Pages

ಸ್ವಾತಂತ್ರ್ಯ ಸಂಗ್ರಾಮ: "ಭಗತ್‍ಸಿಂಗ್ ರವರ ಬಾಲ್ಯದ ಘಟನೆಗಳು"


ದೃಶ್ಯ - 1
ಅದೊಂದು ಹಳ್ಳಿಯ ಮನೆ. ಓರ್ವ ಯುವತಿ ಅಳುತಿದ್ದಾಳೆ. ಅಲ್ಲಿಗೆ ಬಂದ ಬಾಲಕ ಆ ಯುವತಿಯ ತೊಡೆಯನ್ನೇರಿ, ಕಣ್ಣೊರೆಸುತ್ತಾ “ಅಳಬೇಡ ಚಿಕ್ಕಮ್ಮಾ, ನಾನು ಚಿಕ್ಕಪ್ಪನನ್ನು ಕರೆತರುತ್ತೇನೆ. ಈ ಬ್ರಿಟಿಷರನ್ನು ಇಲ್ಲಿಂದ ಓಡಿಸಿ ಚಿಕ್ಕಪ್ಪನನ್ನು ನಿನ್ನ ಬಳಿಗೆ ಕರೆತರುತ್ತೇನೆ. ಅಳಬೇಡ ಚಿಕ್ಕಮ್ಮಾ”, ಎನ್ನುತ್ತಾನೆ. ಬಾಲಕನ ಮುಗ್ಧತೆಯನ್ನು ಕಂಡು ಆಕೆ ಕಣ್ಣೊರೆಸಿಕೊಂಡು ನಗುತ್ತಾಳೆ.
ದೃಶ್ಯ-2
ಶಾಲೆಯಿಂದ ಬಂದ ತಕ್ಷಣವೇ ಆ ಬಾಲಕ ತನ್ನ ಹೊಲಕ್ಕೆ ಹೋಗುತ್ತಾನೆ. ಅಲ್ಲಿ ಕಡ್ಡಿಗಳನ್ನು ನೆಡುತ್ತಿದ್ದಾನೆ. “ಏನು ಮಾಡುತ್ತಿದ್ದೀಯಪ್ಪಾ”, ಎಂದು ತಂದೆಯ ಸ್ನೇಹಿತರು ಕೇಳಿದರೆ, “ಬಂದೂಕುಗಳನ್ನು ಕೊಡುವ ಮರ ಬೆಳೆಸುತ್ತಿದ್ದೇನೆ” ಎನ್ನುತ್ತಾನೆ. “ನಿನಗೇಕಯ್ಯಾ ಬಂದೂಕುಗಳು” ಪ್ರಶ್ನಿಸುತ್ತಾರೆ. “ಬ್ರಿಟಿಷರನ್ನು ಓಡಿಸಲು ಬಂದೂಕು ಬೇಡವೇ?” ಮರು ಪ್ರಶ್ನಿಸುತ್ತಾನೆ ಆ ಬಾಲಕ. ಪ್ರಶ್ನಿಸುತ್ತಿದ್ದವರು ಅವಾಕ್ಕಾಗಿ ನಿಲ್ಲುತ್ತಾರೆ.
ದೃಶ್ಯ-3
ಆ ಬಾಲಕ ಅಂದು ಮನೆಗೆ ತಡವಾಗಿ ಬರುತ್ತಾನೆ. ಊಟ ಮಾಡು ಬಾ ಎಂದರೆ ‘ಒಲ್ಲೆ’ ಎನ್ನುತ್ತಾನೆ. ತಂಗಿಯನ್ನು ಕರೆದು ತನ್ನ ಬ್ಯಾಗಿನಿಂದ ಒಂದು ಡಬ್ಬಿಯನ್ನು ತೆಗೆದು ತೋರಿಸುತ್ತಾನೆ. ಅದರಲ್ಲಿ ಕೆಂಪಾದ ಮಣ್ಣಿರುತ್ತದೆ. “ಏನಣ್ಣಾ, ಇದು”, ಕೇಳಿದಳು ಆಕೆ. “ಇದು ನಮ್ಮ ಜನರ ರಕ್ತದಿಂದ ತೋಯ್ದ ಮಣ್ಣು. ಜಲಿಯನ್‍ವಾಲಾಬಾಗ್‍ನಲ್ಲಿ ಬ್ರಿಟಿಷ್ ಅಧಿಕಾರಿಯ ಗುಂಡುಗಳಿಗೆ ಸಿಕ್ಕು ಸತ್ತ ನಮ್ಮ ಜನರ ರಕ್ತ ಬಿದ್ದಂತಹ ಮಣ್ಣು. ನಾನಲ್ಲಿಗೆ ಹೋಗಿದ್ದೆ. ಇದನ್ನು ಕಣ್ಣಿಗೊತ್ತಿಕೊ,” ಎಂದೆನ್ನುತ್ತಾ ತಾನೂ ಸಹ ಭಕ್ತಿಭಾವದಿಂದ ಕಣ್ಣಿಗೊತ್ತಿಕೊಳ್ಳುತ್ತಾನೆ.
ಈ ಮೂರು ದೃಶ್ಯಗಳಲ್ಲಿ ನಮಗೆ ಕಾಣಿಸಿದ ಬಾಲಕ ತನ್ನ 24ನೇ ವಯಸ್ಸಿನಲ್ಲಿಯೇ  ದೇಶಕ್ಕಾಗಿ ನಗುನಗುತ್ತಾ ಪ್ರಾಣಾರ್ಪಣೆ ಮಾಡಿದ. ಆತನ ಹೆಸರು “ಭಗತ್‍ಸಿಂಗ್”. 
 --- ಸುಧಾ ಜಿ 

ಕಾಮೆಂಟ್‌ಗಳಿಲ್ಲ: