Pages

ವ್ಯಕ್ತಿ ಪರಿಚಯ: "ಹೆಲೆನ್ ಕೆಲ್ಲರ್"



ಹೆಲೆನ್ ಕೆಲ್ಲರ್ ತಮ್ಮ ಶಿಕ್ಷಕಿ ಆನ್ ಸುಲಿವನ್ ರವರೊಂದಿಗೆ 



“ಪ್ರತಿ ದೃಷ್ಟಿಹೀನ ಮಗುವೂ ಸಹ ಶಿಕ್ಷಣ ಪಡೆಯುವ ಅವಕಾಶವನ್ನು ದಬೇಕು; ಪ್ರತಿ ವಯಸ್ಕ ದೃಷ್ಟಿಹೀನ ವ್ಯಕ್ತಿಗೆ ತರಬೇತಿ ಪಡೆಯುವ ಮತ್ತು ಉಪಯುಕ್ತ ಉದ್ಯೋಗ ಪಡೆಯುವ ಅವಕಾಶವಿರಬೇಕು” - 

ಹೀಗೆಂದು ಆಶಿಸಿದವರು ಹೆಲೆನ್ ಕೆಲ್ಲರ್. 

ತಾವೇ ದೃಷ್ಟಿಹೀನರಾಗಿದ್ದರೂ, ಮೂಕರಾಗಿದ್ದರೂ ಕಿವುಡರಾಗಿದ್ದರೂ ಸಹ ಅದೆಲ್ಲವನ್ನು ಮೀರಿ ಓದುವುದನ್ನು, ಬರೆಯುವುದನ್ನು, ಮಾತನಾಡುವುದನ್ನು ಕಲಿತರು. ಅಷ್ಟು ಮಾತ್ರವಲ್ಲದೆ ಮೇಲೆ ಹೇಳಿದ ಅವರ ಜೀವನದ ಮಹಾತ್ಕಾಂಕ್ಷೆಗಾಗಿ ತಮ್ಮ ಜೀವನ್ನವನ್ನಿಡೀ ಮುಡಿಪಾಗಿಟ್ಟರು.

ಹೆಲೆನ್ ಕೆಲ್ಲರ್ ಅಲಬಾಮದ ಟಸ್ಕುಂಬಿಯಾ ಎಂಬಲ್ಲಿ 1880ರ ಜೂನ್ 27ರಂದು ಜನಿಸಿದರು. ಅವರು ಒಂದೂವರೆ ವರ್ಷದ ಮಗುವಾಗಿದ್ದಾಗ, ಜ್ವರಪೀಡಿತರಾಗಿ, ತಮ್ಮ ದೃಷ್ಟಿ, ಹಾಗೂ ಕೇಳುವ ಶಕ್ತಿಗಳೆರಡನ್ನೂ ಕಳೆದುಕೊಂಡರು, ಸಹಜವಾಗಿಯೇ ಕೇಳಲಾಗದ ಅವರು ಮೂಕರೂ ಆದರು. ಕಲಿಯಬೇಕೆನ್ನುವ ಆಕಾಂಕ್ಷೆಯಿದ್ದ ಮಗು ತನ್ನ ಅಸಹಾಯಕತೆಯಿಂದಾಗಿ ಹಠಮಾರಿಯಾಯಿತು. ಮಗುವನ್ನು ನೋಡಿಕೊಳ್ಳಲು ಬಂದ ಯಾರೂ ಹೆಚ್ಚು ದಿನ ಅಲ್ಲಿ ಉಳಿಯಲಿಲ್ಲ. ಆದರೆ, ಅವರನ್ನು ನೋಡಿಕೊಳ್ಳಲು ‘ದೃಷ್ಟಿಹೀನರಿಗಾಗಿನ ಪರ್ಕಿನ್ಸ್ ಶಾಲೆ’ಯಿಂದ ಬಂದ ಶಿಕ್ಷಕಿ ಆನ್ ಸುಲಿವನ್ರ ತಾಳ್ಮೆ ಮತ್ತು ನಿರಂತರ ಪ್ರಯತ್ನದಿಂದಾಗಿ ಆಕೆ ಮತ್ತೆ ಶಾಂತಳಾದಳು ಮತ್ತು ಕಲಿಯಲಾರಂಭಿಸಿದಳು. ಆನ್ರವರು ಸ್ವತಃ ಪಾರ್ಶ್ವ ದೃಷ್ಟಿಯನ್ನು ಹೊಂದಿದ್ದರೂ ಸಹ, ತಮ್ಮ ಶಿಷ್ಯೆಗೆ ಕಲಿಸಲು ಎಲ್ಲಾ ರೀತಿಯ ಪ್ರಯೋಗಗಳನ್ನು ನಡೆಸಿದರು. ಕೊನೆಗೂ ಅವರು ತಮ್ಮ ಪ್ರಯತ್ನದಲ್ಲಿ ಸಫಲರಾದರು. 

ಆನ್ರವರು ಸ್ಪರ್ಶಜ್ಞಾನದ ಮೂಲಕ, ಹೆಲೆನ್ಗೆ ಜಗತ್ತಿನ ಬಗ್ಗೆ ಅರಿವು ಮೂಡಿಸಲಾರಂಭಿಸಿದರು. ಕಲಿಕೆಯಲ್ಲಿ ಆಸಕ್ತಿಯಿದ್ದ ಹೆಲೆನ್ ಕೆಲ್ಲರ್ ಬಹುಬೇಗ ಕಲಿತುಕೊಳ್ಳಲಾರಂಭಿಸಿದರು. ಬಹಳ ವೇಗದಲ್ಲಿಯೇ ಗುರುಶಿಷ್ಯೆಯರ ನಡುವೆ ಗಾಢ ಸಂಬಂಧ ಬೆಳೆಯಿತು. ಆ ಸಂಬಂಧದ ತೀವ್ರತೆ ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ ಜೀವನದುದ್ದಕ್ಕೂ ಇಬ್ಬರು ಒಟ್ಟಿಗಿರುವಂತೆ ಮಾಡಿತು, ಒಂದಾಗಿ ತಮ್ಮ ಜೀವನದ ಮಹದೇಚ್ಛೆಯನ್ನು ಪೂರೈಸಲು ಪ್ರಯತ್ನಿಸುವಂತೆ ಮಾಡಿತು. ಗುರುಶಿಷ್ಯರಿಬ್ಬರ ಪ್ರಯತ್ನದ ಫಲಿತವಾಗಿ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿದ ಹೆಲೆನ್ರವರು, ಕಾಲೇಜಿಗೆ ಹೋಗಲಿಚ್ಛಿಸಿದರು. ಕಾಲೇಜಿಗೆ ಸೇರಿ 1904ರಲ್ಲಿ ಪದವೀಧರೆಯಾದರು. ಇಡೀ ಜಗತ್ತಿನ ಮೊದಲ ಕಿವುಡ-ಕುರುಡ ಪದವೀಧರೆ ಆಕೆ. ಅಷ್ಟೂ ವರ್ಷಗಳ ಕಾಲ ಆನ್ ಸುಲಿವನ್ ತಮ್ಮ ವಿದ್ಯಾರ್ಥಿಯ ಕೈಮೇಲೆ ಪುಸ್ತಕಗಳಲ್ಲಿದ್ದದ್ದನ್ನು ಬರೆದು ಸ್ಪರ್ಶಜ್ಞಾನದ ಮೂಲಕ ತಿಳಿಯಪಡಿಸಿದರು. 

ಕಾಲೇಜಿನಲ್ಲಿರುವಾಗ ಹೆಲೆನ್ ಬರೆಯಲಾರಂಭಿಸಿದರು. “ನನ್ನ ಜೀವನದ ಕಥೆ” ಎಂಬ ಅವರ ಆತ್ಮಕತೆಯ ಜೊತೆಗೆ ಅವರು 11 ಪುಸ್ತಕಗಳನ್ನು ಬರೆದರು. ತಮಗೆ ಎದುರಾದ ಎಲ್ಲಾ ಅಡೆತಡೆಗಳನ್ನು ದಾಟಿ ಪ್ರಖ್ಯಾತ ಬರಹಗಾರರು ಹಾಗೂ ಮಾತುಗಾರರಾದರು. ಹಲವಾರು ಭಾಷೆಗಳನ್ನು ಓದುವುದನ್ನು, ಬರೆಯುವುದನ್ನು ಮಾತನಾಡುವುದನ್ನುಕಲಿತರು. ಅಷ್ಟೇ ಅಲ್ಲದೆ, ಕುರುಡುತನ, ಕಿವುಡುತನ, ಸಾಮಾಜಿಕ ವಿಷಯಗಳು ಮತ್ತು ಮಹಿಳೆಯರ ಹಕ್ಕುಗಳ ಬಗ್ಗೆ ಹಲವಾರು ಲೇಖನಗಳನ್ನು ಬರೆದರು. ಅವರ ಕೃತಿಗಳು ಮುಂದಿನ ಜನಾಂಗಗಳಿಗೆ ಆಕೆಯ ಧೈರ್ಯ ಮತ್ತು ಬುದ್ಧಿಮತ್ತೆಯ ಬಗ್ಗೆ ಅರಿವನ್ನು ಬೆಳೆಸಲು ಸಹಾಯಕವಾಗುತ್ತವೆ.

ತಮ್ಮೆಲ್ಲಾ ಹಿತಾಸಕ್ತಿಗಳ ಮಧ್ಯೆಯೂ ಅವರು ದೃಷ್ಟಿಹೀನರ ಮತ್ತು ಕಿವುಡ-ಮೂಕರ ಅವಶ್ಯಕತೆಗಳ ಬಗ್ಗೆ ಗಮನ ಹರಿಸುವುದನ್ನು ಬಿಡಲಿಲ್ಲ. “ದೃಷ್ಟಿಹೀನ ವ್ಯಕ್ತಿ ಮೇಧಾವಿಯೂ ಅಲ್ಲ ಅಥವಾ ಮೂರ್ಖನೂ ಅಲ್ಲ. ಆದರೆ ಆ ವ್ಯಕ್ತಿಗೂ ಸಹ ಶಿಕ್ಷಣ ಪಡೆಯಬೇಕೆನ್ನುವ ಮನಸ್ಸಿದೆಯೆಂದೂ, ತರಬೇತಿ ಪಡೆಯಬೇಕೆನ್ನುವ ಕೈಗಳಿವೆಯೆಂದೂ, ಸಾಧನೆಗೈವ ಆಕಾಂಕ್ಷೆಗಳಿವೆ ಎಂದು ಜನತೆ ಅರಿತುಕೊಳ್ಳಬೇಕು. ಆ ವ್ಯಕ್ತಿ ಅತ್ಯುತ್ತಮವಾದದ್ದನ್ನು ಸಾಧಿಸಲು ಮತ್ತು ತನ್ನ ಕೆಲಸದ ಮೂಲಕ ಬೆಳಕನ್ನು ಜಯಿಸುವಂತಾಗಲು ಜನತೆ ಸಹಾಯ ಮಾಡಬೇಕಿರುವುದು ಅವರ ಕರ್ತವ್ಯ.” ಈ ರೀತಿ ಹೇಳಿದ ಅವರು ಕೈಕಟ್ಟಿ ಕೂರಲಿಲ್ಲ. ಕಿವುಡ-ಕುರುಡು ಯುವಜನ ಮತ್ತು ವಯಸ್ಕರಿಗಾಗಿನ ‘ಹೆಲೆನ್ ಕೆಲ್ಲರ್ ರಾಷ್ಟ್ರೀಯ ಕೇಂದ್ರ’ದ ಸ್ಥಾಪನೆಗೆ ಕಾರಣರಾದರು. ಅದರ ಮೂಲಕ ಅವರು ಎಲ್ಲಾ ಕಿವುಡರ, ದೃಷ್ಟಿಹೀನರ ಶಿಕ್ಷಣ, ತರಬೇತಿ, ಉದ್ಯೋಗಕ್ಕಾಗಿ ಶ್ರಮಿಸಿದರು.

ಅವರ ಈ ಧೈರ್ಯ, ಇತರರ ಬಗೆಗಿನ ಕಾಳಜಿಯ ಕಾರಣದಿಂದಾಗಿಯೇ ಅಲಬಾಮದಲ್ಲ್ಲಿರುವ ಪ್ರಖ್ಯಾತ ಮಹಿಳೆಯರ ಹಾಲ್ನಲ್ಲಿ (ಸಾಧನೆಗೈದ ಮಹಿಳೆಯರ ಹೆಸರನ್ನು, ಅವರ ಬದುಕು-ಹೋರಾಟಗಳನ್ನು ಈ ಹಾಲ್ನಲ್ಲಿ ಪಟ್ಟಿಮಾಡಲಾಗುವುದು) ಅವರ ಹೆಸರು, ಮೊದಲ ಹೆಸರಾಗಿ ಸೇರಿಸಲ್ಪಟ್ಟಿತು. ಜೊತೆಗೆ, ಅಮೇರಿಕಾದಲ್ಲಿ ಅತ್ಯುನ್ನತ ಗೌರವವಾದ ‘ಸ್ವಾತಂತ್ರ್ಯದ ರಾಷ್ಟ್ರೀಯ ಪದಕ’ವನ್ನು ಅವರಿಗೆ ನೀಡಲಾಯಿತು. “ಅಮೇರಿಕಾದ ಪ್ರಥಮ ಸಾಹಸಿ ಮಹಿಳೆ” ಎಂದು ಹೊಗಳಿ ಅಮೆರಿಕಾದ ಕಾಂಗ್ರೆಸ್ನಲ್ಲಿ ಮಂಡಿಸಿದ ಪತ್ರದಲ್ಲಿ ಈ ರೀತಿ ಹೇಳಲಾಗಿದೆ: “ಕತ್ತಲೆ ಮತ್ತು ಹತಾಶೆಯ ವಿರುದ್ಧದ ಮಿಸ್ ಕೆಲ್ಲರ್ರವರ ವೈಯಕ್ತಿಕ ವಿಜಯ, ಅವರ ಜೀವನವನ್ನು ಇತರರ ಸೇವೆಗಾಗಿ ಮುಡಿಪಾಗಿಡುವಂತೆ ಮಾಡಿದೆ. ಅಸೀಮಿತ ಶಕ್ತಿಯೊಂದಿಗೆ ಆಕೆ ತಮ್ಮ ಕನಸುಗಳನ್ನು ನನಸಾಗಿಸಲು ಪ್ರಯತ್ನಿಸಿದ್ದಾರೆ. ದೃಷ್ಟಿಹೀನರಿಗೆ ಮತ್ತು ಕಿವುಡರಿಗೆ ಸಹಾಯ ಮಾಡಲು ಎಲ್ಲಾ ರೀತಿಯಿಂದಲೂ ಶ್ರಮಿಸಿದ್ದಾರೆ. ತಮಗೆ ದೃಷ್ಟಿಯ ಬೆಳಕಿರದಿದ್ದರೂ ಹೆಲೆನ್ ಕೆಲ್ಲರ್ ಈ ಭೂಮಿಯ ಮೇಲೆ ಯಾವುದೇ ವ್ಯಕ್ತಿಗಿಂತ ಹೆಚ್ಚಾಗಿ ಬೆಳಕನ್ನು ಹರಡಿದ್ದಾರೆ.”

1936ರಲ್ಲಿ ಕನೆಕ್ಟಿಕಟ್ನಲ್ಲಿ ನೆಲೆಸಿದ ಹೆಲೆನ್ರವರು ತಮ್ಮ ಮರಣದವರೆಗೂ, ಅಂದರೆ ಜೂನ್ 1, 1968ರವರೆಗೆ ತಮ್ಮ ಜೀವನದ ಮಹತ್ಕಾರ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಅವರ ಅಂತ್ಯಕ್ರಿಯೆಯ ಸಮಯದಲ್ಲಿ ಅಮೇರಿಕಾದ ಸೆನೆಟರ್ ಲಿಸ್ಟರ್ ಹಿಲ್ ಈ ರೀತಿ ಹೇಳಿದ್ದಾರೆ. : “ಮಾನವ ಸಮಾಜ ಇರುವವರೆಗೂ ಆಕೆ 
ಜೀವಿಸುತ್ತಾಳೆ. ಬೆರಳೆಣಿಕೆಯಷ್ಟು ಚಿರಂಜೀವಿಗಳಲ್ಲಿ ಆಕೆಯೂ ಇದ್ದಾರೆ. ಧೈರ್ಯ ಮತ್ತು ನಂಬಿಕೆಗೆ ಯಾವುದೇ ಮಿತಿಯಿಲ್ಲವೆಂದು ತೋರಿಸಿದ ಮಹಿಳೆ ಆಕೆ. ಎಲ್ಲಿಯವರೆಗೂ ಮನುಷ್ಯ ಓದುತ್ತ್ತಾನೋ, ಕಥೆಗಳನ್ನು ಹೇಳುತ್ತ್ತಾನೋ ಅಲ್ಲಿಯವರೆಗೂ ಆಕೆಯ ಕಥೆ ಮತ್ತೆ ಮತ್ತೆ ಹೇಳಲ್ಪಡುತ್ತದೆ, ಆಕೆಯ ಕಥೆ ಎಲ್ಲರಿಗೂ ಸ್ಫೂರ್ತಿಯಾಗಿ ಉಳಿಯುತ್ತದೆ.”
ದೈಹಿಕ ವಿಕಲಾಂಗತೆ ಮನುಷ್ಯನ ಬೆಳವಣಿಗೆಗೆ, ಅಭಿವೃದ್ಧಿಗೆ ಅಡ್ಡಿಯನ್ನುಂಟು ಮಾಡುವುದಿಲ್ಲ ಎಂಬುದನ್ನು ಆಕೆಯ ಜೀವನದ ಹೋರಾಟ ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ಅವರ ಬದುಕು ಮತ್ತು ಹೋರಾಟ ವಿಕಲಾಂಗರಲ್ಲಿ ಮಾತ್ರವಲ್ಲ ಎಲ್ಲಾ ಜನರಲ್ಲೂ ಉತ್ಸಾಹವನ್ನು ತುಂಬುತ್ತದೆ. ಮನುಷ್ಯ ತನ್ನ ಜೀವನದಲ್ಲಿ ಹತಾಶೆಗೆ ಜಾಗವನ್ನೇ ಕೊಡಬಾರದು, ಆ ರೀತಿ ಹತಾಶೆಗೊಳ್ಳದೆ ದೃಢತೆಯಿಂದ ಸಾಧಿಸ ಹೊರಟರೆ ಸಾಧಿಸಲಾಗದ್ದು ಏನೋ ಇಲ್ಲ ಎಂಬುದನ್ನು ಆಕೆಯ ಜೀವನ ನಮಗೆ ತೋರಿಸಿಕೊಟ್ಟಿದೆ. 
      -   ಸುಧಾ ಜಿ

ಕಾಮೆಂಟ್‌ಗಳಿಲ್ಲ: