Pages

ಪುಸ್ತಕ ಪ್ರೀತಿ - ನಿರಕ್ಷರಿಯ ಆತ್ಮಕಥೆ






ಅವಿದ್ಯಾವಂತೆಯಾಗಿದ್ದರೂ ವಿವಾಹಾನಂತರ ಅಕ್ಷರ ಕಲಿತು ಬೇಬಿ ಹಾಲ್ದಾರ್ ರವರ ಆತ್ಮಕಥೆ ಆಲೋ-ಅಂಧೇರೆ (ಬೆಳಕು ಕತ್ತಲೆ) ಯನ್ನು ಓದಿ ತಮ್ಮ ಆತ್ಮಕಥೆಯನ್ನು ಹೆಸರು ಬದಲಾಯಿಸಿ ಬರೆದ ಸುಶೀಲ್ ರಾಯ್ ರವರ "ನಿರಕ್ಷರಿಯ ಆತ್ಮಕಥೆ" (ಏಕ್ ಅನ್ ಪಡ್ ಕೀ ಕಹಾನಿ) ಯನ್ನು ನಿಮ್ಮ ಮುಂದಿಡುವ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ.

ಒಬ್ಬ ಅಣ್ಣ ಮತ್ತು ಇಬ್ಬರು ತಮ್ಮಂದಿರ ನಡುವೆ ಹುಟ್ಟಿದ ಊರ್ಮಿಳಾ ನೋಡಲು ಕಪ್ಪಾಗಿದ್ದಳು. ತಂದೆ ಓದು ಬರಹ ಬಲ್ಲವರಾಗಿದ್ದರೂ ಮಗಳನ್ನು ಓದಿಸದೆ ಮದುವೆ ಮಾಡಬೇಕೆಂದು ಯೋಚಿಸುತ್ತಿದ್ದರು. ಬಹುಶಃ  ಊರ್ಮಿಳಾಳ ಬಣ್ಣ ಇದಕೆ ಕಾರಣವೇನೋ.! ಹುಡುಗ ಇವಳನ್ನು ನೋಡದೆ ಹಿರಿಯರು ನಿಶ್ಚಯಿಸಿದ ಮದುವೆಗೆ ಒಪ್ಪಿಗೆಯನ್ನಿತ್ತ ಅವಿನಾಶ್. ಮದುವೆಯಂದು ಹುಡುಗಿಯನ್ನು ನೋಡಿ ನನಗೆ ತಕ್ಕವಳಲ್ಲ ಎಂದು ನೊಂದುಕೊಂಡನು. ಆದರೆ ಮದುವೆಯನ್ನು ನಿಲ್ಲಿಸಲಿಲ್ಲ. ಅಂದು ಆ ಮದುವೆಯೇನಾದರೂ ನಡೆಯದಿದ್ದರೆ ಇಂದು ಈ ಕಥೆ ನಮ್ಮ ಮುಂದೆ ಇರುತ್ತಿರಲಿಲ್ಲ.
ಮದುವೆಯಾಗಿ ಗಂಡನ ಮನೆಗೆ ಹೊರಟ ಊರ್ಮಿಳಾಳಿಗೆ ಮನದಲ್ಲಿ ತಳಮಳ ಪ್ರಾರಂಭವಾಯಿತು. ಇಷ್ಟವಿಲ್ಲದಿದ್ದರೂ ಮದುವೆಯಿಂದ ಗಂಡ ಮುಂದೆ ಹೇಗೋ? ಏನೋ? ಎನ್ನು ವಿಚಾರ ಮನದಲ್ಲಿ ತುಂಬಿತ್ತು. ತನ್ನ ಮನೆಗೆ ಬಂದ ಅವಿನಾಶ್ ಅಜ್ಜ, ಅಪ್ಪನ ಮೇಲೆ ಕೂಗಾಡಿದನು. "ವರದಕ್ಷಿಣೆಯಾಗಿ ಕೊಟ್ಟಿರುವ ವಸ್ತುಗಳನ್ನು ನಾನೇ ತಂದು ಕೊಡುತ್ತಿದ್ದೆ, ನಿಮ್ಮಿಂದ ನನ್ನ ಜೀವಮಾನೇ ಹಾಳಾಯಿತು, ಇಂತಹ ಹುಡುಗಿಯ ಜೊತೆ ಮದುವೆ ಮಾಡಿದ್ದೀರಾ ಮುಂದೇನಾಗುವುದೋ ನಿಮಗೆ ಬಿಟ್ಟಿದ್ದೀನಿ" ಎಂದು ಕೂಗಾಡಿದನು.
ಅಳುತ್ತಿದ್ದ ತಂಗಿಯನ್ನು ಅಣ್ಣ ಸಮಾಧಾನ ಮಾಡಿದನು. ಗಂಡನ ಮನೆಯಿಂದ ಬಂದ ಊರ್ಮಿಳಾ ತಾಯಿಯನ್ನು "ಯಾಕವ್ವಾ ಸುಂದರವಾದ ಹುಡುಗಿಯನ್ನಾಗಿ ನನ್ನನ್ನು ಹಡೆಯಲಿಲ್ಲಾ, ಈಗ ನೋಡು ಕುರೂಪಿ ಹುಡುಗಿಗೆ ಜನ್ಮ ಕೊಟ್ಟ ತಾಯಿ ಎಂಬ ಮಾತನ್ನು ನೀನು ಕೇಳಬೇಕಾಗಿದೆ, ಬದಲಾಗಿ ನಾನು ಹುಟ್ಟಿದ ಕೂಡಲೇ ನನ್ನನ್ನು ಯಾಕೆ ಸಾಯಿಸಲಿಲ್ಲ ಎಂದು ಕೇಳಿದಳು. "ನಿನ್ನನ್ನು ಎಷ್ಟು ಕಷ್ಟಪಟ್ಟು ಹಡೆದಿದ್ದೀನಿ ಅಂತ ನಿನ್ಗೆ ಗೊತ್ತಾ, ಈಗ ನನ್ನನ್ನು ಯಾಕೆ ಸಾಯಿಸಲಿಲ್ಲ ಎನ್ನುತ್ತಿರುವೆಯಲ್ಲಾ" ಎಂದು ಮಗಳನ್ನು ಕೇಳಿದಳು.
ಹೀಗೆ ತಾಯಿಯ ಮನೆಯಲ್ಲಿ ಕಾಲ ಕಳೆಯುತ್ತಿರಲು ಅವಿನಾಶ್ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮುಂದೆ ಓದುವುದಿಲ್ಲವೆಂದು ದೆಹಲಿಗೆ ಓಡಿ ಹೋಗಿರುವ ವಿಷಯ ಊರ್ಮಿಳಾಗೆ ತಿಳಿಯಿತು. ಅಲ್ಲದೆ ಗೌನ ( ಮದುವೆಯಾದ ಹುಡುಗಿ ಋತುಮತಿಯಾದ ನಂತರ ವಿಧಿಪೂರ್ವಕವಾಗಿ ಗಂಡನ ಮನೆಗೆ ಕರೆದು ಕೊಂಡು ಬರುವುದು) ಮಾಡಿಕೊಳ್ಳಲು ಒಪ್ಪದಿರುವ ಗಂಡ, ಮುಂದೆ ಏನೂ ತೋಚದೆ ಅಳುತ್ತಿದ್ದಳು ಊರ್ಮಿಳಾ.
ಐದು ವರ್ಷಗಳ ನಂತರ ಗೌನ ಮಾಡಿಕೊಳ್ಳಲು ಒಪ್ಪಿ ಊರ್ಮಿಳಾಳನ್ನು ಮನೆಗೆ ಕರೆದುಕೊಂಡು ಬಂದರು. ಎಲ್ಲರೂ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದರು. ಗಂಡ ಕಲ್ಕತ್ತಾದಲ್ಲಿ ಅವಿನಾಶ್ ರಮೇಶ್ ಬಾಬು ಎಂಬುವವರ ಬಳಿ  ಕೆಲಸ ಮಾಡುತ್ತಿದ್ದು ವರ್ಷಕ್ಕೊಮ್ಮೆ ಬಂದು ಹೋಗುತ್ತಿದ್ದರೂ ಮಡದಿಯೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಎಲ್ಲರೂ ಅವಳನ್ನು ಮಕ್ಕಲಾಗಲಿಲ್ಲವೆಂದು ಕೇಳತೊಡಗಿದರು. ಜೊತೆಗೆ ಗಂಡನು  ಸಹ ಅವಳಿಗೆ ತಾನು ಎರಡನೇ ಮದುವೆಯಾಗುತ್ತೇನೆ "ನಿನಗೆ ಹತ್ತು ಸಾವಿರ ರೂಗಳು ಜೊತೆಗೆ ನನ್ನ ಜಮೀನನ್ನು ಕೊಡುತ್ತೇನೆ ನೀನು ಇನ್ನೊಂದು ಮದುವೆಯಾಗು" ಎನ್ನುತ್ತಿದ್ದನು. ಗಂಡನ ಈ ಮಾತನ್ನು ಒಪ್ಪದ ಊರ್ಮಿಳಾ "ನೀವು ಮದುವೆಯಾಗಿ, ನಾನು ನಿಮ್ಮ ಮನೆಕೆಲಸದವಳಾಗಿ ಇರುತ್ತೇನೆ" ಎಂದಳು. 
ಅವಿನಾಶ್ ಗೆ ರಮೇಶ್ ಬಾಬು ಬುದ್ಧಿ ಹೇಳಿ, "ಎರಡನೇ ಮದುವೆ ಏಕೆ?, ನಿನ್ನ ಹೆಂಡತಿಯಲ್ಲಿ ಯಾವ ದೋಷವಿದೆ? ಆಕೆಗೆ ಮಗುವಾಗುವುದೇ ಇಲ್ಲವೇ?  ಇಲ್ಲಿಗೆ ಕರೆದುಕೊಂಡು ಬಂದು ಡಾಕ್ಟರಿಗೆ ತೋರಿಸು" ಎಂದರು.
ಹಾಗೆಯೇ ಊರ್ಮಿಳಾಗೆ ಪತ್ರ ಬರೆದು ಅವಳಿಗೆ ಧೈರ್ಯ ತುಂಬಿದರು. ಆದರೆ ಓದು ಬರಹ ಬಾರದ ಊರ್ಮಿಳಾ ಪತ್ರವನ್ನು ಬೇರೆಯವರಿಂದ ಓದಿಸಬೇಕಾಗಿತ್ತು. ನಂತರ ಬಾಬುರವರು ಊರ್ಮೀಳಾಗೆ "ನೀನೇಕೆ ಓದು ಬರಹ ಕಲಿಯಬಾರದು?  ಕಲಿತರೆ ನೀನೇ ಪತ್ರ ಬರೆಯಬಹುದು" ಎಂದು ಓದುವಂತೆ ಪ್ರೋತ್ಸಾಹಿಸಿದರು.
ಧೈರ್ಯಗೊಂಡ ಊರ್ಮಿಳಾ ಪಕ್ಕದ ಮನೆಯ ಹುಡುಗನಿಗೆ ಇಪ್ಪತ್ತು ರೂಗಳನ್ನು ನೀಡಿ ಅಕ್ಷರ ಕಲಿಯಲು ಪ್ರಾರಂಭಿಸಿದಳು. ಜೊತೆಗೆ ತಮ್ಮನು ಸಹ ಹೇಳಿ ಕೊಡುತ್ತಿದ್ದನು.
ಈ ನಡುವೆ ಊರ್ಮಿಳಾ ಗರ್ಭಿಣಿಯಾದಳು. ಆದರೂ ಓದುವುದನ್ನು ನಿಲ್ಲಿಸದೆ ನಿಧಾನವಾಗಿ ಕಲಿಯುತ್ತಿದ್ದಳು. ನಂತರ ಮಗುವಾದ ಮೇಲೂ ತನ್ನೆಲ್ಲಾ ಕೆಲಸಗಳ ನಡುವೆಯೂ ತನ್ನ ಅಭ್ಯಾಸವನ್ನು ನಿಲ್ಲಿಸದೆ ಮುಂದುವರಿಸಿದ್ದಳು. ಹೀಗೆಯೇ ಓದಿ ಬಾಲಭಾರತಿ ಪುಸ್ತಕವನ್ನು ಓದಲು ಕಲಿತಳು. ಬಾಬುರವರಿಗೆ ತಾನೇ ಸ್ವತಃ ಕಾಗದ ಬರೆಯಲು ಪ್ರಾರಂಭಿಸಿದಳು. ಇದರಿಂದ ಗಂಡ ಅವಿನಾಶ್ ಮತ್ತು ಬಾಬು ಇಬ್ಬರೂ ಸಂತಸ ಪಟ್ಟರು. ಮಗನನ್ನು ಓದಿಸುವ ಸಲುವಾಗಿ ಅವಿನಾಶ್ ತನ್ನ ಬಳಿ ಇರಿಸಿಕೊಂಡನು. ಎರಡನೇ ಮಗುವಿಗೆ ತಾಯಿಯಾಗಿ ಮೂರು ವರ್ಷದ ನಂತರ ಊರ್ಮಿಳಾ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಕಲ್ಕತ್ತಾಕ್ಕೆ ಬಂದಳು.
ಓದು ಬರಹ ಬಾರದ ಊರ್ಮಿಳಾ ಹಳ್ಳಿಯಲ್ಲಿ ಒಂದು ರೀತಿ ಕಷ್ಟ ಪಟ್ಟರೆ ಕಲ್ಕತ್ತಾಕ್ಕೆ ಬಂದು ಮತ್ತೊಂದು ರೀತಿಯ ಕಷ್ಟಕ್ಕೆ ಸಿಲುಕಿದಳು. ಆದರೂ ಎದೆಗುಂದಲಿಲ್ಲ. ಒಮ್ಮೆ ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಇವಳು ಭಾಗವಹಿಸಬೇಕಾಯಿತು. ಅಲ್ಲಿ ಎಲ್ಲರಿಗೂ ಇಂಗ್ಲಿಷ್ ನಲ್ಲಿ ಸಹಿ ಮಾಡಲು ಹೇಳಿದರು. ಇಂಗ್ಲಿಷ್ ಬಾರದ ಊರ್ಮಿಳಾ ನಾಚಿಕೆಯಿಂದಲೇ ಶಿಕ್ಷಕಿಯೊಬ್ಬರನ್ನು ಹಿಂದಿಯಲ್ಲಿ ಸಹಿ ಮಾಡಬಹುದೇ ಎಂದು ಕೇಳಿ ಹಿಂದಿಯಲ್ಲಿ ಸಹಿ ಮಾಡಿದಳು. ಈ ಘಟನೆ ಅವಳಿಗೆ ಬೇಸರವನ್ನುಂಟು ಮಾಡಿತು. ಮಕ್ಕಳು ತನ್ನಂತಾಗಬಾರದು ಎಂದು ಅವರ ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದಳು.
ಒಮ್ಮೆ ರಮೇಶ್ ಬಾಬುರವರೊಡನೆ ಮಾತನಾಡುತ್ತಾ "ನಾನೇನಾದರೂ ಓದಿದ್ದರೆ ನನ್ನ ಜೀವನದ ಘಟನೆಗಳನ್ನೆಲ್ಲಾ ಬರೆಯಬಹುದಿತ್ತು" ಎಂದಳು. "ಈಗಲೂ ನೆನಪಿದ್ದರೆ ಏಕೆ ಬರೆಯಬಾರದು" ಎಂದರು. "ನೀವು ಕರೆಕ್ಷನ್ ಮಾಡಿಕೊಟ್ಟರೆ ಬರೆಯುತ್ತೇನೆ" ಎಂದ ಊರ್ಮಿಳಾಗೆ ಬಾಬುರವರು ಬೇಬಿ ಹಾಲ್ದಾರ್ ರವರ "ಆಲೋ-ಅಂಧೇರೆ" ಪುಸ್ತಕವನ್ನು ಓದಲು ಕೊಟ್ಟು, "ನೀನು ಹಳ್ಳಿಯಲ್ಲಿ ಹೇಗೆ ಜೀವನ ನಡೆಸುತ್ತಿದ್ದೆ, ಈಗ ಕಲ್ಕತ್ತಾದ ಜೀವನ ಮತ್ತು ನೀನು ನಿನ್ನ ಬಗ್ಗೆ ಏನು ಯೋಚಿಸುತ್ತಿದ್ದೆ, ಎಲ್ಲವನ್ನೂ ಬರೆ. ಸತ್ಯವಾದ ಘಟನೆಗಳನ್ನು ಬರೆದರೆ ನಿನ್ನ ಪುಸ್ತಕವನ್ನು ಪ್ರಕಟಿಸಬಹುದು" ಎಂದರು.
ಹೀಗೆ ಹಳ್ಳಿಮಗಳೊಬ್ಬಳು ತನ್ನ ಜೀವನದ ಏರುಪೇರುಗಳನ್ನು ಬಹು ಸೊಗಸಾಗಿ ಬರೆದಿದ್ದಾರೆ. ಮಾತೃಭಾಷೆ ಬೇರೆಯಾದರೂ ಮದುವೆಯ ನಂತರ ಹಿಂದಿಯನ್ನು ಕಲಿತು ತಮ್ಮ ಆತ್ಮಕಥೆಯನ್ನು ಬರೆದ ಸುಶೀಲ್ ರಾಯ್ ಅಸಾಮಾನ್ಯರೇ ಸರಿ. ಕೇವಲ ಕಾಗುಣಿತ ತಪ್ಪುಗಳನ್ನು ಮಾತ್ರ ತಿದ್ದಿ, ಬೇರೆ ಯಾವುದೇ ಬದಲಾವಣೆಗಳಿಲ್ಲದೆ ಪ್ರಕಟಿಸಿದ ಪುಸ್ತಕವೆ "ಏಕ್ ಅನ್ ಪಡ್ ಕೀ ಕಹಾನಿ." ಅದೇ ರೀತಿ ಯಥಾವತ್ತಾಗಿ ಜಿ. ಕುಮಾರಪ್ಪನವರು ಕನ್ನಡಕ್ಕೆ ಅಚ್ಚುಕಟ್ಟಾಗಿ ಅನುವಾದಿಸಿದ್ದಾರೆ.

 - ವಿಜಯಲಕ್ಷ್ಮಿ ಎಂ ಎಸ್

ಕಾಮೆಂಟ್‌ಗಳಿಲ್ಲ: