Pages

ದೊಡ್ಡವರ ಚಿಕ್ಕ ಕಥೆಗಳು - ವಿವೇಕಾನಂದರ ಮಾನವೀಯ ಧರ್ಮ



ಸ್ವಾಮಿ ವಿವೇಕಾನಂದರು ಒಮ್ಮೆ ರಾಜಸ್ಥಾನಕ್ಕೆ ತೆರಳಿದ್ದರು. ಅವರು ಅಲ್ಲಿ ತಂಗಿದ್ದಾಗ ಜನರು ಬಂದು ಅವರನ್ನು ಹಲವಾರು ಧಾರ್ಮಿಕ ಪ್ರಶ್ನೆಗಳನ್ನು ಕೇಳತೊಡಗಿದರು. ವಿವೇಕಾನಂದರು ಸಹ ನಿದ್ರಾಹಾರಗಳನ್ನು ಮರೆತು ಜನರ ಸಂದೇಹಗಳನ್ನು ಪರಿಹರಿಸಿತೊಡಗಿದರು. ಜನರೂ ಸಹ ಅವರ ಊಟದ ಬಗ್ಗೆ ವಿಚಾರಿಸಲಿಲ್ಲ. ಮೂರನೆಯ ದಿನ ರಾತ್ರಿ ಬಡವನೊಬ್ಬ ಬಂದು “ಸ್ವಾಮಿ ನೀವು ಏನನ್ನೂ ತಿನ್ನದೆ ಮೂರು ದಿನದಿಂದ ಮಾತನಾಡುತ್ತಿರುವುದನ್ನು ಕಂಡು ನನಗೆ ದುಃಖವಾಗುತ್ತಿದೆ” ಎಂದ. ವಿವೇಕಾನಂದರು ಆ ವ್ಯಕ್ತಿಯ ಕಡೆ ತಿರುಗಿ “ನನಗೇನಾದರೂ ತಿನ್ನಲು ಕೊಡುತ್ತೀಯಾ?” ಕೇಳಿದರು. ಆಗ ಆ ವ್ಯಕ್ತಿ “ನಿಮಗೆ ಕೊಡಬೇಕೆಂಬ ಇಚ್ಛೆಯೇನೋ ಇದೆ. ಆದರೆ ನಾನು ಚಮ್ಮಾರ. ನಾನು ರೊಟ್ಟಿಗಳನ್ನು ಮುಟ್ಟಿಬಿಟ್ಟಿದ್ದೇನೆ. ನೀವು ಒಪ್ಪುವುದಾದರೆ ಹಿಟ್ಟು, ಬೇಳೆ ತರುತ್ತೇನೆ. ನೀವೇ ತಯಾರಿಸಿಕೊಳ್ಳಬಹುದು” ಎಂದ. “ನೀನು ತಯಾರಿಸಿದ ರೊಟ್ಟಿಯನ್ನೇ ತಿನ್ನುತ್ತೇನೆ ಕೊಡು” ಎಂದರು ಸ್ವಾಮೀಜಿ. ಆ ಬಡವ ಸಂತೋಷದಿಂದ ತಂದುಕೊಟ್ಟ ರೊಟ್ಟಿಯನ್ನು ಸ್ವಾಮೀಜಿ ಕೃತಜ್ಞತೆಯಿಂದ ಸೇವಿಸಿದರು. ಕೆಲವು ವ್ಯಕ್ತಿಗಳು ಇದನ್ನು ಕಂಡು ಸ್ವಾಮೀಜಿಯವರನ್ನು “ನೀವು ಕೀಳು ಜಾತಿಯ ವ್ಯಕ್ತಿಯ ಕೈಯಿಂದ ಆಹಾರ ಸ್ವೀಕರಿಸಿದ್ದೀರಿ, ಇದು ತಪ್ಪಲ್ಲವೇ?” ಎಂದು ಕೇಳಿದರು. ಆಗ ಸ್ವಾಮೀಜಿಯವರು, “ಮೂರು ದಿನಗಳಿಂದ ನೀವು ಸತತವಾಗಿ ನನ್ನನ್ನು ಮಾತಾಡುವಂತೆ ಮಾಡಿದ್ದೀರಿ. ಆದರೆ ಯಾರೂ ನನ್ನ ಆಹಾರ, ವಿಶ್ರಾಂತಿಯ ಬಗ್ಗೆ ವಿಚಾರಿಸಲಿಲ್ಲ. ನೀವು ಉನ್ನತ ವರ್ಗದವರು ಎಂದು ಹೆಮ್ಮೆ ಪಡುತ್ತೀರಿ. ಆದರೆ ಮಾನವೀಯತೆಯನ್ನು ಮೆರೆದು ನನಗೆ ಆಹಾರ ತಂದುಕೊಟ್ಟ ಈ ವ್ಯಕ್ತಿಯನ್ನು ಕೀಳು ವರ್ಗದವನು ಎನ್ನುತ್ತೀರಿ. ಇದು ನಾಚಿಕೆಗೇಡು” ಎಂದುತ್ತರಿಸಿದರು. 

ಕಾಮೆಂಟ್‌ಗಳಿಲ್ಲ: