Pages

ಕವನಾಮೃತ - ಒಂದು ಕಾಗದ

[ಕನ್ನಡದ ಹೆಮ್ಮೆಯ ಕವಿ-ಕವಯತ್ರಿಯರ ಕವನಗಳು 
ಓದುಗರ ಆಸ್ವಾದಕ್ಕಾಗಿ]


ನಿಮ್ಮ ಪತ್ರ ಬಂದು ಸೇರಿ
ಎರಡುಮೂರು ಬಾರಿಯೋದಿ
ಎಲ್ಲ ತಿಳಿದೆನು.
ನೀವು ನನಗೆ ಗಂಡನಲ್ಲ
ನಾನು ನಿಮಗೆ ಹೆಂಡತಿಯಲ್ಲ
ನೀವು ತಿಳಿವುದು.
ಕುಂಟು ಕಾಲು ಬೊಚ್ಚು ಬಾಯಿ
ಮೆಳ್ಳುಗಣ್ಣು, ನಿಮ್ಮ ಸೇವೆ
ಮಾಡಲಾರೆನು.
ಬ್ರಹ್ಮ ಹಿಂದೆ ಗಂಟು ಹಾಕಿ
ಗಂಡಹೆಂಡಿರಾದೆವೆಂದು
ನೀವು ಬರೆವಿರಿ.

ಬ್ರಹ್ಮಗಿಮ್ಮ ಹಾಕಲಿಲ್ಲ
ಅಪ್ಪ ತಂದು ನನಗೆ ನಿಮಗೆ
ಗಂಟು ಹಾಕಿದ.
ಹೆತ್ತ ತಂದೆ ಮಾರಿಕೊಂಡು
ಮೃತ್ಯುವಾಗಿ ಕೊಲ್ಲಲಿಂತು
ಮಾಡಲೇನಿದೆ.
ಶಾಸ್ತ್ರಗೀಸ್ತ್ರ ತಿಳಿಯೆ ನಾನು
ಬರೆದ ಜನರು ಹೆಂಡಿರಾಗಿ
ಸೇವೆ ಮಾಡಲಿ.
ನೋಟ ಬೇಟ ಗಂಡಿಗೆಂದು
ಧರ್ಮ ಶಾಸ್ತ್ರ ಹೆಣ್ಣಿಗೆಂದು
ನುಡಿವರೆಲ್ಲರು.
ಕೋರ್ಟುಗೀರ್ಟು ಆಡಬೇಡ
ಜಡ್ಜಿ ಧರ್ಮವೇನು ಬಲ್ಲ 
ನಾನು ತಿಳಿಸುವೆ.
ಕುರ್ಚಿ ಮೇಲೆ ಕುಳಿತುಕೊಂಡು 
ಏನೋ ಗೀಚಿ ಎದ್ದುಬರುವ
ಮಾತಿದಲ್ಲವು.

ತನ್ನ ಮಗಳ ನಿಮಗೆ ಕೊಟ್ಟು
ತನ್ನ ಮಗನ ಎನಗೆ ಕೊಟ್ಟು
ಮದುವೆ ಮಾಡಲಿ.
ಎನ್ನ ದುಃಖ ಆರಿಗುಂಟು
ಬಾಳಬೇಕು, ಬಾಳಲಾರೆ
ಹಾಳು ಲೋಕವು. 
ಬೈವ ಜನರು ಜರಿವ ಜನರು
ಅವರಿಗೇನು ಬಾಯಿ ಕೊಬ್ಬು
ನೋವು ತೆಗೆವರೆ?
ಬಲ್ಲೆನವರ ಮನದ ಭಾವ
ಇಂದು ನಾನು ಸೂಳೆಯಾಗೆ
ಸುಖಿಪರೆಲ್ಲರು.
ಭೂಮಿ ಮೇಲೆ ಇರುವಳಲ್ಲ
ಇಂದೆ ನಾನು ಕೆರೆಗೆ ಬಿದ್ದು
ಜನ್ಮ ನೀಗುವೆ.
ಶಾಸ್ತ್ರ ಧರ್ಮ ತಣ್ಣಗಾಗಿ
ಬಯ್ದ ಜನರು ಉರಿದು ಹೋಗಿ
ಲೋಕವಡಗಲಿ.

- ಎಂ ಆರ್ ಶ್ರೀನಿವಾಸಮೂರ್ತಿ

ಕಾಮೆಂಟ್‌ಗಳಿಲ್ಲ: