Pages

ಅನುವಾದ: "ಒಂದು ಸಣ್ಣ ಘಟನೆ"

ಅನುವಾದ : (ಇಂಗ್ಲಿಷ್ ಭಾಷೆಗೆ ಅನುವಾದವಾಗಿರುವ ರಷ್ಯಾ ಭಾಷೆಯ ಕಥೆ)

ಒಂದು ಸಣ್ಣ ಘಟನೆ

ಸೋವಿಯತ್ ಅಧಿಕಾರಕ್ಕಾಗಿ ನಡೆದ ಹೋರಾಟದ ಉಚ್ಛ ಘಟ್ಟದಲ್ಲಿದ್ದಾಗ ಪೆಟ್ರೊಗ್ರಾಡ್‍ನಲ್ಲಿ ನಡೆದ ಒಂದು ಘಟನೆಯಿದು. ಆ ಕಾಲದ ಮಹಾನ್ ಐತಿಹಾಸಿಕ ಘಟನೆಗಳಲ್ಲಿ ಈ ಘಟನೆ ಅಷ್ಟಾಗಿ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಇದನ್ನು ನೆನಪಿಸಿಕೊಳ್ಳುವುದು ಯೋಗ್ಯವಾಗಿದೆ, ಏಕೆಂದರೆ ಕೇವಲ ದೊಡ್ಡ ಘಟನೆಗಳ ಮೇಲಷ್ಟೇ ಅಲ್ಲದೆ ಬಹಳ ಸಣ್ಣ ಘಟನೆಗಳ ಮೇಲೂ ಸಹ ಕಾಲ ಮಹಾನ್ ಕ್ರಾಂತಿಯ ಛಾಪನ್ನು ಮೂಡಿಸುತ್ತದೆ.
ಘಟನೆ ನಡೆದದ್ದು ಹೀಗೆ.
ಪ್ರಾಂತೀಯ ಸರ್ಕಾರವನ್ನು ಉರುಳಿಸಿದ 2-3 ದಿನಗಳ ನಂತರ ನಾರ್ವಾ ಜಿಲ್ಲೆಯಿಂದ ಕಾರ್ಮಿಕನೊಬ್ಬ, ಸೋವಿಯತ್ ಅಧಿಕಾರದ ಕೇಂದ್ರ ಸ್ಥಾನವಾದ ಸ್ಮಾಲ್ನಿಗೆ ಬಂದ. ಅವನೊಂದು ತುಕ್ಕು ಹಿಡಿದ, ಸೀಮೆಎಣ್ಣೆ ಡಬ್ಬವನ್ನು ತಂದಿದ್ದ. ಗೇಟಿನ ಬಳಿ ಕಾವಲುಗಾರರು ಕೇಳಿದಾಗ, ಸರ್ಜಿಯೆವ್ ಎಂಬ ಆ ಕಾರ್ಮಿಕ ಹೇಳಿದ್ದಿಷ್ಟು : “ನಾನು ಪುಟಿಲೊವ್ ಕಾರ್ಖಾನೆಯಿಂದ ಬರುತ್ತಿದ್ದೇನೆ. ನಮ್ಮ ಹಾಸ್ಟೆಲ್‍ನಲ್ಲಿ ಬಹಳ ದಿನಗಳಿಂದಲೂ ಬೆಳಕಿಲ್ಲ. ನಮಗೆ ಸೀಮೆಎಣ್ಣೆ ಸಿಗುತ್ತಿಲ್ಲ. ಈಗ ನಮ್ಮದೇ ಜನರ ಅಧಿಕಾರವಿರುವುದರಿಂದ, ನನ್ನ ಸಂಗಾತಿಗಳು ನನ್ನನ್ನು ಲೆನಿನ್‍ರನ್ನು ಕಂಡು ಈ ಡಬ್ಬದ ತುಂಬ ಸೀಮೆಎಣ್ಣೆ ತರಲು ಕಳಿಸಿದ್ದಾರೆ.”
“ನಿನಗೇನೂ ತಲೆ ಕೆಟ್ಟಿದೆಯೇ?” ಕೇಳಿದರು ಕಾವಲುಗಾರರು. “ಕಾಮ್ರೇಡ್ ಲೆನಿನ್‍ರಿಗೆ ನಿನ್ನ ಸೀಮೆಎಣ್ಣೆ ಬಗ್ಗೆ ಚಿಂತಿಸುವುದಕ್ಕಿಂತ ಮುಖ್ಯವಾದ ಹಲವಾರು ಚಿಂತೆಗಳಿವೆ. ಅವರು ವಿಶ್ವವ್ಯಾಪಿ ಕ್ರಾಂತಿಯ ಬಗ್ಗೆ ಯೋಚನೆ ಮಾಡಬೇಕಿದೆ. ನೀನು ನೋಡಿದರೆ ನಿನ್ನ ಡಬ್ಬದೊಂದಿಗೆ ಅವರನ್ನು ತೊಂದರೆ ಮಾಡಲು ಬಂದಿದ್ದೀಯ!”
ಆದರೆ ಆ ಕಾರ್ಮಿಕ ಸರ್ಜಿಯೆವ್ ಅಷ್ಟು ಸುಲಭವಾಗಿ ಮಾತನ್ನು ಕೇಳುವವನಾಗಿರಲಿಲ್ಲ. ಬಹುಶಃ ಅದಕ್ಕಾಗಿಯೇ ಅವನ ಸಂಗಾತಿಗಳು ಅವನನ್ನು ತಮ್ಮ ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಂಡಿರಬೇಕು.
“ಏನೇ ಆಗಲಿ, ಸ್ನೇಹಿತರೇ,” ಅವನು ಉತ್ತರಿಸಿದ, “ವಿಂಟರ್ ಪ್ಯಾಲೆಸ್‍ಅನ್ನು ವಶಪಡಿಸಿಕೊಂಡ ನಾವು ನಮ್ಮ ಸಂಜೆಗಳನ್ನು ಕತ್ತಲೆಯಲ್ಲಿ ಕಳೆಯುವುದು ಹೇಗೆ? ನಾನು ಬರಿಗೈಲಿ ಹೋಗುವವನಲ್ಲ. ನೀವು ಏನೇ ಹೇಳಿದರೂ, ನಾನು ಲೆನಿನ್‍ರವರನ್ನು ನೋಡಬೇಕು.”
“ಸರಿ, ಅವರನ್ನು ನೋಡಲೇಬೇಕೆಂದಿದ್ದರೆ, ನೀನೇ ಹೋಗಿ ಹುಡುಕು.”
ಅವನು ಕಛೇರಿಯ ಒಳಹೊಕ್ಕು ಲೆನಿನ್ ಎಲ್ಲಿ ಎಂದು ಸಿಕ್ಕಸಿಕ್ಕವರನ್ನೆಲ್ಲಾ ಕೇಳಿದ. ಲೆನಿನ್‍ರವರು ಕೊಠಡಿ 6 ರಲ್ಲಿ ಇದ್ದಾರೆಂದು ಯಾರೋ ಹೇಳಿದರು.
ಸರ್ಜಿಯೆವ ಕೊಠಡಿ 6ರ ಒಳಹೊಕ್ಕ. ಅದು ಜನರಿಂದ ತುಂಬಿಹೋಗಿತ್ತು. ಕೆಲವರು ಡೆಸ್ಕ್‍ನ ಮೇಲೆ, ಕೆಲವರು ಕುರ್ಚಿಗಳ ಮೇಲೆ ಕುಳಿತಿದ್ದರೆ, ಇನ್ನೂ ಕೆಲವರು ಬಾಗಿಲ ಬಳಿ ನಿಂತಿದ್ದರು.
 ಅಲ್ಲಿ ಅವರು ವಿಶ್ವವ್ಯಾಪಿ ಕ್ರಾಂತಿಯ ಬಗ್ಗೆ ಚರ್ಚೆ ಮಾಡುತ್ತಿದ್ದುದ್ದನ್ನು ತನ್ನ ಕಿವಿಯಾರೆ ಕೇಳಿದ. ಅವರು ಕೈಸರ್ ವಿಲ್ಹೆಲ್ಮ್ ಮತ್ತು ಜರ್ಮನಿಯ ಬಗ್ಗೆ, ಹಿಂಡೆನ್‍ಬರ್ಗ್ ಬಗ್ಗೆ ಮತ್ತು ವಿಶ್ವದಾದ್ಯಂತ ಕಾರ್ಮಿಕರ ಐಕ್ಯತೆಯ ಬಗ್ಗೆ ಮಾತನಾಡುತ್ತಿದ್ದದ್ದನ್ನು ಕೇಳಿಸಿಕೊಂಡ.
ತನ್ನ ಡಬ್ಬದೊಂದಿಗೆ ಒಳಗೆ ಬಂದಿದ್ದರ ಬಗ್ಗೆ ನಾಚಿಕೆಪಡುತ್ತಾ, ಮೌನವಾಗಿ ಹಿಂತಿರುಗಲು ಯತ್ನಿಸುತ್ತಿದ್ದಾಗ, ಡೆಸ್ಕ್‍ನ ಕಡೆಯಿಂದ ತಿರುಗಿ ವ್ಯಕ್ತಿಯೊಬ್ಬರು “ಅದೇನು ಡಬ್ಬ ಕಾಮ್ರೇಡ್?” ಕೇಳಿದರು.
ಸರ್ಜಿಯೆವ್ ಹಿಂಜರಿದರೂ, ಮಾತನಾಡಿದ: “ನಾನು ಒಮ್ಮೆ ಲೆನಿನ್‍ರವರನ್ನು ಕಾಣಬಯಸುತ್ತೇನೆ.”
ಆ ವ್ಯಕ್ತಿಗಳು ಪಕ್ಕಕ್ಕೆ ಸರಿಯುತ್ತಿದ್ದಂತೆ ಅವನಿಗೆ ಲೆನಿನ್ ಕಂಡರು.
ಅವರು ಸರ್ಜಿಯೆವ್ ಕಡೆ ಪ್ರಶ್ನಾರ್ಥಕ ದೃಷ್ಟಿಯನ್ನು ಬೀರಿ, “ಏನು ಬೇಕು ಕಾಮ್ರೇಡ್?” ಎಂದರು.
“ನೋಡಿ, ಇದು ಹೀಗಿದೆ. ಪುಟಿಲೊವ್‍ನ ಕಾರ್ಖಾನೆಯ ನನ್ನ ಸಂಗಾತಿಗಳು ನನ್ನನ್ನು ಇಲ್ಲಿ ಕಳಿಸಿದ್ದಾರೆ. ನಮ್ಮ ಕಾರ್ಮಿಕರ ರಾಜ್ಯದ ಮುಖ್ಯಸ್ಥರಾದ ನಿಮ್ಮ ಬಳಿ ಸ್ವಲ್ಪ ಸೀಮೆಎಣ್ಣೆ ಕೇಳಲು, ಏಕೆಂದರೆ ನಾರ್ವಾ ಜಿಲ್ಲೆಯ ನಮ್ಮ ಹಾಸ್ಟೆಲ್‍ನಲ್ಲಿ ಸೀಮೆಎಣ್ಣೆ ಇಲ್ಲ, ಮತ್ತು ನಾವು ಸಂಜೆಯ ವೇಳೆ ಸಂಪೂರ್ಣ ಕತ್ತಲೆಯಲ್ಲಿ ಕಳೆಯಬೇಕಿದೆ.”
ಲೆನಿನ್ ಸ್ವಲ್ಪ ಕಾಲ ಯೋಚಿಸಿ, ತಮ್ಮ ಪಕ್ಕದಲ್ಲಿ ಕುಳಿತ ವ್ಯಕ್ತಿಯೊಬ್ಬರ ಹತ್ತಿರ ಕೇಳಿದರು, “ಸ್ಮಾಲ್ನಿಯಲ್ಲಿ ನಮ್ಮ ಬಳಿ ಸೀಮೆಎಣ್ಣೆ ಇದೆಯೇ?”
ಅದೇ ವೇಳೆಯಲ್ಲಿ ಕುರ್ಚಿಯ ಮೇಲೆ ಕುಳಿತಿದ್ದ ವ್ಯಕ್ತಿಯೊಬ್ಬ ಎದ್ದು ಜೋರಾಗಿ ಕೂಗಾಡಲಾರಂಭಿಸಿದ, “ವ್ಲಾದಿಮಿರ್ ಇಲ್ಯಿಚ್, ಈ ಘಳಿಗೆಯಲ್ಲಿ ನಾವು ಪ್ರಪಂಚದ ಭವಿಷ್ಯದ ಬಗ್ಗೆ ಚರ್ಚಿಸಲು ಕುಳಿತಿರುವಾಗ, ಒಂದು ಡಬ್ಬ ಸೀಮೆಯೆಣ್ಣೆಯ ಸಮಸ್ಯೆಯ ಬಗ್ಗೆ ಪರಿಗಣಿಸಲು ಇತಿಹಾಸ ನಮ್ಮನ್ನಿಲ್ಲಿ ಕೂರಿಸಿಲ್ಲ!”
ಸರ್ಜಿಯೆವ್ ಒಂದು ಘಳಿಗೆ ಆಘಾತಕ್ಕೊಳಗಾದರೂ, ಲೆನಿನರವರು ಈ ಎಲ್ಲಾ ಕೂಗಾಟವನ್ನು ಕೇಳಿಸಿಕೊಳ್ಳದೆ ತಮ್ಮ ಬರಹದ ಪ್ಯಾಡ್‍ನಲ್ಲಿ ಬರೆಯುತ್ತಿರುವುದನ್ನು ಗಮನಿಸಿ ಸುಮ್ಮನಾದ. ಲೆನಿನ್‍ರವರು ಬರೆದದ್ದನ್ನು ಮುಗಿಸಿದ ನಂತರ ಆ ಹಾಳೆಯನ್ನು ಸರ್ಜಿಯೆವ್‍ಗೆ ನೀಡುತ್ತಾ, “ಈ ಪತ್ರ ತೆಗೆದುಕೊ ಕಾಮ್ರೇಡ್, ಪೆಟ್ರೊವ್‍ನನ್ನು ನೋಡು, ಅವನು ನಿನಗೆ ಸೀಮೆಎಣ್ಣೆ ಕೊಡುತ್ತಾನೆ.”
ಸರ್ಜಿಯೆವ್‍ಗೆ ಲೆನಿನ್‍ರನ್ನು ವಂದಿಸಬೇಕಿತ್ತು, ತನ್ನ ಸಂಗಾತಿಗಳ ಪರವಾಗಿ ಕೃತಜ್ಞತೆ ಅರ್ಪಿಸಬೇಕಿತ್ತು. ಆದರೆ ಈಗಾಗಲೇ ಅವರ ಸಾಕಷ್ಟು ಸಮಯವನ್ನು ತಾನು ತೆಗೆದುಕೊಂಡದ್ದರಿಂದ, ಕೇವಲ ಲೆನಿನರಿಗೆ ಧನ್ಯವಾದಗಳನ್ನು ಹೇಳಿ, ಚೀಟಿಯನ್ನು ತೆಗೆದುಕೊಂಡು ಬಾಗಿಲಿನತ್ತ ತರಳಿದ.
ಕೋಣೆ ಈಗ ಶಾಂತವಾಗಿತ್ತು. ಬಾಗಿಲನ ಬಳಿಗೆ ಬಂದಾಗ ಲೆನಿನ್‍ರು ಆ ಇನ್ನೊಬ್ಬ ವ್ಯಕ್ತಿಗೆ ಹೇಳುತ್ತಿರುವುದು ಕೇಳಿಸಿತು, “ ಹೌದು, ಇತಿಹಾಸ ನಮ್ಮನ್ನು ಮುಖ್ಯ ವಿಷಯಗಳ ಬಗ್ಗೆ ಚರ್ಚಿಸಲೆಂದೇ ಇಲ್ಲಿ ಸೇರಿಸಿದೆ, ಆದರೆ ನೀವು ನಂಬಿ ಅಥವಾ ಬಿಡಿ, ಸೀಮೆಎಣ್ಣೆ ಸಹ ನಮ್ಮ ಕಾಳಜಿಯೇ. ಅದಕ್ಕಿಂತ ಮುಖ್ಯವಾಗಿ, ನಾವು ಯಾವುದೇ ಒಬ್ಬ ಸಾಮಾನ್ಯ ಕಾರ್ಮಿಕನ ಒಂದು ಸರಳ ಆಶೆಯನ್ನೂ ಸಹ ನಿರಾಶೆಗೊಳಿಸದಿರುವುದು, ಒಂದು ಸಣ್ಣ ಅವಶ್ಯಕತೆಯನ್ನೂ ಸಹ ಅಲ್ಲಗೆಳೆಯದಿರುವುದು.”
ಸರ್ಜಿಯೆವ್ ಈ ಮಾತುಗಳನ್ನು ಕೇಳಿಸಿಕೊಂಡಾಗ ತನ್ನಷ್ಟಕ್ಕೆ ತಾನು ಅಂದುಕೊಂಡ: “ ಆಹಾ! ಸೀಮೆ ಎಣ್ಣೆಗಿಂತಲೂ ಮುಖ್ಯವಾದದ್ದು ಇದೆಯಂತೆ!”
ಅವನಿಗೆ ಸ್ಟೋರ್ ರೂಮ್‍ನಲ್ಲಿ ಸೀಮೆಎಣ್ಣೆ ಅಂದೇ ಸಿಕ್ಕಿತು, ಆತ ಬರಿಗೈಲಿ ಹಿಂತಿರುಗುವ ಪರಿಸ್ಥಿತಿ ಬರಲಿಲ್ಲ. ಇಷ್ಟು ಸಣ್ಣ ವಿಚಾರ ಸುಲಭವಾಗಿ ಪರಿಹಾರವಾಗಿದ್ದು ಎಲ್ಲರಿಗೂ ತೃಪ್ತಿಯನ್ನು ನೀಡಿತ್ತು.


(ಅನುವಾದ - ಸುಧಾ ಜಿ)

ಕಾಮೆಂಟ್‌ಗಳಿಲ್ಲ: