Pages

ಸಿನಿಮಾ ವಿಮರ್ಶೆ: ಸತ್ಯಜಿತ್ ರೇರವರ "ಗಣಶತ್ರು"


   


ಆರು ಹಾಡುಗಳು ಮೂರು ಫೈಟುಗಳು ಸ್ವಲ್ಪ ಮಸಾಲೆ ಕೈಲಾಗದ ಸುಂದರ (ಒಬ್ಬರಲ್ಲ ಕನಿಷ್ಟ ಮೂರು) ನಾಯಕಿಯರು, ಅವರ ರಕ್ಷಿಸುವ  ನಾಯಕನ ಅಸಾಮಾನ್ಯ ತಾಕತ್ತು ಮತ್ತವನ ಹುಚ್ಚು ಆರಾಧನೆ.....ಅಶ್ಲೀಲ ಹಾಸ್ಯ ,ಮನ ಘಾಸಿಗೊಳಿಸುವ ಕ್ರೌರ್ಯ, ಇವಿಲ್ಲದೆ ನಮ್ಮ  ಸಿನಿಮಾಗಳನ್ನ ಊಹಿಸಲೂ ಸಾಧ್ಯವಿಲ್ಲವೇನೊ.....ಇದ್ದಲ್ಲಿ ಅಂಥವು ನೆಲಕಚ್ಚುವುದು ಗ್ಯಾರಂಟಿ....ಎಂಬ ಅಭಿಪ್ರಾಯವನ್ನು ನೂರಕ್ಕೆ ನೂರರಷ್ಟು ತಪ್ಪೆಂದು ತೋರಿಸಿದ ಅನೇಕ ಗಟ್ಟಿ ನಿರ್ದೇಶಕರಲ್ಲಿ
ಬಂಗಾಲಿ ಸಿನಿಮಾಂತ್ರಿಕ .... ದಂತಕಥೆ.... ಸತ್ಯಜಿತ್ ರೇರವರು ಮುಂಚೂಣಿಯಲ್ಲಿರುತ್ತಾರೆ. ಸಮಾಜದೆಡೆಗೆ ಸಂವೇದನೆ ಮತ್ತು ಸೂಕ್ಷ್ಮ ಗಮನ ಹೊತ್ತ ರೇ' ರವರು ಅದರ ತೊಡಕುಗಳನ್ನು ತಮ್ಮ ವಿಶಿಷ್ಟ ಪ್ರತಿಭೆಯಿಂದ ಸರಳವಾಗಿ ಚಿತ್ರಿಸಿ ಮನಕೆ ದೂಡುವಲ್ಲಿ ಅವರದು ಎತ್ತಿದ ಕೈ
ರೇ ರವರ 26 ನೇ ಸಿನಿಮಾ 'ಗಣಶತೃ'. ಇದು ಹಲವು ಮೊದಲುಗಳಿಗೆ ಹೆಸರು ಪಡೆದಿದೆ.
ರೇ' ಹೃದಯಾಘಾತಕ್ಕೊಳಗಾದಾಗ ಹೊರಾಂಗಣ ಚಿತ್ರೀಕರಣಕ್ಕೆ ವೈದ್ಯರು ಅಡ್ಡಿಪಡಿಸಿದಾಗ ಅವರ ಕ್ರಿಯಾಶೀಲ ಮನಸಿಗೆ ತೋಚಿದ್ದು....ನಾರ್ವೆಯ ಪ್ರಸಿದ್ಧ ನಾಟಕಕಾರ ಹೆನ್ರಿಕ್ ಇಬ್ಸನ್ Enemy of the People ಆಧಾರಿತ ಸಿನಿಮಾ ನಿರ್ಮಾಣ. ಇದು ಅವರ ಮೊದಲ  ಸಂಪೂರ್ಣ ಸ್ಟುಡಿಯೋದಲ್ಲಿಯೇ ಚಿತ್ರೀಕರಿಸಿದ ಸಿನಿಮಾ. ಏಕೆಂದರೆ ಅವರ ಸಿನಿಮಾಗಳಲ್ಲಿ ಹೊರದೃಷ್ಯಗಳನ್ನು ಪ್ರಕೃತಿಯನ್ನು ಬಳಸಿಕೊಂಡು ಸನ್ನಿವೇಶ, ಪಾತ್ರಗಳ ಮನಸ್ಥಿತಿಗೆ ತಕ್ಕಂತೆ ಸೆರೆಹಿಡಿದು ಪರಿಣಾಮಕಾರಿ ರೀತಿಯಲ್ಲಿ ಪ್ರಸ್ತುತಪಡಿಸುವ ಅಂಶಗಳು ಇದ್ದೇ ಇರುತ್ತವೆ.

ಜೊತೆಗೆ ಅನಾರೋಗ್ಯದ ಕಾರಣ ಮೊದಲ ಬಾರಿಗೆ (ಅವರ ಸಿನಿಮಾಗಳಿಗೆ ಅವರೇ ಛಾಯಾಗ್ರಾಹಕರು) ಮಗ ಮತ್ತು ಸಹಾಯಕ ಛಾಯಾಗ್ರಾಹಕರಿಂದ ಸಿನಿಮಾ ಚಿತ್ರೀಕರಣ ನಡೆಯಿತು.

ಗಣಶತೃ' ....ಒಬ್ಬ ಪ್ರಾಮಾಣಿಕ ಆದರ್ಶ ವೈದ್ಯನು ಜನರ ಒಳಿತಿಗಾಗಿ ಶ್ರಮಿಸಿ ಶತೃ ಎನಿಸಿಕೊಂಡ ಒಂದು ದುರಂತ ಕಥೆ ಎನಿಸಿದರೂ ಅಂತ್ಯದಲ್ಲಿ ಆಶಾಭಾವನೆ ಮೂಡಿಸುವ, ಸ್ಪೂರ್ತಿ ನೀಡುವ ಕೃತಿಯಾಗಿದೆ

ಚಾಂದೀಪುರದ ಮುಖ್ಯ ವೈದ್ಯಾಧಿಕಾರಿ ಅಶೋಕ್ ಗುಪ್ತ (ಸೌಮಿತ್ರ ಚಟರ್ಜಿ ಪ್ರಸಿದ್ಧ ಬಂಗಾಲಿ ನಟ) ಪಟ್ಟಣದಲ್ಲಿ ಹರಡುತಿದ್ದ ಜಾಂಡೀಸ್ ಮತ್ತು ಹೆಪಟೈಟಿಸ್ ಖಾಯಿಲೆಗಳಿಗೆ ಕಾರಣ ಶಂಕಿಸಿ ಪರೀಕ್ಷಿಸಿದಾಗ ಲ್ಯಾಬಿಂದ ಬಂದ ರಿಪೋರ್ಟ್ ಅದನ್ನು ನಿಜವೆಂದು ಸಾಬೀತುಗೊಳಿಸುತ್ತದೆ. ಸೋಂಕು ಹರಡುವ ಮೂಲ ಪಟ್ಟಣದ ಮುಖ್ಯ ಹಿಂದೂ ದೇವಾಲಯ ಪವಿತ್ರ ಜಲವೆಂದು ಸಾಬೀತಾಗುತ್ತದೆ (ಮೂಲ ಕಥೆಯಲ್ಲಿ ಡಾ|| ಸ್ಟಾಕ್ಮನ್ ನಗರದ ಕಲುಷಿತ ಸ್ಪಾಗಳು ಕಾರಣವೆಂದು ಕಂಡು ಹಿಡಿಯುತ್ತಾನೆ). ಕಲುಷಿತಗೊಂಡ ಜಲವನ್ನು ಜನರು ಪವಿತ್ರವೆಂದು ಸೇವಿಸುವುದನ್ನು ಕಂಡ ವೈದ್ಯನ ಮನಸು ಮರುಗಿ ಎಚ್ಚರಿಸಲು ನಿರ್ಧರಿಸುತ್ತಾನೆ. ಪತ್ರಿಕಾ ಮಿತ್ರರೂ ಸಹ ಇದರ ಕುರಿತ ಲೇಖನ ಪ್ರಕಟಿಸಲು ಸಜ್ಜಾಗುತ್ತಾರೆ. ಆದರೆ ನಾಯಕನ ನಿರ್ಧಾರ ಅರಿತ ನಿತೀಷ್ (ದೃತಿಮನ್ ಚಟರ್ಜಿವೈದ್ಯನ ಅಣ್ಣ, ಪಟ್ಟಣದ ಮುಖ್ಯಾಧಿಕಾರಿ ಮತ್ತು ದೇವಾಲಯದ ಪ್ರಧಾನಾಧಿಕಾರಿ ವಿರೋಧಿಸುತ್ತಾರೆ. ಕಾರಣ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗಿ ಆದಾಯ ನಿಲ್ಲುತ್ತದೆಂದು. ಪತ್ರಕರ್ತರೂ ಸಹ ಜನ ತರ್ಕ ಒಪ್ಪರೆಂದು ಇದರಿಂದ ಪ್ರಯೋಜನವಿಲ್ಲೆಂದು ಕೈ ಬಿಡುತ್ತಾರೆ. ಆದರೂ ಎದೆಗುಂದದ ನಾಯಕ ಮತ್ತವನ ಕುಟುಂಬ  ಪಟ್ಟಣ ನಿವಾಸಿಗಳೊಂದಿಗೆ ನೇರ ಸಂಭಾಷಿಸಲು ವೇದಿಕೆ ಏರ್ಪಡಿಸಿದಾಗ ಸಂದರ್ಭದಲ್ಲೂ ಕೃತ್ರಿಮ ಶತೃಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಧರ್ಮದ ಹೆಸರಲ್ಲಿ ರಾಜಕೀಯ ಮಾಡಿ ವೈದ್ಯನ ವಿರುದ್ಧ ಜನರನ್ನು ಎತ್ತಿ ಕಟ್ಟುವಲ್ಲಿ ಯಶಸ್ವಿಯಾಗುತ್ತಾರೆ. ಇದರಿಂದ ವೈದ್ಯನು ಮತ್ತವನ ಕುಟುಂಬ ಪಟ್ಟ ಪಾಡು ಅಷ್ಟಿಷ್ಟಲ್ಲ. ಮೂಲಕಥೆಯಲ್ಲಿ ನಗರವೇ ಒಂದಾದರೆ ನಾಯಕ ಮಾತ್ರ ಒಂಟಿಯಾಗಿ ನಿಲ್ಲುತ್ತಾನೆ. ಆದರೆ ರೇ ಇಲ್ಲಿ ಇನ್ನಷ್ಟು ಆಶಾದಾಯಕ ಭಾವನೆ ಸೃಷ್ಟಿಸಿದ್ದಾರೆ .....ಕೊನೆಗೂ ಸತ್ಯಕ್ಕೆ ಜಯ ದೊರೆತು ಜನರು ನಾಯಕನಿಗೆ ಜೈಕಾರ ಹಾಕುವ ಕೂಗಿನೊಂದಿಗೆ ಸಿನಿಮಾ ಮುಕ್ತಾಯವಾಗುತ್ತದೆ.

ಹೀಗೆ ಗಣಶತೃ ಧರ್ಮ ರಾಜಕೀಯ ವಿಜ್ಞಾನ ನಡುವಿನ ಹೋರಾಟದ ಕಥೆಯಾಗಿದೆ.
ಇನ್ನು ವೈದ್ಯನ ಮಡದಿಯಾಗಿ ರುಮಾ ಗುಹ ತಕೃತ, ಮಗಳ ಪಾತ್ರದಲ್ಲಿ ಮಮತಾ ಶಂಕರ್ ಉಳಿದ ಪಾತ್ರಗಳಲ್ಲಿ ದೀಪನ್ಕರ್ ದೇ ಸುಬೇಂದು ಚಟರ್ಜಿ ಭೀಷ್ಮ ಗುಹತಕುರ್ತ ಮನೋಜ್ ಮಿತ್ರ ಮುಂತಾದವರು ಜೀವ ತುಂಬಿದ್ದಾರೆ.

ಪ್ರೇಕ್ಷಕ ಮತ್ತು ವಿಮರ್ಶಕರ ಮನ ಗೆದ್ದ ಸಿನಿಮಾ ಎಲ್ಲ ಕಾಲಕ್ಕೂ ನಿಲ್ಲುವಂಥ ಕ್ಲಾಸಿಕ್ ಎನಿಸಿಕೊಂಡಿದೆ.
ಉಷಾಗಂಗೆ 

ಕಾಮೆಂಟ್‌ಗಳಿಲ್ಲ: