Pages

ಪುಸ್ತಕ ಪ್ರೀತಿ - ತ್ರಿವೇಣಿಯವರ ಕಥಾಸಂಗ್ರಹ ಎರಡು ಮನಸು

 ಸೇರದ ದಾರಿ

ಘಂಟೆ ಎರಡು ದಾಟಿದರೂ ಊಟ ಮಾಡದೆ ಗಂಡನ ದಾರಿ ಕಾಯುತ್ತಾ ಕುಳಿತ್ತಿದ್ದಳು ಕಮಲ. "ಅವರೇನು ಹೋಟೆಲಿನಲ್ಲಿ ತಿಂದಿರುತ್ತಾರೆ. ಮನೆಗೆ ಊಟಕ್ಕೆ ಬಂದರೆ ಬರುತ್ತಾರೆ ಇಲ್ಲದಿದ್ದರೆ ಇಲ್ಲ. ಅಪ್ಪ ಬದಲಾಗಿದ್ದಾರೆ. ಇಂತವರಿಗಾಗಿ ನೀನು ಊಟ ಮಾಡದೆ ಕಾಯುತ್ತಿರುವೆಯಾ?" ಮಗನ ಕೋಪದ ಮಾತುಗಳನ್ನು ಒಪ್ಪದ ಕಮಲ ಕಾಯುತ್ತಾ ಕುಳಿತಳು. 
ಆತ ಬಂದವನೇ ಯಾವುದನ್ನು ಗಮನಿಸದೆ ತನ್ನಷ್ಟಕ್ಕೇ ತಾನೇ ಹೋಗಿ ಮಲಗಿದನು. ಎರಡು ವರ್ಷಗಳಿಂದಲೂ ಹೀಗೆ ಯಾವಾಗಲೋ ಮನೆಗೆ ಬರುವುದು. ಮನೆಗೆ ಬೇಕಾದ ಸಾಮಾನುಗಳನ್ನು ಸರಿಯಾಗಿ ತಂದು ಕೊಡುತ್ತಿರಲಿಲ್ಲ. ಗೆಳತಿಯರಿಂದ ಸಾಲ ಪಡೆದುಕೊಂಡು, ನಂತರ ಅವರ ನಡವಳಿಕೆಯಿಂದ ಕಮಲಳಿಗೆ ಒಮ್ಮೊಮ್ಮೆ ಬೇಸರವಾಗುತ್ತಿತ್ತು. 
ಒಮ್ಮೆ ಬಾಲ್ಯದ ಗೆಳತಿ ಸಾವಿತ್ರಿ ಮನೆಗೆ ಬಂದು ಗಂಡನ ಬಗ್ಗೆ ಹೇಳಿದಳು. ಮೊದಲೇ ಅಲ್ಪ ಸ್ವಲ್ಪ ಮಾತು ಕಿವಿ ಮೇಲೆ ಬಿದ್ದರೂ ಕಮಲ ತಲೆ ಕೆಡಿಸಿಕೊಂಡಿರಲಿಲ್ಲ. ಗೆಳತಿಯ ಮಾತು ಕೇಳಿದಾಗಲೂ ಸಹ ನಂಬಲಿಲ್ಲ. ಆದರೆ ಗೆಳತಿಯ ಮನೆಗೆ ಹೋಗಿ ತಾನೇ ಗಂಡ ಬೇರೆ ಹುಡುಗಿ ಜೊತೆ ವಾಕಿಂಗ್ ಹೋಗುವುದನ್ನು ನೋಡಿದಳು. ಮನೆಗೆ ಬಂದು ಗಂಡನನ್ನು ಪ್ರಶ್ನಿಸಿದಳು. 
"ನನ್ನ ಇಷ್ಟದ ಹಾಗೇ ನಡೆಯುವೆ, ಏಕೆಂದರೆ ನಾನು ದುಡಿಯುವವನು" ಎಂದನು. 
"ಗಂಡ ನಡೆದ ಹಾದಿಯಲಿ ನಡೆಯಬೇಕಾದದ್ದು ಗೃಹಿಣಿ ಧರ್ಮ. ನಾನೂ ನಿಮ್ಮ ದಾರಿಯಲ್ಲಿ  ನಡೆಯುವೆ" ಎಂದ ಅವಳ ಮಾತಿಗೆ "ನನ್ನದೇನೂ ಅಭ್ಯಂತರವಿಲ್ಲ" ಎಂದನು. ಅಂದಿನಿಂದ ಅವನನ್ನು ತಿದ್ದುವ ಪ್ರಯತ್ನ ಮಾಡಲಿಲ್ಲ ಕಮಲ. ಮಗ ವಿಷಮಶೀತಜ್ವರದಿಂದ ಮಲಗಿದಾಗಲೂ ಸಹ ಗಮನಿಸದಂತಿದ್ದನು. 

ಬೆಳೆದ ಮಗ ಡಿಗ್ರಿ ಮುಗಿಸಿ ಕೆಲಸಕ್ಕೆ  ಸೇರಿದ ನಂತರ ತಾಯಿಯನ್ನು "ಈ ನರಕದಿಂದ ಹೊರ ಹೋಗೋಣ" ಎಂದನು. ವಯಸ್ಸಿನ ಪರಿಣಾಮ ಗಂಡ ಶಕ್ತಿಗುಂದಿದ್ದನು. ಮಗನೊಡನೆ ಹೊರಟ ಮಡದಿಯನ್ನು "ಈ ಸ್ಥಿತಿಯಲ್ಲಿ ಬಿಟ್ಟು ಹೋಗುವೆಯಾ?" ಕೇಳಿದನು. 
"ನಿನ್ನ ಸ್ಥಿತಿಗೆ ಕಾರಣ ನಾನಲ್ಲ ನೀನೇ, ಮಾಡಿದ್ದನ್ನು ಅನುಭವಿಸಬೇಕಲ್ಲವೇ? ಹೆಂಗಸಿಗೂ ಆತ್ಮ ಎನ್ನುವುದಿದೆ ಅವಳೂ ತನ್ನ ಆತ್ಮವನ್ನು ಗೌರವಿಸುತ್ತಾಳೆ. ಬೇಕಾದಾಗ ಉಪಯೋಗಿಸಿ ಬೇಡವಾದಾಗ ಬಿಸಾಡುವುದಕ್ಕೆ ನಾವೇನೂ ಹಳೆಯ ಅಂಗಿಗಳಲ್ಲ. ಹಿಂದೆ ನೀನೇ ಹೇಳಿದಂತೆ ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ" ಎಂದಳು.
ಮಗ "ಇಬ್ಬರಲ್ಲಿ ಒಬ್ಬರನ್ನು ಆರಿಸಿಕೋ" ಎಂದನು. "ಕೃತಜ್ಞತೆಯಿಲ್ಲದ ಆತ ಎಂದೋ ನಂಬಿಕೆ ಕಳೆದುಕೊಂಡಿದ್ದಾನೆ" ಎನ್ನುತ್ತಾ ಮಗನ ಜೊತೆ ನಡೆದಳು.
"ಪತಿಯೇ ದೈವ, ಅವರು ಏನೂ ಮಾಡಿದರೂ ಸರಿ " ಎಂದು ನಡೆಯುತ್ತಿದ್ದ ಕಮಲ ಎಚ್ಚೆತ್ತು ತಪ್ಪು  ಮಾಡಿದಾಗ ಅವನನ್ನು ಧಿಕ್ಕರಿಸಿ ಮಗನೊಂದಿಗೆ ನಡೆದದ್ದು, ಅವಿದ್ಯಾವಂತರಾದರೂ ಆತ್ಮಾಭಿಮಾನವಿರುತ್ತದೆ ಎನ್ನುವುದು ಎಷ್ಟೋ ಮಹಿಳೆಯರಿಗೆ ದಾರಿದೀಪವಾಗುತ್ತದೆ. ಈ ಕಥೆ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದೆ.

ಎಂಟು ಗಂಟೆ
ಶ್ರೀನಿವಾಸಯ್ಯ ಮತ್ತು ಜಾನಕಮ್ಮನವರಿಗೆ ಹೇಮ, ರೋಹಿಣಿ ಮತ್ತು ಶೇಖರ್ ಮೂವರು ಮಕ್ಕಳು. ರೋಹಿಣಿ ಒಂಬತ್ತನೆಯ ತರಗತಿಯಲ್ಲಿ ಓದುತ್ತಿದ್ದಳು. ಒಮ್ಮೆ ರೋಹಿಣಿಯನ್ನು ಬಿಟ್ಟು ಉಳಿದವರೆಲ್ಲರೂ ಕೇರಂ ಆಡವಾಡುತ್ತಿದ್ದರು. ರೋಹಿಣಿ ಓದುತ್ತಿದ್ದಳಾದರೂ ಮನಸ್ಸೆಲ್ಲಾ ಆಟದ ಮೇಲಿತ್ತು. ಓದಿದ್ದು ಅರ್ಥವಾಗುತ್ತಿರಲಿಲ್ಲ. ರೋಹಿಣಿ ಓದುವುದನ್ನು ಬಿಟ್ಟು ಅವಳೂ ತನ್ನ ರೂಂನಿಂದ ಅವರೆಲ್ಲ ಇದ್ದೆಡೆಗೆ ಹೋಗಲು ಎದ್ದಳು. ಆದರೆ ಸಮಯದಲ್ಲಿ ಗಡಿಯಾರ ಎಂಟು ಗಂಟೆ ಬಾರಿಸಲು ಪ್ರಾರಂಭಿಸಿತು. ಎದ್ದು ನಿಂತವಳೇ ತಕ್ಷಣ "ಅಮ್ಮಾ" ಎಂದು ಕೂಗಿಕೊಂಡು ಕೆಳಗೆ ಬಿದ್ದಳು.
ಎಲ್ಲರೂ ಗಾಬರಿಯಿಂದ ಓಡಿ ಬಂದರು. ಅಣ್ಣ ಡಾಕ್ಟರ್ ನ್ನು ಕರೆದುಕೊಂಡು ಬಂದನು. ವೈದ್ಯರು ನರಗಳ ದುರ್ಬಲತೆ ಎಂದು ಔಷಧವನ್ನು ಕೊಟ್ಟರು. ಆದರೆ ಅದೇ ರೀತಿ ಪುನರಾವರ್ತನೆಯಾಗಲು ತಂದೆ ತಾಯಿಗಳಿಗೆ ಆತಂಕ ಶುರುವಾಯಿತು. ತಾಯಿ ಗಂಡನಿಗೆ ಕಾಣದಂತೆ ಮಗಳನ್ನು ದೇವಸ್ಥಾನಕ್ಕೆ ಹೋಗಿ ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ.
ಅದೇ ಸಮಯಕ್ಕೆ ಶ್ರೀನಿವಾಸಯ್ಯನವರ ಗೆಳೆಯ ವಿದೇಶದಿಂದ ಬಂದರು. ಇವರು ಅಲ್ಲಿ ಮನಃಶಾಸ್ತ್ರದ ಬಗ್ಗೆ  ಹೆಚ್ಚಿನ ವಿದ್ಯಾಭ್ಯಾಸ ಮಾಡಿಬಂದಿದ್ದರು. ಗೆಳೆಯನ ಮಗಳ ಸಮಸ್ಯೆಯನ್ನು ತಿಳಿದು "ಚಿಂತಿಸಬೇಡ ಇದು ದೈಹಿಕ ಸಮಸ್ಯೆಯಲ್ಲ ಮನಸ್ಸಿಗೆ ಸಂಬಂಧಿಸಿದ್ದು ನಾನು ಸರಿಪಡಿಸುವೆ" ಎಂದು ಧೈರ್ಯ ತುಂಬಿದರು. ನಂತರ ರೋಹಿಣಿಯನ್ನು ಹಿಪ್ನಾಟಿಸಂಗೆ ಒಳಪಡಿಸಿದರು. ಬಾಲ್ಯದಲ್ಲಿ ಅಜ್ಜಿಯ ಮರಣ ಅವಳ ಸುಪ್ತಮನದಲ್ಲಿ ಉಳಿದುಬಿಟ್ಟಿತ್ತು.  ಎಲ್ಲವನ್ನೂ ಮನಸ್ಸಿನಿಂದ ಹೊರ ಹಾಕಿದ್ದರಿಂದ ಮನಸ್ಸು ಹಗುರವಾಗಿ ರೋಹಿಣಿ ಗುಣಮುಖಳಾದಳು.

ಸಲಹೆ
ತಾನು ತಾಯಿಯಾಗುವ ವಿಷಯ ತಿಳಿದ ಮೇಲೆ ಯಾವಾಗಲೂ ಉಲ್ಲಾಸದಿಂದಿರುತ್ತಿದ್ದ ರೇವತಿ ಭಯದಿಂದ ಕಂಪಿಸಿದಳು. ಕಾರಣ ಅವಳ ಅಕ್ಕ ಅವಳ ಇಂತಹ ಸಮಯದಲ್ಲಿ  ಜೀವವನ್ನೇ ಕಳೆದುಕೊಂಡಿದ್ದಳು. ಮನೆಗೆ ಬಂದ ಪತಿಗೆ ತಾನು ತಾಯಿಯಾಗುತ್ತಿರುವ ವಿಷಯವನ್ನು ತಿಳಿಸಿದಳು. "ಮಹಿಳೆಯರಿಗೆ ಇದೊಂದು ಗಂಡಾಂತರ ಗಂಡನಿಂದ ಬರುವ ಅಂತ್ಯ" ಎಂದಳು. ಇದರಿಂದ ಪತಿ ಶ್ರೀಧರ ನೊಂದುಕೊಂಡರು ರೇವತಿ ಸುಮ್ಮನಾಗಲಿಲ್ಲ.
"ಇದೇ ನನ್ನ ಕೊನೆ" ಎಂದೆಲ್ಲ ಹೇಳುತ್ತಾ ದುಃಖಿಸುತ್ತಿದ್ದಳು. ಪತಿ ಎಷ್ಟೇ ಸಮಾಧಾನ ಮಾಡದರೂ ಇವಳ ವರ್ತನೆ ಬದಲಾಗಲಿಲ್ಲ. ಸಾಲದೆಂಬಂತೆ ಗೆಳತಿಯ ತಾಯಿ ಪ್ರಸವದ ಬಗ್ಗೆ ತಪ್ಪು ಕಲ್ಪನೆಗಳ ಮಾತುಗಳನ್ನಾಡಿದರು. ಇದು ಅವಳನ್ನು ಇನ್ನೂ ಭಯಪಡುವಂತೆ ಮಾಡಿತು.
ಕಾಕತಾಳೀಯವೆಂಬಂತೆ "ಸುಮಂಗಲಿ" ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ 'ಅಗ್ನಿಪರೀಕ್ಷೆ' ಕಥೆಯೂ ಇವಳ ಮೇಲೆ ಪ್ರಭಾವ ಬೀರುತ್ತಿತ್ತು. ಅದರಲ್ಲಿ ಆಶಾ ಗರ್ಭಿಣಿಯಾಗಿದ್ದು ಹಲವು ನೋವುಗಳಿಂದ ಬಳಲುತ್ತಿದ್ದಳು. ಓದಿದ ರೇವತಿಯೂ  ತನಗೂ ಸಹ ಅದೇ ನೋವುಗಳಿವೆ ಎಂದು ಹೇಳುತ್ತಿದ್ದಳು. ಕೊನೆಗೆ ದಾರಿ ಕಾಣದ ಶ್ರೀಧರ ಕಥೆಗಾರನ ಬಳಿಗೆ ಹೋಗಿ ತನ್ನ ಮಡದಿಯ ಸಮಸ್ಯೆಯನ್ನು ತಿಳಿಸಿದನು. ಕತೆಗಾರ ಕಥೆಯನ್ನು ದುಃಖಾಂತ ಮಾಡಿದರೆ ಜನಪ್ರಿಯವಾಗುತ್ತಿತ್ತು, ಆದರೆ ಒಂದು ಜೀವದ ಅಳಿವು ಉಳಿವಿನ ಪ್ರಶ್ನೆ ಎಂದು ಯೋಚಿಸಿ ಸುಖಾಂತ ಮಾಡಿದನು. ಕಥೆಯನ್ನು ಓದಿದ ನಂತರ ರೇವತಿ ಮುದ್ದಾದ ಮಗುವಿಗೆ ಜನ್ಮ ನೀಡಿದಳು.
   
ಮೇಲಿನ ಎರಡೂ  ಕಥೆಗಳು ಮನಸ್ಸಿಗೆ ಸಂಬಂಧ ಪಟ್ಟಿವೆ. ಅಂದು ಮನಸ್ಸಿಗೆ ಏನೇ ಕಾಯಿಲೆ ಬಂದರೂ ಮೌಢ್ಯತೆಗೆ ಒಳಗಾಗಿ ವೈದ್ಯರ ಬಳಿಗೆ ಹೋಗುತ್ತಿರಲಿಲ್ಲ. ಆದ್ದರಿಂದ ಯಾವುದೇ ಸಮಸ್ಯೆ ಬಂದರೂ ವೈದ್ಯರ ಬಳಿ ಹೋಗಿ ಬಗೆಹರಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಬಿಳಿಯ ಕಾಗೆ
ಪ್ರೀತಿಯ ಸುಳಿಗೆ ಸಿಲುಕಿದ್ದ ಸುಧಾ ಅವನನ್ನು ಮರೆಯಲಾಗದೆ ಚಡಪಡಿಸುತ್ತಿದ್ದಳು. ಅದುವರೆವಿಗೂ ಎಲ್ಲವೂ ಸರಿಯಾಗಿತ್ತು. ಯಾವಾಗ ಮದುವೆ ಬಗ್ಗೆ ಕೇಳಿದಳೋ ಆಗ ಅರ್ಥವಾಯಿತು ಅವನ ಮನಸ್ಸು ಸುಧಾಳಿಗೆ. ತಾನು ಹಂಸವೆಂದು, ಪ್ರೀತಿಸಿದವನು ಕಾಗೆಯೆಂದು.
"ಮದುವೆಯಾದರೆ ನಾವು ಒಬ್ಬರನೊಬ್ಬರು ಪ್ರೀತಿಸಲು ಆಗುವುದಿಲ್ಲ. ಪ್ರೇಮಿಗಳು ಗಂಡ ಹೆಂಡಿರಾಗಬಹುದು. ಆದರೆ ಗಂಡ ಹೆಂಡತಿ ಪ್ರೇಮಿಗಳಾಗಲು ಸಾಧ್ಯವಿಲ್ಲ, ನಾವು ಕೊನೆಯವರೆವಿಗೂ ಹೀಗೆ ಇರೋಣ" ಎಂದನು.
"ನನ್ನ ಗತಿ?" ಎಂದ ಸುಧಾಳ ಪ್ರಶ್ನೆಗೆ "ನಿನಗೆ ಯಾರಲ್ಲಿ ಪ್ರೀತಿಯಿಲ್ಲವೋ ಅವನನ್ನು ಮದುವೆಯಾಗು" ಎಂದ ಅವನ ಮಾತಿನಿಂದ ಅವಳ ಹೃದಯ ಒಡೆದಂತಾಯಿತು.
ನೊಂದ ಅವಳಿಗೆ ತಂದೆತಾಯಿಗಳ ಮುಂದೆ ನಗುವಿನ ಮುಖವಾಡ ಧರಿಸಿ ನಾಟಕವಾಡಲು ಸಾಧ್ಯವಾಗಲಿಲ್ಲ . ಕೊನೆಗೆ ಕಾಗದ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದಳು.
ಆದರೆ "ಸುಧಾ ನಮ್ಮ ಮನೆಯ ಬೆಳಕು, ಲಕ್ಷ್ಮಿ" ಎಂಬ ಅಮ್ಮನ ಮಾತು, "ಸುಧಾ ದಿಟ್ಟೆ , ಇವಳೊಬ್ಬಳಿದ್ದರೆ ಹತ್ತು ಜನ ಗಂಡು ಮಕ್ಕಳಿದ್ದಂತೆ" ಎನ್ನುವ ಅಪ್ಪನ ಮಾತುಗಳು ಅವಳನ್ನು ಎಚ್ಚರಿಸಿತು.
ಎಚ್ಚೆತ್ತ ಅವಳು ನಾಚಿಕೆ ಪಡುತ್ತಾ "ಯಾರೋ ಹೃದಯವಿಲ್ಲದವನಿಗೆ ನನ್ನ ಪ್ರಾಣವನ್ನೇಕೆ ತ್ಯಾಗ ಮಾಡಲಿ, ಈ ಸೋಲೇ ನನ್ನ ಗೆಲುವಿನ ಸೋಪಾನವಾಗಬಾರದೇಕೆ" ಎಂದು  ತನ್ನ ನಿರ್ಧಾರವನ್ನು ಬದಲಿಸಿದಳು.
ಪ್ರೀತಿ ಎಂಬ ಆಕರ್ಷಣೆಗೆ ಬಲಿಯಾಗಿ ತಪ್ಪು ಹೆಜ್ಜೆ  ಇಟ್ಟು ತಮ್ಮ ಜೀವವನ್ನು ಕೊನೆಗೊಳಿಸಿಕೊಳ್ಳುವ ಯುವಜನತೆಗೆ ಈ ಕಥೆ ಒಂದು ಪಾಠದಂತಿದೆ.

ಆಕರ್ಷಣೆ
ವಸಂತಿ ಏನೂ ಮಾಡಿದರೂ ಗಂಡ ಗೋಪಾಲನ ನಿರುತ್ಸಾಹವನ್ನು ಹೋಗಲಾಡಿಸಲು ಸಾಧ್ಯವಾಗಲಿಲ್ಲ. ಎಲ್ಲದರಲ್ಲೂ ನಿರಾಸಕ್ತಿ.  ಹೀಗಿರಬೇಕಾದರೆ ಗೋಪಾಲನ ಸ್ನೇಹಿತ ಸುಬ್ಬು ಇವರ ಮನೆಗೆ ಬಂದನು. ವಾಚಾಳಿಯಾದ ಇವನು ಬಹು ಬೇಗ ವಸಂತಿಯ ತಮ್ಮನ ಸ್ಥಾನ ಗಳಿಸಿದನು.
ಬ್ರಹ್ಮಚಾರಿಯಾದ ಇವನಿಗೆ ವಸಂತಿಯ ಅಡುಗೆ ಇಷ್ಟವಾಗಿ ವಾರಕ್ಕೊಮ್ಮೆ ಬರುತ್ತಿದ್ದನು. ಕ್ರಮೇಣ ವಸಂತಿಯ ಜೊತೆ ಕೇರಂ, ಚದುರಂಗ, ಇಸ್ಪೀಟು  ಆಟಗಳನ್ನು ಆಡುತ್ತಿದ್ದನು. ಇದನ್ನೆಲ್ಲಾ ನೋಡಿದ ವಸಂತಿ ಮನದಲ್ಲೇ "ಸುಬ್ಬು ಮದುವೆಯಾದರೆ ಎಷ್ಟು ಚೆನ್ನಾಗಿ ಸಂಸಾರ ಮಾಡುವನು" ಎಂದು ಊಹಿಸಿಕೊಳ್ಳುತ್ತಿದ್ದಳು. ಸುಬ್ಬುವಿಗೆ ಬೇರೆಡೆಗೆ ವರ್ಗವಾದಾಗ ವಸಂತಿ ತುಂಬಾ ಬೇಸರಗೊಂಡಳು.
ಸ್ವಲ್ಪ ಕಾಲದ ನಂತರ ಅವನಿಗೆ ಮತ್ತೆ ಇದೇ ಊರಿಗೆ ವರ್ಗವಾಯಿತು. ಮದುವೆಯಾಗಿದ್ದ ಸುಬ್ಬು ಒಂದು ಮಗುವಿನ ತಂದೆಯಾಗಿದ್ದನು. ವಸಂತಿ ಮತ್ತು ಗೋಪಾಲ ಇಬ್ಬರೂ ಸುಬ್ಬುವಿನ ಮನೆಗೆ ಬಂದರು. ಎಂದಿನಂತೆ ಸುಬ್ಬು ಒಂದೇ ಸಮನೆ ಮಾತನಾಡಲಾರಂಭಿಸಿದನು.
ಮಡದಿ ಅಳುತ್ತಿದ್ದ ಮಗುವನ್ನು ಸಮಾಧಾನಿಸಲೂ ಆಗದೆ ಅತಿಥಿಗಳನ್ನು ಉಪಚರಿಸಲೂ ಆಗದೆ ಇರುವುದನ್ನು ನೋಡಿಯೂ ಸಹಾಯ ಮಾಡಲು ಹೋಗಲಿಲ್ಲ ಸುಬ್ಬು.
ಸುಬ್ಬುವಿನ ಮಡದಿ "ನನಗೆ ಇವರು ಇಷ್ಟು  ಮಾತನಾಡುತ್ತಾರೆ" ಎಂದು ತಿಳಿದಿರಲಿಲ್ಲ ಎನ್ನುವುದನ್ನು ಕೇಳಿ ವಸಂತಿ ಆಶ್ಚರ್ಯಗೊಂಡಳು. ಮನೆಗೆ ಬಂದ ವಸಂತಿ ನಾಟಕವನ್ನು ಓದುತ್ತಿದ್ದಳು. ಅದರಲ್ಲಿದ್ದ "ಗಂಡಿಗೆ ಹೆಣ್ಣಿನ ಆಕರ್ಷಣೆ ಮದುವೆಯಾಗುವವರೆಗೆ ಮಾತ್ರವಂತೆ, ಆದರೆ ಹೆಣ್ಣು ಜಾತಿಯ ಮೇಲಿನ ಆಕರ್ಷಣೆ ಹೋಗುವುದಿಲ್ಲವಂತೆ. ಕೈ ಹಿಡಿದ ಹೆಂಡತಿಯಲ್ಲಿ ಮಾತ್ರ ಸೆಳೆತವಿರುವುದಿಲ್ಲವಂತೆ" ಎನ್ನುವ ವಾಕ್ಯ ಅವಳ ಗಮನ ಸೆಳೆಯಿತು. ಇದನ್ನು ಗಂಡನಿಗೆ ಹೇಳಿದಳು ಆದರೆ ಆತನಾಗಲೇ ನಿದ್ದೆಲೋಕಕ್ಕೆ ಜಾರಿದ್ದನು.
ಹೀಗೆ "ಮನೆಗೆ ಮಾರಿ ಪರರಿಗೆ ಉಪಕಾರಿ" ಎಂಬಂತೆ ಮನೆಯಲ್ಲಿ ಮಡದಿ ಮಕ್ಕಳನ್ನು ಗಮನಿಸದೆ ಪರರಿಗೆ ಸಹಾಯ ಮಾಡುವ ಗುಣ ಹಲವರಲ್ಲಿರುತ್ತದೆ. ಇದರಿಂದ ಅವರು ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಆದರೆ ಇದರ ಅರಿವು ಅವರಿಗಿರುವುದಿಲ್ಲ.

ಅವನ ತಾಯಿ
ಮದುವೆಯಾಗಿ ಇಪ್ಪತ್ತು ವರ್ಷಗಳ ನಂತರ ಅವರ ಬಾಳಿನಲ್ಲಿ ಬೆಳಕಾಗಿ ಬಂದ ಮಗ. ಹಲವಾರು ಹರಕೆಗಳ ಫಲ ಎಂಬಂತೆ ಜನಿಸಿದ ಮಗನನ್ನು ಕಂಡರೆ ತಾಯಿ ರಾಜಮ್ಮನಿಗೆ ಎಲ್ಲಿಲ್ಲದ ಪ್ರೀತಿ. ತಾನು ಅವರಿವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರೂ ಮಗನನ್ನು ರಾಜನಂತೆ ಬೆಳೆಸುತ್ತಿದ್ದಳು.
ತಾಯಿಯ ಪ್ರೀತಿಯಲ್ಲಿ ಬೆಳೆದ ಮಗ ಎಲ್ಲಾ ತರಗತಿಯಲ್ಲೂ ಪ್ರಥಮ ಸ್ಥಾನ ಪಡೆಯುತ್ತಿದ್ದನು. ಎಂ ಎಸ್.ಸಿ ಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಾಗ ದೂರವಾಗಿದ್ದ ನೆಂಟರೆಲ್ಲಾ ಹತ್ತಿರಕ್ಕೆ ಬರತೊಡಗಿದರು. ಸಾಹುಕಾರರು ತಮ್ಮ ಮಗಳನ್ನು ಮದುವೆ ಮಾಡಿಕೊಡಲು ಮುಂದೆ ಬಂದರು.
ಸ್ಕಾಲರ್ ಶಿಪ್ ನಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುತ್ತೇನೆ ಮದುವೆಯಾಗುವುದಿಲ್ಲ ಎಂದನು. ವಿದೇಶಕ್ಕೆ ಹೋದ ಮಗ ಪ್ರಾರಂಭದಲ್ಲಿ ಕಾಗದ ಬರೆಯುತ್ತಿದ್ದನು. ಕಾಲಕ್ರಮೇಣ ಅದು ಕಡಿಮೆಯಾಗತೊಡಗಿತು.
ಮಗನ ಬರುವಿಕೆಯನ್ನು ಕಾಯುತ್ತಿದ್ದ ರಾಜಮ್ಮನಿಗೆ ಮಗ ಇನ್ನು ಎರಡು ವರ್ಷ ಬರುವುದಿಲ್ಲವೆಂದಾಗ ಬೇಸರವಾಯಿತು. ನೊಂದ ತಾಯಿ ಹಾಸಿಗೆ ಹಿಡಿದರು. ಪತಿಯ ಆರೈಕೆಯಿಂದ ಚೇತರಿಸಿಕೊಂಡರು.
ಮಗ ಮದುವೆಯಾಗಿರುವನೆಂದು ಇತರರ ಮಾತುಗಳನ್ನು ಕೇಳಿದರೂ ತಂದೆ ತಾಯಿಗಳು ಮಗನ ಮೇಲಿನ ನಂಬಿಕೆಯನ್ನು ಕಳೆದುಕೊಂಡಿರಲಿಲ್ಲ. ಕೊನೆಗೆ ಮಗನೇ ತಾನು ಮದುವೆಯಾಗಿದ್ದೇನೆ ಹಾಗೂ ಇಲ್ಲಿಯೇ ನೆಲೆಸುತ್ತೇನೆ ಎಂದಾಗ ತಾಯಿ ಹುಚ್ಚಿಯಂತಾದರು.
ವೈದ್ಯರ ನೆರವಿನಿಂದ ಅವರ ಉದ್ವೇಗ ಕಡಿಮೆಯಾಗಿ ಚೇತರಿಸಿಕೊಂಡರು. ಹನ್ನೆರಡು ವರ್ಷಗಳ ನಂತರ ವಿದೇಶಿ ಪತ್ನಿಗೆ ತಾಯ್ನಾಡನ್ನು ತೋರಿಸುವ ಸಲುವಾಗಿ ಸ್ವದೇಶಕ್ಕೆ ಬಂದನು. ಅಲ್ಲಿನ ಸಪ್ಪೆ ಆಹಾರಕ್ಕೆ ಹೊಂದಿಕೊಂಡಿದ್ದ ಅವನಿಗೆ ತಾಯಿಯು ಪ್ರೀತಿಯಿಂದ ಮಾಡಿದ ಅಡುಗೆ ರುಚಿಸಲಿಲ್ಲ.
ತಾನು ತಂದಿದ್ದ ಕಾಣಿಕೆಗಳನ್ನು ಕೊಡಲು ಬಂದಾಗ ತಾಯಿ ನಿರಾಕರಿಸಿದಳು. ಕೊನೆಗೆ "ನಮಗೋಸ್ಕರ ರಜೆಯನ್ನು ಕಳೆದುಕೊಳ್ಳಬೇಡ" ಎಂದ ಅಮ್ಮನ ಮಾತಿನಿಂದ ಮಗ ಅವಾಕ್ಕಾದನು.
ಮಗ ಸೊಸೆ ವಿದೇಶಕ್ಕೆ ಹೋದ ನಂತರ ಪತಿಯೊಂದಿಗೆ "ನಾನು ಸಾವಿರ ಹರಕೆ ಕಟ್ಟಿ ಮಗನನ್ನು ಪಡೆದೆ. ಆದರೆ ಈಗ ಅನಿಸುತ್ತಿದೆ ನಾನು ಕೊನೆಯವರೆಗೂ ಬಂಜೆಯಾಗಿಯೇ ಉಳಿದಿದ್ದರೆ ಚೆನ್ನಾಗಿರುತ್ತಿತ್ತು" ಎಂದು ಹೇಳಿದರು.
ಮಡದಿಯ ಮಾತನ್ನು ಕೇಳಿದ "ಮಕ್ಕಳಿಲ್ಲದೆ ಮೋಕ್ಷವಿಲ್ಲ ಎನ್ನುತ್ತಿದ್ದವಳು ಇವಳೇನಾ" ಎಂದು ಆಶ್ಚರ್ಯದಿಂದ ನೋಡಿದರು ಸೋಮಯ್ಯ.
ಸತ್ತ ಮನುಷ್ಯರ ಬಗ್ಗೆ  ಮಾತನಾಡಿದರೆ ಏನು ಪ್ರಯೋಜನ ಎನ್ನುವ ಆ ತಾಯಿಯ  ಮನಸ್ಸಿನ ನೋವನ್ನು ಮನ ಮುಟ್ಟುವಂತೆ ಬರೆದಿದ್ದಾರೆ.
ಹೀಗೆ ತ್ರಿವೇಣಿಯವರು ತಮ್ಮ ಬದುಕಿದ ಅಲ್ಪಾವಧಿಯಲ್ಲಿಯೇ ಹಲವಾರು ಕಾದಂಬರಿಗಳು, ಸಣ್ಣ ಕಥೆಗಳನ್ನು ಬಹಳ ಚೆನ್ನಾಗಿ ಬರೆದಿದ್ದಾರೆ. ಮಾನಸಿಕ ಕಾಯಿಲೆಗಳ ಬಗ್ಗೆ ತಪ್ಪು ಕಲ್ಪನೆಗಳಿದ್ದ ಸಮಯದಲ್ಲಿ ಅದನ್ನು  ಹೋಗಲಾಡಿಸುವ ಪ್ರಯತ್ನಗಳನ್ನು ಮಾಡಿದ್ದಾರೆ.
 - ವಿಜಯಲಕ್ಷ್ಮಿ  ಎಂ ಎಸ್   

ಕಾಮೆಂಟ್‌ಗಳಿಲ್ಲ: