ರಾಣಿಯದ್ದಕ್ಕಿಂತ ಏನೂ ಕಡಿಮೆಯಿಲ್ಲ” ಹೇಳಿದೆ ನಾನು ನಸುನಗುತ್ತಾ, “ಆದರೆ ಈಗ ಇದನ್ನು ಬಿಡೋಣ, ಏಕೆಂದರೆ ಪುರುಷರು ತಮ್ಮ ಕೆಲಸಗಳಿಗೆ ನಾವು ಅಡ್ಡಬಂದಿದ್ದೇವೆ ಎಂದು ಶಪಿಸುತ್ತಿರುತ್ತಾರೆ.” ನಾವಿಬ್ಬರೂ ಮನಸಾರೆ ನಕ್ಕೆವು.
“ಊರಿನಲ್ಲಿ, ನಾನು ಹಿಂತಿರುಗಿ ಹೋಗಿ ಅವರಿಗೆ ನಾನು ದೂರದ ಸ್ತ್ರೀ ನಾಡಿಗೆ ಹೋಗಿದ್ದೆ, ಅಲ್ಲಿ ದೇಶವನ್ನು ಸ್ತ್ರೀಯರೇ ಆಳುತ್ತಾರೆ ಮತ್ತು ಎಲ್ಲಾ ಸಾಮಾಜಿಕ ವಿಷಯಗಳನ್ನು ನಿಯಂತ್ರಿಸುತ್ತಾರೆ ಎಂದು, ಪುರುಷರು ಮರ್ದಾನಾದಲ್ಲಿದ್ದಾರೆ, ಮಕ್ಕಳನ್ನು ನೋಡಿಕೊಳ್ಳುತ್ತಾರೆ, ಅಡಿಗೆ ಮತ್ತಿತರ ಗೃಹಕೃತ್ಯಗಳನ್ನು ಮಾಡುತ್ತಾರೆ ಮತ್ತು ಅಡಿಗೆ ಎಷ್ಟು ಸುಲಭವೆಂದರೆ ಅಡಿಗೆ ಮಾಡುವುದೇ ಒಂದು ಖುಷಿ ಎಂದರೆ ನನ್ನ ಗೆಳತಿಯರು  ಆಶ್ಚರ್ಯಚಕಿತರಾಗುತ್ತಾರೆ.”
“ಹೌದು, ಇಲ್ಲಿ ನೋಡಿರುವುದನ್ನೆಲ್ಲ ಅಲ್ಲಿ ಹೇಳು.”
“ನೀವು ಕೃಷಿಯನ್ನು ಹೇಗೆ ನಿಭಾಯಿಸುವಿರಿ ಮತ್ತು ಉಳುವಿರಿ ಮತ್ತು ಕಷ್ಟಕರ ದೈಹಿಕ ಶ್ರಮವನ್ನು ಹೇಗೆ ನಿಭಾಯಿಸುವಿರಿ?”
“ನಮ್ಮ ಹೊಲಗಳನ್ನು ವಿದ್ಯುತ್ ಮೂಲಕ ಉಳಲಾಗುತ್ತದೆ. ಅದು ಉಳಿದ ಕೆಲಸಗಳಿಗೂ ಅದೇ ಶಕ್ತಿ ಒದಗಿಸುತ್ತದೆ. ಅದನ್ನು ನಾವು ನಮ್ಮ ಆಕಾಶಸಂಚಾರಕ್ಕೂ ಬಳಸಿಕೊಳ್ಳುತ್ತೇವೆ. ನಮ್ಮಲ್ಲಿ ರೇಲ್ ರೋಡ್ ಅಥವಾ ರಸ್ತೆಗಳಿಲ್ಲ.”
“ಆದ್ದರಿಂದ ರಸ್ತೆ ಅಥವಾ ರೈಲು ಅಪಘಾತಗಳಿಲ್ಲ. ನೀವು ಮಳೆನೀರಿಗಾಗಿ ಎಂದೂ ಸಮಸ್ಯೆ ಎದುರಿಸಿಲ್ಲವೇ?”
“ಇಲ್ಲ, ವಾಟರ್ ಬಲೂನ್ ಆವಿಷ್ಕಾರವಾದ ನಂತರ ಇಲ್ಲ. ಅಲ್ಲಿ ಒಂದು ದೊಡ್ಡ ಬಲೂನ್ ಇದೆ ನೋಡಿ ಪೈಪ್ ಗಳೊಂದಿಗೆ. ಅವುಗಳ ಸಹಾಯದಿಂದ ನಾವು ನಮಗೆ ಬೇಕಾದಷ್ಟು ಮಳೆನೀರನ್ನು ಸಂಗ್ರಹಿಸುತ್ತೇವೆ. ಅದರಿಂದ ನಾವು ಪ್ರವಾಹ ಅಥವಾ ಚಂಡಮಾರುತದಿಂದ ತೊಂದರೆಗೊಳಗಾಗುವುದಿಲ್ಲ. ನಾವೆಲ್ಲರೂ ಪ್ರಕೃತಿ ಎಷ್ಟು ನಮಗೆ ಕೊಡಲು ಸಾಧ್ಯವೋ ಅಷ್ಟನ್ನು ಪಡೆಯಲು ಯತ್ನಿಸುತ್ತಿದ್ದೇವೆ. ನಾವು ಸೋಮಾರಿಗಳಾಗಿ ಕುಳಿತುಕೊಳ್ಳದೇ ಇರುವುದರಿಂದ ನಮಗ್ಯಾರಿಗೂ ಒಬ್ಬರ ಜೊತೆ ಒಬ್ಬರಿಗೆ ಜಗಳವಾಡಲು ಸಮಯವಿರುವುದಿಲ್ಲ ನಮ್ಮ ಮಹಾರಾಣಿ ಸಸ್ಯಶಾಸ್ತ್ರ ಪ್ರೇಮಿ. ಇಡೀ ದೇಶವನ್ನು ಒಂದು ಭವ್ಯ ತೋಟವನ್ನಾಗಿ ಪರಿವರ್ತಿಸುವುದು ಅವರ ಗುರಿ.”
“ಈ ವಿಚಾರ ಅದ್ಭುತವಾಗಿದೆ. ನಿಮ್ಮ ಮುಖ್ಯ ಆಹಾರವೇನು?”
“ಹಣ್ಣುಗಳು.”
“ಬೇಸಿಗೆ ಕಾಲದಲ್ಲಿ ನೀವು ನಿಮ್ಮ ದೇಶವನ್ನು ತಂಪಾಗಿ ಹೇಗೆ ಇಡುವಿರಿ. ನಾವು ಬೇಸಿಗೆಯಲ್ಲಿ ಮಳೆ ಸ್ವರ್ಗದ ವರದಾನ ಎಂದುಕೊಳ್ಳುಕೊಳ್ಳುತ್ತೇವೆ.”
“ಬಿಸಿಯನ್ನು ತಡೆಯಲಾಗದಿದ್ದರೆ, ನಾವು ಕೃತಕ ಕಾರಂಜಿಯಿಂದ ನೆಲದ ಮೇಲೆ ನೀರನ್ನು ಪ್ರೋಕ್ಷಿಸುತ್ತೇವೆ. ಚಳಿಗಾಲದಲ್ಲಿ ನಮ್ಮ ಕೋಣೆಗಳನ್ನು ಸೂರ್ಯನ ಶಾಖದಿಂದ ಬೆಚ್ಚಗಿಟ್ಟುಕೊಳ್ಳುತ್ತೇವೆ.”
ಅವರು ಅವರ ಸ್ನಾನದ ಕೋಣೆಯನ್ನು ತೋರಿಸಿದರು. ಅದರ ಮೇಲ್ಭಾಗವನ್ನು ತೆಗೆಯುವಂತಿತ್ತು. ಅವರಿಗೆ ಬೇಕೆನಿಸಿದಾಗ ಚಾವಣಿಯನ್ನು ತೆಗೆದು, ಶವರ್ ಪೈಪ್‍ನ ನಲ್ಲಿಯನ್ನು ತಿರುಗಿಸುವುದರ ಮೂಲಕ ಶವರ್ ಬಾತ್ ಮಾಡಬಹುದಿತ್ತು.
“ನೀವು ನಿಜಕ್ಕೂ ಅದೃಷ್ಟವಂತರು” ಉದ್ಘರಿಸಿದೆ ನಾನು. “ನಿಮಗೆ ಬೇಕು ಎಂದರೆ ಏನು ಎಂದು ಗೊತ್ತಿಲ್ಲ. ನಿಮ್ಮ ಧರ್ಮ ಯಾವುದು?”
“ನಮ್ಮ ಧರ್ಮ ಪ್ರೀತಿ ಮತ್ತು ಸತ್ಯದ ಆಧಾರಿತವಾಗಿದೆ. ಒಬ್ಬರನ್ನೊಬ್ಬರು ಪ್ರೀತಿಸುವುದು ಮತ್ತು ಸತ್ಯವಂತರಾಗಿರುವುದು ನಮ್ಮ ಧಾರ್ಮಿಕ ಕರ್ತವ್ಯ. ಯಾರಾದರೂ ಸುಳ್ಳು ಹೇಳಿದರೆ ಅವಳು ಅಥವಾ ಅವನನ್ನು . . .”
“ಸಾಯಿಸುತ್ತೀರಾ?”
“ಇಲ್ಲ, ಸಾವಿನ ಶಿಕ್ಷೆ ನೀಡುವುದಿಲ್ಲ. ದೇವರ ಸೃಷ್ಟಿಯ ಯಾವುದೇ ಜೀವಿಯನ್ನು ನಾವು ಕೊಲ್ಲುವುದರಲ್ಲಿ ಖುಷಿ ಪಡುವುದಿಲ್ಲ, ಮುಖ್ಯವಾಗಿ ಮಾನವ ಜೀವಿಯನ್ನು. ಸುಳ್ಳುಗಾರರಿಗೆ ಈ ದೇಶವನ್ನು ಬಿಟ್ಟುಹೋಗುವ, ಮತ್ತೆಂದೂ ಈ ಕಡೆ ಬಾರದಿರುವ ಶಿಕ್ಷೆ ವಿಧಿಸಲಾಗುತ್ತದೆ.”
“ತಪ್ಪಿತಸ್ಥನನ್ನು ಕ್ಷಮಿಸುವುದೇ ಇಲ್ಲವೇ?”
“ಕ್ಷಮಿಸುತ್ತೇವೆ, ಆದರೆ ಆ ವ್ಯಕ್ತಿ ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಟ್ಟರೆ ಮಾತ್ರ.”
“ನೀವು ನಿಮ್ಮ ಸಂಬಂಧಿಕರನ್ನು ಬಿಟ್ಟರೆ ಬೇರೆ ಯಾವ ಪುರುಷರನ್ನು ನೋಡಲು ಅವಕಾಶವಿಲ್ಲವೇ?”
“ಹೌದು, ಪವಿತ್ರ ಸಂಬಂಧಗಳನ್ನು ಹೊರತುಪಡಿಸಿ.”
“ನಮ್ಮ ಪವಿತ್ರ ಸಂಬಂಧ ಬಹಳ ಸೀಮಿತವಾಗಿದೆ. ನಮ್ಮಲ್ಲಿ ದೊಡ್ಡಪ್ಪ, ಚಿಕ್ಕಪ್ಪನ ಮಕ್ಕಳ ಸಂಬಂಧವೂ ಸಹ ಪವಿತ್ರವಲ್ಲ.”
“ನಮ್ಮದು ಬಹಳ ವಿಶಾಲ, ದೂರದ ಸಂಬಂಧಿಕರೂ ಸಹ ನಮಗೆ ನಮ್ಮ ಸೋದರರಷ್ಟೇ ಪವಿತ್ರ.”
“ಅದು ಬಹಳ ಒಳ್ಳೆಯದು. ನಿಮ್ಮ ನೆಲದಲ್ಲಿ ಪವಿತ್ರತೆ ತಾಂಡವವಾಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಈ ಎಲ್ಲಾ ನಿಯಮಗಳನ್ನು ಮಾಡಿರುವ, ವಿವೇಕಿಯೂ, ದೂರದೃಷ್ಟಿಯುಳ್ಳವರೂ ಆದ ನಿಮ್ಮ ಒಳ್ಳೆಯ ಮಹಾರಾಣಿಯನ್ನು ನೋಡಬೇಕು.”
“ಸರಿ” ಎಂದರು ಸಾರಾ.
ನಂತರ ಅವರು ಒಂದಷ್ಟು ಸೀಟುಗಳನ್ನು ಹಲಗೆಯೊಂದರ ಮೇಲೆ ಸ್ಕ್ರೂನೊಂದಿಗೆ ಜೋಡಿಸಿದರು. ಅದಕ್ಕೆ ಎರಡು ಬಾಲ್ ಗಳನ್ನು ಜೋಡಿಸಿದರು. ಅದು ಏತಕ್ಕಾಗಿ ಎಂದು ಕೇಳಿದಾಗ ಅದು ಜಲಜನಕದ ಬಾಲ್‍ಗಳೆಂದು, ಅದು ಗುರುತ್ವಾಕರ್ಷಣ ಶಕ್ತಿಯನ್ನು ಮೀರಲು ಎಂದರು. ವಿಭಿನ್ನ ಸಾಮರ್ಥ್ಯಗಳುಳ್ಳ ಬಾಲ್‍ಗಳಿದ್ದವು. ಅದನ್ನು ಏರ್‍ಕಾರ್‍ಗೆ ಜೋಡಿಸಿದರು. ಅದಕ್ಕೆ 2 ಬ್ಲೇಡ್‍ಗಳಿದ್ದವು. ಅದು ವಿದ್ಯುತ್‍ನಿಂದ ನಡೆಯುತ್ತದೆ ಎಂದರು. ನಾವು ಆರಾಮವಾಗಿ ಕುಳಿತ ನಂತರ ಅವರು ನಾಬ್ ಮುಟ್ಟಿದರು. ಬ್ಲೇಡ್‍ಗಳು ತಿರುಗಲಾರಂಭಿಸಿದವು, ವೇಗವಾಗಿ. ನಾವು ಮೊದಲು 6-7 ಅಡಿ ಎತ್ತರದಲ್ಲಿದ್ದೆವು, ಆದರೆ ನಂತರ ನಾವು ಮೇಲಕ್ಕೆ ಹೋಗಿ ಮುಂದೆ ಹೋಗುತ್ತಿದ್ದೇವೆ ಎಂದು ತಿಳಿದದ್ದು ರಾಣಿಯ ತೋಟವನ್ನು ತಲುಪಿದಾಗ.
ನನ್ನ ಸ್ನೇಹಿತೆ ಏರ್‍ಕಾರ್‍ಅನ್ನು ಕೆಳಗಿಳಿಸಿದರು, ನಾವು ಕೆಳಗಿಳಿದೆವು.
ಅಲ್ಲಿಂದಲೇ ನಾನು ಮಹಾರಾಣಿ ತಮ್ಮ ತೋಟದ ಮಧ್ಯದಲ್ಲಿ ತಮ್ಮ ಪುಟ್ಟ ಮಗಳೊಂದಿಗೆ (4 ವರ್ಷ) ಮತ್ತು ತಮ್ಮ ಸಖಿಯರೊಂದಿಗೆ ನಡೆದಾಡುತ್ತಿದ್ದುದ್ದನ್ನು ಕಂಡೆ.
“ಹಲೋ, ನೀನಿಲ್ಲಿ” ರಾಣಿ ಹೇಳಿದರು ಸಾರಾರವರನ್ನುದ್ದೇಶಿಸಿ. ನನ್ನನ್ನು ಪರಿಚಯಿಸಲಾಯಿತು, ಅವರು ಪ್ರೀತಿಯಿಂದ ನನ್ನನ್ನು ಸ್ವಾಗತಿಸಿದರು.
ಅವರ ಪರಿಚಯ ಮಾಡಿಕೊಳ್ಳಲು ನನಗೆ ಬಹಳ ಖುಷಿಯಾಯಿತು. ಅವರೊಂದಿಗೆ ನಡೆದ ಸಂಭಾಷಣೆಯಲ್ಲಿ, ಅವರು ಹೇಳಿದ್ದು : ನಮ್ಮ ಪ್ರಜೆಗಳು ಇತರರೊಂದಿಗೆ ವ್ಯಾಪಾರ ಮಾಡಲು ಯಾವುದೇ ಅಭ್ಯಂತರವಿಲ್ಲ. ಆದರೆ, ಮಹಿಳೆಯರನ್ನು ಜೆನಾನದಲ್ಲಿಟ್ಟಿರುವ, ಆ ಮಹಿಳೆಯರು ಹೊರಬಂದು ನಮ್ಮ ಜೊತೆ ವ್ಯಾಪಾರ ಮಾಡಲಾಗದ ಯಾವುದೇ ದೇಶಗಳೊಂದಿಗೆ ವ್ಯಾಪಾರ ಸಾಧ್ಯವಿಲ್ಲ. ಪುರುಷರು ಕಡಿಮೆ ನೈತಿಕತೆಯನ್ನು ಹೊಂದಿದ್ದಾರೆ, ಆದ್ದರಿಂದ ನಮಗೆ ಅವರೊಂದಿಗೆ ವ್ಯವಹಾರ ಇಷ್ಟವಿಲ್ಲ. ನಾವು ಇತರರ ನೆಲವನ್ನು ಆಶಿಸುವುದಿಲ್ಲ, ಕೊಹಿನೂರ್‍ಗಿಂತ ಸಾವಿರಪಟ್ಟು ಪ್ರಕಾಶಮಾನದ್ದಾದರೂ ನಾವು ವಜ್ರದ ಚೂರಿಗಾಗಿ ಜಗಳವಾಡುವುದಿಲ್ಲ, ಅಥವಾ ಯಾರೋ ರಾಜನ ಬಳಿ ಮಯೂರ ಸಿಂಹಾಸನವಿದೆ ಎಂದು ಅಸೂ
ಯೆ ಪಡುವುದಿಲ್ಲ. ನಾವು ಜ್ಞಾನ ಆಳವಾದ ಸಮುದ್ರದಲ್ಲಿ ಮುಳುಗುತ್ತೇವೆ ಮತ್ತು ಪ್ರಕೃತಿ ನಮಗಾಗಿ ಕಾಯ್ದಿರಿಸಿರುವ ಅಮೂಲ್ಯವಾದ ರತ್ನಗಳನ್ನು ಪಡೆಯಲು ಪ್ರಯತ್ನಿಸುತ್ತೇವೆ. ನಮಗೆ ಸಾಧ್ಯವಾದಷ್ಟು ನಾವು ಪ್ರಕೃತಿಯ ಕೊಡುಗೆಗಳನ್ನು ಅನುಭವಿಸುತ್ತೇವೆ.”
ಅವರಿಂದ ಬೀಳ್ಕೊಂಡು, ನಾನು ಖ್ಯಾತ ವಿಶ್ವವಿದ್ಯಾನಿಲಯಗಳನ್ನು ನೋಡಿದೆ. ಅವರು ತಮ್ಮ ಉತ್ಪಾದಕ ಕೇಂದ್ರಗಳನ್ನು, ಪ್ರಯೋಗಾಲಯ, ವೀಕ್ಷಣಾಲಯಗಳನ್ನು ತೋರಿಸಿದರು.
ಎಲ್ಲಾ ಸ್ಥಳಗಳನ್ನು, ಆಸಕ್ತಿದಾಯಕವಾಗಿ ನೋಡಿದ ನಂತರ ನಾವು ಮತ್ತೆ ಏರ್‍ಕಾರ್‍ನಲ್ಲಿ ಕುಳಿತೆವು. ಆದರೆ ಅದು ಚಲಿಸಲಾರಂಭಿಸಿದ ತಕ್ಷಣ ನಾನು ಹೇಗೋ ಅದರಿಂದ ಜಾರಿಬಿಟ್ಟೆ, ಅದು ನನ್ನನ್ನು ನನ್ನ ಕನಸಿನಿಂದ ಎಬ್ಬಿಸಿಬಿಟ್ಟಿತು. ಕಣ್ತೆರೆದು ನೋಡಿದಾಗ, ನಾನು ನನ್ನ ಮಲಗುವ ಕೋಣಿಯಲ್ಲಿ ಈಸಿ ಚೇರಿನ ಮೇಲೆ ಕುಳಿತಿದ್ದೆನೆಂಬುದು ನನ್ನ ಅರಿವಿಗೆ ಬಂದಿತು!!
- ಡಾ।। ಸುಧಾ.ಜಿ

ಕಾಮೆಂಟ್‌ಗಳಿಲ್ಲ: