Pages

ಪುಟ್ಕಥೆಗಳು



ಪುಟ್ಕಥೆ - 1
ಕಸ ಗುಡಿಸುವವರನ್ನು ಕಂಡರೆ ಅಸಹ್ಯ ಪಡುತ್ತಿದ್ದವಳು ಅವರ ಮುಷ್ಕರದಲ್ಲಿ ಭಾಗಿಯಾದಳು. "ನೀವಿಲ್ಲದಿದ್ದರೆ ನಾವು ಉತ್ತಮ ಪರಿಸರದಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಅರ್ಥವಾಗಿದೆ" ವಿಶ್ವವಿದ್ಯಾಲಯದ ಎಲ್ಲೆಡೆ ಬಿದ್ದಿದ್ದ ಕಸದ ರಾಶಿ ತೋರಿಸಿ ನುಡಿದಳು!!

ಪುಟ್ಕಥೆ - 2
ನೆನ್ನೆಯವರೆಗೆ ಧರ್ಮದ ಹೆಸರಿನಲ್ಲಿ ದೂರದೂರ ಇದ್ದವರು, ಪ್ರವಾಹದ ನಂತರ ಇಂದು ಮಂದಿರದಲ್ಲಿ ಉಳಿದುಕೊಂಡು, ಚರ್ಚ್ ನಲ್ಲಿ ಸಂಗ್ರಹಿಸಲ್ಪಟ್ಟ ಆಹಾರ ಧಾನ್ಯಗಳಲ್ಲಿ ಮಸೀದಿಯಲ್ಲಿ ತಯಾರಿಸಿದ ಊಟವನ್ನುಣ್ಣುತ್ತಾ ನಿಜವಾದ ಕಷ್ಟ ಸುಖ ಹಂಚಿಕೊಳ್ಳುತ್ತಿದ್ದಾರೆ!!

ಪುಟ್ಕಥೆ - 3
"ಗುತ್ತಿಗೆಯ ಆಧಾರದಲ್ಲಿ ಕೆಲಸದಲ್ಲಿದ್ರೆ ಕೆಲಸ ಮಾಡುತ್ತೀರ. ನಾವು ನಿಮ್ಮ ಕೆಲಸವನ್ನು ಪರ್ಮನೆಂಟ್ ಮಾಡಿ ಸಂಬಳವನ್ನು ಕೊಟ್ಟ ಮೇಲೆ ನೀವು ಸರಿಯಾಗಿ ಕೆಲಸ ಮಾಡುತ್ತೀರ ಎಂದು ಏನು ಗ್ಯಾರಂಟಿ?" ಕೇಳಿದರು ಅಧಿಕಾರಿಗಳು.
"ಸರ್, ಶ್ರಮವನ್ನೇ ನಂಬಿ ಬದುಕಿರುವವರು ನಾವು, ಇನ್ನೊಬ್ಬರ ದಾನದಲ್ಲಿ ಬದುಕೋಲ್ಲ. ಜೊತೆಗೆ ನಾವು ನಿಮ್ಮಂತಲ್ಲ, ನೆನ್ನೆ ಸಂಜೆ ನಮ್ಮ ಬೇಡಿಕೆಗಳನ್ನು ಒಪ್ಪಿದ್ದೇವೆ ಎಂದು ಹೇಳಿ ಇಂದು ಬೆಳಿಗ್ಗೆ ಉಲ್ಟಾ ಹೊಡೆದಿರಲ್ಲಾ?" ಹೇಳಿದರು ಡಿ ಗ್ರೂಪ್ ನೌಕರರು!!

ಪುಟ್ಕಥೆ - 4
ಡಿ ಗ್ರೂಪ್ ನೌಕರರ ಅಹೋರಾತ್ರಿ ಮುಷ್ಕರ ನಡೆಯುತ್ತಿತ್ತು. ಅಲ್ಲಿಯೇ ಕೆಲವು ನೌಕರರು ಎಲ್ಲರಿಗೂ ಅಡಿಗೆ ಮಾಡಿದರು. ಬಂದಿದ್ದ ವಿವಿಧ ಸಂಘಟನೆಗಳ ನಾಯಕರಿಗೆ ಊಟ ಮಾಡಲು ಆಹ್ವಾನವನಿತ್ತರು. ನೆಪಗಳನ್ನೊಡ್ಡಿ ಹೊರಟುಹೋದ ನಾಯಕರನ್ನು ಮತ್ತೆ ಹತ್ತಿರ ಸೇರಿಸಲಿಲ್ಲ ಆ ಸ್ವಾಭಿಮಾನವುಳ್ಳ ಮುಷ್ಕರನಿರತರು!!

ಪುಟ್ಕಥೆ - 5
ಶಿಕ್ಷಕರ ದಿನಾಚರಣೆಯಂದು ಶಾಲೆಯಲ್ಲಿ ಹಬ್ಬದ ವಾತಾವರಣ, ಮಕ್ಕಳು ಶಾಲೆಯನ್ನು ತುಂಬಾ ಚೆನ್ನಾಗಿ ಅಲಂಕರಿಸಿದ್ದರು. ಒಂದು ಚಿತ್ರ ಎಲ್ಲರನ್ನೂ ಆಕರ್ಷಿಸಿತ್ತು, ಅದನ್ನು ನೋಡಿದ ಎಲ್ಲಾ ಶಿಕ್ಷಕರ ಕಂಗಳಲ್ಲಿ ಆನಂದಭಾಷ್ಪವಿತ್ತು. ಆ ಚಿತ್ರ - ಶಿಕ್ಷಕರ ದೇಹವೇ ಏಣಿಯಾಗಿ, ಅದರ ಮೇಲೆ ಹತ್ತಿ ಮಕ್ಕಳು ನಕ್ಷತ್ರಗಳನ್ನು ಮುಟ್ಟಲೆತ್ನಿಸುತ್ತಿದ್ದುದ್ದಾಗಿತ್ತು!!
        
ಪುಟ್ಕಥೆ - 6
"ನಾನು ಸಮಾಜ ಸೇವೆಗೆ ಹೋಗಿ ಬರುತ್ತೇನೆ, ನೀನು ಮಗುವನ್ನು ನೋಡಿಕೊ" ಹೇಳಿದನಾತ.
"ನಿನ್ನನ್ನು ಕಟ್ಟಿಕೊಳ್ಳುವ ಮುನ್ನ, ಈ ಮಗುವಾಗುವ ಮುನ್ನ ನಾನೂ ಸಹ ಸಮಾಜಸೇವೆಯಲ್ಲಿ ತೊಡಗಿದ್ದೆ. ಆದ್ದರಿಂದ ಇಬ್ಬರೂ ಎರಡನ್ನೂ ಹಂಚಿಕೊಳ್ಳಲೇಬೇಕು" ದೃಢವಾಗಿ ಹೇಳಿದಳವಳು!!

ಪುಟ್ಕಥೆ - 7
"ಬಾರೋ, ಈ ಬಿಸ್ಕತ್ ಪ್ಯಾಕ್ ತೆಗೆದುಕೊ" ಬಟ್ಟೆ ಹರಿದಿದ್ದ, ಪೌಷ್ಟಿಕಾಂಶದ ಕೊರತೆಯಿದ್ದ ಹಾಡಿಯ ಹುಡುಗನನ್ನು ಕರೆದಳಾಕೆ ಉಚಿತ ವೈದ್ಯಕೀಯ ಶಿಬಿರದ ಸಂದರ್ಭದಲ್ಲಿ.
ಬರಲಿಲ್ಲ ಅವನು.
"ನೀವೇ ಹೇಳಿದಿರಲ್ಲ ಎಲ್ಲರಿಗೂ ಒಂದೊಂದೇ ಎಂದು, ಈಗಾಗಲೇ ನೀವು ಕೊಟ್ಟಿದ್ದೀರಿ"  ಪ್ರಾಮಾಣಿಕತೆಯಿಂದ ಉತ್ತರಿಸಿದನಾ ಹುಡುಗ!!

ಪುಟ್ಕಥೆ - 8
ಗುಡ್ಡ ಕುಸಿದಾಗ ಎಲ್ಲವನ್ನೂ ಕಳೆದುಕೊಂಡವಳು ತೆವಳುತ್ತಾ ಸುರಕ್ಷಿತ ಪ್ರದೇಶಕ್ಕೆ ಬಂದಳು. "ಜೀವವೊಂದಿದ್ದರೆ ಎಲ್ಲವನ್ನೂ ಗಳಿಸಿಕೊಳ್ಳಬಹುದು" ಎಂದರಾರೊ. "ಅಲ್ಲ, ಗಳಿಸಿಕೊಳ್ಳಬಹುದು ಎಂಬ ಧೈರ್ಯವಿದ್ದರೆ ಮಾತ್ರ ಅದು ಸಾಧ್ಯ!" ಎಂದಳಾಕೆ.

ಪುಟ್ಕಥೆ - 9
ಮಳೆಸಂತ್ರಸ್ಥರಿಗೆ ವೈದ್ಯಕೀಯ ನೆರವನ್ನು ನೀಡಲು ಹೋದವರಿಗೆ  ಅಲ್ಲಿನವರು ಟೀ, ಬಿಸ್ಕತ್ ಕೊಟ್ಟಾಗ ಆ ಕಾರ್ಯಕರ್ತರ ಕಣ್ತುಂಬಿ ಬಂದಿತ್ತು!!

ಪುಟ್ಕಥೆ - 10
ವೈದ್ಯಕೀಯ ನೆರವಿನ ಅಗತ್ಯವೇನು, ಅವರಿಗೆ ಬೇಕಿರುವುದು ಆಹಾರ, ಬಟ್ಟೆ ಎಂದು ವಾದಿಸಿದ್ದಳು ಆ ವೈದ್ಯೆ. ಆದರೆ ವೈದ್ಯಕೀಯ ಶಿಬಿರದಲ್ಲಿ ಒಬ್ಬಾಕೆ ಬಂದು "ಅಮ್ಮ ನೀವು ಮಾಡಿದ್ದು ನಮಗೆ ಬಹಳ ಉಪಕಾರವಾಯಿತು, ನಮ್ಮನ್ನು ಪರೀಕ್ಷೆ ಮಾಡಿದ್ದೇ ಅಲ್ಲದೆ ಉಚಿತವಾಗಿ ಔಷಧಿಯನ್ನೂ ಕೊಟ್ಟಿದ್ದೀರಿ, ಇಲ್ಲದಿದ್ದರೆ ನಮಗೆ ವೈದ್ಯರ ಬಳಿ ಹೋಗಲಾಗುತ್ತಿರಲಿಲ್ಲ, ಏಕೆಂದರೆ ಕೂಲಿ ಸಿಗುತ್ತಿಲ್ಲ!!" ಎಂದಳು.

ಪುಟ್ಕಥೆ - 11
೧೮ ಎಕರೆ ಶ್ರೀಮಂತ ಕಾಫಿ ಮಾಲೀಕರ ಮನೆ ತೋಟ ಪೂರ್ತಿ ಕೊಚ್ಚಿಕೊಂಡು ಹೋದಾಗ ಗಂಜಿ  ಹೋಗಲು ಅವಮಾನವೆನಿಸಿದಾಗ ಅವರಿಗೆ ಆಶ್ರಯವನ್ನಿತ್ತದ್ದು ಅವರ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದ ಕೂಲಿಯಾಳು!!

ಪುಟ್ಕಥೆ - 12
"ವೈದ್ಯಕೀಯ ಕೋರ್ಸ್ ಸೇರಿಕೊಂಡಿದ್ದು ನಾನು ಹಣ ಮಾಡಲು. ಮೇಷ್ಟ್ರ ಮಾತಿಗೆ ಕಟ್ಟುಬಿದ್ದು ಅಂಕಗಳಿಗಾಗಿ ಇಲ್ಲಿ ಬಂದೆ. ನಾನು ಮಾಡಿದ ಅಳಿಲ ಸೇವೆಗೇ ಎಷ್ಟು ಜನ ಕೈಮುಗಿದರು, ದೊಡ್ಡವರೂ ಸಹ ಕಾಲಿಗೆ ಬೀಳಲು ಬಂದರು, ಹಿರಿಯರು ನೂರ್ಕಾಲ ಚೆನ್ನಾಗಿ ಬಾಳಪ್ಪ ಎಂದು ಆಶೀರ್ವದಿಸಿದರು, ಇದನ್ನೆಲ್ಲಾ ಅನುಭವಿಸಿದ ಮೇಲೆ ನಾನು ಇನ್ನು ಜನರ ವೈದ್ಯನಾಗಬೇಕೆಂದು ತೀರ್ಮಾನಿಸಿಬಿಟ್ಟಿದ್ದೇನೆ" ಎಂದ ಆ ಭಾವಿ ವೈದ್ಯ ಭಾವುಕನಾಗಿ!!

ಪುಟ್ಕಥೆ - 13
"ನಮಗೆ ಬೇಡ ಸರ್, ನನಗೆ ಎರಡು ದಿನದಿಂದ ಟೆಂಪೊ ಓಡಿಸಲು ಕೆಲಸ ಸಿಕ್ಕಿದೆ, ಪಕ್ಕದ ಮನೆಯವರಿಗೆ ಕೂಲಿ ಸಿಕ್ಕಿಲ್ಲ, ಅವಶ್ಯಕತೆ ಹೆಚ್ಚಿರುವವರಿಗೆ ನನ್ನ ಪಾಲಿನದನ್ನು ಕೊಟ್ಟುಬಿಡಿ" ಎಂದಾತ ಹೇಳಿದಾಗ ಆಹಾರ ಪದಾರ್ಥ ವಿತರಿಸಲು  ಕಾರ್ಯಕರ್ತ ದಂಗುಬಡಿದುಹೋದ!!

ಪುಟ್ಕಥೆ - 14
"ನಮಗೇನೂ ಪರಿಹಾರ ಬೇಕಿಲ್ಲ ಮೇಡಮ್, ನಾವು ಎಲ್ಲವನ್ನೂ ಕಳೆದುಕೊಂಡಿದ್ದರೂ ಬದುಕುವ ಛಲ ಕಳೆದುಕೊಂಡಿಲ್ಲ, ನಮಗೆ ಕೂಲಿ ಕೆಲಸ ಕೊಡಿಸಿ" ಎಂದು ಯುವಕನೊಬ್ಬ ಹೇಳಿದಾಗ 'ನಮ್ಮ ಜನ ಸೋಮಾರಿಗಳು' ಎನ್ನುವವರ ಮುಖಕ್ಕೆ ಅಪ್ಪಳಿಸಿದಂತಿತ್ತು!!



 ಸುಧಾ ಜಿ

ಕಾಮೆಂಟ್‌ಗಳಿಲ್ಲ: