Pages

ಕವನ: "ಕಾಲಕ್ರಮ"

(ವಾಟ್ಸಾಪ್ ನಲ್ಲಿ ಕಂಡ ಕಥೆಯಿಂದ ಪ್ರೇರಿತ)

ಒಟ್ಟು ನಾಕು ಸುತರರಿದ್ದ
ಪಿತನು ಎಣಿಸುತ್ತಿದ್ದನು.
ಅವರಾತುರ ನಿರ್ಧಾರಕ್ಕೆ
ಪಾಠ ಕಲಿಸಲಿದ್ದನು

ದೂರವಿದ್ದ ಪೇರುಮರವ
ನೋಡಿಬನ್ನಿ ಎಂದನು
ಋತುವಿಗೊಬ್ಬನಂತೆ ಅವರು
ಮರವ ನೋಡಿಬಂದರು

ತಂದೆ ಕರೆದು ಸುತರನುಭವ
ಕೇಳಿ ತಿಳಿಯಲಿಚ್ಛಿಸಿದನು
ಅವರು ತಮ್ಮ ಮರವರ್ಣನೆ
ಇನಿತು ಎಂದು ಶುರುಹಚ್ಚಿದರು

ಶಿಶಿರದಲ್ಲಿ ಮರ ಕರಾಳ
ವಕ್ರವದು... ಪ್ರಥಮನು.
ವಸಂತದಲ್ಲಿ ಎಲ್ಲ ಮೊಗ್ಗು
ಭರವಸೆಯದು.. ದ್ವಿತೀಯನು

ವೈಶಾಖದಿ ಘಮಿಸುವ ಹೂ
ದಯೆಸ್ವರೂಪಿ..ತೃತೀಯನು
ವರ್ಷಾಕಾಲ ಬಲಿತ ಹಣ್ಣು
ಪರಿಪಕ್ವತೆ... ಕೊನೆಯವನು

ನೀವು ನುಡಿದುದೆಲ್ಲ ದಿಟವು
ನಸುನಕ್ಕುತ ನುಡಿದ ಪಿತನು
ಕಾಲಕೊಂದರಂತೆ ರೂಪ
ಅಂತೆಯೇ ಈ ಜೀವನವು

ಕಷ್ಟಕ್ಹೆದರಿ ಓಡುವೆಯೋ
ಬೆಳೆಸಲಾರೆ ಭರವಸೆಯ
ಸವಿಯಲಾರೆ ಸುಂದರತೆಯ
ಪಡೆಯಲಾರೆ ಪರಿಪೂರ್ಣತೆಯ

- ಉಷಾಗಂಗೆ

ಕಾಮೆಂಟ್‌ಗಳಿಲ್ಲ: