Pages

ಪುಸ್ತಕ ಪ್ರೀತಿ - ತ್ರಿವೇಣಿಯವರ ಕಥಾಸಂಕಲನ "ಸಮಸ್ಯೆಯ ಮಗು"



ಸಮಸ್ಯೆಯ ಮಗು       
ಮನಸ್ಸು ಪ್ರೀತಿ, ಮಮತೆಗಳಿಗೆ ಕಾತರಿಸುವಾಗ ಅದು ಸಿಗದಿದ್ದರೆ ಯಾವ ರೀತಿ ದ್ವೇಷದ ಕಡೆಗೆ ಜಾರುತ್ತದೆ ಎಂಬುದನ್ನು "ಸಮಸ್ಯೆಯ ಮಗು" ಕಥೆಯಿಂದ ತಿಳಿಯಬಹುದು. ಗೋಪಾಲರಾಯರು ಮತ್ತು ಜಾನಕಮ್ಮ ದಂಪತಿಗಳಿಗೆ ತುಂಬಾ ದಿನಗಳ ಮೇಲೆ ಮಗುವಾಯಿತು. ಅವರು ತಮ್ಮ ಪ್ರೀತಿ, ವಾತ್ಸಲ್ಯಗಳನ್ನು ಧಾರೆಯೆರೆದು ಬಹಳ ಮುದ್ದಿನಿಂದ ಆ ಮಗುವಿಗೆ ನಾಗೇಂದ್ರ ಎಂದು ನಾಮಕರಣ ಮಾಡಿದರು. ನಂತರ ಇವರಿಗೆ ಇನ್ನೊಂದು ಮಗುವಾಯಿತು.  ಆ ಎರಡನೇ ಮಗುವಿಗೆ ಅವರು  ಹೆಚ್ಚಿನ ಗಮನ ಕೊಡುತ್ತಿದ್ದರು. ಇದರಿಂದ ತನ್ನನ್ನು ಕಡೆಗಣಿಸಿ ತಮ್ಮನನ್ನು ಹೆಚ್ಚು  ಪ್ರೀತಿಸುತ್ತಾರೆ ಎಂದುಕೊಂಡ  ನಾಗೇಂದ್ರ ತಮ್ಮನನ್ನು ದ್ವೇಷಿಸಲು ಪ್ರಾರಂಭಿಸಿದನು. ತಂದೆ ತಾಯಿಯ ಗಮನ ಸೆಳೆಯಲು ತನ್ನನ್ನು ತಾನೇ ದಂಡಿಸಿಕೊಳ್ಳುತ್ತಿದ್ದನು ಇಲ್ಲದಿದ್ದರೆ ಮಗುವಿಗೆ ತೊಂದರೆ ಕೊಡುತ್ತಿದ್ದನು ಅಥವಾ ಮನೆ ಬಿಟ್ಟು ಹೊರಟು ಹೋಗುತ್ತಿದ್ದನು. ಒಮ್ಮೆ ಹೀಗೆ ಮನೆ ಬಿಟ್ಟು ಹೋಗಿದ್ದನು. ದಾರಿಯಲ್ಲಿ ಹೋಗುತ್ತಿದ್ದ ಅವನನ್ನು ನೋಡಿದ ಅಪರಿಚಿತರೊಬ್ಬರು ಅವನನ್ನು ಯಾರು ನೀನು? ಎಂದು ಕೇಳಿದರೂ ಉತ್ತರ ಕೊಡದೆ ಹಾಗೆ ಹೋಗುತ್ತಿದ್ದ ಅವನನ್ನು ಕಂಡು ಮನೆ ಬಿಟ್ಟು ಬಂದಿರಬಹುದು ಸಂಶಯ ಬಂದಿತು. ಕೊನೆಗೆ ಪೊಲೀಸ್ ರ ಹೆಸರು ಹೇಳಲು ಭಯಗೊಂಡ ನಾಗೇಂದ್ರ ಮನೆ ಬಿಟ್ಟು ಬಂದಿರುವುದಾಗಿ ಒಪ್ಪಿಕೊಂಡನು. "ನೀನು ಮಾಡುತ್ತಿರುವುದು ತಪ್ಪಲ್ಲವೇ? ನಿನ್ನ ತಂದೆ ತಾಯಿಗೆ ಗಾಭರಿಯಾಗಲ್ಲವೇ?" ಎಂದರು. "ಹೌದು, ನನ್ನನ್ನು ಹುಡುಕಲಿ ಎಂದೇ ಮನೆ ಬಿಟ್ಟು ಬಂದಿರುವೆ." 
ನಂತರ ಜೋರು ಮಾಡಿ ಮನೆಗೆ ಕರೆದು ಕೊಂಡು ಬಂದರು. ಹಿಂತಿರುಗಿ ಬಂದ ಮಗನನ್ನು ತಾಯಿ ಪ್ರೀತಿಯಿಂದ ಮಾತನಾಡಿಸಿದರು. ತಂದೆ ಅವನಿಗೆ ಸ್ವಲ್ಪ ಹುಚ್ಚು ಎಂದರು. ಆದರೆ ಇದನ್ನು ಒಪ್ಪದ ಆ ಅಪರಿಚಿತರು ನಾಗೇಂದ್ರನನ್ನು ಗಮನಿಸಿ ಸಮಸ್ಯೆ ಇರುವುದು ಅವನಲ್ಲಲ್ಲ, ನಿಮ್ಮಲ್ಲಿ. ನಿಮಗೆ ಎರಡನೇ ಮಗುವಾದ ಮೇಲೆ ಎರಡು ಮಕ್ಕಳ ಮೇಲೂ ಒಂದೇ ರೀತಿ ಪ್ರೀತಿ ತೋರಿಸಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಇನ್ನು ಮುಂದೆ ಇಬ್ಬರಲ್ಲೂ  ಒಂದೇ ತೆರನಾಗಿ  ಪ್ರೀತಿ ತೋರಿಸಿ ಎಲ್ಲಾ ಸರಿಯಾಗುತ್ತದೆ" ಎಂದು ಆ ದಂಪತಿಗಳಲ್ಲಿ ಅರಿವು ಮೂಡಿಸಿದರು.

ಕೆಸರಿನ ಕಮಲ

ರಾತ್ರಿಯಿಡೀ ಒಂದೇ ಸಮನೆ ಮಗು ಚೀರಿ ಅಳುತ್ತಿದ್ದ ದ್ವನಿ ಆಸ್ಪತ್ರೆಯಲ್ಲಿ ಮಗುವಿಗಾಗಿ ಹಂಬಲಿಸಿ, ಮಗುವನ್ನು ಕಳೆದುಕೊಂಡ ಅವಳ ಎದೆಯನ್ನು ಇರಿಯುತ್ತಿತ್ತು. ಮಾರನೇ ದಿನ ನರ್ಸ್ ಳನ್ನ ಕೇಳಲು ಆ ಮಗು "ಮದುವೆಯಾಗದ ಹುಡುಗಿಯೊಬ್ಬಳು ಹಡೆದ  ಮಗುವದು, ಮಗುವನ್ನು ಇಲ್ಲೇ ಬಿಟ್ಟು ಹೋಗಿದ್ದಾಳೆ" ಎಂದು ಆ ಮಗುವನ್ನು ತಂದು ತೋರಿಸಲು ಇವಳು ಮಡಿವಂತಿಕೆಯಿಂದ "ಛೀ, ದೂರ ಸರಿಸಿ" ಅಸಹ್ಯಿಸಿಕೊಂಡಳು. ಆದರೂ ನರ್ಸ್ "ನಾಳೆಯಿಂದ ಈ ಮಗುವಿಗೆ ಹಾಲು ಕುಡಿಸುವಿರಾ?" ಕೇಳಿದಳು. "ಈ ಜನ್ಮದಲ್ಲಿ ಹಾಲು ಕುಡಿಸುವುದಿಲ್ಲ" ಎಂದುತ್ತರಿಸಿದಳು. ಆದರೂ ಒಂದೇ ಸಮನೆ ಆಳುತ್ತಿದ್ದ ಮಗುವಿನ ದನಿ ಅವಳ ತಾಯ್ತನವನ್ನು ಜಾಗೃತಿಗೊಳಿಸಿತು. ಮನಸು ತೊಳಲಾಟದಲ್ಲಿತ್ತು. ತಂದೆ ತಾಯಿಯ ಸಮಾಜಬಾಹಿರ ಕೃತ್ಯದಲ್ಲಿ ಮಗುವಿನ ಪಾಲೇನು ಜನ್ಮಕ್ಕೆ ಕಾರಣರಾದವರು ಕೆಸರು ಆದರೆ ಮಗು ಶುಭ್ರ ನಿರ್ಮಲ ಕಮಲದಂತೆ ಎಂದು ನಿರ್ಧರಿಸಿದ ಅವಳು ಮಾರನೇ ದಿನ ಆ ಮಗುವಿಗೆ ಹಾಲೂಡಿಸಲು ನಿರ್ಧರಿಸಿದಳು.

ಮೂರು ಗಂಟೆಯೊಳಗೆ

ಗೋಪು, ಪಾಪು ಅಕ್ಕ ತಂಗಿಯರ ಮಕ್ಕಳು. ಸ್ನೇಹಿತ ರಾಮುವಿನ ಮದುವೆಗೆ ಬಂದಿದ್ದರು. ಮದುವೆ ಮನೆಯಲ್ಲಿ ಮದುಮಗಳ ಸ್ನೇಹಿತೆ ಚಂಪಾಳ ಮೇಲೆ ಇಬ್ಬರ ದೃಷ್ಠಿ ಬಿದ್ದಿತ್ತು. ಒಬ್ಬರಿಗೊಬ್ಬರು ತಿಳಿಯದಂತೆ ಅವಳ ಬಗ್ಗೆ ತಿಳಿಯುವಂತೆ ಹೇಳಿದರು. ರಾಮು ಗೆಳೆಯರಿಗೆ "ಚಂಪಾ ಬಾಲವಿಧವೆ, ಅವಳ ತಂದೆ ತಾಯಿ ಮದುವೆ ಮಾಡುವುದಿಲ್ಲ, ಮುಂದೆ ಓದಿಸುವರು" ಎಂದನು. ಅದುವರೆವಿಗೂ ಕನಸು ಕಾಣುತ್ತಿದ್ದ ಗೋಪು ಈ ಮದುವೆ ಸಾಧ್ಯವಿಲ್ಲ ಎಂದನು‌. ಪಾಪು ಸಹ ಇದೇ ದಾರಿಯಲ್ಲಿ ನಡೆದನು.
ಇವರಿಬ್ಬರ ಮನಸ್ಸನ್ನು ತಿಳಿದ ರಾಮು ಗೆಳೆಯರಿಬ್ಬರನ್ನು "ಪ್ರೇಮವಂತೆ! ಪ್ರೇಮ! ಹೇಡಿಗಳು!" ಎಂದು ಮೂದಲಿಸಿದನು.

ಮಗಳ ಮನಸ್ಸು

ಹಣಕ್ಕಾಗಿ ಮಗಳು ಚಂದ್ರಳನ್ನು ವಯಸ್ಸಾದ ಶ್ರೀಮಂತನಿಗೆ ಮದುವೆ ಮಾಡಿಕೊಟ್ಟನು ಅಪ್ಪ ನರಸಪ್ಪ. ಮೊದಲಿನಿಂದಲೂ ಮಹತ್ವಾಕಾಂಕ್ಷಿ ಚಂದ್ರಳ ಆಸೆ, ಆಕಾಂಕ್ಷೆಗಳು ಮಣ್ಣು ಪಾಲಾಯಿತು. ತವರಿನ ಬಗ್ಗೆ ದ್ವೇಷ, ತಿರಸ್ಕಾರಗಳನ್ನು ಬೆಳೆಸಿಕೊಂಡು ಸಂಬಂಧವನ್ನೇ ಕಳಚಿಕೊಂಡಿದ್ದಳು. ಮಡದಿ ಮತ್ತು ಮಕ್ಕಳ ಕಾಯಿಲೆಗೆ ಚಿಕಿತ್ಸೆ ಹಣವಿಲ್ಲದ ಕಾರಣ ಹಣವನ್ನು ಕೇಳಲು ಅಳಿಯನ ಮನೆಗೆ ಬಂದನು. ಅಪ್ಪನನ್ನು ಕಂಡ ಚಂದ್ರ ಉದಾಸೀನದಿಂದ ನೋಡಿ "ಯಾವ ದಿನ ಹಣಕ್ಕಾಗಿ ನಿನ್ನ ಮಗಳನ್ನು ಮಾರಿದೆಯೋ ಅಂದೇ ನನ್ನ ನಿಮ್ಮ ಸಂಬಂಧ ಕಡಿದು ಹೋಯಿತು" ಎಂದಳು. "ನಾನು ನಿನ್ನ ತಾಯಿ ತಮ್ಮಂದರಿಗಾಗಿ ನಿನ್ನ ಬದುಕನ್ನು ಹಾಳು ಮಾಡಬೇಕಾಯಿತು. ಆ ನನ್ನ ಕೆಲಸದಿಂದ ದಿನವೂ ಪಶ್ಚಾತ್ತಾಪದಿಂದ ಬೆಂದು ಹೋಗುತ್ತಿದ್ದೇನೆ" ಎಂದ ಅಪ್ಪನ ಮಾತಿನಿಂದ ತಾಯಿ ಮತ್ತು ತಮ್ಮಂದಿರ ಕಾಯಿಲೆ ಬಗ್ಗೆ ಕೇಳಿದ ಅವಳ ಮನ ಅಳುತ್ತಿತ್ತು. ಅಪ್ಪನೊಂದಿಗೆ ಕಠೋರವಾಗಿ ವರ್ತಿಸಿದರೂ ತವರುಮನೆಯ ಸ್ಥಿತಿ ಕೇಳಿ ಮನಸ್ಸಿಗೆ ದುಃಖವುಂಟಾಯಿತು.  'ನನ್ನ ಮನಸ್ಸಿಗೆ ನೋವಾಗಿದೆ ನಿಜ ಆದರೂ ನನಗೆ ಊಟ ಬಟ್ಟೆ ಯಾವುದಕ್ಕೂ ಕೊರತೆಯಿಲ್ಲ. ನಾನೇಕೆ ಅಮ್ಮ ತಮ್ಮಂದರಿಗೆ ಸಹಾಯ ಮಾಡಬಾರದು?' ಯೋಚಿಸಿದ ಚಂದ್ರ ಊರಿಗೆ ಹಿಂದಿರುಗುತ್ತಿದ್ದ ಅಪ್ಪನಿಗೆ ಓಡಿ ಹೋಗಿ "ನನ್ನಲ್ಲಿ ಹಣವಿಲ್ಲ" ಎಂದು ತನ್ನ ಬಂಗಾರದ ಬಳೆಗಳನ್ನು ಕಳಚಿ ಕೊಟ್ಟಳು.

ಕೊನೆಯ ನಿರ್ಧಾರ

ಸುಂದರಿಯಾಗಿದ್ದ ಲಲಿತ ಗಂಡನಿಂದ ನಡತೆ ಸರಿಯಿಲ್ಲ ಎಂಬ ದೋಷಾರೋಪಣಿಯನ್ನು ಕೇಳಬೇಕಾಯಿತು. ತನ್ನ ತಪ್ಪಿಲ್ಲದೆ ಕ್ಷಮೆಯನ್ನು ಕೇಳಲು ಇಚ್ಛಸದ ಲಲಿತಾ ಗಂಡನ ಮನೆ ತೊರೆದು ಬಂದಳು. ತವರು ಮನೆಯಲ್ಲಿದ್ದು ಎಲ್ಲರ ಪ್ರಶ್ನೆಗಳನ್ನು ಎದುರಿಸುತ್ತಾ ವಿದ್ಯಾಭ್ಯಾಸ ಮುಂದುವರಿಸಿ  ಶಿಕ್ಷಕಿಯಾಗಿ ಹೊಸ ಜೀವನವನ್ನು ಪ್ರಾರಂಭಿಸಿದಳು. ಹೀಗೆ ಒಂಟಿಯಾಗಿಯೇ ಇದ್ದ ಇಪ್ಪತ್ತು ವರ್ಷಗಳ ನಂತರ ಒಂದು ದಿನ ಪತಿ ವೆಂಕಟೇಶ ಲಲಿತಳ ಬಳಿ ಬಂದನು. "ಮನೆಗೆ ಬಾ" ಎಂದು ಕರೆದನು. ಮೊದಲು ವಿರೋಧಿಸಿದರಾದರೂ ಲಲಿತ "ಮುಂದೆ ನನ್ನವರು ಎನ್ನುವರು ಯಾರೂ ಇಲ್ಲದಿದ್ದರೆ ಜೀವನ ಕಷ್ಟ" ಯೋಚಿಸಿದ ಲಲಿತ ಸ್ವಲ್ಪ ಮೃದುವಾದಳು. ತನ್ನ ತಪ್ಪು ತಿಳಿದು ತಿದ್ದಿಕೊಂಡು ವಿಶ್ವಾಸ ತೋರಿಸುತ್ತಿರುವರು  ಎಂದು "ನಿಮ್ಮ ಎರಡನೇ ಪತ್ನಿ ಇದಕ್ಕೊಪ್ಪುವಳೇ?" ಕೇಳಿದಳು. "ನನ್ನ ಪತ್ನಿ ತೀರಿಹೋಗಿ ಎರಡು ತಿಂಗಳಾಯಿತು, ಅವಳ ಐದು ಮಕ್ಕಳಲ್ಲಿ ನಿನ್ನ ಬರುವಿಕೆಯನ್ನು ಯಾರೂ ವಿರೋಧಿಸುವುದಿಲ್ಲ" ಎಂದ ಪತಿಯ ಮಾತಿನಿಂದ ಮತ್ತೆ ಕೋಪಗೊಂಡ ಲಲಿತ ಪತಿಗೆ ಹೊರಹೋಗುವಂತೆ ತಿಳಿಸಿದಳು. ಮತ್ತೊಮ್ಮೆ ಯೋಚಿಸು ಎಂದ ಪತಿಯ ಮಾತಿಗೆ "ಇದೇ ನನ್ನ ಕೊನೆಯ ನಿರ್ಧಾರ " ಎಂದು ಬಾಗಿಲನ್ನು ಮುಚ್ಚಿದಳು.

ಹೀಗೆ ತ್ರಿವೇಣಿಯವರು ತಮ್ಮ ಕಥೆಗಳಲ್ಲಿ ಅಂದಿನ ಸಮಾಜದಲ್ಲಿನ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ.

ವಿಜಯಲಕ್ಷ್ಮಿ  ಎಂ ಎಸ್  

1 ಕಾಮೆಂಟ್‌:

Dr. Sudha ಹೇಳಿದರು...

ಎಲ್ಲಾ ಕತೆಗಳ ವಿಶ್ಲೇಷಣೆ ಇದ್ದಿದ್ದರೆ ಚೆನ್ನಾಗಿತ್ತು. ಅದರಲ್ಲೂ 'ಅವಳ ನಿರ್ಧಾರ'ದಲ್ಲಿ ಅವಳ ಗಟ್ಟಿತನ, ಅವನ ಸ್ವಾರ್ಥ, ಅವಕಾಶವಾದಿತನ ಇವುಗಳ ಬಗ್ಗೆ ಎರಡು ಮಾತುಗಳಿದ್ದಿದ್ದರೆ... ಎನಿಸಿತು.
ಅಂತೂ ಕಥಾ ಸಾರಾಂಶ ಚೆನ್ನಾಗಿ ಬಂದಿದೆ. ಬಹಳ ಕಾಲದ ಬಳಿಕ ತ್ರಿವೇಣಿ ಮತ್ತೆ ಕಾಡಿದರು!!